ಪ್ರಶ್ನೆ: ಅಮ್ಮಾ, ಪ್ರಾರ್ಥನೆ ಹೇಗಿರಬೇಕು ?

“ಲೋಕದ ಏಳಿಗೆಗಾಗಿ ಮಾಡುವ ಪ್ರಾರ್ಥನೆಯೇ ಅತ್ಯಂತ ಶ್ರೇಷ್ಟವಾದದ್ದು. ಆಸೆವಿಹೀನ ನಿಷ್ಕಾಮ ಪ್ರಾರ್ಥನೆ – ಅದುವೇ ಬೇಕಾಗಿರುವುದು. ’ದೇವರೇ, ಲೋಕದ ಕಷ್ಟಗಳನ್ನು ನಿವಾರಿಸು. ದೇವರೇ, ಎಲ್ಲರಿಗೂ ಒಳ್ಳೆಮನಸ್ಸನ್ನು ದಯಪಾಲಿಸು. ದೇವರೇ, ಎಲ್ಲರನ್ನೂ ಕಾಪಾಡು’ ಹೀಗೆ ಪ್ರಾರ್ಥಿಸಿರಿ ಮಕ್ಕಳೇ. ಪೂಜೆಗಾಗಿ ಹೂಗಳನ್ನು ಕೊಯ್ಯುತ್ತೇವೆ. ಆ ಹೂವಿನ ಸೊಬಗನ್ನೂ, ಸುಗಂಧವನ್ನೂ ನಮಗೆ ಅರಿವಿಲ್ಲದೆಯೂ ಮೊದಲು ಆಸ್ವಾದಿಸುವವರು ನಾವೆಯೇ. ’ಲೋಕಕ್ಕೆ ಒಳಿತು ಮಾಡು’ ಎಂದು ಪ್ರಾರ್ಥಿಸುವಾಗ ಸ್ವತಃ ನಾವೇ ಒಳ್ಳೆಯವರಾಗುತ್ತೇವೆ. ದೇವರಿಗೆ ಮಾಡುವ ಸೇವೆ, ಲೋಕಕ್ಕೆ ಮಾಡುವ ಸೇವೆ. ಅದರಲ್ಲಿ ಮೊದಲು ಆನಂದಿಸುವವರು, ಸವಿಯುವವರು ನಾವೇ. ಲೋಕದೊಳಿತಿಗೆ ಪ್ರಾರ್ಥನೆ ನಮ್ಮನ್ನು ವೈಶಾಲ್ಯತೆಡೆಗೊಯ್ಯುತ್ತದೆ.

ಮಕ್ಕಳು ಪ್ರಯಾಣಿಸುತ್ತಿರುವ ಬಸ್ಸಿನಲ್ಲಿ ಒಂದು ಪ್ರಾಯಮೀರಿದ ವೃದ್ಧೆ ನಡುಗುತ್ತಾ ನಿಂತಿದ್ದಾಳೆಎಂದಿಟ್ಟುಕೊಳ್ಳೋಣ. ಯಾರೂ ಅವಳಿಗೆ ಕುಳಿತುಕೊಳ್ಳಲು ಸ್ಥಳ ಬಿಟ್ಟು ಕೊಡುತ್ತಿಲ್ಲ. ಕಿರಿಯರು, ಆರೋಗ್ಯ ಚೆನ್ನಾಗಿರುವವರು ಸೀಟುಗಳಲ್ಲಿ ಹಾಯಾಗಿ ಕೂತಿದ್ದಾರೆ. ವೃದ್ಧೆಗೆ ನಿಂತು ಕೊಂಡಿರಲು ತೀರಾ ಸುಸ್ತು. ಅದನ್ನು ಅರ್ಥ ಮಾಡಿಕೊಂಡ ನೀವು ಎದ್ದು ನಿಂತು ಆ ವೃದ್ಧೆಯನ್ನು ನಿಮ್ಮ ಸೀಟಿನಲ್ಲಿ ಕೂತುಕೊಳ್ಳಿಸಿದಿರಿ; ನೀವು ನಿಂತು ಕೊಂಡಿರಿ. ಕೂತುಕೊಳ್ಳಲು ಸ್ಥಳ ಸಿಕ್ಕಿದ್ದಕ್ಕಾಗಿ ವೃದ್ಧೆಗೆ ಸಂತೋಷವಾಯಿತು; ಜೊತೆಗೆ ನಿಮಗೂ. ’ಸ್ವಂತ ಸುಖವನ್ನು ತ್ಯಜಿಸಿಯಲ್ಲವೇ ನಾನವಳಿಗೆ ಸ್ಥಳ ಕೊಟ್ಟದ್ದು’ ಎಂಬ ಏನೋ ಒಂದು ಸಂತೃಪ್ತಿಯ ಅನುಭವ ನಿಮಗಾಗುತ್ತದೆ. ಈ ರೀತಿ ನಿಷ್ಕಾಮ್ಯತೆಯಿಂದ ನಮಗೆ ಸಂತೃಪ್ತಿಯೂ ದೊರಕುತ್ತದೆ, ಪ್ರಯೋಜನವೂ ದೊರಕುತ್ತದೆ. ವೈಶಾಲ್ಯತೆ ನಮ್ಮದಾಗುತ್ತದೆ. ಅಲ್ಲದೆ ಲೋಕ ಹಿತವೂ ಸಾಧಿಸುತ್ತದೆ. ಆದುದರಿಂದ ನಿಷ್ಕಾಮ ಭಾವನೆಯು ಶ್ರೇಷ್ಠ.”

ಪ್ರಶ್ನೆ: ತಪಸ್ಸಿನಿಂದ ಶಕ್ತಿ ಹೇಗೆ ಉಂಟಾಗುತ್ತದೆ ?

“ಒಂಬತ್ತು ಕವಲುಗಳಿರುವ ಒಂದು ನದಿಯಿದೆ. ಅದರ ಪ್ರವಾಹಕ್ಕೆ ಬಲವಿಲ್ಲ. ಆದರೆ ಆ ಒಂಬತ್ತು ಕವಲುಗಳನ್ನು ಮುಚ್ಚಿ ನದಿಯಲ್ಲಿ ಮಾತ್ರ ನೀರು ಹರಿಯಲು ಬಿಟ್ಟರೆ, ಪ್ರವಾಹ ಶಕ್ತಿಶಾಲಿಯಾಗುತ್ತದೆ. ಆ ಶಕ್ತಿಯಿಂದಲೇ ಕರೆಂಟ್ ಉತ್ಪಾದಿಸುತ್ತಾರೆ. ಇದೇ ತರ ನಿಮ್ಮ ಆಲೋಚನೆಗಳನ್ನು, ಬಹುಮುಖವಾಗಿ ಹಾರುವ ಮನಸ್ಸನ್ನು, ಏಕತ್ವದಲ್ಲಿ ಕೇಂದ್ರೀಕರಿಸಿದರೆ, ನಿಮ್ಮಲ್ಲಿ ನಿಶ್ಚಯವಾಗಿಯೂ ಈ ಶಕ್ತಿ ಉಂಟಾಗುತ್ತದೆ. ಇತರರಿಗೆ ಶರೀರ ಮೂಲಕವೂ, ಮನಸ್ಸು ಮೂಲಕವೂ, ಬುದ್ಧಿ ಮೂಲಕವೂ, ಪ್ರವೃತ್ತಿ ಮೂಲಕವೂ, ಮಾತು ಮೂಲಕವೂ, ಈ ಶಕ್ತಿಯನ್ನು ಉಪಯೋಗಿಸಿ ಪ್ರಯೋಜನ ನೀಡಲು ಸಾಧ್ಯವಿದೆ. ಲೌಕಿಕರು ಕಾಮ ತೃಪ್ತಿಗಾಗಿ ತಮ್ಮ ಶಕ್ತಿಯನ್ನು ನಶಿಸುತ್ತಾರೆ. ಆಧ್ಯಾತ್ಮಿಕ ಜೀವಿಗಳು ಕಾಮವನ್ನು ನಿಯಂತ್ರಿಸಿ ಯೋಗದೊಂದಿಗೆ ಅದನ್ನು ಊರ್ಧ್ವಮುಖವಾಗುವಂತೆ ಮಾಡಿ ಶಕ್ತಿಯುತವಾಗಿಸುತ್ತಾರೆ. ಸಾಧಾರಣದವನಿಗೆ ಸ್ವಾರ್ಥಪರತೆಯಿಂದ ಐವರನ್ನು ಪ್ರೇಮಿಸಲು ಸಾಧ್ಯವಾದರೆ ಒಬ್ಬ ಯೋಗಿಗೆ ನಿಸ್ವಾರ್ಥತೆಯಿಂದ ಜಗತ್ತನ್ನೆಲ್ಲ ಪ್ರೇಮಿಸುವ ಸಾಮರ್ಥ್ಯ, ಈ ಮೂಲಕ ಸಿಗುತ್ತದೆ. ಆದರೂ ಅವರ ಶಕ್ತಿ ಇದರಿಂದ ಕಮ್ಮಿಯೇನೂ ಆಗುವುದಿಲ್ಲ.”

ಪ್ರಶ್ನೆ: ಲೋಕದಲ್ಲಿ ಎಷ್ಟೋ ಅನಾಥರಿದ್ದಾರೆ. ನಮ್ಮ ತಪಸ್ಸಿನಿಂದ ಅವರಿಗೇನು ಪ್ರಯೋಜನ ? ಯಾಕಾಗಿ ಅಮ್ಮ ಇಲ್ಲೊಂದು ಅನಾಥಾಲಯ ಕಟ್ಟಿಸಿ ಅನೇಕರನ್ನು ರಕ್ಷಿಸಬಾರದು ?

“ಮಕ್ಕಳೇ, ಅನಾಥಾಲಯ ಕಟ್ಟಿಸಿದರೂ, ಅನಾಥರು ಮತ್ತೂ ಸೃಷ್ಟಿಯಾಗುತ್ತಲೇ ಇರುತ್ತಾರೆ. ಆದರೆ ಅವರಿಗೆ ಒಳ್ಳೇ ಸಂಸ್ಕಾರ ಕೊಟ್ಟರೆ ಮುಂದಕ್ಕೆ ಅನಾಥರಿರುವುದಿಲ್ಲ.

ಪ್ರಶ್ನೆ: ಅವರ ಹಸಿವು ನೀಗಿಸಲು ಬರೇ ಸಂಸ್ಕಾರ ಕೊಟ್ಟರೆ ಸಾಕೆ ?

“ಬರೇ ಊಟ ಮಾಡಿದ ಕಾರಣಕ್ಕೆ ಮಕ್ಕಳಿಗೆ ನಿದ್ದೆ ಬರುತ್ತದೆಯೇ ? ಹೊಟ್ಟೆ ತುಂಬಿಯೂ ’ನನ್ನ ಮನಸ್ಸಿಗೆ ನೆಮ್ಮದಿಯಿಲ್ಲ; ನಿದ್ದೆ ಬರುತ್ತಿಲ್ಲ’ ಎಂದು ಮಕ್ಕಳು ಹೇಳುವುದಿದೆ ಅಲ್ಲವೆ ? ಅಂದರೆ ಹೊಟ್ಟೆ ತುಂಬಿದ್ದರೂ ತೃಪ್ತಿಯಿರುವುದಿಲ್ಲ. ಆದರೆ, ಬಹಳ ದಿನಗಳಿಂದ ಬಯಸಿದ್ದ ಒಂದು ವಸ್ತು ಕೈಗೆ ಸಿಕ್ಕಿದಾಗ ನಾವು ಹಸಿವನ್ನೂ ಮರೆಯುತ್ತೇವೆ. ಮನಸ್ಸಿಗೆ ಸಂತೋಷವೂ ಆನಂದವೂ ಇದ್ದರೆ ಇವೆಲ್ಲದರಿಂದ ಪಾರಾಗಲು ಸಾಧ್ಯವಿದೆ. ಎಲ್ಲಾ ಅವಲಬಿಸಿಕೊಂಡಿರುವುದು ಮನಸ್ಸನ್ನು.”

ಪ್ರಶ್ನೆ: ನಮ್ಮ ಸುತ್ತಲೂ ಎಷ್ಟೋ ಮಂದಿ ಕಷ್ಟ ಕಾರ್ಪಣ್ಯಗಳನ್ನು ಸಹಿಸುತ್ತಿದ್ದಾರೆ; ಬರಿ ಹೊಟ್ಟೆಯಲ್ಲಿ ಮಲಗುತ್ತಾರೆ. ಇದಕ್ಕೆ ಏನು ಮಾಡಲು ಸಾಧ್ಯ?

“ಕೆಲವು ಶ್ರೀಮಂತರ ಮಕ್ಕಳು ಹೇಳುವುದಿದೆ, ಅವರು ದಿವಸಕ್ಕೆ ಎರಡು ಸಾವಿರ ರುಪಾಯಿ, ಮೂರು ಸಾವಿರ ರುಪಾಯಿ ಖರ್ಚು ಮಾಡುತ್ತಾರೆಂದು. ಯಾಕಾಗಿ ? ಆನಂದವೂ, ಸಂತೋಷವೂ ಸಿಕ್ಕಲೆಂದು. ಎರಡು ಮೂರು ಕಾರುಗಳಿದ್ದವರಿದ್ದಾರೆ. ಅವರು ಕಾರ್‌ನಲ್ಲಿ ಸುತ್ತಾಡಿ, ಅನೇಕ ಹೆಂಗಸರಿಗೆ ಉಪದ್ರವ ಮಾಡಿಯೂ, ಹೆಂಡ ಕುಡಿದೂ, ದೊಡ್ಡ ಲಾಡ್ಜ್‌ಗಳಲ್ಲಿ ಏರ್ಕಂಡೀಷನ್ ರೂಮ್ ಮಾಡಿ ಮಲಗಿಕೊಂಡು, ದಿನ ಕಳೆಯುತ್ತಾರೆ. ಆದರೆ ಹೆಂಡ ಕುಡಿದೂ ಅವರಿಗೆ ನಿದ್ದೆ ಬರುವುದಿಲ್ಲ. ಏರ್ಕಂಡೀಷನ್ ರೂಮ್ ತೆಗೆದುಕೊಂಡೂ ಅವರಿಗೆ ಸಮಾಧಾನ ದೊರಕುವುದಿಲ್ಲ. ಅನೇಕ ಹೆಂಗಸರನ್ನು ಕೆಡಿಸಿಯೂ ಅವರಿಗೆ ತೃಪ್ತಿಯೂ ನಿದ್ದೆಯೂ ಇಲ್ಲ. ಕೊನೆಗೆ ನಿದ್ದೆ ಗುಳಿಗೆ ನುಂಗಿ ಮಲಗಿಕೊಳ್ಳುತ್ತಾರೆ. ಅದೂ ಅವರ ಶಕ್ತಿಯನ್ನು ಹಾಳು ಮಾಡಿಕೊಂಡು. ಬಾಹ್ಯ ವಸ್ತುಗಳಲ್ಲಿದೆ ಆನಂದ ಎಂದಾಗಿದ್ದರೆ, ಇಷ್ಟೆಲ್ಲ ಭಂಡತನ ನಡೆಸಿ ತೃಪ್ತಿ ಸಿಗಬೇಕಾಗಿತ್ತಲ್ಲ ? ಒಬ್ಬರ ತೃಪ್ತಿಯ ಸಲುವಾಗಿಯೇ ಇಷ್ಟೆಲ್ಲ ಹಣ ಖರ್ಚು ಮಾಡುತ್ತಾರೆ; ಇತರರಿಗೆ ಅನ್ಯಾಯ ಬಗೆಯುತ್ತಾರೆ.

ಇದೇ ಸಂದರ್ಭ, ಈ ಹಣವಂತನ ಸುತ್ತುಮುತ್ತಲಿರುವವರ ಸ್ಥಿತಿಯೋ ? ಮುಂದಿನ ಮನೆಯಲ್ಲಿ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ತಾಯಿಯೂ ಮಕ್ಕಳೂ ಕುಳಿತು ಅಳುತ್ತಿದ್ದಾರೆ. ಅದರ ಮುಂದಿನ ಮನೆಯಲ್ಲಿ, ವರದಕ್ಷಿಣೆಯಿಲ್ಲದೆ ಮಗಳನ್ನು, ಖಾಲಿಯಾಗಿ ಮನೆಯಲ್ಲೇ ಕೂರಿಸಿದ್ದಾರೆ. ಇನ್ನೂ ಮುಂದಿನ ಮನೆಯಲ್ಲಿ, ಹತ್ತೇ ರುಪಾಯಿಯಲ್ಲಿ ಒಂದು ಕುಟುಂಬದವರು ಸುಖವಾಗಿ ಜೀವನ ಸಾಗಿಸುತ್ತಿದ್ದಾರೆ; ಸಂತೋಷವಾಗಿದ್ದು ಮಲಗಿ ನಿದ್ದೆ ಮಾಡುತ್ತಾರೆ. ಈ ಮೂರು ಮನೆಗಳ ನಡುವೆ ವಾಸಿಸುವ ಈ ಹಣವಂತನು ಆನಂದ ಹೊರಗೆ ಅರಸುತ್ತಾ, ಎಷ್ಟೋ ಹಣ ವ್ಯಯ ಮಾಡುತ್ತಾನೆ. ಆದರೂ, ನೆಮ್ಮದಿ ಸಿಗುತ್ತಿಲ್ಲ. ಆದರೆ ಒಂದು ವಿಶ್ವ ಮನೋಭಾವ ದಕ್ಕಿದರೆ, ಯಥಾರ್ಥ ಆನಂದ ಹೊರಗಲ್ಲ ಒಳಗೆಯೇ ಎಂಬುದನ್ನು ಅರ್ಥ ಮಾಡಿಕೊಂಡರೆ, ಆ ವ್ಯಕ್ತಿಗೆ ಸಮಾಧಾನ ಲಭಿಸುವುದು. ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತದೆ. ಬಡವರಲ್ಲಿ ಕರುಣೆಯುಂಟಾಗುತ್ತದೆ; ಹಸಿ ಹೊಟ್ಟೆಯಲ್ಲಿ ಮಲಗುವವರಿಗೆ ಸಹಾಯ ನೀಡುತ್ತಾರೆ; ವರದಕ್ಷಿಣೆಯಿಲ್ಲದೆ ಮನೆಯಲ್ಲೆ ಉಳಿದಿರುವ ಹೆಣ್ಣಿಗೆ ಸಹಾಯವಾಗುತ್ತಾರೆ. ಆ ಹಣವಂತನಿಗೆ ವಿಶ್ವ ಮನೋಭಾವ ಉಂಟಾದರೆ ಸಾಕು, ಆಗ ಎಲ್ಲರಿಗೂ ಸಹಾಯ ಮಾಡಲು ಬೇಕಾಗುವ ಮನೋಸ್ಥಿತಿ ಉಂಟಾಗುತ್ತದೆ.

ಮಕ್ಕಳೇ, ಬಾಹ್ಯ ವಸ್ತುಗಳಲ್ಲಿ ಆನಂದ ಹುಡುಕಿದರೆ ಎಂದಿಗೂ ಪೂರ್ಣ ತೃಪ್ತಿ ಸಿಗದು. ಹಾಲು ಪಾಯಸ ಕುಡಿದು ಸಾಕಾಗಿದೆ ಎಂದಿಟ್ಟುಕೊಳ್ಳೋಣ. ಆದರೆ ಸ್ವಲ್ಪ ಸಮಯ ಕಳೆದ ಮೇಲೆ, ಪುನಃ ಬೇಕಂತ ಆಸೆ ಬರುವುದಿಲ್ಲವೇ ? ಲೌಕಿಕ ಅನುಭವಗಳಿಂದ ತೃಪ್ತಿ ಪಡೆಯಬಹುದೆಂದು ನೀವು ಭಾವಿಸದಿರಿ. ಈಗ ಸಾಕು ಅಂತ ಅನಿಸುತ್ತದೆ. ಐದು ಸೆಕೆಂಡು ಕಳೆದರೆ ಎರಡು ಪಟ್ಟು ಬೇಕೆಂದು ತೋರುತ್ತದೆ. ಇದೇ ಅದರ ಪ್ರಭಾವ. ಆನಂದವು ಹೊರಗಲ್ಲ ಒಳಗೆ ಎಂದು ಮನವರಿಕೆಯಾದಾಗ ನಮಗೆ ನೆಮ್ಮದಿ ಲಭಿಸುತ್ತದೆ; ವಿಶ್ವಮನೋಭಾವವುಂಟಾಗುತ್ತದೆ.

ಮಕ್ಕಳೇ, ದೇವರೆನ್ನುವ ಛತ್ರದಡಿಯಲ್ಲಿ ನಿಮ್ಮನ್ನು ಮಳೆ ತಾಗದಂತೆ ನಿಲ್ಲಿಸೋಣ ಎನ್ನುವುದು ಮಾತ್ರವೇ ಅಮ್ಮನ ಉದ್ದೇಶ. ಕೊಡೆಗೆ ಮತ್ತೊಂದು ಕೊಡೆ ಬೇಡ. ದೇವರಿಗೆ ಯಾವುದರದ್ದೂ ಅವಶ್ಯಕತೆಯಿಲ್ಲ. ದೇವರನ್ನು ಆಶ್ರಯಿಸಿ ಸಿಗುವ ಆ ಗುಣ ಮತ್ತು ಆ ತ್ಯಾಗ ನಮಗೆ ಜಗತ್ತಿನಲ್ಲಿ ಕಾರ್ಯಪ್ರವೃತ್ತರಾಗಲು, ಭಗವಂತನ ಹೆಸರಿನಲ್ಲಿ ಜನಗಳನ್ನು ಪ್ರೀತಿಸುವ ಸಲುವಾಗಿ, ಸೇವೆ ಮಾಡುವ ಸಲುವಾಗಿ ಮಾತ್ರ. ಅದರ ಹೊರತು ದೇವರಿಗೆ ಬೇರೇನೂ ಬೇಕಾಗಿಲ್ಲ. ಸೂರ್ಯನಿಗೆ ಯಾಕೆ ಮೇಣದ ಬತ್ತಿ?”

ಪ್ರಶ್ನೆ: ಅಮ್ಮನಿಗೇಕೆ ಈ ವೇಷ ?* ಶಂಕರಾಚಾರ್ಯರೂ, ಶ್ರೀ ರಾಮಕೃಷ್ಣರೂ, ಚಟ್ಟಾಂಬಿ ಸ್ವಾಮಿಗಳೂ, ನಾರಾಯಣ ಗುರುಗಳೂ,** ಮತ್ತಿತರರೂ ಇಷ್ಟೆಲ್ಲ ವಸ್ತ್ರಧರಿಸಿ ಅಲಂಕರಿಸಿ ಕೊಂಡಿರಲಿಲ್ಲವಲ್ಲ ?

“ಮಕ್ಕಳೇ, ಹಾಗಿದ್ದ ಮೇಲೆ ಶಂಕರಾಚಾರ್ಯರು ಮಾತ್ರ ಸಾಕಾಗಿತ್ತಲ್ಲ ಲೋಕವನ್ನು ಉದ್ಧರಿಸಲು ? ಒಬ್ಬರ ಹಾಗೆ ಇನ್ನೊಬ್ಬರಿಲ್ಲ. ಶ್ರೀ ರಾಮನ ಹಾಗಿರಲಿಲ್ಲ ಶ್ರೀ ಕೃಷ್ಣ. ಶ್ರೀ ರಾಮಕೃಷ್ಣರ ಹಾಗಿರಲಿಲ್ಲ ರಮಣ ಮಹರ್ಷಿ. ಪ್ರತಿಯೊಂದು ಅವತಾರಕ್ಕೂ ಒಂದು ಉದ್ದೇಶ ಲಕ್ಷ್ಯಗಳಿದೆ. ಅವರು ಅನುಸರಿಸುವ ಮಾರ್ಗವೂ ಬೇರೆ ಬೇರೆಯಾಗಿರುತ್ತದೆ. ಒಬ್ಬರ ಹಾಗೆ ಇನ್ನೊಬ್ಬರು ಮಾಡಬೇಕೆಂದೇನಿಲ್ಲ.

ಮಕ್ಕಳೇ, ವಕೀಲನ ವೇಷ ನೋಡುವಾಗ ನಮಗೆ ಕೇಸಿನ ಕುರಿತು, ಅದರ ಜಯದ ಕುರಿತು ನೆನಪು ಬರುತ್ತದೆ. ಇದೇ ರೀತಿ, ಅಮ್ಮನ ಈ ವೇಷ ನಿಮ್ಮಲ್ಲಿಯ ಪರಮಾರ್ಥ ತತ್ವವನ್ನು ನೆನಪು ಮಾಡಿಸಲಿಕ್ಕಾಗಿ.

ಒಂದು ಕಥೆ ಕೇಳಿಲ್ಲವೇ; ಒಬ್ಬ ದೊಡ್ಡ ಧುರೀಣನನ್ನು ಒಮ್ಮೆ ಒಂದು ಸಮ್ಮೇಳನಕ್ಕೆ ಆಮಂತ್ರಿಸಿದ್ದರು. ಬರೇ ಒಬ್ಬ ಸಾಮಾನ್ಯನ ಬಟ್ಟೆ ಧರಿಸಿ ಅವನು ಅಲ್ಲಿ ಹೋಗಿ ಮುಟ್ಟಿದ. ಆದರೆ ಅಲ್ಲಿದ್ದವರು ಅವನನ್ನು ಆದರಿಸಲಿಲ್ಲ, ಒಳಗೆ ಹೋಗಲೂ ಬಿಡಲಿಲ್ಲ. ಆ ವ್ಯಕ್ತಿ ಹೋಗಿ ಪ್ಯಾಂಟು, ಕೋಟು, ಷೂಸು ಇತ್ಯಾದಿಗಳಿಂದ ಅಲಂಕೃತನಾಗಿ ಹಿಂತಿರುಗಿದ. ಆಗ ಆ ವ್ಯಕ್ತಿಯನ್ನು ಅಲ್ಲಿರುವವರು ಸ್ವಾಗತಿಸಿ ಕೂತುಕೊಳ್ಳಿಸಿದರು. ಭೂರಿ ಭೋಜನವನ್ನೂ ನೀಡಿದರು. ಆ ವ್ಯಕ್ತಿ ತನ್ನ ಕೋಟು, ಷೂಸು ಇತ್ಯಾದಿ ಬಿಚ್ಚಿ ಆಹಾರ ವಸ್ತುಗಳ ಎದುರಿಗೆ ಇಟ್ಟನು. ಉಳಿದವರು ಆಶ್ಚರ್ಯದಿಂದ ಕಾರಣ ಕೇಳಿದರು. ಆ ವ್ಯಕ್ತಿ ಹೇಳಿದ, ’ ನಾನೇ ಮೊದಲು ಸಾಧಾರಣ ಬಟ್ಟೆಯಲ್ಲಿ ಬಂದಾಗ ನೀವು ಕಡೆಗಣಿಸಿದಿರಿ. ಅದೇ ನಾನು ಪ್ಯಾಂಟು, ಕೋಟು ಧರಿಸಿ ಬಂದಾಗ ನೀವು ಆದರಿಸಿದಿರಿ. ಹಾಗಾದರೆ ಗೌರವಿಸಿದ್ದೂ ಆದರಿಸಿದ್ದೂ ನನ್ನನ್ನಲ್ಲ, ಈ ವಸ್ತ್ರವನ್ನು. ಆದಕಾರಣ ವಸ್ತ್ರ ಉಣ್ಣಲಿ ಆಹಾರವನ್ನು.’

ಪ್ರಪಂಚವಿಂದು ವೇಷದ ಮೇಲೆ ನಿಂತಿದೆ. ಆ ವೇಷ ಇಲ್ಲದಾಗಿಸಲು ಈ ವೇಷ ಬೇಕಾಗುತ್ತದೆ. ನಿಮ್ಮ ವೇಷ ಇಲ್ಲದಾಗಿಸಲು ಅಮ್ಮನಿಗೆ ಈ ವೇಷ ಹಾಕಿಕೊಳ್ಳಬೇಕಾಗುತ್ತದೆ.

ಮಕ್ಕಳೇ, ಅಮ್ಮನನ್ನು ನಂಬಬೇಕೆಂದೋ, ಅಮ್ಮ ದೇವರೆಂತಲೋ, ಮೇಲೆ ದೇವರೊಬ್ಬನು ಇದ್ದಾನಂತಲೋ ಅಮ್ಮ ಹೇಳುತ್ತಿಲ್ಲ. ನಿಮ್ಮಲ್ಲಿ ವಾಸಿಸುವ ಈಶ್ವರ***ನನ್ನು ಅರಿತುಕೊಳ್ಳಿ. ಮಕ್ಕಳೇ, ಸೆಗಣಿಯಲ್ಲಿ ಶಕ್ತಿ (ಗೋಬರ್ ಗ್ಯಾಸ್) ಹುದುಗಿಕೊಂಡಿರುವಂತೆ, ಹಾಲಿನಲ್ಲಿ ಬೆಣ್ಣೆಯೆಂಬಂತೆ ನಿಮ್ಮಲ್ಲಿ ದೇವರ ಶಕ್ತಿ ಹುದುಗಿ ಕೊಂಡಿದೆ. ಅದನ್ನು ಅರಿತುಕೊಳ್ಳುವುದೇ ಬಾಳಿನ ಗುರಿ.”

    *ಇದು ದೇವಿ ಭಾವದಲ್ಲಿ ಅಮ್ಮ ಉಪಯೋಗಿಸುವ ವರ್ಣಮಯ ಬಟ್ಟೆಗಳ ಕುರಿತಾದ ಪ್ರಶ್ನೆ. ಅಮ್ಮ ಭಾರತದಲ್ಲಿ ದೇವಿ ಭಾವ ದರ್ಶನ ಕೊಡುವುದು ನಿಲ್ಲಿಸಿ ಎಷ್ಟೋ ವರ್ಷಗಳಾಗಿವೆ. ವಿದೇಶಗಳಲ್ಲಿ ಇನ್ನೂ ದೇವಿ ಭಾವ ದರ್ಶನ ನಡೆಯುತ್ತಿದೆ.
    ** ಚಟ್ಟಾಂಬಿ ಸ್ವಾಮಿಗಳೂ, ನಾರಾಯಣ ಗುರುಗಳೂ ಕ್ರಮವಾಗಿ 19ನೇ ಹಾಗೂ 20ನೇ ಶತಮಾನದ, ಕೇರಳದಲ್ಲೆಲ್ಲ ಮಹತ್ತರ ಸಾಮಾಜಿಕ ಬದಲಾವಣೆ ತಂದ ಪ್ರಖ್ಯಾತ ಆಧ್ಯಾತ್ಮಿಕ ನೇತಾರರು.
    *** ದೇವರನ್ನು ಸೂಚಿಸಲು ಮಲೆಯಾಳದಲ್ಲಿ “ಈಶ್ವರ” ಶಬ್ದವನ್ನು ಉಪಯೋಗಿಸುತ್ತಾರೆ.

ನಿಮ್ಮ ದಿನದಲ್ಲಿ ಇಪ್ಪತ್ತನಾಲ್ಕು ಗಂಟೆಗಳಿದೆ. ಒಂದು ಗಂಟೆ ದೈವೀ ವಿಚಾರಗಳಿಗೆ ಮೀಸಲಿಡಿರಿ. ಜೋರಾಗಿ ಅಳುತ್ತ ಅರ್ಧ ಗಂಟೆ ಪ್ರಾರ್ಥನೆ ಮಾಡಿದರೆ ಸಾಕು, ದೇವರ ಕೃಪೆ ನಿಮ್ಮನ್ನು ಬಂದು ತಲಪುವುದು. ಏಕಾಗ್ರತೆ ಬೇಕು; ಭಕ್ತಿ ಬೇಕು. ಈ ಕಲಿಯುಗದಲ್ಲಿ ನಾಮ ಜಪ ಸುಲಭ. ಮನಕರಗುವ ಭಜನೆಯು ಎಷ್ಟೋ ಒಳ್ಳೆಯ ಸಾಧನಾಮಾರ್ಗ.

______________

ತಳಪಾಯ ಚೆನ್ನಾಗಿ ಗಟ್ಟಿಯಾಗಿದ್ದರೆ ಮಾತ್ರವೇ ಕಟ್ಟಡ ಮೇಲೆಬ್ಬಿಸಲು ಸಾಧ್ಯ; ಬಹಳ ಕೆಳಗಿದ್ದರೆ ಮಾತ್ರವೇ ಏರಲು ಸಾಧ್ಯ.

______________

ಕಾಮವನ್ನು ಹೋಗಲಾಡಿಸುವುದು ಬಹಳ, ಬಹಳ ಕಷ್ಟ. ರಾಮನು ಮರೆಯಲ್ಲಿ ಬಾಣ ಬಿಟ್ಟು ವಾಲಿಯನ್ನು ಕೊಂದದ್ದು; ನೇರವಾಗಿ ಎದುರಿಸುವುದು ಕಷ್ಟವೆಂದು. ಕಾಮವು, ಅದರತ್ತ ಪ್ರಯೋಗಿಸುವ ಬಲದ ಇಮ್ಮಡಿ ಬಲದೊಂದಿಗೆ ತಿರುಗಿ ಬರುವುದು. ವಾಲಿಯು ಭೋಗ ಸುಖಗಳ ಪ್ರತೀಕ. ವಾಲಿಯನ್ನು ಕೊಂದ ನಂತರವೇ ರಾಮನು ಸೀತಾನ್ವೇಷಣೆ ನಡೆಸಲು ಸಾಧ್ಯವಾದದ್ದು.

______________

ಮಕ್ಕಳ ಸಂತೋಷವೇ ಅಮ್ಮನ ಆರೋಗ್ಯ.

______________

ಮಾಳಿಗೆ ಕಟ್ಟಿದರೂ ಮನಸ್ಸಮಾಧಾನವಿಲ್ಲದಿದ್ದರೆ ಏನು ಪ್ರಯೊಜನ ? ಏರ್‌ಕಂಡೀಷನ್ ರೂಮ್‌ನಲ್ಲಿದ್ದರೂ ಬಹಳ ಜನರಿಗೆ ಯಾವುದೇ ತರದ ನೆಮ್ಮದಿಯಿರುವುದಿಲ್ಲ. ನೆಮ್ಮದಿ ಬೇಕಾಗಿದ್ದರೆ ಏಕಾಗ್ರತೆಯಿಂದ ದೈವವನ್ನು ಕರೆಯಬೇಕು. ಬಯಕೆಗಳನ್ನು ಅಂಕೆಯಲ್ಲಿಡ ಬೇಕು. ಮನಸ್ಸನ್ನು ನಿಯಂತ್ರಿಸಬೇಕು.

______________

ದೈವ ಸಾಕ್ಷಾತ್ಕಾರ ಸಿಕ್ಕಿದ ವ್ಯಕ್ತಿಯು ಸದ್ಗುರು. ಆತನು ಶಿಷ್ಯನನ್ನು ಸತ್ಯದ ದಾರಿಯಲ್ಲಿ ನಡೆಸಿ ಗುರಿ ಮುಟ್ಟಿಸುತ್ತಾನೆ. ಪ್ರಾಮಾಣಿಕತೆಯಿರುವವರು ಗುರುವನ್ನು ಸಿಕ್ಕಲಿ. ಅಲೆದು ಪ್ರಯೋಜನವಿಲ್ಲ.

______________

ಧ್ಯಾನ ಮಾಡುವಾಗ ಇಷ್ಟರೂಪವನ್ನು ಹೃದಯದಲ್ಲಿ ಸ್ಮರಿಸಿಕೊಳ್ಳಿ. “ನನ್ನ ಅಮ್ಮಾ, ನೀನು ನನ್ನನ್ನು ಬಿಟ್ಟು ಹೋಗದಿರು” ಎಂದು ಮೊರೆಯಿಟ್ಟು ಇಷ್ಟದೇವತೆಯನ್ನು ತಬ್ಬಿಕೊಂಡು ಕೂಗಿರಿ. ರೂಪದ ಜೊತೆ ಮಾತನಾಡುವುದಾಗಿ ಭಾವಿಸಿರಿ. ಇಷ್ಟಮೂರ್ತಿಯ ಚಿಕ್ಕದೊಂದು ಚಿತ್ರವನ್ನು ಮುಂದಿಟ್ಟುಕೊಳ್ಳಿರಿ. ಆ ಚಿತ್ರವನ್ನು ಸ್ವಲ್ಪ ನೋಡಿ ಕಣ್ಣು ಮುಚ್ಚಿ, ರೂಪವನ್ನು ಆಂತರ್ಯದಲ್ಲಿ ಸ್ಥಿರೀಕರಿಸಲು ಪ್ರಯತ್ನಿಸಿರಿ. ಒಳಗಿನ ರೂಪ ಅಗಲಿ ಹೋದರೆ ಪುನಃ ಕಣ್ಣು ತೆರೆದು, ಹೊರಗಿರುವ ಚಿತ್ರವನ್ನು ದೃಷ್ಟಿಸಿರಿ. ಪುನಃ ಕಣ್ಣು ಮುಚ್ಚಿರಿ. ಶ್ರದ್ಧೆಯಿಂದ ಹೀಗೆ ನಿರಂತರ ಮುಂದುವರಿಸಿದರೆ ನಾವು ಧ್ಯಾನ ಮಾಡುವ ರೂಪ ನಮಗೆ ಪ್ರತ್ಯಕ್ಷವಾಗುವುದು. ರೂಪ ಸ್ಥಿರವಾಗುವವರೆಗೆ ಮಾತ್ರ ಮಂತ್ರ ಜಪಿಸಿದರೆ ಸಾಕು. ಮನಸ್ಸು ಏಕಾಗ್ರವೂ, ಅಂತರ್ಮುಖವೂ ಆಗಲಿಕ್ಕಾಗಿ ಮಾತ್ರ ಮಂತ್ರ.

______________

ನಿರಂತರವಾದ ಅಭ್ಯಾಸದಿಂದ ಮಾತ್ರ ಮನಸ್ಸನ್ನು ಅಂಕೆಯಲ್ಲಿಡಲು ಸಾಧ್ಯ. ಒಂದೇ “ಎಲ್ಲಾ ನನ್ನಲ್ಲಿದೆ, ಈ ಕಾಣುವ ಸರ್ವವೂ / ಎಲ್ಲವೂ ನಾನೇ.” ಎಂದು ಭಾವನೆ ಮಾಡಿರಿ. ಇಲ್ಲವೇ “ನಾನು ಏನೂ ಅಲ್ಲ, ಇದೆಲ್ಲಾ ಭಗವಂತನದು” ಎಂದು ಭಾವಿಸಿ ಎಲ್ಲವನ್ನು ದೇವರಿಗೆ ಸಮರ್ಪಿಸಿರಿ. ನಿನ್ನೆಯವರೆಗೆ “ನಾನು ಶರೀರ”ವೆಂದು ಭಾವಿಸಿಯಲ್ಲವೇ ಜೀವಿಸಿದ್ದು? ಹಾಗಾಗಿ, ಮೊದಲು ಬಹಳಷ್ಟು ಅಲೆಗಳು ಮನಸ್ಸಲ್ಲಿ ಏಳುವುದು. ಆದರೆ ಅಭ್ಯಾಸದಿಂದ ಅದು ಹೋಗುವುದು. ಅಲೆಗಳನ್ನು ನಿಯಂತ್ರಿಸಲು ಒಂದು ಸ್ಥಳದಲ್ಲಿ ಸ್ಥಿರವಾಗಿ ಕುಳಿತುಕೊಂಡು ಸಾಧನೆ ನಡೆಸಬೇಕು. ಸುಮ್ಮನೆ ತುಂಬ ಪುಸ್ತಕಗಳನ್ನು ಓದಿದರೆ, ಅಲೆಗಳು ಹೆಚ್ಚೇ ಆಗುತ್ತವೆ.

______________

ನಮ್ಮ ಮನಸ್ಸು ವಾಸ್ತವವಾಗಿ ಏಕಾಗ್ರವೂ ನಿರ್ಮಲವೂ ಆಗಿರುತ್ತದೆ. ಆದರೆ ನಾವು ಅಲ್ಲಿ ನಿನ್ನೆಯವರೆಗೆ ಅಸಂಖ್ಯಾತ ಲೌಕಿಕ ವಿಚಾರಗಳಿಗೆ ಸ್ಥಳ ಕೊಟ್ಟಿದ್ದೆವು. ಹಾಗಾಗಿ ಧ್ಯಾನ ಮಾಡಲು ಕುಳಿತುಕೊಳ್ಳುವಾಗ ಮನಸ್ಸನ್ನು ಏಕಾಗ್ರ ಮಾಡಲು ಸಾಧ್ಯವಾಗದೆ ಹೋಗುತ್ತದೆ. ಗೇಣಿದಾರರಂತೆ ಅವುಗಳು. ನಮ್ಮ ಜಾಗದಲ್ಲಿ ಒಂದು ಕಡೆ ಗುಡಿಸಲು ಹಾಕಲು ಬಿಟ್ಟೆವು. ಹಿಂದಿರುಗಿ ಹೋಗಲು ಹೇಳಿದಾಗ ಗಣನೆ ಮಾಡುವುದಿಲ್ಲ. ಅದು ಮಾತ್ರ ಅಲ್ಲ, ತಿರುಗಿ ನಮ್ಮಲ್ಲಿ ಜಗಳಕ್ಕೂ ಬರುತ್ತಾರೆ. ಅವರನ್ನು ಹೊರಗೆ ಹಾಕಲು ಬಹಳ ಕಷ್ಟ ಪಡಬೇಕಾಗಿ ಬರುತ್ತದೆ. ಕೋರ್ಟಲ್ಲಿ ಕೇಸೂ ಹಾಕ ಬೇಕಾಗುತ್ತದೆ. ಅದರಂತೆಯೇ ಮನಸ್ಸಿನ ಗೇಣಿದಾರರನ್ನು ಹೊರಹಾಕಲು ದೇವರ ಕೋರ್ಟ್‌ನಲ್ಲಿ ಕೇಸು ಹಾಕಬೇಕಾಗುತ್ತದೆ. ಅದೊಂದು ಮುಗಿಯದ ಯುದ್ಧ. ಜಯ ದೊರಕುವವರೆಗೆ ಯುದ್ಧ ಮಾಡಬೇಕು.

______________

ಸಾಧನೆ ಮಾಡುತ್ತ ಹೋದಂತೆಲ್ಲ ಹೆಚ್ಚು ಹೆಚ್ಚು ವಾಸನೆಗಳು ಮೇಲೆದ್ದು ಬರುವ ಅನುಭವವಾಗುವುದು. ಒಂದು ಕೋಣೆ ಗುಡಿಸುವಾಗ, ಹೊರ ಪದರದಲ್ಲಿ ಅಂಟಿಕೊಂಡಿರುವ ಕೊಳೆ ಮಾತ್ರವೇ ಸಾರಿಸಲು ಸಾಧ್ಯವಾಗುತ್ತದೆ. ಆದರೆ ಒಂದು ಒದ್ದೆ ವಸ್ತ್ರದಿಂದ ಒರಸಿದರೆ, ಹೆಚ್ಚಿನ ಕೊಳೆ ಮೇಲೆದ್ದು ಬರುತ್ತದೆ. ಮುಗಿಯುವ ಸಲುವಾಗಿ ಅವು ಹಾಗೆ ಮೇಲೆದ್ದು ಬರುವುದು.
______________

ಪ್ರಶ್ನೆ: ಅಮ್ಮಾ, ನಾನು ಬ್ರಹ್ಮನ್ ಅಲ್ಲವೇ, ಹಾಗಿದ್ದ ಮೇಲೆ ಸಾಧನೆ ಯಾಕೆ ಮಾಡಬೇಕು ?

“ಮಗನೇ, ಮಗನ ಹೆಸರು ಕರೆಯದೆ ಮಗನು ಹಿಂತಿರುಗಿ ನೋಡಲು ಸಾಧ್ಯವೇ ? ಆದಕಾರಣ, ನಾವು ನಿಂತಿರುವುದು ನಾಮದ ಮೇಲೆ. ಮಗನೇ, ನಿನಗೆ ನಿನ್ನೆಯಿಲ್ಲವೆ, ಇವತ್ತಿಲ್ಲವೆ, ನಾಳೆಯಿಲ್ಲವೆ, ನನ್ನ ಹೆಂಡತಿಯೆಂದೂ ಮಕ್ಕಳೆಂದೂ ಇಲ್ಲವೆ ? ರುಚಿಯೂ ಅರುಚಿಯೂ ಇಲ್ಲವೆ ? ನೀನು ಬ್ರಹ್ಮನ್ನಲ್ಲಿ ಇರುವವನು ಆದರೂ ಬ್ರಹ್ಮನ್ ಆಗಿಲ್ಲ. ಈಗಿನ ನಿನ್ನ ಬ್ರಹ್ಮನ್ ವಿವೇಚನೆಯಿಲ್ಲದ ಪ್ರಾಣಿಗಳ ಹಾಗೆ. ಅವೆಲ್ಲ ಬ್ರಹ್ಮವೆ ತಾನೆ. ಅದೇ ಪ್ರಕಾರವಿರುವುದು ನೀನೀಗ. ಋಷಿವರರು ಅನುಭೂತಿಯಿಂದ ಬರೆದಿಟ್ಟ ಮಾತುಗಳನ್ನು ಓದಿ, ನಾನು ಬ್ರಹ್ಮವೆಂದು ಹೇಳಿಕೊಂಡು ನಡೆಯಬೇಡಿ. ಮಗನೇ, ವಾಚ್ಮ್ಯಾನ್ ಕೂತುಕೊಂಡು ’ನನ್ನ ಆಸ್ತಿ’ ಎಂದು ಹೆಮ್ಮೆಪಟ್ಟಂತೆ, ನಾವು ಪುಸ್ತಕ ಓದಿ ಬ್ರಹ್ಮವೆಂದುಕೊಂಡು ನಡೆಯುವುದು. ಹಲಸೂ ಹೇಳುತ್ತದೆ; ಹಲಸಿನ ಬೀಜವೂ ಹೇಳುತ್ತದೆ, ನಾನು ಬ್ರಹ್ಮನ್ ಎಂದು. ನೀನು ಬರೇ ಹಲಸಿನ ಬೀಜ ಮಾತ್ರವಾಗಿರುವುದು. ಯಮ ನಿಯಮಗಳ ಜೊತೆಗೂಡಿ ನಿನಗೆ ಆ ಬ್ರಹ್ಮನ್ ಆಗಲು ಸಾಧ್ಯ.

ಮಕ್ಕಳೇ, ಬ್ರಹ್ಮವೆನ್ನುವುದು ಮಾತಿನಲ್ಲಿ ಹೇಳುವಂಥದ್ದಲ್ಲ; ಅನುಭವಿಸಿ ತಿಳಿದುಕೊಳ್ಳಬೇಕಾದದ್ದು. ಒಬ್ಬರು ಮಹರ್ಷಿ ತನ್ನ ಮಗನನ್ನು ಗುರುಕುಲದಲ್ಲಿ ಕಲಿಯಲು ಬಿಡುತ್ತಾರೆ. ಹನ್ನೆರಡು ವರ್ಷಗಳ ಶಾಸ್ತ್ರಪಠನ ಮುಗಿಸಿ ಮಗನು ಮರಳಿ ಬರುತ್ತಾನೆ. ತಂದೆಯೊಡನೆ “ನಾನು ಯಾರೆಂದು ಗೊತ್ತೇ ? ಬ್ರಹ್ಮಸ್ವರೂಪನು.”ಎಂದು ಅಹಂಕಾರದಿಂದನೆ ಹೇಳಲಿಕ್ಕೂ, ಹೆಮ್ಮೆಯೊಂದಿಗೆ ವರ್ತಿಸಲಿಕ್ಕೂ ತೊಡಗಿದ. ಮಗನ ಈ ವರ್ತನೆಯನ್ನು ಕಂಡ ಮಹರ್ಷಿಗೆ ತನ್ನ ಮಗನಲ್ಲಿ ಸಹಾನುಭೂತಿ ಉಂಟಾಗುತ್ತದೆ. ಅವರು ತನ್ನ ಮಗನಲ್ಲಿ ಒಂದು ಪಾತ್ರೆಯಲ್ಲಿ ಹಾಲನ್ನೂ, ಸ್ವಲ್ಪ ಕಲ್ಲುಸಕ್ಕರೆಯನ್ನೂ ತರಲಿಕ್ಕೆ ಹೇಳುತ್ತಾರೆ. ಮಗನು ಹಾಲು ಮತ್ತು ಕಲ್ಲುಸಕ್ಕರೆ ತೆಗೆದುಕೊಂಡು ಬರುತ್ತಾನೆ. ಕಲ್ಲುಸಕ್ಕರೆಯನ್ನು ಹಾಲಲ್ಲಿ ಹಾಕಿ ಕಲೆಸಲು ಮಹರ್ಷಿ ಹೇಳುತ್ತಾರೆ. ಮಗನು ಹಾಗೆಯೇ ಮಾಡಿ ಮುಗಿಸಿದಾಗ, ಮಹರ್ಷಿಯು ಪಾತ್ರೆಯ ಮಧ್ಯದಿಂದ ಸ್ವಲ್ಪ ಹಾಲು ತೆಗೆದು ಮಗನ ಬಾಯಿಯಲ್ಲಿ ಹೊಯ್ದು ’ಸಿಹಿಯಾಗಿದೆಯೆ’ ಎಂದು ಪ್ರ ಶ್ನಿಸುತ್ತಾರೆ. ಸಿಹಿಯಿದೆ ಎಂದು ಮಗನು ಹೇಳಿದ. ಪಾತ್ರೆಯ ನಾಲ್ಕೂ ಭಾಗಗಳಿಂದ ಹಾಲು ಮಗನ ಬಾಯಿಯಲ್ಲಿ ಪುನಃ ಹೊಯ್ದು, ’ಸಿಹಿಯಾಗಿದೆಯೆ’ ಎಂದು ಪುನ: ಕೇಳುತ್ತಾರೆ. ’ಸಿಹಿಯಾಗಿದೆ’ ಎದು ಪುನಃ ಮಗನು ಉತ್ತರಿಸಿದ. ’ಎಷ್ಟು ಸಿಹಿಯಿದೆ’ ಮಹರ್ಷಿ ಪ್ರಶ್ನೆ ಮಾಡುತ್ತಾರೆ. ಮಗನಿಗೆ ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ಆಗ ಮಹರ್ಷಿಯು ಮಗನಿಗೆ ಉಪದೇಶಿಸುತ್ತ ಹೇಳುತ್ತಾರೆ, ’ ಮಗುವೆ, ಬ್ರಹ್ಮನ್ ಎಂದು ಮಾತಲ್ಲಿ ಹೇಳಿ ಹೆಮ್ಮೆ ಪಡುವಂಥದ್ದಲ್ಲ. ಅದು ಅನುಭವ; ಅನುಭವಿಸಿ ತಿಳಿಯುವಂಥದ್ದು. ಕಲ್ಲುಸಕ್ಕರೆಯು ಹಾಲಿನಲ್ಲಿ ಎಲ್ಲ ಕಡೆ ವ್ಯಾಪಿಸಿರುವ ಹಾಗೆ, ಅದು ಎಲ್ಲ ಕಡೆ ತುಂಬಿಕೊಂಡಿದೆ.’

ಮಕ್ಕಳೇ, ಸಗುಣನೂ, ನಿರ್ಗುಣನೂ ಆದ ದೇವರು ಎಲ್ಲ ಕಡೆಯೂ ತುಂಬಿ ಕೊಂಡಿದ್ದಾನೆ. ಅದು ಶಬ್ದಗಳಲ್ಲಿ ಹೇಳುವಂಥದ್ದಲ್ಲ. ಅನುಭೂತಿಯ ಸ್ತರದಲ್ಲಿ ಅರಿಯಬೇಕಾದದ್ದು. ಸಾಧನೆಯಿಲ್ಲದೆ ನಾನು ಬ್ರಹ್ಮವೆಂದು ಹೇಳಿಕೊಂಡು ನಡೆಯದಿರಿ.

ಒಬ್ಬ ಪಂಡಿತನು ಎಲ್ಲವು ಬ್ರಹ್ಮಮಯ ಎಂದು ಹಾಡಿಕೊಂಡು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಇದು ನೋಡಿದ ಮತ್ತೊಬ್ಬನು, ಹಿಂದಿನಿಂದ, ಒಂದು ಮುಳ್ಳು ತೆಗೆದುಕೊಂಡು ಆ ಪಂಡಿತನನ್ನು ತಿವಿಯುತ್ತಾನೆ. ಅವನು ಅಲ್ಲಿ ನಿಂತು ಅಳತೊಡಗಿದ. ನೋವೂ ಕೋಪವೂ ಸಹಿಸಲಾಗದೆ, ’ಯಾರೋ, ನನ್ನನ್ನು ತಿವಿದದ್ದು’ ಎಂದು ನೋವನ್ನನುಭವಿಸುತ್ತ, ಅವನು ತಿವಿದವನನ್ನು ಹೊಡೆಯಲಿಕ್ಕೆಂದು ಹೋಗುತ್ತಾನೆ. ಮಕ್ಕಳೇ, ನಮ್ಮ ಬ್ರಹ್ಮನ್ ಈ ರೀತಿ…ಅಳುವ ಬ್ರಹ್ಮನ್ !

ಹಾಗಾದರೆ, ಅನುಭವಿಸಿ ಅರಿತವರ ಕಥೆ ಕೇಳಬೇಕೇ ? ಒಬ್ಬ ಮಹಾತ್ಮನು ಸರ್ವವೂ ಬ್ರಹ್ಮಮಯವೆಂದು ಹಾಡಿಕೊಂಡು ನಡೆಯುತ್ತಿದ್ದ. ಬೇರೊಬ್ಬನು ಹಿಂದಿನಿಂದ ಬಂದು ಆ ಮಹಾತ್ಮನ ಕೈ ಕತ್ತರಿಸುತ್ತಾನೆ. ಆದರೆ ಆ ಮಹಾತ್ಮನಿಗೆ ಇದರ ಅರಿವೇ ಇಲ್ಲ. ಎಲ್ಲವನ್ನೂ ಮರೆತಿದ್ದ ಆತ ಹಾಡುತ್ತ ಇನ್ನೂ ಮುಂದೆ ಸಾಗುತ್ತಿರುತ್ತಾನೆ. ತಾನೊಬ್ಬ ಮಹಾತ್ಮನನ್ನು ಪೀಡಿಸಿದ್ದು ಎಂದು ಕೈ ಕತ್ತರಿಸಿದ ವ್ಯಕ್ತಿಗೆ ಅರ್ಥವಾಯಿತು. ಪಶ್ಚಾತ್ತಪಪಟ್ಟು ಅವನು ಮಹಾತ್ಮನನ್ನು ಸಮೀಪಿಸಿದ. ತನ್ನನ್ನು ಕ್ಷಮಿಸಬೇಕೆಂದು ಕೇಳಿ ಕೊಳ್ಳುತ್ತಾನೆ. ಯಾಕೆಂದು ಅವನು ಕೇಳುತ್ತಾನೆ. ’ತಮ್ಮ ಕೈ ಕತ್ತರಿಸಿ ತುಂಡು ಮಾಡಿದ ಮಹಾ ಪಾಪಿ ನಾನು’ ಎಂದು ಅವನು ಮಾರುತ್ತರ ಕೊಟ್ಟ. ಆಗಲೇ ತನ್ನ ಕೈ ತುಂಡಾಗಿ ಹೋಗಿದೆ ಎಂದು ಅವನಿಗೆ ಗೊತ್ತಾಗಿದ್ದು. ಕತ್ತರಿಸಿದ ಕೈಯ ಸ್ಥಾನವನ್ನು ಅವನು ಸವರಿದ. ಆಗ ಅವನ ಕೈ ಪುನಃ ಹಿಂದಿನಂತಾಯಿತು. ಆಗ ಅವನು ಹೇಳುತ್ತಾನೆ, ’ಮಗುವೇ, ಸರ್ವಂ ಬ್ರಹ್ಮಮಯಂ ಎಂದು ಹಾಡಿದರೂ, ಈ ಕೈ ಹಿಂದಿನಂತೆ ಮಾಡಲು ಸವರುವ ಎನಿಸಿ ಕರ್ಮ ಮಾಡಬೇಕಾಗಿಬಂತು. ಮಗೂ, ನಾನು ಈಗಲೂ ಕರ್ಮದ ಮಟ್ಟದಲ್ಲೇ ನೆಲೆಸಿದ್ದೇನೆ.’

ಮಕ್ಕಳೇ, ಅನುಭೂತಿಯಿಂದಲ್ಲದೆ ನಾನು ಬ್ರಹ್ಮನ್ ಎಂದು ಹೇಳಲು ನಮಗೆ ಅವಕಾಶವಿಲ್ಲ. ನೀವು ಮೊದಲು ಹೇಳಿದ ಪಂಡಿತನಂತೆ ಮಾಡದೆ, ಅನುಭವಿಸಿ ಅರಿತ ಆ ಮಹಾತ್ಮನಂತೆ ಮಾಡಲು ಯತ್ನಿಸಿರಿ.

ಇವತ್ತು ಇಪ್ಪತ್ತೈದೋ, ಐವತ್ತೋ ರುಪಾಯಿ ಕೊಟ್ಟರೆ ಬ್ರಹ್ಮಸೂತ್ರ ಗ್ರಂಥವನ್ನು ಅಂಗಡಿಯಲ್ಲಿ ಕೊಂಡುಕೊಳ್ಳಬಹುದು. ಎರಡು ವಾರಗಳಲ್ಲಿ ಅದು ಬಾಯಿಪಾಠ ಕಲಿಯಲೂ ಸಾಧ್ಯವಿದೆ. ಅದು ಕಲಿತು, ನಾನು ಬ್ರಹ್ಮನ್ ಎಂದು ಹೇಳಿಕೊಂಡು ನಡೆಯುವುದರಲ್ಲಿ ಯಾವ ಅರ್ಥವೂ ಇಲ್ಲ. ಮಕ್ಕಳೇ, ಅದನ್ನು ಜೀವನದಲ್ಲಿ ಅಳವಡಿಸಿ ಇನ್ನುಳಿದವರಿಗೆ ತೋರಿಸಿ ಕೊಡುವುದು ಬೇಕಾಗಿದೆ. ಒಂದು ಗಂಟೆಯ ಶಾಸ್ತ್ರಾಭ್ಯಾಸ ಮಾಡಿದರೆ, ಹತ್ತು ಗಂಟೆಯಾದರೂ ಮನನ ಮಾಡಬೇಕು.

ಮಕ್ಕಳೇ, ನಮ್ಮ ಕೈ ಸುಟ್ಟರೆ ಆ ಕೈ ತಣ್ಣೀರಲ್ಲಿ ಮುಳುಗಿಸಲು ಎಷ್ಟೆಲ್ಲ ಗಡಿಬಿಡಿ ಇರುತ್ತದೋ, ಅಷ್ಟೆಲ್ಲ ವ್ಯಥೆ ದೇವರನ್ನರಿಯಲು ನಮಗೆ ಇರಬೇಕು.”