ಮಕ್ಕಳೇ, ಆಧಾರಸ್ತಂಭಗಳಿಲ್ಲದೆ ಕಟ್ಟಡ ಕಟ್ಟಬಹುದೆಂದು ಒಂದು ವೇಳೆ ವಿಜ್ಞಾನಿಗಳು ಕಂಡುಹಿಡಿದರೆಂದು ಇಟ್ಟುಕೊಳ್ಳೋಣ; ಇಂದು ಬಟನ್ ಅದುಮಿದರೆ ಈ ಪ್ರಪಂಚವೇ ಅಳಿದು ಹೋಗುತ್ತದೆಂದು ಇಟ್ಟುಕೊಳ್ಳೋಣ. ಆದರೆ ಇದರಿಂದ ಯಾವ ಮನಸ್ಸಿಗೂ ಯಾವ ಕುಟುಂಬಕ್ಕೂ ಸಮಾಧಾನವೆಂಬುದು ಸಿಗುವುದಿಲ್ಲ. ಹೊಟ್ಟೆ ತುಂಬ ಊಟ ಮಾಡಿಯೂ ’ಮನಸ್ಸಿಗೆ ಸಮಾಧಾನವಿಲ್ಲ, ನಿದ್ದೆ ಬರುತ್ತಿಲ್ಲ’ ಎನ್ನುವ ಮೊರೆಯನ್ನು ಮಾತ್ರವೇ ಇಂದು ನಾವು ಕೇಳುತ್ತಿರುವುದು. ಒಂದು ಕೋಟಿಗೂ (ಇದು 1987ರ ಮೊದಲಿನ ವರ್ಷಗಳಲ್ಲಿ ಅಮ್ಮ ಹೇಳಿದ ಮಾತು) ಮೀರಿ ಜನಗಳನ್ನು ಅಮ್ಮ ಇಷ್ಟು ಕಾಲದಿಂದ ಕಂಡು ಭೇಟಿಯಾಗಿದ್ದಾರೆ. ಅದರಲ್ಲಿ ಬೆರಳೆಣಿಕೆಯಷ್ಟು ಮಂದಿಯೂ ಮನಸ್ಸಮಾಧಾನದಿಂದ ಬದುಕುತ್ತಿಲ್ಲ. ಬರುವ ಈ ಮಂದಿ ಕಡಿಮೆ ಸಂಪತ್ತಿರುವವರಲ್ಲ; ಎಲ್ಲ ಇರುವವರು. ಒಂದು ವ್ಯಕ್ತಿಗೆ ಕೆಲಸದಾಳುಗಳನ್ನು ಕೊಟ್ಟರೋ, ಚೆಲುವೆ ಹೆಣ್ಣನ್ನು ಕೊಟ್ಟರೋ, ಕಟ್ಟಡ ಕೊಟ್ಟರೋ, ಎಕರೆ ಲೆಕ್ಕದಲ್ಲಿ ಭೂಮಿ ಕೊಟ್ಟರೋ, ಆ ವ್ಯಕ್ತಿಗೆ ಸಮಾಧಾನ ಸಿಗಬೇಕೆಂದೇನಿಲ್ಲ. ಇದೆಲ್ಲ ಇರುವವರೆ ಹೆಚ್ಚು ಅಳುತ್ತಿರುವುದನ್ನು ಕಾಣುತ್ತೇವೆ. ಇದು ಬದಲಾಗಬೇಕಾದರೆ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು.

ಸಂಪತ್ತು ಬೇಡವೆಂದು ಅಮ್ಮ ಹೇಳುತ್ತಿಲ್ಲ. ಎಲ್ಲತರದ ಆಸ್ತಿಗಳನ್ನು ನೀವು ಸಂಪಾದಿಸಿಕೊಳ್ಳಿ; ಆದರೆ ಅದನ್ನು ಹೇಗೆ ವಿನಿಯೋಗಿಸಬೇಕೆನ್ನುವ ’ಮರ್ಮ’ ತಿಳಿಸಿ ಹೇಳುವುದು ಅಧ್ಯಾತ್ಮ. ಕೋಟಿಗಟ್ಟಲೆ ಬಾಣಬಿಡಲು ಕಲಿತರೂ ಅದರ ಗುರಿ ತಿಳಿದುಕೊಳ್ಳದವನು ಅಷ್ಟೂ ಬಾಣಗಳನ್ನು ಕಳೆದುಕೊಂಡಂತಾಗುತ್ತದೆ. ಆದಕಾರಣ ಗುರಿಯನ್ನು ಕಲಿತು ಬಾಣ ಹೂಡಿರಿ. ಈ ತೆರನಾಗಿ, ಅಧ್ಯಾತ್ಮ ಅರ್ಥಮಾಡಿಕೊಂಡು ಎಷ್ಟೇ ಸಂಪತ್ತು ಗಳಿಸಿದರೂ ಅದು ನಿಮಗೂ ಲೋಕಕ್ಕೂ ಒಳ್ಳೆಯದನ್ನೇ ಮಾಡುತ್ತದೆ. ಆದುದರಿಂದ ಅಧ್ಯಾತ್ಮ ಏನಂತ ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಿ; ಕಲಿತುಕೊಳ್ಳಿ. ಕಲಿತು ನೀವು ಸಮಾಜದಲ್ಲಿ ಬದಲಾವಣೆಗಳನ್ನು ತನ್ನಿರಿ.

ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ಸಮಾಜವನ್ನು ಪ್ರೀತಿಸೋಣ, ಸೇವೆ ಮಾಡೋಣ. ರಾಜಕೀಯ ಬೇಡವೆಂದು ಹೇಳುತ್ತಿಲ್ಲ; ಮನೆ ಬೇಡವೆಂದು ಹೇಳುತ್ತಿಲ್ಲ. ಅದೆಲ್ಲ ಇದ್ದರೂ ನಿಮಗೆ ಅಧ್ಯಾತ್ಮ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ; ಸರಿಯಾದ ಹಾದಿಯಲ್ಲಿ ಮುಂದುವರಿಯಲು ಸಾಧ್ಯವಿದೆ. ಮಕ್ಕಳೇ, ರಾಜಕೀಯ, ಪಾರ್ಟಿಯ ಕುರಿತಾಗಿಯೆಲ್ಲ ಮಾತಾಡುತ್ತಿದ್ದರೆ ನಮ್ಮ ವಿದ್ಯಾಭ್ಯಾಸ ಹಾಳಾಗುತ್ತದೆ; ಕರ್ತವ್ಯಗಳು ಮರೆತು ಹೋಗುತ್ತವೆ, ಅನೇಕರನ್ನು ಪೀಡಿಸುತ್ತೇವೆ. ಇಷ್ಟೇ ನಮ್ಮಿಂದ ಸಾಧ್ಯ. ಪಾರ್ಟಿ ಯಾವತ್ತೂ ನಮಗೆ ಸನ್ಮಾರ್ಗ ಸ್ಪಷ್ಟ ಪಡಿಸಿ ಕೊಡುವುದಿಲ್ಲ. ಎರಡೇ ಪಾರ್ಟಿ ಇರುವ ಕಡೆಯೂ ಅವರಿಗೆ ಸತ್ಯವನ್ನು ಆಚರಿಸಿಕೊಂಡು ಹೋಗಲು ಬೇಗ ಆಗುತ್ತದೆಂದು ಹೇಳಲು ಬರುವುದಿಲ್ಲ. ಯಾವಾಗಲೂ ಇತರರ ವೋಟ್ನ ಮೇಲಲ್ಲವೇ ಇವರ ಅಸ್ತಿತ್ವ ? ಒಬ್ಬನ ವೋಟ್ ಹೋದರೆ ಸಾಕು, ಮಂತ್ರಿ ಪದ ಹೋಗಲಿಕ್ಕೆ. ಬೇರೆಯವರನ್ನು ಅವಲಂಬಿಸಿ ಇವರು ಬೆಳೆದಿರುವುದು. ಪರಾವಲಂಬಿಗಳಿಗೆ ಇನ್ನೊಬ್ಬರನ್ನು ರಕ್ಷಿಸಲಿಕ್ಕೆ ಸಾಧ್ಯವಿಲ್ಲ. ವೋಟಿಗೆ ಬೇಕಾಗಿ ಮಾತ್ರ ಇವರು ಇರುವುದರಿಂದ ಸತ್ಯಸಂಧರಾಗಿ ಬದುಕಲು ಸಾಧ್ಯವಾಗುವುದಿಲ್ಲ. ಅಥವಾ ಸತ್ಯವಿದ್ದರೂ, ಅವರಲ್ಲಿ ವಿಪರೀತ ಬುದ್ಧಿಯಿರಬಹುದು. ಆದರೆ ಅಧ್ಯಾತ್ಮದಲ್ಲಿ ಅದಿಲ್ಲ.

ಅಧ್ಯಾತ್ಮವನ್ನು ಅರ್ಥ ಮಾಡಿಕೊಂಡಾಗ ನಮ್ಮ ಕರ್ತವ್ಯಗಳ ಸ್ಮರಣೆ ನಮಗೆ ಉಂಟಾಗುತ್ತದೆ. ನಾವು ಯಾರೆಂದು, ಏನೆಂದು ಅರ್ಥ ಮಾಡಿಕೊಳ್ಳುತ್ತೇವೆ; ಅದಕ್ಕನುಗುಣವಾಗಿ ನಾವು ಬದುಕಲು ಪ್ರಯತ್ನಿಸಬಹುದು. ಭೂಮಿಗೂ ಸಹ ತೊಂದರೆಯಾಗದಂಥ ಬದುಕು ನಾವು ಕಟ್ಟಬಹುದು. ಆಧ್ಯಾತ್ಮಿಕ ಜೀವನದಲ್ಲಿ ಮಾತ್ರ ಇದು ಸಾಧ್ಯ. ಯಾರೂ ಸನ್ಯಾಸಿಯೋ ಬ್ರಹ್ಮಚಾರಿಯೋ ಆಗಬೇಕಾಗಿಲ್ಲ. ನಿಮ್ಮ ಜೀವನವನ್ನೂ ಕುಟುಂಬವನ್ನೂ ಸಂಭಾಳಿಸಿಕೊಂಡೇ, ಸಾಧನೆಯನ್ನೂ ಮಾಡಿಕೊಂಡು ಲೋಕದಲ್ಲಿದ್ದುಕೊಂಡು ಬದುಕಬಹುದು.

ಕ್ರಿಕೆಟ್ ಹಾಗೂ ಟಿ.ವಿ. ಯಾವುದೂ ಹಸಿವಾದಾಗ ಸಮಾಧಾನ ಕೊಡುವುದಿಲ್ಲ. ಅವೆಲ್ಲ ನೋಡುವಾಗ ನಮ್ಮಲ್ಲಿ ಭಾವೋದ್ವೇಗಗಳು ಜಾಗೃತವಾಗುತ್ತವೆ. ವೈಭವೋಪೇತ ಜೀವನದ ಬಗ್ಗೆ ಉದ್ರೇಕ ಉಂಟಾಗುತ್ತದೆ. ಅವುಗಳು ಸಿಗದೆ ಹೋದಾಗ ನಿರಾಶೆಯಾಗುಗುತ್ತದೆ. ನಾವೂ ಹಾಳಾಗುತ್ತೇವೆ. ಆದರೆ ಸಮಯ ವ್ಯರ್ಥ ಮಾಡದೆ ಏಕಾಗ್ರತೆಯಿಂದ ಧ್ಯಾನ ಮಾಡಿದಲ್ಲಿ, ನಿಮಗೆ ಬೇರೆ ಎಲ್ಲಕ್ಕಿಂತಲೂ ಹೆಚ್ಚಿನ ಸಂತೃಪ್ತಿ ಸಿಗುವುದು. ಟಿವಿ, ಸಿನೇಮ ನೋಡಬಾರದೆಂದು ಅಮ್ಮ ಹೇಳುತ್ತಿಲ್ಲ. ಆದರೆ ಇವೆಲ್ಲ ಭಾವನೆಗಳನ್ನು, ವಿಚಾರಗಳನ್ನು ಜಾಗೃತಗೊಳಿಸಿದಾಗ ಅವನ್ನು ತೃಪ್ತಿಪಡಿಸಲು ಪರಸ್ತ್ರೀಯರನ್ನು ಇಚ್ಚಿಸುವುದು, ಕಳವು ಮಾಡುವುದು ಮೊದಲಾದ ಪ್ರವೃತ್ತಿಗಳಿಂದ ನಾವು ಜಗತ್ತಿಗೆ ಅನ್ಯಾಯ ಮಾತ್ರವೇ ಬಗೆಯುತ್ತೇವೆ.

ಮಕ್ಕಳೇ, ಆನಂದ ನಿಮ್ಮ ಒಳಗಿದೆ. ಆದರೆ ನೀವದು ಅರಿತುಕೊಳ್ಳುತ್ತಿಲ್ಲ. ನೀವು ಖಜಾನೆಯ ಬೀಗದ ಕೈಯನ್ನು ನಿಮ್ಮದೇ ಕಿಸೆಯೊಳಗೆ ಇಟ್ಟು ಮನೆಯಲ್ಲೂ, ಹೊರಗೂ ತಿರುಗಾಡದಿರಿ. ಆನಂದವು ಹೊರಗಿದೆ ಎಂದು ಭಾವಿಸುವುದರಿಂದ ಉಪದ್ರವ ಮಾತ್ರ ನಿಮ್ಮಿಂದ ಮಾಡಲು ಸಾಧ್ಯವಾಗುತ್ತದೆ. ಆದಕಾರಣ ದಯಮಾಡಿ, ಸಮಾಜದೊಡನೆ ಪ್ರೇಮವಿದ್ದಲ್ಲಿ; ಜನರಲ್ಲಿ, ಬಡಜನರಲ್ಲಿ ಕರುಣೆಯಿದ್ದಲ್ಲಿ ನೀವು ಈ ತರ ಹಾಳಾಗದೆ ಬೇರೆಯವರನ್ನು ಕಾಪಾಡಿರಿ. ಅನೇಕರು ಉಪವಾಸವಿದ್ದು, ಮನೆಯಿಲ್ಲದೆ, ಬಟ್ಟೆಯಿಲ್ಲದೆ, ಶಾಲೆಗೆ ಹೋಗಲು ಕಾಸಿಲ್ಲದೆ ಹೆಣಗಾಡುತ್ತಿದ್ದಾರೆ. ಔಷಧಿ ಕೊಂಡುಕೊಳ್ಳಲು ಸಾಧ್ಯವಾಗದೆ ಕಷ್ಟಪಡುತ್ತಿದ್ದಾರೆ. ನಿಮ್ಮಲ್ಲೊಂದು ಪರಿವರ್ತನೆ ಉಂಟಾದರೆ, ಅಶಾಶ್ವತ ವಸ್ತುಗಳಿಗಾಗಿ ಹಾಳು ಮಾಡುವ ಹಣದಿಂದ ಬಡಜನರಿಗೆ ಸಹಾಯ ಮಾಡಲು ಸಾಧ್ಯವಿದೆ. ಜೊತೆಗೆ ಜೀವನವೆಂದರೆ ಏನು ಎಂದು ಅವರಿಗೆ ತಿಳಿ ಹೇಳಿದಾಗ ಅವರಿಗೆ ನೆಮ್ಮದಿಯಿಂದ ತಮ್ಮ ಬದುಕು ನಡೆಸಲು ಸಾಧ್ಯವಾಗುತ್ತದೆ.

ಊಟದ ಜೊತೆಗೆ ನೀರೂ ಕೊಡಬೇಕಾಗುತ್ತದೆ. ಹಸಿದಿರುವ ಮಗುವಿಗೆ ವೇದಾಂತ ಹೇಳಬೇಕೆಂದು ಅಮ್ಮ ಹೇಳುತ್ತಿಲ್ಲ. ಊಟದ ಜೊತೆಗೆ ವೇದಾಂತ ಹೇಳಿಕೊಟ್ಟಾಗ, ಬಹುಷಃ ಅವರಿಗೆ ಇದನ್ನು ಗ್ರಹಿಸಲಿಕ್ಕೆ ಸಾಧ್ಯವಾಗಬಹುದು. ಆದಕಾರಣ ಇಂದು ಸಮಾಜದ ಮೇಲೋ, ನಮ್ಮ ರಾಜ್ಯದ ಮೇಲೋ, ಇಲ್ಲದಿದ್ದರೆ ಈ ಸಹೋದರರ ಮೇಲೋ ನಿಮಗೆ ಪ್ರೀತಿ ಇದ್ದಲ್ಲಿ, ದಯವಿಟ್ಟು ಎದ್ದೇಳಿ ! ನೀವು ಯಾರೆಂದು ಕಲಿಯಿರಿ !

ಪರಮಕರುಣಾಕರನಾದ ಪರಮಾತ್ಮನ ಅನುಗ್ರಹದಿಂದ ನಾವು ನಡೆದುಕೊಂಡು ಬರುತ್ತಿದ್ದೇವೆ. ಕೆಲವರು ಹೇಳುತ್ತಾರೆ ದೇವರಿಲ್ಲ ಎಂದು. ತನ್ನ ನಾಲಿಗೆಯಿಂದಲೇ “ನನಗೆ ನಾಲಿಗೆಯಿಲ್ಲ” ಎಂದು ಹೇಳಿದಂತಾಯಿತು ಇದು. ನಾಲಗೆಯಿಲ್ಲದ ಒಬ್ಬನಿಗೆ “ನನಗೆ ನಾಲಿಗೆಯಿಲ್ಲ” ಎಂದು ಹೇಳಲು ಸಾಧ್ಯವಿದೆಯೇ. ಇದೇ ರೀತಿ ದೇವರಿಲ್ಲ ಎಂದು ಹೇಳುವಾಗಲೇ ನಾವು ದೇವರಿದ್ದಾನೆ ಎಂದು ಒಪ್ಪಿದ ಹಾಗಾಯಿತು. ಯಾಕೆಂದರೆ ಒಂದು ವಸ್ತು ಇಲ್ಲಾಂತ ಹೇಳಬೇಕಾದರೆ, ಮೊದಲೇ ಅದರ ಬಗ್ಗೆ ನಮಗೆ ಸ್ವಲ್ಪ ತಿಳುವಳಿಕೆ ಇರಬೇಕಾಗುತ್ತದೆ.

ಪ್ರೀತಿಯ ಮಕ್ಕಳೇ, ನಾವು ಬಂದಿರುವುದು ದೇವರಿಂದ. ಆ ಮಸುಕಾದ ಪರಿವೆ ನಮ್ಮೊಳಗಿದೆ; ಅದು ಪೂರ್ಣವಾಗಬೇಕು.

ನೆಚ್ಚಿನ ಮಕ್ಕಳೇ, ದೇವರು ಮೇಲಿದ್ದಾನೆ. ಬೀಜದಲ್ಲಿ ಹೂವು, ಕಾಯಿ, ಕಾಂಡ, ಎಲೆ ಎಲ್ಲಾ ಅಡಕವಾಗಿದೆ. ಆದಕಾರಣ, “ಎಲ್ಲಾ ನನ್ನಲ್ಲಿದೆ, ನಾನ್ಯಾರಿಗೂ ತಲೆ ಬಗ್ಗಿಸುವುದಿಲ್ಲ” ಎಂದು ಹೇಳಿದರೆ ಅದರ ನಿಜವಾದ ರೂಪ ಹೊರಗೆ ಬರುವುದೇ ? ಮಣ್ಣಿನಡಿಗೆ ಹೋದಾಗ ಮಾತ್ರವೇ ಅದರಲ್ಲಿ ಹುದುಗಿಕೊಂಡಿರುವ ವೃಕ್ಷ ಹೊರಗೆ ಬರತೊಡಗುವುದು. ಇದೇ ರೀತಿ “ಹೇ ಭಗವಂತ, ನಾನು ನಿನ್ನ ದಾಸ” ಎಂಬ ಭಾವನೆ ಬಂದಾಗ ಮಾತ್ರ ಭಗವಂತನ ರೂಪ – ಅಲ್ಲದಿದ್ದರೆ ನಮ್ಮ ಸ್ವರೂಪ – ವ್ಯಕ್ತವಾಗುವುದು.

ಮೆಚ್ಚಿನ ಮಕ್ಕಳೇ, ದೇವರು ಕೊಟ್ಟ ಸಮಯ ಹಾಳು ಮಾಡದಿರಿ. ಜಗನ್ಮಾತೆಯನ್ನು ಆಶ್ರಯಿಸಿರಿ. ಮಕ್ಕಳೇ, “ಅಮ್ಮ” ಮಾತ್ರವೇ ನಮಗೆ ನಿಷ್ಕಾಮ ಪ್ರೇಮ ನೀಡುವವಳು. ಈ ಲೋಕದಲ್ಲಿ ಬಹಳಷ್ಟು ಮಂದಿ ನಮ್ಮನ್ನು ನಿಷ್ಕಾಮವಾಗಿ ಪ್ರೀತಿಸುತ್ತಾರೆ ಎನ್ನುವುದು ಬರೇ ತೋರಿಕೆ ಮಾತ್ರ. ಅದೆಲ್ಲ ಒಟ್ಟು ಸ್ವಾರ್ಥ-ಪ್ರೀತಿ. ಇದನ್ನು ವಿವರಿಸಲಿಕ್ಕೆ ಅಮ್ಮ ಒಂದು ಕಥೆ ಹೇಳುತ್ತಾರೆ.

ಒಂದು ಸಲ ಒಬ್ಬ ತಂದೆಯೂ ಮಕ್ಕಳೂ ಒಂದು ಪ್ರವಾಸಕ್ಕೆ ಹೊರಡುತ್ತಾರೆ. ಹಗಲಿನಲ್ಲಿ ಅವರು ಪಟ್ಟಣದ ಹಲವು ದೃಶ್ಯಗಳನ್ನು ನೋಡುತ್ತ ತಿರುಗಾಡಿದರು. ಸಂಜೆಯಾದಾಗ ವಿಶ್ರಾಂತಿಗೆಂದು ಒಂದು ಹೊಟೇಲ್ ಬಂದು ತಲಪುತ್ತಾರೆ. ಹೊಟೇಲ್ ಯಜಮಾನ ಅವರನ್ನು ಕಂಡೊಡನೆ ಬಹಳ ಗೌರವಾದರಪೂರ್ವಕವಾಗಿ ಅವರನ್ನು ಎದುರ್ಗೊಳ್ಳುತ್ತಾನೆ. ಎರಡು ಮೂರು ಸೇವಕರೂ ಅಲ್ಲಿ ಬಂದು ಮುಟ್ಟಿದರು. ಅವರು ಅತಿಥಿಗಳನ್ನು ರೂಮಿಗೆ ಕರೆದುಕೊಂಡು ಹೋಗುತ್ತಾರೆ.

ಆಕರ್ಷಕವಾಗಿ ಸಿಂಗರಿಸಿದ ರೂಮು. ನಿಮಿಷಗಳಲ್ಲೇ ಆ ಸೇವಕರು ಆಹಾರ ಪದಾರ್ಥಗಳನ್ನು ತಂದಿಡುತ್ತಾರೆ. ಅಪ್ಪ ಮಕ್ಕಳ ವಸ್ತ್ರಗಳನ್ನು ಸಂತೋಷದಿಂದ ಒಗೆಯಲಿಕ್ಕೆಂದು ತೆಗೆದುಕೊಂಡು ಒಯ್ಯುತ್ತಾರೆ. ಅದನ್ನು ಚೆನ್ನಾಗಿ ಒಗೆದು, ಇಸ್ತ್ರಿ ಹಾಕಿ ಹಿಂದೆ ಕೊಟ್ಟರು. ಸ್ನಾನಕ್ಕೆ ಬಿಸಿ ನೀರು ಕೊಡುತ್ತಾರೆ. ಹೀಗೆ, ಅವರಿಗೆ ಏನೆಲ್ಲ ಬೇಕೋ, ಎಲ್ಲ ಮಾಡಿಕೊಟ್ಟರು. ರಾತ್ರಿ ಹೊಟೇಲ್‌ನ ಗಾಯಕಿಯೂ ಗಾಯಕನೂ ಇವರಿಗಾಗಿ ಹಾಡುತ್ತಾರೆ ಮತ್ತು ವೀಣೆ ಬಾರಿಸುತ್ತಾರೆ. ಬೆಳಿಗ್ಗೆ ತಂದೆಯೂ ಮಕ್ಕಳೂ ಹೊರಡಲು ತಯಾರಾಗುತ್ತಾರೆ. ಮಕ್ಕಳು ಹೇಳುತ್ತಾರೆ “ಅಪ್ಪ, ಎಷ್ಟು ಪ್ರೀತಿಯಿರುವ ಜನಗಳಿವರು.” ಉತ್ತರ ಹೇಳುವ ಮೊದಲೇ ಒಬ್ಬ ಪರಿಚಾರಕ ಒಳಗೆ ಬಂದು ಹೊಟೇಲ್ ಬಿಲ್ಲು ಕೊಟ್ಟ.

ತಂದೆ ಮಕ್ಕಳಿಗೆ ಹೇಳಿದ “ನಿನ್ನೆ ಅವರು ನಮಗೆ ತೋರಿಸಿದ ಪ್ರೀತಿಗೂ ಸೇವೆಗೂ ಒಟ್ಟಿಗೆ ಸೇರಿಸಿ ಕೊಟ್ಟ ಬಿಲ್ಲು ಇದು. ಅವರು ಮಾಡಿದ ಒಂದೊಂದು ಕೆಲಸಕ್ಕೂ ಬೇರೆ ಬೇರೆ ಮೊಬಲಗು ವಸೂಲು ಮಾಡಿದ್ದಾರೆ.” ಅವರ ಪ್ರೀತಿಯು ಸ್ವಾರ್ಥ ಕಾಮನೆಗಳ ತಳಹದಿಯ ಮೇಲೆ ನಿಂತಿತ್ತು.

ನಲ್ಮೆಯ ಮಕ್ಕಳೇ, ಈ ರೀತಿಯದಾಗಿದೆ ಪ್ರೀತಿ. ಜನಗಳು ಪರಸ್ಪರ ಪ್ರೀತಿ ತೋರಿಸುವುದು ಕೂಡ ತಮ್ಮ ಸ್ವಾರ್ಥಕ್ಕಾಗಿ. ನಿಜವಾದ ಪ್ರೀತಿ ಪರಮಾತ್ಮನಿಂದ ಮಾತ್ರ ನಮಗೆ ಸಿಗುವುದು. ಭಗವಂತನು ಪ್ರೇಮ ಸ್ವರೂಪನು. ಇದು ತಿಳಿದಿರಲಿ ಮಕ್ಕಳೇ. ದೇವರನ್ನು ಆರಿತುಕೊಳ್ಳಿ. ನಮ್ಮೊಳಗೆ ಹುದುಗಿರುವ ನಮ್ಮದೇ ಸಂಪತ್ತಾದ ಈ ಸತ್ವದ ಪೂರ್ತಿ ಪ್ರಯೋಜನ ಪಡೆಯೋಣ. ಇದು ಮರೆಯದಿರಿ ಮಕ್ಕಳೇ.

ಮಕ್ಕಳೇ, ಕಲಿಯುತ್ತಿರುವಕಾಲದಲ್ಲಿ ಹುಡುಗರಿಗೆ ಲಕ್ಷ್ಯಬೋಧವಿದ್ದರೂ ಅವರ ಮನಸ್ಸು ಹೆಚ್ಚಾಗಿ ಆಟಗಳಲ್ಲೂ, ಇನ್ನಿತರ ಆಮೋದ ಪ್ರಮೋದಗಳಲ್ಲೂ ಇರುತ್ತದೆ. ಆ ಕಾಲಘಟ್ಟದಲ್ಲಿ ತಂದೆಯೂ ತಾಯಿಯೂ ಬೈತಾರೆ. ಓದಿಕೊಂಡು ಹೋಗದಿದ್ದರೆ ಸರ್ ಹೊಡೆಯುತ್ತಾರಂತ ಹೆದರಿಕೆಯಿಂದ ಮಾತ್ರವೇ ಅವರು ಕಲಿಯುವುದು. ಆದರೆ ಹತ್ತನೇ ಕ್ಲಾಸ್ ಪಾಸಾದ ಮೇಲೆ, “ನನಗೆ ಎಂ.ಬಿ.ಬಿ.ಎಸ್.ಗೆ ಹೋಗಬೇಕು, ರ‍್ಯಾಂಕ್ ತೆಗೆದು ಪಾಸಾಗಬೇಕು” ಎಂಬ ಪರಿಜ್ಞಾನ ಬರುವುದು. ಆಗ ಅವರು ಚೆನ್ನಾಗಿ ಓದುತ್ತಾರೆ. ಯಾರು ಬಯ್ಯದೆಯೂ ಹೊಡೆಯದೆಯೂ ವಿದ್ಯಾಭ್ಯಾಸಕ್ಕೆ ಗಮನಕೊಡುತ್ತಾರೆ. ಸಿನೆಮ ನೋಡಲು ಹೋಗುವುದಿಲ್ಲ; ಹೆಚ್ಚು ನಿದ್ದೆ ಮಾಡುವುದಿಲ್ಲ. ಆದರೆ ಅಲ್ಲಿಯ ತನಕ ತಂದೆ ತಾಯಂದಿರ, ಅಧ್ಯಾಪಕರ ಭಯದಿಂದ ಅವರು ಓದಿರುವುದು. ಈ ಭಯ ದುರ್ಬಲತೆಯಲ್ಲ. ನಮ್ಮ ಶ್ರದ್ಧೆಯನ್ನು ಎಚ್ಚರಿಸಲು ಒಬ್ಬ ಗುರು ಅವಶ್ಯ. ಯಾರದ್ದಾದರೂ ಕೈಕೆಳಗೆ ಅವರನ್ನು ಅನುಸರಿಸಿ ಬದುಕ ಬೇಕಾಗುತ್ತದೆ. ನಮ್ಮೊಳಗಿನ ಗುರು ಎಚ್ಚರಗೊಂಡಮೇಲೆ ಸ್ವಂತ ವಿವೇಚನೆಯಿಂದ ಕಾರ್ಯವೆಸಗುವ ಸಕ್ಷಮತೆ ನಮ್ಮಲ್ಲಿ ಉಂಟಾಗುತ್ತದೆ. ಅಲ್ಲಿಯವರೆಗೆ ಒಂದು ಗುರುವಿನ ಸಹಾಯ ಅತ್ಯಗತ್ಯ.

ಮಕ್ಕಳೇ, ನನ್ನಲ್ಲಿ ಎಲ್ಲಾ ಇದೆಯೆಂದು ಹೇಳಿಕೊಂಡು ಬೀಜ ಉಗ್ರಾಣದಲ್ಲೇ ಉಳಿದರೆ ಬರೇ ಇಲಿಗೆ ಅಹಾರಮಾತ್ರವಾಗಿ ಪರಿಣಮಿಸುವುದು. ಮಣ್ಣಿನಡಿಗೆ ಹೋದರೆಯೇ ಅದರ ಯಥಾರ್ಥ ಸ್ವರೂಪ ನಿಜವಾಗಿ ಹೊರಗೆ ಬರುವುದು. ಅದೇರೀತಿ ನಮ್ಮ ಅಹಂಕಾರ ನಶಿಸಬೇಕಾದರೆ ದಾಸತ್ವ ಎನ್ನುವುದು ಬೇಕು. ಓರ್ವ ಗುರುವಿನ ಕೈಕೆಳಗೆ ಸಂಪೂರ್ಣ ಸಮರ್ಪಣೆಯೊಂದಿಗೆ ಸಾಧನೆ ನಡೆಸಬೇಕು.

ಕ್ಷಮೆ (ಸಹಿಷ್ಣುತೆ; ತಾಳ್ಮೆ), ಸಮಾಧಾನ, ದಾಸತ್ವ ಇದ್ದರೆ ಮಾತ್ರ ನಮಗೆ ದೇವರನ್ನು ತಿಳಿದುಕೊಳ್ಳಲು ಸಾಧ್ಯ. ಹಾವಸೆಹಿಡಿದ ಬಂಡೆಕಲ್ಲಮೇಲೆ ನಡೆಯಬೇಕಾದರೆ ಜಾರಿ ಬೀಳದ ಹಾಗೆ ನಾವು ಎಷ್ಟು ಜಾಗ್ರತೆ ವಹಿಸಬೇಕೋ ಅಷ್ಟೇ ಜಾಗ್ರತೆ ನಮಗೆ ಜಗತ್ತಿನ ಪ್ರತಿಯೊಂದು ವಸ್ತುವಿನ ಮೇಲೂ ಇರಬೇಕು. ಇಲ್ಲದಿದ್ದರೆ ಯಾವ ನಿಮಿಷವೂ ನಾವು ಜಾರಿ ಬೀಳಬಹುದು. ದೇವರನ್ನು ಅರ್ಥಮಾಡಿಕೊಂಡರೆ ಮಾತ್ರವೇ ಇತರರಿಗೆ ಶಾಂತಿ ಸಮಾಧಾನ ನೀಡ ಬಹುದು

ಮಕ್ಕಳೇ, ದೇವರನ್ನರಿಯಲು ಗುರು ಅತ್ಯಾವಶ್ಯ. ಗುರುವಚನದಲ್ಲಿ ಧೃಡ ವಿಶ್ವಾಸವಿರಬೇಕು. ಮಕ್ಕಳು ಕೇಳಬಹುದು, ಅದು ಅಂಧವಿಶ್ವಾಸವಲ್ಲವೇ ಎಂದು. ಖಂಡಿತವಾಗಿಯೂ ಅಲ್ಲ. ಮಕ್ಕಳೇ, ಈ ಪ್ರಪಂಚವೇ ನೆಲೆನಿಂತಿರುವುದು ವಿಶ್ವಾಸದ ಮೇಲೆ. ಒಂದು ಯುವಕನಿಗೆ ತನ್ನ ಮಗಳನ್ನು ಕೊಟ್ಟು ಧಾರೆಯೆರೆದು ಕೊಡುವುದು ಅವನು ತನ್ನ ಮಗಳನ್ನು ಸಾಕಿ ಸಲಹುತ್ತಾನೆ ಎಂಬ ವಿಶ್ವಾಸದಿಂದಲ್ಲವೇ ? ಹೊಟೇಲಲ್ಲಿ ನಾವು ಆಹಾರ ಪದಾರ್ಥಗಳನ್ನು ಸೇವಿಸುವುದು ಅದರಲ್ಲಿ ವಿಷದ ಅಂಶವಿಲ್ಲವೆಂಬ ಭರವಸೆಯಿಂದಲ್ಲವೇ ? ಸಮುದ್ರ ಈ ಕಡೆ ಬರುವುದಿಲ್ಲ ಎಂಬ ವಿಶ್ವಾಸದಿಂದಲ್ಲವೆ ನಾವು ತೀರದಲ್ಲಿ ಮನೆ ಕಟ್ಟಿ ವಾಸಮಾಡುವುದು ?

ತನ್ನ ಆಧ್ಯಾತ್ಮಿಕ ಬೆಳವಣಿಗೆಗೆ ಇತರರಿಂದ ಶಿಕ್ಷಣ ಸ್ವೀಕರಿಸಲೋ, ಅಥವಾ ಇನ್ನೊಬ್ಬರಿಗೆ ವಿಧೇಯನಾಗಿರಲಿಕ್ಕೋ ಕೆಲವರು ಇಷ್ಟಪಡದಿರಬಹುದು. ಶಿಸ್ತಿನಿಂದೊಡಗೂಡಿದ ಜೀವನಕ್ರಮ, ತಿದ್ದುವಿಕೆ, ಯಾವುದೂ ಆ ಮಕ್ಕಳಿಗೆ ಇಷ್ಟವಿಲ್ಲ. ಅವರು ತಮ್ಮಿಷ್ಟ ಪ್ರಕಾರ ಜೀವಿಸುತ್ತಲೂ, “ನಾನು ಬ್ರಹ್ಮನ್” ಎಂದು ತಾವೇ ಹೇಳುತ್ತಲೂ ಇರುತ್ತಾರೆ. ಅದು ದುರ್ಬಲತೆ ಮಕ್ಕಳೇ. ಅನುಭವದ ಸ್ತರದಲ್ಲಿ ಅವರಿಂದ ಏನು ಸಂಪಾದಿಸಲೂ ಸಾಧ್ಯವಿಲ್ಲ.

ಎರಡು ತರದ ಕೋಳಿಗಳ ಬಗ್ಗೆ ಕೇಳಿಲ್ಲವೇ ? ನಾಟಿ ಕೋಳಿ ಮತ್ತು ಇಂಗ್ಲಿಷ್ ಕೋಳಿ. ತಾಯಿ ಕೋಳಿಯ ಕಾವಿನಿಂದ ಹೊರಬರುವ ಕೋಳಿ ಮರಿಗಳು ಪ್ರಕೃತಿಯನ್ನು ಜಯಿಸುವ ಸಾಮರ್ಥ್ಯದೊಂದಿಗೆ ಬೆಳೆಯುತ್ತಿರುತ್ತವೆ. ಅದಕ್ಕೆ ಪ್ರತ್ಯೇಕ ಗೂಡೂ ಬೇಡ; ಅಹಾರವೂ ಬೇಡ. ಬಿಸಿಲಾಗಲಿ, ಮಳೆಯಾಗಲಿ – ಅದಕ್ಕೇನೂ ಸಮಸ್ಯೆಯಲ್ಲ. ರಾತ್ರಿ ಯಾವುದೋ ಮರದ ಕೊಂಬೆ ಮೇಲೇರಿ ಮಲಗಿಕೊಳ್ಳುತ್ತವೆ. ಆದರೆ ಇಂಗ್ಲಿಷ್ ಕೋಳಿಯ ಕಥೆಯೋ ? ಕೃತಕ ಸನ್ನಿವೇಶಗಳಲ್ಲಿ ಅವುಗಳು ಬೆಳೆದು ಬಂದಿರುವುದು. ಅವುಗಳಿಗೆ ಪ್ರಕೃತಿಯನ್ನು ಜಯಿಸಲು ಸಾಧ್ಯವಾಗುವುದಿಲ್ಲ. ಚಳಿ ಹಿಡಿದರೆ ಸತ್ತು ಬಿಡುವುದು. ಬಿಸಿಲು, ಮಳೆ ಎಲ್ಲ ಅದಕ್ಕೆ ಸಮಸ್ಯೆಯೇ. ಇದೇ ನಿಜವಾದ ಗುರುವಿನಿಂದ ಶಿಕ್ಷಣ ಪಡೆಯದಿರುವವರ ಕಥೆ. ಅಡ್ಡಿ ಆತಂಕಗಳು ಎದುರಾದಾಗ ಬಸವಳಿದು ಬೆಂಡಾಗುತ್ತಾರೆ, ಎಚ್ಚರ ತಪ್ಪಿ ಬೀಳುತ್ತಾರೆ.

ಆದರೆ, ಗುರುಸನ್ನಿಧಿಯಲ್ಲಿ ಬೆಳೆದು ಜ್ಞಾನ ಸಂಪಾದಿಸಿದವರ ಕಥೆ ನೇರ ವಿರುದ್ಧ ಮಕ್ಕಳೇ. ನಾಟಿ ಕೋಳಿಗಳ ಹಾಗೆ ಅವರು. ಯಾವುದೇ ಪ್ರತಿಕೂಲ ಸನ್ನಿವೇಶವನ್ನೂ ಎದುರಿಸಲು ಅವರಿಗೆ ಸಾಧ್ಯ. ಲಕ್ಷ್ಯಬೋಧದಿಂದ, ನಿಷ್ಠೆಯಿಂದ ಎಂದೂ ಅವರು ವಿಚಲಿತರಾಗುವುದಿಲ್ಲ.

ಹಾರಲಾಗದ ಮರಿಗಳನ್ನು ತಾಯಿಕೋಳಿಯು ರೆಕ್ಕೆಯಡಿಯಲ್ಲಿರಿಸಿ ಬೆಳೆಸುವ ಹಾಗೆ ನಿಜವಾದ ಗುರು ತನ್ನ ಶಿಕ್ಷಣದಲ್ಲಿ ಬೆಳೆಯುವವರನ್ನು ಕಾಯುತ್ತಾನೆ. ಕ್ಷುಲ್ಲಕ ತಪ್ಪುಗಳನ್ನೂ ಬೆರಳು ಮಾಡಿ ತೋರಿಸಿ ತಿದ್ದುವನು. ಇನಿತು ಅಹಂಕಾರವೂ ಚಿಗುರಲು ಬಿಡನು. ಅದಕ್ಕೆ ಬೇಕಾಗಿ ಗುರುಗಳವರು ಕೆಲವೊಮ್ಮೆ ಕ್ರೂರವಾಗಿ ವರ್ತಿಸುತ್ತಿರುತ್ತಾರೆ.

ಒಬ್ಬ ಕಮ್ಮಾರನು ಕಾಯಿಸಿದ ಕಬ್ಬಿಣದ ತುಂಡನ್ನು ಅಡಿಗಲ್ಲಿನ ಮೇಲಿಟ್ಟು ಸುತ್ತಿಗೆಯಿಂದ ಎತ್ತಿ ಎತ್ತಿ ಹೊಡೆಯುವಾಗ ಅದನ್ನು ನೋಡುವವರು ಅಂದುಕೊಳ್ಳಬಹುದು “ಇವನಂಥ ಕ್ರೂರರು ಎಲ್ಲೂ ಇಲ್ಲ” ಎಂದು. ಆದರೆ ಆ ಕಬ್ಬಿಣದ ತುಂಡಿನಮೇಲೆ ಒಂದೊಂದು ಹೊಡೆತ ಬೀಳುವಾಗಲೂ ಅದರಿಂದ ಮೈ ತಾಳುವ ಹೊಸ ರೂಪದ ಕುರಿತಾಗಿರುತ್ತದೆ ಆ ಕಮ್ಮಾರನ ಯೋಚನೆ. ಹೀಗೇ ಇರುತ್ತಾನೆ ಯಥಾರ್ಥ ಗುರು ಕೂಡ. ಯಥಾರ್ಥ ಗುರುಗಳು ಸತ್ಯವನ್ನು ಅರಿತವರಾಗಿರುತ್ತಾರೆ. ಅವರುಗಳ ಮಾತನ್ನನುಸರಿಸಿ ನಡೆದರೆ ದೇವರನ್ನು ಮುಟ್ಟುವೆವು.

“ಗುರುವಿಲ್ಲದೆಯೂ ಭಗವದ್ಸಾಕ್ಷಾತ್ಕಾರ ಸಾಧ್ಯವಿಲ್ಲವೇ” ಎಂದು ಕೇಳಬಹುದು. ಸಾಧ್ಯವಿದೆ ಮಕ್ಕಳೇ. ಆದರೆ ಅದಕ್ಕೆ ಪೂರ್ವ ಜನ್ಮದ ಸಂಸ್ಕಾರ ಬೇಕು.

ಕಾಶ್ಮ್ಮೀರದಲ್ಲಿ ಧಾರಾಳ ಸೇಬು ಬೆಳೆಯುತ್ತಾರೆ. ನಾವು ಒಂದು ಸೇಬಿನ ಗಿಡ ನೆಟ್ಟರೂ ಮೊಳಕೆಯೊಡೆಯುತ್ತದೆ; ಬೆಳೆಯಲೂ ಬಹುದು. ಆದರೆ ಬಹಳ ಅಪರೂಪಕ್ಕೆ ಕಾಯಿ ಬಿಡುವುದು. ಕಾಯಿ ಬಿಟ್ಟರೂ ಕಾಯಿಗಳು ಬಹಳ ಕಮ್ಮಿಯೇ; ಬಹಳ ಜಾಗ್ರತೆ ಕೂಡ ವಹಿಸಬೇಕಾಗುತ್ತದೆ. ಸೇಬಿನ ಗಿಡದ ಬೆಳವಣಿಗೆಗೆ ಕಾಶ್ಮ್ಮೀರದ ಹವಾಮಾನ ಪ್ರಶಸ್ತವಿದ್ದಂತೆ, ಲಕ್ಷ್ಯಬೋಧವಿರುವ ಸಾಧಕನಿಗೆ ಗುರುವಿನ ಸನ್ನಿಧಿ. ನಿಜವಾದ ಸದ್ಗುರು ಇರುವವನಿಗೆ ಪ್ರತ್ಯೇಕವಾಗಿ ಬೇರೊಬ್ಬ ದೇವರಿಲ್ಲ; ಗುರುವೇ ದೇವರು, ದೇವರೇ ಗುರು. ಆದಕಾರಣ ಭಕ್ತಿಯಿಂದ ದೇವರಿಗೆ ಅಥವ ಗುರುವಿಗೆ ಅತ್ತು ಪ್ರಾರ್ಥಿಸಿರಿ. ಎರಡೂ ಕೈಗಳನ್ನು ಚಾಚಿ ಅವನು ನಮ್ಮನ್ನು ಸ್ವೀಕರಿಸುವನು. ಭಕ್ತಿಯಿಲ್ಲದ ಜ್ಞಾನ ಬಂಡೆಕಲ್ಲನ್ನು ತಿನ್ನುವ ಹಾಗೆ. ಅತ್ತು ಪ್ರಾರ್ಥಿಸುವುದಕ್ಕಿಂತಲೂ ಬೇರೆ ದೊಡ್ಡ ಶಾಸ್ತ್ರವಿಲ್ಲ. ಆ ಭಕ್ತಿಯ ಮಾಧುರ್ಯ – ಅದು ಬೇರೆಯೇ ಮಕ್ಕಳೇ.

ಪ್ರಶ್ನೆ: ಕೃಷ್ಣ ಭಕ್ತನು ದೇವಿಯ ಸಹಸ್ರನಾಮ ಜಪಿಸುವುದು ಒಳ್ಳೆಯದೇ ?

“ಯಾರು ಇಷ್ಟದೇವನೋ, ಆ ದೇವನ ಮಂತ್ರ ಜಪಿಸಬೇಕು. ಸಹಸ್ರನಾಮವೂ ಹಾಗೆಯೇ. ಕೋಗಿಲೆಯನ್ನು ನವಿಲೆಂದು ಕರೆದರೆ ಕೋಗಿಲೆ ಬರುವುದೇ ? ಆದರೆ ಒಂದು ಮಾತು. ಪ್ರತಿ ಹಕ್ಕಿಗೂ ನವಿಲೆಂದು, ಕೋಗಿಲೆಯೆಂದು ಅಥವಾ ಬೇರಿನ್ನೇನೋ ಹೆಸರಿಟ್ಟಿರುವುದು ಮನುಷ್ಯನು. ಆದಕಾರಣ ಪ್ರತಿಯೊಂದನ್ನು ನೋಡುವಾಗಲೂ ಅದರ ಹೆಸರು ಹೀಗೆಂದು ನಾವು ಯೋಚಿಸುತ್ತೇವೆ. ಇದೇ ಪ್ರಕಾರ ದೇವರಿಗೆ ರೂಪವನ್ನೂ ನಾಮವನ್ನೂ ನೀಡಿರುವವರು ನಾವು. ಸತ್ಯಕ್ಕೆ ರೂಪವೂ ನಾಮವೂ ಇಲ್ಲ.

ನಮ್ಮ ಹಾಗೆ ಶಬ್ದ ಕೇಳಿ ತಿರುಗಿ ನೋಡುವ ವ್ಯಕ್ತಿಯಲ್ಲ ಈಶ್ವರ. ದೇವರು. ಒಂದು ಮಾತು ನಾವು ಮನಸ್ಸಲ್ಲಿ ಊಹಿಸಿಕೊಳ್ಳುವ ಮೊದಲೇ ಅವನಿಗೆ ಗೊತ್ತಾಗಿ ಬಿಡುತ್ತದೆ. ಆದಕಾರಣ ನಾವು ಯಾವ ಹೆಸರಲ್ಲಿ ಕರೆದರೂ ಅವನಿಗೆ ಗೊತ್ತಾಗುವುದು ತನ್ನನ್ನೇ ಕರೆಯುವುದೆಂದು. ಕೆಲವು ಮನೆಗಳಲ್ಲಿ ತಾಯಿಯನ್ನು ಮಕ್ಕಳು ’ಅಕ್ಕಾ” ಎಂದು ಕರೆಯುವುದನ್ನು ಕೇಳಿಲ್ಲವೇ ? ನನ್ನನ್ನು ಹಾಗೆ ಕರೆಯಬಾರದು; ’ಅಮ್ಮ’ನೆಂದು ಕರೆಯಬೇಕೆಂದು ಹೇಳಿ ತಾಯಿ ಕೋಪ ಮಾಡಿಕೊಳ್ಳುವುದಿಲ್ಲವಲ್ಲ. ತಾಯಿಗೆ ಕರೆ ಕೇಳುತ್ತಿರುತ್ತದೆ. ಇದರಂತೆ ಯಾವ ಹೆಸರು ಕರೆದರೂ ದೇವರು ಸ್ವೀಕರಿಸುವನು. ಅವನು ಸರ್ವಜ್ಞ.

ಒಲವಿನ ಮಕ್ಕಳೇ, ಒಂದೊಂದು ಹೆಜ್ಜೆ ಇಡುವಾಗ ನಾಮ ಜಪಿಸಲಿಕ್ಕೂ, ಸದಾ ಅವನ ರೂಪ ಸ್ಮರಿಸಲಿಕ್ಕೂ ಮರೆಯದಿರಿ. ಅವನು ರಕ್ಷಿಸುತ್ತಾನೆ.”

ಪ್ರಶ್ನೆ: ಗುಣಾತೀತನಾದ ದೇವರು ಗುಣಗಳಿಗೆ ಹೇಗೆ ಬರಲು ಸಾಧ್ಯ ? ಅವತಾರ ಪುರುಷರು ಬೇರೆಯವರನ್ನು ಪ್ರೀತಿಸುವುದೂ, ಅವರಲ್ಲಿ ಕರುಣೆ ತೋರಿಸುವುದೂ ಇತ್ಯಾದಿ ಮಾಡುವಾಗ, ಅವರು ಗುಣದ ಸ್ತರದಲ್ಲಲ್ಲವೇ ಇರುವುದು ?
ಭಗವಂತನು ಗುಣಾತೀತನೇ. ಅವನು ಚಲಿಸುವುದಿಲ್ಲ. ಅವನು ಆ ಸ್ವರೂಪವಾಗಿಯೇ ನೆಲೆನಿಂತಿರುತ್ತಾನೆ. ಸೂರ್ಯನ ಸ್ವಭಾವ ಬೆಳಕು. ಅವನು ಯಾರಿಗೂ ಪ್ರತ್ಯೇಕವಾಗಿ ಬೆಳಕು ನೀಡುವುದಿಲ್ಲ. ಮರೆ ಸರಿಸಿದಾಗ ನಿಮಗೂ ಬೆಳಕು ಸಿಗುವುದು. ದೇವರೆಂದರೆ ಒಂದು ವೃಕ್ಷದ ಹಾಗೆ. ಅದರ ಸ್ವಭಾವ ನೆರಳೂ ತಂಪೂ. ಅಲ್ಲಿ ಮುಟ್ಟಿದರೆ ನಿಮಗೂ ಅದು ದೊರಕುವುದು. ಇದೇ ತರಹ ಅವತಾರ ಪುರುಷರು ನಿಮಗೆ ಬೇಕಾಗಿ ಮಾತ್ರ ಕೃಪೆ ಸುರಿಸುವುದಲ್ಲ. ಹಾಗೆ ಆಗಿರುತ್ತಿದ್ದರೆ ದೇವರು ಗುಣಗಳ ಸ್ಥರಕ್ಕೆ ಬರುತ್ತಾನೆಂದು ಹೇಳಬಹುದಾಗಿತ್ತು. ಎಲ್ಲ ಗುಣಗಳೂ ಅವನದ್ದೇ, ಆವನು ಯಾವಾಗಲೂ ಆ ಗುಣಗಳನ್ನು ಸುರಿಸುತ್ತಿರುತ್ತಾನೆ. ಬೆಳಕು ಸಿಗಲು ನಾವು ಪರದೆಯನ್ನು ಸರಿಸುವಂತೆ, ನೆರಳೂ ತಂಪೂ ಸಿಗಲು ಮರದ ಬುಡ ತಲಪುವಂತೆ, ನಾವು ಭಗವಂತನ ಬಳಿ ಸಾರಿದರೆ ಅವನ ಗುಣಗಳು ನಮಗೆ ಹಬ್ಬುತ್ತದೆ.

ಪ್ರೇಮವು ಭಗವಂತನ ಸ್ವಭಾವ. ಗುಣಾತೀತನಾದ ಭಗವಂತನ ಸಾಮೀಪ್ಯದಲ್ಲಿ ನಿಮಗಿದೆಲ್ಲ ಲಭಿಸುವುದು. ಆದರೆ ಭಗವಂತನು ನಿಮಗೆ ಬೇಕಾಗಿ ಗುಣಗಳಿಗೆ ಇಳಿದು ಬರುತ್ತಾನೆಂದು ಹೇಳಲು ಬರುವುದಿಲ್ಲ. ಗುಣಗಳ ಸ್ತರಕ್ಕೆ ಹೋಗುತ್ತಾನೆಂದೂ ಹೇಳಲು ಸಾಧ್ಯವಿಲ್ಲ. ಭಗವಂತನೆಂದಿಗೂ ತನ್ನ ಲೋಕದಲ್ಲೇ ನೆಲೆಸಿರುತ್ತಾನೆ.

ಮಿಠಾಯಿ ನೋಡುವಾಗ ಮಕ್ಕಳಿಗೆ ಬಾಯಲ್ಲಿ ನೀರೂರುತ್ತದೆ. ಅದು ಅವರು ಮಿಠಾಯಿ ಮುಂಚೆಯೇ ರುಚಿ ನೋಡಿರುವ ಕಾರಣ. ರುಚಿ ನೋಡದ ಒಂದು ವಸ್ತು ಕಂಡಾಗ ನಿಮ್ಮ ಬಾಯಿಯಿಂದ ನೀರು ಬರುವುದಿಲ್ಲ. ಮಾಗಿದ ಮಾವಿನ ಹಣ್ಣನ್ನು ನೋಡಿದಾಗ, ಅದರ ಪರಿಮಳ ಒಳಗೆಳೆದುಕೊಂಡಾಗ, ಗೊತ್ತಿಲ್ಲದೆಯೇ ನಿಮಗದರಲ್ಲಿ ಆಸಕ್ತಿಯುಂಟಾಗುತ್ತದೆ. ಮೊದಲು ಅದನ್ನು ತಿಂದಿರುವುದೇ ಈ ತರಹವಾಗಲು ಕಾರಣ. ಅದರ ಬಗ್ಗೆ ಯೋಚಿಸಿದಾಗಲೇ ನಿಮಗೆ ಬಾಯಿಯಿಂದ ನೀರೂರಿದ್ದು. ಇದರಂತೆ, ಮಹಾತ್ಮರನ್ನು ನೋಡುವಾಗ ಆಂತರ್ಯದ ಸಂಸ್ಕಾರ ನಿಮಗರಿಯದೆ ಎಚ್ಚೆತ್ತುಕೊಳ್ಳುತ್ತದೆ. ನೀವು ಆ ಸಂಸ್ಕಾರದ ಮಾಲಕರು. ನೀವು ಅದರ ರುಚಿ ತಿಳಿದಿದ್ದಿರಿ. ಆದರೆ ಅದು ಎಚ್ಚರವಾದದ್ದು ಮಹಾತ್ಮರ ಸಾಮೀಪ್ಯದಿಂದ ಮಾತ್ರ. ಅದು ಬಿಟ್ಟು, ಅವರು ಗುಣಕ್ಕೆ ಬರುವುದಿಲ್ಲ.”

ಪ್ರಶ್ನೆ: ಸಾಧಕನು ಸಿಟ್ಟಾಗಬಾರದೆಂದು ಹೇಳುವುದು ಏತಕ್ಕಾಗಿ?
“ನಲ್ಮೆಯ ಮಕ್ಕಳೇ, ಒಬ್ಬ ಆಧ್ಯಾತ್ಮಿಕ ಜೀವಿಯು ಎಂದೂ ಕೋಪ ಮಾಡಬಾರದು. ಕೋಪವು ನಾವು ಸಾಧನೆಯ ಮೂಲಕ ಗಳಿಸಿದ ಶಕ್ತಿಯನ್ನು ನಷ್ಟಪಡಿಸುವುದು. ಗಾಡಿ ಓಡುತ್ತಿರಬೇಕಾದರೆ ಪೆಟ್ರೋಲ್ ಅಷ್ಟಾಗಿ ಖರ್ಚಾಗುವುದಿಲ್ಲ; ಆದರೆ ಬ್ರೇಕ್ ಅದುಮಿದಾಗ ಹೆಚ್ಚು ಖರ್ಚಾಗುತ್ತದೆ. ಇದೇ ರೀತಿ ಮಕ್ಕಳೇ, ಕೋಪ ಬಂದಾಗ. ಕೋಪ ಬಂದಾಗ ಬರೇ ಬಾಯಿಯಿಂದ ಮಾತ್ರವಲ್ಲ, ಪ್ರತಿಯೊಂದು ರೋಮ ಕೂಪದಿಂದಲೂ ಶಕ್ತಿಯ ವ್ಯಯವಾಗುತ್ತದೆ. ಒಂದು ಸಿಗರೇಟು ಲೈಟರನ್ನೂ ಹತ್ತಿಪ್ಪತ್ತು ಬಾರಿ ಅದುಮಿದರೆ ಅದರ ಪೆಟ್ರೋಲ್ ನಷ್ಟವಾಗುತ್ತದೆ. ಆದರೆ ಇದು ನಮಗೆ ಕಾಣಲು ಸಾಧ್ಯವಾಗುವುದಿಲ್ಲ; ಆದರೆ ಗೊತ್ತಾಗುತ್ತದೆ. ಇದೇ ಪ್ರಕಾರವಾಗಿ ಮಕ್ಕಳೇ, ಸದ್ಚಿಂತನೆಗಳಿಂದ ಗಳಿಸಿದ ಶಕ್ತಿಯು ಹಲವಾರು ಕಾರಣಗಳಿಂದಾಗಿ ನಷ್ಟವಾಗುತ್ತದೆ. ಇದನ್ನು ನಾವು ತಿಳಿದುಕೊಂಡಿರಬೇಕು.

ಮಕ್ಕಳೇ, ತುಂಬ ಹೆಚ್ಚಿನ ಎಚ್ಚರದಿಂದ ಮಾತ್ರ ಆಧ್ಯಾತ್ಮಿಕ ಜೀವಿಗೆ ಮುಂದುವರಿಯಲು ಸಾಧ್ಯವಾಗುವುದು. ಒಬ್ಬ ಸೂಜಿ ತೆಗೆದರೆ, ತೆಗೆಯುವಾಗಲೂ, ನೂಲು ಪೋಣಿಸುವಾಗಲೂ, ಹೊಲಿಯುವಾಗಲೂ, ಮರಳಿಡುವಾಗಲೂ ಎಷ್ಟೆಲ್ಲ ಎಚ್ಚರದಿಂದ ಮಾಡುತ್ತಾನೋ, ಅಷ್ಟು ಎಚ್ಚರ ನಮ್ಮ ಪ್ರತಿಯೊಂದು ಕೆಲಸದಲ್ಲೂ ಇರಬೇಕು. ಮಕ್ಕಳೇ, ನಿರಂತರವಾದ ಎಚ್ಚರ ಮಕ್ಕಳನ್ನು ಜಯಶಾಲಿಗಳನ್ನಾಗಿ ಮಾಡುವುದು. ಏನು ಕಂಡರೂ, ಏನು ಕೇಳಿದರೂ, ಏಕಾಂತದಲ್ಲಿ ವಿಚಾರ ಮಾಡಿ. ಅದರ ನಂತರವೇ ತೀರ್ಮಾನ ಮಾಡಬೇಕು. ಎಂದಿಗೂ, ಪರಿಸ್ಥಿತಿಯ ದಾಸರಾಗಬೇಡಿ. ಅವುಗಳಿಂದ ಪಾರಾಗಲೆತ್ನಿಸಿರಿ.

ಪ್ರಶ್ನೆ: ಬಹಳ ದಿನಗಳಿಂದ ಜಪವನ್ನೂ ಧ್ಯಾನವನ್ನೂ ತಪ್ಪದೆ ಮಾಡುತ್ತಿದ್ದೇನೆ. ಆದರೆ ಸರಿಯಾದ ಏಕಾಗ್ರತೆ ಇಷ್ಟು ದಿನಗಳಾದರೂ ನಾನು ಸಂಪಾದಿಸಿಲ್ಲ !
“ಮಕ್ಕಳೇ, ಇಷ್ಟು ದಿನವೂ ಮನಸ್ಸು ನಿತ್ಯ, ಶರೀರ ನಿತ್ಯ ಎಂದು ಕೊಂಡೆವು; ಆಸೆಗಳಿಗೆ ತಕ್ಕಂತೆ ಆಹಾರ ಕೊಟ್ಟು ಅವುಗಳನ್ನು ಪೋಷಿಸಿ ಬೆಳೆಸಿದೆವು. ಈಗ ಆತ್ಮವೇ ನಿತ್ಯವೆನ್ನುವಾಗ ಅವುಗಳು ಥಟ್ಟನೆ ತಲೆ ಬಾಗಿಸುವುದೇ ? ಇಲ್ಲ. ನಿರಂತರ ಅಭ್ಯಾಸದಿಂದಲೇ ಸಾಧ್ಯ. ದೋಣಿ ಮಾಡಲು ಉಪಯೋಗಿಸುವ ಹಲಗೆ ಬಗ್ಗುವಂತಾಗಲು ಅದಕ್ಕೆ ಸ್ವಲ್ಪ ಬಿಸಿ ಮುಟ್ಟಿಸುತ್ತಾರೆ. ಈ ಪ್ರಕಾರ ಜಪ ಧ್ಯಾನಗಳು ಉಂಟು ಮಾಡುವ ಬಿಸಿ. ಸರಳತೆ, ವಿನಯ ಮೊದಲಾದ ಭಾವಗಳು, ಇವೆಲ್ಲ ಇದ್ದರೆ ಮಾತ್ರವೇ ಮನದ ಅಹಂಕಾರವು ಪರಿವರ್ತನೆಯಾಗಿ ಆತ್ಮ ಸ್ವರೂಪವಾಗಲು ಸಾಧ್ಯ.

ಒಂದು ಪಾತ್ರೆಗೆ ಸೀಸ ಹಚ್ಚಬೇಕಾದರೆ, ಮೊದಲು ಸೀಸದಿಂದ ಕಷ್ಮಲವನ್ನು ಬೇರ್ಪಡಿಸಬೇಕು. ಇದೇ ಪ್ರಕಾರ ಮೊದಲು ನಮ್ಮೊಳಗಿನ ಕಲೆಗಳನ್ನು ನಿವಾರಿಸಿಕೊಳ್ಳಬೇಕು. ಅಲ್ಲದೆ ಹೋದರೆ ಎಷ್ಟು ಸಾಧನೆ ನಡೆಸಿದರೂ ಪ್ರಯೋಜನವಿಲ್ಲ. ಕಷ್ಮಲಗಳ ನಿವಾರಣೆಗೆ, ಈಶ್ವರನನ್ನು ಅತ್ತು ಪ್ರಾರ್ಥಿಸಬೇಕು.

ಏಕಾಗ್ರತೆ ಸಿಗುವುದಿಲ್ಲವೆಂದು ಹೇಳಿಕೊಂಡು ಮಗನು ಸಾಧನೆಗೆ ಭಂಗ ತರಬಾರದು. ಒಬ್ಬನಿಗೆ ತೆಂಗಿನ ಮರ ಹತ್ತಲು ಕಲಿಯಬೇಕು. ಒಂದೇ ದಿವಸದಲ್ಲಿ ಸಾಧ್ಯವೇ ? ಒಂದೊಂದು ಕಾಲು ಎತ್ತಿ ಮೇಲೆ ಇಟ್ಟು, ಕೈಗಳಿಂದ ಬಿಗಿಯಾಗಿ ಹಿಡಿದು, ಹತ್ತಲು ಪ್ರಯತ್ನಿಸಬೇಕು. ಕೆಲವೊಮ್ಮೆ ಚರ್ಮ ಸುಲಿದು ಹೋಗಲೂ ಬಹುದು. ಆದರೂ ಬಿಡದ ಪ್ರಯತ್ನದ ಫಲವಾಗಿ, ಅವನಿಗೆ ಯಾವ ತೆಂಗಿನ ಮರ ಹತ್ತಲೂ ಸಾಧ್ಯವಾಗುತ್ತದೆ. ಸರಿಯಾದ ಏಕಾಗ್ರತೆ ಆರಂಭದಲ್ಲಿ ಸಿಗುವುದಿಲ್ಲ. ಮಕ್ಕಳೇ, ಅದಕ್ಕೆ ನಿರಂತರ ಅಭ್ಯಾಸ ಬೇಕು.”