ಪ್ರಶ್ನೆ: ಅಮ್ಮನಿಗೇಕೆ ಈ ವೇಷ ?* ಶಂಕರಾಚಾರ್ಯರೂ, ಶ್ರೀ ರಾಮಕೃಷ್ಣರೂ, ಚಟ್ಟಾಂಬಿ ಸ್ವಾಮಿಗಳೂ, ನಾರಾಯಣ ಗುರುಗಳೂ,** ಮತ್ತಿತರರೂ ಇಷ್ಟೆಲ್ಲ ವಸ್ತ್ರಧರಿಸಿ ಅಲಂಕರಿಸಿ ಕೊಂಡಿರಲಿಲ್ಲವಲ್ಲ ?

“ಮಕ್ಕಳೇ, ಹಾಗಿದ್ದ ಮೇಲೆ ಶಂಕರಾಚಾರ್ಯರು ಮಾತ್ರ ಸಾಕಾಗಿತ್ತಲ್ಲ ಲೋಕವನ್ನು ಉದ್ಧರಿಸಲು ? ಒಬ್ಬರ ಹಾಗೆ ಇನ್ನೊಬ್ಬರಿಲ್ಲ. ಶ್ರೀ ರಾಮನ ಹಾಗಿರಲಿಲ್ಲ ಶ್ರೀ ಕೃಷ್ಣ. ಶ್ರೀ ರಾಮಕೃಷ್ಣರ ಹಾಗಿರಲಿಲ್ಲ ರಮಣ ಮಹರ್ಷಿ. ಪ್ರತಿಯೊಂದು ಅವತಾರಕ್ಕೂ ಒಂದು ಉದ್ದೇಶ ಲಕ್ಷ್ಯಗಳಿದೆ. ಅವರು ಅನುಸರಿಸುವ ಮಾರ್ಗವೂ ಬೇರೆ ಬೇರೆಯಾಗಿರುತ್ತದೆ. ಒಬ್ಬರ ಹಾಗೆ ಇನ್ನೊಬ್ಬರು ಮಾಡಬೇಕೆಂದೇನಿಲ್ಲ.

ಮಕ್ಕಳೇ, ವಕೀಲನ ವೇಷ ನೋಡುವಾಗ ನಮಗೆ ಕೇಸಿನ ಕುರಿತು, ಅದರ ಜಯದ ಕುರಿತು ನೆನಪು ಬರುತ್ತದೆ. ಇದೇ ರೀತಿ, ಅಮ್ಮನ ಈ ವೇಷ ನಿಮ್ಮಲ್ಲಿಯ ಪರಮಾರ್ಥ ತತ್ವವನ್ನು ನೆನಪು ಮಾಡಿಸಲಿಕ್ಕಾಗಿ.

ಒಂದು ಕಥೆ ಕೇಳಿಲ್ಲವೇ; ಒಬ್ಬ ದೊಡ್ಡ ಧುರೀಣನನ್ನು ಒಮ್ಮೆ ಒಂದು ಸಮ್ಮೇಳನಕ್ಕೆ ಆಮಂತ್ರಿಸಿದ್ದರು. ಬರೇ ಒಬ್ಬ ಸಾಮಾನ್ಯನ ಬಟ್ಟೆ ಧರಿಸಿ ಅವನು ಅಲ್ಲಿ ಹೋಗಿ ಮುಟ್ಟಿದ. ಆದರೆ ಅಲ್ಲಿದ್ದವರು ಅವನನ್ನು ಆದರಿಸಲಿಲ್ಲ, ಒಳಗೆ ಹೋಗಲೂ ಬಿಡಲಿಲ್ಲ. ಆ ವ್ಯಕ್ತಿ ಹೋಗಿ ಪ್ಯಾಂಟು, ಕೋಟು, ಷೂಸು ಇತ್ಯಾದಿಗಳಿಂದ ಅಲಂಕೃತನಾಗಿ ಹಿಂತಿರುಗಿದ. ಆಗ ಆ ವ್ಯಕ್ತಿಯನ್ನು ಅಲ್ಲಿರುವವರು ಸ್ವಾಗತಿಸಿ ಕೂತುಕೊಳ್ಳಿಸಿದರು. ಭೂರಿ ಭೋಜನವನ್ನೂ ನೀಡಿದರು. ಆ ವ್ಯಕ್ತಿ ತನ್ನ ಕೋಟು, ಷೂಸು ಇತ್ಯಾದಿ ಬಿಚ್ಚಿ ಆಹಾರ ವಸ್ತುಗಳ ಎದುರಿಗೆ ಇಟ್ಟನು. ಉಳಿದವರು ಆಶ್ಚರ್ಯದಿಂದ ಕಾರಣ ಕೇಳಿದರು. ಆ ವ್ಯಕ್ತಿ ಹೇಳಿದ, ’ ನಾನೇ ಮೊದಲು ಸಾಧಾರಣ ಬಟ್ಟೆಯಲ್ಲಿ ಬಂದಾಗ ನೀವು ಕಡೆಗಣಿಸಿದಿರಿ. ಅದೇ ನಾನು ಪ್ಯಾಂಟು, ಕೋಟು ಧರಿಸಿ ಬಂದಾಗ ನೀವು ಆದರಿಸಿದಿರಿ. ಹಾಗಾದರೆ ಗೌರವಿಸಿದ್ದೂ ಆದರಿಸಿದ್ದೂ ನನ್ನನ್ನಲ್ಲ, ಈ ವಸ್ತ್ರವನ್ನು. ಆದಕಾರಣ ವಸ್ತ್ರ ಉಣ್ಣಲಿ ಆಹಾರವನ್ನು.’

ಪ್ರಪಂಚವಿಂದು ವೇಷದ ಮೇಲೆ ನಿಂತಿದೆ. ಆ ವೇಷ ಇಲ್ಲದಾಗಿಸಲು ಈ ವೇಷ ಬೇಕಾಗುತ್ತದೆ. ನಿಮ್ಮ ವೇಷ ಇಲ್ಲದಾಗಿಸಲು ಅಮ್ಮನಿಗೆ ಈ ವೇಷ ಹಾಕಿಕೊಳ್ಳಬೇಕಾಗುತ್ತದೆ.

ಮಕ್ಕಳೇ, ಅಮ್ಮನನ್ನು ನಂಬಬೇಕೆಂದೋ, ಅಮ್ಮ ದೇವರೆಂತಲೋ, ಮೇಲೆ ದೇವರೊಬ್ಬನು ಇದ್ದಾನಂತಲೋ ಅಮ್ಮ ಹೇಳುತ್ತಿಲ್ಲ. ನಿಮ್ಮಲ್ಲಿ ವಾಸಿಸುವ ಈಶ್ವರ***ನನ್ನು ಅರಿತುಕೊಳ್ಳಿ. ಮಕ್ಕಳೇ, ಸೆಗಣಿಯಲ್ಲಿ ಶಕ್ತಿ (ಗೋಬರ್ ಗ್ಯಾಸ್) ಹುದುಗಿಕೊಂಡಿರುವಂತೆ, ಹಾಲಿನಲ್ಲಿ ಬೆಣ್ಣೆಯೆಂಬಂತೆ ನಿಮ್ಮಲ್ಲಿ ದೇವರ ಶಕ್ತಿ ಹುದುಗಿ ಕೊಂಡಿದೆ. ಅದನ್ನು ಅರಿತುಕೊಳ್ಳುವುದೇ ಬಾಳಿನ ಗುರಿ.”

    *ಇದು ದೇವಿ ಭಾವದಲ್ಲಿ ಅಮ್ಮ ಉಪಯೋಗಿಸುವ ವರ್ಣಮಯ ಬಟ್ಟೆಗಳ ಕುರಿತಾದ ಪ್ರಶ್ನೆ. ಅಮ್ಮ ಭಾರತದಲ್ಲಿ ದೇವಿ ಭಾವ ದರ್ಶನ ಕೊಡುವುದು ನಿಲ್ಲಿಸಿ ಎಷ್ಟೋ ವರ್ಷಗಳಾಗಿವೆ. ವಿದೇಶಗಳಲ್ಲಿ ಇನ್ನೂ ದೇವಿ ಭಾವ ದರ್ಶನ ನಡೆಯುತ್ತಿದೆ.
    ** ಚಟ್ಟಾಂಬಿ ಸ್ವಾಮಿಗಳೂ, ನಾರಾಯಣ ಗುರುಗಳೂ ಕ್ರಮವಾಗಿ 19ನೇ ಹಾಗೂ 20ನೇ ಶತಮಾನದ, ಕೇರಳದಲ್ಲೆಲ್ಲ ಮಹತ್ತರ ಸಾಮಾಜಿಕ ಬದಲಾವಣೆ ತಂದ ಪ್ರಖ್ಯಾತ ಆಧ್ಯಾತ್ಮಿಕ ನೇತಾರರು.
    *** ದೇವರನ್ನು ಸೂಚಿಸಲು ಮಲೆಯಾಳದಲ್ಲಿ “ಈಶ್ವರ” ಶಬ್ದವನ್ನು ಉಪಯೋಗಿಸುತ್ತಾರೆ.

ನಿಮ್ಮ ದಿನದಲ್ಲಿ ಇಪ್ಪತ್ತನಾಲ್ಕು ಗಂಟೆಗಳಿದೆ. ಒಂದು ಗಂಟೆ ದೈವೀ ವಿಚಾರಗಳಿಗೆ ಮೀಸಲಿಡಿರಿ. ಜೋರಾಗಿ ಅಳುತ್ತ ಅರ್ಧ ಗಂಟೆ ಪ್ರಾರ್ಥನೆ ಮಾಡಿದರೆ ಸಾಕು, ದೇವರ ಕೃಪೆ ನಿಮ್ಮನ್ನು ಬಂದು ತಲಪುವುದು. ಏಕಾಗ್ರತೆ ಬೇಕು; ಭಕ್ತಿ ಬೇಕು. ಈ ಕಲಿಯುಗದಲ್ಲಿ ನಾಮ ಜಪ ಸುಲಭ. ಮನಕರಗುವ ಭಜನೆಯು ಎಷ್ಟೋ ಒಳ್ಳೆಯ ಸಾಧನಾಮಾರ್ಗ.

______________

ತಳಪಾಯ ಚೆನ್ನಾಗಿ ಗಟ್ಟಿಯಾಗಿದ್ದರೆ ಮಾತ್ರವೇ ಕಟ್ಟಡ ಮೇಲೆಬ್ಬಿಸಲು ಸಾಧ್ಯ; ಬಹಳ ಕೆಳಗಿದ್ದರೆ ಮಾತ್ರವೇ ಏರಲು ಸಾಧ್ಯ.

______________

ಕಾಮವನ್ನು ಹೋಗಲಾಡಿಸುವುದು ಬಹಳ, ಬಹಳ ಕಷ್ಟ. ರಾಮನು ಮರೆಯಲ್ಲಿ ಬಾಣ ಬಿಟ್ಟು ವಾಲಿಯನ್ನು ಕೊಂದದ್ದು; ನೇರವಾಗಿ ಎದುರಿಸುವುದು ಕಷ್ಟವೆಂದು. ಕಾಮವು, ಅದರತ್ತ ಪ್ರಯೋಗಿಸುವ ಬಲದ ಇಮ್ಮಡಿ ಬಲದೊಂದಿಗೆ ತಿರುಗಿ ಬರುವುದು. ವಾಲಿಯು ಭೋಗ ಸುಖಗಳ ಪ್ರತೀಕ. ವಾಲಿಯನ್ನು ಕೊಂದ ನಂತರವೇ ರಾಮನು ಸೀತಾನ್ವೇಷಣೆ ನಡೆಸಲು ಸಾಧ್ಯವಾದದ್ದು.

______________

ಮಕ್ಕಳ ಸಂತೋಷವೇ ಅಮ್ಮನ ಆರೋಗ್ಯ.

______________

ಮಾಳಿಗೆ ಕಟ್ಟಿದರೂ ಮನಸ್ಸಮಾಧಾನವಿಲ್ಲದಿದ್ದರೆ ಏನು ಪ್ರಯೊಜನ ? ಏರ್‌ಕಂಡೀಷನ್ ರೂಮ್‌ನಲ್ಲಿದ್ದರೂ ಬಹಳ ಜನರಿಗೆ ಯಾವುದೇ ತರದ ನೆಮ್ಮದಿಯಿರುವುದಿಲ್ಲ. ನೆಮ್ಮದಿ ಬೇಕಾಗಿದ್ದರೆ ಏಕಾಗ್ರತೆಯಿಂದ ದೈವವನ್ನು ಕರೆಯಬೇಕು. ಬಯಕೆಗಳನ್ನು ಅಂಕೆಯಲ್ಲಿಡ ಬೇಕು. ಮನಸ್ಸನ್ನು ನಿಯಂತ್ರಿಸಬೇಕು.

______________

ದೈವ ಸಾಕ್ಷಾತ್ಕಾರ ಸಿಕ್ಕಿದ ವ್ಯಕ್ತಿಯು ಸದ್ಗುರು. ಆತನು ಶಿಷ್ಯನನ್ನು ಸತ್ಯದ ದಾರಿಯಲ್ಲಿ ನಡೆಸಿ ಗುರಿ ಮುಟ್ಟಿಸುತ್ತಾನೆ. ಪ್ರಾಮಾಣಿಕತೆಯಿರುವವರು ಗುರುವನ್ನು ಸಿಕ್ಕಲಿ. ಅಲೆದು ಪ್ರಯೋಜನವಿಲ್ಲ.

______________

ಧ್ಯಾನ ಮಾಡುವಾಗ ಇಷ್ಟರೂಪವನ್ನು ಹೃದಯದಲ್ಲಿ ಸ್ಮರಿಸಿಕೊಳ್ಳಿ. “ನನ್ನ ಅಮ್ಮಾ, ನೀನು ನನ್ನನ್ನು ಬಿಟ್ಟು ಹೋಗದಿರು” ಎಂದು ಮೊರೆಯಿಟ್ಟು ಇಷ್ಟದೇವತೆಯನ್ನು ತಬ್ಬಿಕೊಂಡು ಕೂಗಿರಿ. ರೂಪದ ಜೊತೆ ಮಾತನಾಡುವುದಾಗಿ ಭಾವಿಸಿರಿ. ಇಷ್ಟಮೂರ್ತಿಯ ಚಿಕ್ಕದೊಂದು ಚಿತ್ರವನ್ನು ಮುಂದಿಟ್ಟುಕೊಳ್ಳಿರಿ. ಆ ಚಿತ್ರವನ್ನು ಸ್ವಲ್ಪ ನೋಡಿ ಕಣ್ಣು ಮುಚ್ಚಿ, ರೂಪವನ್ನು ಆಂತರ್ಯದಲ್ಲಿ ಸ್ಥಿರೀಕರಿಸಲು ಪ್ರಯತ್ನಿಸಿರಿ. ಒಳಗಿನ ರೂಪ ಅಗಲಿ ಹೋದರೆ ಪುನಃ ಕಣ್ಣು ತೆರೆದು, ಹೊರಗಿರುವ ಚಿತ್ರವನ್ನು ದೃಷ್ಟಿಸಿರಿ. ಪುನಃ ಕಣ್ಣು ಮುಚ್ಚಿರಿ. ಶ್ರದ್ಧೆಯಿಂದ ಹೀಗೆ ನಿರಂತರ ಮುಂದುವರಿಸಿದರೆ ನಾವು ಧ್ಯಾನ ಮಾಡುವ ರೂಪ ನಮಗೆ ಪ್ರತ್ಯಕ್ಷವಾಗುವುದು. ರೂಪ ಸ್ಥಿರವಾಗುವವರೆಗೆ ಮಾತ್ರ ಮಂತ್ರ ಜಪಿಸಿದರೆ ಸಾಕು. ಮನಸ್ಸು ಏಕಾಗ್ರವೂ, ಅಂತರ್ಮುಖವೂ ಆಗಲಿಕ್ಕಾಗಿ ಮಾತ್ರ ಮಂತ್ರ.

______________

ನಿರಂತರವಾದ ಅಭ್ಯಾಸದಿಂದ ಮಾತ್ರ ಮನಸ್ಸನ್ನು ಅಂಕೆಯಲ್ಲಿಡಲು ಸಾಧ್ಯ. ಒಂದೇ “ಎಲ್ಲಾ ನನ್ನಲ್ಲಿದೆ, ಈ ಕಾಣುವ ಸರ್ವವೂ / ಎಲ್ಲವೂ ನಾನೇ.” ಎಂದು ಭಾವನೆ ಮಾಡಿರಿ. ಇಲ್ಲವೇ “ನಾನು ಏನೂ ಅಲ್ಲ, ಇದೆಲ್ಲಾ ಭಗವಂತನದು” ಎಂದು ಭಾವಿಸಿ ಎಲ್ಲವನ್ನು ದೇವರಿಗೆ ಸಮರ್ಪಿಸಿರಿ. ನಿನ್ನೆಯವರೆಗೆ “ನಾನು ಶರೀರ”ವೆಂದು ಭಾವಿಸಿಯಲ್ಲವೇ ಜೀವಿಸಿದ್ದು? ಹಾಗಾಗಿ, ಮೊದಲು ಬಹಳಷ್ಟು ಅಲೆಗಳು ಮನಸ್ಸಲ್ಲಿ ಏಳುವುದು. ಆದರೆ ಅಭ್ಯಾಸದಿಂದ ಅದು ಹೋಗುವುದು. ಅಲೆಗಳನ್ನು ನಿಯಂತ್ರಿಸಲು ಒಂದು ಸ್ಥಳದಲ್ಲಿ ಸ್ಥಿರವಾಗಿ ಕುಳಿತುಕೊಂಡು ಸಾಧನೆ ನಡೆಸಬೇಕು. ಸುಮ್ಮನೆ ತುಂಬ ಪುಸ್ತಕಗಳನ್ನು ಓದಿದರೆ, ಅಲೆಗಳು ಹೆಚ್ಚೇ ಆಗುತ್ತವೆ.

______________

ನಮ್ಮ ಮನಸ್ಸು ವಾಸ್ತವವಾಗಿ ಏಕಾಗ್ರವೂ ನಿರ್ಮಲವೂ ಆಗಿರುತ್ತದೆ. ಆದರೆ ನಾವು ಅಲ್ಲಿ ನಿನ್ನೆಯವರೆಗೆ ಅಸಂಖ್ಯಾತ ಲೌಕಿಕ ವಿಚಾರಗಳಿಗೆ ಸ್ಥಳ ಕೊಟ್ಟಿದ್ದೆವು. ಹಾಗಾಗಿ ಧ್ಯಾನ ಮಾಡಲು ಕುಳಿತುಕೊಳ್ಳುವಾಗ ಮನಸ್ಸನ್ನು ಏಕಾಗ್ರ ಮಾಡಲು ಸಾಧ್ಯವಾಗದೆ ಹೋಗುತ್ತದೆ. ಗೇಣಿದಾರರಂತೆ ಅವುಗಳು. ನಮ್ಮ ಜಾಗದಲ್ಲಿ ಒಂದು ಕಡೆ ಗುಡಿಸಲು ಹಾಕಲು ಬಿಟ್ಟೆವು. ಹಿಂದಿರುಗಿ ಹೋಗಲು ಹೇಳಿದಾಗ ಗಣನೆ ಮಾಡುವುದಿಲ್ಲ. ಅದು ಮಾತ್ರ ಅಲ್ಲ, ತಿರುಗಿ ನಮ್ಮಲ್ಲಿ ಜಗಳಕ್ಕೂ ಬರುತ್ತಾರೆ. ಅವರನ್ನು ಹೊರಗೆ ಹಾಕಲು ಬಹಳ ಕಷ್ಟ ಪಡಬೇಕಾಗಿ ಬರುತ್ತದೆ. ಕೋರ್ಟಲ್ಲಿ ಕೇಸೂ ಹಾಕ ಬೇಕಾಗುತ್ತದೆ. ಅದರಂತೆಯೇ ಮನಸ್ಸಿನ ಗೇಣಿದಾರರನ್ನು ಹೊರಹಾಕಲು ದೇವರ ಕೋರ್ಟ್‌ನಲ್ಲಿ ಕೇಸು ಹಾಕಬೇಕಾಗುತ್ತದೆ. ಅದೊಂದು ಮುಗಿಯದ ಯುದ್ಧ. ಜಯ ದೊರಕುವವರೆಗೆ ಯುದ್ಧ ಮಾಡಬೇಕು.

______________

ಸಾಧನೆ ಮಾಡುತ್ತ ಹೋದಂತೆಲ್ಲ ಹೆಚ್ಚು ಹೆಚ್ಚು ವಾಸನೆಗಳು ಮೇಲೆದ್ದು ಬರುವ ಅನುಭವವಾಗುವುದು. ಒಂದು ಕೋಣೆ ಗುಡಿಸುವಾಗ, ಹೊರ ಪದರದಲ್ಲಿ ಅಂಟಿಕೊಂಡಿರುವ ಕೊಳೆ ಮಾತ್ರವೇ ಸಾರಿಸಲು ಸಾಧ್ಯವಾಗುತ್ತದೆ. ಆದರೆ ಒಂದು ಒದ್ದೆ ವಸ್ತ್ರದಿಂದ ಒರಸಿದರೆ, ಹೆಚ್ಚಿನ ಕೊಳೆ ಮೇಲೆದ್ದು ಬರುತ್ತದೆ. ಮುಗಿಯುವ ಸಲುವಾಗಿ ಅವು ಹಾಗೆ ಮೇಲೆದ್ದು ಬರುವುದು.
______________

ಪ್ರಶ್ನೆ: ಅಮ್ಮಾ, ನಾನು ಬ್ರಹ್ಮನ್ ಅಲ್ಲವೇ, ಹಾಗಿದ್ದ ಮೇಲೆ ಸಾಧನೆ ಯಾಕೆ ಮಾಡಬೇಕು ?

“ಮಗನೇ, ಮಗನ ಹೆಸರು ಕರೆಯದೆ ಮಗನು ಹಿಂತಿರುಗಿ ನೋಡಲು ಸಾಧ್ಯವೇ ? ಆದಕಾರಣ, ನಾವು ನಿಂತಿರುವುದು ನಾಮದ ಮೇಲೆ. ಮಗನೇ, ನಿನಗೆ ನಿನ್ನೆಯಿಲ್ಲವೆ, ಇವತ್ತಿಲ್ಲವೆ, ನಾಳೆಯಿಲ್ಲವೆ, ನನ್ನ ಹೆಂಡತಿಯೆಂದೂ ಮಕ್ಕಳೆಂದೂ ಇಲ್ಲವೆ ? ರುಚಿಯೂ ಅರುಚಿಯೂ ಇಲ್ಲವೆ ? ನೀನು ಬ್ರಹ್ಮನ್ನಲ್ಲಿ ಇರುವವನು ಆದರೂ ಬ್ರಹ್ಮನ್ ಆಗಿಲ್ಲ. ಈಗಿನ ನಿನ್ನ ಬ್ರಹ್ಮನ್ ವಿವೇಚನೆಯಿಲ್ಲದ ಪ್ರಾಣಿಗಳ ಹಾಗೆ. ಅವೆಲ್ಲ ಬ್ರಹ್ಮವೆ ತಾನೆ. ಅದೇ ಪ್ರಕಾರವಿರುವುದು ನೀನೀಗ. ಋಷಿವರರು ಅನುಭೂತಿಯಿಂದ ಬರೆದಿಟ್ಟ ಮಾತುಗಳನ್ನು ಓದಿ, ನಾನು ಬ್ರಹ್ಮವೆಂದು ಹೇಳಿಕೊಂಡು ನಡೆಯಬೇಡಿ. ಮಗನೇ, ವಾಚ್ಮ್ಯಾನ್ ಕೂತುಕೊಂಡು ’ನನ್ನ ಆಸ್ತಿ’ ಎಂದು ಹೆಮ್ಮೆಪಟ್ಟಂತೆ, ನಾವು ಪುಸ್ತಕ ಓದಿ ಬ್ರಹ್ಮವೆಂದುಕೊಂಡು ನಡೆಯುವುದು. ಹಲಸೂ ಹೇಳುತ್ತದೆ; ಹಲಸಿನ ಬೀಜವೂ ಹೇಳುತ್ತದೆ, ನಾನು ಬ್ರಹ್ಮನ್ ಎಂದು. ನೀನು ಬರೇ ಹಲಸಿನ ಬೀಜ ಮಾತ್ರವಾಗಿರುವುದು. ಯಮ ನಿಯಮಗಳ ಜೊತೆಗೂಡಿ ನಿನಗೆ ಆ ಬ್ರಹ್ಮನ್ ಆಗಲು ಸಾಧ್ಯ.

ಮಕ್ಕಳೇ, ಬ್ರಹ್ಮವೆನ್ನುವುದು ಮಾತಿನಲ್ಲಿ ಹೇಳುವಂಥದ್ದಲ್ಲ; ಅನುಭವಿಸಿ ತಿಳಿದುಕೊಳ್ಳಬೇಕಾದದ್ದು. ಒಬ್ಬರು ಮಹರ್ಷಿ ತನ್ನ ಮಗನನ್ನು ಗುರುಕುಲದಲ್ಲಿ ಕಲಿಯಲು ಬಿಡುತ್ತಾರೆ. ಹನ್ನೆರಡು ವರ್ಷಗಳ ಶಾಸ್ತ್ರಪಠನ ಮುಗಿಸಿ ಮಗನು ಮರಳಿ ಬರುತ್ತಾನೆ. ತಂದೆಯೊಡನೆ “ನಾನು ಯಾರೆಂದು ಗೊತ್ತೇ ? ಬ್ರಹ್ಮಸ್ವರೂಪನು.”ಎಂದು ಅಹಂಕಾರದಿಂದನೆ ಹೇಳಲಿಕ್ಕೂ, ಹೆಮ್ಮೆಯೊಂದಿಗೆ ವರ್ತಿಸಲಿಕ್ಕೂ ತೊಡಗಿದ. ಮಗನ ಈ ವರ್ತನೆಯನ್ನು ಕಂಡ ಮಹರ್ಷಿಗೆ ತನ್ನ ಮಗನಲ್ಲಿ ಸಹಾನುಭೂತಿ ಉಂಟಾಗುತ್ತದೆ. ಅವರು ತನ್ನ ಮಗನಲ್ಲಿ ಒಂದು ಪಾತ್ರೆಯಲ್ಲಿ ಹಾಲನ್ನೂ, ಸ್ವಲ್ಪ ಕಲ್ಲುಸಕ್ಕರೆಯನ್ನೂ ತರಲಿಕ್ಕೆ ಹೇಳುತ್ತಾರೆ. ಮಗನು ಹಾಲು ಮತ್ತು ಕಲ್ಲುಸಕ್ಕರೆ ತೆಗೆದುಕೊಂಡು ಬರುತ್ತಾನೆ. ಕಲ್ಲುಸಕ್ಕರೆಯನ್ನು ಹಾಲಲ್ಲಿ ಹಾಕಿ ಕಲೆಸಲು ಮಹರ್ಷಿ ಹೇಳುತ್ತಾರೆ. ಮಗನು ಹಾಗೆಯೇ ಮಾಡಿ ಮುಗಿಸಿದಾಗ, ಮಹರ್ಷಿಯು ಪಾತ್ರೆಯ ಮಧ್ಯದಿಂದ ಸ್ವಲ್ಪ ಹಾಲು ತೆಗೆದು ಮಗನ ಬಾಯಿಯಲ್ಲಿ ಹೊಯ್ದು ’ಸಿಹಿಯಾಗಿದೆಯೆ’ ಎಂದು ಪ್ರ ಶ್ನಿಸುತ್ತಾರೆ. ಸಿಹಿಯಿದೆ ಎಂದು ಮಗನು ಹೇಳಿದ. ಪಾತ್ರೆಯ ನಾಲ್ಕೂ ಭಾಗಗಳಿಂದ ಹಾಲು ಮಗನ ಬಾಯಿಯಲ್ಲಿ ಪುನಃ ಹೊಯ್ದು, ’ಸಿಹಿಯಾಗಿದೆಯೆ’ ಎಂದು ಪುನ: ಕೇಳುತ್ತಾರೆ. ’ಸಿಹಿಯಾಗಿದೆ’ ಎದು ಪುನಃ ಮಗನು ಉತ್ತರಿಸಿದ. ’ಎಷ್ಟು ಸಿಹಿಯಿದೆ’ ಮಹರ್ಷಿ ಪ್ರಶ್ನೆ ಮಾಡುತ್ತಾರೆ. ಮಗನಿಗೆ ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ಆಗ ಮಹರ್ಷಿಯು ಮಗನಿಗೆ ಉಪದೇಶಿಸುತ್ತ ಹೇಳುತ್ತಾರೆ, ’ ಮಗುವೆ, ಬ್ರಹ್ಮನ್ ಎಂದು ಮಾತಲ್ಲಿ ಹೇಳಿ ಹೆಮ್ಮೆ ಪಡುವಂಥದ್ದಲ್ಲ. ಅದು ಅನುಭವ; ಅನುಭವಿಸಿ ತಿಳಿಯುವಂಥದ್ದು. ಕಲ್ಲುಸಕ್ಕರೆಯು ಹಾಲಿನಲ್ಲಿ ಎಲ್ಲ ಕಡೆ ವ್ಯಾಪಿಸಿರುವ ಹಾಗೆ, ಅದು ಎಲ್ಲ ಕಡೆ ತುಂಬಿಕೊಂಡಿದೆ.’

ಮಕ್ಕಳೇ, ಸಗುಣನೂ, ನಿರ್ಗುಣನೂ ಆದ ದೇವರು ಎಲ್ಲ ಕಡೆಯೂ ತುಂಬಿ ಕೊಂಡಿದ್ದಾನೆ. ಅದು ಶಬ್ದಗಳಲ್ಲಿ ಹೇಳುವಂಥದ್ದಲ್ಲ. ಅನುಭೂತಿಯ ಸ್ತರದಲ್ಲಿ ಅರಿಯಬೇಕಾದದ್ದು. ಸಾಧನೆಯಿಲ್ಲದೆ ನಾನು ಬ್ರಹ್ಮವೆಂದು ಹೇಳಿಕೊಂಡು ನಡೆಯದಿರಿ.

ಒಬ್ಬ ಪಂಡಿತನು ಎಲ್ಲವು ಬ್ರಹ್ಮಮಯ ಎಂದು ಹಾಡಿಕೊಂಡು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಇದು ನೋಡಿದ ಮತ್ತೊಬ್ಬನು, ಹಿಂದಿನಿಂದ, ಒಂದು ಮುಳ್ಳು ತೆಗೆದುಕೊಂಡು ಆ ಪಂಡಿತನನ್ನು ತಿವಿಯುತ್ತಾನೆ. ಅವನು ಅಲ್ಲಿ ನಿಂತು ಅಳತೊಡಗಿದ. ನೋವೂ ಕೋಪವೂ ಸಹಿಸಲಾಗದೆ, ’ಯಾರೋ, ನನ್ನನ್ನು ತಿವಿದದ್ದು’ ಎಂದು ನೋವನ್ನನುಭವಿಸುತ್ತ, ಅವನು ತಿವಿದವನನ್ನು ಹೊಡೆಯಲಿಕ್ಕೆಂದು ಹೋಗುತ್ತಾನೆ. ಮಕ್ಕಳೇ, ನಮ್ಮ ಬ್ರಹ್ಮನ್ ಈ ರೀತಿ…ಅಳುವ ಬ್ರಹ್ಮನ್ !

ಹಾಗಾದರೆ, ಅನುಭವಿಸಿ ಅರಿತವರ ಕಥೆ ಕೇಳಬೇಕೇ ? ಒಬ್ಬ ಮಹಾತ್ಮನು ಸರ್ವವೂ ಬ್ರಹ್ಮಮಯವೆಂದು ಹಾಡಿಕೊಂಡು ನಡೆಯುತ್ತಿದ್ದ. ಬೇರೊಬ್ಬನು ಹಿಂದಿನಿಂದ ಬಂದು ಆ ಮಹಾತ್ಮನ ಕೈ ಕತ್ತರಿಸುತ್ತಾನೆ. ಆದರೆ ಆ ಮಹಾತ್ಮನಿಗೆ ಇದರ ಅರಿವೇ ಇಲ್ಲ. ಎಲ್ಲವನ್ನೂ ಮರೆತಿದ್ದ ಆತ ಹಾಡುತ್ತ ಇನ್ನೂ ಮುಂದೆ ಸಾಗುತ್ತಿರುತ್ತಾನೆ. ತಾನೊಬ್ಬ ಮಹಾತ್ಮನನ್ನು ಪೀಡಿಸಿದ್ದು ಎಂದು ಕೈ ಕತ್ತರಿಸಿದ ವ್ಯಕ್ತಿಗೆ ಅರ್ಥವಾಯಿತು. ಪಶ್ಚಾತ್ತಪಪಟ್ಟು ಅವನು ಮಹಾತ್ಮನನ್ನು ಸಮೀಪಿಸಿದ. ತನ್ನನ್ನು ಕ್ಷಮಿಸಬೇಕೆಂದು ಕೇಳಿ ಕೊಳ್ಳುತ್ತಾನೆ. ಯಾಕೆಂದು ಅವನು ಕೇಳುತ್ತಾನೆ. ’ತಮ್ಮ ಕೈ ಕತ್ತರಿಸಿ ತುಂಡು ಮಾಡಿದ ಮಹಾ ಪಾಪಿ ನಾನು’ ಎಂದು ಅವನು ಮಾರುತ್ತರ ಕೊಟ್ಟ. ಆಗಲೇ ತನ್ನ ಕೈ ತುಂಡಾಗಿ ಹೋಗಿದೆ ಎಂದು ಅವನಿಗೆ ಗೊತ್ತಾಗಿದ್ದು. ಕತ್ತರಿಸಿದ ಕೈಯ ಸ್ಥಾನವನ್ನು ಅವನು ಸವರಿದ. ಆಗ ಅವನ ಕೈ ಪುನಃ ಹಿಂದಿನಂತಾಯಿತು. ಆಗ ಅವನು ಹೇಳುತ್ತಾನೆ, ’ಮಗುವೇ, ಸರ್ವಂ ಬ್ರಹ್ಮಮಯಂ ಎಂದು ಹಾಡಿದರೂ, ಈ ಕೈ ಹಿಂದಿನಂತೆ ಮಾಡಲು ಸವರುವ ಎನಿಸಿ ಕರ್ಮ ಮಾಡಬೇಕಾಗಿಬಂತು. ಮಗೂ, ನಾನು ಈಗಲೂ ಕರ್ಮದ ಮಟ್ಟದಲ್ಲೇ ನೆಲೆಸಿದ್ದೇನೆ.’

ಮಕ್ಕಳೇ, ಅನುಭೂತಿಯಿಂದಲ್ಲದೆ ನಾನು ಬ್ರಹ್ಮನ್ ಎಂದು ಹೇಳಲು ನಮಗೆ ಅವಕಾಶವಿಲ್ಲ. ನೀವು ಮೊದಲು ಹೇಳಿದ ಪಂಡಿತನಂತೆ ಮಾಡದೆ, ಅನುಭವಿಸಿ ಅರಿತ ಆ ಮಹಾತ್ಮನಂತೆ ಮಾಡಲು ಯತ್ನಿಸಿರಿ.

ಇವತ್ತು ಇಪ್ಪತ್ತೈದೋ, ಐವತ್ತೋ ರುಪಾಯಿ ಕೊಟ್ಟರೆ ಬ್ರಹ್ಮಸೂತ್ರ ಗ್ರಂಥವನ್ನು ಅಂಗಡಿಯಲ್ಲಿ ಕೊಂಡುಕೊಳ್ಳಬಹುದು. ಎರಡು ವಾರಗಳಲ್ಲಿ ಅದು ಬಾಯಿಪಾಠ ಕಲಿಯಲೂ ಸಾಧ್ಯವಿದೆ. ಅದು ಕಲಿತು, ನಾನು ಬ್ರಹ್ಮನ್ ಎಂದು ಹೇಳಿಕೊಂಡು ನಡೆಯುವುದರಲ್ಲಿ ಯಾವ ಅರ್ಥವೂ ಇಲ್ಲ. ಮಕ್ಕಳೇ, ಅದನ್ನು ಜೀವನದಲ್ಲಿ ಅಳವಡಿಸಿ ಇನ್ನುಳಿದವರಿಗೆ ತೋರಿಸಿ ಕೊಡುವುದು ಬೇಕಾಗಿದೆ. ಒಂದು ಗಂಟೆಯ ಶಾಸ್ತ್ರಾಭ್ಯಾಸ ಮಾಡಿದರೆ, ಹತ್ತು ಗಂಟೆಯಾದರೂ ಮನನ ಮಾಡಬೇಕು.

ಮಕ್ಕಳೇ, ನಮ್ಮ ಕೈ ಸುಟ್ಟರೆ ಆ ಕೈ ತಣ್ಣೀರಲ್ಲಿ ಮುಳುಗಿಸಲು ಎಷ್ಟೆಲ್ಲ ಗಡಿಬಿಡಿ ಇರುತ್ತದೋ, ಅಷ್ಟೆಲ್ಲ ವ್ಯಥೆ ದೇವರನ್ನರಿಯಲು ನಮಗೆ ಇರಬೇಕು.”

ಪ್ರಶ್ನೆ: ಅಮ್ಮಾ, ಕ್ಷೇತ್ರಗಳಲ್ಲಿ ಪೂಜೆ ನಿಲ್ಲಿಸಿದರೆ ಪ್ರತಿಕೂಲ ಪರಿಣಾಮವಾಗುತ್ತದೆಂದು ಹೇಳುತ್ತಾರೆ; ನಿಜವೇ ?

“ಮಕ್ಕಳೇ, ಮನುಷ್ಯನ ಸಂಕಲ್ಪದಿಂದಾಗಿ ದೆವತೆಗಳ ಶಕ್ತಿ ವೃದ್ಧಿಯಾಗುತ್ತಿರುತ್ತದೆ. ಪೂಜೆ ನಿಲ್ಲಿಸಿದರೆ, ಅದು ಕ್ಷೀಣಿಸುವುದು. ದೇವರು ಸರ್ವಶಕ್ತನು. ಅವನ ಶಕ್ತಿ ಹೆಚ್ಚಾಗುವುದಿಲ್ಲ; ಕಡಿಮೆಯಾಗುವುದಿಲ್ಲ. ಅದು ನಿತ್ಯವೂ ಶಾಶ್ವತ.ಆದರೆ ದೇವತೆಗಳ ಶಕ್ತಿ ಪ್ರತಿಷ್ಠಾಪನೆ ಮಾಡುವವರ ಭಾವನೆಯನ್ನವಲಂಬಿಸಿದೆ. ಕ್ಷೇತ್ರಗಳಲ್ಲೂ, ಕುಟುಂಬ ದೇವತೆಗಳ ಕ್ಷೇತ್ರಗಳಲ್ಲೂ ಪೂಜೆ ನಿಲ್ಲಿಸಬಾರದು. ನಿಲ್ಲಿಸಿದ್ದಾದರೆ ದೊಡ್ಡ ದೋಷಗಳು ಘಟಿಸಬಹುದು. ”

“ಮಕ್ಕಳೇ, ಒಂದು ಕಾಗೆಗೆ ನಾವು ಹತ್ತು ದಿವಸ ಆಹಾರ ಕೊಟ್ಟು ಅಭ್ಯಾಸಮಾಡಿದೆವೆಂದು ಇಟ್ಟುಕೊಳ್ಳೋಣ. ಹನ್ನೊಂದನೇ ದಿವಸ ಕೊಡದಿದ್ದರೆ ಅದು ನಮ್ಮ ಹಿಂದೆಯೇ ಕೂಗುತ್ತ ಬರುತ್ತದೆ. ಏಕಾಗ್ರತೆಯಿಂದ ಯಾವ ಕೆಲಸವನ್ನೂ ಮಾಡಲಿಕ್ಕೆ ನಮಗೆ ಆಗುವುದಿಲ್ಲ. ಇದೇ ರೀತಿಯಲ್ಲಿ, ನಿತ್ಯ ಪೂಜೆ ನಿಲ್ಲಿಸಿದರೆ ಸೂಕ್ಷ್ಮ ರೂಪದಲ್ಲಿ ಆ ದೇವತೆಗಳು ನಮ್ಮನ್ನು ಉಪದ್ರವಿಸುತ್ತಿರುತ್ತವೆ. ಸಾಧಕರನ್ನು ಇದು ಅಷ್ಟೊಂದಾಗಿ ಬಾಧಿಸುವುದಿಲ್ಲ.”

ಮಕ್ಕಳೇ, ದೋಣಿ ಕೊಂಡು ಕೊಂಡರೆ ಮಾತ್ರ ಸಾಲದು; ಹುಟ್ಟು ಹಾಕಲು ಕೂಡ ಕಲಿಯಬೇಕು. ಹುಟ್ಟುಹಾಕಲು ಗೊತ್ತಿಲ್ಲದೆ ದೊಣಿ ಏರಿದರೆ, ಅದು ಗುರಿಯಿಲ್ಲದೆ ಆ ಕಡೆಗೂ ಈ ಕಡೆಗೂ ಹೋಗುತ್ತಿರುತ್ತದೆ. ಹುಟ್ಟು ಹಾಕಲು ಗೊತ್ತಿರಲಾರದೆ, ದೋಣಿಯ ದೋಷ ಹೇಳುವುದು ಸರಿಯೇ ?

ಇದೇ ರೀತಿ ಕ್ಷೇತ್ರ ಕಟ್ಟಿಸಿದರೆ ಮಾತ್ರ ಸಾಲದು, ಅದನ್ನು ಕ್ರಮಬದ್ಧವಾಗಿ ನಡೆಸಲೂ ಬೇಕು. ನಿತ್ಯ ಪೂಜೆ ಮಾಡಬೇಕು. ಮಾಡದಿದ್ದರೆ ಕೋಲಾಹಲವಾಗಬಹುದು. ಅಂತಹ ವೇಳೆಯಲ್ಲಿ ಕ್ಷೇತ್ರದ ದೋಷ ಎಣಿಸಿ ಪ್ರಯೋಜನವಿಲ್ಲ.”

ಪ್ರಶ್ನೆ: ಹಾಗಾದರೆ ದೇವತೆಗಳೂ ದೇವರೂ ಬೇರೆ ಬೇರೆಯೇನು ?

“ದೇವತೆಗಳು ಮನುಷ್ಯನ ಸಂಕಲ್ಪದ ಸೃಷ್ಟಿ. ಮನುಷ್ಯನು ದೇವತೆಗಳನ್ನು ಪ್ರತಿಷ್ಠಾಪಿಸಿದವನು ಸಹ. ಮನುಷ್ಯನ ಸೃಷ್ಟಿಗೂ ಸಂಕಲ್ಪಕ್ಕೂ ಒಂದು ಪರಿಮಿತಿಗಳಿದೆ. ಆದಕಾರಣ ಮನುಷ್ಯನ ಸ್ವಭಾವವು ಅವನ ಸೃಷ್ಟಿಯಲ್ಲೂ ಪ್ರತಿಫಲಿಸುತ್ತದೆ. ಮಕ್ಕಳೇ, ಮನುಷ್ಯನ ಹಾಗೂ ಪ್ರಾಣಿಗಳ ನಡುವಿರುವ ವ್ಯತ್ಯಾಸದಂತೆಯೆ ದೇವರು ಹಾಗೂ ದೇವತೆಗಳ ನಡುವಿನ ವ್ಯತ್ಯಾಸ. ಆತ್ಮ ಎಲ್ಲಾ ಒಂದೇ ಆದರೂ, ಮನುಷ್ಯನ ಹಾಗೆ ನಾಯಿಗೆ ವಿವೇಚನೆಯಿಲ್ಲವಲ್ಲ. ತನ್ನನ್ನು ಪ್ರೀತಿಸುವವರನ್ನು ಮಾತ್ರ ನಾಯಿ ಪ್ರೀತಿಸುವುದು; ಉಳಿದವರನ್ನು ಕಚ್ಚುತ್ತದೆ.”

ಪ್ರಶ್ನೆ: ಆ ತರಹ ಆದರೆ, ಕ್ಷೇತ್ರಗಳು ಮನುಷ್ಯರಿಗೆ ದೋಷಕರವಾಗುತ್ತದಲ್ಲವೇ ?

“ಎಂದಿಗೂ ಇಲ್ಲ. ದೇವತಾ ಪೂಜೆ ನಡೆಸುವ ಕ್ಷೇತ್ರಗಳ ಕುರಿತಾಗಿ ಅಮ್ಮ ಹೇಳಿದ್ದು. ಸ್ವಲ್ಪ ಜಾಗ್ರತೆ ವಹಿಸುವ ಸಲುವಾಗಿ ಮಾತ್ರ. ಸ್ವಂತ ಪ್ರಾಣವನ್ನು ಕೂಡಾ ಚೆನ್ನಾಗಿ ನಿಲ್ಲಿಸಲು ಕೂಡದ ತಂತ್ರಿಗಳಲ್ಲವೇ ಪ್ರತಿಷ್ಠೆ ಮಾಡುವುದು ? ಅಂಥ ಕಡೆ ಪೂಜೆ ಎಂದೂ ನಿಲ್ಲಿಸಬಾರದು. ಗಾಜಿನ ಗೂಡಿನಲ್ಲಿ ನೀರಿಟ್ಟು ಮೀನು ಸಾಕುವುದನ್ನು ನೋಡಿಲ್ಲವೇ ? ಅವುಗಳು ಬದುಕಿರಲು ದಿನಾಲೂ ನೀರು ಬದಲಾಯಿಸಿಕೊಂಡಿರಬೇಕು. ಇಲ್ಲದಿದ್ದರೆ ತಪ್ಪಾಗುತ್ತದೆ. ಎಚ್ಚರಿಕೆಯಿಂದ ಪೂಜೆ ನಡೆಸಿದರೆ ಐಶ್ವರ್ಯ ಮತ್ತು ಸಮೃದ್ಧಿಯುಂಟಾಗುವುದು.

ಆದರೆ ಮಹಾತ್ಮರು ಇಲ್ಲವೆ ಜೀವನ್ಮುಕ್ತರು ಪ್ರತಿಷ್ಠಾಪನೆ ನಡೆಸಿದ ಕ್ಷೇತ್ತ್ರಗಳ ಮಹತ್ವವೇ ಬೇರೆ. ಅವರು ಸಂಕಲ್ಪದಿಂದ ತಾವು ಪ್ರತಿಷ್ಠಾಪಿಸಿದ ವಿಗ್ರಹಗಳಲ್ಲಿ ಪ್ರಾಣಶಕ್ತಿ (ದಿವ್ಯ ಚೈತನ್ಯ) ತುಂಬಿರುತ್ತಾರೆ. ಅಖಂಡ ಸಚ್ಚಿದಾನಂದದಲ್ಲಿ ಅವರು ಸಂಕಲ್ಪ ಮಾಡಿರುತ್ತಾರೆ. ಅಲ್ಲಿಯ ಪ್ರತಿಷ್ಠಾಪನೆಗಳು, ಮತ್ತು ಮೂರ್ತಿಗಳು ಚೈತನ್ಯದಿಂದ ತುಂಬಿ ತುಳುಕಾಡುತ್ತಿರುತ್ತವೆ; ಗಾಜಿನ ಗೂಡಿನಲ್ಲಿ ಬೆಳೆದ ಮೀನುಗಳಂತಲ್ಲ. ಅವುಗಳ ಸ್ಥಿತಿ, ನದಿಯಲ್ಲಿ ಬೆಳೆದ ಮೀನುಗಳಂತಿರುತ್ತದೆ. ಅಲ್ಲಿ ಎಂದೂ ಪೂಜೆ ನಿಲ್ಲುವುದಿಲ್ಲ; ಅಥವಾ ನಿಂತರೂ ಶಕ್ತಿ ಕ್ಷಯಿಸುವುದಿಲ್ಲ. ಇಂಥ ಕ್ಷೇತ್ರಗಳು ದೊಡ್ಡ ಆಕರ್ಷಣ ಕೇಂದ್ರಗಳಾಗಿಯೂ, ನಿತ್ಯ ಕಲ್ಯಾಣ ಗುಣಗಳ ಸಂಗಮವಾಗಿಯೂ ಇರುತ್ತವೆ. ತಿರುಪತಿ, ಗುರುವಾಯೂರ್,(ತೃಶ್ಶೂರ್, ಕೇರಳ) ಚೋಟ್ಟಾನಿಕರ (ಎರಣಾಕುಳಂ, ಕೇರಳ) ಮುಂತಾದ ಕ್ಷೇತ್ರಗಳು ಇದಕ್ಕೆ ಉದಾಹರಣೆ.”

ಪ್ರಶ್ನೆ: ಅಮ್ಮಾ, ಪಿತೃಕರ್ಮಕ್ಕೆ ಫಲಪ್ರಾಪ್ತಿಯಿದೆಯೇ ?

ಮಕ್ಕಳೇ, ಶುದ್ಧ ಸಂಕಲ್ಪಕ್ಕೆ ದೊಡ್ಡ ಶಕ್ತಿಯಿದೆ. ಕರ್ಮ ಫಲಿಸಲೇ ಬೇಕೆಂದಿದ್ದರೆ ಶುದ್ಧ ಸಂಕಲ್ಪ ಬೇಕು. ಪಿತೃಕರ್ಮ ನಡೆಸುವಾಗ ಸತ್ತ ವ್ಯಕ್ತಿಯ ದಿನ, ನಾಮ ರೂಪ, ಭಾವಗಳನ್ನೆಲ್ಲ ಚಿಂತಿಸಿ ಮನಸ್ಸಲ್ಲಿ ಮಾತ್ರ ಜಪ ಮಾಡುತ್ತಾರೆ.

ಮಕ್ಕಳೇ, ಪ್ರತಿಯೊಂದು ಕರ್ಮಕ್ಕೂ ಒಂದೊಂದು ದೇವತೆಯಿದೆ. ಪರ್ಶಿಯದಲ್ಲಿರುವ ಮಗನ ಕಾಗದ ಊರಲ್ಲಿರುವ ತಂದೆಗೂ ತಾಯಿಗೂ ಪೋಸ್ಟ್ ಮ್ಯಾನ್ ವಿಳಾಸ ತಪ್ಪದೆ ತಲಪಿಸುವುದಿಲ್ಲವೆ ? ಆದರೆ ಇದು ಖಂಡಿತ: ಸಂಕಲ್ಪ ಶುದ್ಧವಾಗಿದ್ದರೆ ಮಾತ್ರ ದೇವತೆಗಳು ಆಯಾಯ ಕರ್ಮದ ಫಲವನ್ನು ಆಯಾಯ ಜೀವನಿಗೆ ತಲಪಿಸುವರು. ಅದರಿಂದ ಆತ್ಮನಿಗೆ ಒಳಿತಾಗುವಂತೆ ಸಹ ಮಾಡುವುದು.

ಪ್ರಶ್ನೆ: ಋಷಿವರ್ಯರ ಉಕ್ತಿಗಳು ಸತ್ಯವೆಂದು ಏನು ಪುರಾವೆ ?

ಮಕ್ಕಳೇ, ಅವರು ಹೇಳಿದ್ದೆಲ್ಲಾ ಸರಿಯಾಗಿದೆ. ಕಲಿಯುಗದ ಕುರಿತು ಭಾಗವತದಲ್ಲಿ ಹೇಳಿರುವುದೆಲ್ಲವೂ ಅದರಂತೆಯೇ ನಡೆಯುತ್ತಿಲ್ಲವೇ ? “ಮಗನನ್ನು ತಂದೆಯು ತಿನ್ನುವನು; ತಂದೆಯನ್ನು ಮಗನು ತಿನ್ನುವನು, ಕಾಡುಗಳೆಲ್ಲ ಮನೆಗಳಾಗುವವು; ಮನೆಗಳೆಲ್ಲ ಅಂಗಡಿಗಳಾಗುವವು.” ಇದೇ ರೀತಿ ಅಲ್ಲವೆ ಇವತ್ತು ಪ್ರತಿಯೊಂದೂ ನಡೆಯುತ್ತಿರುವುದು ? ಋಷಿವರರು ಕಂದ ಮೂಲಗಳನ್ನು ಸೇವಿಸಿ, ತಪಸ್ಸನ್ನು ಅನುಷ್ಠಾನ ಮಾಡಿ, ಸತ್ಯವನ್ನು ಸಾಕ್ಷಾತ್ಕರಿಸಿದರು. ನಾವಾದರೋ, ಆಹಾರ ಸೇವಿಸಲು ಮಾತ್ರ ಜೀವಿಸುತ್ತೇವೆ .

ಹಲವು ಯುಗಗಳ ಮೊದಲೇ, ನಮ್ಮ ಋಷೀಶ್ವರರು ಬಹಳ ವಿಷಯಗಳನ್ನು ಕಂಡು ಹಿಡಿದಿದ್ದರು. ನಾವಿಂದು ಬಹಳ ದೊಡ್ಡದೆಂದು ಭಾವಿಸುವ ಹಲವು ಸಂಶೋಧನೆಗಳನ್ನು ನಿರರ್ಥಕವೆಂದು ಪರಿಗಣಿಸಿದ್ದರು. ಉದಾಹರಣೆಗೆ, ವಿಜ್ಞಾನಿಗಳು ಪ್ರಣಾಲಿಕಾ ಶಿಶು(test tube baby)ವನ್ನು ಮಾಡಿದರು. ಪ್ರತಿಯಾಗಿ, ಕೌರವರ ನೂರೊಂದು ಮಕ್ಕಳನ್ನೂ, ಕೊಡದೊಳಗಿಟ್ಟಲ್ಲವೇ ವ್ಯಾಸರು ಸೃಷ್ಟಿಸಿದ್ದು ? ಬರೇ ಮಾಂಸಪಿಂಡಕ್ಕೆ ಅವರು ಪ್ರಾಣ ಪ್ರದಾನ ಮಾಡಿದರೆಂಬುದನ್ನು ನೆನಪಿಟ್ಟುಕೊಳ್ಳಬೇಕು ! ಇದಕ್ಕೆ ಹೋಲಿಸಿದರೆ ಇವತ್ತಿನ ಟೆಸ್ಟ್ ಟ್ಯೂಬ್ ಬೇಬಿ ಏನೂ ಅಲ್ಲ. ಇದರಂತೆ ರಾಮಾಯಣದಲ್ಲಿ ಪುಷ್ಪಕವಿಮಾನದ ಕುರಿತು ಹೇಳಿಲ್ಲವೆ ? ಇವತ್ತಿನ ವಿಜ್ಞಾನಿಗಳು ಯಾವಾಗಂತೆ ವಿಮಾನ ಕಂಡುಹಿಡಿದದ್ದು ? ಹೀಗೆಯೇ ಏನೆಲ್ಲವೂ !

ಇವತ್ತಿನ ವಿಜ್ಞಾನಿಗಳನ್ನಾಗಲಿ, ಅವರ ಸಂಶೋಧನೆಗಳನ್ನಾಗಲಿ ಅಮ್ಮ ಅರ್ಥಹೀನವೆಂದು ತಳ್ಳಿ ಹಾಕುತ್ತಿಲ್ಲ. ತಪಸ್ಸಿನಿದ ಗಳಿಸಲು ಸಾಧ್ಯವಿಲ್ಲದ್ದು ಯಾವುದೂ ಇಲ್ಲ ಎಂದು ಒತ್ತಿ ಹೇಳಲು ಎಂದು ಅಮ್ಮ ಹೀಗೆ ಸೂಚಿಸುತ್ತಿರುವುದು. ಅವರಿಗಿದೆಲ್ಲ ನಿರರ್ಥಕವಾಗಿತ್ತು. ಏನನ್ನೂ ಸಂಕಲ್ಪಮಾತ್ರದಿಂದ ಸೃಷ್ಟಿಸಲು ಅವರಿಗೆ ಆಗುತ್ತಿತ್ತು.

ಹಿಂದೆ ಮನೆಗಳ ನಡುವೆ ತುಂಬ ಸ್ಥಳವಿರುತ್ತಿತ್ತು. ಸುತ್ತಲೂ ಔಷಧೀಯ ಗಿಡಗಳನ್ನು ನಟ್ಟಿರುತ್ತಿದ್ದರು; ಬೇವು, ಅತ್ತಿ, ಇತ್ಯಾದಿ ಹಲವು. ಅದನ್ನು ತೀಡಿ ಬಂದ ಗಾಳಿಗೆ ಒಂದು ವಿಶೇಷ ಔಷಧಿ ಗುಣವಿದೆ. ಆ ವಾಯು ವಾತಾವರಣವನ್ನು ಶುದ್ಧ ಮಾಡುತ್ತದೆ. ಅವತ್ತಿನ ಜನರು ಸತ್ಯ, ಧರ್ಮಗಳ ಕೈಬಿಟ್ಟಿರಲಿಲ್ಲ. ಅದಕ್ಕೆ ಪ್ರತಿಯಾಗಿ, ಇಂದೆಲ್ಲ ಬದಲಾಗಿದೆ. ವೃಕ್ಷಗಳನ್ನೆಲ್ಲ ಕಡಿದು ತುಂಡು ಮಾಡಿ ಅಲ್ಲೆಲ್ಲ ಮನೆಗಳನ್ನೂ ಅಂಗಡಿಗಳನ್ನೂ ಕಟ್ಟುತ್ತಿದ್ದಾರೆ. ಸತ್ಯಕ್ಕೂ ಧರ್ಮಕ್ಕೂ ನೆಲೆಯಿಲ್ಲದಾಯಿತು. ಪರಸ್ಪರ ವಿಶ್ವಾಸ, ಪ್ರೀತಿ, ಸತ್ಯಸಂಧತೆ, ಕ್ಷಮೆ, ತ್ಯಾಗ ಇವೆಲ್ಲ ಇದೆಯೆ ? ಮಳೆ ಬಿದ್ದರೆ ಮಳೆ, ಬಿಸಿಲಾದರೆ ಬಿಸಿಲು. ಕೃಷಿ ಮಾಡುವಾಗ ಸಾಕಷ್ಟು ಮಳೆಯಿಲ್ಲದೆ ಬೆಳೆಗಳು ನಾಶವಾಗುತ್ತಿವೆ.

ಹೀಗೆಲ್ಲ ಸಂಭವಿಸುವುದೆಂದು ನಮ್ಮ ಪೂರ್ವಿಕರಾದ ಋಷಿಶ್ರೇಷ್ಠರು ಮೊದಲೇ ಹೇಳಿರುವರು. ಅದೆಲ್ಲ ಅದರಂತೆಯೇ ನಡೆಯುತ್ತದೆ.”