ಮಕ್ಕಳೇ, ಜೀವನದಲ್ಲಿ ಎರಡು ಕಾರ್ಯಗಳು ನಡೆಯುತ್ತವೆ. ಒಂದು, ಕರ್ಮ ಮಾಡುವುದು. ಎರಡು, ಅದರ ಫಲವನ್ನು ಅನುಭವಿಸುವುದು. ಕರ್ಮವನ್ನು ಯಾವ ಮನೋಭಾವದೊಂದಿಗೆ ಮಾಡಬೇಕು ಮತ್ತು ಕರ್ಮಫಲವನ್ನು ಯಾವ ಮನೋಭಾವದೊಂದಿಗೆ ಅನುಭವಿಸಬೇಕು ಎಂಬುದನ್ನು ತಿಳಿದರೆ, ಜೀವನವು ತುಲನಾತ್ಮಕವಾಗಿ ಶಾಂತವಾಗಿಯೂ ಮತ್ತು ಸಮಾಧಾನಪೂರ್ಣವಾಗಿಯೂ ಇರುತ್ತದೆ.

ನಾವು ಬಹಳಷ್ಟು ನಿರೀಕ್ಷಿಸುವ ಕಾರ್ಯಗಳು ಸಂಭವಿಸದೇ ಇರುವುದೂ ಮತ್ತು ನಿರೀಕ್ಷಿಸದ ಕಾರ್ಯಗಳು ಸಂಭವಿಸುವುದೂ, ಜೀವನದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಯ.

ಒಂದು ಕರ್ಮದ ಫಲವು ದೊರಕಲು ನಮ್ಮ ಕರ್ಮದ ಜೊತೆಗೆ ಅನೇಕ ಅಂಶಗಳೂ ಕಾರಣವಾಗಿರುತ್ತವೆ. ಇವೆಲ್ಲವೂ ಅನುಕೂಲಕರವಾಗಿ ಬಂದಾಗ ಮಾತ್ರ ನಾವು ನಿರೀಕ್ಷಿಸಿದ ಫಲವು ದೊರಕುತ್ತದೆ. ಇಲ್ಲಿ ಕರ್ಮವನ್ನು ಮಾಡುವುದು ಎಂಬ ಒಂದೇ ಕಾರ್ಯವು ನಮ್ಮ ಹತೋಟಿಯಲ್ಲಿದೆ. ಆದ್ದರಿಂದ, ಫಲದ ಬಗ್ಗೆ ಚಿಂತಿಸದೆ, ನಮ್ಮ ಸಂಪೂರ್ಣ ಶಕ್ತ್ಯಾನುಸಾರ ಆ ಕರ್ಮವನ್ನು ಉತ್ತಮವಾಗಿ ಮಾಡುವುದಷ್ಟೇ ನಮಗೆ ಸಾಧ್ಯವಿರುವುದು,.

ಅದಕ್ಕಾಗಿಯೇ ಫಲವನ್ನು ಅಪೇಕ್ಷಿಸದೆ ಕರ್ಮವನ್ನು ಮಾಡಬೇಕೆಂದು ಭಗವದ್ಗೀತೆಯಲ್ಲಿ ಭಗವಾನ್ ಉಪದೇಶಿಸುತ್ತಾನೆ. ಸಂಬಳವನ್ನು ಪಡೆಯದೆ ಕೆಲಸ ಮಾಡಬೇಕು ಎಂದು ಇದರ ಅರ್ಥವಲ್ಲ. ಫಲದ ಬಗ್ಗೆ ನಿರೀಕ್ಷೆಯನ್ನು ತ್ಯಜಿಸಿ ಕರ್ಮವನ್ನು ಮಾಡಿದರೆ, ಚೆನ್ನಾಗಿ ಮಾಡಲು ಸಾಧ್ಯ. ನಮಗೆ ದೊರೆಯಬೇಕಾದುದು ಸಹಜವಾಗಿಯೇ ಲಭಿಸುತ್ತದೆ.

ನಾವು ಪರೀಕ್ಷೆಯನ್ನು ಬಹಳ ಚೆನ್ನಾಗಿ ಬರೆದರೂ, ಉತ್ತರ ಪತ್ರಿಕೆ ಪರಿಶೀಲಿಸುವ ಪ್ರೊಫೆಸರ್ ಮತ್ತು ಮಾರ್ಕ್ಸ್ ನಮೂದಿಸುವ ವ್ಯಕ್ತಿ ಗಮನಿಸದಿದ್ದರೆ, ನಿರೀಕ್ಷಿಸಿದ ಫಲ ಸಿಗುವುದಿಲ್ಲ. ಒಬ್ಬ ವಿದ್ಯಾರ್ಥಿ ಬಹಳ ಚೆನ್ನಾಗಿ ಓದಿ ಪರೀಕ್ಷೆ ಬರೆದ. ರ‍್ಯಾಂಕ್ ಸಿಗುತ್ತದೆ ಎಂದೇ ಅವನು ನಿರೀಕ್ಷಿಸಿದ್ದ. ಆದರೆ, ಪರೀಕ್ಷಾಫಲಿತಾಂಶ ಬಂದಾಗ ಕೇವಲ ತೇರ್ಗಡೆಯಾಗಿದ್ದ ಅಷ್ಟೇ. ನಿರೀಕ್ಷಿಸಿದಷ್ಟು ಮಾರ್ಕ್ಸ್ ಸಿಗಲಿಲ್ಲ ಎಂದುಕೊಂಡು ಅವನು ನಿರಾಶನಾಗಲಿಲ್ಲ. ಉತ್ತರ ಪತ್ರಿಕೆ ಮರುತಪಾಸಣೆಗೆ ಬೇಕಾದ ಕ್ರಮಗಳನ್ನು ಕೈಗೊಂಡ. ಎರಡನೇ ಬಾರಿ ನೋಡಿ ಮಾರ್ಕ್ಸ್ ಹಾಕಿದಾಗ ರ‍್ಯಾಂಕ್ ಇತ್ತು.

ಇದು ಹೇಗೆ ಸಂಭವಿಸಿತು ಎಂದು ವಿಚಾರಿಸಿದಾಗ ತಿಳಿದುಬಂದ ವಿಷಯವೆಂದರೆ, ಉತ್ತರ ಪತ್ರಿಕೆ ನೋಡಿದ ಪ್ರೊಫೆಸರ್ ಆ ಸಮಯದಲ್ಲಿ ಸಂಪೂರ್ಣವಾಗಿ ಅಸ್ವಸ್ಥನಾಗಿದ್ದನು ಎಂಬುದು. ಅವನ ಪತ್ನಿ ಯಾರೋ ಒಬ್ಬನ ಜೊತೆ ಓಡಿಹೋಗಿದ್ದಳು. ಅದರ ದುಃಖದಲ್ಲಿದ್ದ ಕಾರಣ, ಅವನಿಗೆ ಗಮನವಿಟ್ಟು ಪರಿಶೀಲಿಸಲು ಸಾಧ್ಯವಾಗಲಿಲ್ಲ. ಅದನ್ನೇ ಅಮ್ಮ ಹೇಳಿದ್ದು – ನಾವು ಎಷ್ಟೇ ಓದಿ ಪರೀಕ್ಷೆ ಬರೆದರೂ, ನಮ್ಮ ಪ್ರಯತ್ನ ಮಾತ್ರವಲ್ಲ, ಬೇರೆ ಅನೇಕ ಅಂಶಗಳು ಸಹ ಫಲಿತಾಂಶವನ್ನು ನಿರ್ಧರಿಸುತ್ತವೆ ಎಂದು.

ಮನಸ್ಸಿನ ನಿರಂತರ ಚಲನೆಯು ಆಲೋಚನೆಗಳ ಅನಂತ ಅಲೆಗಳನ್ನು ಸೃಷ್ಟಿಸುತ್ತದೆ. ಈ ಆಲೋಚನಾ ತರಂಗಗಳ ಕಾರಣದಿಂದ, ಎಲ್ಲದರ ಬಗ್ಗೆ ನಮ್ಮ ದೃಷ್ಟಿಕೋನವು ಅಸ್ಪಷ್ಟ ಮತ್ತು ಅಪೂರ್ಣವಾಗುತ್ತದೆ

ಚಂಚಲವಾಗಿರುವುದು ಮಾನವ ಮನಸ್ಸಿನ ಸ್ವಭಾವವಾಗಿದೆ. ಗಡಿಯಾರದ ಲೋಲಕದಂತೆ ಅದು ಒಂದು ವಿಷಯದಿಂದ ಇನ್ನೊಂದಕ್ಕೆ ಸದಾ ಚಲಿಸುತ್ತಲೇ ಇರುತ್ತದೆ.

ಈ ಚಲನೆಯು ಅಂತ್ಯವಿಲ್ಲದೆ ಮುಂದುವರಿಯುತ್ತಲೇ ಇರುತ್ತದೆ. ಒಂದು ಕ್ಷಣ ಮನಸ್ಸು ಏನನ್ನಾದರೂ ಇಷ್ಟಪಡುತ್ತದೆ; ಮರುಕ್ಷಣವೇ ಅದನ್ನು ದ್ವೇಷಿಸುತ್ತದೆ. ಒಂದು ವಸ್ತುವನ್ನು ಮನಸ್ಸು ಈಗ ಬಯಸುತ್ತದೆ, ಮರುಕ್ಷಣವೇ ಅದೇ ವಸ್ತುವಿನಲ್ಲಿ ಬೇಸರ ಮೂಡುತ್ತದೆ. ಮನಸ್ಸೆಂಬ ಪೆಂಡುಲಂ ಕೆಲವೊಮ್ಮೆ ಕ್ರೋಧದತ್ತ ಚಲಿಸುತ್ತದೆ, ಕೆಲವೊಮ್ಮೆ ಆಸೆಯತ್ತ. ಸ್ಥಿರವಾಗಿರುವುದು ಅದಕ್ಕೆ ಸಾಧ್ಯವಿಲ್ಲ. ಸ್ಥಿರತೆ ಎಂಬುದು ಮನಸ್ಸಿಗಿಲ್ಲ.

ಮನಸ್ಸಿನ ಎಂದೂ ನಿಲ್ಲದ ಈ ಚಲನೆಯ ಕಾರಣದಿಂದ, ಬ್ರಹ್ಮಾಂಡದ ಚಲಿಸದ, ಸ್ಥಿರವಾದ ಮೂಲಭೂತ ಸತ್ವವನ್ನು ದರ್ಶಿಸಲು ಸಾಧ್ಯವಾಗದೆ ಹೋಗುತ್ತದೆ. ಆ ಬದಲಾಗದ ಸತ್ವವೇ ಎಲ್ಲದರ ನಿಜವಾದ ಸ್ವರೂಪವಾಗಿದೆ.

ದೇವಾಲಯ ಮತ್ತು ಮಸೀದಿಗಳಿಗೆ ಹೋಗಿ ಪೂಜೆ ಸಲ್ಲಿಸಿದ ಮಾತ್ರಕ್ಕೇ ಧರ್ಮಾಚರಣೆ ಆಯಿತೆಂದಲ್ಲ, ಅದು ಪರಿಪೂರ್ಣ ಭಕ್ತಿಯೆಂದೂ ಅರ್ಥವಲ್ಲ. ಎಲ್ಲ ಜೀವಜಾಲಗಳಲ್ಲೂ ಆತ್ಮನನ್ನು, ಭಗವಂತನನ್ನು ಕಾಣಲು ಸಾಧ್ಯವಾಗಬೇಕು. ಅದೇ ನಿಜವಾದ ಭಕ್ತಿ.

ಎಲ್ಲಾ ಚರಾಚರಗಳನ್ನು ಸಂರಕ್ಷಿಸುವುದೇ ಪ್ರಕೃತಿಯ ಏಕೈಕ ಉದ್ದೇಶ. ಈ ವಿಷಯದಲ್ಲಿ ನಮಗೆ ಸಂಪೂರ್ಣ ನಂಬಿಕೆ ಇರಬೇಕು. ಏನನ್ನೂ ಹಾನಿ ಮಾಡದೆ ಬದುಕಲು, ಶಾಂತಿಯುತ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಸ್ವಂತ ಏಳಿಗೆಗಾಗಿ ಇತರರನ್ನು ನಾಶಪಡಿಸಲು ನಾವು ಮುಂದಾಗಬಾರದು.

ಇದು 21ನೇ ಶತಮಾನ. ಈ ಮಹಾಧಾರ್ಮಿಕ ಸಮ್ಮೇಳನದ ಯಶಸ್ಸಿಗಾಗಿ ಅವಿರತವಾಗಿ ಶ್ರಮಿಸಿದ ಸನ್ಯಾಸಿ ಶ್ರೇಷ್ಠರು, ಆಧ್ಯಾತ್ಮಿಕ ನೇತಾರರು ಮತ್ತು ಹಿಂದೂ ಸ್ವಾಗತ ಸಮಿತಿಯವರು, ಒಟ್ಟಾಗಿ ಈ ದೃಢ ಪ್ರತಿಜ್ಞೆ ಮಾಡಬಹುದು:

‘ದೇಶ ಮತ್ತು ಕಾಲವನ್ನು ಮೀರಿ, ಇಡೀ ಜಗತ್ತಿಗೆ ಶಾಂತಿ ಮತ್ತು ಸಾಮರಸ್ಯ ತರಲು ಮತ್ತು ಮಾನವಕುಲದ ತೊಂದರೆಗಳಿಗೆ ಸಮಾಧಾನ ನೀಡಲು ನಾವು ಶ್ರಮಿಸುತ್ತೇವೆ. ಸನಾತನ ಧರ್ಮದ ಮಹಾನ್ ಆದರ್ಶ ಅನುಷ್ಠಾನವಾಗಲಿ.’

ಪರಮ ತತ್ವ ಮತ್ತು ಜೀವನದ ಉನ್ನತ ಆದರ್ಶಗಳನ್ನು ಎಲ್ಲಾ ಯುವಕ-ಯುವತಿಯರಿಗೆ ನೀಡಲು ನಾವು ದೃಢ ಸಂಕಲ್ಪ ಮಾಡಬಹುದು. ಅವರು ಭವಿಷ್ಯದ ಅರಳುವ ಹೂವಿನ ಮೊಗ್ಗುಗಳು; ಅರಳಿ ಜಗತ್ತಿನ ಪರಿಮಳವಾಗಬೇಕಾದವರು!


ನಾವು ಜೀವನದ ಅನುಭವಗಳನ್ನು ಮೂರು ರೀತಿಯಲ್ಲಿ ಎದುರಿಸುತ್ತೇವೆ. ಬರುವ ಸಂದರ್ಭಗಳನ್ನು ಶಪಿಸುತ್ತಾ ಮುಂದೆ ಸಾಗುವುದೂ ಒಂದು ವಿಧಾನವಾಗಿದೆ.

ಪರಿಸರವನ್ನು ಬದಲಾಯಿಸುವುದರಿಂದ ಸಮಸ್ಯೆಗಳು ಕೊನೆಗೊಳ್ಳುವುದಿಲ್ಲ. ಒಬ್ಬ ಹೆಂಡತಿ ಮತ್ತು ಆಕೆಯ ಗಂಡ ಸದಾಕಾಲ ವಾದಿಸುತ್ತಿದ್ದರು. ಒಟ್ಟಿಗೆ ವಾಸಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಯಿತು. ಹೀಗಾಗಿ, ಆ ವಿವಾಹ ಬಂಧ ಮುರಿಯಿತು. ಸ್ವಲ್ಪ ದಿನಗಳ ನಂತರ ಇಬ್ಬರೂ ಬೇರೆಯವರನ್ನು ಮದುವೆಯಾದರು.

ಹೆಚ್ಚು ತಡವಾಗದೆ ಇಬ್ಬರಿಗೂ ಅರಿವಾಯಿತು – ಮೊದಲ ಹೆಂಡತಿಯೂ ಗಂಡನೂ ಬೇರೊಂದು ರೂಪದಲ್ಲಿ ಬಂದಿದ್ದಾರೆಂದು. ವ್ಯಕ್ತಿ ಬದಲಾಗಿದ್ದರು, ಆದರೆ ಮನಸ್ಸು ಬದಲಾಗಿರಲಿಲ್ಲ. ಮನಸ್ಸು ಬದಲಾಗದಿರುವವರೆಗೆ, ಕೇವಲ ಪರಿಸರವನ್ನು ಬದಲಾಯಿಸಿದ ಮಾತ್ರಕ್ಕೆ ಸಮಸ್ಯೆಗಳಿಂದ ಮುಕ್ತಿ ಸಿಗುವುದಿಲ್ಲ.

ಒಬ್ಬನಿಗೆ ಹೊಟ್ಟೆನೋವು. ಮನೆಯಲ್ಲಿರುವ ಎಲ್ಲರಿಗೂ, ’ಅಮ್ಮ ಹೊಟ್ಟೆನೋವು, ಅಪ್ಪ ಹೊಟ್ಟೆನೋವು, ಅಣ್ಣ, ಅಕ್ಕ, ಈ ಹೊಟ್ಟೆನೋವು ತಾಳಲಾರೆ’ ಎಂದು ಹೇಳುತ್ತಾ ಹೇಳುತ್ತಾ ಕೊನೆಗೆ ಹತ್ತಿರ ಕುಳಿತವರಿಗೆಲ್ಲಾ ಹೊಟ್ಟೆನೋವಾಗಲು ಶುರುವಾಯಿತು. ನಮ್ಮ ಅಶಾಂತಿಯನ್ನು ಹೇಳುತ್ತಾ ಹೇಳುತ್ತಾ ನಾವು ಇತರರ ಶಾಂತಿಯನ್ನೂ ನಾಶಮಾಡುತ್ತೇವೆ.

ಇದರ ಜೊತೆಗೆ, ನಾಲ್ಕನೆಯ ಮಾರ್ಗವೂ ಇದೆ: ಮನೋಭಾವವನ್ನು ಬದಲಾಯಿಸುವುದು. ಇದರ ಮೂಲಕ ಮಾತ್ರವೇ ನಾವು ನಿಜವಾಗಿಯೂ ಸುಖವಾಗಿರಬಹುದು. ನಮ್ಮ ಇಚ್ಛೆಗೆ ತಕ್ಕಂತೆ ಪರಿಸರವನ್ನು ಸಂಪೂರ್ಣವಾಗಿ ಬದಲಾಯಿಸುವುದು ಅಸಾಧ್ಯ. ಅನುಭವಗಳನ್ನು ಬದಲಾಯಿಸುವುದು ಸಾಧ್ಯವಿಲ್ಲ. ಆದ್ದರಿಂದ, ಪರಿಸ್ಥಿತಿಗೆ ತಕ್ಕಂತೆ ಮನೋಭಾವವನ್ನು ಹೊಂದಿಸಿಕೊಳ್ಳುವುದು ಅವಶ್ಯಕ. ಇದನ್ನು ಆಧ್ಯಾತ್ಮಿಕತೆಯ ಮೂಲಕ ಮಾತ್ರ ಸಾಧಿಸಬಹುದು.

ಇಲ್ಲಿಯೇ ಆಧ್ಯಾತ್ಮಿಕ ಶಾಸ್ತ್ರಗಳ ಪ್ರಾಮುಖ್ಯತೆ ಇರುವುದು. ಭಗವಾನ್ ಕೃಷ್ಣನು ಅರ್ಜುನನಿಗೆ ಏನನ್ನು ತೋರಿಸಿಕೊಟ್ಟನು? ಅವನು ಬದಲಾಯಿಸಿದುದು ಪರಿಸ್ಥಿತಿಯನ್ನಲ್ಲ, ಮನೋಭಾವವನ್ನು.

ಯುದ್ಧದ ಸಮಯದಲ್ಲಿ, ಭಗವಾನ್ ಬಯಸಿದ್ದರೆ ಕೌರವರನ್ನು ನಾಶಮಾಡಲು ಸುಂಟರಗಾಳಿಯನ್ನೋ,  ಪ್ರವಾಹವನ್ನೋ ತರಬಹುದಿತ್ತು. ಅಥವಾ ಬೇರೆ ಯಾವುದೇ ರೀತಿಯಲ್ಲಿ ಅವರನ್ನು ನಾಶಮಾಡಬಹುದಿತ್ತು. ಅವನು ಬಯಸಿದ್ದರೆ, ಭಗವಾನ್ ಒಬ್ಬನೇ ಪಾಂಡವರಿಗೆ ಎಲ್ಲವನ್ನೂ ಗೆದ್ದುಕೊಡಬಹುದಿತ್ತು.  ಅವನಿಗೆ ಆ ಶಕ್ತಿ ಇತ್ತು.

ಆದರೆ, ಭಗವಾನ್ ಬದಲಾಯಿಸಿದುದು ಪರಿಸರವನ್ನಲ್ಲ. ಅರ್ಜುನನಿಗೆ ಈ ಜಗತ್ತಿನ ಬಗ್ಗೆ ಇದ್ದ ಮನೋಭಾವವನ್ನು ಬದಲಾಯಿಸಿದನು. ಜೀವನದ ಸ್ವಭಾವವನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ, ಅದನ್ನು ಹೇಗೆ ಎದುರಿಸಬೇಕೆಂದು ಕಲಿಸಿದನು.

ಇಡೀ ಜಗತ್ತು ಶಾಂತಿ ಮತ್ತು ಕ್ಷೇಮವಾಗಿರಲಿ ಎಂದು ಪ್ರಾರ್ಥಿಸುವ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕು.


ಪರಿಸ್ಥಿತಿಯನ್ನು ದೂಷಿಸದೆ, ನಾವು ಮೊದಲು ಬದಲಾಯಿಸಿಕೊಳ್ಳಬೇಕಾದದ್ದು ನಮ್ಮ ಪ್ರಸ್ತುತ ಮನಸ್ಥಿತಿಯನ್ನೇ. ನಮ್ಮ ಪ್ರಾರ್ಥನೆ ಅದಕ್ಕಾಗಿಯೇ ಇರಬೇಕು.

ಒಬ್ಬ ಬಾಲಕನು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದಾನೆ: “ದೇವರೇ, ದಯವಿಟ್ಟು ಅಮೇರಿಕಾದ ರಾಜಧಾನಿಯನ್ನು ಚೀನಾ ಮಾಡು.” ಇದನ್ನು ಕೇಳಿ, ಅತ್ತ ಬಂದು ನಿಂತ ಒಬ್ಬ ವ್ಯಕ್ತಿ ಕೇಳಿದ, “ಏಕೆ ಹೀಗೆ ಪ್ರಾರ್ಥಿಸುತ್ತಿದ್ದೀಯ  ಮಗು?”

“ಪರೀಕ್ಷೆಯಲ್ಲಿ ನಾನು ಅಮೇರಿಕಾದ ರಾಜಧಾನಿ ಚೀನಾ ಅಂತ ಬರೆದಿದ್ದೆ. ನಂತರ, ಅದು ತಪ್ಪು ಎಂದು ತಿಳಿದುಬಂತು. ನನ್ನ ಉತ್ತರ ಸರಿಯಾಗಿರಲೆಂದು ಹೀಗೆ ಪ್ರಾರ್ಥಿಸುತ್ತಿದ್ದೇನೆ.” ಇದು ಆ ಬಾಲಕನ ಪ್ರತ್ಯುತ್ತರವಾಗಿತ್ತು.

ಇದು ಬಾಲಿಶ ವರ್ತನೆ. ಇದನ್ನಲ್ಲ ನಾವು ಬೆಳೆಸಬೇಕಾದುದು.  ಮಗುವಿನಲ್ಲಿರುವ ಹೃದಯ—ನಿರ್ಮಲತೆ ಯನ್ನು ಬೆಳೆಸಬೇಕು. ಶಿಶುತ್ವವು ಬುದ್ಧಿಹೀನತೆ; ಅದು ನಮ್ಮನ್ನು ಕೇವಲ ಅಪಕ್ವತೆಗೆ ಒಯ್ಯುತ್ತದೆ.

ನೀರಿನಲ್ಲಿ ಈಜುವುದನ್ನು ಕಲಿಯಲು ನೀವು ಹೋದಾಗ, ಕಲಿಸುವವನು ಯಾವಾಗಲೂ ನಿಮ್ಮೊಂದಿಗಿದ್ದರೆ, ನೀವು ತ್ವರಿತವಾಗಿ ಈಜು ಕಲಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನಾವು ನಮ್ಮ ಸ್ವಂತ ಶಕ್ತಿಯನ್ನು ಬೆಳೆಸಿಕೊಳ್ಳಬೇಕು.

ಜೀವನದ ಯಾವುದೇ ಪರಿಸ್ಥಿತಿಯನ್ನು ಜಯಿಸಲು ನಾವು ನಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳಬೇಕು. ಇದು ನಮ್ಮ ಮನೋಭಾವವನ್ನು ಬದಲಾಯಿಸುವ ಮೂಲಕ ಮಾತ್ರ ಸಾಧ್ಯ. ಇಲ್ಲದಿದ್ದರೆ, ಸನ್ನಿವೇಶಗಳನ್ನು ದೂಷಿಸುವುದರಿಂದ, ಅಥವಾ ಅವು ಬದಲಾಗದ ಕಾರಣ ಹತಾಶರಾಗುವುದರಿಂದ, ಜೀವನವನ್ನು ವ್ಯರ್ಥಗೊಳಿಸುತ್ತೇವೆ.

ಏರ್ ಕಂಡೀಷನ್ಡ್ ಕಾರುಗಳಲ್ಲಿ ಸಂಚರಿಸುವವರನ್ನು ನಾವು ನೋಡುತ್ತೇವೆ. ಮನಸ್ಸಿನ ಶಾಂತಿ ಇಲ್ಲದಿದ್ದರೆ, ಏಸಿ ಕಾರಿನಲ್ಲಿ ಪ್ರಯಾಣಿಸುವುದರಿಂದ ಏನು ಉಪಯೋಗ? ಪರಿಸರವನ್ನು ಸರಿಪಡಿಸುವುದು ಮಾತ್ರ ಸಾಕಾಗುವುದಿಲ್ಲ. ಏಸಿ ಕೊಠಡಿಯಲ್ಲಿ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುವವರು ಸಹ ಇದ್ದಾರೆ.

ಆದರೆ, ಮನೋಭಾವವನ್ನು ಸರಿಪಡಿಸಿದರೆ, ನಾವು ಯಾವುದೇ ಪರಿಸ್ಥಿತಿಯನ್ನು ನಗುಮುಖದಿಂದ ಎದುರಿಸಬಹುದು. ನಮ್ಮ ಹಿತಕ್ಕಾಗಿ ಇತರರನ್ನು ಅವಲಂಬಿಸುವ ಬದಲು, ನಾವು ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಸೂಕ್ತ. ಅದರ ಮೂಲಕ ಮಾತ್ರ ನಮಗೆ ನಿಜವಾದ ಸಮಾಧಾನ ಸಿಗುತ್ತದೆ.