ಪ್ರಶ್ನೆ: ಅಮ್ಮಾ, ನಿರಾಕಾರನಾದ ದೇವರನ್ನು ಸಾಕಾರನಾಗಿ ಆರಾಧಿಸಬೇಕಾದ ಅವಶ್ಯಕತೆಯಿದೆಯೇ ?

“ಮಕ್ಕಳೇ, ನಮ್ಮ ಸಂಸ್ಕಾರ, ಪ್ರತಿಯೊಬ್ಬ ಗೆಳೆಯನಲ್ಲಿ ನಮ್ಮ ದುಃಖಗಳನ್ನು ಹಂಚಿಕೊಂಡು, ಸುಖವನ್ನು ಅರಸೋಣ, ಎನ್ನುವಂತದ್ದು. ಅದನ್ನು ಒಂದು ವಿಶ್ವ ಸಂಕಲ್ಪವಾಗಿ ಪರಿವರ್ತಿಸುವುದು ಸಾಕಾರ ಉಪಾಸನೆಯ ಉದ್ದೇಶ.

ಒಂದು ಮಗು ಆಟವಾಡಿಕೊಂಡಿರುವಾಗ ಸ್ನೇಹಿತನು ಸ್ವಲ್ಪ ಚಿವುಟಿದರೆ, ಅಳುತ್ತಾ ಹೋಗಿ ತಾಯಿಯಲ್ಲಿ ಹೇಳುತ್ತಾನೆ. ಸ್ವಲ್ಪ ಪ್ರಾಯ ಹೆಚ್ಚಾದಾಗ, ಮನೆಯಲ್ಲಿ ಅಮ್ಮ ಹೊಡೆದದ್ದು, ಅಣ್ಣ ಬೈದದ್ದು ಎಲ್ಲಾ ಸ್ನೇಹಿತನಲ್ಲಿ ಹೇಳುತ್ತಾನೆ. ಮುಂದೆ ಪ್ರೀತಿಸುವ ಹುಡುಗಿಯಲ್ಲಿ ತನ್ನ ದುಃಖವೆಲ್ಲ ಹೇಳಿ ಸಾಂತ್ವನ ಪಡೆಯಲು ಪ್ರಯತ್ನಿಸುತ್ತಾನೆ. (ಅವಳ ದುಃಖಗಳನ್ನು ಅವನಲ್ಲಿ ಹೇಳಿಕೊಳ್ಳುತ್ತಾಳೆ.) ಆದರೆ ಆ ಕಡೆ ಈ ಕಡೆ ದುಃಖ ಹಂಚಿಕೊಂಡು ಇಮ್ಮಡಿ ದುಃಖಿತರಾಗುವುದಲ್ಲದೆ, ದುಃಖ ನಿವೃತ್ತಿ ಪಡೆಯಲು ಆಗುವುದಿಲ್ಲ. ಸಣ್ಣ ಹಾವು ದೊಡ್ಡ ಕಪ್ಪೆಯನ್ನು ನುಂಗಿ ಸಂಕಟ ಪಟ್ಟ ಹಾಗೆ, ಇಬ್ಬರೂ ಸಂಗಾತಿಗಳು ವ್ಯಥೆ ಪಡುತ್ತಾರೆ. ನಮಗೆ ಪೂರ್ತಿ ಶಾಂತಿ ನೀಡಲು ಯಾರಿಗೂ ಸಾಧ್ಯವಿಲ್ಲ. ಈ ದುಃಖದ ವಿನಿಮಯ, ವಿಶ್ವ ಸಂಕಲ್ಪವಾದ ಈಶ್ವರನೆಡೆಗೆ ಹೊರಳಿಸಿದರೆ, ಶಾಶ್ವತವಾದ ಶಾಂತಿಯು ನಮಗೆ ಲಭಿಸುವುದು. ಅವನು ನಮಗೆ ಆನಂದ ಮಾತ್ರವೇ ತರುವನು.

ನಿರಾಕಾರನಾದ ಪರಮಾತ್ಮನಲ್ಲಿ /ಈಶ್ವರನಲ್ಲಿ ಬೇಗನೇ ಪ್ರೇಮ ಮೂಡುವುದಿಲ್ಲ. ಸಾಮಾನ್ಯರಿಗೆ ನಿರಾಕಾರ ಸಾಧನೆಯಿಂದ ಬೇಗನೆ ಸಂತೃಪ್ತಿಯೆನಿಸುವುದೆಂದು ಹೇಳಲಿಕ್ಕಾಗುವುದಿಲ್ಲ. ಭಕ್ತಿಯಿಲ್ಲದ ಅದ್ವೈತ ಸಾಧನೆಯೆಂದರೆ ಬಂಡೆಕಲ್ಲನ್ನು ತಿನ್ನುವ ಹಾಗೆ. ಮಕ್ಕಳೇ, ನಿರಾಕಾರನಾದ ದೇವರು ಸಾಕಾರವಾಗಲು ಸಾಧ್ಯ; ಸರ್ವ ಶಕ್ತನಾದ ಭಗವಂತನಿಗೆ, ತನ್ನ ಭಕ್ತನಿಗಾಗಿ ರೂಪವ ತಳೆಯಲು ಇನಿತು ಕಷ್ಟವೂ ಇಲ್ಲ. ನೀರು ಮಂಜು ಗಡ್ಡೆಯಾಗಿಯೂ, ಕಡಲನೀರು ಉಪ್ಪಾಗಿಯೂ ಮಾರ್ಪಡುವುದಿಲ್ಲವೇ ? ಇದೇ ರೀತಿಯಾಗಿ, ಭಕ್ತನ ಇಚ್ಛೆಯನ್ನನುಸರಿಸಿ ಭಗವಂತನು ರೂಪ ಧರಿಸುತ್ತಾನೆ. ತನ್ನ ಇಷ್ಟ ರೂಪದಲ್ಲಿ ದೃಢ ನಂಬಿಕೆಯಿದ್ದರೆ, ಗುರಿ ಮುಟ್ಟಲು ಸಾಧ್ಯವಿದೆ. ನಮ್ಮ ಆತ್ಮಸ್ವರೂಪವೇ ದೇವರು ಎಂದು ಮಕ್ಕಳು ಭಾವಿಸಬೇಕು.ಎಲ್ಲಾ ರೂಪಗಳೂ,ಒಂದರ ಬೇರೆ ಬೇರೆ ಭಾಗಗಳೆಂದುಕೊಂಡು ಪ್ರಾರ್ಥಿಸಬೇಕು. ಹಲವು ಹೊಂಡಗಳನ್ನು ತೋಡುವ ಸಮಯದಲ್ಲಿ ಒಂದು ಹೊಂಡ ತೋಡಿರಿ. ಆಗ ನೀರಡಿಕೆ ತಣಿಸಲು ನೀರು ಬೇಗನೆ ಸಿಗುವುದು. ಫ್ಯಾನ್ನಲ್ಲಿ, ಫ್ರಿಜ್ನಲ್ಲಿ ಮತ್ತು ಬಲ್ಬ್ನಲ್ಲಿ ಬರುವ ಕರೆಂಟ್ ಒಂದಲ್ಲವೇ ? ಅದೇ ರೀತಿ, ದೇವರೊಂದೇ; ಉಪಾಧಿಯನ್ನನುಸರಿಸಿ ಪ್ರವರ್ತಿಸುತ್ತಾನೆ ಎಂದಷ್ಟೇ ವಿಷಯ. ದೋಣಿ ಹತ್ತಿದ ಮೇಲೆ ಕಡವಿನಲ್ಲಿ ಇಳಿದ ಹಾಗೆ, ಬಸ್ಸು ಹತ್ತಿ ಮನೆಯ ಹತ್ತಿರದ ಸ್ಟಾಪ್ನಲ್ಲಿಳಿದ ಹಾಗೆ, ದೇವರ ಸಂಕಲ್ಪವು ಸಚ್ಚಿದಾನಂದ ಸಾಗರದ ತೀರದವರೆಗೆ ತಲಪಿಸುವುದು.

ಯಾವ ದುಃಖವನ್ನೂ ಮಕ್ಕಳು ಇನ್ನೊಬ್ಬರಲ್ಲಿ ಹೇಳಿ ಇಮ್ಮಡಿ ದುಃಖ ಪಡೆಯದೆ, ಈಶ್ವರನಿಗೆ ಸಮರ್ಪಿಸಿ ಪರಿಹಾರ (ನಿವೃತ್ತಿ; ಬಿಡುಗಡೆ; ಮೋಕ್ಷ ಮಾರ್ಗ) ಪಡೆಯಿರಿ.

ಒಂದು ಸಲ ಶಿವ ಪಾರ್ವತಿಯರು ಒಟ್ಟಿಗೆ ಕುಳಿತುಕೊಂಡಿದ್ದರು. ಥಟ್ಟನೆ ಪರಮಶಿವನು ಎದ್ದು ಹೋಗುವುದು ಕಂಡಿತು. ಹೋದೊಡನೆ ಹಿಂತಿರುಗಿ ಬಂದದ್ದೂ ಆಯಿತು. “ಅದೇನು ಇಷ್ಟು ಬೇಗ ಹಿಂತಿರುಗಿ ಬಂದದ್ದು” ಎಂದು ಪಾರ್ವತಿ ಪರಮಶಿವನಲ್ಲಿ ವಿಚಾರಿಸಿದಳು. “ನನ್ನ ಒಬ್ಬ ಭಕ್ತ ತನ್ನ ಏನು ದುಃಖವಿದ್ದರೂ ನನ್ನಲ್ಲಿ ಮಾತ್ರ ಹೇಳುತ್ತಿದ್ದ. ಅವನ ಪತ್ನಿಯಲ್ಲಿ, ಮಕ್ಕಳಲ್ಲಿ, ಅಥವಾ ತಾಯಿಯಲ್ಲಿ ಯಾರಲ್ಲೂ ಹೇಳುತ್ತಿರಲಿಲ್ಲ. ಇವತ್ತು ಎಲ್ಲೋ ಹೋಗುವ ಸಮಯ ದಾರಿಯಲ್ಲಿ, ಯಾರೋ ಕದ್ದಿದ್ದಕ್ಕೆ, ತಪ್ಪು ತಿಳುವಳಿಕೆಯಿಂದ ಜನರು ಅವನನ್ನು ಹಿಡಿದು ಹೊಡೆಯ ತೊಡಗಿದರು. ನಾನು ಮುಟ್ಟಿದಾಗ, ಜೊತೆಯಲ್ಲಿರುವ ಗೆಳೆಯನಲ್ಲಿ ಹೇಳುತ್ತಿದ್ದ, ’ನಾನು ಮಾಡದ ತಪ್ಪಿಗೆ ಇವರು ನನ್ನನ್ನು ಹೊಡೆಯುತ್ತಿದ್ದಾರೆ. ಇವರನ್ನು ಎದುರಿಸಲು, ನೀನು ಕೂಡಾ ಸಹಾಯ ಮಾಡು.’ ಎಂದು. ಆಗ ನನ್ನ ಅವಶ್ಯಕತೆ ಇಲ್ಲವಲ್ಲ; ಹಾಗಾಗಿ ನಾನು ಮರಳಿ ಬಂದೆ”

ನಾವು ಬೇರೆಯವರ ಸಹಾಯವನ್ನು ಅವಲಂಬಿಸುವುದಾದರೆ ದೇವರು ನಮ್ಮ ಬಳಿ ಬರಲೊಲ್ಲನು. ದೇವರಿಗೆ ಮಾತ್ರ ಶರಣಾಗಿರಿ. ಅವನು ನಮ್ಮನ್ನು ಕಾಪಾಡುವನು. ಸಂಶಯವಿಲ್ಲ. ಭಕ್ತನಿಗಾಗಿ ಅವನು ಜನ್ಮ ತಾಳುವುದು. ’ದೇವರು ಕರುಣೆಯಿಲ್ಲದವನು; ದೇವರನ್ನು ಕಾಣಲು ಸಾಧ್ಯವಿಲ್ಲ’ ವೆಂದು ಯಾವತ್ತೂ ಮಕ್ಕಳು ಹೇಳಬಾರದು. ಅವನು ಯಾವಾಗಲೂ ಎರಡೂ ಕೈಗಳನ್ನು ಚಾಚಿ ’ಮಕ್ಕಳೇ, ಮಕ್ಕಳೇ’ ಎಂದು ಕರೆಯುತ್ತಾನೆ. ಆದರೆ ನಾವು ಆ ಕಡೆ ನೋಡದೆ, ಕನಸು ಕಾಣುತ್ತಾ, ಮೂರ್ಛೆ ಹೋಗಿದ್ದೇವೆ. ಆದರೂ, ದೇವರನ್ನು ದೂರುತ್ತೇವೆ. ಚೆನ್ನಾಗಿ ಓದುವ ಮಕ್ಕಳಿಗೆ ಗವರ್ನ್ಮೆಂಟು ವಿದ್ಯಾರ್ಥಿವೇತನ ಕೊಡುತ್ತದೆ. ಓದದ ಮಕ್ಕಳು ಗವರ್ನ್ಮೆಂಟು ತಪ್ಪು ಎಂದು ಹೇಳಲು ಸಾಧ್ಯವೇ ? ಭಗವಂತನು ಎಲ್ಲ ಕೊಡಲು ಸಿದ್ಧ. ನಾವು ಅರ್ಹರಾಗದೆ, ಭಗವಂತನ ಮೇಲೆ ಅಪವಾದ ಹೊರಿಸಿ ಫಲವಿದೆಯೇ ?

ಬೆಣ್ಣೆ ಮತ್ತು ತುಪ್ಪದ ನಡುವೆ ವ್ಯತ್ಯಾಸವಿಲ್ಲ. ಮಂಜುಗಡ್ಡೆ ಮತ್ತು ನೀರಿನ ನಡುವೆಯೂ ವ್ಯತ್ಯಾಸವಿಲ್ಲ. ನಿರಾಕಾರನಾದ ಈಶ್ವರನೂ, ಸಾಕಾರನಾದ ಈಶ್ವರನೂ ಒಂದೇ ಸತ್ಯದ ಎರಡು ರೂಪಗಳು ಮಾತ್ರ.”

ಪ್ರಶ್ನೆ: ಅಮ್ಮಾ, ದೇವಸ್ಥಾನಗಳಲ್ಲಿ ಹರಕೆ ಮತ್ತು ಹಲವು ಹೆಸರುಗಳಿಂದ ಎಷ್ಟೋ ಹಣ ಖರ್ಚು ಮಾಡುತ್ತಾರೆ. ದೇವರಿಗ್ಯಾಕೆ ಹಣ ಅಮ್ಮಾ ?

“ಮಕ್ಕಳೇ, ದೇವರಿಗೆ ನಮ್ಮಿಂದ ಏನೂ ಬೇಡ. ಲೈಟ್‌ಗೆ ಸೀಮೆ ಎಣ್ಣೆ ದೀಪದ ಅವಶ್ಯಕತೆಯಿಲ್ಲ. ದೇವರು ಸೂರ್ಯನಂತೆ. ಅವನು ಸರ್ವ ಚರಾಚರಗಳಿಗೆ ಸಮನಾಗಿ ಪ್ರಕಾಶ ಬೀರುತ್ತಿದ್ದಾನೆ. ಎಲ್ಲವನ್ನೂ ಬೆಳಗಿಸುವ ಅವನಿಗೆ ಹರಿಕೆಯಾಗಿ ಎಣ್ಣೆ ಸಲ್ಲಿಸುತ್ತೇವಂದೂ, ದೀಪ ಹಚ್ಚುತ್ತೇವೆಂದೆಲ್ಲ ಹೇಳುತ್ತೇವೆ ! ಇದು ನಮ್ಮ ಅಜ್ಞಾನದ ಫಲ. ಹಗಲು ಸಮಯದಲ್ಲಿ ಕೈಯ್ಯಲ್ಲೊಂದು ಮೇಣದ ಬತ್ತಿ ಉರಿಸಿ ಹಿಡಿದುಕೊಂಡು, “ಸೂರ್ಯದೇವನೇ, ಇಗೋ ಬೆಳಕು. ನೀನು ಕಣ್ಣು ಕಂಡು, ಸರಿಯಾಗಿ ನಡೆದುಕೊ” ಎಂದು ಹೇಳಿದಂತೆ ಇದು.

ಮಕ್ಕಳೇ, ದೇವರು ಸದಾ ಕೃಪೆ ಸುರಿಸುತ್ತಿರುತ್ತಾನೆ. ಆದರೆ ಅದನ್ನು ಸ್ವೀಕರಿಸಲು ನಾವು ಸಿದ್ಧರಾಗಿಲ್ಲ. ಹರಿಯುತ್ತಿರುವ ನದಿಗೆ ಒಡ್ಡು ಕಟ್ಟಿ ನಾವು ದೂರುತ್ತೇವೆ, “ನೋಡಲಿಲ್ಲವೇ, ಈ ನದಿ ನನಗೆ ನೀರು ಕೊಡುತ್ತಿಲ್ಲ” ಎಂದು. ಒಡ್ಡು ಕಟ್ಟಿದ ವಿಷಯ ನಾವು ಮರೆತು ಬಿಡುತ್ತೇವೆ. ಆದರೆ ನದಿಯ ಮೇಲೆ ಅಪವಾದ ಹೊರಿಸುತ್ತೇವೆ. ಇದೇ ರೀತಿಯಾಗಿದೆ, ದೇವರನ್ನು ಮೇಲೆ ಹಲವು ವಿಷಯಗಳಲ್ಲಿ ದೂರುವುದು. ಯಥಾರ್ಥದಲ್ಲಿ, ಅಜ್ಞಾನವೆಂಬ ಒಡ್ಡು ಕಟ್ಟಿ, ದೇವರ ಕೃಪೆಯೆನ್ನುವ ಜಲ ಪ್ರವಾಹವನ್ನು ಅಡ್ಡಗಟ್ಟಿ ನಿಲ್ಲಿಸಿದ್ದೇವೆ. ಇದರಿಯದೆ ನಾವು ದೇವರನ್ನು ದೂರುತ್ತೇವೆ.

ಮಕ್ಕಳೇ, ಹರಕೆ ಮುಂತಾದವುಗಳನ್ನು ನಮ್ಮ ಸಂಕಲ್ಪಕ್ಕಾಗಿ ಮಾಡುತ್ತೇವೆ. ದೇವರಿಗೆ ಅದರದ್ದೇನೂ ಅವಶ್ಯಕತೆಯಿಲ್ಲ. ನಮ್ಮ ಕೈಯ್ಯಿಂದ ದೇವರಿಗೆ ಏನೂ ಬೇಡ.”

ಪ್ರಶ್ನೆ: ಹಾಗಾದರೆ ಮತ್ತೆ ಕ್ಷೇತ್ರಗಳು ಯಾತಕ್ಕೆ ? ಮನೋಹರವಾದ ಮೂರ್ತಿಯನ್ನು ಕಡೆದ ಶಿಲ್ಪಿಯನ್ನಲ್ಲವೇ ಆರಾಧಿಸ ಬೇಕಾಗಿರುವುದು ?

“ಪ್ರೀತಿಯ ಮಕ್ಕಳೇ, ತೀರಿ ಹೋದ ನಮ್ಮ ತಂದೆಯ ಚಿತ್ರ ಕಾಣುವಾಗ ನೆನೆಯುವುವುದು, ಅದನ್ನು ಬರೆದವನೋ, ಬಣ್ಣವೋ ?
ನಮ್ಮ ತಂದೆಯದ್ದು. ಇದೇ ರೀತಿ ಆ ಮೂರ್ತಿ ಕಾಣುವಾಗ ನಮ್ಮ ನಿಜವಾದ ಸೃಷ್ಟಿಕರ್ತನನ್ನು ನೆನೆಯುತ್ತೇವೆ. ಕೃಷ್ಣನ ಮೂರ್ತಿಯನ್ನು ನೋಡುವಾಗ ಸ್ಮರಿಸುವುದು ಶ್ರೀ ಕೃಷ್ಣನನ್ನು. ಅಲ್ಲದೆ ಬರೇ ಕಾರ್ಗಲ್ಲಿನ ಶಿಲ್ಪವನ್ನಲ್ಲ ಕಾಣುವುದು. ಕೃತಕ ಸೇಬನ್ನು ಕಾಣುವಾಗ ನಿಜವಾದ ಸೇಬು ನೆನಪಾದ ಹಾಗೆ. ಅಜ್ಞಾನದಲ್ಲಿ ಬದುಕುತ್ತಿರುವ ಕಾರಣ ನಮಗೆ ಇದೆಲ್ಲ ಅಗತ್ಯ. ”

ಪ್ರಶ್ನೆ: ಅದಕ್ಕೆ ದೇವಸ್ಥಾನದ ಅವಶ್ಯಕತೆಯಿದೆಯೇ ?

“ಚಿಕ್ಕ ಮಕ್ಕಳು ಒಂಟೆ, ಓತಿ, ಇತ್ಯಾದಿಗಳ ಚಿತ್ರ ನೋಡಿ ಕಲಿಯುತ್ತಾರೆ. ಆ ಚಿತ್ರಗಳು ಅವನು ಕಲಿಯುವುದಕ್ಕೆ ಸಹಾಯವಾಗುತ್ತವೆ. ಅದರ ಕುರಿತು ಅವನಿಗೊಂದು ರೂಪವನ್ನೂ ಒದಗಿಸುತ್ತದೆ. ಆದರೆ ವಯಸ್ಸಾದಾಗ ಅದು ಬರೇ ಚಿತ್ರವೆಂದು ಅವನಿಗೆ ಅರ್ಥವಾಗುತ್ತದೆ. ಇಂದು ಅವನ ಎಳೆಯ ಬುದ್ಧಿಗೆ ಈ ಚಿತ್ರಗಳ ಅವಶ್ಯಕತೆಯಿದೆ.”

ಪ್ರಶ್ನೆ: ದೇವಸ್ಥಾನಗಳಲ್ಲಿ ನರಬಲಿ ಕೊಡುತ್ತಿದ್ದದ್ದು ಏತಕ್ಕಾಗಿ ?

“ಮಕ್ಕಳೇ, ಅಂದಿನ ಜನಗಳ ಅಜ್ಞಾನವು ಅವರನ್ನು ಅವರನ್ನು ಆ ರೀತಿ ಮಾಡಲು ಪ್ರೇರೇಪಿಸಿದ್ದು. ನರಬಲಿ ಕೊಟ್ಟರೆ ದೇವರು ಸುಪ್ರೀತನಾಗುತ್ತಾನೆ ಎಂದವರು ನಂಬಿದರು. ಶಾಸ್ತ್ರಗಳಲ್ಲಿ ಹೇಳಿದ ವಿಷಯಗಳನ್ನು ಅವರು ತಪ್ಪು ತಿಳಿದುಕೊಂಡಕಾರಣ ಹಾಗೆಲ್ಲ ಮಾಡಿದ್ದು. ಇವತ್ತಿನ ಜಗತ್ತನ್ನೆ ನೋಡಿರಿ. ರಾಜಕೀಯದ ಹೆಸರಿನಲ್ಲಿ ಎಷ್ಟೊಂದು ರಕ್ತ ಹರಿಯುತ್ತಿದೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರಿದರೆ ಕೊಲ್ಲುವುದು, ಪಕ್ಷದವರು ತಮ್ಮೊಳಗೆ ಪರಸ್ಪರ ಹೊಡೆಯುವುದು, ಬಡಿಯುವುದು, ಇರಿಯುವುದು – ಹೀಗೆ ಏನೆಲ್ಲ ಕೋಲಾಹಲ !

ಸತ್ಯದಲ್ಲಿ, ಯಾವುದಾದರೂ ರಾಜಕೀಯ ಪಕ್ಷದ ನಿಯಮಾವಳಿಯಲ್ಲಿ ಅನಗತ್ಯ ಕೊಲ್ಲುವುದು, ಕೊಲೆ ಮಾಡಿಸುವುದು ಹೇಳಿದೆಯೇ ? ಬರೆದಿಟ್ಟಿರುವುದೂ, ಭಾಷಣದಲ್ಲಿ ಹೇಳುವುದೂ ಒಳ್ಳೆ ವಿಷಯಗಳು, ಆದರೆ ಮಾಡುವುದು ಮತ್ತೊಂದು. ಈ ರೀತಿ ಕೆಲವು ಹೆಡ್ಡರು ಅವತ್ತೂ ಇದ್ದರು. ಅಂಧ ಭಕ್ತಿಯೂ, ನಂಬಿಕೆಯೂ ಅವರನ್ನು ಹಾಗೆಲ್ಲ ಮಾಡಲು ಪ್ರೇರೇಪಿಸಿತು.”

ಪ್ರಶ್ನೆ: ಇವರಿಗೆಲ್ಲ ಪಾಪ ತಗಲುದಿಲ್ಲವೇ, ಅಮ್ಮಾ ?

“ಮಕ್ಕಳೇ, ವಿಶ್ವ ಸಂಕಲ್ಪದಿಂದಾಗಿದ್ದರೆ ಪಾಪವಿಲ್ಲ. ಸ್ವಾರ್ಥದಿಂದಾಗಿದ್ದರೆ ಪಾಪ ಉಂಟು. ಒಂದು ಕಡೆ ಇಬ್ಬರು ಬ್ರಾಹ್ಮಣರಿದ್ದರು. ಅವರಿಬ್ಬರನ್ನೂ ಒಂದೇ ರೋಗ ಬಾಧಿಸುತ್ತದೆ.ಮೀನು ತಿಂದರೆಯೇ ರೋಗ ಗುಣವಾಗುವುದು ಎಂದು ಡಾಕ್ಟರು ಹೇಳಿದರು. ಇಬ್ಬರೂ ಶುದ್ಧ ಸಸ್ಯಾಹಾರ ಉಂಡು ಅಭ್ಯಾಸವಾದವರು. ಅವರಿಗೆ ಗೊಂದಲಕ್ಕಿಟ್ಟುಕೊಂಡಿತು. ಆದರೆ ತಾನು ಸತ್ತು ಹೋದರೆ ಪತ್ನಿಯ ಹಾಗೂ ಮಕ್ಕಳ ಸ್ಥಿತಿಯೇನು ಎಂದು ಆಲೋಚಿಸಿ, ಮತ್ತು ಬಂಧು ಮಿತ್ರಾದಿಗಳ ನಿರ್ಬಂಧಕ್ಕೆ ಮಣಿದು, ಮೊದಲಿನವನು ಮೀನು ತಿನ್ನುತ್ತಾನೆ; ಅವನ ರೋಗ ಗುಣವಾಗುತ್ತದೆ. ಆದರೆ ಪಾಪಭಯದಿಂದ ಎರಡನೆಯವನು ಮೀನು ತಿನ್ನಲಿಲ್ಲ; ಅವನು ಸತ್ತು ಹೋದ. ಅವನ ಕುಟುಂಬ ಅನಾಥವಾಯಿತು, ಅವರು ಪೂರ್ತಿ ಕಷ್ಟಕ್ಕೀಡಾದರು.

ಮಕ್ಕಳೇ, ಇಲ್ಲಿ ಮೊದಲನೆಯವನು ಮೀನು ಸಾಯಿಸಿ ತಿಂದ ಕಾರಣ ಒಂದು ಕುಟುಂಬವು ಸಂಪೂರ್ಣವಾಗಿ ಬಚಾವಾಯಿತು. ಇದು ಹಿಂಸೆಯಲ್ಲ; ನಿಶ್ಚಿತವಾಗಿಯೂ ಅಲ್ಲ. ಹಾಗೆ ಮಾಡಿದ ಕಾರಣ ಅವನ ಹೆಂಡತಿ ಮಕ್ಕಳನ್ನು ರಕ್ಷಿಸಲು ಅವನಿಗೆ ಸಾಧ್ಯವಾಯಿತು. ತದ್ವಿರುದ್ಧವಾಗಿ, ಎರಡನೆಯವನು ಮೀನು ತಿನ್ನದಿದ್ದ ಕಾರಣ, ಅವನ ಹೆಂಡತಿಗೂ ಮಕ್ಕಳಿಗೂ ಯಾರೂ ಇಲ್ಲದಂತಾಯಿತು. ಒಂದು ಕುಟುಂಬವೆಂದರೆ ಒಂದೋ ಎರಡೋ ಮೀನಿಗಿಂತ ಎಷ್ಟೋ ದೊಡ್ಡದು. ಸೈನಿಕರು ದೇಶದ ಸಲುವಾಗಿ ಶತ್ರು ಪಕ್ಷದ ಎಷ್ಟೋ ಜನರನ್ನು ಕೊಲ್ಲುತ್ತಾರೆ. ಅದು ಅವರ ಕರ್ತವ್ಯ. ಮನೆ ಕಟ್ಟಿಸಲು ನಾವು ಮರಗಳನ್ನು ಕಡಿದು ತೆಗೆಯುವುದಿಲ್ಲವೇ ? ಇವು ಯಾವುವೂ ಸ್ವಾರ್ಥದಲ್ಲಿ ಸೇರ್ಪಡೆಯಾಗುವುದಿಲ್ಲ. ಪ್ರತೀಕಾರ ಬುದ್ಧಿಯೂ ರಾಗದ್ವೇಷಗಳೂ ಒಳಗಿಟ್ಟುಕೊಂಡು ನಡೆದುಕೊಳ್ಳುವಾಗ ಪಾಪ ಉಂಟಾಗುತ್ತದೆ.”

ಪ್ರಶ್ನೆ: ನಮ್ಮ ದೇವಸ್ಥಾನಗಳಲ್ಲಿ ನೆಲೆಯಾಗಿದ್ದ ಪವಿತ್ರತೆ ನಷ್ಟವಾಗಲು ಕಾರಣವೇನು ?

“ಮಕ್ಕಳೇ, ದೇವಸ್ಥಾನಗಳಲ್ಲಿ ಉತ್ಸವದ ಹೆಸರು ಹೇಳಿ ಹಣ ವಸೂಲು ಮಾಡಿ, ಮಟ್ಟತಗ್ಗಿದ ಕಾರ್ಯಕ್ರಮವಲ್ಲವೇ ನಡೆಸುವುದು ? ಇದು ಕ್ಷೇತ್ರದ ವಾತಾವರಣವನ್ನು ಮಲಿನಗೊಳಿಸುವುದು. ಜನರಲ್ಲಿ ಭಕ್ತಿ, ಒಳ್ಳೆಯ ವಿಚಾರಗಳನ್ನು ಬೆಳೆಸುವ ಬದಲು, ಈ ತರವಾದ ಕಾರ್ಯಕ್ರಮಗಳು, ಕೊಳಕು ವಿಚಾರಗಳನ್ನು, ಭಾವೋದ್ರೇಕಗಳನ್ನು ಉಂಟು ಮಾಡುತ್ತವೆ. ಈಶ್ವರನ ಹೆಸರಿನಲ್ಲಿ ಏನೆಲ್ಲ ತೋರಿಸುತ್ತಾರೆ. ಉತ್ಸವಕ್ಕೆಂದು ಹಣ ವಸೂಲು ಮಾಡಿ, ಹೆಂಡ ಕುಡಿದು ಹೊಡೆದಾಟ ಬಡಿದಾಟ ಮಾಡುತ್ತಾರೆ. ದೇವಳದ ಪರಿಸರದಲ್ಲಿ ಲೌಕಿಕ ವಾಸನೆಗಳನ್ನು ಹೊಡೆದೆಬ್ಬಿಸುವ ನಾಟಕ, ಹರಿಕಥೆ, ಡ್ಯಾನ್ಸು ಮುಂತಾದುವೆಲ್ಲ ಪ್ರದರ್ಶಿಸುತ್ತಾರೆ. ಅದೆಲ್ಲವನ್ನು ನೋಡುವವರ ಮನಸ್ಸಿನಲ್ಲಿ ಕೊಳಕು ಭಾವನೆಗಳು ಹುಟ್ಟುತ್ತವೆ. ಸದ್ಚಿಂತನೆಗಳನ್ನು ಜಾಗೃತಗೊಳಿಸಬೇಕಾದ ಎಳೆವಯಸ್ಸಿನಲ್ಲಿ, ಹೀಗಿರುವ ಕಾರ್ಯಕ್ರಮಗಳು ಅವರನ್ನು ದಾರಿ ತಪ್ಪಲು ಪ್ರೇರೇಪಿಸುತ್ತದೆ. ಈ ವಿಚಾರ ತರಂಗಗಳು ದೇವಸ್ಥಾನದ ವಾತಾವರಣವನ್ನು ಕಲುಷಿತಗೊಳಿಸುತ್ತವೆ.

ಮಕ್ಕಳೇ, ನಾವೇ ನಮ್ಮನ್ನು ನಾಶ ಮಾಡುತ್ತಿದ್ದೇವೆ. ಮೊದಲು ನಾವು ಒಳ್ಳೆಯವರಾಗಬೇಕು. ದೇವಸ್ಥಾನದ ಶುದ್ಧತೆಯನ್ನು ಕಾಯ್ದುಕೊಳ್ಳಲು ನಾವು ಜಾಗ್ರತೆ ವಹಿಸಬೇಕು. ದೇವಸ್ಥಾನಕ್ಕೆ ಬಂದಿರುವವರಲ್ಲಿ ಭಕ್ತಿ ಮತ್ತು ವಿಶ್ವಾಸ ಬೆಳೆಸಲು ಅನುಕೂಲವಾಗುವ – ದೈವಿಕವಾದ – ಕಲೆಗಳನ್ನು ಮಾತ್ರವೇ ಅಲ್ಲಿ ಪ್ರದರ್ಶಿಸಬೇಕು. ಪೂಜಾದಿಗಳನ್ನು ತಪ್ಪದೆ ನಡೆಸಬೇಕು. ಕ್ಷೇತ್ರ ಪರಿಸರವನ್ನು ಅಶುದ್ಧ ಮಾಡಿಟ್ಟು, ದೇವತೆಗಳನ್ನು ದೂರಿ ಪ್ರಯೋಜನವಿಲ್ಲ. ಹಿಂದೆಲ್ಲ ಕ್ಷೇತ್ರಗಳಲ್ಲಿ ಪುರಾಣ ಪಾರಾಯಣ, ಧ್ಯಾನ, ಯೋಗಾಭ್ಯಾಸ, ಮುಂತಾದವುಗಳ ಪರಿಪಾಠವಿತ್ತು. ಅಂದಿನ ಜನರಲ್ಲಿ ಭಕ್ತಿ, ವಿಶ್ವಾಸಗಳಿದ್ದವು. ಅಂದು ಉತ್ಸವದ ಕಾರ್ಯಕ್ರಮವಾಗಿ ಪ್ರಸ್ತುತ ಪಡಿಸುತ್ತಿದ್ದದ್ದು ದೇವರ ಕಥೆಗಳಾಗಿತ್ತು.

ಮಕ್ಕಳೇ, ಉತ್ಸವಕ್ಕೆಂದು ಹೇಳಿ ಜನಗಳಿದ ವಸೂಲು ಮಾಡಿದ ಈ ಹಣದಿಂದ ನಮಗೆ ಎಷ್ಟೆಲ್ಲಾ ಒಳ್ಳೆ ಕೆಲಸಗಳನ್ನು ಮಾಡಬಹುದು. ನಮ್ಮ ಹಳ್ಳಿಯಲ್ಲಿ ಮನೆಯಿಲ್ಲದೆ ಕಷ್ಟಪಡುತ್ತಿರುವ ಎಷ್ಟೋ ಜನರಿದ್ದಾರೆ. ಅವರಿಗೆ ಮನೆ ಕಟ್ಟಿಸಿ ಕೊಡಬಹುದು. ಅನ್ನ, ವಸ್ತ್ರ ಖರೀದಿಸಿ, ದೀನರಿಗೆ ದಾನವಾಗಿ ಕೊಡಬಹುದು. ಮದುವೆ ಮಾಡಿಸಲು ಸಾಧ್ಯವಾಗದಿರುವ ಮನೆಯವರಿಗೆ ಸಹಾಯ ನೀಡಬಹುದು. ಧರ್ಮಗ್ರಂಥಗಳನ್ನು ಅಚ್ಚು ಹಾಕಿಸಿ ಧರ್ಮಾರ್ಥ ವಿತರಣೆ ಮಾಡಬಹುದು. ಎಳೆ ಮಕ್ಕಳಿಗೆ ಅದನ್ನು ಕಲಿಸಬಹುದು. ಅನಾಥಾಲಯಗಳನ್ನು ಕಟ್ಟಿಸಬಹುದು. ಯಾರೂ ಗತಿಯಿಲ್ಲದ ಕೂಸುಗಳನ್ನು ಒಳ್ಳೆಯ ಸಂಸ್ಕಾರ ಕೊಟ್ಟು ಅಲ್ಲಿ ಬೆಳೆಸಬಹುದು. ಭವಿಷ್ಯದಲ್ಲಿ ಅನಾಥರು ಇರುವುದಿಲ್ಲ. ನೇರವಾಗಿಯಲ್ಲ: ಇದು ಜನರ ಐಕ್ಯತೆಗೂ ನೆರವಾಗುವುದು.

ಮಕ್ಕಳೇ, ಕ್ರಿಶ್ಚಿಯನ್ನರನ್ನೂ, ಮುಸಲ್ಮಾನರನ್ನೂ, ಇನ್ನುಳಿದವರನ್ನೂ ನೋಡಿ ಕಲಿಯಿರಿ. ಅವರು ಎಷ್ಟೆಲ್ಲ ಒಳ್ಳೇ ಕೆಲಸಗಳನ್ನು ಮಾಡುತ್ತಿದ್ದಾರೆ ! ಅನಾಥಾಲಯಗಳನ್ನೂ ಶಾಲೆಗಳನ್ನೂ ಕಟ್ಟಿಸಿ, ಅನಾಥಾಲಯದ ಮಕ್ಕಳಿಗೆ ಓದಿಸುತ್ತಾರೆ. ಅವರಿಗೆ ಬೇಕಾದ್ದನ್ನು ಮಾಡಿ ಕೊಡುತ್ತಾರೆ. ಅವರು ಕೂಸುಗಳಿಗೆ ಧರ್ಮಗ್ರಂಥಗಳನ್ನು ಕಲಿಸುತ್ತಾರೆ. ಮಕ್ಕಳೇ, ಎಲ್ಲಾದರೂ ಚರ್ಚು ಅಥವಾ ಮಸೀದಿ ಒಡೆದು ಕುಸಿದು ಬಿದ್ದಿರುವುದನ್ನು ನೀವು ಕಂಡಿದ್ದೀರಾ ? ಇಲ್ಲ. ಆದರೆ ಹಿಂದುಗಳ ಕ್ಷೇತ್ರಗಳನ್ನು ನೋಡಿ. ನೋಡಿಕೊಳ್ಳಲೂ, ಕಾಣಲೂ ಯಾರೂ ಇಲ್ಲದ ಅನೇಕ ಕ್ಷೇತ್ರಗಳು ಬಿದ್ದುಕೊಂಡಿವೆ. ದೊಡ್ಡ ದೇವಸ್ಥಾನಗಳನ್ನು ದೇವಸ್ವಂ ಬೋರ್ಡ್* ಆಧೀನಕ್ಕೆ ತೆಗೆದುಕೊಳ್ಳುತ್ತದೆ. foot note: (ಕೇರಳದಲ್ಲಿ ಹೆಚ್ಚಿನ ದೇವಸ್ಥಾನಗಳು ಹಾಗೂ ಹೆಚ್ಚು ದೊಡ್ಡ ದೇವಸ್ಥಾನಗಳು ಕೇರಳ ಸರಕಾರದ ವಶದಲ್ಲಿದೆ ಹಾಗೂ ಅವನ್ನು ಮಾತ್ರ ಸರಕಾರದ ’ದೇವಸ್ವಂ ಬೋರ್ಡ್’ ನಡೆಸುತ್ತದೆ.) ಅವುಗಳಿಂದ ವರಮಾನ ಬರುತ್ತದಲ್ಲವೇ ? ಸಣ್ಣ ದೇವಸ್ಥಾನಗಳತ್ತ ಅವರು ತಿರುಗಿ ಸಹ ನೋಡುವುದಿಲ್ಲ.

ಮಕ್ಕಳೇ, ದೇವಸ್ಥಾನಗಳ ಪುನರುದ್ಧಾರಕ್ಕೆ ಹಾಗೂ ಅಲ್ಲಿಯ ಉತ್ಸವದಲ್ಲಿ ದೈವಿಕ ಕಲೆಗಳನ್ನು ಪ್ರಸ್ತುತ ಪಡಿಸುವುದರ ಕುರಿತು ವಿಶೇಷ ಗಮನ ಕೊಡಬೇಕು. ಐಕ್ಯತೆಯಿಂದ ನಾವಾಗಿಯೇ ಕ್ಷೇತ್ರಗಳನ್ನು ಸಮರ್ಪಕವಾಗಿ ಸಂರಕ್ಷಿಸಬೇಕು. ಅದರ ಪವಿತ್ರತೆಯನ್ನು ಕಾಪಾಡಬೇಕು. ಇಲ್ಲದಿದ್ದರೆ ನಮ್ಮ ಸಂಸ್ಕಾರದ ಅಧಃಪತನವಾದೀತು.

ಕೆಲಸಗಳನ್ನೆಲ್ಲ ಮಾಡಲಿಕ್ಕೆ ಯಂತ್ರಗಳನ್ನು ಕಂಡು ಹಿಡಿದಿರುವುದರಿಂದ ಇವತ್ತು ಮನುಷ್ಯನಿಗೆ ಒಂದು ಗಂಟೆಯಷ್ಟು ಕೂಡಾ ಕೆಲಸವಿಲ್ಲ. ಸಮಯ ಪೂರ್ತಿ ಮನಸ್ಸು ಬಣಗುಟ್ಟುತ್ತಿರುತ್ತದೆ. ದುರಾಲೋಚನೆಗಳೂ ದುಷ್ಪ್ರವೃತ್ತಿಗಳೂ ಹುಟ್ಟುವುದು ಆಗ. ನಿಮಗೆ ಸಿಗುವ ಸಮಯ ಪೋಲು ಮಾಡದೆ ಸಾಧನೆ ಮಾಡಿದರೆ ಮನಸ್ಸು ಭ್ರಷ್ಟವಾಗುವುದಿಲ್ಲ; ಅನೇಕರಿಗೆ ಸಹಾಯಕವಾಗುವುದು.

ಸಯನ್ಸ್ ಈಗ ಕಂಡು ಹಿಡಿದಿರುವಂಥವುಗಳೋ, ಇನ್ನು ಕಂಡು ಹಿಡಿಯಲಿರುವಂಥವುಗಳೋ, ಯಾವುವೂ ನಿಮಗೆ ಸಮಾಧಾನ ಕೊಡಲು ಸಾಧ್ಯವಿಲ್ಲ. ಅದನ್ನೇನೂ ಅಮ್ಮ ತಪ್ಪೆಂದು ಹೇಳುವುದಿಲ್ಲ. ಇದೆಲ್ಲ ಕಂಡು ಹಿಡಿಯುವ ಕಾರಣ ಹತ್ತು ಜನ ಮಾಡುವ ಕೆಲಸಕ್ಕೆ ಇಬ್ಬರು ಸಾಕಾಗುತ್ತಾರೆ. ಆದರೆ ಮನಸ್ಸಮಾಧಾನದ್ದು, ಅಮ್ಮನ ಲೋಕ. ಅದರಲ್ಲಿ ಅಮ್ಮ ಎಚ್ಚರಿಕೆ ವಹಿಸುವುದು. ಅಮ್ಮ ಯಾರನ್ನೂ ತಪ್ಪೆಂದು ಹೇಳುವುದಿಲ್ಲ. ನಿಮಗೆ ಮನಸ್ಸಮಾಧಾನವಲ್ಲವೇ ಬೇಕಾಗಿರುವುದು. ವಿಜ್ಞಾನಿಗಳ ಡ್ಯೂಟಿ ಅವರು ಮಾಡಲಿ. ಈ ಯಂತ್ರಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ನಮಗೆ ಸಮಾಧಾನ ಕೊಡುವುದಿಲ್ಲ. ಅರಮನೆ, ಹೆಣ್ಣು ಎಲ್ಲವೂ ಇದ್ದರೂ ಮನಸ್ಸಿನ ನೆಮ್ಮದಿ ಹೋದಾಗ ಆತ್ಮಹತ್ಯೆಗೆ ಅಣಿಯಾಗುವ ಭಾವ ನಮಗಿರುವುದು. ಇದನ್ನು ಎದುರಿಸಬೇಕಾದರೆ ಅಧ್ಯಾತ್ಮದ ಅವಶ್ಯಕತೆಯಿದೆ. ಆದಕಾರಣ ನೀವು ಸಮಯ ಹಾಳು ಮಾಡದೆ ಆಧ್ಯಾತ್ಮಿಕ ಗ್ರಂಥಗಳನ್ನು ಓದುವುದು, ಸತ್ಸಂಗ ಶ್ರವಣ ಮಾಡುವುದು, ಅದನ್ನು ಮನನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳುವುದು, ಇತರರ ಜೀವನದಲ್ಲಿ ಹರಡುವುದು – ಇವೆಲ್ಲ ಮಾಡಬೇಕು. ಇದಾಗಿರಬೇಕು ನಮ್ಮ ಗುರಿ. ಅದಕ್ಕೆ ಸಾಧನೆ ಅವಶ್ಯ. ನದಿಯ ಚಿತ್ರದಿಂದ ಬಾಯಾರಿಕೆ ಇಂಗಿಸಲು ನೀರು ಸಿಗುವುದಿಲ್ಲ. ಬಲ್ಬ್‌ನ ಚಿತ್ರ ಬರೆಸಿ ಗೋಡೆಯಲ್ಲಿ ತೂಗು ಹಾಕಿದರೆ ಬೆಳಕು ಬರುವುದಿಲ್ಲ. ಆದುದರಿಂದ ಶಾಸ್ತ್ರಾಧ್ಯಯನದ ಜೊತೆ ಸಾಧನೆಯೂ ಸೇರಿರಬೇಕು. ಅಂದರೆ ಮಾತ್ರ ಲೋಕದಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲು ಸಾಧ್ಯ.

ಪ್ರಾಪಂಚಿಕ ಮನುಷ್ಯ ಒಂದು ಭಾವಿಯ ತರ. ಒಬ್ಬ ಮನುಷ್ಯನಿಗೆ ಒಂದು ಕುಟುಂಬವನ್ನೋ, ಹತ್ತು ಜನರನ್ನೋ ರಕ್ಷಿಸಬಹುದು. ಆದರೆ ಒಬ್ಬ ತಪಸ್ವಿಯಾದರೊ ಬೋರ್ ವೆಲ್ನಂತೆ (bore-well). ಒಂದು ಹಳ್ಳಿಯವರೆಲ್ಲರನ್ನು ರಕ್ಷಿಸಲು ಸಾಧ್ಯ.. ಸಾಧನೆ ಮಾಡಿದರೆ ನಿಮಗೆ ಮನಸ್ಸು ಒಳ್ಳೆಯದಾಗುವುದು. ಅನೇಕರಿಗೆ ಶಾಂತಿ, ಸಮಾಧಾನ ಹರಡಲು ಸಾಧ್ಯವಾಗುತ್ತದೆ.

ಯಾವ ವಿಚಾರವಾದಿಯೊಂದಿಗೂ ಅಮ್ಮನಿಗೆ ವಿರೋಧವಿಲ್ಲ. ನಿಜವಾದ ಒಬ್ಬ ವಿಚಾರವಾದಿ ವಿಚಾರವಾದವನ್ನು ಅಪ್ಪಿಕೊಳ್ಳುವುದು ಜಗತ್ತಿನ ಅಂಧತೆಯನ್ನು ಹೋಗಲಾಡಿಸಲು. ಆದರೂ ವಿಚಾರವಾದಿ ಎಂದೂ ತನ್ನ ವ್ಯಕ್ತಿತ್ವವನ್ನು ಬಿಟ್ಟು ಕೊಡುವುದಿಲ್ಲ. ಹಾಗಾಗಿ ವ್ಯಕ್ತಿ ಎನ್ನುವ ಭಾವನೆ ಯಾವಾಗಲೂ ನೆಲೆಸಿರುತ್ತದೆ. ಆದರೆ ಒಬ್ಬ ಆಧ್ಯಾತ್ಮಿಕ ಜೀವಿ ತನ್ನ ವ್ಯಕ್ತಿತ್ವವನ್ನು ತೊರೆಯುತ್ತಾನೆ. ತಾನು ಆತ್ಮವೆಂದು, ತಾನು ಆನಂದವೆಂದು ಮೊದಲು ಕಲಿಯುತ್ತಾನೆ. ಈ ಕಾರಣದಿಂದ ಸೊನ್ನೆ ವೋಲ್ಟ್ ಆಗಿದ್ದವನು ಸಾವಿರ ವೋಲ್ಟ್ನವನಾಗಿ ಬದಲಾಗುತ್ತಾನೆ. ಇಂಥ ಶಕ್ತಿ ಸಂಪಾದನೆ ಬೇಕಾಗಿದೆ.

ಲಂಕೆಯಲ್ಲಿ ಸೀತೆಯಿದ್ದಾಳೋ ಎಂದು ತಿಳಿದುಕೊಳ್ಳುವುದಕ್ಕೆ ಸಮುದ್ರ ದಾಟಬೇಕಾಗಿದೆ. ಅದು ಸಾಧ್ಯವಾಗದೆ ವಾನರರೆಲ್ಲ ಬಳಲಿ ಕುಳಿತುಕೊಂಡಿದ್ದಾರೆ. ಲಂಕೆಗೆ ಜಿಗಿಯಲು ಯಾರೂ ತಯಾರಲ್ಲ. ಒಂದು ಮೂಲೆಯಲ್ಲಿ ಸರಿದು ಕೂತಿದ್ದ ಹನುಮಾನನಲ್ಲಿ ’ನಿನಗೆ ಜಿಗಿಯಲು ಸಾಧ್ಯವೇ’ ಎಂದು ಕೇಳಿದರು. ’ ಛೆ, ನನಗೆ ಭಯ, ನನ್ನಿಂದ ಸಾಧ್ಯವಿಲ್ಲಪ್ಪ.’ ಎಂದು ಹನುಮಾನ್ ಹೇಳುತ್ತಾನೆ. ’ಅಲ್ಲ, ನಿನಗೆ ಮಾತ್ರವೆ ಸಾಧ್ಯವಿರುವುದು. ನೀನು ವಾಯುವಿನ ಮಗ. ನಿನ್ನಲ್ಲಿ ಅದಕ್ಕೆ ಬೇಕಾಗಿರುವ ಶಕ್ತಿಯಿದೆ’ ಎಂದು ಮುಂತಾಗಿ ಹೇಳಿ ಹೊಗಳಿದಾಗ ಬಲ ಪಡೆದ ಹನುಮಂತ ಒಂದೇ ನೆಗೆತಕ್ಕೆ ಲಂಕೆಯನ್ನು ಮುಟ್ಟುತ್ತಾನೆ. ಸೀತೆಯನ್ನು ಕಂಡು ಹಿಂತಿರುಗಿ ಬರುತ್ತಾನೆ. ಅದರಂತೆಯೆ, ಭಾರತೀಯ ತತ್ವಶಾಸ್ತ್ರಗಳು ನಮ್ಮಲ್ಲಿ ’ಶಕ್ತಿಯಿದೆ, ಶಕ್ತಿಯಿದೆ’ ಎಂದು ಘೋಷಿಸುತ್ತವೆ.

ಬರೇ ಕೋತಿತರ ಆಡದೆ, ಬೇರೆಯವರ ಕೈಯಿಂದ ಕೇಳಿ ತಿನ್ನದೆ, ದುಡಿದು ತಿನ್ನುವುದನ್ನು ಅಧ್ಯಾತ್ಮ ಕಲಿಸುತ್ತದೆ. ಅಲ್ಲದೆ ಯಾರೋ ಕೊಟ್ಟದ್ದನ್ನು ತಿನ್ನಲಿಕ್ಕಲ್ಲ. ನಿನಗೆ ಬಲವಿದೆಯೆಂದು ನುಡಿದು ಕೋತಿಗೆ ಸಮುದ್ರ ದಾಟಲು ಕಲಿಸುತ್ತದೆ. ಮಂಗನ ಮನಸ್ಸಿನಿಂದ ಒಳ್ಳೆಯ ಮನುಷ್ಯನನ್ನು ಅಚ್ಚು ಹೊಯ್ಯುವುದನ್ನು ಅಧ್ಯಾತ್ಮವು ಮಾಡುತ್ತದೆ.

ವಿಚಾರವಾದವೆಂದು ಹೇಳಿ ನೀವು ಕಲ್ಲನ್ನು ಬಡಿದು ಪುಡಿ ಮಾಡಿದರೆ, ಅದರಿಂದೇನೂ ದೇವರನ್ನು ಕಾಣಲು ಸಾಧ್ಯವಾಗುವುದಿಲ್ಲ. ನೀವು ಅದಲ್ಲ ಸಾಹಸ ಮಾಡಬೇಕಾದದ್ದು. ಮತವೂ, ದೇವರೂ ಈ ಮಣ್ಣಿನಲ್ಲಿ ಬೇರು ಬಿಟ್ಟಿದೆ. ಜನಗಳು ಬೇರು ಗಟ್ಟಿಮಾಡಿ ಬಿಟ್ಟಾಯಿತು. ನಾವಿನ್ನು ಎಷ್ಟು ಕಿತ್ತು ಬಡಿದರೂ, ಕೂಡಲೆ ಏನೂ ಒಡೆದು ತುಂಡಾಗಿ ಹೋಗುವುದಿಲ್ಲ. ಸಾವಿರ ಸಲ ಕಡಿದರೂ ಈ ಬೇರು ತುಂಡಾಗದು. ಆದಕಾರಣ ಅಧ್ಯಾತ್ಮ ಅರ್ಥ ಮಾಡಿಕೊಂಡು ಜಗತ್ತಿನಲ್ಲಿ ಬದುಕಿರಿ. ಜನಗಳನ್ನು ಪ್ರೀತಿಸಿರಿ; ಸೇವೆ ಮಾಡಿರಿ. ಖಂಡಿತವಾಗಿಯೂ ಆ ತತ್ವಗಳನ್ನು ತಿಳಿಸಿ ಕೊಡಿರಿ. ಆಗ ಜನಗಳು ಈ ಗೋಡೆಗಳ ಬಂಧನದಿಂದ ಬಿಡುಗಡೆ ಪಡೆಯುವರು. ಅದು ಬಿಟ್ಟು ಹೊಡೆದಾಟ ಬಡಿದಾಟದಿಂದ ಏನೂ ಸಾಧ್ಯವಿಲ್ಲ. ಹಾಗಾಗಿ ಪ್ರೀತಿಯಿಂದ ತತ್ವವನ್ನು ತಿಳಿಸಿ ಹೇಳಿರಿ. ಹೀಗೆ ಮಾತ್ರವೇ ನಮಗೆ ಅವರನ್ನು ಪರಿವರ್ತಿಸಲು ಸಾಧ್ಯ. ಅದು ಬಿಟ್ಟು ಹೋರಾಟ ನಡೆಸಿ ಅದನ್ನು ಬಡಿದು ಕಡಿಯುವುದಲ್ಲ ಬೇಕಾಗಿರುವುದು. ಹಾಗೆ ತುಂಡು ಮಾಡುವುದೂ ಕಷ್ಟ.

ಅಧ್ಯಾತ್ಮದ ಕಟ್ಟಡ ಕಟ್ಟಿ ನಿಲ್ಲಿಸಿದ್ದಾದರೆ, ಮತದ ಹಾಗೂ ದೇವರ ಕುರಿತು ಸರಿಯಾದ ದೃಷ್ಟಿಕೋಣ ಜನಗಳಲ್ಲಿ ಉಂಟಾಗುತ್ತದೆ. ಅದು ಬಿಟ್ಟು, ವೈಚಾರಿಕತೆ ಮಾತ್ರ ಇಟ್ಟುಕೊಂಡು ಮತವನ್ನು ಒಟ್ಟು ಖಂಡಿಸಲು ಪ್ರಯತ್ನಿಸಿದರೆ ಆ ಬೇರು ತುಂಡಾಗದು. ಯಾಕೆಂದರೆ ವಿಚಾರವಾದಿಗಳು ವೈಚಾರಿಕತೆಯನ್ನು ಹೇಳುತ್ತಾರಾದರೂ ಅವರಲ್ಲಿ ತಪಸ್ಸಿನ ಬಲವಿಲ್ಲ. ನಿಮಗೆ ಹತ್ತು ಜನಗಳನ್ನು ನೋಡಲಿಕ್ಕೆ ಸಾಧ್ಯವಿದ್ದರೆ, ಒಬ್ಬ ತಪಸ್ವಿಗೆ ಕೋಟಿ ಜನಗಳನ್ನು ರಕ್ಷಿಸಲಿಕ್ಕೆ ಸಾಧ್ಯ. ಆದಕಾರಣ ವಿಚಾರವಾದಿಗಳೇ, ನೀವು ಸಾಧನೆ ಮಾಡಿ ಲೋಕದಲ್ಲಿ ಹೊರಡಿ.

ನನ್ನ ನಲ್ಮೆಯ ಮಕ್ಕಳೇ, ನೀವಾಗಿಯೇ ನಶಿಸದಿರಿ. ಸ್ವಂತ ಸುಖವನ್ನು ಮಾತ್ರ ಬಯಸುವುದಾದರೆ ಅದೂ ನಿಮಗೆ ಸಿಗುವುದಿಲ್ಲ. ಆದಕಾರಣ ನೀವೂ ನಶಿಸದೆ, ಜಗತ್ತಿಗೆ ಕೃತಜ್ಞರಾಗಿ ಜೀವಿಸಲು ಸನ್ನದ್ಧರಾಗಬೇಕು. ಇದುವೇ ನಮ್ಮ ಅವಶ್ಯಕತೆ.

ಸಾಮಾನ್ಯವಾಗಿ ನಾವು ಹೇಳುವುದಿದೆ, “ನನಗೆ ಮನೆಯಿದೆ, ಇಷ್ಟು ಸೆಂಟು ಭೂಮಿಯಿದೆ” ಎಂದೆಲ್ಲ. (ಒಂದು ಎಕ್ರೆಗೆ ನೂರು ಸೆಂಟುಗಳು.) ಅದರ ಅರ್ಥ, ಉಳಿದದ್ದೇನೂ ನಮ್ಮದಲ್ಲ ಅಂತ. “ನನ್ನ ಮನೆ, ನನ್ನ ಭೂಮಿ” ಎಂದು ಹೇಳುತ್ತೇವೆ. ಆ ನಾಲ್ಕು ಗೋಡೆಗಳೊಳಗೆ ಏಳು ಮಾಳಿಗೆಗಳಿದ್ದರೂ, ಅದರ ಮೇಲೆ ಇರುವ ಇರುವೆ ಹೇಳುತ್ತದೆ, “ನನ್ನ ಮನೆ” ಎಂದು, ಕಾಗೆಯೂ ಬಂದು ಹೇಳುತ್ತದೆ “ನನ್ನ ಮನೆ”. ಅಲ್ಲಿ ಬೆಳೆದಿರುವ ಕೋಳಿಯೂ ಬಂದು ಹೇಳುತ್ತದೆ “ನನ್ನ ಮನೆ” ಎಂದು. ಇನ್ನೊಂದು ಕೋಳಿ ಅಲ್ಲಿ ಬಂದರೆ ಇದರ ಮನೋಭಾವ ಬದಲಾಗುವುದು, ಕಚ್ಚಿ ಓಡಿಸುತ್ತದೆ. ಯಾರದ್ದು ಮನೆ ? ಯಾರದ್ದು ಭೂಮಿ ? ಈ ಹತ್ತು ಸೆಂಟೆನ್ನುವುದೂ, ನನ್ನದೆನ್ನುವುದೂ ಬಿಟ್ಟು ಬಿಟ್ಟರೆ, ಈ ಪ್ರಪಂಚ ಪೂರ್ತಿ ನಮ್ಮದಾಗಿ ಬಿಡುತ್ತದೆ. ಆದಕಾರಣ ನೀವು ಇವತ್ತಿನ ಪಾಯಿಂಟ್ನಲ್ಲಿರದೆ, ವಿಶಾಲತೆಯತ್ತ ಹೊರಳಿರಿ. ಅದು ಬಿಟ್ಟು ಪಾರ್ಟಿಯೆಂದೋ, ಮತ್ತೊಂದೋ ಹೇಳಿ ಜೀವನವನ್ನು ನಾಶ ಮಾಡದಿರಿ. ಆಗಬೇಕಾದದ್ದು ಆಗುತ್ತದೆ. ಅಲ್ಲದಿರುವುದು ಆಗುವುದಿಲ್ಲ. ರಾಷ್ಟ್ರದ ಭವಿಷ್ಯ ನಿಮ್ಮಂತ ಯುವಕರ ಮೇಲೆ ನಿಂತಿದೆ.

ಇಂದು ಎಲ್ಲರು ಕೊಳೆ ತುಂಬಿದ ಕೊಳದಲ್ಲಿ, ಕ್ರಿಮಿಗಳಾಗಿದ್ದುಕೊಂಡು ಕೆಸರು ತಿನ್ನುತ್ತಿದ್ದಾರೆ. ಆದರೆ ಕ್ರಿಮಿಗಳಿಗೆ ರೆಕ್ಕೆಗಳಿವೆ. ಆದರೆ ಅದನ್ನು ಮಾತ್ರ ತಿಳಿದು ಕೊಳ್ಳುತ್ತಿಲ್ಲ. ಹಾಗಾಗಿ ಕೊಳದ ಪಕ್ಕದಲ್ಲಿಯ ಹೂದೋಟದ ಜೇನನ್ನು ಹೀರಲು ಸಾಧ್ಯವಿಲ್ಲ. ಅವುಗಳು ಕೆಸರು ಮಾತ್ರ ತಿಂದು, ತಿಂದು ಜೀವನ ಸಾಗಿಸುತ್ತಿವೆ. ಅದರಿಂದಾಗಿ ಈ ಕ್ರಿಮಿಗಳಿಗೆ ಜೋರಾಗಿ ಕಿರುಚಿ ಹೇಳ ಬೇಕಾಗುತ್ತದೆ. ಆಗ ಅವುಗಳಿಗೆ ರೆಕ್ಕೆಯಿರುವ ಮಾತು ನೆನಪಾಗುತ್ತದೆ; ಹಾರುತ್ತವೆ; ಜೇನನ್ನು ಸವಿಯುತ್ತವೆ. ಹೀಗೆ, ಆ ಒದರಾಟವೇ ನಿಮಗೆ ಸಾಕು. ಆದಕಾರಣ ನೀವು ಅದನ್ನು ಎಬ್ಬಿಸಿರಿ ! ಶುದ್ಧೀಕರಿಸಿರಿ ! ಶಕ್ತಿ ಸಂಪಾದಿಸಿರಿ !

ಪ್ರಶ್ನೆ: ಅಮ್ಮಾ, ಈಶ್ವರನು* ಒಬ್ಬನೇ ಎಂದಾದರೆ ಯಾಕಾಗಿ ಅವನನ್ನು ಶಿವ, ವಿಷ್ಣು ಎಂದಿತ್ಯಾದಿಯಾಗಿ ಪೂಜಿಸುತ್ತಾರೆ ?

“ಮಕ್ಕಳೇ, ನಟನು ಎಷ್ಟೋ ವೇಷಗಳನ್ನು ಹಾಕುತ್ತಾನೆ. ಆದರೆ ಅವನಲ್ಲಿ ಏನೊಂದು ವ್ಯತ್ಯಾಸವೂ ಇಲ್ಲ. ಈಶ್ವರನೂ ಅದೇ ಪ್ರಕಾರ. ವಿವಿಧ ರೂಪಗಳು, ಅಲಂಕಾರಗಳು, ವೇಷಗಳು, ಹೆಸರುಗಳು – ಆದರೆ ಸತ್ಯ ಒಂದು. ಅದರ ವಿವಿಧ ಭಾಗಗಳು, ಬೇರೆಲ್ಲ. ಮನುಷ್ಯರು ಹಲವು ತರದವರು. ಸ್ವಭಾವಗಳೂ ಹಲವು. ಅವರವರ ಮನಸ್ಸಿಗೆ ಸರಿ ಹೊಂದುವ ರೂಪವನ್ನು ಹಾಗೂ ನಾಮವನ್ನು ಸ್ವೀಕರಿಸಿ ಈಶ್ವರನನ್ನು ಪ್ರಾಪ್ತಿಸುವ ಸಲುವಾಗಿ ಋಷಿಶ್ರೇಷ್ಠರು ಹಲವು ಈಶ್ವರ ಪ್ರತೀಕಗಳಿಗೆ ರೂಪ ನೀಡಿದರು. ಹಾಗಲ್ಲದೆ ಈಶ್ವರ ಅನೇಕ ಅಲ್ಲ, ಒಂದು.”

ಪ್ರಶ್ನೆ: ಅಮ್ಮಾ, ಮಾಡನನ್ನೂ (ಭಯಂಕರ ರೂಪದ, ಕೇರಳದಲ್ಲಿ ಆರಾಧಿಸಲ್ಪಡುವ, ಒಂದು ಸ್ಥಾನೀಯ ದೇವತೆ), ಯಕ್ಷಿಯನ್ನೂ ಕ್ಷೇತ್ರ**ಗಳಲ್ಲಿ ಇಟ್ಟಿರುವುದು ಯಾಕಾಗಿ ?

“ಮಾಡನ್, ಯಕ್ಷಿಯರೆಲ್ಲ ನಮ್ಮ ಸ್ವಭಾವದ ಪ್ರತೀಕಗಳು. ನಮಗೆ ಇಷ್ಟವಿಲ್ಲದ ಒಬ್ಬರನ್ನು ಕಂಡಾಗ ಕೋಪ ಬರುತ್ತದೆ. ಅವರನ್ನು ಕೊಲ್ಲಲು ಕೂಡ ಮನಸ್ಸಾಗ ಬಹುದು. ಕೋಪದಿಂದ ನಾವು ಅವರೆದುರಿಗೆ ಗಂಟಲು ಹರಿದುಹೋಗುವಂತೆ ಚೀರಾಡಬಹುದು. ಇದು ನಮಲ್ಲೇ ಇರುವ ಮಾಡನ್‌ನ ಸ್ವಭಾವ. ಹೀಗೆ, ನಮ್ಮ ಬೈಯ್ಯುವ ಅಥವಾ ಒಳ್ಳೆಯ ಸ್ವಭಾವಗಳ ಪ್ರತೀಕಗಳು ಈ ದೇವತೆಗಳು.”

ಪ್ರಶ್ನೆ: ಪರಮಾತ್ಮನು ಒಬ್ಬನೇ ಎಂದು ಅಮ್ಮ ಹೇಳಿದಿರಲ್ಲವೇ? ಹಾಗಿದ್ದಮೇಲೆ, ಕ್ರಿಶ್ಚನ್ನವರಿಗೂ ಮುಸಲ್ಮಾನರಿಗೂ ಹಾಗೂ ಅಂತಹ ಬೇರೆ ಮತ(ಧರ್ಮ)ಸ್ಥರಿಗೂ , ಭಿನ್ನವಾದ ಆರಾಧನೆಯ ಕೇಂದ್ರಗಳು ಮತ್ತು ಸಂಪ್ರದಾಯಗಳು ಯಾಕೆ ಇವೆ ?

“ಮಕ್ಕಳೇ, ಒಂದು ವಸ್ತುವಿಗೆ ಹಲವು ಹೆಸರು ಬಂದಾಕ್ಷಣ ವಸ್ತು ಬದಲಾಗುತ್ತದೆಯೇ ? ಉದಾಹರಣೆಗೆ, ನಾವು ಹಾಲು ಎಂದು ಹೇಳುವ ವಸ್ತುವು ಆಂಗ್ಲರಿಗೆ ’ಮಿಲ್ಕ್’ ಆಗುತ್ತದೆ. ಹಿಂದಿಯಲ್ಲಿ ’ದೂಧ್’ ಎಂದು ಕರೆಯುತ್ತಾರೆ. ಇನ್ನಿತರ ಭಾಷೆಯವರು ಅವರವರ ಭಾಷೆಯಲ್ಲಿ ಹೇಳುತ್ತಾರೆ. ಹೆಸರುಗಳು ಹಲವಾದ ಕಾರಣ ಹಾಲಿನ ಹೊಳಪು, ಗುಣಧರ್ಮಗಳಲ್ಲಿ ವ್ಯತ್ಯಾಸವಾಗುವುದೇ ? ಇಲ್ಲ. ಇದೇ ರೀತಿ ನಾವು ’ಸಕ್ಕರೆ’ ಎಂದು, ತಮಿಳಿನಲ್ಲಿ ’ಚೀನಿ’ ಎಂದು ಕರೆದಾಗ ಸಕ್ಕರೆಯ ಹೊಳಪೂ, ಗುಣಧರ್ಮವೂ ಬದಲಾಗುವುದಿಲ್ಲ. ಕ್ರಿಶ್ಚಿಯನ್ನವರು ದೇವರನ್ನು ’ತಂದೆಯೇ’ ಎಂದು ಕರೆಯುತ್ತಾರೆ. ಮುಸಲ್ಮಾನರು ’ಅಲ್ಲಾ’ ಎಂದು ಹೇಳುತ್ತಾರೆ. ಕೃಷ್ಣನ ಚಿತ್ರವನ್ನೇ ತೆಗೆದುಕೊಳ್ಳೋಣ. ಕೇರಳದಲ್ಲಿ ಚಿತ್ರ ಬರೆಯುವ ಹಾಗಲ್ಲ ಉತ್ತರ ಭಾರತದಲ್ಲಿ. ಅವರ ಕೃಷ್ಣನಿಗೆ ತಲೆ ಪಟ್ಟಿ ಇತ್ಯಾದಿ ಇದೆ. ಆದರೆ ಕೃಷ್ಣನಲ್ಲಿ ವ್ಯತ್ಯಾಸವಿದೆಯೇ? ಬಲ್ಬ್ನಲ್ಲಿ ಹರಿಯುವ ಕರೆಂಟಿಗೆ ಮತ್ತು ಫ್ರಿಜ್ನಲ್ಲಿ ಹರಿಯುವ ಕರೆಂಟಿಗೆ ವ್ಯತ್ಯಾಸವಿದೆಯೇ? ಇಲ್ಲ, ಅಲ್ಲವೇ? ಉಪಾಧಿಯಲ್ಲಿ ಮಾತ್ರ ವ್ಯತ್ಯಾಸ.

ಪ್ರತಿಯೊಬ್ಬರೂ ತಮ್ಮ ತಮ್ಮ ಸಂಸ್ಕಾರಕ್ಕನುಗುಣವಾಗಿ ದೇವರನ್ನು ಗ್ರಹಿಸುತ್ತಾರೆ. ಅದಕ್ಕನುಗುಣವಾಗಿ ಸಾಧನಾ ಸಂಪ್ರದಾಯಗಳನ್ನು ಅಂಗೀಕರಿಸುತ್ತಾರೆ. ಮಹಾತ್ಮರು ಕಾಲಾವಸ್ಥೆಗನುಗುಣವಾಗಿ ಏಕವಾದ ಪರಮಾತ್ಮ ತತ್ತ್ವವನ್ನು ಜನಗಳ ಅಭಿರುಚಿಗನುಗುಣವಾಗಿ ವ್ಯಕ್ತಗೊಳಿಸುಸುತ್ತಾರೆ.”

* ಮಲೆಯಾಳದಲ್ಲಿ ದೇವರನ್ನು ಸೂಚಿಸಲು “ಈಶ್ವರ” ಎಂಬ ಶಬ್ದವನ್ನು ಸಾಮಾನ್ಯವಾಗಿ ಬಳಸುತ್ತಾರೆ
**ದೇವಸ್ಥಾನ

ಕೆನ್ಯ, ಎಪ್ರಿಲ್ 5:
ಕೆನ್ಯಾ ಗಣರಾಜ್ಯದ ಉಪಾಧ್ಯಕ್ಷ ಕಲೋಂಜ಼ೋ ಮ್ಯುಸಿಯೋಕ ಅವರು ಕೆನ್ಯದ ಮಾತಾ ಅಮೃತಾನಂದಮಯಿ ಮಠದವರು ಕಟ್ಟಿಸಿಕೊಟ್ಟ ನೂತನ ಅನಾಥಾಲಯವನ್ನು ಅಮ್ಮನವರ ಸಾನ್ನಿಧ್ಯದಲ್ಲಿ ಉದ್ಘಾಟನೆ ಮಾಡಿದರು. ಅತಿ ನದಿ ಹತ್ತಿರ ನಡೆದ ಈ ಸಾರ್ವಜನಿಕ ಸಮಾರಂಭದಲ್ಲಿ ಉಪಾಧ್ಯಕ್ಷರೇ ಅಲ್ಲದೆ ಇನ್ನೂ ಹಲವು ಗಣ್ಯರು ಭಾಗವಹಿಸಿದ್ದರು. ಕ್ರೀಡೆ ಮತ್ತು ಸಂಸ್ಕೃತಿ ಸಚಿವೆ ಶ್ರೀಮತಿ ವಾವಿನ್ಯಾ ನ್ದೇತಿ ಮತ್ತು ಜಿಲ್ಲಾ ಕಲೆಕ್ಟರ್, ಹಲವಾರು ಪಾರ್ಲಿಮೆಂಟ್ ಸದಸ್ಯರು, ಕೆನ್ಯಾದ ಖ್ಯಾತ ಗಾಯಕ ಎರಿಕ್ ವೈನೈನ ಅವರು ಉಪಸ್ಥಿತರಿದ್ದರು. ಮೊದಲ ಹಂತದಲ್ಲಿ ಈ ಬಾಲಗೃಹವು 108 ಮಕ್ಕಳಿಗೆ ಆಶ್ರಯತಾಣವಾಗುವುದು.

ಇದರ ಜೊತೆಗೆ ಉಳಿದೆರಡು ಯೋಜನೆಗಳು ಉದ್ಘಾಟಿತವಾದವು. ಇವು ಅಮೃತಾ ವೃತ್ತಿ ಶಿಕ್ಷಣ ತರಬೇತಿ ಕೇಂದ್ರ ಮತ್ತು ಅಮೃತಾ ಕುಡಿಯುವ ನೀರಿನ ವಿತರಣಾ ಯೋಜನೆ ಆಗಿವೆ.

ಅಮೃತಾ ವೃತ್ತಿ ಶಿಕ್ಷಣ ತರಬೇತಿ ಕೇಂದ್ರವು 35 ಕಂಪ್ಯೂಟರುಗಳಿಂದ ಸುಸಜ್ಜಿತವಾಗಿದ್ದು, ಪಕ್ಕದಲ್ಲಿರುವ ಜಾಂ ನಗರದ ಕೊಳೆಗೇರಿ ಜನರಿಗೆ ಉಪಕಾರಿಯಾಗಿರುತ್ತವೆ. ಈ ಕೇಂದ್ರದಲ್ಲಿ ಮೊದಲ ಬಾರಿಗೆ ೫೦ ಮಂದಿ ಮೂಲಭೂತ ಕಂಪ್ಯೂಟರ್ ಬಳಕೆ ತರಬೇತು ಪಡೆದಿದ್ದಾರೆ.

ಅಮೃತಾ ಕುಡಿಯುವ ನೀರು ವಿತರಣಾ ಕೇಂದ್ರವು ರಕ್ಷನಾ ಕೇಂದ್ರದ ಬಳಿ ಇರುವ ಬರಗಾಲದಿಂದ ತೀವ್ರ ಬವಣೆಗೊಳಗಾದ ಮಸಾಯಿ ಆದಿವಾಸಿಗಳಿಗೆ ಶುದ್ಧವಾದ ಕುಡಿಯುವ ನೀರನು ಸದಾ ಒದಗಿಸುವ ಸೌಲಭ್ಯ ಪಡೆದಿದೆ.