ಕೆಲಸಗಳನ್ನೆಲ್ಲ ಮಾಡಲಿಕ್ಕೆ ಯಂತ್ರಗಳನ್ನು ಕಂಡು ಹಿಡಿದಿರುವುದರಿಂದ ಇವತ್ತು ಮನುಷ್ಯನಿಗೆ ಒಂದು ಗಂಟೆಯಷ್ಟು ಕೂಡಾ ಕೆಲಸವಿಲ್ಲ. ಸಮಯ ಪೂರ್ತಿ ಮನಸ್ಸು ಬಣಗುಟ್ಟುತ್ತಿರುತ್ತದೆ. ದುರಾಲೋಚನೆಗಳೂ ದುಷ್ಪ್ರವೃತ್ತಿಗಳೂ ಹುಟ್ಟುವುದು ಆಗ. ನಿಮಗೆ ಸಿಗುವ ಸಮಯ ಪೋಲು ಮಾಡದೆ ಸಾಧನೆ ಮಾಡಿದರೆ ಮನಸ್ಸು ಭ್ರಷ್ಟವಾಗುವುದಿಲ್ಲ; ಅನೇಕರಿಗೆ ಸಹಾಯಕವಾಗುವುದು.

ಸಯನ್ಸ್ ಈಗ ಕಂಡು ಹಿಡಿದಿರುವಂಥವುಗಳೋ, ಇನ್ನು ಕಂಡು ಹಿಡಿಯಲಿರುವಂಥವುಗಳೋ, ಯಾವುವೂ ನಿಮಗೆ ಸಮಾಧಾನ ಕೊಡಲು ಸಾಧ್ಯವಿಲ್ಲ. ಅದನ್ನೇನೂ ಅಮ್ಮ ತಪ್ಪೆಂದು ಹೇಳುವುದಿಲ್ಲ. ಇದೆಲ್ಲ ಕಂಡು ಹಿಡಿಯುವ ಕಾರಣ ಹತ್ತು ಜನ ಮಾಡುವ ಕೆಲಸಕ್ಕೆ ಇಬ್ಬರು ಸಾಕಾಗುತ್ತಾರೆ. ಆದರೆ ಮನಸ್ಸಮಾಧಾನದ್ದು, ಅಮ್ಮನ ಲೋಕ. ಅದರಲ್ಲಿ ಅಮ್ಮ ಎಚ್ಚರಿಕೆ ವಹಿಸುವುದು. ಅಮ್ಮ ಯಾರನ್ನೂ ತಪ್ಪೆಂದು ಹೇಳುವುದಿಲ್ಲ. ನಿಮಗೆ ಮನಸ್ಸಮಾಧಾನವಲ್ಲವೇ ಬೇಕಾಗಿರುವುದು. ವಿಜ್ಞಾನಿಗಳ ಡ್ಯೂಟಿ ಅವರು ಮಾಡಲಿ. ಈ ಯಂತ್ರಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ನಮಗೆ ಸಮಾಧಾನ ಕೊಡುವುದಿಲ್ಲ. ಅರಮನೆ, ಹೆಣ್ಣು ಎಲ್ಲವೂ ಇದ್ದರೂ ಮನಸ್ಸಿನ ನೆಮ್ಮದಿ ಹೋದಾಗ ಆತ್ಮಹತ್ಯೆಗೆ ಅಣಿಯಾಗುವ ಭಾವ ನಮಗಿರುವುದು. ಇದನ್ನು ಎದುರಿಸಬೇಕಾದರೆ ಅಧ್ಯಾತ್ಮದ ಅವಶ್ಯಕತೆಯಿದೆ. ಆದಕಾರಣ ನೀವು ಸಮಯ ಹಾಳು ಮಾಡದೆ ಆಧ್ಯಾತ್ಮಿಕ ಗ್ರಂಥಗಳನ್ನು ಓದುವುದು, ಸತ್ಸಂಗ ಶ್ರವಣ ಮಾಡುವುದು, ಅದನ್ನು ಮನನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳುವುದು, ಇತರರ ಜೀವನದಲ್ಲಿ ಹರಡುವುದು – ಇವೆಲ್ಲ ಮಾಡಬೇಕು. ಇದಾಗಿರಬೇಕು ನಮ್ಮ ಗುರಿ. ಅದಕ್ಕೆ ಸಾಧನೆ ಅವಶ್ಯ. ನದಿಯ ಚಿತ್ರದಿಂದ ಬಾಯಾರಿಕೆ ಇಂಗಿಸಲು ನೀರು ಸಿಗುವುದಿಲ್ಲ. ಬಲ್ಬ್‌ನ ಚಿತ್ರ ಬರೆಸಿ ಗೋಡೆಯಲ್ಲಿ ತೂಗು ಹಾಕಿದರೆ ಬೆಳಕು ಬರುವುದಿಲ್ಲ. ಆದುದರಿಂದ ಶಾಸ್ತ್ರಾಧ್ಯಯನದ ಜೊತೆ ಸಾಧನೆಯೂ ಸೇರಿರಬೇಕು. ಅಂದರೆ ಮಾತ್ರ ಲೋಕದಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲು ಸಾಧ್ಯ.

ಪ್ರಾಪಂಚಿಕ ಮನುಷ್ಯ ಒಂದು ಭಾವಿಯ ತರ. ಒಬ್ಬ ಮನುಷ್ಯನಿಗೆ ಒಂದು ಕುಟುಂಬವನ್ನೋ, ಹತ್ತು ಜನರನ್ನೋ ರಕ್ಷಿಸಬಹುದು. ಆದರೆ ಒಬ್ಬ ತಪಸ್ವಿಯಾದರೊ ಬೋರ್ ವೆಲ್ನಂತೆ (bore-well). ಒಂದು ಹಳ್ಳಿಯವರೆಲ್ಲರನ್ನು ರಕ್ಷಿಸಲು ಸಾಧ್ಯ.. ಸಾಧನೆ ಮಾಡಿದರೆ ನಿಮಗೆ ಮನಸ್ಸು ಒಳ್ಳೆಯದಾಗುವುದು. ಅನೇಕರಿಗೆ ಶಾಂತಿ, ಸಮಾಧಾನ ಹರಡಲು ಸಾಧ್ಯವಾಗುತ್ತದೆ.

ಯಾವ ವಿಚಾರವಾದಿಯೊಂದಿಗೂ ಅಮ್ಮನಿಗೆ ವಿರೋಧವಿಲ್ಲ. ನಿಜವಾದ ಒಬ್ಬ ವಿಚಾರವಾದಿ ವಿಚಾರವಾದವನ್ನು ಅಪ್ಪಿಕೊಳ್ಳುವುದು ಜಗತ್ತಿನ ಅಂಧತೆಯನ್ನು ಹೋಗಲಾಡಿಸಲು. ಆದರೂ ವಿಚಾರವಾದಿ ಎಂದೂ ತನ್ನ ವ್ಯಕ್ತಿತ್ವವನ್ನು ಬಿಟ್ಟು ಕೊಡುವುದಿಲ್ಲ. ಹಾಗಾಗಿ ವ್ಯಕ್ತಿ ಎನ್ನುವ ಭಾವನೆ ಯಾವಾಗಲೂ ನೆಲೆಸಿರುತ್ತದೆ. ಆದರೆ ಒಬ್ಬ ಆಧ್ಯಾತ್ಮಿಕ ಜೀವಿ ತನ್ನ ವ್ಯಕ್ತಿತ್ವವನ್ನು ತೊರೆಯುತ್ತಾನೆ. ತಾನು ಆತ್ಮವೆಂದು, ತಾನು ಆನಂದವೆಂದು ಮೊದಲು ಕಲಿಯುತ್ತಾನೆ. ಈ ಕಾರಣದಿಂದ ಸೊನ್ನೆ ವೋಲ್ಟ್ ಆಗಿದ್ದವನು ಸಾವಿರ ವೋಲ್ಟ್ನವನಾಗಿ ಬದಲಾಗುತ್ತಾನೆ. ಇಂಥ ಶಕ್ತಿ ಸಂಪಾದನೆ ಬೇಕಾಗಿದೆ.

ಲಂಕೆಯಲ್ಲಿ ಸೀತೆಯಿದ್ದಾಳೋ ಎಂದು ತಿಳಿದುಕೊಳ್ಳುವುದಕ್ಕೆ ಸಮುದ್ರ ದಾಟಬೇಕಾಗಿದೆ. ಅದು ಸಾಧ್ಯವಾಗದೆ ವಾನರರೆಲ್ಲ ಬಳಲಿ ಕುಳಿತುಕೊಂಡಿದ್ದಾರೆ. ಲಂಕೆಗೆ ಜಿಗಿಯಲು ಯಾರೂ ತಯಾರಲ್ಲ. ಒಂದು ಮೂಲೆಯಲ್ಲಿ ಸರಿದು ಕೂತಿದ್ದ ಹನುಮಾನನಲ್ಲಿ ’ನಿನಗೆ ಜಿಗಿಯಲು ಸಾಧ್ಯವೇ’ ಎಂದು ಕೇಳಿದರು. ’ ಛೆ, ನನಗೆ ಭಯ, ನನ್ನಿಂದ ಸಾಧ್ಯವಿಲ್ಲಪ್ಪ.’ ಎಂದು ಹನುಮಾನ್ ಹೇಳುತ್ತಾನೆ. ’ಅಲ್ಲ, ನಿನಗೆ ಮಾತ್ರವೆ ಸಾಧ್ಯವಿರುವುದು. ನೀನು ವಾಯುವಿನ ಮಗ. ನಿನ್ನಲ್ಲಿ ಅದಕ್ಕೆ ಬೇಕಾಗಿರುವ ಶಕ್ತಿಯಿದೆ’ ಎಂದು ಮುಂತಾಗಿ ಹೇಳಿ ಹೊಗಳಿದಾಗ ಬಲ ಪಡೆದ ಹನುಮಂತ ಒಂದೇ ನೆಗೆತಕ್ಕೆ ಲಂಕೆಯನ್ನು ಮುಟ್ಟುತ್ತಾನೆ. ಸೀತೆಯನ್ನು ಕಂಡು ಹಿಂತಿರುಗಿ ಬರುತ್ತಾನೆ. ಅದರಂತೆಯೆ, ಭಾರತೀಯ ತತ್ವಶಾಸ್ತ್ರಗಳು ನಮ್ಮಲ್ಲಿ ’ಶಕ್ತಿಯಿದೆ, ಶಕ್ತಿಯಿದೆ’ ಎಂದು ಘೋಷಿಸುತ್ತವೆ.

ಬರೇ ಕೋತಿತರ ಆಡದೆ, ಬೇರೆಯವರ ಕೈಯಿಂದ ಕೇಳಿ ತಿನ್ನದೆ, ದುಡಿದು ತಿನ್ನುವುದನ್ನು ಅಧ್ಯಾತ್ಮ ಕಲಿಸುತ್ತದೆ. ಅಲ್ಲದೆ ಯಾರೋ ಕೊಟ್ಟದ್ದನ್ನು ತಿನ್ನಲಿಕ್ಕಲ್ಲ. ನಿನಗೆ ಬಲವಿದೆಯೆಂದು ನುಡಿದು ಕೋತಿಗೆ ಸಮುದ್ರ ದಾಟಲು ಕಲಿಸುತ್ತದೆ. ಮಂಗನ ಮನಸ್ಸಿನಿಂದ ಒಳ್ಳೆಯ ಮನುಷ್ಯನನ್ನು ಅಚ್ಚು ಹೊಯ್ಯುವುದನ್ನು ಅಧ್ಯಾತ್ಮವು ಮಾಡುತ್ತದೆ.

ವಿಚಾರವಾದವೆಂದು ಹೇಳಿ ನೀವು ಕಲ್ಲನ್ನು ಬಡಿದು ಪುಡಿ ಮಾಡಿದರೆ, ಅದರಿಂದೇನೂ ದೇವರನ್ನು ಕಾಣಲು ಸಾಧ್ಯವಾಗುವುದಿಲ್ಲ. ನೀವು ಅದಲ್ಲ ಸಾಹಸ ಮಾಡಬೇಕಾದದ್ದು. ಮತವೂ, ದೇವರೂ ಈ ಮಣ್ಣಿನಲ್ಲಿ ಬೇರು ಬಿಟ್ಟಿದೆ. ಜನಗಳು ಬೇರು ಗಟ್ಟಿಮಾಡಿ ಬಿಟ್ಟಾಯಿತು. ನಾವಿನ್ನು ಎಷ್ಟು ಕಿತ್ತು ಬಡಿದರೂ, ಕೂಡಲೆ ಏನೂ ಒಡೆದು ತುಂಡಾಗಿ ಹೋಗುವುದಿಲ್ಲ. ಸಾವಿರ ಸಲ ಕಡಿದರೂ ಈ ಬೇರು ತುಂಡಾಗದು. ಆದಕಾರಣ ಅಧ್ಯಾತ್ಮ ಅರ್ಥ ಮಾಡಿಕೊಂಡು ಜಗತ್ತಿನಲ್ಲಿ ಬದುಕಿರಿ. ಜನಗಳನ್ನು ಪ್ರೀತಿಸಿರಿ; ಸೇವೆ ಮಾಡಿರಿ. ಖಂಡಿತವಾಗಿಯೂ ಆ ತತ್ವಗಳನ್ನು ತಿಳಿಸಿ ಕೊಡಿರಿ. ಆಗ ಜನಗಳು ಈ ಗೋಡೆಗಳ ಬಂಧನದಿಂದ ಬಿಡುಗಡೆ ಪಡೆಯುವರು. ಅದು ಬಿಟ್ಟು ಹೊಡೆದಾಟ ಬಡಿದಾಟದಿಂದ ಏನೂ ಸಾಧ್ಯವಿಲ್ಲ. ಹಾಗಾಗಿ ಪ್ರೀತಿಯಿಂದ ತತ್ವವನ್ನು ತಿಳಿಸಿ ಹೇಳಿರಿ. ಹೀಗೆ ಮಾತ್ರವೇ ನಮಗೆ ಅವರನ್ನು ಪರಿವರ್ತಿಸಲು ಸಾಧ್ಯ. ಅದು ಬಿಟ್ಟು ಹೋರಾಟ ನಡೆಸಿ ಅದನ್ನು ಬಡಿದು ಕಡಿಯುವುದಲ್ಲ ಬೇಕಾಗಿರುವುದು. ಹಾಗೆ ತುಂಡು ಮಾಡುವುದೂ ಕಷ್ಟ.

ಅಧ್ಯಾತ್ಮದ ಕಟ್ಟಡ ಕಟ್ಟಿ ನಿಲ್ಲಿಸಿದ್ದಾದರೆ, ಮತದ ಹಾಗೂ ದೇವರ ಕುರಿತು ಸರಿಯಾದ ದೃಷ್ಟಿಕೋಣ ಜನಗಳಲ್ಲಿ ಉಂಟಾಗುತ್ತದೆ. ಅದು ಬಿಟ್ಟು, ವೈಚಾರಿಕತೆ ಮಾತ್ರ ಇಟ್ಟುಕೊಂಡು ಮತವನ್ನು ಒಟ್ಟು ಖಂಡಿಸಲು ಪ್ರಯತ್ನಿಸಿದರೆ ಆ ಬೇರು ತುಂಡಾಗದು. ಯಾಕೆಂದರೆ ವಿಚಾರವಾದಿಗಳು ವೈಚಾರಿಕತೆಯನ್ನು ಹೇಳುತ್ತಾರಾದರೂ ಅವರಲ್ಲಿ ತಪಸ್ಸಿನ ಬಲವಿಲ್ಲ. ನಿಮಗೆ ಹತ್ತು ಜನಗಳನ್ನು ನೋಡಲಿಕ್ಕೆ ಸಾಧ್ಯವಿದ್ದರೆ, ಒಬ್ಬ ತಪಸ್ವಿಗೆ ಕೋಟಿ ಜನಗಳನ್ನು ರಕ್ಷಿಸಲಿಕ್ಕೆ ಸಾಧ್ಯ. ಆದಕಾರಣ ವಿಚಾರವಾದಿಗಳೇ, ನೀವು ಸಾಧನೆ ಮಾಡಿ ಲೋಕದಲ್ಲಿ ಹೊರಡಿ.

ನನ್ನ ನಲ್ಮೆಯ ಮಕ್ಕಳೇ, ನೀವಾಗಿಯೇ ನಶಿಸದಿರಿ. ಸ್ವಂತ ಸುಖವನ್ನು ಮಾತ್ರ ಬಯಸುವುದಾದರೆ ಅದೂ ನಿಮಗೆ ಸಿಗುವುದಿಲ್ಲ. ಆದಕಾರಣ ನೀವೂ ನಶಿಸದೆ, ಜಗತ್ತಿಗೆ ಕೃತಜ್ಞರಾಗಿ ಜೀವಿಸಲು ಸನ್ನದ್ಧರಾಗಬೇಕು. ಇದುವೇ ನಮ್ಮ ಅವಶ್ಯಕತೆ.

ಸಾಮಾನ್ಯವಾಗಿ ನಾವು ಹೇಳುವುದಿದೆ, “ನನಗೆ ಮನೆಯಿದೆ, ಇಷ್ಟು ಸೆಂಟು ಭೂಮಿಯಿದೆ” ಎಂದೆಲ್ಲ. (ಒಂದು ಎಕ್ರೆಗೆ ನೂರು ಸೆಂಟುಗಳು.) ಅದರ ಅರ್ಥ, ಉಳಿದದ್ದೇನೂ ನಮ್ಮದಲ್ಲ ಅಂತ. “ನನ್ನ ಮನೆ, ನನ್ನ ಭೂಮಿ” ಎಂದು ಹೇಳುತ್ತೇವೆ. ಆ ನಾಲ್ಕು ಗೋಡೆಗಳೊಳಗೆ ಏಳು ಮಾಳಿಗೆಗಳಿದ್ದರೂ, ಅದರ ಮೇಲೆ ಇರುವ ಇರುವೆ ಹೇಳುತ್ತದೆ, “ನನ್ನ ಮನೆ” ಎಂದು, ಕಾಗೆಯೂ ಬಂದು ಹೇಳುತ್ತದೆ “ನನ್ನ ಮನೆ”. ಅಲ್ಲಿ ಬೆಳೆದಿರುವ ಕೋಳಿಯೂ ಬಂದು ಹೇಳುತ್ತದೆ “ನನ್ನ ಮನೆ” ಎಂದು. ಇನ್ನೊಂದು ಕೋಳಿ ಅಲ್ಲಿ ಬಂದರೆ ಇದರ ಮನೋಭಾವ ಬದಲಾಗುವುದು, ಕಚ್ಚಿ ಓಡಿಸುತ್ತದೆ. ಯಾರದ್ದು ಮನೆ ? ಯಾರದ್ದು ಭೂಮಿ ? ಈ ಹತ್ತು ಸೆಂಟೆನ್ನುವುದೂ, ನನ್ನದೆನ್ನುವುದೂ ಬಿಟ್ಟು ಬಿಟ್ಟರೆ, ಈ ಪ್ರಪಂಚ ಪೂರ್ತಿ ನಮ್ಮದಾಗಿ ಬಿಡುತ್ತದೆ. ಆದಕಾರಣ ನೀವು ಇವತ್ತಿನ ಪಾಯಿಂಟ್ನಲ್ಲಿರದೆ, ವಿಶಾಲತೆಯತ್ತ ಹೊರಳಿರಿ. ಅದು ಬಿಟ್ಟು ಪಾರ್ಟಿಯೆಂದೋ, ಮತ್ತೊಂದೋ ಹೇಳಿ ಜೀವನವನ್ನು ನಾಶ ಮಾಡದಿರಿ. ಆಗಬೇಕಾದದ್ದು ಆಗುತ್ತದೆ. ಅಲ್ಲದಿರುವುದು ಆಗುವುದಿಲ್ಲ. ರಾಷ್ಟ್ರದ ಭವಿಷ್ಯ ನಿಮ್ಮಂತ ಯುವಕರ ಮೇಲೆ ನಿಂತಿದೆ.

ಇಂದು ಎಲ್ಲರು ಕೊಳೆ ತುಂಬಿದ ಕೊಳದಲ್ಲಿ, ಕ್ರಿಮಿಗಳಾಗಿದ್ದುಕೊಂಡು ಕೆಸರು ತಿನ್ನುತ್ತಿದ್ದಾರೆ. ಆದರೆ ಕ್ರಿಮಿಗಳಿಗೆ ರೆಕ್ಕೆಗಳಿವೆ. ಆದರೆ ಅದನ್ನು ಮಾತ್ರ ತಿಳಿದು ಕೊಳ್ಳುತ್ತಿಲ್ಲ. ಹಾಗಾಗಿ ಕೊಳದ ಪಕ್ಕದಲ್ಲಿಯ ಹೂದೋಟದ ಜೇನನ್ನು ಹೀರಲು ಸಾಧ್ಯವಿಲ್ಲ. ಅವುಗಳು ಕೆಸರು ಮಾತ್ರ ತಿಂದು, ತಿಂದು ಜೀವನ ಸಾಗಿಸುತ್ತಿವೆ. ಅದರಿಂದಾಗಿ ಈ ಕ್ರಿಮಿಗಳಿಗೆ ಜೋರಾಗಿ ಕಿರುಚಿ ಹೇಳ ಬೇಕಾಗುತ್ತದೆ. ಆಗ ಅವುಗಳಿಗೆ ರೆಕ್ಕೆಯಿರುವ ಮಾತು ನೆನಪಾಗುತ್ತದೆ; ಹಾರುತ್ತವೆ; ಜೇನನ್ನು ಸವಿಯುತ್ತವೆ. ಹೀಗೆ, ಆ ಒದರಾಟವೇ ನಿಮಗೆ ಸಾಕು. ಆದಕಾರಣ ನೀವು ಅದನ್ನು ಎಬ್ಬಿಸಿರಿ ! ಶುದ್ಧೀಕರಿಸಿರಿ ! ಶಕ್ತಿ ಸಂಪಾದಿಸಿರಿ !

ಪ್ರಶ್ನೆ: ಅಮ್ಮಾ, ಈಶ್ವರನು* ಒಬ್ಬನೇ ಎಂದಾದರೆ ಯಾಕಾಗಿ ಅವನನ್ನು ಶಿವ, ವಿಷ್ಣು ಎಂದಿತ್ಯಾದಿಯಾಗಿ ಪೂಜಿಸುತ್ತಾರೆ ?

“ಮಕ್ಕಳೇ, ನಟನು ಎಷ್ಟೋ ವೇಷಗಳನ್ನು ಹಾಕುತ್ತಾನೆ. ಆದರೆ ಅವನಲ್ಲಿ ಏನೊಂದು ವ್ಯತ್ಯಾಸವೂ ಇಲ್ಲ. ಈಶ್ವರನೂ ಅದೇ ಪ್ರಕಾರ. ವಿವಿಧ ರೂಪಗಳು, ಅಲಂಕಾರಗಳು, ವೇಷಗಳು, ಹೆಸರುಗಳು – ಆದರೆ ಸತ್ಯ ಒಂದು. ಅದರ ವಿವಿಧ ಭಾಗಗಳು, ಬೇರೆಲ್ಲ. ಮನುಷ್ಯರು ಹಲವು ತರದವರು. ಸ್ವಭಾವಗಳೂ ಹಲವು. ಅವರವರ ಮನಸ್ಸಿಗೆ ಸರಿ ಹೊಂದುವ ರೂಪವನ್ನು ಹಾಗೂ ನಾಮವನ್ನು ಸ್ವೀಕರಿಸಿ ಈಶ್ವರನನ್ನು ಪ್ರಾಪ್ತಿಸುವ ಸಲುವಾಗಿ ಋಷಿಶ್ರೇಷ್ಠರು ಹಲವು ಈಶ್ವರ ಪ್ರತೀಕಗಳಿಗೆ ರೂಪ ನೀಡಿದರು. ಹಾಗಲ್ಲದೆ ಈಶ್ವರ ಅನೇಕ ಅಲ್ಲ, ಒಂದು.”

ಪ್ರಶ್ನೆ: ಅಮ್ಮಾ, ಮಾಡನನ್ನೂ (ಭಯಂಕರ ರೂಪದ, ಕೇರಳದಲ್ಲಿ ಆರಾಧಿಸಲ್ಪಡುವ, ಒಂದು ಸ್ಥಾನೀಯ ದೇವತೆ), ಯಕ್ಷಿಯನ್ನೂ ಕ್ಷೇತ್ರ**ಗಳಲ್ಲಿ ಇಟ್ಟಿರುವುದು ಯಾಕಾಗಿ ?

“ಮಾಡನ್, ಯಕ್ಷಿಯರೆಲ್ಲ ನಮ್ಮ ಸ್ವಭಾವದ ಪ್ರತೀಕಗಳು. ನಮಗೆ ಇಷ್ಟವಿಲ್ಲದ ಒಬ್ಬರನ್ನು ಕಂಡಾಗ ಕೋಪ ಬರುತ್ತದೆ. ಅವರನ್ನು ಕೊಲ್ಲಲು ಕೂಡ ಮನಸ್ಸಾಗ ಬಹುದು. ಕೋಪದಿಂದ ನಾವು ಅವರೆದುರಿಗೆ ಗಂಟಲು ಹರಿದುಹೋಗುವಂತೆ ಚೀರಾಡಬಹುದು. ಇದು ನಮಲ್ಲೇ ಇರುವ ಮಾಡನ್‌ನ ಸ್ವಭಾವ. ಹೀಗೆ, ನಮ್ಮ ಬೈಯ್ಯುವ ಅಥವಾ ಒಳ್ಳೆಯ ಸ್ವಭಾವಗಳ ಪ್ರತೀಕಗಳು ಈ ದೇವತೆಗಳು.”

ಪ್ರಶ್ನೆ: ಪರಮಾತ್ಮನು ಒಬ್ಬನೇ ಎಂದು ಅಮ್ಮ ಹೇಳಿದಿರಲ್ಲವೇ? ಹಾಗಿದ್ದಮೇಲೆ, ಕ್ರಿಶ್ಚನ್ನವರಿಗೂ ಮುಸಲ್ಮಾನರಿಗೂ ಹಾಗೂ ಅಂತಹ ಬೇರೆ ಮತ(ಧರ್ಮ)ಸ್ಥರಿಗೂ , ಭಿನ್ನವಾದ ಆರಾಧನೆಯ ಕೇಂದ್ರಗಳು ಮತ್ತು ಸಂಪ್ರದಾಯಗಳು ಯಾಕೆ ಇವೆ ?

“ಮಕ್ಕಳೇ, ಒಂದು ವಸ್ತುವಿಗೆ ಹಲವು ಹೆಸರು ಬಂದಾಕ್ಷಣ ವಸ್ತು ಬದಲಾಗುತ್ತದೆಯೇ ? ಉದಾಹರಣೆಗೆ, ನಾವು ಹಾಲು ಎಂದು ಹೇಳುವ ವಸ್ತುವು ಆಂಗ್ಲರಿಗೆ ’ಮಿಲ್ಕ್’ ಆಗುತ್ತದೆ. ಹಿಂದಿಯಲ್ಲಿ ’ದೂಧ್’ ಎಂದು ಕರೆಯುತ್ತಾರೆ. ಇನ್ನಿತರ ಭಾಷೆಯವರು ಅವರವರ ಭಾಷೆಯಲ್ಲಿ ಹೇಳುತ್ತಾರೆ. ಹೆಸರುಗಳು ಹಲವಾದ ಕಾರಣ ಹಾಲಿನ ಹೊಳಪು, ಗುಣಧರ್ಮಗಳಲ್ಲಿ ವ್ಯತ್ಯಾಸವಾಗುವುದೇ ? ಇಲ್ಲ. ಇದೇ ರೀತಿ ನಾವು ’ಸಕ್ಕರೆ’ ಎಂದು, ತಮಿಳಿನಲ್ಲಿ ’ಚೀನಿ’ ಎಂದು ಕರೆದಾಗ ಸಕ್ಕರೆಯ ಹೊಳಪೂ, ಗುಣಧರ್ಮವೂ ಬದಲಾಗುವುದಿಲ್ಲ. ಕ್ರಿಶ್ಚಿಯನ್ನವರು ದೇವರನ್ನು ’ತಂದೆಯೇ’ ಎಂದು ಕರೆಯುತ್ತಾರೆ. ಮುಸಲ್ಮಾನರು ’ಅಲ್ಲಾ’ ಎಂದು ಹೇಳುತ್ತಾರೆ. ಕೃಷ್ಣನ ಚಿತ್ರವನ್ನೇ ತೆಗೆದುಕೊಳ್ಳೋಣ. ಕೇರಳದಲ್ಲಿ ಚಿತ್ರ ಬರೆಯುವ ಹಾಗಲ್ಲ ಉತ್ತರ ಭಾರತದಲ್ಲಿ. ಅವರ ಕೃಷ್ಣನಿಗೆ ತಲೆ ಪಟ್ಟಿ ಇತ್ಯಾದಿ ಇದೆ. ಆದರೆ ಕೃಷ್ಣನಲ್ಲಿ ವ್ಯತ್ಯಾಸವಿದೆಯೇ? ಬಲ್ಬ್ನಲ್ಲಿ ಹರಿಯುವ ಕರೆಂಟಿಗೆ ಮತ್ತು ಫ್ರಿಜ್ನಲ್ಲಿ ಹರಿಯುವ ಕರೆಂಟಿಗೆ ವ್ಯತ್ಯಾಸವಿದೆಯೇ? ಇಲ್ಲ, ಅಲ್ಲವೇ? ಉಪಾಧಿಯಲ್ಲಿ ಮಾತ್ರ ವ್ಯತ್ಯಾಸ.

ಪ್ರತಿಯೊಬ್ಬರೂ ತಮ್ಮ ತಮ್ಮ ಸಂಸ್ಕಾರಕ್ಕನುಗುಣವಾಗಿ ದೇವರನ್ನು ಗ್ರಹಿಸುತ್ತಾರೆ. ಅದಕ್ಕನುಗುಣವಾಗಿ ಸಾಧನಾ ಸಂಪ್ರದಾಯಗಳನ್ನು ಅಂಗೀಕರಿಸುತ್ತಾರೆ. ಮಹಾತ್ಮರು ಕಾಲಾವಸ್ಥೆಗನುಗುಣವಾಗಿ ಏಕವಾದ ಪರಮಾತ್ಮ ತತ್ತ್ವವನ್ನು ಜನಗಳ ಅಭಿರುಚಿಗನುಗುಣವಾಗಿ ವ್ಯಕ್ತಗೊಳಿಸುಸುತ್ತಾರೆ.”

* ಮಲೆಯಾಳದಲ್ಲಿ ದೇವರನ್ನು ಸೂಚಿಸಲು “ಈಶ್ವರ” ಎಂಬ ಶಬ್ದವನ್ನು ಸಾಮಾನ್ಯವಾಗಿ ಬಳಸುತ್ತಾರೆ
**ದೇವಸ್ಥಾನ

ಕೆನ್ಯ, ಎಪ್ರಿಲ್ 5:
ಕೆನ್ಯಾ ಗಣರಾಜ್ಯದ ಉಪಾಧ್ಯಕ್ಷ ಕಲೋಂಜ಼ೋ ಮ್ಯುಸಿಯೋಕ ಅವರು ಕೆನ್ಯದ ಮಾತಾ ಅಮೃತಾನಂದಮಯಿ ಮಠದವರು ಕಟ್ಟಿಸಿಕೊಟ್ಟ ನೂತನ ಅನಾಥಾಲಯವನ್ನು ಅಮ್ಮನವರ ಸಾನ್ನಿಧ್ಯದಲ್ಲಿ ಉದ್ಘಾಟನೆ ಮಾಡಿದರು. ಅತಿ ನದಿ ಹತ್ತಿರ ನಡೆದ ಈ ಸಾರ್ವಜನಿಕ ಸಮಾರಂಭದಲ್ಲಿ ಉಪಾಧ್ಯಕ್ಷರೇ ಅಲ್ಲದೆ ಇನ್ನೂ ಹಲವು ಗಣ್ಯರು ಭಾಗವಹಿಸಿದ್ದರು. ಕ್ರೀಡೆ ಮತ್ತು ಸಂಸ್ಕೃತಿ ಸಚಿವೆ ಶ್ರೀಮತಿ ವಾವಿನ್ಯಾ ನ್ದೇತಿ ಮತ್ತು ಜಿಲ್ಲಾ ಕಲೆಕ್ಟರ್, ಹಲವಾರು ಪಾರ್ಲಿಮೆಂಟ್ ಸದಸ್ಯರು, ಕೆನ್ಯಾದ ಖ್ಯಾತ ಗಾಯಕ ಎರಿಕ್ ವೈನೈನ ಅವರು ಉಪಸ್ಥಿತರಿದ್ದರು. ಮೊದಲ ಹಂತದಲ್ಲಿ ಈ ಬಾಲಗೃಹವು 108 ಮಕ್ಕಳಿಗೆ ಆಶ್ರಯತಾಣವಾಗುವುದು.

ಇದರ ಜೊತೆಗೆ ಉಳಿದೆರಡು ಯೋಜನೆಗಳು ಉದ್ಘಾಟಿತವಾದವು. ಇವು ಅಮೃತಾ ವೃತ್ತಿ ಶಿಕ್ಷಣ ತರಬೇತಿ ಕೇಂದ್ರ ಮತ್ತು ಅಮೃತಾ ಕುಡಿಯುವ ನೀರಿನ ವಿತರಣಾ ಯೋಜನೆ ಆಗಿವೆ.

ಅಮೃತಾ ವೃತ್ತಿ ಶಿಕ್ಷಣ ತರಬೇತಿ ಕೇಂದ್ರವು 35 ಕಂಪ್ಯೂಟರುಗಳಿಂದ ಸುಸಜ್ಜಿತವಾಗಿದ್ದು, ಪಕ್ಕದಲ್ಲಿರುವ ಜಾಂ ನಗರದ ಕೊಳೆಗೇರಿ ಜನರಿಗೆ ಉಪಕಾರಿಯಾಗಿರುತ್ತವೆ. ಈ ಕೇಂದ್ರದಲ್ಲಿ ಮೊದಲ ಬಾರಿಗೆ ೫೦ ಮಂದಿ ಮೂಲಭೂತ ಕಂಪ್ಯೂಟರ್ ಬಳಕೆ ತರಬೇತು ಪಡೆದಿದ್ದಾರೆ.

ಅಮೃತಾ ಕುಡಿಯುವ ನೀರು ವಿತರಣಾ ಕೇಂದ್ರವು ರಕ್ಷನಾ ಕೇಂದ್ರದ ಬಳಿ ಇರುವ ಬರಗಾಲದಿಂದ ತೀವ್ರ ಬವಣೆಗೊಳಗಾದ ಮಸಾಯಿ ಆದಿವಾಸಿಗಳಿಗೆ ಶುದ್ಧವಾದ ಕುಡಿಯುವ ನೀರನು ಸದಾ ಒದಗಿಸುವ ಸೌಲಭ್ಯ ಪಡೆದಿದೆ.

ಪ್ರಶ್ನೆ: ಅಮ್ಮಾ, ಬಹಳ ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ; ಆದರೂ ಯಾವೊಂದು ತರದ ಅನುಭವವೂ ಆಗಿಲ್ಲ.

“ಅಮ್ಮನನ್ನು ಕಾಣಲು ಬರುವ ಮಕ್ಕಳಲ್ಲಿ ಹಲವರು ಹೇಳುವ ಮಾತಿದು. ಗೃಹಸ್ಥಾಶ್ರಮಿ ಮಕ್ಕಳೂ ಹೇಳುತ್ತಾರೆ, ’ನಾವು ಎಷ್ಟೆಲ್ಲ ಧ್ಯಾನ ಮಾಡಿಯೂ, ಜಪ ಮಾಡಿಯೂ ದೊಡ್ಡ ಪ್ರಯೋಜನವೇನೂ ಆದ ಹಾಗೆ ಅನಿಸುವುದಿಲ್ಲ.’ ಎಂದು. ಮಕ್ಕಳೇ, ದೇವರನ್ನು ಪ್ರಾರ್ಥಿಸಲು, ಭಕ್ತಿಯಿಂದ ದೇವಸ್ಥಾನಕ್ಕೆ ಹೋಗುವೆವು. ದೇವಸ್ಥಾನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಪ್ರಾರ್ಥಿಸುತ್ತೇವೆ. ಮೂರ್ತಿಯೆದುರಿಗೆ ಕೈಜೋಡಿಸಿ ನಿಂತಿರುವಾಗ ನಮ್ಮೆದುರಿಗೆ ಯಾವನಾದರೂ ಬಂದು ನಿಂತುಕೊಂಡರೆ, ನಮ್ಮ ಚರ್ಯೆ ಬದಲಾಗುತ್ತದೆ. ಅವನ ಮೇಲೆ ಸಿಟ್ಟು ಬರುತ್ತದೆ. ಆಗ ಅಲ್ಲಿಯ ತನಕ ಏಕಾಗ್ರತೆಯಿಂದ ಗಳಿಸಿದ ಶಕ್ತಿಯ ಎರಡರಷ್ಟು ಪಾಲು ನಷ್ಟವಾಗುತ್ತದೆ. ಕ್ಷೇತ್ರದಿಂದ ಹೊರಗೆ ಬರುವಾಗ ಬಾಗಿಲಲ್ಲಿರುವ ಭಿಕ್ಷುಕನು ಏನಾದರೂ ಮಾತನಾಡಿದರೆ ಅವನನ್ನು ಒದೆಯಲೂ ನಾವು ಹೇಸುವುದಿಲ್ಲ. ಇದಲ್ಲ ಮಕ್ಕಳೇ, ಭಕ್ತಿ. ಆ ಭಿಕ್ಷೆ ಬೇಡುವವನಿಗೆ ತೋರಿಸುವ ಕರುಣೆಯೇ, ದೇವಾಲಯದಲ್ಲಿರುವ ಈಶ್ವರನ ಪ್ರೇಮಕ್ಕೆ ನಮ್ಮನ್ನು ಪಾತ್ರರನ್ನಾಗಿಸುವುದು. ಇದು ನಮ್ಮಿಂದ ಆಗುವುದಿಲ್ಲ. ಮತ್ತೆ ಹೇಗೆ ನಮಗೆ ಅನುಭೂತಿ ಸಿಗುವದು ? ದೇವರೇ ವೇಷ ಬದಲಿಸಿ ಬೇರೆ ರೂಪದಲ್ಲಿ ಬಂದರೂ ನಾವು ಸಿಟ್ಟು ಮಾಡುತ್ತೇವೆ. ಇದು ನಮ್ಮ ಸ್ವಭಾವ. ಮತ್ತೆ ಹೇಗೆ ಮಕ್ಕಳೇ ಪ್ರಯೋಜನ ಸಿಕ್ಕುವುದು ?

ಪ್ರೀತಿಯ ಮಕ್ಕಳೇ, ಸಮತ್ವ ಭಾವನೆಯೇ ದೈವತ್ವಕ್ಕೊಯ್ಯುವ ದಾರಿ. ದೇವರಿಗೆ ಹತ್ತಿರವಾಗಬೇಕಾದರೆ ಎಲ್ಲರನ್ನೂ ಸಮನಾಗಿ ಕಾಣಲು ಪ್ರಯತ್ನಿಸಬೇಕು. ಎಲ್ಲರಲ್ಲೂ ಸಮನಾದ ಪ್ರೇಮವಿದ್ದರೆ ಮಾತ್ರ ಭಗವಂತನು ನಮ್ಮನ್ನು ಸ್ವೀಕರಿಸುವನು. ದೇವರಿಗೆ ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲ. ಎಲ್ಲರೂ ಸಮಾನರು.

ಈ ಲೋಕದಲ್ಲಿ ನಮಗೇನಾದರೊಂದು ಕಾರ್ಯದಲ್ಲಿ ಮುಂದುವರಿಯಲು ಯಾರ ಒಪ್ಪಿಗೆಯೋ, ಸರ್ಟಿಫಿಕೇಟೋ ಬೇಕಾಗಿಲ್ಲ. ಆದರೆ ಈಶ್ವರನ ಲೋಕ ಮುಟ್ಟಬೇಕಾದರೆ ಮಾತ್ರ ಒಂದು ಇರುವೆಯೆದುರಿಗೂ ಸಹ ತಲೆ ಬಾಗಿಸುವ ಮನೋಭಾವ ನಮಗಿರಬೇಕು. ಭಗವಾನನ ಹತ್ತಿರ ಸೇರಲು ಎನ್.ಓ.ಸಿ. ಬೇಕಾಗಿದ್ದರೆ, ಒಂದು ಇರುವೆಯ ಸಹಿ ಕೂಡಾ ಅವಶ್ಯ. ಅಂದರೆ ಮಾತ್ರ, ಭಗವಂತನು ನಮ್ಮ ಮನಸ್ಸನ್ನು ಆತ್ಮಲೋಕಕ್ಕೊಯ್ಯುವನು. ಅದಕ್ಕಾಗಿ, ಎಲ್ಲಾ ಜೀವಜಂತುಗಳ ಪ್ರತಿ ಪ್ರೇಮವನ್ನೂ, ಕರುಣೆಯನ್ನೂ, ವಿಶಾಲತೆಯನ್ನೂ ಮಕ್ಕಳು ಬೆಳೆಸಿಕೊಳ್ಳಬೇಕು.

ಮಕ್ಕಳೇ, ಅವರವರ ಜಗತ್ತಿನಲ್ಲಿ ಅವರವರು ದೊಡ್ಡವರು. ಒಂದು ಸೊಳ್ಳೆಗೂ ಸಹ ತನ್ನ ಜಗತ್ತೇ ಬೇರೆಲ್ಲದ್ದಕ್ಕಿಂತಲೂ ಮಿಗಿಲು.

ಸ್ನೇಹಿತರಾದ ಇಬ್ಬರು ಜ್ಯೋತಿಷಿಗಳಿದ್ದರು. ತಮ್ಮ ಭಾವೀ ಜನ್ಮದ ಬಗ್ಗೆ ತಿಳಿದುಕೊಳ್ಳಲು ಅವರು ಪ್ರಶ್ನೆ ಹಾಕಿ ನೋಡಿದರು. ಮುಂಬರುವ ಜನ್ಮದಲ್ಲಿ ಒಬ್ಬನು ಸೊಳ್ಳೆಯಾಗಿಯೂ ಇನ್ನೊಬ್ಬನು ದನವಾಗಿಯೂ ಹುಟ್ಟುವರೆಂದೂ ಅಲ್ಲದೆ ಪರಸ್ಪರರನ್ನು ಕಂಡು ಹುಡುಕುತ್ತಾರೆಂದೂ ಅವರಿಗೆ ತಿಳಿದು ಬಂತು. ಸೊಳ್ಳೆಯಾಗಿ ಜನಿಸಲಿರುವವನು ತನ್ನ ಗೆಳೆಯನಿಗೆ ಹೇಳುತ್ತಾನೆ, ’ಬರುವ ಜನ್ಮದಲ್ಲಿ ನಾವು ಹೇಗೂ ಭೇಟಿಯಾತ್ತೇವಲ್ಲವೇ. ಆಗ ನೀನು ನನ್ನನ್ನು ಹೊಸಕಿ ಕೊಲ್ಲಬೇಕು. ಹೀಗೆ ಈ ನಿಕೃಷ್ಟ ಜೀವನದಿಂದ ಮೋಕ್ಷ ಗಳಿಸಿ, ಬೇಗನೆ ನನಗೆ ಭಗವಂತನೆಡೆ ಮುಟ್ಟಬಹುದು.’

ಗೆಳೆಯನೂ ಸಮ್ಮತಿಸಿದ. ಇಬ್ಬರೂ ಮರಣಾನಂತರ ಹಿಂದಿನ ಜನ್ಮದಲ್ಲಿ ಅವರು ಕಂಡಿದ್ದಂತೆ, ಸೊಳ್ಳೆಯಾಗಿಯೂ ದನವಾಗಿಯೂ ಜೀವಿಸುತ್ತಾರೆ. ದನಕ್ಕೆ ಪೂರ್ವ ಜನ್ಮದ ಸ್ಮರಣೆ ಸ್ಫುರಿಸಿತು. ಸಂಗಡಿಗ ಸೊಳ್ಳೆಯಾಗಿ ವಾಸಿಸುತ್ತಿರುವ ಕೊಳಕು ಚರಂಡಿಯನ್ನು ಹೇಗಾದರೂ ಬಹಳ ಕಷ್ಟದಿಂದ ದನ ತಲುಪಿತು. ಗೆಳೆಯನ ಪರಿಸ್ಥಿತಿ ನೋಡಿ ದನಕ್ಕೆ ತುಂಬಾ ಪರಿತಾಪವೆನಿಸಿತು. ಕಳೆದ ಜನ್ಮದಲ್ಲಿ ಮಾತುಕೊಟ್ಟಿದ್ದ ಹಾಗೆ ಸೊಳ್ಳೆಯನ್ನು ತನ್ನ ಗೊರಸಿನಡಿಯಲ್ಲಿ ಹೊಸಕಿ ಕೊಲ್ಲಲೆಂದು ಅದು ಮುಂದೆ ಹಾಯಿತು. ಥಟ್ಟನೆ ಸೊಳ್ಳೆ ಚೀತ್ಕರಿಸುತ್ತ ಹೇಳುತ್ತದೆ, ’ನೀನು ಎಂಥ ಕ್ರೂರ ಕೃತ್ಯವೆಸಗಲು ಹೊರಟಿರುವುದು ?’ ’ಅವತ್ತು ನೀನು ಹೇಳಿಲ್ಲವೇ, ಸೊಳ್ಳೆಯಾಗಿದ್ದು ಕಷ್ಟವನುಭವಿಸುವುದನ್ನೊಲ್ಲೆ. ಆ ನಿಕೃಷ್ಟ ಜೀವನದಿಂದ ವಿಮೋಚನೆ ಹೊಂದಿ ಭಗವಂತನೆಡೆ ಮುಟ್ಟಬಹುದು’ ಎಂದು. ದನದ ಮಾತು ಕೇಳಿ ನಕ್ಕೊಂಡು ಸೊಳ್ಳೆ ಹೇಳುತ್ತದೆ, ’ಸರಿಯಾಗಿ ಇರಿದೆ ನೀನು. ಇದು ನಿಕೃಷ್ಟ ಜೀವನವೇ ? ಈ ಬಾಳು ಎಷ್ಟು ಸುಂದರ, ಎಷ್ಟು ಸುಖಕರ ಎಂಬುದರ ಬಗ್ಗೆ ನಿಮಗರಿವಿದೆಯೇ ? ನನಗೂ ಚೆಲುವೆಯಾದ ಹೆಂಡತಿ, ಚಂದದ ಪುಟ್ಟ ಮಕ್ಕಳು, ಇದ್ದಾರೆ. ನನಗೇನೂ ಭಗವಂತನ ಲೋಕದಲ್ಲಿ ಸುತ್ತ ಬೇಕಾಗಿಲ್ಲ. ಈ ಜಗತ್ತೊಂದು ಬಿಟ್ಟರೆ ನನಗೆ ಬೇರೆ ಯಾವ ಲೋಕವೂ ಕಾಣಿಸುತ್ತಿಲ್ಲ. ನನಗೆ ಇಲ್ಲಿಯೇ ಬದುಕಿದರೆ ಸಾಕು.’ ಮಕ್ಕಳೇ, ಇದುವೇ ಪ್ರತಿಯೊಬ್ಬರದ್ದೂ ಕಥೆ.

ಒಂದು ಸೊಳ್ಳೆಗೂ ಸಹ ತನ್ನ ಬದುಕೇ ಶ್ರೇಷ್ಠ. ಹಾಗೆಯೇ, ಲೌಕಿಕದಲ್ಲಿ ಜೀವಿಸುತ್ತಿರುವ ನಾವು ಅದುವೇ ಅತ್ಯಂತ ಉತ್ತಮವೆಂದು ಭಾವಿಸುತ್ತೇವೆ. ಬರೇ ಮನುಷ್ಯನಾಗಿ ಹುಟ್ಟಿ, ಪ್ರಾಣಿಯಾಗಿ ಜೀವನ ನಡೆಸುವವರು ಮಾತ್ರವೇ ಲೌಕಿಕ ಜೀವನದಲ್ಲಿ ಆನಂದವಿದೆಯೆಂದು ಹೇಳುವರು. ಆ ಸೊಳ್ಳೆಯು ಅನುಭವಿಸಿಕೊಂಡಿದ್ದ ಸುಖಕ್ಕಿಂತ ಒಂದಿನಿತೂ ಭಿನ್ನವಲ್ಲ ಪ್ರಾಪಂಚಿಕ ಸುಖವೆಂಬುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಈಶ್ವರನನ್ನು ಆಶ್ರಯಿಸುವುದರಿಂದ ಮಾತ್ರವೇ ಸಂಸಾರ ದುಃಖದಿಂದ ವಿಮೋಚನೆ ಹೊಂದಲೂ, ಯಥಾರ್ಥ ಆನಂದ ಸವಿಯಲೂ ಸಾಧ್ಯ”.

ಪ್ರಶ್ನೆ: ಸಾಧಕನು ಸಿಟ್ಟಾಗಬಾರದೆಂದು ಹೇಳುವುದು ಏತಕ್ಕಾಗಿ?

“ನಲ್ಮೆಯ ಮಕ್ಕಳೇ, ಒಬ್ಬ ಆಧ್ಯಾತ್ಮಿಕ ಜೀವಿಯು ಎಂದೂ ಕೋಪ ಮಾಡಬಾರದು. ಕೋಪವು ನಾವು ಸಾಧನೆಯ ಮೂಲಕ ಗಳಿಸಿದ ಶಕ್ತಿಯನ್ನು ನಷ್ಟಪಡಿಸುವುದು. ಗಾಡಿ ಓಡುತ್ತಿರಬೇಕಾದರೆ ಪೆಟ್ರೋಲ್ ಅಷ್ಟಾಗಿ ಖರ್ಚಾಗುವುದಿಲ್ಲ; ಆದರೆ ಬ್ರೇಕ್ ಅದುಮಿದಾಗ ಹೆಚ್ಚು ಖರ್ಚಾಗುತ್ತದೆ. ಇದೇ ರೀತಿ ಮಕ್ಕಳೇ, ಕೋಪ ಬಂದಾಗ. ಕೋಪ ಬಂದಾಗ ಬರೇ ಬಾಯಿಯಿಂದ ಮಾತ್ರವಲ್ಲ, ಪ್ರತಿಯೊಂದು ರೋಮ ಕೂಪದಿಂದಲೂ ಶಕ್ತಿಯ ವ್ಯಯವಾಗುತ್ತದೆ. ಒಂದು ಸಿಗರೇಟು ಲೈಟರನ್ನೂ ಹತ್ತಿಪ್ಪತ್ತು ಬಾರಿ ಅದುಮಿದರೆ ಅದರ ಪೆಟ್ರೋಲ್ ನಷ್ಟವಾಗುತ್ತದೆ. ಆದರೆ ಇದು ನಮಗೆ ಕಾಣಲು ಸಾಧ್ಯವಾಗುವುದಿಲ್ಲ; ಆದರೆ ಗೊತ್ತಾಗುತ್ತದೆ. ಇದೇ ಪ್ರಕಾರವಾಗಿ ಮಕ್ಕಳೇ, ಸದ್ಚಿಂತನೆಗಳಿಂದ ಗಳಿಸಿದ ಶಕ್ತಿಯು ಹಲವಾರು ಕಾರಣಗಳಿಂದಾಗಿ ನಷ್ಟವಾಗುತ್ತದೆ. ಇದನ್ನು ನಾವು ತಿಳಿದುಕೊಂಡಿರಬೇಕು.

ಮಕ್ಕಳೇ, ತುಂಬ ಹೆಚ್ಚಿನ ಎಚ್ಚರದಿಂದ ಮಾತ್ರ ಆಧ್ಯಾತ್ಮಿಕ ಜೀವಿಗೆ ಮುಂದುವರಿಯಲು ಸಾಧ್ಯವಾಗುವುದು. ಒಬ್ಬ ಸೂಜಿ ತೆಗೆದರೆ, ತೆಗೆಯುವಾಗಲೂ, ನೂಲು ಪೋಣಿಸುವಾಗಲೂ, ಹೊಲಿಯುವಾಗಲೂ, ಮರಳಿಡುವಾಗಲೂ ಎಷ್ಟೆಲ್ಲ ಎಚ್ಚರದಿಂದ ಮಾಡುತ್ತಾನೋ, ಅಷ್ಟು ಎಚ್ಚರ ನಮ್ಮ ಪ್ರತಿಯೊಂದು ಕೆಲಸದಲ್ಲೂ ಇರಬೇಕು. ಮಕ್ಕಳೇ, ನಿರಂತರವಾದ ಎಚ್ಚರ ಮಕ್ಕಳನ್ನು ಜಯಶಾಲಿಗಳನ್ನಾಗಿ ಮಾಡುವುದು. ಏನು ಕಂಡರೂ, ಏನು ಕೇಳಿದರೂ, ಏಕಾಂತದಲ್ಲಿ ವಿಚಾರ ಮಾಡಿ. ಅದರ ನಂತರವೇ ತೀರ್ಮಾನ ಮಾಡಬೇಕು. ಎಂದಿಗೂ, ಪರಿಸ್ಥಿತಿಯ ದಾಸರಾಗಬೇಡಿ. ಅವುಗಳಿಂದ ಪಾರಾಗಲೆತ್ನಿಸಿರಿ.

ನಿಷ್ಕಾಮ ಸೇವೆಯಿಂದಾಗಿ ನಮಗೆಯೇ ಆನಂದ. ಅನೇಕ ದಿನಗಳಿಂದ ಉಪವಾಸವಿರುವ ಮನೆ; ಹಸಿವೆಯಿಂದ ಮಕ್ಕಳಿಗೆ ಕೂಗಲೂ ತ್ರಾಣವಿಲ್ಲದಾಗಿದೆ. ತಂದೆ ತಾಯಿ ಸೇರಿ ತಿರುಪೆ ಎತ್ತಲಿಕ್ಕೆ ತೊಡಗಿದರು. ಸಿಗುವ ಆಹಾರವೋ ಬಹಳ ಕಮ್ಮಿ. ಮಕ್ಕಳಿಗೆ ಏನೂ ಸಾಲದು. ಅದನ್ನು ಅವರು ಮಕ್ಕಳಿಗೆ ಹಂಚುತ್ತಾರೆ. ತಮ್ಮ ಮಕ್ಕಳು ಅದನ್ನು ಉಣ್ಣುವುದನ್ನು ನೋಡುವಾಗ ಆ ತಂದೆಗೂ ತಾಯಿಗೂ ಅರ್ಧ ಹೊಟ್ಟೆ ತುಂಬುವುದು. ಈ ತೆರನ ಒಂದು ಹೊಣೆಗಾರಿಕೆಯನ್ನು ನಾವು ಜಗತ್ತಿನಲ್ಲಿ ಸೃಷ್ಟಿಸಬೇಕು. ನಮಗೆಯೇ ಅದರಿಂದ ಆನಂದವಾಗುವುದು. ಹೂವನ್ನು ದೇವರಿಗೆ ಕೊಯ್ಯುವಾಗ ಅದರ ಸುಗಂಧವನ್ನೂ ಸೌಂದರ್ಯವನ್ನೂ ಅರಿವಿಲ್ಲದೆಯೇ ನಾವು ತಾನೆ ಆಸ್ವಾದಿಸುವುದು. ಇದೇ ರೀತಿಯಾಗಿ, ಈ ಸೇವೆಯು ಮಕ್ಕಳನ್ನು ವಿಕಾಸಗೊಳಿಸುವುದು. ಈ ಭಾವನೆಯೇ ಅದಕ್ಕೆ ಸಾಕು. ಆದುದರಿಂದ ನೀವು ಏಳಿರಿ ! ನಿದ್ದೆ ಮಾಡದೆ ಏಳಿರಿ !

ಐಕ್ಯವೂ ಪ್ರೇಮವೂ ಇರುವ ಕುಟುಂಬದಲ್ಲಿ ಒಂದು ಹಿಡಿ ಅನ್ನವಾದರೂ, ಹಂಚಿ ತಿಂದು ಸಂತೋಷದಿಂದ ಮಲಗಿ ನಿದ್ದೆಮಾಡುತ್ತಾರೆ. ಸ್ವರ್ಗ ಅವರ ಕೈಯಲ್ಲಿದೆ. ಆದರೆ ಕೋಟಿಯ ಸಂಪತ್ತಿದ್ದು, ಐನೂರು ಪವನು ಬಂಗಾರವಿದ್ದು ಐಕ್ಯತೆಯಿಲ್ಲದಿದ್ದರೆ ಅಲ್ಲಿ ನರಕದ, ಕಣ್ಣೀರಿನ, ನಿಂದನೆಯ ನೆಲೆಯನ್ನು ಕಾಣುತ್ತೇವೆ. ನಮ್ಮ ಐಕ್ಯತೆಯು ನಮಗೆ ಆನಂದ ಕೊಡುವುದು. ಆದುದರಿಂದ ನಿಮ್ಮ ಮನಸ್ಸಿನ ಮೂಲವನ್ನು ಅರ್ಥ ಮಾಡಿಕೊಳ್ಳಿರಿ. ನಿಮ್ಮ ಜೀವನ ಯಾಕಾಗಿಯೆಂಬುದನ್ನು ಅರಿತುಕೊಳ್ಳಿರಿ !

ನಿಮಗೆ ಸರಿಯಾದ ಒಂದು ಚೈತನ್ಯ ವಲಯವನ್ನು (aura) ದೇವರು ಕೊಟ್ಟಿದ್ದಾನೆ. ಪರಿಮಿತಿ ನಿರ್ಣಯಿಸಲಾಗದಷ್ಟು ಅನಂತಶಕ್ತಿಯಿರುವಂಥದ್ದು ಅದು. ಆದರೆ ಇಂದದು ಶುಷ್ಕವಾಗಿದೆ. ಆದರೂ ತಪಸ್ಸಿನಿಂದ, ಅದರಲ್ಲಿ ಎಷ್ಟು ಬೇಕಾದರೂ, ಕರೆಂಟು ಚಾರ್ಜ್ ಮಾಡಲು ಸಾಧ್ಯವಿದೆ; ಯಾವ ಲೋಕದಲ್ಲೂ ಪ್ರಯಾಣ ಮಾಡಲು ಸಾಧ್ಯವಿದೆ. ನೀವು ಸಾಯುತ್ತೀರೆಂದು ಹೆದರುವುದೇ ಬೇಡ. ಹುಟ್ಟುತ್ತೀರೆಂದೂ ಎಣಿಸಬೇಡಿ. ನೀವು ಎಂದೂ ಸಾಯುವುದೂ ಇಲ್ಲ, ಹುಟ್ಟುವುದೂ ಇಲ್ಲ. ಫ್ಯಾನೋ, ಫ್ರಿಜ್ಜೋ ಹಾಳಾದರೂ ಅದರೊಳಗಿನ ಕರೆಂಟು ಹಾಳಾಗದ ಹಾಗೆ, ನಿಮ್ಮ ಒಳಗಿನ ಆತ್ಮವು ಎಂದೂ ಅಸ್ತಿತ್ವದಲ್ಲಿರುತ್ತದೆ.

’ಕೆಲಸ ಕೊಡಿ, ಕೆಲಸ ಕೊಡಿ’ ಎಂದು ಎಲ್ಲರೂ ಹೇಳುತ್ತಾರೆ. ಕೆಲಸವಿಲ್ಲವೆಂದು ಯುವಪ್ರಾಯದವರು ದುಃಖಿಸುತ್ತಾರೆ. ಹೆಂಡಕ್ಕೂ, ಗಾಂಜಕ್ಕೂ ಅಡಿಯಾಳಾಗುವುದು ಅದೇ ಕಾರಣದಿಂದಾಗಿ ಎಂದು ಹೇಳುತ್ತಾರೆ. ಕೆಲಸ ಸಿಕ್ಕಿದರೆ ನಿಮಗೆ ಸಮಾಧಾನ ಆಗುತ್ತದೆಯೇ ? ಅವನ, ತನ್ನ ಹೆಸರಿನಲ್ಲಿರುವ, ಎಕರೆ ಗಟ್ಟಲೆ ಭೂಮಿ ಪಾಳು ಬಿದ್ದಿರುತ್ತದೆ. ಅದರಲ್ಲಿ ಬೇಸಾಯ ಮಾಡಿದರೆ, ಇವನಿಗೆ ಸಿಗುವ ಸಂಬಳಕ್ಕಿಂತ ನೂರರಷ್ಟು ಹೆಚ್ಚು ಲಾಭ ಗಳಿಸಲು ಸಾಧ್ಯವಿದೆ. ಕೆಲವೊಮ್ಮೆ ನಷ್ಟವುಂಟಾಯಿತೊಂದು ಭಾವಿಸೋಣ; ಆದರೂ ಹಿಂಜರಿಯಬಾರದು. ಅದರೆ ಯಾರೂ ಶ್ರಮ ಪಡುವುದಿಲ್ಲ. ಇಷ್ಟೆಲ್ಲ ಜಮೀನು ಇಟ್ಟುಕೊಂಡೂ ಸುಮ್ಮನೆ ಅಲೆದಾಡುತ್ತಾ ಹಾಳಾಗುತ್ತಾರೆ. ಸಮಯಯಿಲ್ಲವೆಂದು ಯಾರೂ ಹೇಳಬೇಕಾಗಿಲ್ಲ; ಸಮಯ ಬೇಕಷ್ಟಿದೆ. ಹಾಗಾಗಿ ನೀವು ಆಲಸಿಗಳಾಗದೆ ಕೆಲಸ ಮಾಡಿರಿ !

ಸ್ವಂತ ಫ಼್ಯಾಕ್ಟರಿಯಲ್ಲಿ ಇಪ್ಪತ್ತನಾಲ್ಕು ಗಂಟೆ ಕೆಲಸ ಮಾಡುವವರಿದ್ದಾರೆ. ತನ್ನದೇ ಫ್ಯಾಕ್ಟರಿ, ಹಣ ಮಾಡಬೇಕೆಂಬ ಗುರಿ ಇದ್ದಾಗ ಏನು ಮರೆತು ಬಿಡಲಿಕ್ಕೂ ಸಂಕೋಚವಿಲ್ಲ. ಎಷ್ಟು ಕೆಲಸ ಮಾಡಿದರೂ ಆರೋಗ್ಯಕ್ಕೆ ಕಮ್ಮಿಯಿಲ್ಲ; ಉತ್ಸಾಹ ಮಾತ್ರವೇ ಇರುತ್ತದೆ. ಹಾನಿಯಾಗುವುದಿಲ್ಲ. ಮಕ್ಕಳೇ, ಲೋಕವು ನಮ್ಮ ಕುಟುಂಬ. ಆ ಲೋಕದ್ದಾದ ಫ಼್ಯಾಕ್ಟರಿಯಲ್ಲಿ ಕೆಲಸ ಮಾಡಿರಿ. ಎಲ್ಲರೂ ನನ್ನ ಸಂಬಂಧಿಕರು ಎಂದು ಭಾವಿಸಿಕೊಳ್ಳಿ. ಆಗ ಭಗವಂತನೇ ರಕ್ಷಿಸುವನು ಎಂದಿರುವ ಕರ್ತವ್ಯ ಭಾವನೆ ತಾನಾಗಿಯೇ ಮೂಡುವುದು ನಿಮ್ಮಲ್ಲಿ. ನಿಮ್ಮ ದೇಹವನ್ನು ಮರೆಯಲೂ, ಕೆಲಸ ಮಾಡಲು ಆರೋಗ್ಯವನ್ನೂ ಈಶ್ವರನು ಕೊಡುವನು.

ಬೇರೊಂದು ಫ಼್ಯಾಕ್ಟರಿ ಸೇರಿದಾಗ ಎರಡು ಗಂಟೆ ಕೆಲಸ ಮಾಡಿ ತಪ್ಪಿಸಿಕೊಂಡು ಓಡಾಡಲು, ಮೇಲಧಿಕಾರಿಗಳು ಇಲ್ಲದಿದ್ದರೆ ಹರಟೆ ಹೊಡೆದು ಕೊಂಡಿರಲು ಮನಸ್ಸಾಗುತ್ತದೆ. ಸ್ವಂತದ್ದಲ್ಲ ಎಂದಾಗ ಸೋಮಾರಿತನ ಬರುತ್ತದೆ, ಜಡತ್ವ ಉಂಟಾಗುತ್ತದೆ, ಆಯಾಸವಾಗುತ್ತದೆ. ಇದು ಅನ್ಯಥಾ ಭಾವ. ’ಸ್ವಂತದ್ದು’ ಎನ್ನುವ ಭಾವದಲ್ಲಿ ಅದು ಅಷ್ಟು ಬೇಗನೆ ಬರುವುದಿಲ್ಲ. ಈ ಲೋಕ ನಮ್ಮ ಫ಼್ಯಾಕ್ಟರಿಯೆಂದು ಭಾವಿಸಿ ನಡೆಯುವಾಗ, ಬೇರೆಯವರ ಜೊತೆ ಸೇರಿ ರಕ್ಷಿಸಬೇಕು ಎಂದು ಚಿಂತಿಸುವಾಗ ನಿಮಗೆ ಕಷ್ಟ ಪಡಲು ಶಕ್ತಿ ಬರುತ್ತದೆ.

ಹೋದ ಸಮಯ ಎಂದೂ ತಿರುಗಿ ಬರುವುದಿಲ್ಲ. ಆದಕಾರಣ ನೀವು ಸಮಯ ವ್ಯರ್ಥ ಮಾಡದಿರಿ. ನೌಕರಿ ಇಲ್ಲದಿದ್ದರೂ ಮಕ್ಕಳೇ, ನಿಮಗಿರುವ ಜಮೀನಿನಲ್ಲಿ ಏನಾದರೂ ಕೃಷಿ ಮಾಡಲು ಕಲಿಯಿರಿ. ಆಗ ಚಿಂತೆ ಮಾಡಿ, ಮಾಡಿ ಮನಸ್ಸು ಹುಣ್ಣಾಗುವುದಿಲ್ಲ. ಹೆಂಡಕ್ಕೂ ಗಾಂಜಾಗೂ ಗುಲಾಮರಾಗಿ ನಾಶವಾಗ ಬೇಕಾಗಿಲ್ಲ. ಹೇಗೆಯಾದರೂ ನೀವು ಶ್ರಮಿಸಿರಿ ಮಕ್ಕಳೇ. ಹತ್ತು ಸೆಂಟುಗಳಾದರೂ ಸಾಕು. (ಒಂದು ಎಕರೆ ಜಮೀನಿಗೆ ನೂರು ಸೆಂಟುಗಳು) ಮೂರು ಜನರಿಗೆ ಬೇಕಾಗುವಷ್ಟು ತಿಂದುಣ್ಣಲು ಅದರಿಂದ ದೊರಕುವುದು. ತರಕಾರಿಯೋ, ಮತ್ತಿನ್ನೇನಾದರೋ ನಮಗೆ ಅದರಲ್ಲಿ ಕೃಷಿ ಮಾಡಬಹುದಲ್ಲ. ಖಂಡಿತವಾಗಿಯೂ ಏನೇನೂ ಇಲ್ಲದವರಾದರೆ, ಯಾವ ಕೆಲಸ ಮಾಡಲೂ ತಯಾರಾಗಿರಬೇಕು. ಹಲವು ತೆರದ ಕೆಲಸಗಳಿವೆ; ಹಲವರನ್ನು ಸಂಪರ್ಕಿಸಿರಿ. ಹಲವು ಕದಗಳನ್ನು ತಟ್ಟಿರಿ. ಉನ್ನತ ಹುದ್ದೆಯೇ ಬೇಕೆಂದಾದರೆ ನಿರಾಸೆಯಾಗ ಬಹುದು. ಎಲ್ಲರೂ ಆಫೀಸರುಗಳಾಗಬೇಕೆಂದು ಬಯಸಿದರೆ ಸಣ್ಣ ಕೆಲಸಕ್ಕೆ ಯಾರೂ ಸಿಗುವುದಿಲ್ಲ. ನೀವಾಗಿಯೇ ನಶಿಸಬೇಡಿ. ಯಾವುದಾದರೂ ಕೆಲಸಕ್ಕೆ ಹೋಗಲು ಪ್ರಯತ್ನಿಸಿರಿ. ಧೈರ್ಯದೊಂದಿಗೆ ಸಿದ್ಧರಾಗಿರಿ.

 

ಹಳ್ಳಿಯಲ್ಲಿ ಮಹಾತ್ಮ

’ಯಾಕಾಗಿ ಭಗವಂತನು ಎಲ್ಲರನ್ನೂ ಸುಖಿಗಳನ್ನಾಗಿಸುವುದಿಲ್ಲ ? ಯಾಕಾಗಿ ಕೆಲವರನ್ನು ಮಾತ್ರ ಕಷ್ಟಕ್ಕೀಡು ಮಾಡುತ್ತಾನೆ ?’ – ಹಲವರು ಕೇಳುವುದಿದೆ. ಆದರೆ ಭಗವಂತನು ಯಾರನ್ನೂ ಉಪವಾಸ ಹಾಕುವುದಿಲ್ಲ. ಯಾರನ್ನು ಕಷ್ಟಕ್ಕೀಡು ಮಾಡುವುದೂ ಇಲ್ಲ. ಪ್ರತಿಯೊಬ್ಬರಿಗೂ ಏನೆಲ್ಲ ಅವಶ್ಯವಿದೆಯೋ ಅದೆಲ್ಲ ಅವನು ಕೊಟ್ಟಿದ್ದಾನೆ. ಎಲ್ಲ ಅವಶ್ಯಕತೆಗೆ ತಕ್ಕಷ್ಟು ಮಾತ್ರ.

ಒಂದು ಹಳ್ಳಿಗೆ ಒಬ್ಬ ಮಹಾತ್ಮ ಹೋಗುತ್ತಾನೆ. ಅಲ್ಲಿರುವವರು ಆತನ ಹತ್ತಿರ ಎಲ್ಲರನ್ನೂ ಸುಖಿಗಳನ್ನಾಗಿ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ಅವರ ಮನೋಗತ ಅರ್ಥ ಮಾಡಿಕೊಂಡ ಆ ಮಹಾತ್ಮ ಅವರಿಗೆ ಬೇಕಾದ್ದನ್ನೆಲ್ಲ ನೀಡುತ್ತಾನೆ. ಧನ, ಕಟ್ಟಡ ಎಲ್ಲ ಕೊಡುತ್ತಾನೆ. ಎಷ್ಟೋ ದಿನಗಳ ನಂತರ ಪುನಃ ಆತ ಆ ಹಳ್ಳಿಗೆ ಹೋಗುತ್ತಾನೆ. ಆದರೆ ಅಲ್ಲಿಂದ ಹಾದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಹಳ್ಳಿಯಲ್ಲೆಲ್ಲ ಕೊಳೆತು ನಾರುವ ವಾಸನೆ. ಎಲ್ಲೆಲ್ಲೂ ಕಸ ಕಡ್ಡಿ ತುಂಬಿ ಕೊಂಡಿದೆ. ಶುಚಿತ್ವ ಇಲ್ಲದಿರುವ ಕಾರಣ, ರೋಗದಿಂದಾಗಿ ಜನರು ಕಷ್ಟ ಪಡುತ್ತಿದ್ದಾರೆ. ಗುಡಿಸಲುಗಳಿಗೆ ಛಾವಣಿಯಿಲ್ಲ, (ಹಳೇ ಕಾಲದಲ್ಲಿ ಮನೆಗಳಿಗೆ ಹುಲ್ಲಿನ ಛಾವಣಿಯಿರುತ್ತಿತ್ತು.) ಹೊಲ ಉತ್ತಿಲ್ಲ. ಎಲ್ಲರೂ ಉಪವಾಸ. ಕಾರಣ ಹುಡುಕಿದಾಗ, ಕೃಷಿ ಮಾಡಲು ಕೆಲಸದಾಳುಗಳಿಲ್ಲ. ಕೆಲಸ ಮಾಡಲು ಯಾರೂ ತಯಾರಿಲ್ಲ. ಮಹಾತ್ಮನನ್ನು ನೋಡಿದೊಡನೆ ಎಲ್ಲರೂ ಅವನ ಹತ್ತಿರ ಧಾವಿಸುತ್ತಾರೆ. ಎಲ್ಲವನ್ನು ಮೊದಲಿನಂತೆ ಮಾಡಿಕೊಡಬೇಕೆಂದು ಬೇಡಿಕೊಳ್ಳುತ್ತಾರೆ.

ಅದನ್ನೇ ಹೇಳಿರುವುದು, ಅವಶ್ಯಕತೆಗನುಗುಣವಾಗಿ ಬೇಕಾದ್ದನ್ನೆಲ್ಲ ಮನುಷ್ಯನಿಗೆ ಭಗವಂತ ಕೊಟ್ಟಿರುತ್ತಾನೆ. ಅದಕ್ಕಿಂತ ಹೆಚ್ಚೇನಾದರೂ ಕೊಟ್ಟರೆ, ಅವರು ಅದರ ಎರಡರಷ್ಟು ನಶಿಸುತ್ತಾರೆ. ದೇವರು ಲೋಕದಲ್ಲಿ ಅವಶ್ಯಕತೆಗಿಂತ ಹೆಚ್ಚು ಏನೂ ಮಾಡಿಲ್ಲ; ಎಲ್ಲ ಅವಶ್ಯಕತೆಗೆ ತಕ್ಕಷ್ಟು ಮಾತ್ರ.