ಜುಲೈ ೨೧, ೨೦೧೫, ಫ್ರಾನ್ಸ್ ನ ರಾಜಧಾನಿಯಾದ ಪ್ಯಾರಿಸ್ ನಲ್ಲಿ – “ಕ್ಲೈಮ್ಯಾಕ್ಟಿಕ್ ಕಾನ್ ಶನ್ಸ್” ಕುರಿತು ನಡೆದ ಶೃಂಗ ಸಭೆಗೆ ಕಳುಹಿಸಲಾದ ಅಮ್ಮನ ವಿಡಿಯೋ ಸಂದೇಶ.

“ಪ್ರೇಮ ಸ್ವರೂಪಿಗಳು ಆತ್ಮಸ್ವರೂಪಿಗಳಾದ ಎಲ್ಲರಿಗೂ ನಮಸ್ಕಾರ.

ಕೆಲವು ಮಕ್ಕಳು ಹೇಳುತ್ತಾರೆ, ’ತಲೆಸುತ್ತುತ್ತಾ ಇದೆ ಅಮ್ಮ, ಬೀಳುವಂತಾಗುತ್ತಿದೆ, ಬ್ಯಾಲೆಂಸ್ ಹೋಗುತ್ತಿದೆ’ ಎಂದು. ಅದು ಕಿವಿಗಳೊಳಗಿರುವ ಒಂದು ಬಗ್ಗೆಯ ಅಣುಕೋಶಗಳಿಗೆ ಉಂಟಾಗುವ ಅಲುಗಾಟದಿಂದಾಗಿ ಈರೀತಿ ಉಂಟಾಗುವಂಥದ್ದು. ಸರಿಹೋಲುವಂತೆ ಅದೇ ಅವಸ್ಥೆಯಂತೆ ಇಂದು ಪ್ರಕೃತಿಯ ಅವಸ್ಥೆಯೂ ಕೂಡ. ಹಾಗಾಗಿ ಬಂದೂಕಿನ ಮುಂದೆ ನಿಂತಿರುವಾಗ ಉಂಟಾಗುವ ಶ್ರದ್ಧೆಯು ಜಾಗರೂಕತೆಯು ಎಲ್ಲರಿಗೂ ಉಂಟಾಗಬೇಕು.

ನನ್ನ ಚಿಕ್ಕವಯಸ್ಸಿನಲ್ಲಿ ಅಮ್ಮನ* ಗ್ರಾಮದಲ್ಲಿ ಉಂಟಾದ ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ಒಂದು ದಿನ ಹತ್ತಿರದ ಮನೆಯೊಂದಕ್ಕೆ ಅಮ್ಮ ಹೋದಾಗ ಕಂಡ ದೃಶ್ಯವಿದು. ತಂದೆತಾಯಿಯ ಮಡಿಲಲ್ಲಿ ಅವರ ಹನ್ನೊಂದು ಮಕ್ಕಳು ದಣಿದು ಮಲಗಿದ್ದಾರೆ. ’ನೆನ್ನೆ ಅಡುಗೆಯೇನು ಮಾಡಿಲ್ಲ ಹಾಗಾಗಿ ಮರಗೆಣಿಸಿನ ಸಿಪ್ಪೆಯಿಲ್ಲ ಮಗಳೆ’ ಎಂದು ನನಗೆ ಹೇಳಿದರು**. ಆಗ ನಾನು ಕೇಳಿದೆ ಯಾರಬಳಿಯಾದರು ಸಾಲಮಾಡಿ ಮಕ್ಕಳಿಗೆ ಅಡುಗೆ ಮಾಡಿ ಊಟ ಹಾಕಬಾರದಾಗಿತ್ತೆ ಎಂದು. ಅವರು ಹೇಳಿದರು, ’ತಂದೆ ಕೆಲಸಕ್ಕೆ ಹೋಗಿ ಏನೂ ಸಿಗದೆ ಹಿಂತಿರುಗಿ ಬಂದರು. ನಂತರ ಹತ್ತು ಕಿಲೋಮೀಟರು ದೂರದಲ್ಲಿರುವ ಬಂಧು ಒಬ್ಬರ ಮನೆಗೆ ಹಣವನ್ನು ಸಾಲಕ್ಕಾಗಿ ಪಡೆಯಲು ನಡೆದೇ ಹೋದರು ಆದರೆ ಹಣ ಸಿಗಲಿಲ್ಲ. ಹಿಂತಿರುಗಿ ಬರುವಾಗ ರಾತ್ರಿಯಾಗಿತ್ತು. ಆದರೆ ಬೆಳದಿಂಗಳ ರಾತ್ರಿಯಾದ ಕಾರಣ ಕಡಲ ತೀರದ ಮಾರ್ಗವಾಗಿ ಬರುವಾಗ ಆಮೆಯೊಂದು ಕಡಲದಂಡೆಯೇರಿ ಮೊಟ್ಟೆಯಿಡುತ್ತಿರುವುದನ್ನು ಕಂಡ. ಆಮೆ ಮೊಟ್ಟೆಯಿಟ್ಟು ಮರಳಿಹೋದ ಬಳಿಕ ಅದರಿಂದ ಕೆಲವು ಮೊಟ್ಟೆಗಳನ್ನು ತೆಗೆದುಕೊಂಡು ಬಂದು ಮಕ್ಕಳಿಗೆ ಎರಡು ಮೂರು ಮೊಟ್ಟೆ ಬೇಯಿಸಿ ಕೊಟ್ಟರು’ ಎಂದು ಹೇಳಿದಳು. ಆಗ ಮಗನೊಬ್ಬನು ಎದ್ದು ಕೇಳಿದನು. ’ಅಪ್ಪಾ ಎಲ್ಲ ಮೊಟ್ಟೆಗಳನ್ನು ಏಕೆ ತೆಗೆದುಕೊಂಡುಬರಲಿಲ್ಲ? ಆಗ ಇನ್ನಷ್ಟು ತಿನ್ನಬಹುದಾಗಿತ್ತಲ್ಲಾ.’ಎಂದು. ಆಗ ಆ ತಂದೆ ತನ್ನ ಮಗನಿಗೆ ಹೇಳಿದ, ’ಮಗನೇ! ನೀವೆಲ್ಲರೂ ಮರಣಹೊಂದಿದರೆ ನಾನು ಎಷ್ಟು ದುಃಖಕ್ಕೀಡಾಗಬಹುದೋ ಅಂತೆಯೇ ಎಲ್ಲಾ ಮೊಟ್ಟೆಗಳನ್ನು ತೆಗೆದುಕೊಂಡಲ್ಲಿ ಆ ಆಮೆಯೂ ದುಃಖಕ್ಕೀಡಾಗಬಹುದು. ಅದು ಮಾತ್ರವಲ್ಲ ಅದರ ಪರಂಪರೆ ನೆಲೆನಿಂತರಲ್ಲವೇ ಊಟಕ್ಕಿಲ್ಲದಾಗುವ ಸರಿಸ್ಥಿತಿಯಲ್ಲಿ ಹಸಿವನ್ನು ಹಿಂಗಿಸಿಕೊಳ್ಳಲು ಈರೀತಿಯಂತೆ ಸ್ವಲ್ಪವಾದರೂ ಸಿಕ್ಕಬಹುದು.

ಹಾಗಾದಲ್ಲಿ ನೋಡಿ ಇಲ್ಲಿ ತಾನು ಹಸಿವಿನಿಂದ್ದಿದ್ದರೂ ಬೇರೆಯವರ ವೇದನೆ ಸ್ಮರಿಸಿಕೊಳ್ಳುತ್ತಿದ್ದಾನೆ. ತನ್ನ ದುಃಖದಲ್ಲಿಯೂ ಇನ್ನೊಬ್ಬರ ಪ್ರತಿ ಕಾರುಣ್ಯವನ್ನು ತೋರುತ್ತಿದ್ದಾನೆ. ಆ ಒಂದು ಮನೋಭಾವವಾಗಿತ್ತು ನಮ್ಮ ಪೂರ್ವಜರಿಗೆ ಇದ್ದದ್ದು. ಆದರೆ ಇಂದು ಆಮೆಯನ್ನೂ ಹಾಗು ಎಲ್ಲವನ್ನೂ ಹಣಕ್ಕಾಗಿ ರಫ್ತುಮಾಡುತ್ತಾರೆ. ಒಂದೊಂದು ವೃಕ್ಷವನ್ನು ಕತ್ತರಿಸುವಾಗಲೂ ಅದು ನಮಗೆ ಶವಪೆಟಿಗೆಯನ್ನು ನಿರ್ಮಾಣ ಮಾಡುವ ಸಲುವಾಗಿ ವೃಕ್ಷಗಳನ್ನು ಕತ್ತರಿಸುತ್ತಿರುವಂತೆ ಆಗಿಹೋಗುತ್ತಿದೆ. ಬಹಳಷ್ಟು ವೃಕ್ಷಗಳನ್ನು ಕತ್ತರಿಸಿಯಾಗಿದೆ. ಆಗ ಒಂದು ವೃಕ್ಷವನ್ನು ಕತ್ತರಿಸಿದರೆ ಒಂದು ವೃಕ್ಷವನ್ನು ನೆಟ್ಟರೆ ಸಾಲದು, ಕನಿಷ್ಠ ಸುಮಾರು ನಲವತ್ತು ಐವತ್ತು ವೃಕ್ಷಗಳನ್ನಾದರೂ ಈ ಅವಸ್ಥೆಯಲ್ಲಿ ನೆಡಬೇಕು.

ಈಗ ಸುಮಾರು ಐದು ಲಕ್ಷ ಜನರಿಗೆ ಪರಿಸರ ಮಾಲಿನ್ಯದಿಂದಾಗಿ ಕ್ಯಾನ್ಸರ್ ತಗುಲಿದೆ. ಹಿಂದೆ ನಮಗೆ ಗಾಯವಾದಲ್ಲಿ ಶೆಗಣಿಯನ್ನು ಗಾಯಕ್ಕೆ ಹಚ್ಚಿ ಗುಣಪಡಿಸುತ್ತಿದ್ದರು. ಗಾಯ ಕೊಳೆತುಹೋಗದಿರಲು ಶೆಗಣಿಯನ್ನು ಹಚ್ಚಲಾಗುತ್ತಿತ್ತು. ಆದರೆ ಈಗ ಗಾಯಕ್ಕೆ ಶೆಗಣಿ ತಾಕಿದರೆ ಗಾಯ ಕೊಳೆತುಹೋಗುತ್ತದೆ. ಅಂದು ಔಷಧವಾಗಿದ್ದದ್ದು ಇಂದು ವಿಷವಾಗಿದೆ.

ಪ್ರಪಂಚದಲ್ಲಿ ಯಾವುದೂ ನಿಕೃಷ್ಟವಲ್ಲ. ಒಂದು ವಿಮಾನದ ಎಂಜಿನ್ ಕೆಟ್ಟುಹೋದಲ್ಲಿ ಹಾರಲು ಸಾಧ್ಯವಿಲ್ಲ, ಒಂದು ಸ್ಕ್ರೂ ಇಲ್ಲದ್ದಿದ್ದರೂ ಹಾರಲು ಸಾಧ್ಯವಿಲ್ಲ. ಎಲ್ಲಕ್ಕೂ ಅದರದ್ದೇ ಆದ ಸ್ಥಾನವಿದೆ. ಜೇನುನೊಣ ಪುಷ್ಪಪರಾಗ ಉದುರಿಸಿ ಗರ್ಭೋತ್ಪತ್ತಿ (ಪಾಲಿನೇಶನ್) ಮಾಡುವುದರಿಂದಾಗಿಯೇ ನಮಗೆ ಫಲಗಳು, ತರಕಾರಿಗಳು ದೊರಕ್ಕುತ್ತಿರುವುದು. ಆ ಜೇನುನೊಣವು ಮೂರು ಕಿಲೋಮೀಟರ್ ದೂರದವರೆಗೆ ಹಾರಾಡುತ್ತಿತ್ತು. ಹೂಗಳಿಗೆ ಹೆಚ್ಚು ಹೆಚ್ಚು ಕ್ರಿಮಿನಾಶಕ ಔಷಧಗಳನ್ನು ಸಿಂಪಡಿಸುವ ಕಾರಣ ಇಂದು ಆ ಜೇನುನೊಣಗಳಿಗೆ ನೆನಪಿನ ಶಕ್ತಿ ಹೊರಟುಹೋಗಿದೆ. ಹಾಗಾಗಿ ಹೂಗಳಿರುವ ಗಿಡಗಳು, ಜೇನುಗೂಡುಗಳು ಎಥೇಚ್ಚವಾಗಿ ಬೇಕಾಗಿದೆ. ನಮ್ಮ ಲಕ್ಷಾಂತರ ಭಕ್ತರುಗಳು ಇದನ್ನು ಮಾಡುತ್ತಿದ್ದಾರೆ ಆದರೂ ಇನ್ನೂ ಹೆಚ್ಚು ಭಕ್ತರು ಜಾಗರೂಕತೆಯಿಂದ ಜೇನುಗೂಡುಗಳನ್ನು ನಿರ್ಮಿಸಬೇಕು ಹಾಗು ಹೆಚ್ಚು ಹೆಚ್ಚು ಹೂಗಳನ್ನು ಬಿಡುವ ಗಿಡಗಳನ್ನು ನೆಡಬೇಕು.

ನಮ್ಮನ್ನು ಹೆಡೆದ ತಾಯಿ ಐದು ವಯಸ್ಸಿನವರೆಗೆ ನಮ್ಮನ್ನು ತನ್ನ ಮಡಿಲಲ್ಲಿ ಇರಿಸಿಕೊಳ್ಳಬಹುದು. ಭೂಮಿತಾಯಿ ಹಾಗಲ್ಲ! ನಮ್ಮ ಜೀವಿತಕಾಲ ಪೂರ್ತ ನಮ್ಮಯ ತುಳಿತವನ್ನು, ಅವಳ ಮೇಲೆ ಉಗುಳುವುದನ್ನು, ಅವಳನ್ನು ಬಗೆಯುವುದನ್ನು ಅನುಮತಿಸುವ ತಾಯಿಯವಳು. ಜೀವಿತಕಾಲ ಪೂರ್ತ ನಮ್ಮನ್ನು ಸಲಹಿ ಬೆಳೆಸುವ ಅಮ್ಮ ಅವಳು. ಎಲ್ಲದರ ಪೂಷಕ ಶಕ್ತಿಯಾಗಿರುವ ಅಮ್ಮ ಅವಳು. ಆ ತಾಯಿಯ ಪ್ರತಿ ನಮಗಿರುವ ಕರ್ತವ್ಯವನ್ನು ಮರೆಯಬಾರದು.

ಒಂದು ಕಟ್ಟಡದ ಮೊದಲನೇಯ ಮಹಡಿಯಲ್ಲಿ ಬೆಂಕಿಹೊತ್ತಿಕೊಂಡಾಗ ’ಅಯ್ಯೋ! ಓಡಿ ಬನ್ನಿ! ರಕ್ಷಿಸಿರಿ!’ ಎಂಬುದಾಗಿ ಕೇಳಿಬಂದ ಆರ್ಥಕೂಗಿಗೆ ಹತ್ತನೇ ಮಹಡಿಯಲ್ಲಿರುವ ಒಬ್ಬಾತ ’ಅದು ಅವನ ಸಮಸ್ಯೆ! ನನ್ನ ಸಮಸ್ಯೆಯಲ್ಲ’ ಎಂದು ಚಿಂತಿಸಿದರೆ ಕಡೆಗೆ ಅದು ನಮ್ಮದೇ ಸಮಸ್ಯೆಯಾಗಿ ಬರುತ್ತದೆ. ಇದನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಅವನ ಸಮಸ್ಯೆ ನಮ್ಮಯ ಸಮಸ್ಯೆಯೆಂದು ಎಣಿಸಿ ನಾವು ಬದಲಾಗಲೇಬೇಕು.

ಪ್ರಪಂಚಕ್ಕೆ ಒಂದು ತಾಳಲಯವಿದೆ. ಈ ವಿಶ್ವಕ್ಕೂ ಅದರೊಳಗಿರುವ ಜೀವಜಾಲಗಳಿಗೂ ಮಧ್ಯೆ ಅಭೇದ್ಯವಾದ ಬಾಂಧವ್ಯವುಂಟು. ಪರಸ್ಪರ ಬಂಧಿತವಾಗಿರುವ ನೆಟ್ವರ್ಕ್ನಂತೆ (ಅಂರ್ತಜಾಲದಂತೆ) ಈ ಪ್ರಪಂಚ. ನಾಲ್ಕುಜನ ಸೇರಿ ಒಂದು ಬಲೆಯನ್ನು ಹಿಡಿದಿರುವಾಗ ಎಲ್ಲಿಯೇ ಒಂದು ಸಣ್ಣ ಚಲನೆಯುಂಟಾದರೂ ಅದು ಉಳಿದ ಎಲ್ಲ ಕಡೆಯೂ ಪ್ರತಿಫಲಿಸುತ್ತದೆ. ಆದ್ದರಿಂದ ನಾವು ಅರಿತೋ ಅರಿಯೆದೆಯೋ ಒಂಟಿಯಾಗಿಯೋ ಅಥವಾ ಗುಂಪಾಗಿಯೋ ಮಾಡುವ ಎಲ್ಲಾ ಕರ್ಮಗಳು ಪ್ರಪಂಚವೆಂಬ ಬಲೆಯ ಮೂಲೆಯೊಂದರಲ್ಲಿ ಪ್ರತಿಫಲಿಸುತ್ತದೆ. ಅವರು ಬದಲಾದ ಮೇಲೆ ನಾವು ಬದಲಾಗುತ್ತೇವೆ ಎಂದು ಯೋಚಿಸಿದರೆ ಅದು ಸಾಧ್ಯವಿಲ್ಲ. ಅವರು ಬದಲಾಗದ್ದಿದ್ದರೂ ನಾವು ಬದಲಾದಲ್ಲಿ, ಪರಿವರ್ತನೆಯನ್ನು ತರಬಹುದು. ನಮಗೆ ಏನು ಮಾಡಲು ಸಾಧ್ಯವೆಂದು ನಾವು ನೋಡಬೇಕು.

ಮದರ್ಸ್ ಡೇ ಫಾದರ್ಸ್ ಡೇ ಯನ್ನು ಅದ್ದೂರಿಯಾಗಿ ಆಚರಿಸುವಂತೆ ನಾವೆಲ್ಲರೂ ಪ್ರಕೃತಿಯನ್ನು ಗೌರವಿಸುವ ಆರಾಧಿಸುವ ಒಂದು ದಿನ ಉಂಟಾಗಬೇಕು. ಅಂದು ಲೋಕದ ಎಲ್ಲ ಜನರು ಕಡ್ಡಾಯವಾಗಿ ಸಸಿಗಳನ್ನು ನೆಡಬೇಕು.

ಇದಕ್ಕೂ ಹಿಂದೆ ಮೂರುಸಾವಿರ ಚದುರ ಅಡಿ ಮನೆಯನ್ನು ನಿರ್ಮಿಸಿದವರು ಹಾಗು ಇನ್ನು ಮುಂದೆ ಮನೆಯನ್ನು ನಿರ್ಮಿಸಲು ಇಚ್ಚಿಸುವವರು ಸಾವಿರದ ಐನೂರು ಚದುರ ಅಡಿ ಮನೆಯನ್ನು ನಿರ್ಮಿಸಿ. ಎರಡು ಸಾವಿರ ಚದುರ ಅಡಿ ನಿರ್ಮಾಣದ ಉದ್ದೇಶವಿರುವವರು ಒಂದು ಸಾವಿರ ಚದುರ ಅಡಿ ಕಮ್ಮಿಮಾಡಿಕೊಳ್ಳಿ. ಒಂದು ಸಾವಿರ ಚದುರ ಅಡಿ ಕಟ್ಟಲು ಉದ್ದೇಶಿಸಿರುವವರು ಐನೂರು ಚದುರ ಅಡಿ ಕಮ್ಮಿಮಾಡಿಕೊಳ್ಳಿ. ಆಗ ಅಷ್ಟು ವೃಕ್ಷಗಳು ಸಮಾಜದಲ್ಲಿ ಕತ್ತರಿಸಲ್ಪಡುವುದು ಕಮ್ಮಿಯಾಗುವುದು. ವಿದ್ಯುಚ್ಛಕ್ತಿಯ ಬಳಕೆಯೂ ಕೂಡ ಕಮ್ಮಿಯಾಗುವುದು. ಅಷ್ಟೋಂದು ವೃಕ್ಷಗಳನ್ನು ನಾವು ನಾಶಮಾಡುವ ಅಗತ್ಯವಿಲ್ಲ. ಕಾರ್ ಪೂಲಿಂಗ್ ಮೂಲಕ ಇಂಧನದ ಉಳಿತಾಯವನ್ನು ಮಾಡಬಹುದು. ಈರೀತಿಯಲ್ಲಿ ಕ್ರಮ ಕ್ರಮವಾಗಿ ಬದಲಾವಣೆಯುಂಟಾದಲ್ಲಿ ಪ್ರಕೃತಿಯಲ್ಲಿ ಸ್ವಲ್ಪ ವ್ಯತ್ಯಾಸವನ್ನುಂಟುಮಾಡುವಲ್ಲಿ ಸಾಧ್ಯವಾಗುತ್ತದೆ. ಸಾವಿರ ಡಾಲರುಗಳ ಪೆನ್ ಖರೀದಿಸಿ ಬರೆಯಬಹುದು ಹಾಗೆಯೇ ನೂರು ಡಾಲರುಗಳ ಪೆನ್ ಖರೀದಿಸಿಯೂ ಬರೆಯಬಹುದು. ಅಕ್ಷರಗಳು ಮೂಡುತ್ತವೆ. ಆಡಂಬರವನ್ನು ತ್ಯಜಿಸಿದರೆ ತನಗೆ ಅಗತ್ಯವಿರುವುದನ್ನು ತೆಗೆದುಕೊಂಡು ಉಳಿದುದರಲ್ಲಿ ಇತರರಿಗೆ ಸಹಾಯವನ್ನು ನೀಡಬಹುದು.

ಒಂದು ದೊಡ್ಡ ಸರೋವರ ಮಲಿನವಾಗಿದೆಯೆಂದು ಭಾವಿಸಿ. ಹೇಗೆ ಅದನ್ನು ನಾವೊಬ್ಬರೇ ಒಂಟಿಯಾಗಿ ಸ್ವಚ್ಛವಾಗಿಸಲು ಸಾಧ್ಯವೆಂದು ಯೋಚಿಸಿ ಹತಾಶಗೊಂಡು ಹಿಂತಿರುಗಿ ಹೋಗುವುದಲ್ಲ ನಾವು ಮಾಡಬೇಕಿರುವುದು. ನಮಗೆ ಸಾಧ್ಯವಾಗುವಷ್ಟು ಸ್ವಚ್ಛವಾಗಿಸುವ. ಅದನ್ನು ನೋಡಿ ಮತ್ತೊಬ್ಬ ವ್ಯಕ್ತಿ ಸ್ವಚ್ಛವಾಗಿಸುತ್ತಾನೆ. ಅದನ್ನು ನೋಡಿ ಮತ್ತೊಬ್ಬ ವ್ಯಕ್ತಿ ಬರುತ್ತಾನೆ. ಹಾಗೆ ಸ್ವಚ್ಛವಾಗಿಸುತ್ತಾ, ಸ್ವಚ್ಛವಾಗಿಸುತ್ತಾ ಇಡೀ ಸರೋವರವೇ ಸ್ವಚ್ಛವಾಗುತ್ತದೆ. ಆದ್ದರಿಂದಾಗಿ ಹಿಂದೆಸರಿಯುವುದಲ್ಲ ಮಾಡಬೇಕಾಗಿರುವುದು ಬದಲಿಗೆ ಶ್ರಮಿಸಬೇಕು.

ಕಾರ್ ಪೂಲಿಂಗ್ ಮಾಡುವುದನ್ನು, ಜೇನುನೊಣಗಳನ್ನು ಪಾಲಿಸುವುದನ್ನು, ಸಸಿಗಳನ್ನು ನೆಡುವುದನ್ನು, ಅಂತರೀಕ್ಷವನ್ನು ಶುದ್ಧೀಕರಿಸುವುದನ್ನು, ಪ್ರಕೃತಿಯನ್ನು ಮಾಲಿನ್ಯ ಮುಕ್ತವಾಗಿಸುವುದನ್ನು, ತರಕಾರಿಗಳನ್ನು ಬೆಳೆಯುವುದನ್ನು ಎಷ್ಟೋ ವರ್ಷಗಳ ಹಿಂದೆಯೇ ಅಮ್ಮ ಹೇಳುತ್ತಿದ್ದೂ, ಅಮ್ಮನ ಮಕ್ಕಳು ಅವನ್ನು ಕಾರ್ಯಗತ ಗೊಳಿಸುತ್ತಿದ್ದಾರೆಯೂ ಕೂಡ. ಮತ್ತೊಮ್ಮೆ ಜಾಗೃತರಾಗಿ ಎಲ್ಲರೂ ಒಗ್ಗೂಡಿದರೆ ಈ ಭೂಮಿಯನ್ನು ನಮಗೆ ಸ್ವರ್ಗವಾಗಿಸಲು ಸಾಧ್ಯವಿದೆ. ಇದಾಗಲು ಕೃಪೆಯು ಎಲ್ಲರನ್ನು ಅನುಗ್ರಹಿಸಲೀ ಎಂದು ಪರಮಾತ್ಮನಲ್ಲಿಯೇ ಪ್ರಾರ್ಥಿಸುತ್ತೇನೆ.”

******
ಪ್ಯಾರೀಸ್ ನಲ್ಲಿ ನಡೆದ “ಕ್ಲೈಮ್ಯಾಕ್ಟಿಕ್ ಕಾನ್ ಶನ್ಸ್” ಶೃಂಗ ಸಭೆಗೆ ಅಮ್ಮನನ್ನು ಫ್ರೆಂಚ್ ರಾಷ್ಟ್ರಪತಿಗಳಾದ ಫ್ರಾನಕೊಯಿಸ್ ಹೊಲ್ಲಾಂಡೆ ಅವರ ವಿಶೇಷ ರಾಜಪ್ರತಿನಿಧಿಯ ಮೂಲಕ ಆಹ್ವಾನಿಸಲ್ಪಟ್ಟಿದ್ದರೂ ತಮ್ಮ ಏಳುವಾರಗಳ ಅಮೆರಿಕೆಯ ಸಂದರ್ಶನಾಯಾತ್ರೆಯ ಕಾರಣದಿಂದಾಗಿ ಅಮ್ಮನಿಗೆ ಪ್ರಾಕೃತಿಕವಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅಮ್ಮನ ಪ್ರತಿನಿಧಿಯಾಗಿ ಮಾತಾ ಅಮೃತಾನಂದಮಯಿ ಮಠದ ಉಪಾಧ್ಯಕ್ಷರಾದ ಸ್ವಾಮಿ ಅಮೃತಸ್ವರೂಪಾನಂದ ಪುರಿಗಳು ಅಮ್ಮನ ಸಂದೇಶವನ್ನು ಸಭೆಯಲ್ಲಿ ಪ್ರಸ್ತುತಪಡಿಸಿದರು.

ಈ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ಯಾರಿಸ್ ನಲ್ಲಿ ನಡೆಯಲಿರುವ “ಸುಸ್ಥಿರ ಅಭಿವೃದ್ಧಿ” ಕುರಿತ ಶೃಂಗ ಸಭೆಯಾದ “ಕಾಪ್ ೨೧” ಗೆ ಶಕ್ತಿಶಾಲಿಯೂ ಫಲಪ್ರದವೂ ಆದ ನೀತಿಗಳನ್ನು ರೂಪಿಸಬೇಕೆಂಬ ಅವಶ್ಯಕತೆಯನ್ನು ಸಾರ್ವತ್ರಿಕವಾಗಿ ವಿಶ್ವದ ಪ್ರಮುಖ ಆಧ್ಯಾತ್ಮಿಕ, ಧಾರ್ಮಿಕ, ಮಾನವೀಯ ಸಂಸ್ಥೆಗಳ ನಾಯಕರುಗಳು ಭಾಗವಹಿಸಿದ ಶೃಂಗ ಸಭೆಯು ಸೂಚಿಸಿತು. ಕಾನ್ಸ್ಟಾಂಟಿನೋಪಲ್ ಆರ್ಚ್ಬಿಷಪ್ ಬಾರ್ಥಲೋಮಿಯೋ ೧, ಸಂಯುಕ್ತ ರಾಷ್ಟ್ರಗಳ ಭೂತಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಎಮ್.ಕೋಫಿ ಹನ್, ನೋಬೆಲ್ ಪೀಸ್ ಪ್ರಶಸ್ತಿವಿಜೇತ ಡಾ| ಮೊಹಮದ್ ಯೂನಸ್, ನಟ ಮತ್ತು ಸಮಾಜ ಸೇವಕನೂ ಆದ ಆರ್ನಾಲ್ಡ್ ಶ್ವಾಜ಼್ನೇಗರ್, ಮುಂತಾದ ವಿಶ್ವದ ಅನೇಕ ರಾಷ್ಟ್ರಗಳ ಧಾರ್ಮಿಕ ಮುಖಂಡರುಗಳು, ಆಡಳಿತ ನಾಯಕರುಗಳು, ರಾಜಕೀಯ ಧುರೀಣರು, ಸಂಯುಕ್ತ ರಾಷ್ಟ್ರಗಳ ವಿವಿಧ ಸಂಸ್ಥೆಗಳ ನಾಯಕರುಗಳು ಮೊದಲಾದವರು ಪ್ಯಾರಿಸ್ ಶೃಂಗ ಸಭೆಯಲ್ಲಿ ಭಾಗವಹಿಸಿದರು.

*****

foot note:
* ಅಮ್ಮ ಕೆಲವೊಮ್ಮೆ ತಮ್ಮನ್ನು ಮೂರನೇಯ ವ್ಯಕ್ತಿಯನ್ನು ಸಂಬೋಧಿಸುವಂತೆ ಸಂಬೋಧಿಸಿಕೊಳ್ಳುತ್ತಾರೆ.
** ಹಿಂದೆ ಅಮ್ಮನ ಬಾಲ್ಯಕಾಲದಲ್ಲಿ ತಮ್ಮ ಮನೆಯಲ್ಲಿದ್ದ ಹಸುಗಳಿಗೆ ಮೇವನ್ನು ಹಾಕುವಸಲುವಾಗಿ ಅಕ್ಕ ಪಕ್ಕದ ಮನೆಗಳಿಲ್ಲಿ ತರಕಾರಿಯ ಸಿಪ್ಪೆಗಳನ್ನು, ಗೆಡ್ಡೆ ಗೆಣಸಿನ ಸಿಪ್ಪೆಗಳನ್ನು, ಅಕ್ಕಿಯನ್ನು ತೊಳೆದ ನೀರನ್ನು ತರಲು ಪುಟ್ಟ ಸುಧಾಮಣಿಯನ್ನು (ಅಮ್ಮನನ್ನು) ಕಳುಹಿಸಲಾಗುತ್ತಿದ್ದ ಸಂದರ್ಭವದು.

ಮಕ್ಕಳೇ, ಮುಂದಿನ ಹತ್ತಿರದ ಹೊರೆಗಲ್ಲಿನಲ್ಲಿ,* ಭಾರವನ್ನು ಇಳಿಸಬಹುದೆಂದು ಎಣಿಸಿದಾಗ ನಮ್ಮ ಭಾರ ಕಮ್ಮಿಯಾದಂತನಿಸುತ್ತದೆ; ಭರವಸೆ ಮೂಡುತ್ತದೆ. ಅದು ಬಹಳ ದೂರ ಎಂದು ಭಾವಿಸಿದಾಗ, ಭಾರ ಹೆಚ್ಚಾದಂತನಿಸುತ್ತದೆ. ಭಗವಂತನು ನಮ್ಮ ಹತ್ತಿರವಿದ್ದಾನೆ ಎಂದು ಭಾವಿಸಿರಿ. ಎಲ್ಲಾ ಭಾರವೂ ಕಮ್ಮಿಯಾಗುತ್ತದೆ. ದೋಣಿಯೋ, ಬಸ್ಸೋ ಹತ್ತಿದ ಮೇಲೆ, ಯಾತಕ್ಕೆ ಇನ್ನೂ ಭಾರ ಹೊರಬೇಕು ? ಅದನ್ನು ಅಲ್ಲೇ ಬಿಡಿರಿ. ಇದೇ ರೀತಿ, ದೇವರಿಗೆ ಎಲ್ಲವನ್ನೂ ಸಮರ್ಪಿಸಿರಿ. ಅವನು ನಮ್ಮನ್ನು ಕಾಪಾಡುವನು.

  • * ಹಿಂದಿನಕಾಲದಲ್ಲಿ ಹಳ್ಳಿಗಳಲ್ಲಿ ಬೆನ್ನು ಹೊರೆ ಹಾಗೂ ತಲೆ ಹೊರೆ ಹೊತ್ತುಕೊಂಡು ಹೋಗುವವರ ದಣಿವಾರಿಸಲೋಸುಗ, ದಾರಿಯಲ್ಲಿ ಅಲ್ಲಲ್ಲಿ ತಮ್ಮ ಹೊರೆ ಇಳಿಸಲು ಅನುಕೂಲವಾಗುವಂತೆ, ಸುಮಾರು ಒಂದೂವರೆ ಅಡಿ ಅಗಲದ ಹಾಗೂ ನಾಲ್ಕಡಿ ಉದ್ದದ ಹಾಸುಗಲ್ಲನ್ನು ಸುಮಾರು ನಾಲ್ಕಡಿ ಎತ್ತರದ ಎರಡು ಸ್ಥಂಭಗಳ ನಡುವೆ ನಿಲ್ಲಿಸುತ್ತಿದ್ದರು. ಇದರ ಮೇಲೆ ಹೊರೆ ಇಳಿಸಿ, ವಿಶ್ರಾಂತಿ ಪಡೆದು, ಪುನಃ ತಮ್ಮ ಹೊರೆಯೊಂದಿಗೆ ಹಳ್ಳಿಗರು ಮುಂದುವರೆಯುತ್ತಿದ್ದರು. ಈಗಲೂ, ಭಾರತದಲ್ಲಿ ಅಲ್ಲೋ ಇಲ್ಲೋ ಕೆಲವು ಕಡೆ ಹಳ್ಳಿ ದಾರಿಗಳಲ್ಲಿ, ಅಪರೂಪಕ್ಕೆಂಬಂತೆ ಇಂತಹ ಕಲ್ಲಿನ ಕಲ್ಲಿನ ಹೊರೆಗಲ್ಲುಗಳನ್ನು ಕಾಣಬಹುದು.

­­­­­­­­­­­­­­­­­­­­­­­­­­­­­­­­­­­____

ಮಕ್ಕಳು ಹೇಳುತ್ತಾರೆ, “ಭಗವಂತನಿಗೆ ನಾವು ಎಷ್ಟೋ ವರ್ಷ ಮೊರೆಯಿಟ್ಟೆವು. ಆದರೂ ದುಃಖವೇ . ಐವತ್ತು ವರ್ಷಗಳಿಂದ, ನಾನು ಭಗವಂತನ ಭಕ್ತನಾಗಿ ಬದುಕುತ್ತಿದ್ದೇನೆ. ಇದುವರೆಗೆ ಯಾವುದೇ ತರದ ಪ್ರಗತಿಯಾಗಿಲ್ಲ.” ಎಂದು. ಅಮ್ಮ ಅದು ನಂಬುವುದಿಲ್ಲ. ಭಗವಂತನಿಗೆ ಮೊರೆಯಿಟ್ಟದ್ದು ಹೇಗೆ ? ಬಯಕೆಗಳು ಹೃದಯದೊಳಗೆ, ಭಗವಂತನು ಹೊರಗೆ. ಭಗವಂತನನ್ನು ಒಂದು ನಿಮಿಷ ಹೃದಯದೊಳಕ್ಕೆ ಇರಿಸಲು ನಿಮಗೆ ಸಾಧ್ಯವಾಗಿಲ್ಲ. ಭಗವಂತನು ಭಕ್ತರ ದಾಸನಾದರೂ, ಅವನನ್ನು ಒಬ್ಬ ಕೂಲಿಯವನನ್ನಾಗಿ ಕಾಣುವುದು ಸರಿಯಲ್ಲ. ಭಗವಂತನನ್ನು ಹೃದಯದಲ್ಲಿರಿಸಿ, ಅದರಲ್ಲಿ ಮಾತ್ರ ಏಕಾಗ್ರತೆ ಇರಿಸಿ ಪ್ರಾರ್ಥಿಸುವವನನ್ನು ಮಾತ್ರವೇ ನಿಜವಾದ ಭಕ್ತ ಎಂದು ಹೇಳಲು ಸಾಧ್ಯ. ಅದು ಹೊರತು, ಇಷ್ಟು ವರ್ಷ ಭಗವಂತನನ್ನು ಕರೆದೆ ಎಂದಷ್ಟಕ್ಕೆ ಭಕ್ತನಾಗುವುದಿಲ್ಲ.
­­­­­­­­­­­­­­­­­­­­­­­­­­­­­­­­­­­____

ನಾವು ಪ್ರತಿಯೊಬ್ಬರೂ ಮನುಷ್ಯನೆಂದು ಬೋರ್ಡು ಹಾಕಿಕೊಂಡು, ಪ್ರಾಣಿಯಂತೆ ಜೀವಿಸುತ್ತಿದ್ದೇವೆ. ಪರಸ್ಪರರಿಗೆ ಅನ್ಯಾಯ ಮಾಡಿಕೊಂಡು ಬಾಳುತ್ತಿದ್ದೇವೆ. ಹೀಗಲ್ಲ ಇರಬೇಕಾದದ್ದು. ನಾವೆಲ್ಲ ಒಂದು ತಾಯಿಯ ಮಕ್ಕಳು; ಅದು ಮಕ್ಕಳು ಮರೆಯ ಬಾರದು.
­­­­­­­­­­­­­­­­­­­­­­­­­­­­­­­­­­­____
ಮಕ್ಕಳೇ, ಸಮಯ ಹಾಳು ಮಾಡದಿರಿ. ಹೋದ ಸಮಯ ಮರಳಿ ಸಿಗುವುದಿಲ್ಲ. ಲಕ್ಷ ರುಪಾಯಿ ನಷ್ಟವಾದರೂ ಅಮ್ಮನಿಗೆ ಬೇಜಾರಿಲ್ಲ. ಆದರೆ ಒಂದು ಸೆಕೆಂಡ್ ಸಮಯ ನಷ್ಟವಾದರೂ, ಅದು ನಷ್ಟವೇ ಅಲ್ಲವೆ ? ಅದು ಸಿಗಲಾರದು. ಹಣ ಮತ್ತೆ ಮಾಡಬಹುದು. ಬೆಲೆಬಾಳುವ ಸಮಯ ನಷ್ಟ ಪಡಿಸದಿರಿ.
­­­­­­­­­­­­­­­­­­­­­­­­­­­­­­­­­­­____
ಮನೆಯ ಚಿಕ್ಕ ಗುಡಿಸಲಿಗೆ ಬೆಂಕಿ ಬಿದ್ದಾಗ ಹೇಗೆ ಬಚಾವಾಗಲು ಪ್ರಯತ್ನ ಪಡುತ್ತೇವೋ, ಹಾಗೆಯೇ, ದೇವರೇ ರಕ್ಷಕನೆಂದು ಅರಿತು ನಿಮ್ಮನ್ನು ಉಳಿಸಿಕೊಳ್ಳಿರಿ ಮಕ್ಕಳೇ. ಚಿನ್ನ ನಮ್ಮಲ್ಲಿಯೇ ಇರುವಾಗ ಇಮಿಟೇಷನ್ ಹಿಂದೆ ಹೋಗದಿರಿ. ಬರಿಯ ನಾಯಿ ಹೇಲಿಗಾಗಿ ಜೀವಿಸದಿರಿ. ಅಮೃತ ನಮ್ಮಲ್ಲಿದೆ, ಅದನ್ನು ಪಾನ ಮಾಡಿರಿ.
­­­­­­­­­­­­­­­­­­­­­­­­­­­­­­­­­­­____

 

ಪ್ರಶ್ನೆ: ಜನಗಳ ಸೇವೆ ಮಾಡಲು ತಪಸ್ಸಿನ ಅವಶ್ಯಕತೆಯೇನು ?

ಮಕ್ಕಳೇ, ಕಲಿತವನಿಗೆ ಮಾತ್ರವೇ ಇನ್ನುಳಿದವರಿಗೆ ಕಲಿಸಲು ಸಾಧ್ಯ. ಇಂದು ನಮ್ಮ ರಾಗಾದಿ ವೈರಿಗಳು ಯಾವುವೂ ಬಿಟ್ಟು ಹೋಗಿಲ್ಲ. ಯಾರಾದರೂ ದ್ವೇಷಿಸಿದರೆ, ನಾವು ಕಲಿತಿರುವುದು ಅವರನ್ನು ಇಮ್ಮಡಿ ದ್ವೇಷಿಸಲಿಕ್ಕೆ. ಇನ್ನಿತರರ ಒಂದು ಮಾತಿನ ಮೇಲಿದೆ ಇಂದು ನಮ್ಮ ಜೀವನ. ನಮ್ಮ ಬಗ್ಗೆ ಏನಾದರೂ ಹೇಳಿದರು ಎಂದು ಕೇಳಿದರೆ ಸಾಕು, ಒಂದೇ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ಇಲ್ಲವೇ ಹೇಳಿದವನನ್ನು ತಿವಿದು ಇರಿಯುತ್ತೇವೆ. ಬೇರೆಯವರ ಬಾಯಿಯ ಎರಡಕ್ಷರಗಳನ್ನು ಹಿಡಿದು ಕೊಂಡು ನಾವಿಂದು ನೇತಾಡಿಕೊಂಡಿರುವುದು. ಆ ದುರ್ಬಲತೆಯನ್ನು ಈ ತಪಸ್ಸಿನಿಂದ ಮಾತ್ರ ಬದಲಾಯಿಸಲು ಸಾಧ್ಯ. ನಾನು ಶರೀರವಲ್ಲ, ಮನಸ್ಸಲ್ಲ, ಬುದ್ಧಿಯಲ್ಲ ಆತ್ಮನೆಂದು ಕಾಣುವಾಗ, ಯಾರೂ ನನ್ನಿಂದ ಬೇರೆಯಲ್ಲವೆಂದು ಸ್ವಯಂ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಸ್ವಯಂ ಕ್ಷಮೆಯುಳ್ಳವರಾಗುತ್ತೇವೆ. ನಾವು ಶ್ರದ್ಧಾಳುವೂ, ಕ್ಷಮೆಯುಳ್ಳವರೂ ಆದರೆ ಮಾತ್ರವೇ, ದೇವರ ಗುಣಗಳು ನಮ್ಮಲ್ಲಿ ಮಿನುಗಿ ಹೊಳೆಯತೊಡಗುತ್ತವೆ.

ಶತ್ರುವಿನ ಪ್ರತಿಯಾಗಿ ಕರುಣೆ ಸುರಿಸಲು ಮಹಾತ್ಮರ ಸಾಮರ್ಥ್ಯ ಅವರ ವಿಶಾಲ ಹೃದಯದಿಂದ ಬಂದಿರುತ್ತದೆ. ಅದು ನಮಗೆ ಬಂದಿಲ್ಲ. ನಮಗೆ ಸರಿ ಹೋಗದ ಒಂದು ಮಾತು ಕೇಳಿದರೆ ಸಾಕು, ಕೂಡಲೆ ನಾವು ಹೊಡೆಯುವುದಕ್ಕೆ ಏಳುತ್ತೇವೆ. ರಾತ್ರಿಯಲ್ಲಿ ಜೀರುಂಡೆ ಶಬ್ದ ಮಾಡುತ್ತದೆ. ಅದರಿಂದ ನಾವು ಮಲಗದೆ ಇರುತ್ತೇವೆಯೆ ? ಅದರ ಸ್ವಭಾವ ಹಾಗೆಯೆ ಎಂದು ಗೊತ್ತು. ಹೇಳುವವನ ಸಂಸ್ಕಾರಹೀನತೆಯೂ ತಿಳಿಗೇಡಿತನವೂ ಕಾಣುವಾಗ ನಮಗೆ ಕೋಪ ಬರುವುದಿಲ್ಲ. ಸಣ್ಣ ಮಗು ಸಿಟ್ಟಾದರೆ ನಾವು ಹೋಗಿ ಹೊಡೆಯುವುದಿಲ್ಲ. ಇದೇ ರೀತಿ ನಮ್ಮನ್ನು ದ್ವೇಷಿಸುವವರನ್ನು ನೋಡಲು ಸಾಧ್ಯ. ತಪಸ್ಸಿನಿಂದ ’ಇವರದ್ದು ಮಕ್ಕಳ ಮನಸ್ಸು; ವಿವೇಚನೆ ಬಂದಿಲ್ಲ’ ಎಂದು ಅರ್ಥ ಮಾಡಿಕೊಂಡಾಗ ನಮ್ಮಲ್ಲಿ ತಾನಾಗಿಯೇ ತಾಳ್ಮೆ ಹುಟ್ಟಿಕೊಳ್ಳುತ್ತದೆ. ಆದರೆ ನಾವಿಂದು ದುರ್ಬಲರು. ಅದನ್ನು ಮಾರ್ಪಡಿಸಲು ತಪಸ್ಸು ಬೇಕು. ಇಂದು ನಾವೊಂದು ಸೊನ್ನೆ ವ್ಯಾಟ್ಟಿನ ಬಲ್ಬು. ನಮ್ಮ ದಾರಿಯನ್ನೂ ಬೆಳಗುವ ಪ್ರಕಾಶವಿಲ್ಲ ಅದಕ್ಕೆ. ತಪಸ್ಸಿನಿಂದ ಅದನ್ನು ಹತ್ತು ಸಾವಿರ ವ್ಯಾಟ್ಟಿನ ಬಲ್ಬ್ ಆಗಿ ಮಾರ್ಪಡಿಸಬಹುದು. ನಮಗೂ ಸಹ ನಡೆಯಲಿಕ್ಕೆ ಸವಾಲಾಗಿರುವ ಮಂದ ಬೆಳಕನ್ನು, ತಪಸ್ಸಿನಿಂದ ಲಕ್ಷಗಟ್ಟಲೆ ಜನಗಳಿಗೆ ಬೆಳಕು ನೀಡುವ ಮಾರ್ಗದರ್ಶಿಯಾಗಿಸಲು ಸಾಧ್ಯವಿದೆ. ಇದು ತಪಸ್ಸಿನ ಪ್ರಯೋಜನ.”

ಪ್ರಶ್ನೆ: ಸಂಪತ್ತು ಗಳಿಸುವುದು ಆಧ್ಯಾತ್ಮಿಕತೆಗೆ ವಿರೋಧವೇ ?

“ಮಕ್ಕಳೇ, ಎಷ್ಟು ಸ್ವತ್ತಿದ್ದರೂ, ಅದರ ಸ್ಥಾನವನ್ನೂ ಪ್ರಯೋಜನವನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳದಿರುವ ತನಕ ದುಃಖ ಮಾತ್ರವೇ ನಮ್ಮ ಪಾಲಿಗೆ ಇರುವುದು. ಅಗಣಿತ ಸಂಪತ್ತಿದ್ದರೂ ಅದರಿಂದ ಸಿಗುವ ಆನಂದ ತಾತ್ಕಾಲಿಕ ಮಕ್ಕಳೇ. ಶಾಶ್ವತವಾದ ಆನಂದ ಕೊಡಲು ಅದಕ್ಕೆ ಸಾಧ್ಯವಿಲ್ಲ. ಕಂಸನೂ ಹಿರಣ್ಯಕಶಿಪುವೂ ಎಲ್ಲಾ ಸಂಪತ್ತಿನ ಅಧಿಪತಿಗಳಾಗಿರಲಿಲ್ಲವೇ ? ಅವರಿಗೆ ಮನಸ್ಸಮಾಧಾನ ಇತ್ತೇ ? ಎಲ್ಲಾ ಇದ್ದ ರಾವಣನಿಗೆ ಏನು ಶಾಂತಿಯಿತ್ತು ? ಅವರೆಲ್ಲ ಸತ್ಯದ ದಾರಿ ತೊರೆದು, ಅಹಂಕಾರಿಗಳಾಗಿ ಬಾಳಿದರು. ಮಾಡಬಾರದ್ದನ್ನು ಬಹಳ ಮಾಡಿದರು. ಫಲವೋ ? ಶಾಂತಿ ಸಮಾಧಾನಗಳನ್ನು ಕಳೆದುಕೊಂಡರು. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಮಕ್ಕಳೇ, ಶಾಶ್ವತವಾದ ಆನಂದ ಕೊಡುವುದು ಸಂಪತ್ತಲ್ಲ.

ಲೌಕಿಕ ಜೀವನದಲ್ಲಿ ಅಶಾಶ್ವತ ಆನಂದ ಮಾತ್ರವೇ ಸಂಪತ್ತಿನಿಂದ ಲಭ್ಯ. ಹಾಗಾದರೆ ಸಂಪತ್ತಿಲ್ಲದೆ ಹೇಗೆ ಜೀವಿಸೋಣ ? ಇರುವ ಸಂಪತ್ತನ್ನು ಬಿಟ್ಟುಬಿಡಬೇಕೆ ? ಎಂದೆಲ್ಲ ಮಕ್ಕಳು ಕೇಳಬಹುದು. ಎಲ್ಲವೂ ಭಗವಂತನ ಇಚ್ಛೆ, ಮಕ್ಕಳೇ. ಯಾವುದನ್ನೂ ನಿರಾಕರಿಸಲು ಅಮ್ಮ ಹೇಳುವುದಿಲ್ಲ. ಇರುವುದರ ಸ್ಥಾನವನ್ನೂ ಪ್ರಯೋಗವನ್ನೂ ಕಂಡು ಕೊಂಡು ವರ್ತಿಸಿದರೆ ಆನಂದವೂ ಶಾಂತಿಯೂ ಸಂಪತ್ತಾಗಿ ಬದಲಾಗುತ್ತದೆ. ಭಗವಂತನಿಗಭಿಮುಖವಾದವರಿಗೆ ’ಮರಳು ಬಿದ್ದ ಅನ್ನದ’ ಹಾಗೆ ಮಕ್ಕಳೇ, ಸಂಪತ್ತು”.

ಒಬ್ಬ ಆಧ್ಯಾತ್ಮಿಕ ಜೀವಿಯು ಜಗತ್ತಿನ ಪೂರ್ಣ ಭಾರಕ್ಕೆ ಹೆಗಲು ಕೊಡಬೇಕಾದವನು. ಅವನು ಎಂದೂ ದುರ್ಬಲನಾಗಬಾರದು; ಚುರುಕಿನ ಸಿಂಹದ ಮರಿಯಾಗಿರಬೇಕು.
____
ಗುರುವಿನಲ್ಲಿ ಪೂರ್ತಿ ವಿಶ್ವಾಸವಿರುವವನು ಗುರುವಿನಲ್ಲಿ ಒಂದು ಪ್ರಶ್ನೆಯನ್ನು ಸಹ ಕೇಳುವುದಿಲ್ಲ. ಗುರು ಹೇಳುವುದನ್ನೇ ಅನುಸರಿಸುವನು. ಅದುವೇ ಗುರುಸೇವೆ. ಶಿಷ್ಯನ ಶ್ರದ್ಧೆಯೊಡಗೂಡಿರುವ ಓಡಾಟ ನೋಡಿದಾಗ ತನಗರಿವಿಲ್ಲದೆಯೆ ಗುರು ಅವನಲ್ಲಿ ಕೃಪೆ ಸುರಿಸುತ್ತಾನೆ. ತಗ್ಗು ನೆಲದಲ್ಲಿ, ನೀರು ತನ್ನಷ್ಟಕ್ಕೆ ಹರಿದು ಸೇರುವ ಹಾಗೆ.
____

ಆಧ್ಯಾತ್ಮಿಕವೂ ಲೌಕಿಕವೂ ಜೊತೆಜೊತೆಯಾಗಿ ಹೋಗಲು ಸಾಧ್ಯವಿದೆ. ಆದರೆ, ಸಂಬಂಧಗಳ ಬಂಧನವಿಲ್ಲದೆ, ನಿಷ್ಕಾಮವಾಗಿ ಕೆಲಸ ಮಾಡಲು ಸಾಧ್ಯವಾಗಬೇಕು. ನಾನು ಮಾಡುವುದು; ನನಗದರ ಫಲ ಬೇಕು, ಎಂದು ಭಾವಿಸುವಾಗ ದುಃಖಗಳು ಉಂಟಾಗುತ್ತವೆ. ನನ್ನ ಹೆಂಡತಿ, ನನ್ನ ಮಗುವೆಂದು ಯಾವತ್ತೂ ಭಾವಿಸದಿರಿ. ಎಲ್ಲವೂ ಈಶ್ವರನದ್ದು ಎಂದು ಭಾವಿಸುವಾಗ ಮತ್ತೆ ಬಂಧನವಿಲ್ಲ. ಸಾಯುವಾಗ ಹೆಂಡತಿ, ಮಕ್ಕಳು ಯಾರೂ ಒಟ್ಟಿಗೆ ಬರುವುದಿಲ್ಲ. ವಾಸ್ತವಿಕ ಸತ್ಯ ದೇವರು ಮಾತ್ರವೆ.
____
ಬೀಜವನ್ನು ನಾವು ಬಯಲಲ್ಲಿ ನೇರವಾಗಿ ಬಿತ್ತುವುದಿಲ್ಲ. ವಿಶೇಷವಾಗಿ ಸಿದ್ಧ ಪಡಿಸಿದ ಸ್ಥಳದಲ್ಲಿ ಬೀಜ ಬಿತ್ತಿ, ಸಸಿ ಮಾಡಿ, ನಂತರ ಕಿತ್ತು ಬಯಲಲ್ಲಿ (ನೇಜಿ) ನೆಡುತ್ತಾರೆ. ಅದೇ ರೀತಿ, ಭಕ್ತಿಯಲ್ಲಿ ನೆಟ್ಟು ಮೊಳಕೆಯೊಡೆದ ಸಾಧನೆಯ ಬೀಜಗಳನ್ನು, ಕಿತ್ತು ನಂತರ ಜ್ಞಾನದ ಬಯಲಲ್ಲಿ ನೆಡಿರಿ. ಆಗ ಸಮೃದ್ಧಿಯಾದ ಫಸಲು ಸಿಗುತ್ತದೆ.
____
ಮಕ್ಕಳೇ, ತೆಂಗಿನ ಸಿಪ್ಪೆಯ, ಗೆರಟೆಯ, ಹಾಗೂ ಹಿಂಡಿಯ ಹಿಂದೆ ಹೋಗದೆ, ನೀವು ತೆಂಗಿನಕಾಯಿಯನ್ನು ಅವಲಂಬಿಸಿರಿ. ಅದರಿಂದ ಎಲ್ಲವೂ ಸಿಗುವುದು. ಇದೇ ತರ ವಿವಿಧತ್ವದ ಹಿಂದೆ ಹೋಗದೆ ಏಕತ್ವವನ್ನು ಆಶ್ರಯಿಸಿದರೆ ಬೇಕಾದದ್ದೆಲ್ಲಾ ಸಿಗುವುದು – ನಶಿಸುವುದೂ, ನಾಶವಾಗದೆ ಇರುವುದೂ.
____
ಮಕ್ಕಳೇ, ಸತ್ಯ ಒಂದೇ, ಅದೇ ದೇವರು.
____
ನಮ್ಮ ಹುಟ್ಟು ದೇವರ ಸಾಕ್ಷಾತ್ಕಾರದ ಸಲುವಾಗಿದೆ; ಅದು ಬಿಟ್ಟು ಪ್ರಾಣಿಯಂತೆ ಜೀವಿಸಲಿಕ್ಕಲ್ಲ.
____
ಮಕ್ಕಳೇ, ಎಲ್ಲವೂ ಬ್ರಹ್ಮನೆಂದು ಹೇಳಿದರೆ, ಅದೇ ಗುಂಪಿನಲ್ಲಿ ಬರುವುದು ನಾಯಿ, ಬೆಕ್ಕು ಇತ್ಯಾದಿ. ಅವುಗಳಿಗೆ ಏನಿದೆ ವಿವೇಚನೆ ? ಆ ರೀತಿಯಾಗಿ ರೀತಿ ನಾವು ಬದುಕಬೇಕೆ ? ಸರಿಯಾದ ವಿವೇಚನೆ ಇಲ್ಲದಿದ್ದರೆ, ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಏನು ವ್ಯತ್ಯಾಸ ? ಆದಕಾರಣ ವಿವೇಕ ಬೆಳೆಸಿಕೊಳ್ಳಿರಿ. ಸಾಧನೆ ಮಾಡಿದಾಗ ನಾವು ಯಾರೆಂಬುದು ಅರಿವಾಗುತ್ತದೆ.
____
ನಾವೆಲ್ಲ “ನಾನು, ನಾನು” ಎಂಬ ಭಾವದಲ್ಲಿ ಬದುಕುತ್ತಿದ್ದೇವೆ. ಬಾವಿ ಹೇಳುತ್ತದೆ “ನನ್ನ ನೀರು ಸೇದಿ ಎಲ್ಲರೂ ಕುಡಿಯುತ್ತಾರೆ, ದೇವರಿಗೆ ಅರ್ಪಿಸುತ್ತಾರೆ. ನಾನು ಇಲ್ಲದಿದ್ದರೆ ಇವರಿಗೆ ಜೀವಿಸಲಿಕ್ಕೆ ಸಾಧ್ಯವಿದೆಯೇ” ಎಂದು. ಏನಿದು ಈ ’ನಾನು’. ದೇವರಿಂದ ಒಸರಾಗಿ ಹರಿದು ಬರದಿರುತ್ತಿದ್ದರೆ, ಬಾವಿಗೆ ಜಂಬ ಕೊಚ್ಚಿಕೊಳ್ಳಲಿಕ್ಕೆ
ಸಾಧ್ಯವಿತ್ತೇ ?
____
ಶಬರಿಮಲೆ ಮುಟ್ಟಿದ ಒಬ್ಬ ವ್ಯಕ್ತಿ, ಅಲ್ಲಿ ಒಂದು ಕಡೆ ಬಟ್ಟೆ ಹಾಸುತ್ತಾನೆ. ಅವನು ಹೋದ ನಂತರ ಮುಂದಿನ ವ್ಯಕ್ತಿ ಅದೇ ಸ್ಥಳದಲ್ಲಿ ಪುನಃ ಬಟ್ಟೆ ಹಾಸುತ್ತಾನೆ. ಅವನು ಹೋದಾಗ, ಅವನ ನಂತರದ ವ್ಯಕ್ತಿಯೂ ಹಾಗೇ ಮಾಡುತ್ತಾನೆ. ಈ ರೀತಿಯಾಗಿದೆ ನಮ್ಮ ಜೀವನ. ಆದರೆ, ನಾವಿದು ತಿಳಿದುಕೊಳ್ಳುತಿಲ್ಲ.
____
ಭಗವಂತನ ಶಕ್ತಿಯಿಲ್ಲದೆ ಹೋದರೆ ನಮ್ಮಿಂದ ಏನು ಪ್ರಯೋಜನ ? ’ನನ್ನ ಕಣ್ಣಿನಿಂದ ನೋಡಿದೆ’ ಎಂದು ನಾವು ಹೇಳುತ್ತೇವೆ. ನಮ್ಮ ಎದುರಿಗೆ ಒಂದು ಗ್ಲಾಸು ಹಾಲು ಇಡುತ್ತಾರೆ. ನಾವು ಯಾರೊಂದಿಗಾದರೂ ಕೆಲಸದ ಬಗ್ಗೆ ಮಾತಾಡುವಾಗ, ಅದನ್ನು ಇಟ್ಟರೆ, ನಮಗೆ ಅದು ಕಾಣಿಸುವುದಿಲ್ಲ. ಕಣ್ಣು ತೆರೆದಿದ್ದರೂ, ಕಾಣಿಸುವುದಿಲ್ಲ. ಕಣ್ಣಿನ ಹಿಂದೆ ಮನಸ್ಸು ಕೆಲಸ ಮಾಡಬೇಕು. ಹಾಗಿದ್ದರೆ ಮಾತ್ರ ಕಾಣಿಸಲು ಸಾಧ್ಯ. ಮನಸ್ಸು ಕೆಲಸ ಮಾಡಬೇಕಾದರೆ, ಭಗವಂತನ ಶಕ್ತಿಯು ಅವಶ್ಯ.
____
ಹಳೆಯಕಾಲದಲ್ಲಿ ಎಲ್ಲರೂ ನಿತ್ಯಾನಿತ್ಯ ಏನೆಂದು ಅರಿತು ನಡೆದರು. ಅದರ ನಂತರವೇ, ಗೃಹಸ್ಥ ಜೀವನ ಸಾಗಿಸುತ್ತಿದ್ದರು. ಹಾಗಾಗಿ ಅವರು ಆನಂದದಿಂದ ಜೀವಿಸಿದರು. ಎಂಥ ಪ್ರತಿಕೂಲ ಸನ್ನಿವೇಶದಲ್ಲೂ ಅವರ ಮನಸ್ಸಿನಲ್ಲಿ ಯಾವುದೇ ತರದ ಅಲುಗಾಟ ಇರುತ್ತಿರಲಿಲ್ಲ.
____
ಇಂದು ನಾವು ಬಾಹ್ಯದಲ್ಲಿ ಏರ್‌ಕಂಡೀಷನ್ ಕೋಣೆಗಳನ್ನು ಕಟ್ಟುತ್ತಿದ್ದೇವೆ. ಕಟ್ಟಿ ಮುಗಿಯುವ ಮೊದಲೇ ನಾವು ಸತ್ತು ಹೋಗಬಹುದು. ಉಳಿದವರಿಗೆ ಆಸ್ತಿಗಾಗಿ ಕಲಹ ಮಾಡಲಿಕ್ಕೆ ಅನುಕೂಲವಾಯಿತು. ಆದಕಾರಣ ನಮ್ಮ ಮನಸ್ಸನ್ನು ಏರ್‌ಕಂಡೀಷನ್ ಮಾಡ ಬೇಕಾಗಿದೆ. ಆಗ ಯಾವ ಸೆಖೆಯಲ್ಲೂ, ಚಳಿಯಲ್ಲೂ ಒಂದೆ ರೀತಿಯಾಗಿ ಬದುಕಲು ಸಾಧ್ಯವಾಗುತ್ತದೆ.
____
ನಾಯಿ ಎಲುವನ್ನು ಜಗಿಯುತ್ತದೆ. ಅದು ಯೋಚಿಸುತ್ತದೆ, ಎಲುವಿನಿಂದ ಮಾಂಸ ಮತ್ತು ರಕ್ತ ಸಿಗುತ್ತಿದೆಯೆಂದು. ತಾನು ಚಪ್ಪರಿಸುತ್ತಿರುವುದು, ತನ್ನ ವಸಡು ಗೀರಿ ಬಂದ ರಕ್ತ ರಕ್ತವೆಂದು ಅದಕ್ಕೆ ತಿಳಿದಿಲ್ಲ. ಈ ರೀತಿಯಾಗಿ ನೀವು ಶಕ್ತಿ ಗುಂದಬೇಡಿ. ಏರ್‌ಕಂಡೀಷನ್ ಮನೆ ಕಟ್ಟಿ ಆಯಿತು, ಅದರಲ್ಲಿ ಮಲಗಿಕೊಂಡೂ ಗೊಣಗಾಟ: ಮನಸ್ಸಿಗೆ ನೆಮ್ಮದಿಯಿಲ್ಲ, ನಿದ್ದೆ ಬರಲೊಲ್ಲದು, ಎಂದು. ಕೊನೆಗೆ, ಅದರಲ್ಲಿದ್ದುಕೊಂಡು ವಿಷ ಕುಡಿದು ಸಾಯುತ್ತಾರೆ. ಬಾಹ್ಯವಸ್ತುಗಳು ಆನಂದ ಕೊಡುವುದಾಗಿದ್ದರೆ, ಹೀಗೆ ಮಾಡಬೇಕಾದ ಅವಶ್ಯಕತೆಯಿತ್ತೆ ? ಎಲ್ಲಾ ಮನಸ್ಸನ್ನು ಅವಲಂಬಿಸಿ ಕೊಂಡಿದೆ.
____
ಮಂದಬುದ್ಧಿಯವರು ಕೂಡ ಗುರಿಯಿಲ್ಲದೆ ಎಲ್ಲೂ ಹೊರಡುವುದಿಲ್ಲ. ಪ್ರಾಪಂಚಿಕ ಗುರಿ ಎಲ್ಲರಿಗೂ ಇರುತ್ತದೆ. ಆದರೆ ಅವು ಯಾವುವೂ ಪೂರ್ಣವಲ್ಲ. ಆದಕಾರಣ ಮುದ್ದಿನ ಮಕ್ಕಳೇ, ದೇವರನ್ನೆ ಗುರಿಯಾಗಿಸಿಕೊಂಡು ಮುಂದಕ್ಕೆ ಸಾಗಿರಿ.
____