ಪ್ರಶ್ನೆ: ಅಮ್ಮಾ, ನಾನು ಬ್ರಹ್ಮನ್ ಅಲ್ಲವೇ, ಹಾಗಿದ್ದ ಮೇಲೆ ಸಾಧನೆ ಯಾಕೆ ಮಾಡಬೇಕು ?

“ಮಗನೇ, ಮಗನ ಹೆಸರು ಕರೆಯದೆ ಮಗನು ಹಿಂತಿರುಗಿ ನೋಡಲು ಸಾಧ್ಯವೇ ? ಆದಕಾರಣ, ನಾವು ನಿಂತಿರುವುದು ನಾಮದ ಮೇಲೆ. ಮಗನೇ, ನಿನಗೆ ನಿನ್ನೆಯಿಲ್ಲವೆ, ಇವತ್ತಿಲ್ಲವೆ, ನಾಳೆಯಿಲ್ಲವೆ, ನನ್ನ ಹೆಂಡತಿಯೆಂದೂ ಮಕ್ಕಳೆಂದೂ ಇಲ್ಲವೆ ? ರುಚಿಯೂ ಅರುಚಿಯೂ ಇಲ್ಲವೆ ? ನೀನು ಬ್ರಹ್ಮನ್ನಲ್ಲಿ ಇರುವವನು ಆದರೂ ಬ್ರಹ್ಮನ್ ಆಗಿಲ್ಲ. ಈಗಿನ ನಿನ್ನ ಬ್ರಹ್ಮನ್ ವಿವೇಚನೆಯಿಲ್ಲದ ಪ್ರಾಣಿಗಳ ಹಾಗೆ. ಅವೆಲ್ಲ ಬ್ರಹ್ಮವೆ ತಾನೆ. ಅದೇ ಪ್ರಕಾರವಿರುವುದು ನೀನೀಗ. ಋಷಿವರರು ಅನುಭೂತಿಯಿಂದ ಬರೆದಿಟ್ಟ ಮಾತುಗಳನ್ನು ಓದಿ, ನಾನು ಬ್ರಹ್ಮವೆಂದು ಹೇಳಿಕೊಂಡು ನಡೆಯಬೇಡಿ. ಮಗನೇ, ವಾಚ್ಮ್ಯಾನ್ ಕೂತುಕೊಂಡು ’ನನ್ನ ಆಸ್ತಿ’ ಎಂದು ಹೆಮ್ಮೆಪಟ್ಟಂತೆ, ನಾವು ಪುಸ್ತಕ ಓದಿ ಬ್ರಹ್ಮವೆಂದುಕೊಂಡು ನಡೆಯುವುದು. ಹಲಸೂ ಹೇಳುತ್ತದೆ; ಹಲಸಿನ ಬೀಜವೂ ಹೇಳುತ್ತದೆ, ನಾನು ಬ್ರಹ್ಮನ್ ಎಂದು. ನೀನು ಬರೇ ಹಲಸಿನ ಬೀಜ ಮಾತ್ರವಾಗಿರುವುದು. ಯಮ ನಿಯಮಗಳ ಜೊತೆಗೂಡಿ ನಿನಗೆ ಆ ಬ್ರಹ್ಮನ್ ಆಗಲು ಸಾಧ್ಯ.

ಮಕ್ಕಳೇ, ಬ್ರಹ್ಮವೆನ್ನುವುದು ಮಾತಿನಲ್ಲಿ ಹೇಳುವಂಥದ್ದಲ್ಲ; ಅನುಭವಿಸಿ ತಿಳಿದುಕೊಳ್ಳಬೇಕಾದದ್ದು. ಒಬ್ಬರು ಮಹರ್ಷಿ ತನ್ನ ಮಗನನ್ನು ಗುರುಕುಲದಲ್ಲಿ ಕಲಿಯಲು ಬಿಡುತ್ತಾರೆ. ಹನ್ನೆರಡು ವರ್ಷಗಳ ಶಾಸ್ತ್ರಪಠನ ಮುಗಿಸಿ ಮಗನು ಮರಳಿ ಬರುತ್ತಾನೆ. ತಂದೆಯೊಡನೆ “ನಾನು ಯಾರೆಂದು ಗೊತ್ತೇ ? ಬ್ರಹ್ಮಸ್ವರೂಪನು.”ಎಂದು ಅಹಂಕಾರದಿಂದನೆ ಹೇಳಲಿಕ್ಕೂ, ಹೆಮ್ಮೆಯೊಂದಿಗೆ ವರ್ತಿಸಲಿಕ್ಕೂ ತೊಡಗಿದ. ಮಗನ ಈ ವರ್ತನೆಯನ್ನು ಕಂಡ ಮಹರ್ಷಿಗೆ ತನ್ನ ಮಗನಲ್ಲಿ ಸಹಾನುಭೂತಿ ಉಂಟಾಗುತ್ತದೆ. ಅವರು ತನ್ನ ಮಗನಲ್ಲಿ ಒಂದು ಪಾತ್ರೆಯಲ್ಲಿ ಹಾಲನ್ನೂ, ಸ್ವಲ್ಪ ಕಲ್ಲುಸಕ್ಕರೆಯನ್ನೂ ತರಲಿಕ್ಕೆ ಹೇಳುತ್ತಾರೆ. ಮಗನು ಹಾಲು ಮತ್ತು ಕಲ್ಲುಸಕ್ಕರೆ ತೆಗೆದುಕೊಂಡು ಬರುತ್ತಾನೆ. ಕಲ್ಲುಸಕ್ಕರೆಯನ್ನು ಹಾಲಲ್ಲಿ ಹಾಕಿ ಕಲೆಸಲು ಮಹರ್ಷಿ ಹೇಳುತ್ತಾರೆ. ಮಗನು ಹಾಗೆಯೇ ಮಾಡಿ ಮುಗಿಸಿದಾಗ, ಮಹರ್ಷಿಯು ಪಾತ್ರೆಯ ಮಧ್ಯದಿಂದ ಸ್ವಲ್ಪ ಹಾಲು ತೆಗೆದು ಮಗನ ಬಾಯಿಯಲ್ಲಿ ಹೊಯ್ದು ’ಸಿಹಿಯಾಗಿದೆಯೆ’ ಎಂದು ಪ್ರ ಶ್ನಿಸುತ್ತಾರೆ. ಸಿಹಿಯಿದೆ ಎಂದು ಮಗನು ಹೇಳಿದ. ಪಾತ್ರೆಯ ನಾಲ್ಕೂ ಭಾಗಗಳಿಂದ ಹಾಲು ಮಗನ ಬಾಯಿಯಲ್ಲಿ ಪುನಃ ಹೊಯ್ದು, ’ಸಿಹಿಯಾಗಿದೆಯೆ’ ಎಂದು ಪುನ: ಕೇಳುತ್ತಾರೆ. ’ಸಿಹಿಯಾಗಿದೆ’ ಎದು ಪುನಃ ಮಗನು ಉತ್ತರಿಸಿದ. ’ಎಷ್ಟು ಸಿಹಿಯಿದೆ’ ಮಹರ್ಷಿ ಪ್ರಶ್ನೆ ಮಾಡುತ್ತಾರೆ. ಮಗನಿಗೆ ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ಆಗ ಮಹರ್ಷಿಯು ಮಗನಿಗೆ ಉಪದೇಶಿಸುತ್ತ ಹೇಳುತ್ತಾರೆ, ’ ಮಗುವೆ, ಬ್ರಹ್ಮನ್ ಎಂದು ಮಾತಲ್ಲಿ ಹೇಳಿ ಹೆಮ್ಮೆ ಪಡುವಂಥದ್ದಲ್ಲ. ಅದು ಅನುಭವ; ಅನುಭವಿಸಿ ತಿಳಿಯುವಂಥದ್ದು. ಕಲ್ಲುಸಕ್ಕರೆಯು ಹಾಲಿನಲ್ಲಿ ಎಲ್ಲ ಕಡೆ ವ್ಯಾಪಿಸಿರುವ ಹಾಗೆ, ಅದು ಎಲ್ಲ ಕಡೆ ತುಂಬಿಕೊಂಡಿದೆ.’

ಮಕ್ಕಳೇ, ಸಗುಣನೂ, ನಿರ್ಗುಣನೂ ಆದ ದೇವರು ಎಲ್ಲ ಕಡೆಯೂ ತುಂಬಿ ಕೊಂಡಿದ್ದಾನೆ. ಅದು ಶಬ್ದಗಳಲ್ಲಿ ಹೇಳುವಂಥದ್ದಲ್ಲ. ಅನುಭೂತಿಯ ಸ್ತರದಲ್ಲಿ ಅರಿಯಬೇಕಾದದ್ದು. ಸಾಧನೆಯಿಲ್ಲದೆ ನಾನು ಬ್ರಹ್ಮವೆಂದು ಹೇಳಿಕೊಂಡು ನಡೆಯದಿರಿ.

ಒಬ್ಬ ಪಂಡಿತನು ಎಲ್ಲವು ಬ್ರಹ್ಮಮಯ ಎಂದು ಹಾಡಿಕೊಂಡು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಇದು ನೋಡಿದ ಮತ್ತೊಬ್ಬನು, ಹಿಂದಿನಿಂದ, ಒಂದು ಮುಳ್ಳು ತೆಗೆದುಕೊಂಡು ಆ ಪಂಡಿತನನ್ನು ತಿವಿಯುತ್ತಾನೆ. ಅವನು ಅಲ್ಲಿ ನಿಂತು ಅಳತೊಡಗಿದ. ನೋವೂ ಕೋಪವೂ ಸಹಿಸಲಾಗದೆ, ’ಯಾರೋ, ನನ್ನನ್ನು ತಿವಿದದ್ದು’ ಎಂದು ನೋವನ್ನನುಭವಿಸುತ್ತ, ಅವನು ತಿವಿದವನನ್ನು ಹೊಡೆಯಲಿಕ್ಕೆಂದು ಹೋಗುತ್ತಾನೆ. ಮಕ್ಕಳೇ, ನಮ್ಮ ಬ್ರಹ್ಮನ್ ಈ ರೀತಿ…ಅಳುವ ಬ್ರಹ್ಮನ್ !

ಹಾಗಾದರೆ, ಅನುಭವಿಸಿ ಅರಿತವರ ಕಥೆ ಕೇಳಬೇಕೇ ? ಒಬ್ಬ ಮಹಾತ್ಮನು ಸರ್ವವೂ ಬ್ರಹ್ಮಮಯವೆಂದು ಹಾಡಿಕೊಂಡು ನಡೆಯುತ್ತಿದ್ದ. ಬೇರೊಬ್ಬನು ಹಿಂದಿನಿಂದ ಬಂದು ಆ ಮಹಾತ್ಮನ ಕೈ ಕತ್ತರಿಸುತ್ತಾನೆ. ಆದರೆ ಆ ಮಹಾತ್ಮನಿಗೆ ಇದರ ಅರಿವೇ ಇಲ್ಲ. ಎಲ್ಲವನ್ನೂ ಮರೆತಿದ್ದ ಆತ ಹಾಡುತ್ತ ಇನ್ನೂ ಮುಂದೆ ಸಾಗುತ್ತಿರುತ್ತಾನೆ. ತಾನೊಬ್ಬ ಮಹಾತ್ಮನನ್ನು ಪೀಡಿಸಿದ್ದು ಎಂದು ಕೈ ಕತ್ತರಿಸಿದ ವ್ಯಕ್ತಿಗೆ ಅರ್ಥವಾಯಿತು. ಪಶ್ಚಾತ್ತಪಪಟ್ಟು ಅವನು ಮಹಾತ್ಮನನ್ನು ಸಮೀಪಿಸಿದ. ತನ್ನನ್ನು ಕ್ಷಮಿಸಬೇಕೆಂದು ಕೇಳಿ ಕೊಳ್ಳುತ್ತಾನೆ. ಯಾಕೆಂದು ಅವನು ಕೇಳುತ್ತಾನೆ. ’ತಮ್ಮ ಕೈ ಕತ್ತರಿಸಿ ತುಂಡು ಮಾಡಿದ ಮಹಾ ಪಾಪಿ ನಾನು’ ಎಂದು ಅವನು ಮಾರುತ್ತರ ಕೊಟ್ಟ. ಆಗಲೇ ತನ್ನ ಕೈ ತುಂಡಾಗಿ ಹೋಗಿದೆ ಎಂದು ಅವನಿಗೆ ಗೊತ್ತಾಗಿದ್ದು. ಕತ್ತರಿಸಿದ ಕೈಯ ಸ್ಥಾನವನ್ನು ಅವನು ಸವರಿದ. ಆಗ ಅವನ ಕೈ ಪುನಃ ಹಿಂದಿನಂತಾಯಿತು. ಆಗ ಅವನು ಹೇಳುತ್ತಾನೆ, ’ಮಗುವೇ, ಸರ್ವಂ ಬ್ರಹ್ಮಮಯಂ ಎಂದು ಹಾಡಿದರೂ, ಈ ಕೈ ಹಿಂದಿನಂತೆ ಮಾಡಲು ಸವರುವ ಎನಿಸಿ ಕರ್ಮ ಮಾಡಬೇಕಾಗಿಬಂತು. ಮಗೂ, ನಾನು ಈಗಲೂ ಕರ್ಮದ ಮಟ್ಟದಲ್ಲೇ ನೆಲೆಸಿದ್ದೇನೆ.’

ಮಕ್ಕಳೇ, ಅನುಭೂತಿಯಿಂದಲ್ಲದೆ ನಾನು ಬ್ರಹ್ಮನ್ ಎಂದು ಹೇಳಲು ನಮಗೆ ಅವಕಾಶವಿಲ್ಲ. ನೀವು ಮೊದಲು ಹೇಳಿದ ಪಂಡಿತನಂತೆ ಮಾಡದೆ, ಅನುಭವಿಸಿ ಅರಿತ ಆ ಮಹಾತ್ಮನಂತೆ ಮಾಡಲು ಯತ್ನಿಸಿರಿ.

ಇವತ್ತು ಇಪ್ಪತ್ತೈದೋ, ಐವತ್ತೋ ರುಪಾಯಿ ಕೊಟ್ಟರೆ ಬ್ರಹ್ಮಸೂತ್ರ ಗ್ರಂಥವನ್ನು ಅಂಗಡಿಯಲ್ಲಿ ಕೊಂಡುಕೊಳ್ಳಬಹುದು. ಎರಡು ವಾರಗಳಲ್ಲಿ ಅದು ಬಾಯಿಪಾಠ ಕಲಿಯಲೂ ಸಾಧ್ಯವಿದೆ. ಅದು ಕಲಿತು, ನಾನು ಬ್ರಹ್ಮನ್ ಎಂದು ಹೇಳಿಕೊಂಡು ನಡೆಯುವುದರಲ್ಲಿ ಯಾವ ಅರ್ಥವೂ ಇಲ್ಲ. ಮಕ್ಕಳೇ, ಅದನ್ನು ಜೀವನದಲ್ಲಿ ಅಳವಡಿಸಿ ಇನ್ನುಳಿದವರಿಗೆ ತೋರಿಸಿ ಕೊಡುವುದು ಬೇಕಾಗಿದೆ. ಒಂದು ಗಂಟೆಯ ಶಾಸ್ತ್ರಾಭ್ಯಾಸ ಮಾಡಿದರೆ, ಹತ್ತು ಗಂಟೆಯಾದರೂ ಮನನ ಮಾಡಬೇಕು.

ಮಕ್ಕಳೇ, ನಮ್ಮ ಕೈ ಸುಟ್ಟರೆ ಆ ಕೈ ತಣ್ಣೀರಲ್ಲಿ ಮುಳುಗಿಸಲು ಎಷ್ಟೆಲ್ಲ ಗಡಿಬಿಡಿ ಇರುತ್ತದೋ, ಅಷ್ಟೆಲ್ಲ ವ್ಯಥೆ ದೇವರನ್ನರಿಯಲು ನಮಗೆ ಇರಬೇಕು.”

ಪ್ರಶ್ನೆ: ಅಮ್ಮಾ, ಕ್ಷೇತ್ರಗಳಲ್ಲಿ ಪೂಜೆ ನಿಲ್ಲಿಸಿದರೆ ಪ್ರತಿಕೂಲ ಪರಿಣಾಮವಾಗುತ್ತದೆಂದು ಹೇಳುತ್ತಾರೆ; ನಿಜವೇ ?

“ಮಕ್ಕಳೇ, ಮನುಷ್ಯನ ಸಂಕಲ್ಪದಿಂದಾಗಿ ದೆವತೆಗಳ ಶಕ್ತಿ ವೃದ್ಧಿಯಾಗುತ್ತಿರುತ್ತದೆ. ಪೂಜೆ ನಿಲ್ಲಿಸಿದರೆ, ಅದು ಕ್ಷೀಣಿಸುವುದು. ದೇವರು ಸರ್ವಶಕ್ತನು. ಅವನ ಶಕ್ತಿ ಹೆಚ್ಚಾಗುವುದಿಲ್ಲ; ಕಡಿಮೆಯಾಗುವುದಿಲ್ಲ. ಅದು ನಿತ್ಯವೂ ಶಾಶ್ವತ.ಆದರೆ ದೇವತೆಗಳ ಶಕ್ತಿ ಪ್ರತಿಷ್ಠಾಪನೆ ಮಾಡುವವರ ಭಾವನೆಯನ್ನವಲಂಬಿಸಿದೆ. ಕ್ಷೇತ್ರಗಳಲ್ಲೂ, ಕುಟುಂಬ ದೇವತೆಗಳ ಕ್ಷೇತ್ರಗಳಲ್ಲೂ ಪೂಜೆ ನಿಲ್ಲಿಸಬಾರದು. ನಿಲ್ಲಿಸಿದ್ದಾದರೆ ದೊಡ್ಡ ದೋಷಗಳು ಘಟಿಸಬಹುದು. ”

“ಮಕ್ಕಳೇ, ಒಂದು ಕಾಗೆಗೆ ನಾವು ಹತ್ತು ದಿವಸ ಆಹಾರ ಕೊಟ್ಟು ಅಭ್ಯಾಸಮಾಡಿದೆವೆಂದು ಇಟ್ಟುಕೊಳ್ಳೋಣ. ಹನ್ನೊಂದನೇ ದಿವಸ ಕೊಡದಿದ್ದರೆ ಅದು ನಮ್ಮ ಹಿಂದೆಯೇ ಕೂಗುತ್ತ ಬರುತ್ತದೆ. ಏಕಾಗ್ರತೆಯಿಂದ ಯಾವ ಕೆಲಸವನ್ನೂ ಮಾಡಲಿಕ್ಕೆ ನಮಗೆ ಆಗುವುದಿಲ್ಲ. ಇದೇ ರೀತಿಯಲ್ಲಿ, ನಿತ್ಯ ಪೂಜೆ ನಿಲ್ಲಿಸಿದರೆ ಸೂಕ್ಷ್ಮ ರೂಪದಲ್ಲಿ ಆ ದೇವತೆಗಳು ನಮ್ಮನ್ನು ಉಪದ್ರವಿಸುತ್ತಿರುತ್ತವೆ. ಸಾಧಕರನ್ನು ಇದು ಅಷ್ಟೊಂದಾಗಿ ಬಾಧಿಸುವುದಿಲ್ಲ.”

ಮಕ್ಕಳೇ, ದೋಣಿ ಕೊಂಡು ಕೊಂಡರೆ ಮಾತ್ರ ಸಾಲದು; ಹುಟ್ಟು ಹಾಕಲು ಕೂಡ ಕಲಿಯಬೇಕು. ಹುಟ್ಟುಹಾಕಲು ಗೊತ್ತಿಲ್ಲದೆ ದೊಣಿ ಏರಿದರೆ, ಅದು ಗುರಿಯಿಲ್ಲದೆ ಆ ಕಡೆಗೂ ಈ ಕಡೆಗೂ ಹೋಗುತ್ತಿರುತ್ತದೆ. ಹುಟ್ಟು ಹಾಕಲು ಗೊತ್ತಿರಲಾರದೆ, ದೋಣಿಯ ದೋಷ ಹೇಳುವುದು ಸರಿಯೇ ?

ಇದೇ ರೀತಿ ಕ್ಷೇತ್ರ ಕಟ್ಟಿಸಿದರೆ ಮಾತ್ರ ಸಾಲದು, ಅದನ್ನು ಕ್ರಮಬದ್ಧವಾಗಿ ನಡೆಸಲೂ ಬೇಕು. ನಿತ್ಯ ಪೂಜೆ ಮಾಡಬೇಕು. ಮಾಡದಿದ್ದರೆ ಕೋಲಾಹಲವಾಗಬಹುದು. ಅಂತಹ ವೇಳೆಯಲ್ಲಿ ಕ್ಷೇತ್ರದ ದೋಷ ಎಣಿಸಿ ಪ್ರಯೋಜನವಿಲ್ಲ.”

ಪ್ರಶ್ನೆ: ಹಾಗಾದರೆ ದೇವತೆಗಳೂ ದೇವರೂ ಬೇರೆ ಬೇರೆಯೇನು ?

“ದೇವತೆಗಳು ಮನುಷ್ಯನ ಸಂಕಲ್ಪದ ಸೃಷ್ಟಿ. ಮನುಷ್ಯನು ದೇವತೆಗಳನ್ನು ಪ್ರತಿಷ್ಠಾಪಿಸಿದವನು ಸಹ. ಮನುಷ್ಯನ ಸೃಷ್ಟಿಗೂ ಸಂಕಲ್ಪಕ್ಕೂ ಒಂದು ಪರಿಮಿತಿಗಳಿದೆ. ಆದಕಾರಣ ಮನುಷ್ಯನ ಸ್ವಭಾವವು ಅವನ ಸೃಷ್ಟಿಯಲ್ಲೂ ಪ್ರತಿಫಲಿಸುತ್ತದೆ. ಮಕ್ಕಳೇ, ಮನುಷ್ಯನ ಹಾಗೂ ಪ್ರಾಣಿಗಳ ನಡುವಿರುವ ವ್ಯತ್ಯಾಸದಂತೆಯೆ ದೇವರು ಹಾಗೂ ದೇವತೆಗಳ ನಡುವಿನ ವ್ಯತ್ಯಾಸ. ಆತ್ಮ ಎಲ್ಲಾ ಒಂದೇ ಆದರೂ, ಮನುಷ್ಯನ ಹಾಗೆ ನಾಯಿಗೆ ವಿವೇಚನೆಯಿಲ್ಲವಲ್ಲ. ತನ್ನನ್ನು ಪ್ರೀತಿಸುವವರನ್ನು ಮಾತ್ರ ನಾಯಿ ಪ್ರೀತಿಸುವುದು; ಉಳಿದವರನ್ನು ಕಚ್ಚುತ್ತದೆ.”

ಪ್ರಶ್ನೆ: ಆ ತರಹ ಆದರೆ, ಕ್ಷೇತ್ರಗಳು ಮನುಷ್ಯರಿಗೆ ದೋಷಕರವಾಗುತ್ತದಲ್ಲವೇ ?

“ಎಂದಿಗೂ ಇಲ್ಲ. ದೇವತಾ ಪೂಜೆ ನಡೆಸುವ ಕ್ಷೇತ್ರಗಳ ಕುರಿತಾಗಿ ಅಮ್ಮ ಹೇಳಿದ್ದು. ಸ್ವಲ್ಪ ಜಾಗ್ರತೆ ವಹಿಸುವ ಸಲುವಾಗಿ ಮಾತ್ರ. ಸ್ವಂತ ಪ್ರಾಣವನ್ನು ಕೂಡಾ ಚೆನ್ನಾಗಿ ನಿಲ್ಲಿಸಲು ಕೂಡದ ತಂತ್ರಿಗಳಲ್ಲವೇ ಪ್ರತಿಷ್ಠೆ ಮಾಡುವುದು ? ಅಂಥ ಕಡೆ ಪೂಜೆ ಎಂದೂ ನಿಲ್ಲಿಸಬಾರದು. ಗಾಜಿನ ಗೂಡಿನಲ್ಲಿ ನೀರಿಟ್ಟು ಮೀನು ಸಾಕುವುದನ್ನು ನೋಡಿಲ್ಲವೇ ? ಅವುಗಳು ಬದುಕಿರಲು ದಿನಾಲೂ ನೀರು ಬದಲಾಯಿಸಿಕೊಂಡಿರಬೇಕು. ಇಲ್ಲದಿದ್ದರೆ ತಪ್ಪಾಗುತ್ತದೆ. ಎಚ್ಚರಿಕೆಯಿಂದ ಪೂಜೆ ನಡೆಸಿದರೆ ಐಶ್ವರ್ಯ ಮತ್ತು ಸಮೃದ್ಧಿಯುಂಟಾಗುವುದು.

ಆದರೆ ಮಹಾತ್ಮರು ಇಲ್ಲವೆ ಜೀವನ್ಮುಕ್ತರು ಪ್ರತಿಷ್ಠಾಪನೆ ನಡೆಸಿದ ಕ್ಷೇತ್ತ್ರಗಳ ಮಹತ್ವವೇ ಬೇರೆ. ಅವರು ಸಂಕಲ್ಪದಿಂದ ತಾವು ಪ್ರತಿಷ್ಠಾಪಿಸಿದ ವಿಗ್ರಹಗಳಲ್ಲಿ ಪ್ರಾಣಶಕ್ತಿ (ದಿವ್ಯ ಚೈತನ್ಯ) ತುಂಬಿರುತ್ತಾರೆ. ಅಖಂಡ ಸಚ್ಚಿದಾನಂದದಲ್ಲಿ ಅವರು ಸಂಕಲ್ಪ ಮಾಡಿರುತ್ತಾರೆ. ಅಲ್ಲಿಯ ಪ್ರತಿಷ್ಠಾಪನೆಗಳು, ಮತ್ತು ಮೂರ್ತಿಗಳು ಚೈತನ್ಯದಿಂದ ತುಂಬಿ ತುಳುಕಾಡುತ್ತಿರುತ್ತವೆ; ಗಾಜಿನ ಗೂಡಿನಲ್ಲಿ ಬೆಳೆದ ಮೀನುಗಳಂತಲ್ಲ. ಅವುಗಳ ಸ್ಥಿತಿ, ನದಿಯಲ್ಲಿ ಬೆಳೆದ ಮೀನುಗಳಂತಿರುತ್ತದೆ. ಅಲ್ಲಿ ಎಂದೂ ಪೂಜೆ ನಿಲ್ಲುವುದಿಲ್ಲ; ಅಥವಾ ನಿಂತರೂ ಶಕ್ತಿ ಕ್ಷಯಿಸುವುದಿಲ್ಲ. ಇಂಥ ಕ್ಷೇತ್ರಗಳು ದೊಡ್ಡ ಆಕರ್ಷಣ ಕೇಂದ್ರಗಳಾಗಿಯೂ, ನಿತ್ಯ ಕಲ್ಯಾಣ ಗುಣಗಳ ಸಂಗಮವಾಗಿಯೂ ಇರುತ್ತವೆ. ತಿರುಪತಿ, ಗುರುವಾಯೂರ್,(ತೃಶ್ಶೂರ್, ಕೇರಳ) ಚೋಟ್ಟಾನಿಕರ (ಎರಣಾಕುಳಂ, ಕೇರಳ) ಮುಂತಾದ ಕ್ಷೇತ್ರಗಳು ಇದಕ್ಕೆ ಉದಾಹರಣೆ.”

ಪ್ರಶ್ನೆ: ಅಮ್ಮಾ, ಪಿತೃಕರ್ಮಕ್ಕೆ ಫಲಪ್ರಾಪ್ತಿಯಿದೆಯೇ ?

ಮಕ್ಕಳೇ, ಶುದ್ಧ ಸಂಕಲ್ಪಕ್ಕೆ ದೊಡ್ಡ ಶಕ್ತಿಯಿದೆ. ಕರ್ಮ ಫಲಿಸಲೇ ಬೇಕೆಂದಿದ್ದರೆ ಶುದ್ಧ ಸಂಕಲ್ಪ ಬೇಕು. ಪಿತೃಕರ್ಮ ನಡೆಸುವಾಗ ಸತ್ತ ವ್ಯಕ್ತಿಯ ದಿನ, ನಾಮ ರೂಪ, ಭಾವಗಳನ್ನೆಲ್ಲ ಚಿಂತಿಸಿ ಮನಸ್ಸಲ್ಲಿ ಮಾತ್ರ ಜಪ ಮಾಡುತ್ತಾರೆ.

ಮಕ್ಕಳೇ, ಪ್ರತಿಯೊಂದು ಕರ್ಮಕ್ಕೂ ಒಂದೊಂದು ದೇವತೆಯಿದೆ. ಪರ್ಶಿಯದಲ್ಲಿರುವ ಮಗನ ಕಾಗದ ಊರಲ್ಲಿರುವ ತಂದೆಗೂ ತಾಯಿಗೂ ಪೋಸ್ಟ್ ಮ್ಯಾನ್ ವಿಳಾಸ ತಪ್ಪದೆ ತಲಪಿಸುವುದಿಲ್ಲವೆ ? ಆದರೆ ಇದು ಖಂಡಿತ: ಸಂಕಲ್ಪ ಶುದ್ಧವಾಗಿದ್ದರೆ ಮಾತ್ರ ದೇವತೆಗಳು ಆಯಾಯ ಕರ್ಮದ ಫಲವನ್ನು ಆಯಾಯ ಜೀವನಿಗೆ ತಲಪಿಸುವರು. ಅದರಿಂದ ಆತ್ಮನಿಗೆ ಒಳಿತಾಗುವಂತೆ ಸಹ ಮಾಡುವುದು.

ಪ್ರಶ್ನೆ: ಋಷಿವರ್ಯರ ಉಕ್ತಿಗಳು ಸತ್ಯವೆಂದು ಏನು ಪುರಾವೆ ?

ಮಕ್ಕಳೇ, ಅವರು ಹೇಳಿದ್ದೆಲ್ಲಾ ಸರಿಯಾಗಿದೆ. ಕಲಿಯುಗದ ಕುರಿತು ಭಾಗವತದಲ್ಲಿ ಹೇಳಿರುವುದೆಲ್ಲವೂ ಅದರಂತೆಯೇ ನಡೆಯುತ್ತಿಲ್ಲವೇ ? “ಮಗನನ್ನು ತಂದೆಯು ತಿನ್ನುವನು; ತಂದೆಯನ್ನು ಮಗನು ತಿನ್ನುವನು, ಕಾಡುಗಳೆಲ್ಲ ಮನೆಗಳಾಗುವವು; ಮನೆಗಳೆಲ್ಲ ಅಂಗಡಿಗಳಾಗುವವು.” ಇದೇ ರೀತಿ ಅಲ್ಲವೆ ಇವತ್ತು ಪ್ರತಿಯೊಂದೂ ನಡೆಯುತ್ತಿರುವುದು ? ಋಷಿವರರು ಕಂದ ಮೂಲಗಳನ್ನು ಸೇವಿಸಿ, ತಪಸ್ಸನ್ನು ಅನುಷ್ಠಾನ ಮಾಡಿ, ಸತ್ಯವನ್ನು ಸಾಕ್ಷಾತ್ಕರಿಸಿದರು. ನಾವಾದರೋ, ಆಹಾರ ಸೇವಿಸಲು ಮಾತ್ರ ಜೀವಿಸುತ್ತೇವೆ .

ಹಲವು ಯುಗಗಳ ಮೊದಲೇ, ನಮ್ಮ ಋಷೀಶ್ವರರು ಬಹಳ ವಿಷಯಗಳನ್ನು ಕಂಡು ಹಿಡಿದಿದ್ದರು. ನಾವಿಂದು ಬಹಳ ದೊಡ್ಡದೆಂದು ಭಾವಿಸುವ ಹಲವು ಸಂಶೋಧನೆಗಳನ್ನು ನಿರರ್ಥಕವೆಂದು ಪರಿಗಣಿಸಿದ್ದರು. ಉದಾಹರಣೆಗೆ, ವಿಜ್ಞಾನಿಗಳು ಪ್ರಣಾಲಿಕಾ ಶಿಶು(test tube baby)ವನ್ನು ಮಾಡಿದರು. ಪ್ರತಿಯಾಗಿ, ಕೌರವರ ನೂರೊಂದು ಮಕ್ಕಳನ್ನೂ, ಕೊಡದೊಳಗಿಟ್ಟಲ್ಲವೇ ವ್ಯಾಸರು ಸೃಷ್ಟಿಸಿದ್ದು ? ಬರೇ ಮಾಂಸಪಿಂಡಕ್ಕೆ ಅವರು ಪ್ರಾಣ ಪ್ರದಾನ ಮಾಡಿದರೆಂಬುದನ್ನು ನೆನಪಿಟ್ಟುಕೊಳ್ಳಬೇಕು ! ಇದಕ್ಕೆ ಹೋಲಿಸಿದರೆ ಇವತ್ತಿನ ಟೆಸ್ಟ್ ಟ್ಯೂಬ್ ಬೇಬಿ ಏನೂ ಅಲ್ಲ. ಇದರಂತೆ ರಾಮಾಯಣದಲ್ಲಿ ಪುಷ್ಪಕವಿಮಾನದ ಕುರಿತು ಹೇಳಿಲ್ಲವೆ ? ಇವತ್ತಿನ ವಿಜ್ಞಾನಿಗಳು ಯಾವಾಗಂತೆ ವಿಮಾನ ಕಂಡುಹಿಡಿದದ್ದು ? ಹೀಗೆಯೇ ಏನೆಲ್ಲವೂ !

ಇವತ್ತಿನ ವಿಜ್ಞಾನಿಗಳನ್ನಾಗಲಿ, ಅವರ ಸಂಶೋಧನೆಗಳನ್ನಾಗಲಿ ಅಮ್ಮ ಅರ್ಥಹೀನವೆಂದು ತಳ್ಳಿ ಹಾಕುತ್ತಿಲ್ಲ. ತಪಸ್ಸಿನಿದ ಗಳಿಸಲು ಸಾಧ್ಯವಿಲ್ಲದ್ದು ಯಾವುದೂ ಇಲ್ಲ ಎಂದು ಒತ್ತಿ ಹೇಳಲು ಎಂದು ಅಮ್ಮ ಹೀಗೆ ಸೂಚಿಸುತ್ತಿರುವುದು. ಅವರಿಗಿದೆಲ್ಲ ನಿರರ್ಥಕವಾಗಿತ್ತು. ಏನನ್ನೂ ಸಂಕಲ್ಪಮಾತ್ರದಿಂದ ಸೃಷ್ಟಿಸಲು ಅವರಿಗೆ ಆಗುತ್ತಿತ್ತು.

ಹಿಂದೆ ಮನೆಗಳ ನಡುವೆ ತುಂಬ ಸ್ಥಳವಿರುತ್ತಿತ್ತು. ಸುತ್ತಲೂ ಔಷಧೀಯ ಗಿಡಗಳನ್ನು ನಟ್ಟಿರುತ್ತಿದ್ದರು; ಬೇವು, ಅತ್ತಿ, ಇತ್ಯಾದಿ ಹಲವು. ಅದನ್ನು ತೀಡಿ ಬಂದ ಗಾಳಿಗೆ ಒಂದು ವಿಶೇಷ ಔಷಧಿ ಗುಣವಿದೆ. ಆ ವಾಯು ವಾತಾವರಣವನ್ನು ಶುದ್ಧ ಮಾಡುತ್ತದೆ. ಅವತ್ತಿನ ಜನರು ಸತ್ಯ, ಧರ್ಮಗಳ ಕೈಬಿಟ್ಟಿರಲಿಲ್ಲ. ಅದಕ್ಕೆ ಪ್ರತಿಯಾಗಿ, ಇಂದೆಲ್ಲ ಬದಲಾಗಿದೆ. ವೃಕ್ಷಗಳನ್ನೆಲ್ಲ ಕಡಿದು ತುಂಡು ಮಾಡಿ ಅಲ್ಲೆಲ್ಲ ಮನೆಗಳನ್ನೂ ಅಂಗಡಿಗಳನ್ನೂ ಕಟ್ಟುತ್ತಿದ್ದಾರೆ. ಸತ್ಯಕ್ಕೂ ಧರ್ಮಕ್ಕೂ ನೆಲೆಯಿಲ್ಲದಾಯಿತು. ಪರಸ್ಪರ ವಿಶ್ವಾಸ, ಪ್ರೀತಿ, ಸತ್ಯಸಂಧತೆ, ಕ್ಷಮೆ, ತ್ಯಾಗ ಇವೆಲ್ಲ ಇದೆಯೆ ? ಮಳೆ ಬಿದ್ದರೆ ಮಳೆ, ಬಿಸಿಲಾದರೆ ಬಿಸಿಲು. ಕೃಷಿ ಮಾಡುವಾಗ ಸಾಕಷ್ಟು ಮಳೆಯಿಲ್ಲದೆ ಬೆಳೆಗಳು ನಾಶವಾಗುತ್ತಿವೆ.

ಹೀಗೆಲ್ಲ ಸಂಭವಿಸುವುದೆಂದು ನಮ್ಮ ಪೂರ್ವಿಕರಾದ ಋಷಿಶ್ರೇಷ್ಠರು ಮೊದಲೇ ಹೇಳಿರುವರು. ಅದೆಲ್ಲ ಅದರಂತೆಯೇ ನಡೆಯುತ್ತದೆ.”

ಪ್ರಶ್ನೆ: ಅಮ್ಮಾ, ನಿರಾಕಾರನಾದ ದೇವರನ್ನು ಸಾಕಾರನಾಗಿ ಆರಾಧಿಸಬೇಕಾದ ಅವಶ್ಯಕತೆಯಿದೆಯೇ ?

“ಮಕ್ಕಳೇ, ನಮ್ಮ ಸಂಸ್ಕಾರ, ಪ್ರತಿಯೊಬ್ಬ ಗೆಳೆಯನಲ್ಲಿ ನಮ್ಮ ದುಃಖಗಳನ್ನು ಹಂಚಿಕೊಂಡು, ಸುಖವನ್ನು ಅರಸೋಣ, ಎನ್ನುವಂತದ್ದು. ಅದನ್ನು ಒಂದು ವಿಶ್ವ ಸಂಕಲ್ಪವಾಗಿ ಪರಿವರ್ತಿಸುವುದು ಸಾಕಾರ ಉಪಾಸನೆಯ ಉದ್ದೇಶ.

ಒಂದು ಮಗು ಆಟವಾಡಿಕೊಂಡಿರುವಾಗ ಸ್ನೇಹಿತನು ಸ್ವಲ್ಪ ಚಿವುಟಿದರೆ, ಅಳುತ್ತಾ ಹೋಗಿ ತಾಯಿಯಲ್ಲಿ ಹೇಳುತ್ತಾನೆ. ಸ್ವಲ್ಪ ಪ್ರಾಯ ಹೆಚ್ಚಾದಾಗ, ಮನೆಯಲ್ಲಿ ಅಮ್ಮ ಹೊಡೆದದ್ದು, ಅಣ್ಣ ಬೈದದ್ದು ಎಲ್ಲಾ ಸ್ನೇಹಿತನಲ್ಲಿ ಹೇಳುತ್ತಾನೆ. ಮುಂದೆ ಪ್ರೀತಿಸುವ ಹುಡುಗಿಯಲ್ಲಿ ತನ್ನ ದುಃಖವೆಲ್ಲ ಹೇಳಿ ಸಾಂತ್ವನ ಪಡೆಯಲು ಪ್ರಯತ್ನಿಸುತ್ತಾನೆ. (ಅವಳ ದುಃಖಗಳನ್ನು ಅವನಲ್ಲಿ ಹೇಳಿಕೊಳ್ಳುತ್ತಾಳೆ.) ಆದರೆ ಆ ಕಡೆ ಈ ಕಡೆ ದುಃಖ ಹಂಚಿಕೊಂಡು ಇಮ್ಮಡಿ ದುಃಖಿತರಾಗುವುದಲ್ಲದೆ, ದುಃಖ ನಿವೃತ್ತಿ ಪಡೆಯಲು ಆಗುವುದಿಲ್ಲ. ಸಣ್ಣ ಹಾವು ದೊಡ್ಡ ಕಪ್ಪೆಯನ್ನು ನುಂಗಿ ಸಂಕಟ ಪಟ್ಟ ಹಾಗೆ, ಇಬ್ಬರೂ ಸಂಗಾತಿಗಳು ವ್ಯಥೆ ಪಡುತ್ತಾರೆ. ನಮಗೆ ಪೂರ್ತಿ ಶಾಂತಿ ನೀಡಲು ಯಾರಿಗೂ ಸಾಧ್ಯವಿಲ್ಲ. ಈ ದುಃಖದ ವಿನಿಮಯ, ವಿಶ್ವ ಸಂಕಲ್ಪವಾದ ಈಶ್ವರನೆಡೆಗೆ ಹೊರಳಿಸಿದರೆ, ಶಾಶ್ವತವಾದ ಶಾಂತಿಯು ನಮಗೆ ಲಭಿಸುವುದು. ಅವನು ನಮಗೆ ಆನಂದ ಮಾತ್ರವೇ ತರುವನು.

ನಿರಾಕಾರನಾದ ಪರಮಾತ್ಮನಲ್ಲಿ /ಈಶ್ವರನಲ್ಲಿ ಬೇಗನೇ ಪ್ರೇಮ ಮೂಡುವುದಿಲ್ಲ. ಸಾಮಾನ್ಯರಿಗೆ ನಿರಾಕಾರ ಸಾಧನೆಯಿಂದ ಬೇಗನೆ ಸಂತೃಪ್ತಿಯೆನಿಸುವುದೆಂದು ಹೇಳಲಿಕ್ಕಾಗುವುದಿಲ್ಲ. ಭಕ್ತಿಯಿಲ್ಲದ ಅದ್ವೈತ ಸಾಧನೆಯೆಂದರೆ ಬಂಡೆಕಲ್ಲನ್ನು ತಿನ್ನುವ ಹಾಗೆ. ಮಕ್ಕಳೇ, ನಿರಾಕಾರನಾದ ದೇವರು ಸಾಕಾರವಾಗಲು ಸಾಧ್ಯ; ಸರ್ವ ಶಕ್ತನಾದ ಭಗವಂತನಿಗೆ, ತನ್ನ ಭಕ್ತನಿಗಾಗಿ ರೂಪವ ತಳೆಯಲು ಇನಿತು ಕಷ್ಟವೂ ಇಲ್ಲ. ನೀರು ಮಂಜು ಗಡ್ಡೆಯಾಗಿಯೂ, ಕಡಲನೀರು ಉಪ್ಪಾಗಿಯೂ ಮಾರ್ಪಡುವುದಿಲ್ಲವೇ ? ಇದೇ ರೀತಿಯಾಗಿ, ಭಕ್ತನ ಇಚ್ಛೆಯನ್ನನುಸರಿಸಿ ಭಗವಂತನು ರೂಪ ಧರಿಸುತ್ತಾನೆ. ತನ್ನ ಇಷ್ಟ ರೂಪದಲ್ಲಿ ದೃಢ ನಂಬಿಕೆಯಿದ್ದರೆ, ಗುರಿ ಮುಟ್ಟಲು ಸಾಧ್ಯವಿದೆ. ನಮ್ಮ ಆತ್ಮಸ್ವರೂಪವೇ ದೇವರು ಎಂದು ಮಕ್ಕಳು ಭಾವಿಸಬೇಕು.ಎಲ್ಲಾ ರೂಪಗಳೂ,ಒಂದರ ಬೇರೆ ಬೇರೆ ಭಾಗಗಳೆಂದುಕೊಂಡು ಪ್ರಾರ್ಥಿಸಬೇಕು. ಹಲವು ಹೊಂಡಗಳನ್ನು ತೋಡುವ ಸಮಯದಲ್ಲಿ ಒಂದು ಹೊಂಡ ತೋಡಿರಿ. ಆಗ ನೀರಡಿಕೆ ತಣಿಸಲು ನೀರು ಬೇಗನೆ ಸಿಗುವುದು. ಫ್ಯಾನ್ನಲ್ಲಿ, ಫ್ರಿಜ್ನಲ್ಲಿ ಮತ್ತು ಬಲ್ಬ್ನಲ್ಲಿ ಬರುವ ಕರೆಂಟ್ ಒಂದಲ್ಲವೇ ? ಅದೇ ರೀತಿ, ದೇವರೊಂದೇ; ಉಪಾಧಿಯನ್ನನುಸರಿಸಿ ಪ್ರವರ್ತಿಸುತ್ತಾನೆ ಎಂದಷ್ಟೇ ವಿಷಯ. ದೋಣಿ ಹತ್ತಿದ ಮೇಲೆ ಕಡವಿನಲ್ಲಿ ಇಳಿದ ಹಾಗೆ, ಬಸ್ಸು ಹತ್ತಿ ಮನೆಯ ಹತ್ತಿರದ ಸ್ಟಾಪ್ನಲ್ಲಿಳಿದ ಹಾಗೆ, ದೇವರ ಸಂಕಲ್ಪವು ಸಚ್ಚಿದಾನಂದ ಸಾಗರದ ತೀರದವರೆಗೆ ತಲಪಿಸುವುದು.

ಯಾವ ದುಃಖವನ್ನೂ ಮಕ್ಕಳು ಇನ್ನೊಬ್ಬರಲ್ಲಿ ಹೇಳಿ ಇಮ್ಮಡಿ ದುಃಖ ಪಡೆಯದೆ, ಈಶ್ವರನಿಗೆ ಸಮರ್ಪಿಸಿ ಪರಿಹಾರ (ನಿವೃತ್ತಿ; ಬಿಡುಗಡೆ; ಮೋಕ್ಷ ಮಾರ್ಗ) ಪಡೆಯಿರಿ.

ಒಂದು ಸಲ ಶಿವ ಪಾರ್ವತಿಯರು ಒಟ್ಟಿಗೆ ಕುಳಿತುಕೊಂಡಿದ್ದರು. ಥಟ್ಟನೆ ಪರಮಶಿವನು ಎದ್ದು ಹೋಗುವುದು ಕಂಡಿತು. ಹೋದೊಡನೆ ಹಿಂತಿರುಗಿ ಬಂದದ್ದೂ ಆಯಿತು. “ಅದೇನು ಇಷ್ಟು ಬೇಗ ಹಿಂತಿರುಗಿ ಬಂದದ್ದು” ಎಂದು ಪಾರ್ವತಿ ಪರಮಶಿವನಲ್ಲಿ ವಿಚಾರಿಸಿದಳು. “ನನ್ನ ಒಬ್ಬ ಭಕ್ತ ತನ್ನ ಏನು ದುಃಖವಿದ್ದರೂ ನನ್ನಲ್ಲಿ ಮಾತ್ರ ಹೇಳುತ್ತಿದ್ದ. ಅವನ ಪತ್ನಿಯಲ್ಲಿ, ಮಕ್ಕಳಲ್ಲಿ, ಅಥವಾ ತಾಯಿಯಲ್ಲಿ ಯಾರಲ್ಲೂ ಹೇಳುತ್ತಿರಲಿಲ್ಲ. ಇವತ್ತು ಎಲ್ಲೋ ಹೋಗುವ ಸಮಯ ದಾರಿಯಲ್ಲಿ, ಯಾರೋ ಕದ್ದಿದ್ದಕ್ಕೆ, ತಪ್ಪು ತಿಳುವಳಿಕೆಯಿಂದ ಜನರು ಅವನನ್ನು ಹಿಡಿದು ಹೊಡೆಯ ತೊಡಗಿದರು. ನಾನು ಮುಟ್ಟಿದಾಗ, ಜೊತೆಯಲ್ಲಿರುವ ಗೆಳೆಯನಲ್ಲಿ ಹೇಳುತ್ತಿದ್ದ, ’ನಾನು ಮಾಡದ ತಪ್ಪಿಗೆ ಇವರು ನನ್ನನ್ನು ಹೊಡೆಯುತ್ತಿದ್ದಾರೆ. ಇವರನ್ನು ಎದುರಿಸಲು, ನೀನು ಕೂಡಾ ಸಹಾಯ ಮಾಡು.’ ಎಂದು. ಆಗ ನನ್ನ ಅವಶ್ಯಕತೆ ಇಲ್ಲವಲ್ಲ; ಹಾಗಾಗಿ ನಾನು ಮರಳಿ ಬಂದೆ”

ನಾವು ಬೇರೆಯವರ ಸಹಾಯವನ್ನು ಅವಲಂಬಿಸುವುದಾದರೆ ದೇವರು ನಮ್ಮ ಬಳಿ ಬರಲೊಲ್ಲನು. ದೇವರಿಗೆ ಮಾತ್ರ ಶರಣಾಗಿರಿ. ಅವನು ನಮ್ಮನ್ನು ಕಾಪಾಡುವನು. ಸಂಶಯವಿಲ್ಲ. ಭಕ್ತನಿಗಾಗಿ ಅವನು ಜನ್ಮ ತಾಳುವುದು. ’ದೇವರು ಕರುಣೆಯಿಲ್ಲದವನು; ದೇವರನ್ನು ಕಾಣಲು ಸಾಧ್ಯವಿಲ್ಲ’ ವೆಂದು ಯಾವತ್ತೂ ಮಕ್ಕಳು ಹೇಳಬಾರದು. ಅವನು ಯಾವಾಗಲೂ ಎರಡೂ ಕೈಗಳನ್ನು ಚಾಚಿ ’ಮಕ್ಕಳೇ, ಮಕ್ಕಳೇ’ ಎಂದು ಕರೆಯುತ್ತಾನೆ. ಆದರೆ ನಾವು ಆ ಕಡೆ ನೋಡದೆ, ಕನಸು ಕಾಣುತ್ತಾ, ಮೂರ್ಛೆ ಹೋಗಿದ್ದೇವೆ. ಆದರೂ, ದೇವರನ್ನು ದೂರುತ್ತೇವೆ. ಚೆನ್ನಾಗಿ ಓದುವ ಮಕ್ಕಳಿಗೆ ಗವರ್ನ್ಮೆಂಟು ವಿದ್ಯಾರ್ಥಿವೇತನ ಕೊಡುತ್ತದೆ. ಓದದ ಮಕ್ಕಳು ಗವರ್ನ್ಮೆಂಟು ತಪ್ಪು ಎಂದು ಹೇಳಲು ಸಾಧ್ಯವೇ ? ಭಗವಂತನು ಎಲ್ಲ ಕೊಡಲು ಸಿದ್ಧ. ನಾವು ಅರ್ಹರಾಗದೆ, ಭಗವಂತನ ಮೇಲೆ ಅಪವಾದ ಹೊರಿಸಿ ಫಲವಿದೆಯೇ ?

ಬೆಣ್ಣೆ ಮತ್ತು ತುಪ್ಪದ ನಡುವೆ ವ್ಯತ್ಯಾಸವಿಲ್ಲ. ಮಂಜುಗಡ್ಡೆ ಮತ್ತು ನೀರಿನ ನಡುವೆಯೂ ವ್ಯತ್ಯಾಸವಿಲ್ಲ. ನಿರಾಕಾರನಾದ ಈಶ್ವರನೂ, ಸಾಕಾರನಾದ ಈಶ್ವರನೂ ಒಂದೇ ಸತ್ಯದ ಎರಡು ರೂಪಗಳು ಮಾತ್ರ.”

ಪ್ರಶ್ನೆ: ಅಮ್ಮಾ, ದೇವಸ್ಥಾನಗಳಲ್ಲಿ ಹರಕೆ ಮತ್ತು ಹಲವು ಹೆಸರುಗಳಿಂದ ಎಷ್ಟೋ ಹಣ ಖರ್ಚು ಮಾಡುತ್ತಾರೆ. ದೇವರಿಗ್ಯಾಕೆ ಹಣ ಅಮ್ಮಾ ?

“ಮಕ್ಕಳೇ, ದೇವರಿಗೆ ನಮ್ಮಿಂದ ಏನೂ ಬೇಡ. ಲೈಟ್‌ಗೆ ಸೀಮೆ ಎಣ್ಣೆ ದೀಪದ ಅವಶ್ಯಕತೆಯಿಲ್ಲ. ದೇವರು ಸೂರ್ಯನಂತೆ. ಅವನು ಸರ್ವ ಚರಾಚರಗಳಿಗೆ ಸಮನಾಗಿ ಪ್ರಕಾಶ ಬೀರುತ್ತಿದ್ದಾನೆ. ಎಲ್ಲವನ್ನೂ ಬೆಳಗಿಸುವ ಅವನಿಗೆ ಹರಿಕೆಯಾಗಿ ಎಣ್ಣೆ ಸಲ್ಲಿಸುತ್ತೇವಂದೂ, ದೀಪ ಹಚ್ಚುತ್ತೇವೆಂದೆಲ್ಲ ಹೇಳುತ್ತೇವೆ ! ಇದು ನಮ್ಮ ಅಜ್ಞಾನದ ಫಲ. ಹಗಲು ಸಮಯದಲ್ಲಿ ಕೈಯ್ಯಲ್ಲೊಂದು ಮೇಣದ ಬತ್ತಿ ಉರಿಸಿ ಹಿಡಿದುಕೊಂಡು, “ಸೂರ್ಯದೇವನೇ, ಇಗೋ ಬೆಳಕು. ನೀನು ಕಣ್ಣು ಕಂಡು, ಸರಿಯಾಗಿ ನಡೆದುಕೊ” ಎಂದು ಹೇಳಿದಂತೆ ಇದು.

ಮಕ್ಕಳೇ, ದೇವರು ಸದಾ ಕೃಪೆ ಸುರಿಸುತ್ತಿರುತ್ತಾನೆ. ಆದರೆ ಅದನ್ನು ಸ್ವೀಕರಿಸಲು ನಾವು ಸಿದ್ಧರಾಗಿಲ್ಲ. ಹರಿಯುತ್ತಿರುವ ನದಿಗೆ ಒಡ್ಡು ಕಟ್ಟಿ ನಾವು ದೂರುತ್ತೇವೆ, “ನೋಡಲಿಲ್ಲವೇ, ಈ ನದಿ ನನಗೆ ನೀರು ಕೊಡುತ್ತಿಲ್ಲ” ಎಂದು. ಒಡ್ಡು ಕಟ್ಟಿದ ವಿಷಯ ನಾವು ಮರೆತು ಬಿಡುತ್ತೇವೆ. ಆದರೆ ನದಿಯ ಮೇಲೆ ಅಪವಾದ ಹೊರಿಸುತ್ತೇವೆ. ಇದೇ ರೀತಿಯಾಗಿದೆ, ದೇವರನ್ನು ಮೇಲೆ ಹಲವು ವಿಷಯಗಳಲ್ಲಿ ದೂರುವುದು. ಯಥಾರ್ಥದಲ್ಲಿ, ಅಜ್ಞಾನವೆಂಬ ಒಡ್ಡು ಕಟ್ಟಿ, ದೇವರ ಕೃಪೆಯೆನ್ನುವ ಜಲ ಪ್ರವಾಹವನ್ನು ಅಡ್ಡಗಟ್ಟಿ ನಿಲ್ಲಿಸಿದ್ದೇವೆ. ಇದರಿಯದೆ ನಾವು ದೇವರನ್ನು ದೂರುತ್ತೇವೆ.

ಮಕ್ಕಳೇ, ಹರಕೆ ಮುಂತಾದವುಗಳನ್ನು ನಮ್ಮ ಸಂಕಲ್ಪಕ್ಕಾಗಿ ಮಾಡುತ್ತೇವೆ. ದೇವರಿಗೆ ಅದರದ್ದೇನೂ ಅವಶ್ಯಕತೆಯಿಲ್ಲ. ನಮ್ಮ ಕೈಯ್ಯಿಂದ ದೇವರಿಗೆ ಏನೂ ಬೇಡ.”

ಪ್ರಶ್ನೆ: ಹಾಗಾದರೆ ಮತ್ತೆ ಕ್ಷೇತ್ರಗಳು ಯಾತಕ್ಕೆ ? ಮನೋಹರವಾದ ಮೂರ್ತಿಯನ್ನು ಕಡೆದ ಶಿಲ್ಪಿಯನ್ನಲ್ಲವೇ ಆರಾಧಿಸ ಬೇಕಾಗಿರುವುದು ?

“ಪ್ರೀತಿಯ ಮಕ್ಕಳೇ, ತೀರಿ ಹೋದ ನಮ್ಮ ತಂದೆಯ ಚಿತ್ರ ಕಾಣುವಾಗ ನೆನೆಯುವುವುದು, ಅದನ್ನು ಬರೆದವನೋ, ಬಣ್ಣವೋ ?
ನಮ್ಮ ತಂದೆಯದ್ದು. ಇದೇ ರೀತಿ ಆ ಮೂರ್ತಿ ಕಾಣುವಾಗ ನಮ್ಮ ನಿಜವಾದ ಸೃಷ್ಟಿಕರ್ತನನ್ನು ನೆನೆಯುತ್ತೇವೆ. ಕೃಷ್ಣನ ಮೂರ್ತಿಯನ್ನು ನೋಡುವಾಗ ಸ್ಮರಿಸುವುದು ಶ್ರೀ ಕೃಷ್ಣನನ್ನು. ಅಲ್ಲದೆ ಬರೇ ಕಾರ್ಗಲ್ಲಿನ ಶಿಲ್ಪವನ್ನಲ್ಲ ಕಾಣುವುದು. ಕೃತಕ ಸೇಬನ್ನು ಕಾಣುವಾಗ ನಿಜವಾದ ಸೇಬು ನೆನಪಾದ ಹಾಗೆ. ಅಜ್ಞಾನದಲ್ಲಿ ಬದುಕುತ್ತಿರುವ ಕಾರಣ ನಮಗೆ ಇದೆಲ್ಲ ಅಗತ್ಯ. ”

ಪ್ರಶ್ನೆ: ಅದಕ್ಕೆ ದೇವಸ್ಥಾನದ ಅವಶ್ಯಕತೆಯಿದೆಯೇ ?

“ಚಿಕ್ಕ ಮಕ್ಕಳು ಒಂಟೆ, ಓತಿ, ಇತ್ಯಾದಿಗಳ ಚಿತ್ರ ನೋಡಿ ಕಲಿಯುತ್ತಾರೆ. ಆ ಚಿತ್ರಗಳು ಅವನು ಕಲಿಯುವುದಕ್ಕೆ ಸಹಾಯವಾಗುತ್ತವೆ. ಅದರ ಕುರಿತು ಅವನಿಗೊಂದು ರೂಪವನ್ನೂ ಒದಗಿಸುತ್ತದೆ. ಆದರೆ ವಯಸ್ಸಾದಾಗ ಅದು ಬರೇ ಚಿತ್ರವೆಂದು ಅವನಿಗೆ ಅರ್ಥವಾಗುತ್ತದೆ. ಇಂದು ಅವನ ಎಳೆಯ ಬುದ್ಧಿಗೆ ಈ ಚಿತ್ರಗಳ ಅವಶ್ಯಕತೆಯಿದೆ.”

ಪ್ರಶ್ನೆ: ದೇವಸ್ಥಾನಗಳಲ್ಲಿ ನರಬಲಿ ಕೊಡುತ್ತಿದ್ದದ್ದು ಏತಕ್ಕಾಗಿ ?

“ಮಕ್ಕಳೇ, ಅಂದಿನ ಜನಗಳ ಅಜ್ಞಾನವು ಅವರನ್ನು ಅವರನ್ನು ಆ ರೀತಿ ಮಾಡಲು ಪ್ರೇರೇಪಿಸಿದ್ದು. ನರಬಲಿ ಕೊಟ್ಟರೆ ದೇವರು ಸುಪ್ರೀತನಾಗುತ್ತಾನೆ ಎಂದವರು ನಂಬಿದರು. ಶಾಸ್ತ್ರಗಳಲ್ಲಿ ಹೇಳಿದ ವಿಷಯಗಳನ್ನು ಅವರು ತಪ್ಪು ತಿಳಿದುಕೊಂಡಕಾರಣ ಹಾಗೆಲ್ಲ ಮಾಡಿದ್ದು. ಇವತ್ತಿನ ಜಗತ್ತನ್ನೆ ನೋಡಿರಿ. ರಾಜಕೀಯದ ಹೆಸರಿನಲ್ಲಿ ಎಷ್ಟೊಂದು ರಕ್ತ ಹರಿಯುತ್ತಿದೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರಿದರೆ ಕೊಲ್ಲುವುದು, ಪಕ್ಷದವರು ತಮ್ಮೊಳಗೆ ಪರಸ್ಪರ ಹೊಡೆಯುವುದು, ಬಡಿಯುವುದು, ಇರಿಯುವುದು – ಹೀಗೆ ಏನೆಲ್ಲ ಕೋಲಾಹಲ !

ಸತ್ಯದಲ್ಲಿ, ಯಾವುದಾದರೂ ರಾಜಕೀಯ ಪಕ್ಷದ ನಿಯಮಾವಳಿಯಲ್ಲಿ ಅನಗತ್ಯ ಕೊಲ್ಲುವುದು, ಕೊಲೆ ಮಾಡಿಸುವುದು ಹೇಳಿದೆಯೇ ? ಬರೆದಿಟ್ಟಿರುವುದೂ, ಭಾಷಣದಲ್ಲಿ ಹೇಳುವುದೂ ಒಳ್ಳೆ ವಿಷಯಗಳು, ಆದರೆ ಮಾಡುವುದು ಮತ್ತೊಂದು. ಈ ರೀತಿ ಕೆಲವು ಹೆಡ್ಡರು ಅವತ್ತೂ ಇದ್ದರು. ಅಂಧ ಭಕ್ತಿಯೂ, ನಂಬಿಕೆಯೂ ಅವರನ್ನು ಹಾಗೆಲ್ಲ ಮಾಡಲು ಪ್ರೇರೇಪಿಸಿತು.”

ಪ್ರಶ್ನೆ: ಇವರಿಗೆಲ್ಲ ಪಾಪ ತಗಲುದಿಲ್ಲವೇ, ಅಮ್ಮಾ ?

“ಮಕ್ಕಳೇ, ವಿಶ್ವ ಸಂಕಲ್ಪದಿಂದಾಗಿದ್ದರೆ ಪಾಪವಿಲ್ಲ. ಸ್ವಾರ್ಥದಿಂದಾಗಿದ್ದರೆ ಪಾಪ ಉಂಟು. ಒಂದು ಕಡೆ ಇಬ್ಬರು ಬ್ರಾಹ್ಮಣರಿದ್ದರು. ಅವರಿಬ್ಬರನ್ನೂ ಒಂದೇ ರೋಗ ಬಾಧಿಸುತ್ತದೆ.ಮೀನು ತಿಂದರೆಯೇ ರೋಗ ಗುಣವಾಗುವುದು ಎಂದು ಡಾಕ್ಟರು ಹೇಳಿದರು. ಇಬ್ಬರೂ ಶುದ್ಧ ಸಸ್ಯಾಹಾರ ಉಂಡು ಅಭ್ಯಾಸವಾದವರು. ಅವರಿಗೆ ಗೊಂದಲಕ್ಕಿಟ್ಟುಕೊಂಡಿತು. ಆದರೆ ತಾನು ಸತ್ತು ಹೋದರೆ ಪತ್ನಿಯ ಹಾಗೂ ಮಕ್ಕಳ ಸ್ಥಿತಿಯೇನು ಎಂದು ಆಲೋಚಿಸಿ, ಮತ್ತು ಬಂಧು ಮಿತ್ರಾದಿಗಳ ನಿರ್ಬಂಧಕ್ಕೆ ಮಣಿದು, ಮೊದಲಿನವನು ಮೀನು ತಿನ್ನುತ್ತಾನೆ; ಅವನ ರೋಗ ಗುಣವಾಗುತ್ತದೆ. ಆದರೆ ಪಾಪಭಯದಿಂದ ಎರಡನೆಯವನು ಮೀನು ತಿನ್ನಲಿಲ್ಲ; ಅವನು ಸತ್ತು ಹೋದ. ಅವನ ಕುಟುಂಬ ಅನಾಥವಾಯಿತು, ಅವರು ಪೂರ್ತಿ ಕಷ್ಟಕ್ಕೀಡಾದರು.

ಮಕ್ಕಳೇ, ಇಲ್ಲಿ ಮೊದಲನೆಯವನು ಮೀನು ಸಾಯಿಸಿ ತಿಂದ ಕಾರಣ ಒಂದು ಕುಟುಂಬವು ಸಂಪೂರ್ಣವಾಗಿ ಬಚಾವಾಯಿತು. ಇದು ಹಿಂಸೆಯಲ್ಲ; ನಿಶ್ಚಿತವಾಗಿಯೂ ಅಲ್ಲ. ಹಾಗೆ ಮಾಡಿದ ಕಾರಣ ಅವನ ಹೆಂಡತಿ ಮಕ್ಕಳನ್ನು ರಕ್ಷಿಸಲು ಅವನಿಗೆ ಸಾಧ್ಯವಾಯಿತು. ತದ್ವಿರುದ್ಧವಾಗಿ, ಎರಡನೆಯವನು ಮೀನು ತಿನ್ನದಿದ್ದ ಕಾರಣ, ಅವನ ಹೆಂಡತಿಗೂ ಮಕ್ಕಳಿಗೂ ಯಾರೂ ಇಲ್ಲದಂತಾಯಿತು. ಒಂದು ಕುಟುಂಬವೆಂದರೆ ಒಂದೋ ಎರಡೋ ಮೀನಿಗಿಂತ ಎಷ್ಟೋ ದೊಡ್ಡದು. ಸೈನಿಕರು ದೇಶದ ಸಲುವಾಗಿ ಶತ್ರು ಪಕ್ಷದ ಎಷ್ಟೋ ಜನರನ್ನು ಕೊಲ್ಲುತ್ತಾರೆ. ಅದು ಅವರ ಕರ್ತವ್ಯ. ಮನೆ ಕಟ್ಟಿಸಲು ನಾವು ಮರಗಳನ್ನು ಕಡಿದು ತೆಗೆಯುವುದಿಲ್ಲವೇ ? ಇವು ಯಾವುವೂ ಸ್ವಾರ್ಥದಲ್ಲಿ ಸೇರ್ಪಡೆಯಾಗುವುದಿಲ್ಲ. ಪ್ರತೀಕಾರ ಬುದ್ಧಿಯೂ ರಾಗದ್ವೇಷಗಳೂ ಒಳಗಿಟ್ಟುಕೊಂಡು ನಡೆದುಕೊಳ್ಳುವಾಗ ಪಾಪ ಉಂಟಾಗುತ್ತದೆ.”

ಪ್ರಶ್ನೆ: ನಮ್ಮ ದೇವಸ್ಥಾನಗಳಲ್ಲಿ ನೆಲೆಯಾಗಿದ್ದ ಪವಿತ್ರತೆ ನಷ್ಟವಾಗಲು ಕಾರಣವೇನು ?

“ಮಕ್ಕಳೇ, ದೇವಸ್ಥಾನಗಳಲ್ಲಿ ಉತ್ಸವದ ಹೆಸರು ಹೇಳಿ ಹಣ ವಸೂಲು ಮಾಡಿ, ಮಟ್ಟತಗ್ಗಿದ ಕಾರ್ಯಕ್ರಮವಲ್ಲವೇ ನಡೆಸುವುದು ? ಇದು ಕ್ಷೇತ್ರದ ವಾತಾವರಣವನ್ನು ಮಲಿನಗೊಳಿಸುವುದು. ಜನರಲ್ಲಿ ಭಕ್ತಿ, ಒಳ್ಳೆಯ ವಿಚಾರಗಳನ್ನು ಬೆಳೆಸುವ ಬದಲು, ಈ ತರವಾದ ಕಾರ್ಯಕ್ರಮಗಳು, ಕೊಳಕು ವಿಚಾರಗಳನ್ನು, ಭಾವೋದ್ರೇಕಗಳನ್ನು ಉಂಟು ಮಾಡುತ್ತವೆ. ಈಶ್ವರನ ಹೆಸರಿನಲ್ಲಿ ಏನೆಲ್ಲ ತೋರಿಸುತ್ತಾರೆ. ಉತ್ಸವಕ್ಕೆಂದು ಹಣ ವಸೂಲು ಮಾಡಿ, ಹೆಂಡ ಕುಡಿದು ಹೊಡೆದಾಟ ಬಡಿದಾಟ ಮಾಡುತ್ತಾರೆ. ದೇವಳದ ಪರಿಸರದಲ್ಲಿ ಲೌಕಿಕ ವಾಸನೆಗಳನ್ನು ಹೊಡೆದೆಬ್ಬಿಸುವ ನಾಟಕ, ಹರಿಕಥೆ, ಡ್ಯಾನ್ಸು ಮುಂತಾದುವೆಲ್ಲ ಪ್ರದರ್ಶಿಸುತ್ತಾರೆ. ಅದೆಲ್ಲವನ್ನು ನೋಡುವವರ ಮನಸ್ಸಿನಲ್ಲಿ ಕೊಳಕು ಭಾವನೆಗಳು ಹುಟ್ಟುತ್ತವೆ. ಸದ್ಚಿಂತನೆಗಳನ್ನು ಜಾಗೃತಗೊಳಿಸಬೇಕಾದ ಎಳೆವಯಸ್ಸಿನಲ್ಲಿ, ಹೀಗಿರುವ ಕಾರ್ಯಕ್ರಮಗಳು ಅವರನ್ನು ದಾರಿ ತಪ್ಪಲು ಪ್ರೇರೇಪಿಸುತ್ತದೆ. ಈ ವಿಚಾರ ತರಂಗಗಳು ದೇವಸ್ಥಾನದ ವಾತಾವರಣವನ್ನು ಕಲುಷಿತಗೊಳಿಸುತ್ತವೆ.

ಮಕ್ಕಳೇ, ನಾವೇ ನಮ್ಮನ್ನು ನಾಶ ಮಾಡುತ್ತಿದ್ದೇವೆ. ಮೊದಲು ನಾವು ಒಳ್ಳೆಯವರಾಗಬೇಕು. ದೇವಸ್ಥಾನದ ಶುದ್ಧತೆಯನ್ನು ಕಾಯ್ದುಕೊಳ್ಳಲು ನಾವು ಜಾಗ್ರತೆ ವಹಿಸಬೇಕು. ದೇವಸ್ಥಾನಕ್ಕೆ ಬಂದಿರುವವರಲ್ಲಿ ಭಕ್ತಿ ಮತ್ತು ವಿಶ್ವಾಸ ಬೆಳೆಸಲು ಅನುಕೂಲವಾಗುವ – ದೈವಿಕವಾದ – ಕಲೆಗಳನ್ನು ಮಾತ್ರವೇ ಅಲ್ಲಿ ಪ್ರದರ್ಶಿಸಬೇಕು. ಪೂಜಾದಿಗಳನ್ನು ತಪ್ಪದೆ ನಡೆಸಬೇಕು. ಕ್ಷೇತ್ರ ಪರಿಸರವನ್ನು ಅಶುದ್ಧ ಮಾಡಿಟ್ಟು, ದೇವತೆಗಳನ್ನು ದೂರಿ ಪ್ರಯೋಜನವಿಲ್ಲ. ಹಿಂದೆಲ್ಲ ಕ್ಷೇತ್ರಗಳಲ್ಲಿ ಪುರಾಣ ಪಾರಾಯಣ, ಧ್ಯಾನ, ಯೋಗಾಭ್ಯಾಸ, ಮುಂತಾದವುಗಳ ಪರಿಪಾಠವಿತ್ತು. ಅಂದಿನ ಜನರಲ್ಲಿ ಭಕ್ತಿ, ವಿಶ್ವಾಸಗಳಿದ್ದವು. ಅಂದು ಉತ್ಸವದ ಕಾರ್ಯಕ್ರಮವಾಗಿ ಪ್ರಸ್ತುತ ಪಡಿಸುತ್ತಿದ್ದದ್ದು ದೇವರ ಕಥೆಗಳಾಗಿತ್ತು.

ಮಕ್ಕಳೇ, ಉತ್ಸವಕ್ಕೆಂದು ಹೇಳಿ ಜನಗಳಿದ ವಸೂಲು ಮಾಡಿದ ಈ ಹಣದಿಂದ ನಮಗೆ ಎಷ್ಟೆಲ್ಲಾ ಒಳ್ಳೆ ಕೆಲಸಗಳನ್ನು ಮಾಡಬಹುದು. ನಮ್ಮ ಹಳ್ಳಿಯಲ್ಲಿ ಮನೆಯಿಲ್ಲದೆ ಕಷ್ಟಪಡುತ್ತಿರುವ ಎಷ್ಟೋ ಜನರಿದ್ದಾರೆ. ಅವರಿಗೆ ಮನೆ ಕಟ್ಟಿಸಿ ಕೊಡಬಹುದು. ಅನ್ನ, ವಸ್ತ್ರ ಖರೀದಿಸಿ, ದೀನರಿಗೆ ದಾನವಾಗಿ ಕೊಡಬಹುದು. ಮದುವೆ ಮಾಡಿಸಲು ಸಾಧ್ಯವಾಗದಿರುವ ಮನೆಯವರಿಗೆ ಸಹಾಯ ನೀಡಬಹುದು. ಧರ್ಮಗ್ರಂಥಗಳನ್ನು ಅಚ್ಚು ಹಾಕಿಸಿ ಧರ್ಮಾರ್ಥ ವಿತರಣೆ ಮಾಡಬಹುದು. ಎಳೆ ಮಕ್ಕಳಿಗೆ ಅದನ್ನು ಕಲಿಸಬಹುದು. ಅನಾಥಾಲಯಗಳನ್ನು ಕಟ್ಟಿಸಬಹುದು. ಯಾರೂ ಗತಿಯಿಲ್ಲದ ಕೂಸುಗಳನ್ನು ಒಳ್ಳೆಯ ಸಂಸ್ಕಾರ ಕೊಟ್ಟು ಅಲ್ಲಿ ಬೆಳೆಸಬಹುದು. ಭವಿಷ್ಯದಲ್ಲಿ ಅನಾಥರು ಇರುವುದಿಲ್ಲ. ನೇರವಾಗಿಯಲ್ಲ: ಇದು ಜನರ ಐಕ್ಯತೆಗೂ ನೆರವಾಗುವುದು.

ಮಕ್ಕಳೇ, ಕ್ರಿಶ್ಚಿಯನ್ನರನ್ನೂ, ಮುಸಲ್ಮಾನರನ್ನೂ, ಇನ್ನುಳಿದವರನ್ನೂ ನೋಡಿ ಕಲಿಯಿರಿ. ಅವರು ಎಷ್ಟೆಲ್ಲ ಒಳ್ಳೇ ಕೆಲಸಗಳನ್ನು ಮಾಡುತ್ತಿದ್ದಾರೆ ! ಅನಾಥಾಲಯಗಳನ್ನೂ ಶಾಲೆಗಳನ್ನೂ ಕಟ್ಟಿಸಿ, ಅನಾಥಾಲಯದ ಮಕ್ಕಳಿಗೆ ಓದಿಸುತ್ತಾರೆ. ಅವರಿಗೆ ಬೇಕಾದ್ದನ್ನು ಮಾಡಿ ಕೊಡುತ್ತಾರೆ. ಅವರು ಕೂಸುಗಳಿಗೆ ಧರ್ಮಗ್ರಂಥಗಳನ್ನು ಕಲಿಸುತ್ತಾರೆ. ಮಕ್ಕಳೇ, ಎಲ್ಲಾದರೂ ಚರ್ಚು ಅಥವಾ ಮಸೀದಿ ಒಡೆದು ಕುಸಿದು ಬಿದ್ದಿರುವುದನ್ನು ನೀವು ಕಂಡಿದ್ದೀರಾ ? ಇಲ್ಲ. ಆದರೆ ಹಿಂದುಗಳ ಕ್ಷೇತ್ರಗಳನ್ನು ನೋಡಿ. ನೋಡಿಕೊಳ್ಳಲೂ, ಕಾಣಲೂ ಯಾರೂ ಇಲ್ಲದ ಅನೇಕ ಕ್ಷೇತ್ರಗಳು ಬಿದ್ದುಕೊಂಡಿವೆ. ದೊಡ್ಡ ದೇವಸ್ಥಾನಗಳನ್ನು ದೇವಸ್ವಂ ಬೋರ್ಡ್* ಆಧೀನಕ್ಕೆ ತೆಗೆದುಕೊಳ್ಳುತ್ತದೆ. foot note: (ಕೇರಳದಲ್ಲಿ ಹೆಚ್ಚಿನ ದೇವಸ್ಥಾನಗಳು ಹಾಗೂ ಹೆಚ್ಚು ದೊಡ್ಡ ದೇವಸ್ಥಾನಗಳು ಕೇರಳ ಸರಕಾರದ ವಶದಲ್ಲಿದೆ ಹಾಗೂ ಅವನ್ನು ಮಾತ್ರ ಸರಕಾರದ ’ದೇವಸ್ವಂ ಬೋರ್ಡ್’ ನಡೆಸುತ್ತದೆ.) ಅವುಗಳಿಂದ ವರಮಾನ ಬರುತ್ತದಲ್ಲವೇ ? ಸಣ್ಣ ದೇವಸ್ಥಾನಗಳತ್ತ ಅವರು ತಿರುಗಿ ಸಹ ನೋಡುವುದಿಲ್ಲ.

ಮಕ್ಕಳೇ, ದೇವಸ್ಥಾನಗಳ ಪುನರುದ್ಧಾರಕ್ಕೆ ಹಾಗೂ ಅಲ್ಲಿಯ ಉತ್ಸವದಲ್ಲಿ ದೈವಿಕ ಕಲೆಗಳನ್ನು ಪ್ರಸ್ತುತ ಪಡಿಸುವುದರ ಕುರಿತು ವಿಶೇಷ ಗಮನ ಕೊಡಬೇಕು. ಐಕ್ಯತೆಯಿಂದ ನಾವಾಗಿಯೇ ಕ್ಷೇತ್ರಗಳನ್ನು ಸಮರ್ಪಕವಾಗಿ ಸಂರಕ್ಷಿಸಬೇಕು. ಅದರ ಪವಿತ್ರತೆಯನ್ನು ಕಾಪಾಡಬೇಕು. ಇಲ್ಲದಿದ್ದರೆ ನಮ್ಮ ಸಂಸ್ಕಾರದ ಅಧಃಪತನವಾದೀತು.