ಪ್ರಶ್ನೆ: ಜನಗಳ ಸೇವೆ ಮಾಡಲು ತಪಸ್ಸಿನ ಅವಶ್ಯಕತೆಯೇನು ?

ಮಕ್ಕಳೇ, ಕಲಿತವನಿಗೆ ಮಾತ್ರವೇ ಇನ್ನುಳಿದವರಿಗೆ ಕಲಿಸಲು ಸಾಧ್ಯ. ಇಂದು ನಮ್ಮ ರಾಗಾದಿ ವೈರಿಗಳು ಯಾವುವೂ ಬಿಟ್ಟು ಹೋಗಿಲ್ಲ. ಯಾರಾದರೂ ದ್ವೇಷಿಸಿದರೆ, ನಾವು ಕಲಿತಿರುವುದು ಅವರನ್ನು ಇಮ್ಮಡಿ ದ್ವೇಷಿಸಲಿಕ್ಕೆ. ಇನ್ನಿತರರ ಒಂದು ಮಾತಿನ ಮೇಲಿದೆ ಇಂದು ನಮ್ಮ ಜೀವನ. ನಮ್ಮ ಬಗ್ಗೆ ಏನಾದರೂ ಹೇಳಿದರು ಎಂದು ಕೇಳಿದರೆ ಸಾಕು, ಒಂದೇ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ಇಲ್ಲವೇ ಹೇಳಿದವನನ್ನು ತಿವಿದು ಇರಿಯುತ್ತೇವೆ. ಬೇರೆಯವರ ಬಾಯಿಯ ಎರಡಕ್ಷರಗಳನ್ನು ಹಿಡಿದು ಕೊಂಡು ನಾವಿಂದು ನೇತಾಡಿಕೊಂಡಿರುವುದು. ಆ ದುರ್ಬಲತೆಯನ್ನು ಈ ತಪಸ್ಸಿನಿಂದ ಮಾತ್ರ ಬದಲಾಯಿಸಲು ಸಾಧ್ಯ. ನಾನು ಶರೀರವಲ್ಲ, ಮನಸ್ಸಲ್ಲ, ಬುದ್ಧಿಯಲ್ಲ ಆತ್ಮನೆಂದು ಕಾಣುವಾಗ, ಯಾರೂ ನನ್ನಿಂದ ಬೇರೆಯಲ್ಲವೆಂದು ಸ್ವಯಂ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಸ್ವಯಂ ಕ್ಷಮೆಯುಳ್ಳವರಾಗುತ್ತೇವೆ. ನಾವು ಶ್ರದ್ಧಾಳುವೂ, ಕ್ಷಮೆಯುಳ್ಳವರೂ ಆದರೆ ಮಾತ್ರವೇ, ದೇವರ ಗುಣಗಳು ನಮ್ಮಲ್ಲಿ ಮಿನುಗಿ ಹೊಳೆಯತೊಡಗುತ್ತವೆ.

ಶತ್ರುವಿನ ಪ್ರತಿಯಾಗಿ ಕರುಣೆ ಸುರಿಸಲು ಮಹಾತ್ಮರ ಸಾಮರ್ಥ್ಯ ಅವರ ವಿಶಾಲ ಹೃದಯದಿಂದ ಬಂದಿರುತ್ತದೆ. ಅದು ನಮಗೆ ಬಂದಿಲ್ಲ. ನಮಗೆ ಸರಿ ಹೋಗದ ಒಂದು ಮಾತು ಕೇಳಿದರೆ ಸಾಕು, ಕೂಡಲೆ ನಾವು ಹೊಡೆಯುವುದಕ್ಕೆ ಏಳುತ್ತೇವೆ. ರಾತ್ರಿಯಲ್ಲಿ ಜೀರುಂಡೆ ಶಬ್ದ ಮಾಡುತ್ತದೆ. ಅದರಿಂದ ನಾವು ಮಲಗದೆ ಇರುತ್ತೇವೆಯೆ ? ಅದರ ಸ್ವಭಾವ ಹಾಗೆಯೆ ಎಂದು ಗೊತ್ತು. ಹೇಳುವವನ ಸಂಸ್ಕಾರಹೀನತೆಯೂ ತಿಳಿಗೇಡಿತನವೂ ಕಾಣುವಾಗ ನಮಗೆ ಕೋಪ ಬರುವುದಿಲ್ಲ. ಸಣ್ಣ ಮಗು ಸಿಟ್ಟಾದರೆ ನಾವು ಹೋಗಿ ಹೊಡೆಯುವುದಿಲ್ಲ. ಇದೇ ರೀತಿ ನಮ್ಮನ್ನು ದ್ವೇಷಿಸುವವರನ್ನು ನೋಡಲು ಸಾಧ್ಯ. ತಪಸ್ಸಿನಿಂದ ’ಇವರದ್ದು ಮಕ್ಕಳ ಮನಸ್ಸು; ವಿವೇಚನೆ ಬಂದಿಲ್ಲ’ ಎಂದು ಅರ್ಥ ಮಾಡಿಕೊಂಡಾಗ ನಮ್ಮಲ್ಲಿ ತಾನಾಗಿಯೇ ತಾಳ್ಮೆ ಹುಟ್ಟಿಕೊಳ್ಳುತ್ತದೆ. ಆದರೆ ನಾವಿಂದು ದುರ್ಬಲರು. ಅದನ್ನು ಮಾರ್ಪಡಿಸಲು ತಪಸ್ಸು ಬೇಕು. ಇಂದು ನಾವೊಂದು ಸೊನ್ನೆ ವ್ಯಾಟ್ಟಿನ ಬಲ್ಬು. ನಮ್ಮ ದಾರಿಯನ್ನೂ ಬೆಳಗುವ ಪ್ರಕಾಶವಿಲ್ಲ ಅದಕ್ಕೆ. ತಪಸ್ಸಿನಿಂದ ಅದನ್ನು ಹತ್ತು ಸಾವಿರ ವ್ಯಾಟ್ಟಿನ ಬಲ್ಬ್ ಆಗಿ ಮಾರ್ಪಡಿಸಬಹುದು. ನಮಗೂ ಸಹ ನಡೆಯಲಿಕ್ಕೆ ಸವಾಲಾಗಿರುವ ಮಂದ ಬೆಳಕನ್ನು, ತಪಸ್ಸಿನಿಂದ ಲಕ್ಷಗಟ್ಟಲೆ ಜನಗಳಿಗೆ ಬೆಳಕು ನೀಡುವ ಮಾರ್ಗದರ್ಶಿಯಾಗಿಸಲು ಸಾಧ್ಯವಿದೆ. ಇದು ತಪಸ್ಸಿನ ಪ್ರಯೋಜನ.”

ಪ್ರಶ್ನೆ: ಸಂಪತ್ತು ಗಳಿಸುವುದು ಆಧ್ಯಾತ್ಮಿಕತೆಗೆ ವಿರೋಧವೇ ?

“ಮಕ್ಕಳೇ, ಎಷ್ಟು ಸ್ವತ್ತಿದ್ದರೂ, ಅದರ ಸ್ಥಾನವನ್ನೂ ಪ್ರಯೋಜನವನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳದಿರುವ ತನಕ ದುಃಖ ಮಾತ್ರವೇ ನಮ್ಮ ಪಾಲಿಗೆ ಇರುವುದು. ಅಗಣಿತ ಸಂಪತ್ತಿದ್ದರೂ ಅದರಿಂದ ಸಿಗುವ ಆನಂದ ತಾತ್ಕಾಲಿಕ ಮಕ್ಕಳೇ. ಶಾಶ್ವತವಾದ ಆನಂದ ಕೊಡಲು ಅದಕ್ಕೆ ಸಾಧ್ಯವಿಲ್ಲ. ಕಂಸನೂ ಹಿರಣ್ಯಕಶಿಪುವೂ ಎಲ್ಲಾ ಸಂಪತ್ತಿನ ಅಧಿಪತಿಗಳಾಗಿರಲಿಲ್ಲವೇ ? ಅವರಿಗೆ ಮನಸ್ಸಮಾಧಾನ ಇತ್ತೇ ? ಎಲ್ಲಾ ಇದ್ದ ರಾವಣನಿಗೆ ಏನು ಶಾಂತಿಯಿತ್ತು ? ಅವರೆಲ್ಲ ಸತ್ಯದ ದಾರಿ ತೊರೆದು, ಅಹಂಕಾರಿಗಳಾಗಿ ಬಾಳಿದರು. ಮಾಡಬಾರದ್ದನ್ನು ಬಹಳ ಮಾಡಿದರು. ಫಲವೋ ? ಶಾಂತಿ ಸಮಾಧಾನಗಳನ್ನು ಕಳೆದುಕೊಂಡರು. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಮಕ್ಕಳೇ, ಶಾಶ್ವತವಾದ ಆನಂದ ಕೊಡುವುದು ಸಂಪತ್ತಲ್ಲ.

ಲೌಕಿಕ ಜೀವನದಲ್ಲಿ ಅಶಾಶ್ವತ ಆನಂದ ಮಾತ್ರವೇ ಸಂಪತ್ತಿನಿಂದ ಲಭ್ಯ. ಹಾಗಾದರೆ ಸಂಪತ್ತಿಲ್ಲದೆ ಹೇಗೆ ಜೀವಿಸೋಣ ? ಇರುವ ಸಂಪತ್ತನ್ನು ಬಿಟ್ಟುಬಿಡಬೇಕೆ ? ಎಂದೆಲ್ಲ ಮಕ್ಕಳು ಕೇಳಬಹುದು. ಎಲ್ಲವೂ ಭಗವಂತನ ಇಚ್ಛೆ, ಮಕ್ಕಳೇ. ಯಾವುದನ್ನೂ ನಿರಾಕರಿಸಲು ಅಮ್ಮ ಹೇಳುವುದಿಲ್ಲ. ಇರುವುದರ ಸ್ಥಾನವನ್ನೂ ಪ್ರಯೋಗವನ್ನೂ ಕಂಡು ಕೊಂಡು ವರ್ತಿಸಿದರೆ ಆನಂದವೂ ಶಾಂತಿಯೂ ಸಂಪತ್ತಾಗಿ ಬದಲಾಗುತ್ತದೆ. ಭಗವಂತನಿಗಭಿಮುಖವಾದವರಿಗೆ ’ಮರಳು ಬಿದ್ದ ಅನ್ನದ’ ಹಾಗೆ ಮಕ್ಕಳೇ, ಸಂಪತ್ತು”.

ಒಬ್ಬ ಆಧ್ಯಾತ್ಮಿಕ ಜೀವಿಯು ಜಗತ್ತಿನ ಪೂರ್ಣ ಭಾರಕ್ಕೆ ಹೆಗಲು ಕೊಡಬೇಕಾದವನು. ಅವನು ಎಂದೂ ದುರ್ಬಲನಾಗಬಾರದು; ಚುರುಕಿನ ಸಿಂಹದ ಮರಿಯಾಗಿರಬೇಕು.
____
ಗುರುವಿನಲ್ಲಿ ಪೂರ್ತಿ ವಿಶ್ವಾಸವಿರುವವನು ಗುರುವಿನಲ್ಲಿ ಒಂದು ಪ್ರಶ್ನೆಯನ್ನು ಸಹ ಕೇಳುವುದಿಲ್ಲ. ಗುರು ಹೇಳುವುದನ್ನೇ ಅನುಸರಿಸುವನು. ಅದುವೇ ಗುರುಸೇವೆ. ಶಿಷ್ಯನ ಶ್ರದ್ಧೆಯೊಡಗೂಡಿರುವ ಓಡಾಟ ನೋಡಿದಾಗ ತನಗರಿವಿಲ್ಲದೆಯೆ ಗುರು ಅವನಲ್ಲಿ ಕೃಪೆ ಸುರಿಸುತ್ತಾನೆ. ತಗ್ಗು ನೆಲದಲ್ಲಿ, ನೀರು ತನ್ನಷ್ಟಕ್ಕೆ ಹರಿದು ಸೇರುವ ಹಾಗೆ.
____

ಆಧ್ಯಾತ್ಮಿಕವೂ ಲೌಕಿಕವೂ ಜೊತೆಜೊತೆಯಾಗಿ ಹೋಗಲು ಸಾಧ್ಯವಿದೆ. ಆದರೆ, ಸಂಬಂಧಗಳ ಬಂಧನವಿಲ್ಲದೆ, ನಿಷ್ಕಾಮವಾಗಿ ಕೆಲಸ ಮಾಡಲು ಸಾಧ್ಯವಾಗಬೇಕು. ನಾನು ಮಾಡುವುದು; ನನಗದರ ಫಲ ಬೇಕು, ಎಂದು ಭಾವಿಸುವಾಗ ದುಃಖಗಳು ಉಂಟಾಗುತ್ತವೆ. ನನ್ನ ಹೆಂಡತಿ, ನನ್ನ ಮಗುವೆಂದು ಯಾವತ್ತೂ ಭಾವಿಸದಿರಿ. ಎಲ್ಲವೂ ಈಶ್ವರನದ್ದು ಎಂದು ಭಾವಿಸುವಾಗ ಮತ್ತೆ ಬಂಧನವಿಲ್ಲ. ಸಾಯುವಾಗ ಹೆಂಡತಿ, ಮಕ್ಕಳು ಯಾರೂ ಒಟ್ಟಿಗೆ ಬರುವುದಿಲ್ಲ. ವಾಸ್ತವಿಕ ಸತ್ಯ ದೇವರು ಮಾತ್ರವೆ.
____
ಬೀಜವನ್ನು ನಾವು ಬಯಲಲ್ಲಿ ನೇರವಾಗಿ ಬಿತ್ತುವುದಿಲ್ಲ. ವಿಶೇಷವಾಗಿ ಸಿದ್ಧ ಪಡಿಸಿದ ಸ್ಥಳದಲ್ಲಿ ಬೀಜ ಬಿತ್ತಿ, ಸಸಿ ಮಾಡಿ, ನಂತರ ಕಿತ್ತು ಬಯಲಲ್ಲಿ (ನೇಜಿ) ನೆಡುತ್ತಾರೆ. ಅದೇ ರೀತಿ, ಭಕ್ತಿಯಲ್ಲಿ ನೆಟ್ಟು ಮೊಳಕೆಯೊಡೆದ ಸಾಧನೆಯ ಬೀಜಗಳನ್ನು, ಕಿತ್ತು ನಂತರ ಜ್ಞಾನದ ಬಯಲಲ್ಲಿ ನೆಡಿರಿ. ಆಗ ಸಮೃದ್ಧಿಯಾದ ಫಸಲು ಸಿಗುತ್ತದೆ.
____
ಮಕ್ಕಳೇ, ತೆಂಗಿನ ಸಿಪ್ಪೆಯ, ಗೆರಟೆಯ, ಹಾಗೂ ಹಿಂಡಿಯ ಹಿಂದೆ ಹೋಗದೆ, ನೀವು ತೆಂಗಿನಕಾಯಿಯನ್ನು ಅವಲಂಬಿಸಿರಿ. ಅದರಿಂದ ಎಲ್ಲವೂ ಸಿಗುವುದು. ಇದೇ ತರ ವಿವಿಧತ್ವದ ಹಿಂದೆ ಹೋಗದೆ ಏಕತ್ವವನ್ನು ಆಶ್ರಯಿಸಿದರೆ ಬೇಕಾದದ್ದೆಲ್ಲಾ ಸಿಗುವುದು – ನಶಿಸುವುದೂ, ನಾಶವಾಗದೆ ಇರುವುದೂ.
____
ಮಕ್ಕಳೇ, ಸತ್ಯ ಒಂದೇ, ಅದೇ ದೇವರು.
____
ನಮ್ಮ ಹುಟ್ಟು ದೇವರ ಸಾಕ್ಷಾತ್ಕಾರದ ಸಲುವಾಗಿದೆ; ಅದು ಬಿಟ್ಟು ಪ್ರಾಣಿಯಂತೆ ಜೀವಿಸಲಿಕ್ಕಲ್ಲ.
____
ಮಕ್ಕಳೇ, ಎಲ್ಲವೂ ಬ್ರಹ್ಮನೆಂದು ಹೇಳಿದರೆ, ಅದೇ ಗುಂಪಿನಲ್ಲಿ ಬರುವುದು ನಾಯಿ, ಬೆಕ್ಕು ಇತ್ಯಾದಿ. ಅವುಗಳಿಗೆ ಏನಿದೆ ವಿವೇಚನೆ ? ಆ ರೀತಿಯಾಗಿ ರೀತಿ ನಾವು ಬದುಕಬೇಕೆ ? ಸರಿಯಾದ ವಿವೇಚನೆ ಇಲ್ಲದಿದ್ದರೆ, ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಏನು ವ್ಯತ್ಯಾಸ ? ಆದಕಾರಣ ವಿವೇಕ ಬೆಳೆಸಿಕೊಳ್ಳಿರಿ. ಸಾಧನೆ ಮಾಡಿದಾಗ ನಾವು ಯಾರೆಂಬುದು ಅರಿವಾಗುತ್ತದೆ.
____
ನಾವೆಲ್ಲ “ನಾನು, ನಾನು” ಎಂಬ ಭಾವದಲ್ಲಿ ಬದುಕುತ್ತಿದ್ದೇವೆ. ಬಾವಿ ಹೇಳುತ್ತದೆ “ನನ್ನ ನೀರು ಸೇದಿ ಎಲ್ಲರೂ ಕುಡಿಯುತ್ತಾರೆ, ದೇವರಿಗೆ ಅರ್ಪಿಸುತ್ತಾರೆ. ನಾನು ಇಲ್ಲದಿದ್ದರೆ ಇವರಿಗೆ ಜೀವಿಸಲಿಕ್ಕೆ ಸಾಧ್ಯವಿದೆಯೇ” ಎಂದು. ಏನಿದು ಈ ’ನಾನು’. ದೇವರಿಂದ ಒಸರಾಗಿ ಹರಿದು ಬರದಿರುತ್ತಿದ್ದರೆ, ಬಾವಿಗೆ ಜಂಬ ಕೊಚ್ಚಿಕೊಳ್ಳಲಿಕ್ಕೆ
ಸಾಧ್ಯವಿತ್ತೇ ?
____
ಶಬರಿಮಲೆ ಮುಟ್ಟಿದ ಒಬ್ಬ ವ್ಯಕ್ತಿ, ಅಲ್ಲಿ ಒಂದು ಕಡೆ ಬಟ್ಟೆ ಹಾಸುತ್ತಾನೆ. ಅವನು ಹೋದ ನಂತರ ಮುಂದಿನ ವ್ಯಕ್ತಿ ಅದೇ ಸ್ಥಳದಲ್ಲಿ ಪುನಃ ಬಟ್ಟೆ ಹಾಸುತ್ತಾನೆ. ಅವನು ಹೋದಾಗ, ಅವನ ನಂತರದ ವ್ಯಕ್ತಿಯೂ ಹಾಗೇ ಮಾಡುತ್ತಾನೆ. ಈ ರೀತಿಯಾಗಿದೆ ನಮ್ಮ ಜೀವನ. ಆದರೆ, ನಾವಿದು ತಿಳಿದುಕೊಳ್ಳುತಿಲ್ಲ.
____
ಭಗವಂತನ ಶಕ್ತಿಯಿಲ್ಲದೆ ಹೋದರೆ ನಮ್ಮಿಂದ ಏನು ಪ್ರಯೋಜನ ? ’ನನ್ನ ಕಣ್ಣಿನಿಂದ ನೋಡಿದೆ’ ಎಂದು ನಾವು ಹೇಳುತ್ತೇವೆ. ನಮ್ಮ ಎದುರಿಗೆ ಒಂದು ಗ್ಲಾಸು ಹಾಲು ಇಡುತ್ತಾರೆ. ನಾವು ಯಾರೊಂದಿಗಾದರೂ ಕೆಲಸದ ಬಗ್ಗೆ ಮಾತಾಡುವಾಗ, ಅದನ್ನು ಇಟ್ಟರೆ, ನಮಗೆ ಅದು ಕಾಣಿಸುವುದಿಲ್ಲ. ಕಣ್ಣು ತೆರೆದಿದ್ದರೂ, ಕಾಣಿಸುವುದಿಲ್ಲ. ಕಣ್ಣಿನ ಹಿಂದೆ ಮನಸ್ಸು ಕೆಲಸ ಮಾಡಬೇಕು. ಹಾಗಿದ್ದರೆ ಮಾತ್ರ ಕಾಣಿಸಲು ಸಾಧ್ಯ. ಮನಸ್ಸು ಕೆಲಸ ಮಾಡಬೇಕಾದರೆ, ಭಗವಂತನ ಶಕ್ತಿಯು ಅವಶ್ಯ.
____
ಹಳೆಯಕಾಲದಲ್ಲಿ ಎಲ್ಲರೂ ನಿತ್ಯಾನಿತ್ಯ ಏನೆಂದು ಅರಿತು ನಡೆದರು. ಅದರ ನಂತರವೇ, ಗೃಹಸ್ಥ ಜೀವನ ಸಾಗಿಸುತ್ತಿದ್ದರು. ಹಾಗಾಗಿ ಅವರು ಆನಂದದಿಂದ ಜೀವಿಸಿದರು. ಎಂಥ ಪ್ರತಿಕೂಲ ಸನ್ನಿವೇಶದಲ್ಲೂ ಅವರ ಮನಸ್ಸಿನಲ್ಲಿ ಯಾವುದೇ ತರದ ಅಲುಗಾಟ ಇರುತ್ತಿರಲಿಲ್ಲ.
____
ಇಂದು ನಾವು ಬಾಹ್ಯದಲ್ಲಿ ಏರ್‌ಕಂಡೀಷನ್ ಕೋಣೆಗಳನ್ನು ಕಟ್ಟುತ್ತಿದ್ದೇವೆ. ಕಟ್ಟಿ ಮುಗಿಯುವ ಮೊದಲೇ ನಾವು ಸತ್ತು ಹೋಗಬಹುದು. ಉಳಿದವರಿಗೆ ಆಸ್ತಿಗಾಗಿ ಕಲಹ ಮಾಡಲಿಕ್ಕೆ ಅನುಕೂಲವಾಯಿತು. ಆದಕಾರಣ ನಮ್ಮ ಮನಸ್ಸನ್ನು ಏರ್‌ಕಂಡೀಷನ್ ಮಾಡ ಬೇಕಾಗಿದೆ. ಆಗ ಯಾವ ಸೆಖೆಯಲ್ಲೂ, ಚಳಿಯಲ್ಲೂ ಒಂದೆ ರೀತಿಯಾಗಿ ಬದುಕಲು ಸಾಧ್ಯವಾಗುತ್ತದೆ.
____
ನಾಯಿ ಎಲುವನ್ನು ಜಗಿಯುತ್ತದೆ. ಅದು ಯೋಚಿಸುತ್ತದೆ, ಎಲುವಿನಿಂದ ಮಾಂಸ ಮತ್ತು ರಕ್ತ ಸಿಗುತ್ತಿದೆಯೆಂದು. ತಾನು ಚಪ್ಪರಿಸುತ್ತಿರುವುದು, ತನ್ನ ವಸಡು ಗೀರಿ ಬಂದ ರಕ್ತ ರಕ್ತವೆಂದು ಅದಕ್ಕೆ ತಿಳಿದಿಲ್ಲ. ಈ ರೀತಿಯಾಗಿ ನೀವು ಶಕ್ತಿ ಗುಂದಬೇಡಿ. ಏರ್‌ಕಂಡೀಷನ್ ಮನೆ ಕಟ್ಟಿ ಆಯಿತು, ಅದರಲ್ಲಿ ಮಲಗಿಕೊಂಡೂ ಗೊಣಗಾಟ: ಮನಸ್ಸಿಗೆ ನೆಮ್ಮದಿಯಿಲ್ಲ, ನಿದ್ದೆ ಬರಲೊಲ್ಲದು, ಎಂದು. ಕೊನೆಗೆ, ಅದರಲ್ಲಿದ್ದುಕೊಂಡು ವಿಷ ಕುಡಿದು ಸಾಯುತ್ತಾರೆ. ಬಾಹ್ಯವಸ್ತುಗಳು ಆನಂದ ಕೊಡುವುದಾಗಿದ್ದರೆ, ಹೀಗೆ ಮಾಡಬೇಕಾದ ಅವಶ್ಯಕತೆಯಿತ್ತೆ ? ಎಲ್ಲಾ ಮನಸ್ಸನ್ನು ಅವಲಂಬಿಸಿ ಕೊಂಡಿದೆ.
____
ಮಂದಬುದ್ಧಿಯವರು ಕೂಡ ಗುರಿಯಿಲ್ಲದೆ ಎಲ್ಲೂ ಹೊರಡುವುದಿಲ್ಲ. ಪ್ರಾಪಂಚಿಕ ಗುರಿ ಎಲ್ಲರಿಗೂ ಇರುತ್ತದೆ. ಆದರೆ ಅವು ಯಾವುವೂ ಪೂರ್ಣವಲ್ಲ. ಆದಕಾರಣ ಮುದ್ದಿನ ಮಕ್ಕಳೇ, ದೇವರನ್ನೆ ಗುರಿಯಾಗಿಸಿಕೊಂಡು ಮುಂದಕ್ಕೆ ಸಾಗಿರಿ.
____

ಮಕ್ಕಳ ಚಿತ್ತವೃತ್ತಿಗಳು, ಕನಸುಗಳು ಎಲ್ಲವೂ ಅಮ್ಮನನ್ನು ಹಾದು ಹೋಗುವುದು. ಹಾಗಾಗಿ ಮಕ್ಕಳಿಗೆ ಅಮ್ಮನಿಂದ ಏನನ್ನೂ ಬಚ್ಚಿಡಲಾಗದು.
___

ಭಗವಾನ್ ಶ್ರೀ ಕೃಷ್ಣನು ಶುದ್ಧ ಬೋಧನು. ನೀವು ಬಯಕೆಗಳನ್ನು ಪೂರ್ಣವಾಗಿ ತ್ಯಜಿಸಿದಲ್ಲಿ ನಿಮ್ಮ ಮನದಲ್ಲಿ ಕೃಷ್ಣನ ನಿಜ ರೂಪ ಸ್ಪಷ್ಟವಾಗುವುದು.
___
ಮರಗಳು, ಬಳ್ಳಿಗಳು, ವಾತಾವರಣವೆಲ್ಲವೂ ರಾತ್ರಿ ನಿಶ್ಚಲವಾಗುತ್ತದೆ. ಪ್ರಾಣಿಗಳಲ್ಲದೆ, ಲೌಕಿಕರಾಗಿ ಜೀವಿಸುವವರವರನ್ನೂ, ನಿದ್ದೆ ಜಯಿಸುತ್ತದೆ. ಈ ಕಾರಣದಿಂದ, ವಾತಾವರಣದಲ್ಲಿ ಲೌಕಿಕ ವಿಚಾರಗಳ ತರಂಗಗಳು ಕಮ್ಮಿಯಾಗುತ್ತದೆ. ರಾತ್ರಿಯ ಅಂತಿಮ ಜಾವದಲ್ಲಿ ಹೂವುಗಳು ಅರಳುವುದು. ವಾತಾವರಣದಲ್ಲಿ ಆಗ ಒಂದು ವಿಶೇಷ ಜಾಗೃತಿ ಇರುತ್ತದೆ. ಈ ಸಮಯದಲ್ಲಿ ಧ್ಯಾನ ಮಾಡಿದರೆ ಕೂಡಲೆ ಮನಸ್ಸು ಏಕಾಗ್ರವಾಗುವುದು. ಬೇಕಷ್ಟು ಸಮಯ ತಪಸ್ಸಿನಲ್ಲಿ ಕೂತಿರಲೂ ಸಾಧ್ಯವಾಗುತ್ತದೆ. ಆದಕಾರಣ ತಪಸ್ವಿಗಳು ರಾತ್ರಿಗಾಗಿ ಕಾದಿರುತ್ತಾರೆ.
___

ಅಮ್ಮ ಸ್ವಾಭಾವಿಕವಾಗಿಯೆ ನಿರ್ಮಲೆ. ಮಕ್ಕಳ ವಿಚಾರಗಳಿಗೆ, ಕೃತಿಗಳಿಗೆ ಅನುಗುಣವಾಗಿ ಅಮ್ಮನ ಸ್ವಭಾವ ಬದಲಾಗುತ್ತದೆ. ಘರ್ಜಿಸಿ ಹಿರಣ್ಯಕಶಿಪುವಿನ ಎದುರಿಗೆ ಜಿಗಿದ ಘೋರನರಸಿಂಹನು, ಪ್ರಹ್ಲಾದನ ಬಳಿ ಸಾರಿದಾಗ ಶಾಂತನಾದ. ಹಿರಣ್ಯಕಶಿಪುವಿನ ಹಾಗೂ ಪ್ರಹ್ಲಾದನ ಪ್ರವೃತ್ತಿಗಳಿಗನುಗುಣವಾಗಿ ಗುಣಾತೀತನೂ, ನಿರ್ಮಲನೂ ಆದ ಭಗವಂತನು ಎರಡು ವಿರುದ್ಧ ಭಾವಗಳನ್ನು ತಾಳಿದನು. ಹಾಗೆಯೇ, ಮಕ್ಕಳ ಭಾವಗಳಿಗನುಗುಣವಾಗಿ ಅಮ್ಮನ ಭಾವವು ಬದಲಾಗುತ್ತದೆ. ’ಸ್ನೇಹಮಯಿ’ ಎಂದು ಹೊಗಳಲ್ಪಟ್ಟ ಅಮ್ಮ ಕೆಲವೊಮ್ಮೆ ತಟ್ಟನೆ ’ಕ್ರೂರಿ’ಯಾಗಿ ಬಿಡುತ್ತಾಳೆ. ಅದು ಮಕ್ಕಳ ವರ್ತನೆಯಲ್ಲಿರುವ ತಪ್ಪುಗಳನ್ನು ಸರಿಪಡಿಸಲೆಂದು ಮಾತ್ರ. ಮಕ್ಕಳು ಸರಿಯಾಗಿ ಅನುಷ್ಠಾನ ನಡೆಸದಿದ್ದಾಗ, ಶಿಸ್ತು ಸರಿಯಾಗಿ ಪಾಲಿಸದಿದ್ದಾಗ, ವಿನಯ ಭಾವ ಬಿಟ್ಟು ವರ್ತಿಸುವಾಗ, ಸಮಯ ಸುಮ್ಮನೆ ಪೋಲು ಮಾಡುತ್ತಿರುವಾಗ ಸ್ನೇಹಮಯಿಯಾದ ಅಮ್ಮ ಥಟ್ಟನೆ ಕ್ರೂರಿಯಾಗಿ ಬಿಡುತ್ತಾಳೆ. ಅಮ್ಮನ ಎಲ್ಲ ನಡತೆಯೂ ಮಕ್ಕಳ ಏಳಿಗೆಗಾಗಿಯೇ ಇರುತ್ತದೆ.
___
ದೇವರು ಸರ್ವವ್ಯಾಪಿಯಾಗಿದ್ದರೂ, ಸಾಧನೆಯಿಂದ ಮಾತ್ರವೇ ದೇವರನ್ನು ಅರಿಯಲೂ, ಆನಂದಿಸಲೂ ಸಾಧ್ಯವಾಗುತ್ತದೆ.
___
ಒಬ್ಬ ಆಧ್ಯಾತ್ಮಿಕ ಜೀವಿಯು ಜಗತ್ತಿನ ಪೂರ್ಣ ಭಾರಕ್ಕೆ ಹೆಗಲು ಕೊಡಬೇಕಾದವನು. ಅವನು ಎಂದೂ ದುರ್ಬಲನಾಗಬಾರದು; ಚುರುಕಿನ ಸಿಂಹದ ಮರಿಯಾಗಿರಬೇಕು.
___
ಗುರುವಿನಲ್ಲಿ ಪೂರ್ತಿ ವಿಶ್ವಾಸವಿರುವವನು ಗುರುವಿನಲ್ಲಿ ಒಂದು ಪ್ರಶ್ನೆಯನ್ನು ಸಹ ಕೇಳುವುದಿಲ್ಲ. ಗುರು ಹೇಳುವುದನ್ನೇ ಅನುಸರಿಸುವನು. ಅದುವೇ ಗುರುಸೇವೆ. ಶಿಷ್ಯನ ಶ್ರದ್ಧೆಯೊಡಗೂಡಿರುವ ಓಡಾಟ ನೋಡಿದಾಗ ತನಗರಿವಿಲ್ಲದೆಯೆ ಗುರು ಅವನಲ್ಲಿ ಕೃಪೆ ಸುರಿಸುತ್ತಾನೆ. ತಗ್ಗು ನೆಲದಲ್ಲಿ, ನೀರು ತನ್ನಷ್ಟಕ್ಕೆ ಹರಿದು ಸೇರುವ ಹಾಗೆ.
___

ಪ್ರಶ್ನೆ: ದೇವರ ಕೃಪೆಗೂ, ಮಹಾತ್ಮರ ಕೃಪೆಗೂ ಏನು ವ್ಯತ್ಯಾಸ ?

“ಆತ್ಮಕ್ಕೆ ಭೇದವಿಲ್ಲ. ಅದು ಎಲ್ಲರಲ್ಲೂ ಒಂದೇ. ಮಹಾತ್ಮರು ಆತ್ಮದ ಸ್ವರೂಪವನ್ನು ತಮ್ಮ ಅರಿವಿನ ಸ್ತರಕ್ಕೆ ತರುತ್ತಾರೆ, ಅಷ್ಟೆ. ನಾವೆಲ್ಲರೂ ಕನ್ನಡಿಗಳು. ಆದರೆ ನಮ್ಮಲ್ಲ್ಲಿ ಪಾದರಸವಿಲ್ಲ. ಮಹಾತ್ಮರ ತಪಸ್ಸಿನಿಂದ ಪಾದರಸ ಉದ್ಭವವಾಗುತ್ತದೆ. ಪಾದರಸವಿರುವ ಕನ್ನಡಿಯಲ್ಲಿ ತಾನೇ ಸ್ಪಷ್ಟವಾದ ಪ್ರತಿಬಿಂಬ ಕಾಣಿಸುವುದು ? ಒಬ್ಬ ಮಹಾತ್ಮನೆದುರಿಗೆ ಹೋದಾಗ ನಮ್ಮ ನಿಜವಾದ ಸ್ವರೂಪ ಅವರಲ್ಲಿ ಪ್ರತಿಫಲಿಸಿ ಕಾಣಲು ಸಾಧ್ಯವಾಗುತ್ತದೆ. ಅದನ್ನು ನೋಡಿ ನಮ್ಮ ಕುರೂಪವನ್ನೂ ಮಲಿನತೆಗಳನ್ನೂ ತೊರೆಯಲು ಸಾಧ್ಯವಾಗುತ್ತದೆ.

ಕರೆಂಟು ಬಲ್ಬಿನಲ್ಲಿ ಪ್ರಕಾಶಿಸುವ ಹಾಗೆ, ದೇವರು ಮಹಾತ್ಮರಲ್ಲಿ ಪ್ರತಿಫಲಿಸುತ್ತಾನೆ. ಅವನೆಂದಿಗೂ ತನ್ನಲ್ಲೇ ನೆಲೆ ನಿಂತಿರುತ್ತಾನೆ. ಮಹಾತ್ಮರು ತಮ್ಮಲ್ಲಿ ಶಕ್ತಿಯನ್ನು ಜಾಗೃತಗೊಳಿಸಿ, ಜೀವದುಂಬಿಸುತ್ತಾರೆ. ಭಗವದ್ಕೃಪೆ ಜಗತ್ತಿಗೆ ತಲಪುವುದು – ಜನಗಳಿಗೆ ಪ್ರಯೋಜನಕಾರಿಯಾಗುವುದು – ಮಹಾತ್ಮರಿಂದಾಗಿ. ಅದು ಮಹಾತ್ಮರಿಂದಲ್ಲದೆ ನಿಮಗೆ ನೇರವಾಗಿ ದೊರಕಬೇಕಾದರೆ, ಮೊದಲೇ, ನೀವು ಅದಕ್ಕೆ ಅನುಗುಣವಾಗಿ ಜೀವಿಸಿರಬೇಕು.”

ಪ್ರಶ್ನೆ: ಮಹಾತ್ಮರ ಹತ್ತಿರ ಹೋದರೆ ನಮಗೆ ಯಾವ ತರದ ಅನುಭವವಾಗುತ್ತದೆ? ಅದರಿಂದ ಏನು ಪ್ರಯೋಜನ?

“ಸಮುದ್ರ ತೀರದಲ್ಲಿ ಬಹಳ ಹೊತ್ತು ಕೂತಿದ್ದಮೇಲೆ ದೇಹವನ್ನು ನೆಕ್ಕಿ ನೋಡಿದರೆ ಉಪ್ಪೆನಿಸುವುದಿಲ್ಲವೇ ? ಊದುಬತ್ತಿ ಮಾಡುವ ಕಂಪೆನಿಗೆ ಹೋಗಿ ಹಿಂತಿರುಗಿ ಬಂದಾಗ ನಿಮ್ಮ ದೇಹವನ್ನು ಮೂಸಿ ನೋಡಿದರೆ ಆ ಪರಿಮಳ ನಿಮ್ಮಲ್ಲೂ ಇರುವುದು ಕಂಡು ಬರುತ್ತದೆ. ಆದರೆ ಅದು ನಿಮಗೆ ಯಾರೂ ಕೊಟ್ಟು ಸಿಕ್ಕಿದ್ದಲ್ಲ; ಅಲ್ಲಿ ಹೋದುದರಿಂದಾಗಿ ಸಿಕ್ಕಿದ್ದು. ಇದೇ ತರವಾಗಿರುತ್ತದೆ ಮಹಾತ್ಮರ ಬಳಿ ತಲಪಿದರೆ ಸಿಗುವ ಫಲ.

ನಮಗೆ ತಿಳಿಯದೆಯೇ, ನಮ್ಮೊಳಗೆ ಒಳ್ಳೆಯ ಸಂಸ್ಕಾರಗಳು ಹುಟ್ಟಿಕೊಳ್ಳುತ್ತವೆ. ಅವರ ಸಾಮೀಪ್ಯದಿಂದಾಗಿ ನಮ್ಮ ಕೆಟ್ಟ ಸ್ವಭಾವ ಬಿಟ್ಟು ಹೋಗುವುದು. ಉಪ್ಪುನೀರು ನದಿ ಸೇರಿ, ಶುದ್ಧ ಜಲವಾಗುವುದಿಲ್ಲವೇ. ಆ ಸಾಮೀಪ್ಯದಿಂದಲೇ ಉಪ್ಪುನೀರಿನಲ್ಲಿ ಬದಲಾವಣೆ ಆಯಿತು. ಇದೇ ರೀತಿ ಮಹಾತ್ಮರ ಸಾಮೀಪ್ಯವೇ ನಮ್ಮನ್ನು ಒಳ್ಳೆಯವರನ್ನಾಗಿ ಮಾಡುತ್ತದೆ.”

ಪ್ರಶ್ನೆ: ಅಧ್ಯಾತ್ಮ ಒಂದು ತರದ ಸ್ವಾರ್ಥವಲ್ಲವೇ ?

“ಅದು ಹಾಗಲ್ಲ ಮಕ್ಕಳೇ, ಒಂದುಕಡೆ ಇಬ್ಬರು, ಕತ್ತಿ ಮಾರುವ ಅಂಗಡಿಗೆ ಹೋಗುತ್ತಾರೆ. ಇಬ್ಬರೂ ಒಂದೊಂದು ಕತ್ತಿ ಕೊಂಡುಕೊಳ್ಳುತ್ತಾರೆ. ಒಬ್ಬನು ಆ ಕತ್ತಿಯಿಂದ ಸಿಕ್ಕ ಸಿಕ್ಕವರನ್ನೆಲ್ಲಾ ಇರಿದು ಕೊಲ್ಲಲು ತೊಡಗುತ್ತಾನೆ. ಇನ್ನೊಬ್ಬ ಡಾಕ್ಟರನಾಗಿದ್ದ. ತನ್ನ ಕತ್ತಿಯಿಂದ ರೋಗಿಗಳ ಶಸ್ತ್ರಕ್ರಿಯೆ ನಡೆಸಿ, ರೋಗ ಮುಕ್ತರನ್ನಾಗಿ ಮಾಡುತ್ತಾನೆ. ಇಬ್ಬರೂ ಕತ್ತಿ ಕೊಂಡು ಕೊಂಡದ್ದು ಸ್ವಾರ್ಥಕ್ಕಾಗಿ. ಕೊಲೆಗಾರನ ಸ್ವಾರ್ಥ ಸಮಾಜಕ್ಕೆ ಕುತ್ತಾಯಿತು. ಡಾಕ್ಟರನ ಸ್ವಾರ್ಥ ಸಮಾಜಕ್ಕೊಂದು ವರವಾಯಿತು. ಆಧ್ಯಾತ್ಮಿಕ ಜೀವಿಗಳ ಸ್ವಾರ್ಥ ಲೋಕೋಪಕಾರಕ್ಕಾಗಿರುತ್ತದೆ. ಮಕ್ಕಳು ಕೇಳಬಹುದು, ಆಧ್ಯಾತ್ಮಿಕ ಜೀವಿಗಳು ಯಾರೂ ಸುಖಿಗಳಲ್ಲವೇ ಎಂದು. ಅವರು ಯಾರಿಗೂ ತೊಂದರೆ ಬಗೆಯುವುದಿಲ್ಲ. ಎಲ್ಲರನ್ನೂ ಪ್ರೀತಿಸುತ್ತಾರೆ; ಎಲ್ಲರಿಗೂ ಸಹಾಯ ಮಾಡುತ್ತಾರೆ.

  • *[ಮಲೆಯಾಳದಲ್ಲಿ ದೇವರನ್ನು ಸೂಚಿಸಲು “ಈಶ್ವರ” ಎಂಬ ಶಬ್ದವನ್ನು ಸಾಮಾನ್ಯವಾಗಿ ಬಳಸುತ್ತಾರೆ]