“ಒಬ್ಬರ ಕೋಪ ಮತ್ತು ಅವಿವೇಕದಿಂದ ಉಂಟಾಗುವ ತೊಂದರೆಯನ್ನು, ಮತ್ತೊಬ್ಬರ ಸಹನೆ, ನಮ್ರತೆ ಮತ್ತು ಶಾಂತತೆಗಳು ಸರಿದೂಗಿಸುತ್ತವೆ.”

ಒಂದು ಕುಟುಂಬದಲ್ಲಿನ ಎಲ್ಲ ಸದಸ್ಯರು ಒಂದೇ ಸ್ವಭಾವದವರಾಗಿರಬೇಕು ಎಂಬುದಿಲ್ಲ. ಅಲ್ಲಲ್ಲಿ ಹಠಮಾರಿ, ಅವಿವೇಕಿ ಮತ್ತು ಕೋಪಿಷ್ಠನಾದ ವ್ಯಕ್ತಿಯೂ ಇರಬಹುದು. ಆದರೆ, ಅದೇ ಕುಟುಂಬದಲ್ಲಿ ಸಾತ್ವಿಕ, ಶಾಂತ ಮತ್ತು ವಿವೇಕದಿಂದ ಆಲೋಚಿಸಿ ಎಚ್ಚರಿಕೆಯಿಂದ ಕಾರ್ಯಗಳನ್ನು ಮಾಡುವ ವ್ಯಕ್ತಿಯೂ ಇರಬಹುದು.

ಈ ಇಬ್ಬರಲ್ಲಿ ಯಾರು ಆ ಕುಟುಂಬದಲ್ಲಿ ಐಕ್ಯತೆ ಮತ್ತು ಸಾಮರಸ್ಯವನ್ನು ಕಾಪಾಡುತ್ತಾರೆ? ಖಂಡಿತವಾಗಿ ಎರಡನೆಯ ವ್ಯಕ್ತಿಯೇ. ಅವರ ವಿವೇಕ, ನಮ್ರತೆ ಮತ್ತು ಸಹನೆಯೇ ಆ ಕುಟುಂಬವನ್ನು ವಿನಾಶದಿಂದ ರಕ್ಷಿಸುತ್ತದೆ. ಕೇವಲ ಕೋಪಿಷ್ಠ ಮತ್ತು ಅವಿವೇಕಿ ವ್ಯಕ್ತಿ ಮಾತ್ರ ಇದ್ದಿದ್ದರೆ, ಆ ಕುಟುಂಬವೇ ನಾಶವಾಗುತ್ತಿತ್ತು.

ಅದೇ ರೀತಿ, ಮಹಾತ್ಮರು ಮತ್ತು ಗುರುಗಳು ಈ ಜಗತ್ತಿನ ಕುಟುಂಬದ ಐಕ್ಯತೆ ಮತ್ತು ಸಾಮರಸ್ಯವನ್ನು ಕಾಪಾಡುತ್ತಾರೆ. ಅವರ ಸಹನೆ, ವಿವೇಕ, ಪ್ರೀತಿ ಮತ್ತು ಕರುಣೆಯೇ ಈ ಲೋಕವನ್ನು ಸುಸ್ಥಿರಗೊಳಿಸುತ್ತದೆ. ಇಲ್ಲದಿದ್ದರೆ, ಇವೆಲ್ಲವೂ ನಾಶವಾಗಿ ನಾವು ಅವಶೇಷಗಳಾಗುತ್ತಿದ್ದೆವು!

“ಧರ್ಮದ ಅಂತರಾರ್ಥವನ್ನು ಅರ್ಥಮಾಡಿಕೊಂಡು ವಿವೇಕಬುದ್ಧಿಯಿಂದ ಮತ್ತು ಶಾಂತಿಯಿಂದ ನಡೆದುಕೊಳ್ಳುವ ಒಬ್ಬ ಸದಸ್ಯನಾದರೂ ಒಂದು ಕುಟುಂಬದಲ್ಲಿದ್ದರೆ, ಈ ಲೋಕದ ಮುಖಚಿತ್ರವನ್ನೇ ಬದಲಾಯಿಸಲು ಸಾಧ್ಯವಾಗುತ್ತದೆ. ಧಾರ್ಮಿಕ ತತ್ತ್ವಗಳಿಂದ ಮಾತ್ರ ಈ ಪರಿವರ್ತನೆ ಸಾಧ್ಯ.

ಧರ್ಮದ ನಿಜವಾದ ಆದರ್ಶವನ್ನು ಅಳವಡಿಸಿಕೊಂಡರೆ, ಇತರರ ದುಃಖ ನಮ್ಮ ದುಃಖವಾಗುತ್ತದೆ; ಇತರರ ಸಂತೋಷ ನಮ್ಮ ಸಂತೋಷವಾಗುತ್ತದೆ; ಹೃದಯದಲ್ಲಿ ಕರುಣೆ ಜಾಗೃತವಾಗುತ್ತದೆ; ಇತರರ ಕಷ್ಟ ಮತ್ತು ನೋವನ್ನು ಅರಿತು ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಆತ್ಮದ ಏಕತ್ವವನ್ನು ಅರಿತಾಗ ಮಾತ್ರ ಇತರರಬಗ್ಗೆ ಪೂರ್ಣ ಕರುಣೆ ಮತ್ತು ಪ್ರೀತಿ ಉಂಟಾಗುತ್ತದೆ. ಅದೇ ಧರ್ಮದ ಧ್ಯೇಯೋದ್ದೇಶ.”


ಭಾರತದ ಸಂಪತ್ತೆಂದರೆ ಪ್ರೇಮ. ಜೀವನದ ಅಡಿಪಾಯ ಪ್ರೇಮವಾಗಿದೆ.

ಇಂದು ನಾವು ಅನುಭವಿಸುತ್ತಿರುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಲ್ಲಿ ಶೇಕಡಾ ತೊಂಬತ್ತು ಭಾಗ ಆಗಿಹೋದ ದುಃಖ ಮತ್ತು ನೋವುಗಳಿಂದ ಉಂಟಾಗಿವೆ. ಇಂತಹ ಗುಣವಾಗದ ಅನೇಕ ಗಾಯಗಳೊಂದಿಗೆ ಪ್ರತಿಯೊಬ್ಬರೂ ಇಂದು  ಜೀವಿಸುತ್ತಿದ್ದಾರೆ.

ಇಂತಹ ಗಾಯಗಳನ್ನು ಗುಣಪಡಿಸಲು ವೈದ್ಯಶಾಸ್ತ್ರದಲ್ಲಿ ಯಾವುದೇ ಚಿಕಿತ್ಸೆಯನ್ನು ಕಂಡುಹಿಡಿಯಲಾಗಿಲ್ಲ. ಆದರೆ ಇದಕ್ಕೊಂದು ಪರಿಹಾರವಿದೆ. ಪರಸ್ಪರ ಹೃದಯವನ್ನು ತೆರೆಯಿರಿ. ಭಾವನೆಗಳನ್ನು ಹಂಚಿಕೊಳ್ಳಿರಿ. ಒಬ್ಬರ ಕೊರತೆಯನ್ನು ತುಂಬಲು ಇನ್ನೊಬ್ಬರು ಪ್ರಯತ್ನಿಸಬೇಕು.

ಮಕ್ಕಳೇ, ಪರಸ್ಪರ ವಿಶ್ವಾಸ ಮತ್ತು ಪ್ರೀತಿ ಬೆಳೆದಾಗ ನಮ್ಮ ಸಮಸ್ಯೆಗಳು ಕಡಿಮೆಯಾಗುತ್ತವೆ. ಪ್ರೀತಿಯೇ ಜೀವನದ ಅಡಿಪಾಯ. ತಿಳಿದೋ ತಿಳಿಯದೆಯೋ ನಾವು ಇದನ್ನು ಅಲಕ್ಷಿಸಿರುವುದು ಇಂದಿನ ಎಲ್ಲ ಸಮಸ್ಯೆಗಳ ಮೂಲಕಾರಣ.

ದೇಹಕ್ಕೆ ಬೆಳೆಯಲು ಆಹಾರ ಬೇಕಾದರೆ, ಆತ್ಮಕ್ಕೆ ಬೆಳೆಯಲು ಪ್ರೀತಿ ಬೇಕು. ತಾಯಿಯ ಹಾಲು ನೀಡಲಾಗದ ಶಕ್ತಿ ಮತ್ತು ಹುರುಪನ್ನು ಪ್ರೇಮವು ನೀಡಬಲ್ಲದು. ಆದ್ದರಿಂದ ಮಕ್ಕಳೇ, ಪರಸ್ಪರ ಪ್ರೀತಿಸಿ ಒಂದಾಗಿರಿ. ಇದು ಅಮ್ಮನ ಆಶಯ. ಈ ಆದರ್ಶವನ್ನು ಮಕ್ಕಳು ಬೆಳೆಸಿಕೊಳ್ಳಬೇಕು.

ಅಮ್ಮನ ಬಳಿ ವಿವಿಧ ಸ್ವಭಾವದ ಅನೇಕ ಜನರು ಬರುತ್ತಾರೆ. ಅನೇಕ ಕುಟುಂಬ ಸಮಸ್ಯೆಗಳು ಸಣ್ಣ ವಿಷಯಗಳಿಂದ ಶುರುವಾಗುತ್ತವೆ. ಜೀವನವು ಸಮಸ್ಯೆಗಳಿಂದ ತುಂಬಿದೆ. ಸ್ವಲ್ಪ ತಾಳ್ಮೆ ಇದ್ದರೆ, ನಾವು ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು.

ಒಮ್ಮೆ ಪತಿ ಪತ್ನಿಯರು ಅಮ್ಮನ  ಬಳಿಗೆ ಬಂದರು. ಹೆಂಡತಿಗೆ ಕೆಲವೊಮ್ಮೆ ಮಾನಸಿಕ ಸಮತೋಲನ ಸ್ವಲ್ಪ ತಪ್ಪುತ್ತಿತ್ತು. ಯಾವುದಾದರೂ ಒತ್ತಡ ಉಂಟಾದಾಗ ಇದು ಸಂಭವಿಸುತ್ತಿತ್ತು. ಆಗ ಅವರು ಏನು ಹೇಳುತ್ತಿದ್ದಾರೆಂದು ಅವರಿಗೇ ತಿಳಿಯುತ್ತಿರಲಿಲ್ಲ. ಆದರೆ ಅವರಿಗೆ ಗಂಡನ ಮೇಲೆ ಬಹಳ ಪ್ರೀತಿಯಿತ್ತು.

ಇದನ್ನು ತಿಳಿದುಕೊಂಡು, ಅಮ್ಮ ಆ ಗಂಡನಿಗೆ ಹೇಳಿದರು, “ಮಗು, ಸ್ವಲ್ಪ ಗಮನವಿಟ್ಟರೆ ಸಾಕು. ಆ ಹುಡುಗಿ ಯಾವುದಾದರೂ ಅವಿವೇಕದ ಮಾತು ಹೇಳಿದರೂ, ಅದು ಅವಳ ಅನಾರೋಗ್ಯದ ಕಾರಣ ಎಂದು ತಿಳಿದು ನೀನು ಸಹಿಸಿಕೊಳ್ಳಬೇಕು. ಕ್ರಮೇಣ ಈ ಕಾಯಿಲೆ ಸರಿಯಾಗುತ್ತದೆ.”

ಆದರೆ, ಆ ಗಂಡನು ಅದನ್ನು ಲೆಕ್ಕಿಸಲಿಲ್ಲ. “ನಾನೇಕೆ ಸುಮ್ಮನಿರಬೇಕು? ಅವಳು ನನ್ನ ಹೆಂಡತಿ ಅಲ್ಲವೇ?” ಇದು ಆತನ ಮನೋಭಾವವಾಗಿತ್ತು. ಇದರ ಪರಿಣಾಮ ಏನಾಯಿತು? ಮನೆಯಲ್ಲಿ ಜಗಳ ಹೆಚ್ಚಾಯಿತು. ಹೆಂಡತಿಯ ಅನಾರೋಗ್ಯ ಹೆಚ್ಚಾಯಿತು. ಅವಳ ಕುಟುಂಬದವರು ಅವಳನ್ನು ಕರೆದುಕೊಂಡು ಹೋದರು. ಆ ಗಂಡನ ಜೀವನವೇ ಚೂರುಚೂರಾಯಿತು. ಅವನು ಮದ್ಯಪಾನಿಯಾದ. ಸಂಪತ್ತೆಲ್ಲವನ್ನೂ ಕುಡಿದು ಕಳೆದನು. ತನ್ನ ಜೀವನವನ್ನು ನರಕವನ್ನಾಗಿ ಮಾಡಿಕೊಂಡನು.

ಹೆಂಡತಿಯ ಕಾಯಿಲೆಯನ್ನು ಅರ್ಥಮಾಡಿಕೊಂಡು, ಅದಕ್ಕೆ ತಕ್ಕಂತೆ ಸಹನೆಯಿಂದ, ಪ್ರೀತಿಯಿಂದ ನಡೆದುಕೊಂಡಿದ್ದರೆ, ಇದು ಸಂಭವಿಸುತ್ತಿರಲಿಲ್ಲ. ಆದ್ದರಿಂದ ಮಕ್ಕಳೇ, ಪ್ರತಿಯೊಂದು ಪರಿಸ್ಥಿತಿಯನ್ನೂ ಅರ್ಥಮಾಡಿಕೊಂಡು ನಡೆದುಕೊಳ್ಳಬೇಕು.

ನೀನು ಜಗತ್ತಿನಲ್ಲಿ ಬಾಳು, ಕೆಲಸ ಮಾಡು, ಸುಖಗಳನ್ನು ಅನುಭವಿಸು; ಆದರೆ ಒಂದು ವಿಷಯವನ್ನು ಯಾವಾಗಲೂ ನೆನಪಿಡು – ಪ್ರಾಪಂಚಿಕ ಸಂಪಾದನೆ, ಹುಡುಕಾಟ ಮತ್ತು ಶೇಖರಣೆಗಳೆಲ್ಲಾ ಬೋಳು ತಲೆಗೆ ಬಾಚಣಿಗೆ ತೆಗೆದಿಟ್ಟುಕೊಂಡಂತೆ.

ಮಕ್ಕಳು ಕೇಳಬಹುದು, “ಇದರ ಅರ್ಥ ಜಗತ್ತನ್ನು ತ್ಯಜಿಸಿ, ಕಾಡಿಗೆ ಹೋಗಿ, ಕಣ್ಣುಮುಚ್ಚಿ ಕೂತಿರಬೇಕೆಂದೇ ?” ಅಲ್ಲ. ಜಗತ್ತನ್ನು ತ್ಯಜಿಸಬೇಕೆಂದೂ ಅಲ್ಲ. ಆದರೆ ಆಲಸ್ಯ ಮತ್ತು ಅಜ್ಞಾನ ಸರಿಯಲ್ಲ. ಯಾವುದೇ ಕಾಲದಲ್ಲಿ, ಹೇಗೇ ಬದುಕಿದರೂ, ಸಮಯ ಬಂದಾಗ ಸಾವು ಬಂದೇ ಬರುತ್ತದೆ.

ಎಲ್ಲವನ್ನೂ ನಾವು ಕ್ಷಣಮಾತ್ರದಲ್ಲಿ ಕಳೆದುಕೊಳ್ಳಬಹುದು, ಸೋಲನ್ನು ಅನುಭವಿಸಬಹುದು. ಇದ್ದಿದ್ದೆಲ್ಲವನ್ನೂ ಬಿಟ್ಟು ಹೋಗಲೇಬೇಕು. ನಾವು ಗಳಿಸಿದ್ದು, ಸಂಪಾದಿಸಿದ್ದು, ನಮ್ಮದೆಂದು ಭಾವಿಸಿದ್ದು—ಏನೂ ನಮ್ಮ ಸಹಾಯಕ್ಕೆ ಬರುವುದಿಲ್ಲ. ಅದಕ್ಕಾಗಿಯೇ ಧರ್ಮಶಾಸ್ತ್ರ ಹೇಳುತ್ತದೆ: “ಜೀವನದ ಉದ್ದೇಶ ಕೇವಲ ದೇಹವನ್ನು ರಕ್ಷಿಸುವುದು ಮತ್ತು ಪೋಷಿಸುವುದು ಮಾತ್ರವಲ್ಲ; ನಿಮ್ಮ ಆತ್ಮಸ್ವರೂಪವಾದ ಪೂರ್ಣತೆಯನ್ನು ಅರಿಯುವುದೂ ಆಗಿದೆ.”

ಜಗತ್ತಿನ ಅನಿತ್ಯ ಸ್ವಭಾವವನ್ನು ಅರ್ಥಮಾಡಿಕೊಂಡವನು ತೊಂದರೆಗಳನ್ನು ಎದುರಿಸುವಾಗ ದುರ್ಬಲನಾಗುವುದಿಲ್ಲ, ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ; ಸಂತೋಷದಿಂದ ಜೀವನವನ್ನು ಸ್ವೀಕರಿಸುತ್ತಾನೆ. 

ಈಜಲು ತಿಳಿಯದವನಿಗೆ ಸಮುದ್ರದ ಅಲೆಗಳನ್ನು ಎದುರಿಸುವುದು ಕಷ್ಟ—ಅವನು ಮುಳುಗಿಹೋಗಬಹುದು. ಆದರೆ, ಈಜು ಬಲ್ಲವನಿಗೆ ಅಲೆಗಳೊಂದಿಗೆ ಆಡುವುದು ಆನಂದದಾಯಕ. ಅಲೆಗಳು ಅವನನ್ನು ಸೋಲಿಸಲಾರವು. ಅಂತೆಯೇ, ಲೌಕಿಕ ಸುಖಗಳ ಅಸ್ಥಿರತೆಯನ್ನು ಅರ್ಥಮಾಡಿಕೊಂಡವನಿಗೆ ಜೀವನದ ವೈರುಧ್ಯಗಳು ಆನಂದದ ಕ್ರೀಡೆಯಾಗಿ ಕಂಡುಬರುತ್ತದೆ. ಅವನು ಸುಖ-ದುಃಖಗಳನ್ನು ಸಮಭಾವದಿಂದ ನಗುತ್ತಾ ಸ್ವಾಗತಿಸುತ್ತಾನೆ.

ಆದರೆ, ಈ ತತ್ವವನ್ನು ಅರ್ಥಮಾಡಿಕೊಳ್ಳದವನಿಗೆ ಜೀವನವು ಸಹಿಸಲಸಾಧ್ಯವಾಗುತ್ತದೆ, ನಿರಂತರ ದುಃಖದಿಂದ ಕೂಡಿರುತ್ತದೆ. ಧರ್ಮವು ಜೀವನದ ಸವಾಲುಗಳನ್ನು ಶಾಂತಿ ಮತ್ತು ಸಮತೋಲನದಿಂದ ಎದುರಿಸಲು ಶಕ್ತಿ ಮತ್ತು ಧೈರ್ಯವನ್ನು ನೀಡುತ್ತದೆ. ಇದು ಜೀವನವನ್ನು ಸಂತೋಷ, ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ಸ್ವೀಕರಿಸಲು ಮಾರ್ಗಸೂಚಿಯಾಗುತ್ತದೆ. ಧಾರ್ಮಿಕ ತತ್ವಗಳನ್ನು ಚೆನ್ನಾಗಿ ಅನುಸರಿಸುವವನ ಜೀವನವು, ನಿಷ್ಕಳಂಕವಾದ ಮಗುವಿನ ಆಟದಂತೆ, ಪೂರ್ಣ ಆನಂದದಿಂದ ಕೂಡಿರುತ್ತದೆ.


ಎಲ್ಲವೂ ನಮ್ಮ ಇಚ್ಛೆಗೆ ಅನುಗುಣವಾಗಿ ನಡೆಯುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಹತ್ತು ಮೊಟ್ಟೆಗಳನ್ನು ಮರಿಗಳಾಗಲು ಇಟ್ಟರೆ, ಹತ್ತೂ ಮೊಟ್ಟೆಗಳು ಮರಿಗಳಾಗುವುದಿಲ್ಲ. ನಮ್ಮ ಇಚ್ಛೆಯಂತೆ ನಡೆದರೆ, ಆ ಎಲ್ಲಾ ಮೊಟ್ಟೆಗಳೂ  ಮರಿಗಳಾಗಬೇಕು. ಅದು ಸಾಧ್ಯವಿಲ್ಲ. ಆದ್ದರಿಂದ ಎಲ್ಲವನ್ನೂ ಅವನ ಇಚ್ಛೆಗೆ ಬಿಟ್ಟುಕೊಡುವ  ಶರಣಾಗತ ಮನೋಭಾವ ನಮ್ಮೊಳಗೆ ಬೆಳೆಯಬೇಕು. ಅದೇ ನಮ್ಮ ಜೀವನದ ಧ್ಯೇಯವಾಗಿರಬೇಕು.

ಕೆಲವರು ಕೇಳಬಹುದು, “ನಿಮ್ಮ ಕೃಷ್ಣನು ‘ವೇತನ ಬಯಸದೆ ಕೆಲಸ ಮಾಡು’ ಎಂದು ಹೇಳುತ್ತಾನೆ ಅಲ್ಲವೇ?”  ಇದು ಎಂದಿಗೂ ಸರಿಯಲ್ಲ. ಕರ್ಮ ಮಾಡಿದಾಗ ನಾವು ನಿರೀಕ್ಷಿಸಿದಂತೆ ಫಲ ದೊರೆಯುವುದಿಲ್ಲ, ಆದ್ದರಿಂದ ಫಲದ ಬಗ್ಗೆ ನಿರೀಕ್ಷೆ ಇಟ್ಟರೆ ದುಃಖ ಉಂಟಾಗುತ್ತದೆ ಎಂದು ಭಗವಾನ್ ಹೇಳಿದ್ದು. ವೇತನ ಪಡೆಯದೆ ಕೆಲಸ ಮಾಡಬೇಕು ಎಂದಲ್ಲ; ಬದಲಿಗೆ, ಪಡೆಯುತ್ತಿರುವ ವೇತನಕ್ಕೆ ತಕ್ಕಂತೆ ಶ್ರಮಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎನ್ನುವುದು ಅವರ ಸಂದೇಶ.

ಜೀವನ ಸುಖ-ದುಃಖಗಳಿಂದ ತುಂಬಿದೆ ಎನ್ನುವರು. ಸುಖದ ಕಡೆ ಯಾವಾಗಲೂ ನಿಲ್ಲದೆ, ಗಡಿಯಾರದ ಪೆಂಡ್ಯುಲಮ್ ನಂತೆ, ಅದು ದುಃಖದ ಕಡೆಗೆ ಹಿಂದಿರುಗುತ್ತದೆ. ಆದರೆ ಆಧ್ಯಾತ್ಮಿಕತೆ ಈ ಎರಡನ್ನೂ ಸಮತೋಲನಗೊಳಿಸಿ ಮುನ್ನಡೆಯುವುದನ್ನು ಕಲಿಸುತ್ತದೆ.

ಈಜಲು ಬಾರದವನು ಸಮುದ್ರದ ಅಲೆಗಳಲ್ಲಿ ಸಿಕ್ಕಿ ಬಳಲುತ್ತಾನೆ; ಈಜಲು ತಿಳಿದವನು ಅಲೆಗಳನ್ನು ಆನಂದಿಸಬಲ್ಲ. ಅಂತೆಯೇ, ಆಧ್ಯಾತ್ಮಿಕತೆ—ಮುನ್ನಡೆಯುವ ಕಲೆ—ಅರಿತುಕೊಂಡು ನಡೆದರೆ ಎಂಥ ಪರಿಸ್ಥಿತಿಯಲ್ಲೂ ಮುಗುಳ್ನಗೆಯಿಂದ ಇರಬಹುದು, ಮತ್ತು ಖಂಡಿತವಾಗಿ ಗುರಿಯನ್ನು ತಲುಪಬಹುದು. ದುರ್ಬಲರಾಗದೆ ಗುರಿಯನ್ನು ಹೇಗೆ ಸಾಧಿಸಬೇಕೆಂದು ಕೃಷ್ಣ ಉಪದೇಶಿಸುತ್ತಾನೆ.