ನೀನು ಜಗತ್ತಿನಲ್ಲಿ ಬಾಳು, ಕೆಲಸ ಮಾಡು, ಸುಖಗಳನ್ನು ಅನುಭವಿಸು; ಆದರೆ ಒಂದು ವಿಷಯವನ್ನು ಯಾವಾಗಲೂ ನೆನಪಿಡು – ಪ್ರಾಪಂಚಿಕ ಸಂಪಾದನೆ, ಹುಡುಕಾಟ ಮತ್ತು ಶೇಖರಣೆಗಳೆಲ್ಲಾ ಬೋಳು ತಲೆಗೆ ಬಾಚಣಿಗೆ ತೆಗೆದಿಟ್ಟುಕೊಂಡಂತೆ.

ಮಕ್ಕಳು ಕೇಳಬಹುದು, “ಇದರ ಅರ್ಥ ಜಗತ್ತನ್ನು ತ್ಯಜಿಸಿ, ಕಾಡಿಗೆ ಹೋಗಿ, ಕಣ್ಣುಮುಚ್ಚಿ ಕೂತಿರಬೇಕೆಂದೇ ?” ಅಲ್ಲ. ಜಗತ್ತನ್ನು ತ್ಯಜಿಸಬೇಕೆಂದೂ ಅಲ್ಲ. ಆದರೆ ಆಲಸ್ಯ ಮತ್ತು ಅಜ್ಞಾನ ಸರಿಯಲ್ಲ. ಯಾವುದೇ ಕಾಲದಲ್ಲಿ, ಹೇಗೇ ಬದುಕಿದರೂ, ಸಮಯ ಬಂದಾಗ ಸಾವು ಬಂದೇ ಬರುತ್ತದೆ.

ಎಲ್ಲವನ್ನೂ ನಾವು ಕ್ಷಣಮಾತ್ರದಲ್ಲಿ ಕಳೆದುಕೊಳ್ಳಬಹುದು, ಸೋಲನ್ನು ಅನುಭವಿಸಬಹುದು. ಇದ್ದಿದ್ದೆಲ್ಲವನ್ನೂ ಬಿಟ್ಟು ಹೋಗಲೇಬೇಕು. ನಾವು ಗಳಿಸಿದ್ದು, ಸಂಪಾದಿಸಿದ್ದು, ನಮ್ಮದೆಂದು ಭಾವಿಸಿದ್ದು—ಏನೂ ನಮ್ಮ ಸಹಾಯಕ್ಕೆ ಬರುವುದಿಲ್ಲ. ಅದಕ್ಕಾಗಿಯೇ ಧರ್ಮಶಾಸ್ತ್ರ ಹೇಳುತ್ತದೆ: “ಜೀವನದ ಉದ್ದೇಶ ಕೇವಲ ದೇಹವನ್ನು ರಕ್ಷಿಸುವುದು ಮತ್ತು ಪೋಷಿಸುವುದು ಮಾತ್ರವಲ್ಲ; ನಿಮ್ಮ ಆತ್ಮಸ್ವರೂಪವಾದ ಪೂರ್ಣತೆಯನ್ನು ಅರಿಯುವುದೂ ಆಗಿದೆ.”

ಜಗತ್ತಿನ ಅನಿತ್ಯ ಸ್ವಭಾವವನ್ನು ಅರ್ಥಮಾಡಿಕೊಂಡವನು ತೊಂದರೆಗಳನ್ನು ಎದುರಿಸುವಾಗ ದುರ್ಬಲನಾಗುವುದಿಲ್ಲ, ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ; ಸಂತೋಷದಿಂದ ಜೀವನವನ್ನು ಸ್ವೀಕರಿಸುತ್ತಾನೆ. 

ಈಜಲು ತಿಳಿಯದವನಿಗೆ ಸಮುದ್ರದ ಅಲೆಗಳನ್ನು ಎದುರಿಸುವುದು ಕಷ್ಟ—ಅವನು ಮುಳುಗಿಹೋಗಬಹುದು. ಆದರೆ, ಈಜು ಬಲ್ಲವನಿಗೆ ಅಲೆಗಳೊಂದಿಗೆ ಆಡುವುದು ಆನಂದದಾಯಕ. ಅಲೆಗಳು ಅವನನ್ನು ಸೋಲಿಸಲಾರವು. ಅಂತೆಯೇ, ಲೌಕಿಕ ಸುಖಗಳ ಅಸ್ಥಿರತೆಯನ್ನು ಅರ್ಥಮಾಡಿಕೊಂಡವನಿಗೆ ಜೀವನದ ವೈರುಧ್ಯಗಳು ಆನಂದದ ಕ್ರೀಡೆಯಾಗಿ ಕಂಡುಬರುತ್ತದೆ. ಅವನು ಸುಖ-ದುಃಖಗಳನ್ನು ಸಮಭಾವದಿಂದ ನಗುತ್ತಾ ಸ್ವಾಗತಿಸುತ್ತಾನೆ.

ಆದರೆ, ಈ ತತ್ವವನ್ನು ಅರ್ಥಮಾಡಿಕೊಳ್ಳದವನಿಗೆ ಜೀವನವು ಸಹಿಸಲಸಾಧ್ಯವಾಗುತ್ತದೆ, ನಿರಂತರ ದುಃಖದಿಂದ ಕೂಡಿರುತ್ತದೆ. ಧರ್ಮವು ಜೀವನದ ಸವಾಲುಗಳನ್ನು ಶಾಂತಿ ಮತ್ತು ಸಮತೋಲನದಿಂದ ಎದುರಿಸಲು ಶಕ್ತಿ ಮತ್ತು ಧೈರ್ಯವನ್ನು ನೀಡುತ್ತದೆ. ಇದು ಜೀವನವನ್ನು ಸಂತೋಷ, ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ಸ್ವೀಕರಿಸಲು ಮಾರ್ಗಸೂಚಿಯಾಗುತ್ತದೆ. ಧಾರ್ಮಿಕ ತತ್ವಗಳನ್ನು ಚೆನ್ನಾಗಿ ಅನುಸರಿಸುವವನ ಜೀವನವು, ನಿಷ್ಕಳಂಕವಾದ ಮಗುವಿನ ಆಟದಂತೆ, ಪೂರ್ಣ ಆನಂದದಿಂದ ಕೂಡಿರುತ್ತದೆ.


ಎಲ್ಲವೂ ನಮ್ಮ ಇಚ್ಛೆಗೆ ಅನುಗುಣವಾಗಿ ನಡೆಯುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಹತ್ತು ಮೊಟ್ಟೆಗಳನ್ನು ಮರಿಗಳಾಗಲು ಇಟ್ಟರೆ, ಹತ್ತೂ ಮೊಟ್ಟೆಗಳು ಮರಿಗಳಾಗುವುದಿಲ್ಲ. ನಮ್ಮ ಇಚ್ಛೆಯಂತೆ ನಡೆದರೆ, ಆ ಎಲ್ಲಾ ಮೊಟ್ಟೆಗಳೂ  ಮರಿಗಳಾಗಬೇಕು. ಅದು ಸಾಧ್ಯವಿಲ್ಲ. ಆದ್ದರಿಂದ ಎಲ್ಲವನ್ನೂ ಅವನ ಇಚ್ಛೆಗೆ ಬಿಟ್ಟುಕೊಡುವ  ಶರಣಾಗತ ಮನೋಭಾವ ನಮ್ಮೊಳಗೆ ಬೆಳೆಯಬೇಕು. ಅದೇ ನಮ್ಮ ಜೀವನದ ಧ್ಯೇಯವಾಗಿರಬೇಕು.

ಕೆಲವರು ಕೇಳಬಹುದು, “ನಿಮ್ಮ ಕೃಷ್ಣನು ‘ವೇತನ ಬಯಸದೆ ಕೆಲಸ ಮಾಡು’ ಎಂದು ಹೇಳುತ್ತಾನೆ ಅಲ್ಲವೇ?”  ಇದು ಎಂದಿಗೂ ಸರಿಯಲ್ಲ. ಕರ್ಮ ಮಾಡಿದಾಗ ನಾವು ನಿರೀಕ್ಷಿಸಿದಂತೆ ಫಲ ದೊರೆಯುವುದಿಲ್ಲ, ಆದ್ದರಿಂದ ಫಲದ ಬಗ್ಗೆ ನಿರೀಕ್ಷೆ ಇಟ್ಟರೆ ದುಃಖ ಉಂಟಾಗುತ್ತದೆ ಎಂದು ಭಗವಾನ್ ಹೇಳಿದ್ದು. ವೇತನ ಪಡೆಯದೆ ಕೆಲಸ ಮಾಡಬೇಕು ಎಂದಲ್ಲ; ಬದಲಿಗೆ, ಪಡೆಯುತ್ತಿರುವ ವೇತನಕ್ಕೆ ತಕ್ಕಂತೆ ಶ್ರಮಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎನ್ನುವುದು ಅವರ ಸಂದೇಶ.

ಜೀವನ ಸುಖ-ದುಃಖಗಳಿಂದ ತುಂಬಿದೆ ಎನ್ನುವರು. ಸುಖದ ಕಡೆ ಯಾವಾಗಲೂ ನಿಲ್ಲದೆ, ಗಡಿಯಾರದ ಪೆಂಡ್ಯುಲಮ್ ನಂತೆ, ಅದು ದುಃಖದ ಕಡೆಗೆ ಹಿಂದಿರುಗುತ್ತದೆ. ಆದರೆ ಆಧ್ಯಾತ್ಮಿಕತೆ ಈ ಎರಡನ್ನೂ ಸಮತೋಲನಗೊಳಿಸಿ ಮುನ್ನಡೆಯುವುದನ್ನು ಕಲಿಸುತ್ತದೆ.

ಈಜಲು ಬಾರದವನು ಸಮುದ್ರದ ಅಲೆಗಳಲ್ಲಿ ಸಿಕ್ಕಿ ಬಳಲುತ್ತಾನೆ; ಈಜಲು ತಿಳಿದವನು ಅಲೆಗಳನ್ನು ಆನಂದಿಸಬಲ್ಲ. ಅಂತೆಯೇ, ಆಧ್ಯಾತ್ಮಿಕತೆ—ಮುನ್ನಡೆಯುವ ಕಲೆ—ಅರಿತುಕೊಂಡು ನಡೆದರೆ ಎಂಥ ಪರಿಸ್ಥಿತಿಯಲ್ಲೂ ಮುಗುಳ್ನಗೆಯಿಂದ ಇರಬಹುದು, ಮತ್ತು ಖಂಡಿತವಾಗಿ ಗುರಿಯನ್ನು ತಲುಪಬಹುದು. ದುರ್ಬಲರಾಗದೆ ಗುರಿಯನ್ನು ಹೇಗೆ ಸಾಧಿಸಬೇಕೆಂದು ಕೃಷ್ಣ ಉಪದೇಶಿಸುತ್ತಾನೆ.


ಜೀವನದಲ್ಲಿ ಎರಡೇ ಸಂಗತಿಗಳಿವೆ – ಕರ್ಮ ಮಾಡುವುದು ಮತ್ತು ಫಲವನ್ನು ಅನುಭವಿಸುವುದು.

ಅನೇಕರು ಹೇಳುವುದುಂಟು, ‘ಇದುವರೆಗೂ ನಾನು ತಿಳಿದೂ ತಿಳಿದೂ ಯಾವ ತಪ್ಪನ್ನೂ ಮಾಡಿಲ್ಲ, ಆದರೂ ಈ ಕಷ್ಟಗಳನ್ನೆಲ್ಲಾ ಅನುಭವಿಸಬೇಕಾಗಿದೆ’ ಎಂದು. ಒಂದು ವಿಷಯ ಖಂಡಿತ. ನಾವು ಮಾಡಿದ ಕರ್ಮದ ಫಲವನ್ನು ನಾವೇ ಅನುಭವಿಸಬೇಕು. ಅದರ ಫಲವನ್ನು  ತಪ್ಪಿಸಲು ಸಾಧ್ಯವೇ ಇಲ್ಲ.

ಸಾವಿರಾರು ಹಸುಗಳ ನಡುವೆ ಒಂದು ಕರುವನ್ನು ಬಿಟ್ಟರೆ, ಅದು ಅದರ ತಾಯಿಯ ಬಳಿಗೇ ಹೋಗಿ ಸೇರುತ್ತದೆ. ಅದೇ ರೀತಿ ಪ್ರತಿಯೊಬ್ಬರೂ ಅವರವರ ಕರ್ಮಫಲವನ್ನು ಅವರೇ ಅನುಭವಿಸುತ್ತಾರೆ. ಈಶ್ವರನು, ಶಿಕ್ಷಿಸಲೆಂದೇ ಯಾರನ್ನೂ ಸೃಷ್ಟಿಸಿಲ್ಲ.

ಒಳ್ಳೆಯ ಕರ್ಮಕ್ಕೆ ಒಳ್ಳೆಯ ಫಲವಿದ್ದರೆ, ಕೆಟ್ಟ ಕರ್ಮಕ್ಕೆ ಕೆಟ್ಟ ಫಲವಿದೆ. ಕೈಕಾಲುಗಳಿಂದ ಮಾಡುವುದು ಮಾತ್ರವೇ ಕರ್ಮವಲ್ಲ, ಆಲೋಚನೆಯೂ ಕರ್ಮವೇ. ಇತರರನ್ನು ದೂಷಿಸುವುದು ದುಷ್ಕರ್ಮ, ಅದರ ಫಲವೂ ದುಃಖಕರವಾಗಿಯೇ ಇರುತ್ತದೆ.

ಆದುದರಿಂದ ನಾವು ಅನುಭವಿಸುತ್ತಿರುವ ಕಷ್ಟಗಳನ್ನು ನೆನೆದು, ನಾನು ಪಾಪಿ ಎಂದು ಚಿಂತಿಸಿ ದುಃಖಿಸುವ ಅಗತ್ಯವಿಲ್ಲ. ಕೆಟ್ಟ ಕರ್ಮಗಳ ಫಲವನ್ನು ಇಂದು ಅನುಭವಿಸುತ್ತಿದ್ದೇವೆ, ಮುಂದೆ ಇದು ಪುನರಾವರ್ತಿಸಬಾರದು ಎಂದು ಯೋಚಿಸಿ, ಜೀವಿತದ ಮುಂದಿನ ಕ್ಷಣಗಳನ್ನು ಒಳ್ಳೆಯ ಕರ್ಮಗಳಿಂದ ತುಂಬಿಸುವ ನಿರ್ಧಾರ ಕೈಗೊಳ್ಳುವುದು ಸೂಕ್ತ.

‘ಏನೂ ಸರಿಯಾಗದವನು, ನಾನೊಬ್ಬ ಪಾಪಿ’ ಎಂದು ಯೋಚಿಸದೇ, ತನ್ನನ್ನು ತಾನೇ ಶಪಿಸಿಕೊಳ್ಳದೆ, ಎಲ್ಲವನ್ನೂ ಈಶ್ವರನ ಇಚ್ಛೆಗೆ ಬಿಟ್ಟುಕೊಡುತ್ತಾ, ಕಾರುಣ್ಯ ಮತ್ತು ಸೇವೆ ತುಂಬಿದ ಜೀವನವನ್ನು ನಡೆಸುವುದೇ, ಶಾಂತಿ ಕಂಡುಕೊಳ್ಳಲು ಸುಲಭದ ಮಾರ್ಗವಾಗಿದೆ.


ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳಲು ನಮ್ಮ ಹೃದಯದಲ್ಲಿ ಶಾಂತಿ ಇರಬೇಕು.

ಇದು ಆಧ್ಯಾತ್ಮಿಕತೆಯನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಮಾತ್ರ ಸಾಧ್ಯ. ಈ ವಿಧಾನದಲ್ಲಿಶಾಂತವಾದ ಮನಸ್ಸು ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಧ್ಯಾನದಿಂದ ಮಾತ್ರ ನಿಜವಾದ ಶಾಂತಿ ಸಿಗುತ್ತದೆ. ಜೀವನದಲ್ಲಿ ಯಾವುದೇ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕು.  

ನಮ್ಮ ಜೀವನ ಕಣ್ಣಿನಂತೆ ಇರಬೇಕು ಎಂದು ಹೇಳುತ್ತಾರೆ. ಏಕೆಂದರೆ, ಕಣ್ಣು ನೋಟದ ಶಕ್ತಿಯನ್ನು ನಿಯಂತ್ರಿಸಬಲ್ಲದು. ಒಂದು ವಸ್ತು ದೂರದಲ್ಲಿದ್ದದರೂ ಅಥವಾ ಹತ್ತಿರದಲ್ಲಿದ್ದರೂ, ಕಣ್ಣು ಅದಕ್ಕೆ ಅನುಗುಣವಾಗಿ ನೋಟವನ್ನು ಹೊಂದಿಸುತ್ತದೆ. ಇದರ ಫಲವಾಗಿಯೇ ನಾವು ಅವುಗಳನ್ನು ನೋಡಲು ಸಾಧ್ಯವಾಗುತ್ತದೆ.  

ಸಾಮಾನ್ಯ ಜೀವನ ರಸ್ತೆಯಲ್ಲಿ ವಾಹನ ಓಡಿಸುವಂತಿದ್ದರೆ, ಆಧ್ಯಾತ್ಮಿಕ ಜೀವನ ವಿಮಾನವನ್ನು ಹಾರಿಸುವಂತಿದೆ. ಏಕೆಂದರೆ, ರಸ್ತೆಯಲ್ಲಿ ಓಡುವ ವಾಹನಗಳು ನೆಲದ ಮೇಲೆ ಮಾತ್ರ ಸಾಗಬಲ್ಲವು, ಸ್ವಲ್ಪವೂ ಮೇಲಕ್ಕೆ ಹೋಗಲು ಸಾಧ್ಯವಿಲ್ಲ.  

ಆದರೆ, ವಿಮಾನ ಅದಕ್ಕೆ ವ್ಯತಿರಿಕ್ತವಾಗಿದೆ. ರಸ್ತೆಯಲ್ಲಿ ಓಡಿ ಮೇಲಕ್ಕೆ ಏರುವುದು. ಉನ್ನತ ಸ್ಥಾನಗಳಿಗೆ ಹೋದಾಗ, ಎಲ್ಲವನ್ನೂ ಸಾಕ್ಷಿಯಾಗಿ ವೀಕ್ಷಿಸುವ ಶಕ್ತಿ ನಮಗೆ ಸಿಗುತ್ತದೆ. ನಾವೆಲ್ಲರೂ ಈಗ ಆದೇಶವನ್ನು ಅನುಸರಿಸುವ ಯಂತ್ರದಂತೆ ಆಗಿದ್ದೇವೆ. ಅದು ಬೇಕಾಗಿಲ್ಲ. ವಿವೇಕ ಮತ್ತು ಜಾಗೃತಿಯುಳ್ಳ ಮನುಷ್ಯನಾಗಿ ಮಾರ್ಪಡಾಗಬೇಕು.  

ಕಳೆದ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ 40+ ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ಮಾತಾ ಅಮೃತಾನಂದಮಯಿ ಮಠ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದೆ.
ದೇಶ ಹೆಮ್ಮೆಯ ಯೋಧರನ್ನು ಕಳೆದುಕೊಂಡಿದೆ. ಯೋಧರ ಕುಟುಂಬಕ್ಕೆ ಸಹಾಯ ಮಾಡುವುದು ನಮ್ಮ ಧರ್ಮ, ನಮ್ಮನ್ನು ಸುರಕ್ಷಿತವಾಗಿಡಲು ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಸ್ಥರಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೊರೆಯಲಿ ಎಂದು ಶ್ರೀ ಮಾತಾ ಅಮೃತಾನಂದಯಿ ಹೇಳಿದ್ದಾರೆ.
2019ರ ಭಾರತ ಯಾತ್ರೆ ಪ್ರಯುಕ್ತ ಮಾತಾ ಅಮೃತಾನಂದಮಯಿ ಮೈಸೂರಿಗೆ ತೆರಳುತ್ತಿದ್ದು, ಇದೇ ಸಂದರ್ಭದಲ್ಲಿ ಹುತಾತ್ಮ ಯೋಧರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.