ನಾವು ಜೀವನದ ಅನುಭವಗಳನ್ನು ಮೂರು ರೀತಿಯಲ್ಲಿ ಎದುರಿಸುತ್ತೇವೆ. ಬರುವ ಸಂದರ್ಭಗಳನ್ನು ಶಪಿಸುತ್ತಾ ಮುಂದೆ ಸಾಗುವುದೂ ಒಂದು ವಿಧಾನವಾಗಿದೆ.

ಪರಿಸರವನ್ನು ಬದಲಾಯಿಸುವುದರಿಂದ ಸಮಸ್ಯೆಗಳು ಕೊನೆಗೊಳ್ಳುವುದಿಲ್ಲ. ಒಬ್ಬ ಹೆಂಡತಿ ಮತ್ತು ಆಕೆಯ ಗಂಡ ಸದಾಕಾಲ ವಾದಿಸುತ್ತಿದ್ದರು. ಒಟ್ಟಿಗೆ ವಾಸಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಯಿತು. ಹೀಗಾಗಿ, ಆ ವಿವಾಹ ಬಂಧ ಮುರಿಯಿತು. ಸ್ವಲ್ಪ ದಿನಗಳ ನಂತರ ಇಬ್ಬರೂ ಬೇರೆಯವರನ್ನು ಮದುವೆಯಾದರು.

ಹೆಚ್ಚು ತಡವಾಗದೆ ಇಬ್ಬರಿಗೂ ಅರಿವಾಯಿತು – ಮೊದಲ ಹೆಂಡತಿಯೂ ಗಂಡನೂ ಬೇರೊಂದು ರೂಪದಲ್ಲಿ ಬಂದಿದ್ದಾರೆಂದು. ವ್ಯಕ್ತಿ ಬದಲಾಗಿದ್ದರು, ಆದರೆ ಮನಸ್ಸು ಬದಲಾಗಿರಲಿಲ್ಲ. ಮನಸ್ಸು ಬದಲಾಗದಿರುವವರೆಗೆ, ಕೇವಲ ಪರಿಸರವನ್ನು ಬದಲಾಯಿಸಿದ ಮಾತ್ರಕ್ಕೆ ಸಮಸ್ಯೆಗಳಿಂದ ಮುಕ್ತಿ ಸಿಗುವುದಿಲ್ಲ.

ಒಬ್ಬನಿಗೆ ಹೊಟ್ಟೆನೋವು. ಮನೆಯಲ್ಲಿರುವ ಎಲ್ಲರಿಗೂ, ’ಅಮ್ಮ ಹೊಟ್ಟೆನೋವು, ಅಪ್ಪ ಹೊಟ್ಟೆನೋವು, ಅಣ್ಣ, ಅಕ್ಕ, ಈ ಹೊಟ್ಟೆನೋವು ತಾಳಲಾರೆ’ ಎಂದು ಹೇಳುತ್ತಾ ಹೇಳುತ್ತಾ ಕೊನೆಗೆ ಹತ್ತಿರ ಕುಳಿತವರಿಗೆಲ್ಲಾ ಹೊಟ್ಟೆನೋವಾಗಲು ಶುರುವಾಯಿತು. ನಮ್ಮ ಅಶಾಂತಿಯನ್ನು ಹೇಳುತ್ತಾ ಹೇಳುತ್ತಾ ನಾವು ಇತರರ ಶಾಂತಿಯನ್ನೂ ನಾಶಮಾಡುತ್ತೇವೆ.

ಇದರ ಜೊತೆಗೆ, ನಾಲ್ಕನೆಯ ಮಾರ್ಗವೂ ಇದೆ: ಮನೋಭಾವವನ್ನು ಬದಲಾಯಿಸುವುದು. ಇದರ ಮೂಲಕ ಮಾತ್ರವೇ ನಾವು ನಿಜವಾಗಿಯೂ ಸುಖವಾಗಿರಬಹುದು. ನಮ್ಮ ಇಚ್ಛೆಗೆ ತಕ್ಕಂತೆ ಪರಿಸರವನ್ನು ಸಂಪೂರ್ಣವಾಗಿ ಬದಲಾಯಿಸುವುದು ಅಸಾಧ್ಯ. ಅನುಭವಗಳನ್ನು ಬದಲಾಯಿಸುವುದು ಸಾಧ್ಯವಿಲ್ಲ. ಆದ್ದರಿಂದ, ಪರಿಸ್ಥಿತಿಗೆ ತಕ್ಕಂತೆ ಮನೋಭಾವವನ್ನು ಹೊಂದಿಸಿಕೊಳ್ಳುವುದು ಅವಶ್ಯಕ. ಇದನ್ನು ಆಧ್ಯಾತ್ಮಿಕತೆಯ ಮೂಲಕ ಮಾತ್ರ ಸಾಧಿಸಬಹುದು.

ಇಲ್ಲಿಯೇ ಆಧ್ಯಾತ್ಮಿಕ ಶಾಸ್ತ್ರಗಳ ಪ್ರಾಮುಖ್ಯತೆ ಇರುವುದು. ಭಗವಾನ್ ಕೃಷ್ಣನು ಅರ್ಜುನನಿಗೆ ಏನನ್ನು ತೋರಿಸಿಕೊಟ್ಟನು? ಅವನು ಬದಲಾಯಿಸಿದುದು ಪರಿಸ್ಥಿತಿಯನ್ನಲ್ಲ, ಮನೋಭಾವವನ್ನು.

ಯುದ್ಧದ ಸಮಯದಲ್ಲಿ, ಭಗವಾನ್ ಬಯಸಿದ್ದರೆ ಕೌರವರನ್ನು ನಾಶಮಾಡಲು ಸುಂಟರಗಾಳಿಯನ್ನೋ,  ಪ್ರವಾಹವನ್ನೋ ತರಬಹುದಿತ್ತು. ಅಥವಾ ಬೇರೆ ಯಾವುದೇ ರೀತಿಯಲ್ಲಿ ಅವರನ್ನು ನಾಶಮಾಡಬಹುದಿತ್ತು. ಅವನು ಬಯಸಿದ್ದರೆ, ಭಗವಾನ್ ಒಬ್ಬನೇ ಪಾಂಡವರಿಗೆ ಎಲ್ಲವನ್ನೂ ಗೆದ್ದುಕೊಡಬಹುದಿತ್ತು.  ಅವನಿಗೆ ಆ ಶಕ್ತಿ ಇತ್ತು.

ಆದರೆ, ಭಗವಾನ್ ಬದಲಾಯಿಸಿದುದು ಪರಿಸರವನ್ನಲ್ಲ. ಅರ್ಜುನನಿಗೆ ಈ ಜಗತ್ತಿನ ಬಗ್ಗೆ ಇದ್ದ ಮನೋಭಾವವನ್ನು ಬದಲಾಯಿಸಿದನು. ಜೀವನದ ಸ್ವಭಾವವನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ, ಅದನ್ನು ಹೇಗೆ ಎದುರಿಸಬೇಕೆಂದು ಕಲಿಸಿದನು.

ಇಡೀ ಜಗತ್ತು ಶಾಂತಿ ಮತ್ತು ಕ್ಷೇಮವಾಗಿರಲಿ ಎಂದು ಪ್ರಾರ್ಥಿಸುವ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕು.


ಪರಿಸ್ಥಿತಿಯನ್ನು ದೂಷಿಸದೆ, ನಾವು ಮೊದಲು ಬದಲಾಯಿಸಿಕೊಳ್ಳಬೇಕಾದದ್ದು ನಮ್ಮ ಪ್ರಸ್ತುತ ಮನಸ್ಥಿತಿಯನ್ನೇ. ನಮ್ಮ ಪ್ರಾರ್ಥನೆ ಅದಕ್ಕಾಗಿಯೇ ಇರಬೇಕು.

ಒಬ್ಬ ಬಾಲಕನು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದಾನೆ: “ದೇವರೇ, ದಯವಿಟ್ಟು ಅಮೇರಿಕಾದ ರಾಜಧಾನಿಯನ್ನು ಚೀನಾ ಮಾಡು.” ಇದನ್ನು ಕೇಳಿ, ಅತ್ತ ಬಂದು ನಿಂತ ಒಬ್ಬ ವ್ಯಕ್ತಿ ಕೇಳಿದ, “ಏಕೆ ಹೀಗೆ ಪ್ರಾರ್ಥಿಸುತ್ತಿದ್ದೀಯ  ಮಗು?”

“ಪರೀಕ್ಷೆಯಲ್ಲಿ ನಾನು ಅಮೇರಿಕಾದ ರಾಜಧಾನಿ ಚೀನಾ ಅಂತ ಬರೆದಿದ್ದೆ. ನಂತರ, ಅದು ತಪ್ಪು ಎಂದು ತಿಳಿದುಬಂತು. ನನ್ನ ಉತ್ತರ ಸರಿಯಾಗಿರಲೆಂದು ಹೀಗೆ ಪ್ರಾರ್ಥಿಸುತ್ತಿದ್ದೇನೆ.” ಇದು ಆ ಬಾಲಕನ ಪ್ರತ್ಯುತ್ತರವಾಗಿತ್ತು.

ಇದು ಬಾಲಿಶ ವರ್ತನೆ. ಇದನ್ನಲ್ಲ ನಾವು ಬೆಳೆಸಬೇಕಾದುದು.  ಮಗುವಿನಲ್ಲಿರುವ ಹೃದಯ—ನಿರ್ಮಲತೆ ಯನ್ನು ಬೆಳೆಸಬೇಕು. ಶಿಶುತ್ವವು ಬುದ್ಧಿಹೀನತೆ; ಅದು ನಮ್ಮನ್ನು ಕೇವಲ ಅಪಕ್ವತೆಗೆ ಒಯ್ಯುತ್ತದೆ.

ನೀರಿನಲ್ಲಿ ಈಜುವುದನ್ನು ಕಲಿಯಲು ನೀವು ಹೋದಾಗ, ಕಲಿಸುವವನು ಯಾವಾಗಲೂ ನಿಮ್ಮೊಂದಿಗಿದ್ದರೆ, ನೀವು ತ್ವರಿತವಾಗಿ ಈಜು ಕಲಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನಾವು ನಮ್ಮ ಸ್ವಂತ ಶಕ್ತಿಯನ್ನು ಬೆಳೆಸಿಕೊಳ್ಳಬೇಕು.

ಜೀವನದ ಯಾವುದೇ ಪರಿಸ್ಥಿತಿಯನ್ನು ಜಯಿಸಲು ನಾವು ನಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳಬೇಕು. ಇದು ನಮ್ಮ ಮನೋಭಾವವನ್ನು ಬದಲಾಯಿಸುವ ಮೂಲಕ ಮಾತ್ರ ಸಾಧ್ಯ. ಇಲ್ಲದಿದ್ದರೆ, ಸನ್ನಿವೇಶಗಳನ್ನು ದೂಷಿಸುವುದರಿಂದ, ಅಥವಾ ಅವು ಬದಲಾಗದ ಕಾರಣ ಹತಾಶರಾಗುವುದರಿಂದ, ಜೀವನವನ್ನು ವ್ಯರ್ಥಗೊಳಿಸುತ್ತೇವೆ.

ಏರ್ ಕಂಡೀಷನ್ಡ್ ಕಾರುಗಳಲ್ಲಿ ಸಂಚರಿಸುವವರನ್ನು ನಾವು ನೋಡುತ್ತೇವೆ. ಮನಸ್ಸಿನ ಶಾಂತಿ ಇಲ್ಲದಿದ್ದರೆ, ಏಸಿ ಕಾರಿನಲ್ಲಿ ಪ್ರಯಾಣಿಸುವುದರಿಂದ ಏನು ಉಪಯೋಗ? ಪರಿಸರವನ್ನು ಸರಿಪಡಿಸುವುದು ಮಾತ್ರ ಸಾಕಾಗುವುದಿಲ್ಲ. ಏಸಿ ಕೊಠಡಿಯಲ್ಲಿ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುವವರು ಸಹ ಇದ್ದಾರೆ.

ಆದರೆ, ಮನೋಭಾವವನ್ನು ಸರಿಪಡಿಸಿದರೆ, ನಾವು ಯಾವುದೇ ಪರಿಸ್ಥಿತಿಯನ್ನು ನಗುಮುಖದಿಂದ ಎದುರಿಸಬಹುದು. ನಮ್ಮ ಹಿತಕ್ಕಾಗಿ ಇತರರನ್ನು ಅವಲಂಬಿಸುವ ಬದಲು, ನಾವು ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಸೂಕ್ತ. ಅದರ ಮೂಲಕ ಮಾತ್ರ ನಮಗೆ ನಿಜವಾದ ಸಮಾಧಾನ ಸಿಗುತ್ತದೆ.


ಮಕ್ಕಳೇ, ಭಗವಂತನು ನಮ್ಮನ್ನು ರಕ್ಷಿಸುತ್ತಾನೆಯೇ ಹೊರತು. ನಾವು ಭಗವಂತನನ್ನು ರಕ್ಷಿಸುವವರಲ್ಲ.

ಮಕ್ಕಳೇ, ನದಿಗೆ ನೀರಿನ ಅಗತ್ಯವಿಲ್ಲ. ಆದರೆ ಮಡಕೆಗೆ ನದಿಯ ನೀರಿನ ಅಗತ್ಯವಿದೆ. ಆಗಲೇ ಮಡಕೆ ಶುದ್ಧವಾಗುತ್ತದೆ. ನಮ್ಮ ಮನಸ್ಸು ಇಂದು ಕಳಂಕಗಳಿಂದ ತುಂಬಿದ ಮಡಕೆಯಾಗಿದೆ. ಭಗವಂತನೆಂಬ ನದಿಯಲ್ಲಿನ ನೀರನ್ನು ತುಂಬಿಸಿಯೇ ನಮ್ಮ ಮನಸ್ಸೆಂಬ ಮಡಕೆಯನ್ನು ಶುದ್ಧಗೊಳಿಸಬೇಕು. ಕಳಂಕಗಳಿಂದ ತುಂಬಿದ ಮನಸ್ಸನ್ನು ಶುದ್ಧೀಕರಿಸಿ ವಿಶಾಲಗೊಳಿಸಲು, ಹಾಗೂ ನಾವು ಎಲ್ಲರನ್ನೂ ಪ್ರೀತಿಸಿ, ನಿಸ್ವಾರ್ಥ ಸೇವೆ ಸಲ್ಲಿಸಲು ಸಾಧ್ಯವಾಗಬೇಕಾದರೆ, ನಮಗೆ ಭಗವಂತನ ಕೃಪೆ ಅತ್ಯಗತ್ಯ.

ಮಕ್ಕಳೇ, ಈ ಲೋಕದಲ್ಲಿ ನಮ್ಮ ಪ್ರಧಾನ ಕರ್ತವ್ಯವೆಂದರೆ, ಅಸಹಾಯಕರಿಗೆ ನೆರವು ನೀಡುವುದು. ಭಗವಂತನಿಗೆ ನಮ್ಮಿಂದ ಏನೂ ಬೇಕಿಲ್ಲ. ಆತ ಸದಾ ಸಂಪೂರ್ಣ. ಭಗವಂತನಿಗೆ ಏನಾದರೂ ಅಗತ್ಯವಿದೆ ಎಂದು ಭಾವಿಸುವುದು, ಸೂರ್ಯನಿಗೆ ಮೇಣದಬತ್ತಿಯ ಬೆಳಕನ್ನು ತೋರಿಸಿ, ‘ಸೂರ್ಯಭಗವಾನನೇ, ನನ್ನ ಬೆಳಕಿನಲ್ಲಿ ಭೂಮಿಯನ್ನು ಪ್ರಕಾಶಗೊಳಿಸು’ ಎಂದು ಹೇಳುವಂತೆ.

ಬಡಜನರ ಮತ್ತು ಕಷ್ಟದಲ್ಲಿರುವವರೊಡನೆ  ಸಹಾನುಭೂತಿಯಿಂದ ವರ್ತಿಸುವುದೇ, ಭಗವಂತನಿಗೆ ನಾವು ಸಲ್ಲಿ‌ಸುವ ಕರ್ತವ್ಯ. ನಿಸ್ವಾರ್ಥ ಲೋಕಸೇವೆಯೇ ಆತ್ಮಾನ್ವೇಷಣೆಯ ಪ್ರಾರಂಭ. ಮೂರನೇ ಕಣ್ಣು ತೆರೆಯಲು, ಎರಡು ಕಣ್ಣುಗಳನ್ನು ಮುಚ್ಚಿ ಅನೇಕರು ಧ್ಯಾನ ಮಾಡುತ್ತಾರೆ. ಅದು ಎಂದಿಗೂ ಆಗುವುದಿಲ್ಲ. ಆಧ್ಯಾತ್ಮಿಕತೆಯ ಹೆಸರಿನಲ್ಲಿ ಈ ಲೋಕದತ್ತ ಕಣ್ಣು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಪ್ರಗತಿಯೂ ಆಗುವುದಿಲ್ಲ. ಎರಡೂ ಕಣ್ಣು ತೆರೆದಿರುವಾಗಲೇ ಎಲ್ಲದರಲ್ಲೂ ಏಕತ್ವವನ್ನು ಕಾಣುವುದೇ ಆತ್ಮಸಾಕ್ಷಾತ್ಕಾರ, ಅಥವಾ ಆಧ್ಯಾತ್ಮಿಕ ಪೂರ್ಣತೆ. ಅದೇ ಮೂರನೇ ಕಣ್ಣು.

ಮೊಗ್ಗಾಗಿರುವಾಗ ಒಂದು ಹೂವಿನ ಸೌಂದರ್ಯವನ್ನು ಮತ್ತು ಸುಗಂಧವನ್ನು ಯಾರೂ ತಿಳಿಯಲು ಅಥವಾ ಆಸ್ವಾದಿಸಲು ಸಾಧ್ಯವಿಲ್ಲ. ಆದರೆ ಹೂವು ಅರಳಿದಾಗ ಅದರ ಕಾಂತಿಯೂ ಸುವಾಸನೆಯೂ ಸುತ್ತಲೂ ಹರಡುತ್ತದೆ. ನಮ್ಮ ಹೃದಯ ಈಗ ಮೊಗ್ಗಿನಂತೆ ಮುಚ್ಚಿಕೊಂಡು ಕುಳಿತಿದೆ. ಭಗವಂತನಲ್ಲಿ ಶ್ರದ್ಧಾಭಕ್ತಿ, ಎಲ್ಲರ ಬಗ್ಗೆ ತೋರುವ ಪ್ರೇಮ ಮತ್ತು ಕರುಣೆ, ಧಾರ್ಮಿಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ಹೃದಯದ ಹೂವು ಅರಳಿ ವಿಕಾಸಗೊಳ್ಳುತ್ತದೆ. ಅದರ ಸುಗಂಧ ಮತ್ತು ಸೌಂದರ್ಯ ಸುತ್ತಲೂ ಹರಡಿ ಇಡೀ ಜಗತ್ತಿಗೆ ಒಂದು ವರವಾಗಿ ಪರಿಣಮಿಸುತ್ತದೆ.

ಇಲ್ಲಿಯವರೆಗೆ ನಾನು ಹೇಳಿದ್ದೆಲ್ಲವೂ ಟಾನಿಕ್ ಶೀಶೆಯ ಲೇಬಲ್ ಮಾತ್ರ. ಲೇಬಲ್ ಓದಿದ ಮಾತ್ರಕ್ಕೇ ‘ಟಾನಿಕ್’ ನ ಫಲ ಸಿಗುವುದಿಲ್ಲ. ಅದನ್ನು ಸೇವಿಸಿದಾಗ ಮಾತ್ರ ಅದರ ಫಲ ಸಿಗುವುದು. ಕಾಗದದ ಮೇಲೆ ಜೇನುತುಪ್ಪ ಎಂದು ಬರೆದು ನೆಕ್ಕಿದರೆ ಸಿಹಿ ಸಿಗುವುದಿಲ್ಲ. ವಿಜ್ಞಾನವನ್ನು ಅಧ್ಯಯನ ಮಾಡಿದ ಮಾತ್ರಕ್ಕೇ ಅನುಭವ ಉಂಟಾಗುವುದಿಲ್ಲ. ಧರ್ಮವನ್ನು ಮಾತಿನಿಂದ ಹೇಳಲಾಗದು. ಅದು ಜೀವನಶೈಲಿ. ಅದರ ಸೌಂದರ್ಯವು ಧಾರ್ಮಿಕವಾಗಿ  ಜೀವಿಸುವವರ ಮೂಲಕ ಪ್ರಕಟವಾಗುತ್ತದೆ. ಧಾರ್ಮಿಕ ತತ್ವಗಳನ್ನು ಧ್ಯಾನಿಸಬೇಕು. ಜೀವನದಲ್ಲಿ ಅಳವಡಸಿಕೊಳ್ಳಬೇಕು. ಅವುಗಳನ್ನು ಅನುಭವದಿಂದ ಅರಿತುಕೊಳ್ಳಬೇಕು. ಪರಮಾತ್ಮನಲ್ಲಿ ಸಂಪೂರ್ಣ ಶರಣಾಗತಿಯಿಂದ  ಆ ಪರಮ ಪದವನ್ನು ಹೊಂದಲು ಎಲ್ಲರಿಗೂ ಸಾಧ್ಯವಾಗಲಿ ಎಂದು ನಾವು ಪ್ರಾರ್ಥಿಸೋಣ.

ಕಾರ್ಖಾನೆಗಳಿಂದ ಹೊಮ್ಮುವ ಹೊಗೆ ನಮ್ಮ ವಾತಾವರಣವನ್ನು ಎಷ್ಟು ಮಾಲಿನ್ಯಗೊಳಿಸಿದೆ? ಅಮ್ಮ ಕಾರ್ಖಾನೆಗಳನ್ನು ಮುಚ್ಚಿಬಿಡಬೇಕು ಎಂದು ಹೇಳುತ್ತಿಲ್ಲ. ಅವುಗಳಿಂದ ಬರುವ ಆದಾಯದ ಒಂದು ಭಾಗವಾದರೂ ಪ್ರಕೃತಿ ಸಂರಕ್ಷಣೆ ಮತ್ತು ಪರಿಸರ ಶುದ್ಧೀಕರಣಕ್ಕೆ ವಿನಿಯೋಗಿಸಲು ನಾವು ಸಿದ್ಧರಾಗಿರಬೇಕು ಎಂದು ಮಾತ್ರ ಹೇಳುತ್ತಾರೆ.

ಹಿಂದೆ, ಬಿಸಿಲು ಮತ್ತು ಮಳೆ, ಕಾಲ ಕಾಲಕ್ಕೆ ಸರಿಯಾಗಿ ಬರುತ್ತಿದ್ದು, ಸಸ್ಯಗಳ ಪೋಷಣೆ ಮತ್ತು ಬೆಳವಣಿಗೆ ಸರಿಯಾಗಿರುತ್ತಿತ್ತು. ಎಲ್ಲವೂ ಪ್ರಕೃತಿಯ ಕೃಪೆಯಿಂದ ನಡೆಯುತ್ತಿದ್ದ ಕಾರಣ, ನೀರಾವರಿ ಯೋಜನೆಗಳ ಅಗತ್ಯವೂ ಆಗ ಇರಲಿಲ್ಲ. ಆದರೆ ಇಂದು, ಮನುಷ್ಯನು ಧರ್ಮ ಮಾರ್ಗದಿಂದ ದೂರ ಸರಿದು ಪ್ರಕೃತಿಯನ್ನು ಶೋಷಿಸುತ್ತಿರುವ ಕಾರಣ, ಪ್ರಕೃತಿಯೂ ಪ್ರತೀಕಾರ ಆರಂಭಿಸಿದೆ. ಒಮ್ಮೆ ಮನುಷ್ಯನನ್ನು ಮೆಲ್ಲಗೆ ಸವರಿ ಸಂತೈಸಿದ ಅದೇ ಸೌಮ್ಯ ಗಾಳಿ, ಇಂದು ಪ್ರಚಂಡ ಬಿರುಗಾಳಿಯ ರೂಪ ತಾಳಿ ನಾಶ ಬಿತ್ತುತ್ತಿದೆ.

ಪ್ರಕೃತಿಯ ಕಳೆದುಹೋದ ತಾಳವನ್ನು ಮರಳಿ ಪಡೆಯಲು ನಮಗೆ ಸಾಧ್ಯವೇ ಎಂದು ನೀವು ಸಂದೇಹಿಸಬಹುದು, ‘ಮನುಷ್ಯನ ಶಕ್ತಿ ಸೀಮಿತವಲ್ಲವೇ?’ ಅಲ್ಲ. ನಮ್ಮೊಳಗೆ ಅನಂತ ಶಕ್ತಿ ನಿದ್ರಿಸುತ್ತಿದೆ. ಆ ಶಕ್ತಿ ವಿಶೇಷದ ಬಗ್ಗೆ ನಾವು ಅರಿವಿಲ್ಲದವರಾಗಿದ್ದೇವೆ ಅಷ್ಟೆ. ಆ ಶಕ್ತಿಯನ್ನು ನಾವು ಎಚ್ಚರಗೊಳಿಸಿಕೊಳ್ಳಬಹುದು. ನಾವು ಆಂತರಿಕವಾಗಿ ಎಚ್ಚರಗೊಂಡಾಗ, ಆ ಮಹಾಶಕ್ತಿ ಉದಯಿಸುತ್ತದೆ. ನಮ್ಮೊಳಗೆ ನಿದ್ರಿಸುತ್ತಿರುವ ಆ ಅನಂತ ಶಕ್ತಿಯನ್ನು ಎಚ್ಚರಗೊಳಿಸುವ ಜೀವನ ರಹಸ್ಯವೇ ಧರ್ಮ.

ಸನಾತನ ಧರ್ಮ ಹೇಳುತ್ತದೆ, “ಓ ಮನುಷ್ಯಾ! ನೀನು ಮಂಜಾಗಿ ಉರಿಯುವ ಮೇಣದಬತ್ತಿಯಲ್ಲ. ಸ್ವಯಂಪ್ರಕಾಶ ಸ್ವರೂಪನಾದ ಸೂರ್ಯನು ನೀನು. ಪ್ರಕಾಶಿಸಲು ಬೇರೊಬ್ಬರನ್ನು ಅವಲಂಬಿಸಬೇಕಾದವನಲ್ಲ ನೀನು.” ಎಲ್ಲಿಯವರೆಗೆ  ‘ನಾನು ಶರೀರ ಮಾತ್ರ’ ಎಂದು ತಿಳಿದಿರುತ್ತೀರೋ, ಅಲ್ಲಿಯವರೆಗೆ ತ್ವರಿತವಾಗಿ ಶಕ್ತಿ ಕ್ಷೀಣಿಸುವ ಸಾಧಾರಣ ಬ್ಯಾಟರಿಯಂತೆ ಇರುತ್ತೀರಿ.

ಇದರ ಬದಲು, ‘ನಾನು ಆತ್ಮ’ ಎಂದು ಅರಿತಾಗ, ವಿಶ್ವದ ಸಂಪೂರ್ಣ ಶಕ್ತಿ ಕೇಂದ್ರಕ್ಕೆ ಸಂಪರ್ಕ ಹೊಂದಿದ, ಯಾವಾಗಲೂ ಚಾರ್ಜ್ ಆಗಿರುವ, ಶಕ್ತಿ ಎಂದಿಗೂ ಕ್ಷೀಣಿಸದ, ಅಗಾಧ ಶಕ್ತಿಯುತ ಬ್ಯಾಟರಿಯಂತೆ ಇರುತ್ತೀರಿ. ಎಲ್ಲ ಶಕ್ತಿಯ ಮೂಲವಾದ ಆತ್ಮನೊಂದಿಗೆ ಮತ್ತು ಸರ್ವಶಕ್ತನಾದ ಈಶ್ವರನೊಂದಿಗೆ ಐಕ್ಯ ಹೊಂದಿದಾಗ, ನಿಮ್ಮೊಳಗಿನ ಶಕ್ತಿ ಎಂದಿಗೂ ಕ್ಷೀಣಿಸುವುದಿಲ್ಲ. ಅದು ನಿಮ್ಮೊಳಗಿನ ಮಹಾಶಕ್ತಿಯನ್ನು ಎಚ್ಚರಗೊಳಿಸಲು ಸಹಾಯ ಮಾಡುತ್ತದೆ.

ಮಕ್ಕಳೇ, ನಿಮ್ಮೊಳಗಿನ ಅನಂತ ಶಕ್ತಿಯ ಬಗ್ಗೆ ಅರಿವುಳ್ಳವರಾಗಿರಿ. ನೀವು ಭಯದಿಂದ ನಡುಗುವ ಆಡಿನ ಮರಿಗಳಲ್ಲ. ತೇಜಸ್ಸು ಮತ್ತು ಗಾಂಭೀರ್ಯವುಳ್ಳ ಸಿಂಹದ ಮರಿಗಳು. ವಿಶ್ವವನ್ನು ನಿಯಂತ್ರಿಸುವ ಮಹಾಶಕ್ತಿಯೇ ಸರ್ವಶಕ್ತನಾದ ಈಶ್ವರನು. 

ಎಲ್ಲದರಲ್ಲೂ ಜೀವಚೈತನ್ಯವನ್ನು ನೋಡು, ಅನುಭವಿಸು, ಅದು ಪ್ರೇಮ. ಹೃದಯದಲ್ಲಿ ನಿಖರವಾಗಿ ಪ್ರೇಮ ತುಂಬಿದಾಗ, ಬ್ರಹ್ಮಾಂಡದ ಎಲ್ಲೆಡೆ ಜೀವಚೈತನ್ಯ ಸ್ಪಂದಿಸುವುದನ್ನು ನೋಡಲು ಸಾಧ್ಯವಾಗುತ್ತದೆ. 

ಧರ್ಮವು ಹೇಳುತ್ತದೆ: ‘ಜೀವಚೈತನ್ಯವೇ ಪ್ರೇಮ.’ ಅದು ಅಲ್ಲಿಯೂ ಇದೆ, ಇಲ್ಲಿಯೂ ಇದೆ, ಪ್ರತಿಯೊಂದು ಕಡೆಯೂ ಇದೆ. ಎಲ್ಲೆಲ್ಲಿ ಜೀವನವಿದೆಯೋ, ಜೀವಿತವಿದೆಯೋ, ಅಲ್ಲೆಲ್ಲಾ ಪ್ರೇಮವಿದೆ. ಅದೇ ರೀತಿ, ಪ್ರೇಮ ಇರುವ ಎಲ್ಲೆಡೆಯೂ ಜೀವನ ಮತ್ತು ಜೀವಿತವಿದೆ. ಜೀವನ ಮತ್ತು ಪ್ರೇಮ ಎರಡಲ್ಲ; ಒಂದೇ. ಆದರೆ, ಪರಮ ಸತ್ಯವನ್ನು ಅರಿತುಕೊಳ್ಳುವವರೆಗೆ, ಆ ಅದ್ವೈತ ಭಾವವನ್ನು ನಾವು ಗ್ರಹಿಸಲು ಸಾಧ್ಯವಿಲ್ಲ.

ಸತ್ಯವನ್ನು ಸಾಕ್ಷಾತ್ಕರಿಸುವವರೆಗೆ, ಹೃದಯವಂತಿಕೆ ಮತ್ತು ಬುದ್ಧಿಶಕ್ತಿಯ ನಡುವಿನ ಈ ವ್ಯತ್ಯಾಸವು ಮುಂದುವರಿಯುತ್ತದೆ. ಕೇವಲ ಬುದ್ಧಿಶಕ್ತಿ ಸಾಲದು. ಪ್ರೇಮ, ಕರುಣೆ ಮತ್ತು ನಂಬಿಕೆಯಿಂದ ತುಂಬಿದ ಹೃದಯವು ನಮ್ಮಲ್ಲಿದ್ದಾಗ ಮಾತ್ರ ನಮ್ಮ ಜೀವನ ಪೂರ್ಣವಾಗುತ್ತದೆ. ಧರ್ಮ ಮತ್ತು ಧರ್ಮಾಚರಣೆಗಳು ಇದನ್ನೇ ಕಲಿಸುವುದು.

ಇದು ಬುದ್ಧಿಶಕ್ತಿ ಮತ್ತು ತರ್ಕದ ಯುಗ. ಇದು ವಿಜ್ಞಾನದ ಯುಗ. ನಾವು ನಮ್ಮ ಹೃದಯವನ್ನು ಮರೆತಿದ್ದೇವೆ. ಹೃದಯದ ಭಾವಗಳನ್ನು ಮರೆತಿದ್ದೇವೆ.

‘ನಾನು ಪ್ರೇಮ-ಸುಳಿಯೊಳಗೆ ಬಿದ್ದಿದ್ದೇನೆ’ ಎಂದು ನಾವು ಸಾಮಾನ್ಯವಾಗಿ ಹೇಳುತ್ತೇವೆ. ಹೌದು, ನಾವೆಲ್ಲರೂ ಸ್ವಾರ್ಥತೆ ಮತ್ತು ಪ್ರಾಪಂಚಿಕತೆಯ ಪ್ರೇಮ-ಸುಳಿಯೊಳಗೆ ಬಿದ್ದುಹೋಗಿದ್ದೇವೆ. ಎಚ್ಚರಗೊಳ್ಳಲು ಮತ್ತು ಏಳಲು ನಮಗೆ ಸಾಧ್ಯವಾಗುತ್ತಿಲ್ಲ. ಬೀಳಲೇ ಬೇಕಾದರೆ,  ಬುದ್ಧಿಶಕ್ತಿಯಿಂದ ಹೃದಯವಂತಿಕೆಗೆ ಬೀಳೋಣ. ಪ್ರೇಮದಲ್ಲಿ ಎಚ್ಚರಗೊಳ್ಳುವುದು ಮತ್ತು ಏಳುವುದೇ ಧರ್ಮ.