ದೇವರಪೂಜೆಗಾಗಿ ಉಪಯೋಗಿಸುವ ಎಲ್ಲ ವಸ್ತುಗಳೂ ಅತ್ಯುತ್ತಮವಾಗಿರಬೇಕೆಂದು ನಾವು ಎಚ್ಚರಿಕೆ ವಹಿಸುತ್ತೇವೆ. ಕೊಳೆತ ಹಣ್ಣುಗಳಾಗಲೀ, ಬಾಡಿದ ಹೂವುಗಳಾಗಲೀ, ಅಸ್ವಚ್ಛ ಪಾತ್ರೆಗಳಾಗಲೀ, ಯಾವುದನ್ನೂ ನಾವು ದೇವರಪೂಜೆಗೆ ಎಂದಿಗೂ ಉಪಯೋಗಿಸುವುದಿಲ್ಲ.

ನಾವು ಎಷ್ಟೇ ಜಾಗರೂಕತೆಯಿಂದ ರಸ್ತೆ ದಾಟಲು ಪ್ರಯತ್ನಿಸಿದರೂ, ಇತರ ವಾಹನ ಚಾಲಕರ  ಅಜಾಗರೂಕತೆಯಿಂದ ನಮಗೆ ಅಪಘಾತ ಸಂಭವಿಸಬಹುದು. ‘ಕರ್ಮಫಲವನ್ನು ನಿಯಂತ್ರಿಸುವ ಎಲ್ಲಾ ಅಂಶಗಳೂ ನಮಗೆ ಅನುಕೂಲಕರವಾಗಿರಲು  ಧೈವಕೃಪೆ ಇದ್ದೇ ತೀರಬೇಕು’, ಎಂದು ಹೇಳುವುದು ಈ ಕಾರಣದಿಂದಲೇ. ಅದಕ್ಕೆ ಸುಲಭವಾದ ಮಾರ್ಗವೆಂದರೆ, ಎಲ್ಲಾ ಕರ್ಮಗಳನ್ನೂ ದೇವರಪೂಜೆಯಾಗಿ ಮಾಡುವುದೇ ಆಗಿದೆ.

ಪ್ರತಿಯೊಂದು ಕರ್ಮವನ್ನೂ ಈ ಮನೋಭಾವದಿಂದ ಮಾಡಿದರೆ, ಕಾಲಕ್ರಮೇಣ ನಾವು ಸತ್ಕರ್ಮಗಳನ್ನು ಮಾತ್ರ ಮಾಡುತ್ತೇವೆ.  ದುಷ್ಕರ್ಮಗಳು ನಾಶವಾಗುತ್ತವೆ. ಏಕೆಂದರೆ, ದುಷ್ಕರ್ಮಗಳನ್ನು ದೇವರಿಗೆ ಅರ್ಪಿಸಲು ಹೇಗೆ ಸಾಧ್ಯ? 

ದೇವರಪೂಜೆಯನ್ನು ಮಾಡುವವನಿಗೆ ಇರಬೇಕಾದ ಮುಖ್ಯ ಭಾವವೆಂದರೆ ವಿನಯದ ಭಾವ. ಆದ್ದರಿಂದ ಪೂಜಾಭಾವದಲ್ಲಿ ಕರ್ಮವನ್ನು ಮಾಡುವಾಗ ಅಹಂಕಾರದಿಂದಿರಲು ನಮಗೆ ಸಾಧ್ಯವಾಗುವುದಿಲ್ಲ. ಕರ್ಮದಲ್ಲಿ ಯಶಸ್ಸು ಉಂಟಾದರೆ, ಅದನ್ನು ದೈವಾನುಗ್ರಹ ಎಂದು  ಕಾಣುತ್ತೇವೆಯೇ ಹೊರತು, ಆ ಯಶಸ್ಸು ತನ್ನ ಸಾಮರ್ಥ್ಯದಿಂದ ಆಯಿತೆಂಬ ಅಹಂಕಾರವಿರುವುದಿಲ್ಲ.

ಕಾರಣವೇನೆಂದರೆ, ಪೂಜೆ ಮುಗಿದ ನಂತರ ಸಿಗುವುದು ಪ್ರಸಾದವಾಗಿದೆ. ಆದ್ದರಿಂದ, ಕರ್ಮಫಲವನ್ನು ಪ್ರಸಾದವಾಗಿ ಸ್ವೀಕರಿಸುತ್ತೇವೆ. ಕರ್ಮವನ್ನು ಮಾಡುವಾಗಿನ ವಿನಯಭಾವವು ಕರ್ಮಫಲವನ್ನು ಅನುಭವಿಸುವಾಗಲೂ ಇರಬೇಕು. ಪ್ರಸಾದದ ದೋಷ ಅಥವಾ ಕೊರತೆಯನ್ನು ನಾವು ನೋಡುವುದಿಲ್ಲ.

ಪರಾಜಯವುಂಟಾದರೆ, ಅದನ್ನೂ ದೈವಪ್ರಸಾದ ಎಂದು ಭಾವಿಸಿ, ಸೋಮಾರಿಗಳಂತೆ ಕುಳಿತಿರಬೇಕು ಎಂದು ಇದರ ಅರ್ಥವಲ್ಲ. ಉನ್ನತಿಗೆ ಸಾಧ್ಯತೆಯಿದ್ದರೆ ಮತ್ತೆ ಪ್ರಯತ್ನಿಸಬೇಕು. ಆದರೂ ಪರಾಜಯವೇ ಸಂಭವಿಸುತ್ತಿದ್ದರೆ ಅದನ್ನು ದೈವೇಚ್ಛೆ ಎಂದು ಸ್ವೀಕರಿಸಬೇಕು.

ವಿಜಯವನ್ನು ದೈವಾನುಗ್ರಹವಾಗಿ ಕಾಣುವಾಗ ನಮ್ಮಲ್ಲಿ ಅಹಂಕಾರ ಉಂಟಾಗುವುದಿಲ್ಲ. ಆಗ ವಿಜಯದಲ್ಲಿ ಎಲ್ಲವನ್ನೂ ಮರೆತು ಅತಿಯಾಗಿ ಕುಣಿದಾಡುವುದಾಗಲೀ, ಪರಾಜಯದಲ್ಲಿ ಮನಸ್ಸು ಬಳಲಿ ನೆಲಕ್ಕುರುಳುವುದಾಗಲೀ ಇರುವುದಿಲ್ಲ. ಪರಾಜಯವನ್ನು ದೈವೇಚ್ಛೆ ಎಂದು ಕಾಣುವಾಗ, ‘ನಾನು ಯಾವುದಕ್ಕೂ ಲಾಯಕ್ಕಿಲ್ಲದವನು’ ಎಂಬ ವಿಚಾರ ಉಂಟಾಗುವುದಿಲ್ಲ.

ಪರಾಜಯ ಸಂಭವಿಸಿದರೆ, ‘ಈ ಸಮಯದಲ್ಲಿ, ಇದು ತಕ್ಕ ಫಲ’ ಎಂದು ತಿಳಿದುಕೊಂಡರೆ ಸಾಕು. ‘ಇನ್ನೊಂದು ಪ್ರಾರಬ್ಧವು ಕಳೆಯಿತು’, ಎಂದು ಕಾಣಬೇಕು. ಆ ಅನುಭವವು ನಮ್ಮ ಜೀವನದಲ್ಲಿ ಒಂದು ಪಾಠವಾಗಿದೆ ಮತ್ತು ಅದರಿಂದ ನಾವು ಏನಾದರೂ ಪಾಠ ಕಲಿಯಬಲ್ಲೆವು ಎಂದು ಭಾವಿಸಿದರೆ ಸಾಕು.

ವಿವೇಕವಿದ್ದರೆ, ಯಾವುದೇ ಕರ್ಮವನ್ನೂ ನಮಗೆ ಅನುಕೂಲಕರವಾಗಿರುವಂತೆ ಮಾಡಿಕೊಳ್ಳಬಲ್ಲೆವು. ಸರಿಯಾದ ಮನೋಭಾವದೊಂದಿಗೆ, ಕರ್ಮವನ್ನು ದೇವರಪೂಜೆಯಾಗಿ ನೆರವೇರಿಸುವಾಗ, ಕೆಲಸದಲ್ಲಿನ ಬೇಜಾರು ಕೂಡ ನಿವಾರಣೆಯಾಗುತ್ತದೆ.

ಉತ್ಸಾಹದಿಂದ ಕೂಡಿದ ನಮ್ಮ ಪ್ರಯತ್ನ ಮತ್ತು ದೇವರ ಅನುಗ್ರಹ ಒಟ್ಟುಗೂಡಿದಾಗ, ವಿಜಯವು ಖಂಡಿತವಾಗಿಯೂ ನಮ್ಮ ಪಕ್ಕದಲ್ಲೇ ಇರುತ್ತದೆ. ಏನೇ ಆದರೂ, ನಿರಾಶರಾಗಬಾರದು. ಭಗವಂತ ಯಾವಾಗಲೂ ಪ್ರಯತ್ನಿಸುವವನ ಜೊತೆಗಿರುತ್ತಾನೆ. ವಿಜಯವು ಅವನಿಗೆ ಸಲ್ಲುತ್ತದೆ.