ದೇವರೆಂದರೆ ಪ್ರೇಮ. ದೇವರು ಈ ಸೃಷ್ಟಿಯ ಹಿಂದಿರುವ ಚೈತನ್ಯವಾಗಿದ್ದಾನೆ. ಎಲ್ಲಾ ಜೀವಜಂತುಗಳ ಬಗ್ಗೆ ಪ್ರೇಮ ಮತ್ತು ಕರುಣೆಗೆ ಪ್ರಾಧಾನ್ಯ ನೀಡದ ಧರ್ಮ ಯಾವುದೂ ಇಲ್ಲ.

ಎಲ್ಲಾ ಮತದವರೂ ಪ್ರೇಮಪೂರ್ಣರಾಗಿ ವರ್ತಿಸಿದ್ದರೆ, ಲೋಕದಲ್ಲಿ ಕಾಣುವ ಸಮಸ್ಯೆಗಳೆಲ್ಲವೂ ಬಹಳ ಹಿಂದೆಯೇ ಇಲ್ಲವಾಗುತ್ತಿದ್ದವು. ಎಲ್ಲಾ ಜೀವರಾಶಿಗಳೂ ಭಗವಂತನ ಮಕ್ಕಳು. ಅವರು ಪರಸ್ಪರ ಪ್ರೀತಿಸಬೇಕು ಮತ್ತು ಸೋದರ ಭಾವದಿಂದ ಸಹಕರಿಸಬೇಕೆಂದು ಭಗವಂತ ಬಯಸುತ್ತಾನೆ. ಆದರೆ, ತಾನೇ ಸೃಷ್ಟಿಸಿಕೊಂಡ ಭಿನ್ನತೆಗಳ ಕಾರಣದಿಂದ ಮನುಷ್ಯನು ಆತ್ಮವಿನಾಶದ ಕಡೆಗೆ ಸಾಗುತ್ತಿದ್ದಾನೆ.
ಮಾನವ ಸಮೂಹಕ್ಕೆ ಪ್ರೀತಿ ಮತ್ತು ಸತ್ಯದ ಮಾರ್ಗದೀಪವನ್ನು ತೋರಿಸುವುದಕ್ಕಾಗಿಯೇ ಎಲ್ಲಾ ಧರ್ಮಗಳಿರುವುದು. ಧರ್ಮವು ಎಂದೂ ವಿಭಜನೆಯನ್ನು ಪ್ರೋತ್ಸಾಹಿಸಬಾರದು. ಎಲ್ಲಾ ಧರ್ಮಗಳ ಮೂಲಕವೂ ಪ್ರಕಾಶಿಸುವುದು, ಒಂದೇ ಪರಮಸತ್ಯ. ಈ ದೃಷ್ಟಿಕೋನದಿಂದ ಧರ್ಮವನ್ನು ಪಾಲಿಸಲು ಅರಿತರೆ, ನಾವು ಪರಮಸತ್ಯದ ಹತ್ತಿರ ಸಾಗಲು, ಪರಸ್ಪರ ತಿಳಿದುಕೊಳ್ಳಲು ಮತ್ತು ಮಾನವಕುಲವನ್ನು ಶಾಂತಿಯ ಕಡೆಗೆ ಕರೆದೊಯ್ಯಲು ಸಾಧ್ಯ.
ನಾವೆಲ್ಲರೂ ಎಷ್ಟು ಕಾಲ ಈ ಭೂಮಿಯ ಮೇಲೆ ಜೀವಿಸಲಿದ್ದೇವೆ? ಯಾರೂ ಶಾಶ್ವತವಾಗಿ ಜೀವಿಸುವುದಿಲ್ಲ. ನಮ್ಮದೆಂದು ನಾವು ಭಾವಿಸುವ ಎಲ್ಲವೂ ನಾಶವಾಗುವಂಥದ್ದು. ವಾಸ್ತವತೆ ಹಾಗಿರುವಾಗ, ದೈವದತ್ತವಾದ ಈ ಜೀವನವನ್ನು ಕ್ಷಣಿಕ ಗುರಿಗಳ ಹಿಂದೆ ಅಲೆದು ವ್ಯರ್ಥಮಾಡುವುದರಲ್ಲಿ ಏನರ್ಥವಿದೆ?
ಎಲ್ಲಾ ಧರ್ಮಗಳ ನಿಜವಾದ ಬೋಧಕರು ಹೇಳುವುದು, “ಅಸ್ಥಿರವೂ, ಸದಾ ಬದಲಾಗುತ್ತಿರುವುದೂ ಆದ ಈ ಲೋಕಕ್ಕೆ ಆಧಾರವಾಗಿ, ಬದಲಾಗದ ಮತ್ತು ನಾಶವಾಗದ ಒಂದು ಮೂಲಭೂತ ತತ್ತ್ವವಿದೆ”, ಎಂದು. ಆ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡಾಗಲೇ ಅಮೃತತ್ವವು ಪ್ರಾಪ್ತಿಯಾಗುವುದು. ಅದುವೇ ಜೀವನದ ಪರಮೋನ್ನತ ಗುರಿಯಾಗಿದೆ.
ಪ್ರೀತಿ ಮತ್ತು ಶಾಂತಿಯ ಅಸ್ತಿಭಾರದ ಮೇಲೆ ಶಾಶ್ವತವಾದ ಜೀವನವನ್ನು ನಿರ್ಮಿಸಿಕೊಳ್ಳುವ ಧೃಡವಾದ ಅಭಿಲಾಷೆಯನ್ನು ಧರ್ಮಗಳು ಜನರಲ್ಲಿ ಮೂಡಿಸಬೇಕು. ಇದೇ ಮಾನವಕುಲಕ್ಕಾಗಿ ಧರ್ಮವು ಮಾಡಬಲ್ಲ ಅತಿಶ್ರೇಷ್ಠ ಸೇವೆಯಾಗಿದೆ. ವಿಭಿನ್ನ ಧರ್ಮಗಳ ನಡುವೆ ಪರಸ್ಪರ ಪ್ರೀತಿ ಮತ್ತು ಸಹಕಾರವು ಅತ್ಯಂತ ಅವಶ್ಯಕ. ಪ್ರೀತಿ, ಶಾಂತಿ, ಸಹಕಾರ ಮತ್ತು ಅಹಿಂಸೆ, 21ನೇ ಶತಮಾನಕ್ಕೆ ಮಾರ್ಗದೀಪಗಳಾಗಿರಲಿ.

Download Amma App and stay connected to Amma