ಪರಮಕರುಣಾಕರನಾದ ಪರಮಾತ್ಮನ ಅನುಗ್ರಹದಿಂದ ನಾವು ನಡೆದುಕೊಂಡು ಬರುತ್ತಿದ್ದೇವೆ. ಕೆಲವರು ಹೇಳುತ್ತಾರೆ ದೇವರಿಲ್ಲ ಎಂದು. ತನ್ನ ನಾಲಿಗೆಯಿಂದಲೇ “ನನಗೆ ನಾಲಿಗೆಯಿಲ್ಲ” ಎಂದು ಹೇಳಿದಂತಾಯಿತು ಇದು. ನಾಲಗೆಯಿಲ್ಲದ ಒಬ್ಬನಿಗೆ “ನನಗೆ ನಾಲಿಗೆಯಿಲ್ಲ” ಎಂದು ಹೇಳಲು ಸಾಧ್ಯವಿದೆಯೇ. ಇದೇ ರೀತಿ ದೇವರಿಲ್ಲ ಎಂದು ಹೇಳುವಾಗಲೇ ನಾವು ದೇವರಿದ್ದಾನೆ ಎಂದು ಒಪ್ಪಿದ ಹಾಗಾಯಿತು. ಯಾಕೆಂದರೆ ಒಂದು ವಸ್ತು ಇಲ್ಲಾಂತ ಹೇಳಬೇಕಾದರೆ, ಮೊದಲೇ ಅದರ ಬಗ್ಗೆ ನಮಗೆ ಸ್ವಲ್ಪ ತಿಳುವಳಿಕೆ ಇರಬೇಕಾಗುತ್ತದೆ.

ಪ್ರೀತಿಯ ಮಕ್ಕಳೇ, ನಾವು ಬಂದಿರುವುದು ದೇವರಿಂದ. ಆ ಮಸುಕಾದ ಪರಿವೆ ನಮ್ಮೊಳಗಿದೆ; ಅದು ಪೂರ್ಣವಾಗಬೇಕು.

ನೆಚ್ಚಿನ ಮಕ್ಕಳೇ, ದೇವರು ಮೇಲಿದ್ದಾನೆ. ಬೀಜದಲ್ಲಿ ಹೂವು, ಕಾಯಿ, ಕಾಂಡ, ಎಲೆ ಎಲ್ಲಾ ಅಡಕವಾಗಿದೆ. ಆದಕಾರಣ, “ಎಲ್ಲಾ ನನ್ನಲ್ಲಿದೆ, ನಾನ್ಯಾರಿಗೂ ತಲೆ ಬಗ್ಗಿಸುವುದಿಲ್ಲ” ಎಂದು ಹೇಳಿದರೆ ಅದರ ನಿಜವಾದ ರೂಪ ಹೊರಗೆ ಬರುವುದೇ ? ಮಣ್ಣಿನಡಿಗೆ ಹೋದಾಗ ಮಾತ್ರವೇ ಅದರಲ್ಲಿ ಹುದುಗಿಕೊಂಡಿರುವ ವೃಕ್ಷ ಹೊರಗೆ ಬರತೊಡಗುವುದು. ಇದೇ ರೀತಿ “ಹೇ ಭಗವಂತ, ನಾನು ನಿನ್ನ ದಾಸ” ಎಂಬ ಭಾವನೆ ಬಂದಾಗ ಮಾತ್ರ ಭಗವಂತನ ರೂಪ – ಅಲ್ಲದಿದ್ದರೆ ನಮ್ಮ ಸ್ವರೂಪ – ವ್ಯಕ್ತವಾಗುವುದು.

ಮೆಚ್ಚಿನ ಮಕ್ಕಳೇ, ದೇವರು ಕೊಟ್ಟ ಸಮಯ ಹಾಳು ಮಾಡದಿರಿ. ಜಗನ್ಮಾತೆಯನ್ನು ಆಶ್ರಯಿಸಿರಿ. ಮಕ್ಕಳೇ, “ಅಮ್ಮ” ಮಾತ್ರವೇ ನಮಗೆ ನಿಷ್ಕಾಮ ಪ್ರೇಮ ನೀಡುವವಳು. ಈ ಲೋಕದಲ್ಲಿ ಬಹಳಷ್ಟು ಮಂದಿ ನಮ್ಮನ್ನು ನಿಷ್ಕಾಮವಾಗಿ ಪ್ರೀತಿಸುತ್ತಾರೆ ಎನ್ನುವುದು ಬರೇ ತೋರಿಕೆ ಮಾತ್ರ. ಅದೆಲ್ಲ ಒಟ್ಟು ಸ್ವಾರ್ಥ-ಪ್ರೀತಿ. ಇದನ್ನು ವಿವರಿಸಲಿಕ್ಕೆ ಅಮ್ಮ ಒಂದು ಕಥೆ ಹೇಳುತ್ತಾರೆ.

ಒಂದು ಸಲ ಒಬ್ಬ ತಂದೆಯೂ ಮಕ್ಕಳೂ ಒಂದು ಪ್ರವಾಸಕ್ಕೆ ಹೊರಡುತ್ತಾರೆ. ಹಗಲಿನಲ್ಲಿ ಅವರು ಪಟ್ಟಣದ ಹಲವು ದೃಶ್ಯಗಳನ್ನು ನೋಡುತ್ತ ತಿರುಗಾಡಿದರು. ಸಂಜೆಯಾದಾಗ ವಿಶ್ರಾಂತಿಗೆಂದು ಒಂದು ಹೊಟೇಲ್ ಬಂದು ತಲಪುತ್ತಾರೆ. ಹೊಟೇಲ್ ಯಜಮಾನ ಅವರನ್ನು ಕಂಡೊಡನೆ ಬಹಳ ಗೌರವಾದರಪೂರ್ವಕವಾಗಿ ಅವರನ್ನು ಎದುರ್ಗೊಳ್ಳುತ್ತಾನೆ. ಎರಡು ಮೂರು ಸೇವಕರೂ ಅಲ್ಲಿ ಬಂದು ಮುಟ್ಟಿದರು. ಅವರು ಅತಿಥಿಗಳನ್ನು ರೂಮಿಗೆ ಕರೆದುಕೊಂಡು ಹೋಗುತ್ತಾರೆ.

ಆಕರ್ಷಕವಾಗಿ ಸಿಂಗರಿಸಿದ ರೂಮು. ನಿಮಿಷಗಳಲ್ಲೇ ಆ ಸೇವಕರು ಆಹಾರ ಪದಾರ್ಥಗಳನ್ನು ತಂದಿಡುತ್ತಾರೆ. ಅಪ್ಪ ಮಕ್ಕಳ ವಸ್ತ್ರಗಳನ್ನು ಸಂತೋಷದಿಂದ ಒಗೆಯಲಿಕ್ಕೆಂದು ತೆಗೆದುಕೊಂಡು ಒಯ್ಯುತ್ತಾರೆ. ಅದನ್ನು ಚೆನ್ನಾಗಿ ಒಗೆದು, ಇಸ್ತ್ರಿ ಹಾಕಿ ಹಿಂದೆ ಕೊಟ್ಟರು. ಸ್ನಾನಕ್ಕೆ ಬಿಸಿ ನೀರು ಕೊಡುತ್ತಾರೆ. ಹೀಗೆ, ಅವರಿಗೆ ಏನೆಲ್ಲ ಬೇಕೋ, ಎಲ್ಲ ಮಾಡಿಕೊಟ್ಟರು. ರಾತ್ರಿ ಹೊಟೇಲ್‌ನ ಗಾಯಕಿಯೂ ಗಾಯಕನೂ ಇವರಿಗಾಗಿ ಹಾಡುತ್ತಾರೆ ಮತ್ತು ವೀಣೆ ಬಾರಿಸುತ್ತಾರೆ. ಬೆಳಿಗ್ಗೆ ತಂದೆಯೂ ಮಕ್ಕಳೂ ಹೊರಡಲು ತಯಾರಾಗುತ್ತಾರೆ. ಮಕ್ಕಳು ಹೇಳುತ್ತಾರೆ “ಅಪ್ಪ, ಎಷ್ಟು ಪ್ರೀತಿಯಿರುವ ಜನಗಳಿವರು.” ಉತ್ತರ ಹೇಳುವ ಮೊದಲೇ ಒಬ್ಬ ಪರಿಚಾರಕ ಒಳಗೆ ಬಂದು ಹೊಟೇಲ್ ಬಿಲ್ಲು ಕೊಟ್ಟ.

ತಂದೆ ಮಕ್ಕಳಿಗೆ ಹೇಳಿದ “ನಿನ್ನೆ ಅವರು ನಮಗೆ ತೋರಿಸಿದ ಪ್ರೀತಿಗೂ ಸೇವೆಗೂ ಒಟ್ಟಿಗೆ ಸೇರಿಸಿ ಕೊಟ್ಟ ಬಿಲ್ಲು ಇದು. ಅವರು ಮಾಡಿದ ಒಂದೊಂದು ಕೆಲಸಕ್ಕೂ ಬೇರೆ ಬೇರೆ ಮೊಬಲಗು ವಸೂಲು ಮಾಡಿದ್ದಾರೆ.” ಅವರ ಪ್ರೀತಿಯು ಸ್ವಾರ್ಥ ಕಾಮನೆಗಳ ತಳಹದಿಯ ಮೇಲೆ ನಿಂತಿತ್ತು.

ನಲ್ಮೆಯ ಮಕ್ಕಳೇ, ಈ ರೀತಿಯದಾಗಿದೆ ಪ್ರೀತಿ. ಜನಗಳು ಪರಸ್ಪರ ಪ್ರೀತಿ ತೋರಿಸುವುದು ಕೂಡ ತಮ್ಮ ಸ್ವಾರ್ಥಕ್ಕಾಗಿ. ನಿಜವಾದ ಪ್ರೀತಿ ಪರಮಾತ್ಮನಿಂದ ಮಾತ್ರ ನಮಗೆ ಸಿಗುವುದು. ಭಗವಂತನು ಪ್ರೇಮ ಸ್ವರೂಪನು. ಇದು ತಿಳಿದಿರಲಿ ಮಕ್ಕಳೇ. ದೇವರನ್ನು ಆರಿತುಕೊಳ್ಳಿ. ನಮ್ಮೊಳಗೆ ಹುದುಗಿರುವ ನಮ್ಮದೇ ಸಂಪತ್ತಾದ ಈ ಸತ್ವದ ಪೂರ್ತಿ ಪ್ರಯೋಜನ ಪಡೆಯೋಣ. ಇದು ಮರೆಯದಿರಿ ಮಕ್ಕಳೇ.

ಮಕ್ಕಳೇ, ಕಲಿಯುತ್ತಿರುವಕಾಲದಲ್ಲಿ ಹುಡುಗರಿಗೆ ಲಕ್ಷ್ಯಬೋಧವಿದ್ದರೂ ಅವರ ಮನಸ್ಸು ಹೆಚ್ಚಾಗಿ ಆಟಗಳಲ್ಲೂ, ಇನ್ನಿತರ ಆಮೋದ ಪ್ರಮೋದಗಳಲ್ಲೂ ಇರುತ್ತದೆ. ಆ ಕಾಲಘಟ್ಟದಲ್ಲಿ ತಂದೆಯೂ ತಾಯಿಯೂ ಬೈತಾರೆ. ಓದಿಕೊಂಡು ಹೋಗದಿದ್ದರೆ ಸರ್ ಹೊಡೆಯುತ್ತಾರಂತ ಹೆದರಿಕೆಯಿಂದ ಮಾತ್ರವೇ ಅವರು ಕಲಿಯುವುದು. ಆದರೆ ಹತ್ತನೇ ಕ್ಲಾಸ್ ಪಾಸಾದ ಮೇಲೆ, “ನನಗೆ ಎಂ.ಬಿ.ಬಿ.ಎಸ್.ಗೆ ಹೋಗಬೇಕು, ರ‍್ಯಾಂಕ್ ತೆಗೆದು ಪಾಸಾಗಬೇಕು” ಎಂಬ ಪರಿಜ್ಞಾನ ಬರುವುದು. ಆಗ ಅವರು ಚೆನ್ನಾಗಿ ಓದುತ್ತಾರೆ. ಯಾರು ಬಯ್ಯದೆಯೂ ಹೊಡೆಯದೆಯೂ ವಿದ್ಯಾಭ್ಯಾಸಕ್ಕೆ ಗಮನಕೊಡುತ್ತಾರೆ. ಸಿನೆಮ ನೋಡಲು ಹೋಗುವುದಿಲ್ಲ; ಹೆಚ್ಚು ನಿದ್ದೆ ಮಾಡುವುದಿಲ್ಲ. ಆದರೆ ಅಲ್ಲಿಯ ತನಕ ತಂದೆ ತಾಯಂದಿರ, ಅಧ್ಯಾಪಕರ ಭಯದಿಂದ ಅವರು ಓದಿರುವುದು. ಈ ಭಯ ದುರ್ಬಲತೆಯಲ್ಲ. ನಮ್ಮ ಶ್ರದ್ಧೆಯನ್ನು ಎಚ್ಚರಿಸಲು ಒಬ್ಬ ಗುರು ಅವಶ್ಯ. ಯಾರದ್ದಾದರೂ ಕೈಕೆಳಗೆ ಅವರನ್ನು ಅನುಸರಿಸಿ ಬದುಕ ಬೇಕಾಗುತ್ತದೆ. ನಮ್ಮೊಳಗಿನ ಗುರು ಎಚ್ಚರಗೊಂಡಮೇಲೆ ಸ್ವಂತ ವಿವೇಚನೆಯಿಂದ ಕಾರ್ಯವೆಸಗುವ ಸಕ್ಷಮತೆ ನಮ್ಮಲ್ಲಿ ಉಂಟಾಗುತ್ತದೆ. ಅಲ್ಲಿಯವರೆಗೆ ಒಂದು ಗುರುವಿನ ಸಹಾಯ ಅತ್ಯಗತ್ಯ.

ಮಕ್ಕಳೇ, ನನ್ನಲ್ಲಿ ಎಲ್ಲಾ ಇದೆಯೆಂದು ಹೇಳಿಕೊಂಡು ಬೀಜ ಉಗ್ರಾಣದಲ್ಲೇ ಉಳಿದರೆ ಬರೇ ಇಲಿಗೆ ಅಹಾರಮಾತ್ರವಾಗಿ ಪರಿಣಮಿಸುವುದು. ಮಣ್ಣಿನಡಿಗೆ ಹೋದರೆಯೇ ಅದರ ಯಥಾರ್ಥ ಸ್ವರೂಪ ನಿಜವಾಗಿ ಹೊರಗೆ ಬರುವುದು. ಅದೇರೀತಿ ನಮ್ಮ ಅಹಂಕಾರ ನಶಿಸಬೇಕಾದರೆ ದಾಸತ್ವ ಎನ್ನುವುದು ಬೇಕು. ಓರ್ವ ಗುರುವಿನ ಕೈಕೆಳಗೆ ಸಂಪೂರ್ಣ ಸಮರ್ಪಣೆಯೊಂದಿಗೆ ಸಾಧನೆ ನಡೆಸಬೇಕು.

ಕ್ಷಮೆ (ಸಹಿಷ್ಣುತೆ; ತಾಳ್ಮೆ), ಸಮಾಧಾನ, ದಾಸತ್ವ ಇದ್ದರೆ ಮಾತ್ರ ನಮಗೆ ದೇವರನ್ನು ತಿಳಿದುಕೊಳ್ಳಲು ಸಾಧ್ಯ. ಹಾವಸೆಹಿಡಿದ ಬಂಡೆಕಲ್ಲಮೇಲೆ ನಡೆಯಬೇಕಾದರೆ ಜಾರಿ ಬೀಳದ ಹಾಗೆ ನಾವು ಎಷ್ಟು ಜಾಗ್ರತೆ ವಹಿಸಬೇಕೋ ಅಷ್ಟೇ ಜಾಗ್ರತೆ ನಮಗೆ ಜಗತ್ತಿನ ಪ್ರತಿಯೊಂದು ವಸ್ತುವಿನ ಮೇಲೂ ಇರಬೇಕು. ಇಲ್ಲದಿದ್ದರೆ ಯಾವ ನಿಮಿಷವೂ ನಾವು ಜಾರಿ ಬೀಳಬಹುದು. ದೇವರನ್ನು ಅರ್ಥಮಾಡಿಕೊಂಡರೆ ಮಾತ್ರವೇ ಇತರರಿಗೆ ಶಾಂತಿ ಸಮಾಧಾನ ನೀಡ ಬಹುದು

ಮಕ್ಕಳೇ, ದೇವರನ್ನರಿಯಲು ಗುರು ಅತ್ಯಾವಶ್ಯ. ಗುರುವಚನದಲ್ಲಿ ಧೃಡ ವಿಶ್ವಾಸವಿರಬೇಕು. ಮಕ್ಕಳು ಕೇಳಬಹುದು, ಅದು ಅಂಧವಿಶ್ವಾಸವಲ್ಲವೇ ಎಂದು. ಖಂಡಿತವಾಗಿಯೂ ಅಲ್ಲ. ಮಕ್ಕಳೇ, ಈ ಪ್ರಪಂಚವೇ ನೆಲೆನಿಂತಿರುವುದು ವಿಶ್ವಾಸದ ಮೇಲೆ. ಒಂದು ಯುವಕನಿಗೆ ತನ್ನ ಮಗಳನ್ನು ಕೊಟ್ಟು ಧಾರೆಯೆರೆದು ಕೊಡುವುದು ಅವನು ತನ್ನ ಮಗಳನ್ನು ಸಾಕಿ ಸಲಹುತ್ತಾನೆ ಎಂಬ ವಿಶ್ವಾಸದಿಂದಲ್ಲವೇ ? ಹೊಟೇಲಲ್ಲಿ ನಾವು ಆಹಾರ ಪದಾರ್ಥಗಳನ್ನು ಸೇವಿಸುವುದು ಅದರಲ್ಲಿ ವಿಷದ ಅಂಶವಿಲ್ಲವೆಂಬ ಭರವಸೆಯಿಂದಲ್ಲವೇ ? ಸಮುದ್ರ ಈ ಕಡೆ ಬರುವುದಿಲ್ಲ ಎಂಬ ವಿಶ್ವಾಸದಿಂದಲ್ಲವೆ ನಾವು ತೀರದಲ್ಲಿ ಮನೆ ಕಟ್ಟಿ ವಾಸಮಾಡುವುದು ?

ತನ್ನ ಆಧ್ಯಾತ್ಮಿಕ ಬೆಳವಣಿಗೆಗೆ ಇತರರಿಂದ ಶಿಕ್ಷಣ ಸ್ವೀಕರಿಸಲೋ, ಅಥವಾ ಇನ್ನೊಬ್ಬರಿಗೆ ವಿಧೇಯನಾಗಿರಲಿಕ್ಕೋ ಕೆಲವರು ಇಷ್ಟಪಡದಿರಬಹುದು. ಶಿಸ್ತಿನಿಂದೊಡಗೂಡಿದ ಜೀವನಕ್ರಮ, ತಿದ್ದುವಿಕೆ, ಯಾವುದೂ ಆ ಮಕ್ಕಳಿಗೆ ಇಷ್ಟವಿಲ್ಲ. ಅವರು ತಮ್ಮಿಷ್ಟ ಪ್ರಕಾರ ಜೀವಿಸುತ್ತಲೂ, “ನಾನು ಬ್ರಹ್ಮನ್” ಎಂದು ತಾವೇ ಹೇಳುತ್ತಲೂ ಇರುತ್ತಾರೆ. ಅದು ದುರ್ಬಲತೆ ಮಕ್ಕಳೇ. ಅನುಭವದ ಸ್ತರದಲ್ಲಿ ಅವರಿಂದ ಏನು ಸಂಪಾದಿಸಲೂ ಸಾಧ್ಯವಿಲ್ಲ.

ಎರಡು ತರದ ಕೋಳಿಗಳ ಬಗ್ಗೆ ಕೇಳಿಲ್ಲವೇ ? ನಾಟಿ ಕೋಳಿ ಮತ್ತು ಇಂಗ್ಲಿಷ್ ಕೋಳಿ. ತಾಯಿ ಕೋಳಿಯ ಕಾವಿನಿಂದ ಹೊರಬರುವ ಕೋಳಿ ಮರಿಗಳು ಪ್ರಕೃತಿಯನ್ನು ಜಯಿಸುವ ಸಾಮರ್ಥ್ಯದೊಂದಿಗೆ ಬೆಳೆಯುತ್ತಿರುತ್ತವೆ. ಅದಕ್ಕೆ ಪ್ರತ್ಯೇಕ ಗೂಡೂ ಬೇಡ; ಅಹಾರವೂ ಬೇಡ. ಬಿಸಿಲಾಗಲಿ, ಮಳೆಯಾಗಲಿ – ಅದಕ್ಕೇನೂ ಸಮಸ್ಯೆಯಲ್ಲ. ರಾತ್ರಿ ಯಾವುದೋ ಮರದ ಕೊಂಬೆ ಮೇಲೇರಿ ಮಲಗಿಕೊಳ್ಳುತ್ತವೆ. ಆದರೆ ಇಂಗ್ಲಿಷ್ ಕೋಳಿಯ ಕಥೆಯೋ ? ಕೃತಕ ಸನ್ನಿವೇಶಗಳಲ್ಲಿ ಅವುಗಳು ಬೆಳೆದು ಬಂದಿರುವುದು. ಅವುಗಳಿಗೆ ಪ್ರಕೃತಿಯನ್ನು ಜಯಿಸಲು ಸಾಧ್ಯವಾಗುವುದಿಲ್ಲ. ಚಳಿ ಹಿಡಿದರೆ ಸತ್ತು ಬಿಡುವುದು. ಬಿಸಿಲು, ಮಳೆ ಎಲ್ಲ ಅದಕ್ಕೆ ಸಮಸ್ಯೆಯೇ. ಇದೇ ನಿಜವಾದ ಗುರುವಿನಿಂದ ಶಿಕ್ಷಣ ಪಡೆಯದಿರುವವರ ಕಥೆ. ಅಡ್ಡಿ ಆತಂಕಗಳು ಎದುರಾದಾಗ ಬಸವಳಿದು ಬೆಂಡಾಗುತ್ತಾರೆ, ಎಚ್ಚರ ತಪ್ಪಿ ಬೀಳುತ್ತಾರೆ.

ಆದರೆ, ಗುರುಸನ್ನಿಧಿಯಲ್ಲಿ ಬೆಳೆದು ಜ್ಞಾನ ಸಂಪಾದಿಸಿದವರ ಕಥೆ ನೇರ ವಿರುದ್ಧ ಮಕ್ಕಳೇ. ನಾಟಿ ಕೋಳಿಗಳ ಹಾಗೆ ಅವರು. ಯಾವುದೇ ಪ್ರತಿಕೂಲ ಸನ್ನಿವೇಶವನ್ನೂ ಎದುರಿಸಲು ಅವರಿಗೆ ಸಾಧ್ಯ. ಲಕ್ಷ್ಯಬೋಧದಿಂದ, ನಿಷ್ಠೆಯಿಂದ ಎಂದೂ ಅವರು ವಿಚಲಿತರಾಗುವುದಿಲ್ಲ.

ಹಾರಲಾಗದ ಮರಿಗಳನ್ನು ತಾಯಿಕೋಳಿಯು ರೆಕ್ಕೆಯಡಿಯಲ್ಲಿರಿಸಿ ಬೆಳೆಸುವ ಹಾಗೆ ನಿಜವಾದ ಗುರು ತನ್ನ ಶಿಕ್ಷಣದಲ್ಲಿ ಬೆಳೆಯುವವರನ್ನು ಕಾಯುತ್ತಾನೆ. ಕ್ಷುಲ್ಲಕ ತಪ್ಪುಗಳನ್ನೂ ಬೆರಳು ಮಾಡಿ ತೋರಿಸಿ ತಿದ್ದುವನು. ಇನಿತು ಅಹಂಕಾರವೂ ಚಿಗುರಲು ಬಿಡನು. ಅದಕ್ಕೆ ಬೇಕಾಗಿ ಗುರುಗಳವರು ಕೆಲವೊಮ್ಮೆ ಕ್ರೂರವಾಗಿ ವರ್ತಿಸುತ್ತಿರುತ್ತಾರೆ.

ಒಬ್ಬ ಕಮ್ಮಾರನು ಕಾಯಿಸಿದ ಕಬ್ಬಿಣದ ತುಂಡನ್ನು ಅಡಿಗಲ್ಲಿನ ಮೇಲಿಟ್ಟು ಸುತ್ತಿಗೆಯಿಂದ ಎತ್ತಿ ಎತ್ತಿ ಹೊಡೆಯುವಾಗ ಅದನ್ನು ನೋಡುವವರು ಅಂದುಕೊಳ್ಳಬಹುದು “ಇವನಂಥ ಕ್ರೂರರು ಎಲ್ಲೂ ಇಲ್ಲ” ಎಂದು. ಆದರೆ ಆ ಕಬ್ಬಿಣದ ತುಂಡಿನಮೇಲೆ ಒಂದೊಂದು ಹೊಡೆತ ಬೀಳುವಾಗಲೂ ಅದರಿಂದ ಮೈ ತಾಳುವ ಹೊಸ ರೂಪದ ಕುರಿತಾಗಿರುತ್ತದೆ ಆ ಕಮ್ಮಾರನ ಯೋಚನೆ. ಹೀಗೇ ಇರುತ್ತಾನೆ ಯಥಾರ್ಥ ಗುರು ಕೂಡ. ಯಥಾರ್ಥ ಗುರುಗಳು ಸತ್ಯವನ್ನು ಅರಿತವರಾಗಿರುತ್ತಾರೆ. ಅವರುಗಳ ಮಾತನ್ನನುಸರಿಸಿ ನಡೆದರೆ ದೇವರನ್ನು ಮುಟ್ಟುವೆವು.

“ಗುರುವಿಲ್ಲದೆಯೂ ಭಗವದ್ಸಾಕ್ಷಾತ್ಕಾರ ಸಾಧ್ಯವಿಲ್ಲವೇ” ಎಂದು ಕೇಳಬಹುದು. ಸಾಧ್ಯವಿದೆ ಮಕ್ಕಳೇ. ಆದರೆ ಅದಕ್ಕೆ ಪೂರ್ವ ಜನ್ಮದ ಸಂಸ್ಕಾರ ಬೇಕು.

ಕಾಶ್ಮ್ಮೀರದಲ್ಲಿ ಧಾರಾಳ ಸೇಬು ಬೆಳೆಯುತ್ತಾರೆ. ನಾವು ಒಂದು ಸೇಬಿನ ಗಿಡ ನೆಟ್ಟರೂ ಮೊಳಕೆಯೊಡೆಯುತ್ತದೆ; ಬೆಳೆಯಲೂ ಬಹುದು. ಆದರೆ ಬಹಳ ಅಪರೂಪಕ್ಕೆ ಕಾಯಿ ಬಿಡುವುದು. ಕಾಯಿ ಬಿಟ್ಟರೂ ಕಾಯಿಗಳು ಬಹಳ ಕಮ್ಮಿಯೇ; ಬಹಳ ಜಾಗ್ರತೆ ಕೂಡ ವಹಿಸಬೇಕಾಗುತ್ತದೆ. ಸೇಬಿನ ಗಿಡದ ಬೆಳವಣಿಗೆಗೆ ಕಾಶ್ಮ್ಮೀರದ ಹವಾಮಾನ ಪ್ರಶಸ್ತವಿದ್ದಂತೆ, ಲಕ್ಷ್ಯಬೋಧವಿರುವ ಸಾಧಕನಿಗೆ ಗುರುವಿನ ಸನ್ನಿಧಿ. ನಿಜವಾದ ಸದ್ಗುರು ಇರುವವನಿಗೆ ಪ್ರತ್ಯೇಕವಾಗಿ ಬೇರೊಬ್ಬ ದೇವರಿಲ್ಲ; ಗುರುವೇ ದೇವರು, ದೇವರೇ ಗುರು. ಆದಕಾರಣ ಭಕ್ತಿಯಿಂದ ದೇವರಿಗೆ ಅಥವ ಗುರುವಿಗೆ ಅತ್ತು ಪ್ರಾರ್ಥಿಸಿರಿ. ಎರಡೂ ಕೈಗಳನ್ನು ಚಾಚಿ ಅವನು ನಮ್ಮನ್ನು ಸ್ವೀಕರಿಸುವನು. ಭಕ್ತಿಯಿಲ್ಲದ ಜ್ಞಾನ ಬಂಡೆಕಲ್ಲನ್ನು ತಿನ್ನುವ ಹಾಗೆ. ಅತ್ತು ಪ್ರಾರ್ಥಿಸುವುದಕ್ಕಿಂತಲೂ ಬೇರೆ ದೊಡ್ಡ ಶಾಸ್ತ್ರವಿಲ್ಲ. ಆ ಭಕ್ತಿಯ ಮಾಧುರ್ಯ – ಅದು ಬೇರೆಯೇ ಮಕ್ಕಳೇ.

ಪ್ರಶ್ನೆ: ಕೃಷ್ಣ ಭಕ್ತನು ದೇವಿಯ ಸಹಸ್ರನಾಮ ಜಪಿಸುವುದು ಒಳ್ಳೆಯದೇ ?

“ಯಾರು ಇಷ್ಟದೇವನೋ, ಆ ದೇವನ ಮಂತ್ರ ಜಪಿಸಬೇಕು. ಸಹಸ್ರನಾಮವೂ ಹಾಗೆಯೇ. ಕೋಗಿಲೆಯನ್ನು ನವಿಲೆಂದು ಕರೆದರೆ ಕೋಗಿಲೆ ಬರುವುದೇ ? ಆದರೆ ಒಂದು ಮಾತು. ಪ್ರತಿ ಹಕ್ಕಿಗೂ ನವಿಲೆಂದು, ಕೋಗಿಲೆಯೆಂದು ಅಥವಾ ಬೇರಿನ್ನೇನೋ ಹೆಸರಿಟ್ಟಿರುವುದು ಮನುಷ್ಯನು. ಆದಕಾರಣ ಪ್ರತಿಯೊಂದನ್ನು ನೋಡುವಾಗಲೂ ಅದರ ಹೆಸರು ಹೀಗೆಂದು ನಾವು ಯೋಚಿಸುತ್ತೇವೆ. ಇದೇ ಪ್ರಕಾರ ದೇವರಿಗೆ ರೂಪವನ್ನೂ ನಾಮವನ್ನೂ ನೀಡಿರುವವರು ನಾವು. ಸತ್ಯಕ್ಕೆ ರೂಪವೂ ನಾಮವೂ ಇಲ್ಲ.

ನಮ್ಮ ಹಾಗೆ ಶಬ್ದ ಕೇಳಿ ತಿರುಗಿ ನೋಡುವ ವ್ಯಕ್ತಿಯಲ್ಲ ಈಶ್ವರ. ದೇವರು. ಒಂದು ಮಾತು ನಾವು ಮನಸ್ಸಲ್ಲಿ ಊಹಿಸಿಕೊಳ್ಳುವ ಮೊದಲೇ ಅವನಿಗೆ ಗೊತ್ತಾಗಿ ಬಿಡುತ್ತದೆ. ಆದಕಾರಣ ನಾವು ಯಾವ ಹೆಸರಲ್ಲಿ ಕರೆದರೂ ಅವನಿಗೆ ಗೊತ್ತಾಗುವುದು ತನ್ನನ್ನೇ ಕರೆಯುವುದೆಂದು. ಕೆಲವು ಮನೆಗಳಲ್ಲಿ ತಾಯಿಯನ್ನು ಮಕ್ಕಳು ’ಅಕ್ಕಾ” ಎಂದು ಕರೆಯುವುದನ್ನು ಕೇಳಿಲ್ಲವೇ ? ನನ್ನನ್ನು ಹಾಗೆ ಕರೆಯಬಾರದು; ’ಅಮ್ಮ’ನೆಂದು ಕರೆಯಬೇಕೆಂದು ಹೇಳಿ ತಾಯಿ ಕೋಪ ಮಾಡಿಕೊಳ್ಳುವುದಿಲ್ಲವಲ್ಲ. ತಾಯಿಗೆ ಕರೆ ಕೇಳುತ್ತಿರುತ್ತದೆ. ಇದರಂತೆ ಯಾವ ಹೆಸರು ಕರೆದರೂ ದೇವರು ಸ್ವೀಕರಿಸುವನು. ಅವನು ಸರ್ವಜ್ಞ.

ಒಲವಿನ ಮಕ್ಕಳೇ, ಒಂದೊಂದು ಹೆಜ್ಜೆ ಇಡುವಾಗ ನಾಮ ಜಪಿಸಲಿಕ್ಕೂ, ಸದಾ ಅವನ ರೂಪ ಸ್ಮರಿಸಲಿಕ್ಕೂ ಮರೆಯದಿರಿ. ಅವನು ರಕ್ಷಿಸುತ್ತಾನೆ.”

ಪ್ರಶ್ನೆ: ಗುಣಾತೀತನಾದ ದೇವರು ಗುಣಗಳಿಗೆ ಹೇಗೆ ಬರಲು ಸಾಧ್ಯ ? ಅವತಾರ ಪುರುಷರು ಬೇರೆಯವರನ್ನು ಪ್ರೀತಿಸುವುದೂ, ಅವರಲ್ಲಿ ಕರುಣೆ ತೋರಿಸುವುದೂ ಇತ್ಯಾದಿ ಮಾಡುವಾಗ, ಅವರು ಗುಣದ ಸ್ತರದಲ್ಲಲ್ಲವೇ ಇರುವುದು ?
ಭಗವಂತನು ಗುಣಾತೀತನೇ. ಅವನು ಚಲಿಸುವುದಿಲ್ಲ. ಅವನು ಆ ಸ್ವರೂಪವಾಗಿಯೇ ನೆಲೆನಿಂತಿರುತ್ತಾನೆ. ಸೂರ್ಯನ ಸ್ವಭಾವ ಬೆಳಕು. ಅವನು ಯಾರಿಗೂ ಪ್ರತ್ಯೇಕವಾಗಿ ಬೆಳಕು ನೀಡುವುದಿಲ್ಲ. ಮರೆ ಸರಿಸಿದಾಗ ನಿಮಗೂ ಬೆಳಕು ಸಿಗುವುದು. ದೇವರೆಂದರೆ ಒಂದು ವೃಕ್ಷದ ಹಾಗೆ. ಅದರ ಸ್ವಭಾವ ನೆರಳೂ ತಂಪೂ. ಅಲ್ಲಿ ಮುಟ್ಟಿದರೆ ನಿಮಗೂ ಅದು ದೊರಕುವುದು. ಇದೇ ತರಹ ಅವತಾರ ಪುರುಷರು ನಿಮಗೆ ಬೇಕಾಗಿ ಮಾತ್ರ ಕೃಪೆ ಸುರಿಸುವುದಲ್ಲ. ಹಾಗೆ ಆಗಿರುತ್ತಿದ್ದರೆ ದೇವರು ಗುಣಗಳ ಸ್ಥರಕ್ಕೆ ಬರುತ್ತಾನೆಂದು ಹೇಳಬಹುದಾಗಿತ್ತು. ಎಲ್ಲ ಗುಣಗಳೂ ಅವನದ್ದೇ, ಆವನು ಯಾವಾಗಲೂ ಆ ಗುಣಗಳನ್ನು ಸುರಿಸುತ್ತಿರುತ್ತಾನೆ. ಬೆಳಕು ಸಿಗಲು ನಾವು ಪರದೆಯನ್ನು ಸರಿಸುವಂತೆ, ನೆರಳೂ ತಂಪೂ ಸಿಗಲು ಮರದ ಬುಡ ತಲಪುವಂತೆ, ನಾವು ಭಗವಂತನ ಬಳಿ ಸಾರಿದರೆ ಅವನ ಗುಣಗಳು ನಮಗೆ ಹಬ್ಬುತ್ತದೆ.

ಪ್ರೇಮವು ಭಗವಂತನ ಸ್ವಭಾವ. ಗುಣಾತೀತನಾದ ಭಗವಂತನ ಸಾಮೀಪ್ಯದಲ್ಲಿ ನಿಮಗಿದೆಲ್ಲ ಲಭಿಸುವುದು. ಆದರೆ ಭಗವಂತನು ನಿಮಗೆ ಬೇಕಾಗಿ ಗುಣಗಳಿಗೆ ಇಳಿದು ಬರುತ್ತಾನೆಂದು ಹೇಳಲು ಬರುವುದಿಲ್ಲ. ಗುಣಗಳ ಸ್ತರಕ್ಕೆ ಹೋಗುತ್ತಾನೆಂದೂ ಹೇಳಲು ಸಾಧ್ಯವಿಲ್ಲ. ಭಗವಂತನೆಂದಿಗೂ ತನ್ನ ಲೋಕದಲ್ಲೇ ನೆಲೆಸಿರುತ್ತಾನೆ.

ಮಿಠಾಯಿ ನೋಡುವಾಗ ಮಕ್ಕಳಿಗೆ ಬಾಯಲ್ಲಿ ನೀರೂರುತ್ತದೆ. ಅದು ಅವರು ಮಿಠಾಯಿ ಮುಂಚೆಯೇ ರುಚಿ ನೋಡಿರುವ ಕಾರಣ. ರುಚಿ ನೋಡದ ಒಂದು ವಸ್ತು ಕಂಡಾಗ ನಿಮ್ಮ ಬಾಯಿಯಿಂದ ನೀರು ಬರುವುದಿಲ್ಲ. ಮಾಗಿದ ಮಾವಿನ ಹಣ್ಣನ್ನು ನೋಡಿದಾಗ, ಅದರ ಪರಿಮಳ ಒಳಗೆಳೆದುಕೊಂಡಾಗ, ಗೊತ್ತಿಲ್ಲದೆಯೇ ನಿಮಗದರಲ್ಲಿ ಆಸಕ್ತಿಯುಂಟಾಗುತ್ತದೆ. ಮೊದಲು ಅದನ್ನು ತಿಂದಿರುವುದೇ ಈ ತರಹವಾಗಲು ಕಾರಣ. ಅದರ ಬಗ್ಗೆ ಯೋಚಿಸಿದಾಗಲೇ ನಿಮಗೆ ಬಾಯಿಯಿಂದ ನೀರೂರಿದ್ದು. ಇದರಂತೆ, ಮಹಾತ್ಮರನ್ನು ನೋಡುವಾಗ ಆಂತರ್ಯದ ಸಂಸ್ಕಾರ ನಿಮಗರಿಯದೆ ಎಚ್ಚೆತ್ತುಕೊಳ್ಳುತ್ತದೆ. ನೀವು ಆ ಸಂಸ್ಕಾರದ ಮಾಲಕರು. ನೀವು ಅದರ ರುಚಿ ತಿಳಿದಿದ್ದಿರಿ. ಆದರೆ ಅದು ಎಚ್ಚರವಾದದ್ದು ಮಹಾತ್ಮರ ಸಾಮೀಪ್ಯದಿಂದ ಮಾತ್ರ. ಅದು ಬಿಟ್ಟು, ಅವರು ಗುಣಕ್ಕೆ ಬರುವುದಿಲ್ಲ.”

ಪ್ರಶ್ನೆ: ಸಾಧಕನು ಸಿಟ್ಟಾಗಬಾರದೆಂದು ಹೇಳುವುದು ಏತಕ್ಕಾಗಿ?
“ನಲ್ಮೆಯ ಮಕ್ಕಳೇ, ಒಬ್ಬ ಆಧ್ಯಾತ್ಮಿಕ ಜೀವಿಯು ಎಂದೂ ಕೋಪ ಮಾಡಬಾರದು. ಕೋಪವು ನಾವು ಸಾಧನೆಯ ಮೂಲಕ ಗಳಿಸಿದ ಶಕ್ತಿಯನ್ನು ನಷ್ಟಪಡಿಸುವುದು. ಗಾಡಿ ಓಡುತ್ತಿರಬೇಕಾದರೆ ಪೆಟ್ರೋಲ್ ಅಷ್ಟಾಗಿ ಖರ್ಚಾಗುವುದಿಲ್ಲ; ಆದರೆ ಬ್ರೇಕ್ ಅದುಮಿದಾಗ ಹೆಚ್ಚು ಖರ್ಚಾಗುತ್ತದೆ. ಇದೇ ರೀತಿ ಮಕ್ಕಳೇ, ಕೋಪ ಬಂದಾಗ. ಕೋಪ ಬಂದಾಗ ಬರೇ ಬಾಯಿಯಿಂದ ಮಾತ್ರವಲ್ಲ, ಪ್ರತಿಯೊಂದು ರೋಮ ಕೂಪದಿಂದಲೂ ಶಕ್ತಿಯ ವ್ಯಯವಾಗುತ್ತದೆ. ಒಂದು ಸಿಗರೇಟು ಲೈಟರನ್ನೂ ಹತ್ತಿಪ್ಪತ್ತು ಬಾರಿ ಅದುಮಿದರೆ ಅದರ ಪೆಟ್ರೋಲ್ ನಷ್ಟವಾಗುತ್ತದೆ. ಆದರೆ ಇದು ನಮಗೆ ಕಾಣಲು ಸಾಧ್ಯವಾಗುವುದಿಲ್ಲ; ಆದರೆ ಗೊತ್ತಾಗುತ್ತದೆ. ಇದೇ ಪ್ರಕಾರವಾಗಿ ಮಕ್ಕಳೇ, ಸದ್ಚಿಂತನೆಗಳಿಂದ ಗಳಿಸಿದ ಶಕ್ತಿಯು ಹಲವಾರು ಕಾರಣಗಳಿಂದಾಗಿ ನಷ್ಟವಾಗುತ್ತದೆ. ಇದನ್ನು ನಾವು ತಿಳಿದುಕೊಂಡಿರಬೇಕು.

ಮಕ್ಕಳೇ, ತುಂಬ ಹೆಚ್ಚಿನ ಎಚ್ಚರದಿಂದ ಮಾತ್ರ ಆಧ್ಯಾತ್ಮಿಕ ಜೀವಿಗೆ ಮುಂದುವರಿಯಲು ಸಾಧ್ಯವಾಗುವುದು. ಒಬ್ಬ ಸೂಜಿ ತೆಗೆದರೆ, ತೆಗೆಯುವಾಗಲೂ, ನೂಲು ಪೋಣಿಸುವಾಗಲೂ, ಹೊಲಿಯುವಾಗಲೂ, ಮರಳಿಡುವಾಗಲೂ ಎಷ್ಟೆಲ್ಲ ಎಚ್ಚರದಿಂದ ಮಾಡುತ್ತಾನೋ, ಅಷ್ಟು ಎಚ್ಚರ ನಮ್ಮ ಪ್ರತಿಯೊಂದು ಕೆಲಸದಲ್ಲೂ ಇರಬೇಕು. ಮಕ್ಕಳೇ, ನಿರಂತರವಾದ ಎಚ್ಚರ ಮಕ್ಕಳನ್ನು ಜಯಶಾಲಿಗಳನ್ನಾಗಿ ಮಾಡುವುದು. ಏನು ಕಂಡರೂ, ಏನು ಕೇಳಿದರೂ, ಏಕಾಂತದಲ್ಲಿ ವಿಚಾರ ಮಾಡಿ. ಅದರ ನಂತರವೇ ತೀರ್ಮಾನ ಮಾಡಬೇಕು. ಎಂದಿಗೂ, ಪರಿಸ್ಥಿತಿಯ ದಾಸರಾಗಬೇಡಿ. ಅವುಗಳಿಂದ ಪಾರಾಗಲೆತ್ನಿಸಿರಿ.

ಪ್ರಶ್ನೆ: ಬಹಳ ದಿನಗಳಿಂದ ಜಪವನ್ನೂ ಧ್ಯಾನವನ್ನೂ ತಪ್ಪದೆ ಮಾಡುತ್ತಿದ್ದೇನೆ. ಆದರೆ ಸರಿಯಾದ ಏಕಾಗ್ರತೆ ಇಷ್ಟು ದಿನಗಳಾದರೂ ನಾನು ಸಂಪಾದಿಸಿಲ್ಲ !
“ಮಕ್ಕಳೇ, ಇಷ್ಟು ದಿನವೂ ಮನಸ್ಸು ನಿತ್ಯ, ಶರೀರ ನಿತ್ಯ ಎಂದು ಕೊಂಡೆವು; ಆಸೆಗಳಿಗೆ ತಕ್ಕಂತೆ ಆಹಾರ ಕೊಟ್ಟು ಅವುಗಳನ್ನು ಪೋಷಿಸಿ ಬೆಳೆಸಿದೆವು. ಈಗ ಆತ್ಮವೇ ನಿತ್ಯವೆನ್ನುವಾಗ ಅವುಗಳು ಥಟ್ಟನೆ ತಲೆ ಬಾಗಿಸುವುದೇ ? ಇಲ್ಲ. ನಿರಂತರ ಅಭ್ಯಾಸದಿಂದಲೇ ಸಾಧ್ಯ. ದೋಣಿ ಮಾಡಲು ಉಪಯೋಗಿಸುವ ಹಲಗೆ ಬಗ್ಗುವಂತಾಗಲು ಅದಕ್ಕೆ ಸ್ವಲ್ಪ ಬಿಸಿ ಮುಟ್ಟಿಸುತ್ತಾರೆ. ಈ ಪ್ರಕಾರ ಜಪ ಧ್ಯಾನಗಳು ಉಂಟು ಮಾಡುವ ಬಿಸಿ. ಸರಳತೆ, ವಿನಯ ಮೊದಲಾದ ಭಾವಗಳು, ಇವೆಲ್ಲ ಇದ್ದರೆ ಮಾತ್ರವೇ ಮನದ ಅಹಂಕಾರವು ಪರಿವರ್ತನೆಯಾಗಿ ಆತ್ಮ ಸ್ವರೂಪವಾಗಲು ಸಾಧ್ಯ.

ಒಂದು ಪಾತ್ರೆಗೆ ಸೀಸ ಹಚ್ಚಬೇಕಾದರೆ, ಮೊದಲು ಸೀಸದಿಂದ ಕಷ್ಮಲವನ್ನು ಬೇರ್ಪಡಿಸಬೇಕು. ಇದೇ ಪ್ರಕಾರ ಮೊದಲು ನಮ್ಮೊಳಗಿನ ಕಲೆಗಳನ್ನು ನಿವಾರಿಸಿಕೊಳ್ಳಬೇಕು. ಅಲ್ಲದೆ ಹೋದರೆ ಎಷ್ಟು ಸಾಧನೆ ನಡೆಸಿದರೂ ಪ್ರಯೋಜನವಿಲ್ಲ. ಕಷ್ಮಲಗಳ ನಿವಾರಣೆಗೆ, ಈಶ್ವರನನ್ನು ಅತ್ತು ಪ್ರಾರ್ಥಿಸಬೇಕು.

ಏಕಾಗ್ರತೆ ಸಿಗುವುದಿಲ್ಲವೆಂದು ಹೇಳಿಕೊಂಡು ಮಗನು ಸಾಧನೆಗೆ ಭಂಗ ತರಬಾರದು. ಒಬ್ಬನಿಗೆ ತೆಂಗಿನ ಮರ ಹತ್ತಲು ಕಲಿಯಬೇಕು. ಒಂದೇ ದಿವಸದಲ್ಲಿ ಸಾಧ್ಯವೇ ? ಒಂದೊಂದು ಕಾಲು ಎತ್ತಿ ಮೇಲೆ ಇಟ್ಟು, ಕೈಗಳಿಂದ ಬಿಗಿಯಾಗಿ ಹಿಡಿದು, ಹತ್ತಲು ಪ್ರಯತ್ನಿಸಬೇಕು. ಕೆಲವೊಮ್ಮೆ ಚರ್ಮ ಸುಲಿದು ಹೋಗಲೂ ಬಹುದು. ಆದರೂ ಬಿಡದ ಪ್ರಯತ್ನದ ಫಲವಾಗಿ, ಅವನಿಗೆ ಯಾವ ತೆಂಗಿನ ಮರ ಹತ್ತಲೂ ಸಾಧ್ಯವಾಗುತ್ತದೆ. ಸರಿಯಾದ ಏಕಾಗ್ರತೆ ಆರಂಭದಲ್ಲಿ ಸಿಗುವುದಿಲ್ಲ. ಮಕ್ಕಳೇ, ಅದಕ್ಕೆ ನಿರಂತರ ಅಭ್ಯಾಸ ಬೇಕು.”

ಪ್ರಶ್ನೆ: ಅಮ್ಮಾ, ಬಹಳ ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ; ಆದರೂ ಯಾವೊಂದು ತರದ ಅನುಭವವೂ ಆಗಿಲ್ಲ.

“ಅಮ್ಮನನ್ನು ಕಾಣಲು ಬರುವ ಮಕ್ಕಳಲ್ಲಿ ಹಲವರು ಹೇಳುವ ಮಾತಿದು. ಗೃಹಸ್ಥಾಶ್ರಮಿ ಮಕ್ಕಳೂ ಹೇಳುತ್ತಾರೆ, ’ನಾವು ಎಷ್ಟೆಲ್ಲ ಧ್ಯಾನ ಮಾಡಿಯೂ, ಜಪ ಮಾಡಿಯೂ ದೊಡ್ಡ ಪ್ರಯೋಜನವೇನೂ ಆದ ಹಾಗೆ ಅನಿಸುವುದಿಲ್ಲ.’ ಎಂದು. ಮಕ್ಕಳೇ, ದೇವರನ್ನು ಪ್ರಾರ್ಥಿಸಲು, ಭಕ್ತಿಯಿಂದ ದೇವಸ್ಥಾನಕ್ಕೆ ಹೋಗುವೆವು. ದೇವಸ್ಥಾನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಪ್ರಾರ್ಥಿಸುತ್ತೇವೆ. ಮೂರ್ತಿಯೆದುರಿಗೆ ಕೈಜೋಡಿಸಿ ನಿಂತಿರುವಾಗ ನಮ್ಮೆದುರಿಗೆ ಯಾವನಾದರೂ ಬಂದು ನಿಂತುಕೊಂಡರೆ, ನಮ್ಮ ಚರ್ಯೆ ಬದಲಾಗುತ್ತದೆ. ಅವನ ಮೇಲೆ ಸಿಟ್ಟು ಬರುತ್ತದೆ. ಆಗ ಅಲ್ಲಿಯ ತನಕ ಏಕಾಗ್ರತೆಯಿಂದ ಗಳಿಸಿದ ಶಕ್ತಿಯ ಎರಡರಷ್ಟು ಪಾಲು ನಷ್ಟವಾಗುತ್ತದೆ. ಕ್ಷೇತ್ರದಿಂದ ಹೊರಗೆ ಬರುವಾಗ ಬಾಗಿಲಲ್ಲಿರುವ ಭಿಕ್ಷುಕನು ಏನಾದರೂ ಮಾತನಾಡಿದರೆ ಅವನನ್ನು ಒದೆಯಲೂ ನಾವು ಹೇಸುವುದಿಲ್ಲ. ಇದಲ್ಲ ಮಕ್ಕಳೇ, ಭಕ್ತಿ. ಆ ಭಿಕ್ಷೆ ಬೇಡುವವನಿಗೆ ತೋರಿಸುವ ಕರುಣೆಯೇ, ದೇವಾಲಯದಲ್ಲಿರುವ ಈಶ್ವರನ ಪ್ರೇಮಕ್ಕೆ ನಮ್ಮನ್ನು ಪಾತ್ರರನ್ನಾಗಿಸುವುದು. ಇದು ನಮ್ಮಿಂದ ಆಗುವುದಿಲ್ಲ. ಮತ್ತೆ ಹೇಗೆ ನಮಗೆ ಅನುಭೂತಿ ಸಿಗುವದು ? ದೇವರೇ ವೇಷ ಬದಲಿಸಿ ಬೇರೆ ರೂಪದಲ್ಲಿ ಬಂದರೂ ನಾವು ಸಿಟ್ಟು ಮಾಡುತ್ತೇವೆ. ಇದು ನಮ್ಮ ಸ್ವಭಾವ. ಮತ್ತೆ ಹೇಗೆ ಮಕ್ಕಳೇ ಪ್ರಯೋಜನ ಸಿಕ್ಕುವುದು ?

ಪ್ರೀತಿಯ ಮಕ್ಕಳೇ, ಸಮತ್ವ ಭಾವನೆಯೇ ದೈವತ್ವಕ್ಕೊಯ್ಯುವ ದಾರಿ. ದೇವರಿಗೆ ಹತ್ತಿರವಾಗಬೇಕಾದರೆ ಎಲ್ಲರನ್ನೂ ಸಮನಾಗಿ ಕಾಣಲು ಪ್ರಯತ್ನಿಸಬೇಕು. ಎಲ್ಲರಲ್ಲೂ ಸಮನಾದ ಪ್ರೇಮವಿದ್ದರೆ ಮಾತ್ರ ಭಗವಂತನು ನಮ್ಮನ್ನು ಸ್ವೀಕರಿಸುವನು. ದೇವರಿಗೆ ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲ. ಎಲ್ಲರೂ ಸಮಾನರು.

ಈ ಲೋಕದಲ್ಲಿ ನಮಗೇನಾದರೊಂದು ಕಾರ್ಯದಲ್ಲಿ ಮುಂದುವರಿಯಲು ಯಾರ ಒಪ್ಪಿಗೆಯೋ, ಸರ್ಟಿಫಿಕೇಟೋ ಬೇಕಾಗಿಲ್ಲ. ಆದರೆ ಈಶ್ವರನ ಲೋಕ ಮುಟ್ಟಬೇಕಾದರೆ ಮಾತ್ರ ಒಂದು ಇರುವೆಯೆದುರಿಗೂ ಸಹ ತಲೆ ಬಾಗಿಸುವ ಮನೋಭಾವ ನಮಗಿರಬೇಕು. ಭಗವಾನನ ಹತ್ತಿರ ಸೇರಲು ಎನ್.ಓ.ಸಿ. ಬೇಕಾಗಿದ್ದರೆ, ಒಂದು ಇರುವೆಯ ಸಹಿ ಕೂಡಾ ಅವಶ್ಯ. ಅಂದರೆ ಮಾತ್ರ, ಭಗವಂತನು ನಮ್ಮ ಮನಸ್ಸನ್ನು ಆತ್ಮಲೋಕಕ್ಕೊಯ್ಯುವನು. ಅದಕ್ಕಾಗಿ, ಎಲ್ಲಾ ಜೀವಜಂತುಗಳ ಪ್ರತಿ ಪ್ರೇಮವನ್ನೂ, ಕರುಣೆಯನ್ನೂ, ವಿಶಾಲತೆಯನ್ನೂ ಮಕ್ಕಳು ಬೆಳೆಸಿಕೊಳ್ಳಬೇಕು.

ಮಕ್ಕಳೇ, ಅವರವರ ಜಗತ್ತಿನಲ್ಲಿ ಅವರವರು ದೊಡ್ಡವರು. ಒಂದು ಸೊಳ್ಳೆಗೂ ಸಹ ತನ್ನ ಜಗತ್ತೇ ಬೇರೆಲ್ಲದ್ದಕ್ಕಿಂತಲೂ ಮಿಗಿಲು.

ಸ್ನೇಹಿತರಾದ ಇಬ್ಬರು ಜ್ಯೋತಿಷಿಗಳಿದ್ದರು. ತಮ್ಮ ಭಾವೀ ಜನ್ಮದ ಬಗ್ಗೆ ತಿಳಿದುಕೊಳ್ಳಲು ಅವರು ಪ್ರಶ್ನೆ ಹಾಕಿ ನೋಡಿದರು. ಮುಂಬರುವ ಜನ್ಮದಲ್ಲಿ ಒಬ್ಬನು ಸೊಳ್ಳೆಯಾಗಿಯೂ ಇನ್ನೊಬ್ಬನು ದನವಾಗಿಯೂ ಹುಟ್ಟುವರೆಂದೂ ಅಲ್ಲದೆ ಪರಸ್ಪರರನ್ನು ಕಂಡು ಹುಡುಕುತ್ತಾರೆಂದೂ ಅವರಿಗೆ ತಿಳಿದು ಬಂತು. ಸೊಳ್ಳೆಯಾಗಿ ಜನಿಸಲಿರುವವನು ತನ್ನ ಗೆಳೆಯನಿಗೆ ಹೇಳುತ್ತಾನೆ, ’ಬರುವ ಜನ್ಮದಲ್ಲಿ ನಾವು ಹೇಗೂ ಭೇಟಿಯಾತ್ತೇವಲ್ಲವೇ. ಆಗ ನೀನು ನನ್ನನ್ನು ಹೊಸಕಿ ಕೊಲ್ಲಬೇಕು. ಹೀಗೆ ಈ ನಿಕೃಷ್ಟ ಜೀವನದಿಂದ ಮೋಕ್ಷ ಗಳಿಸಿ, ಬೇಗನೆ ನನಗೆ ಭಗವಂತನೆಡೆ ಮುಟ್ಟಬಹುದು.’

ಗೆಳೆಯನೂ ಸಮ್ಮತಿಸಿದ. ಇಬ್ಬರೂ ಮರಣಾನಂತರ ಹಿಂದಿನ ಜನ್ಮದಲ್ಲಿ ಅವರು ಕಂಡಿದ್ದಂತೆ, ಸೊಳ್ಳೆಯಾಗಿಯೂ ದನವಾಗಿಯೂ ಜೀವಿಸುತ್ತಾರೆ. ದನಕ್ಕೆ ಪೂರ್ವ ಜನ್ಮದ ಸ್ಮರಣೆ ಸ್ಫುರಿಸಿತು. ಸಂಗಡಿಗ ಸೊಳ್ಳೆಯಾಗಿ ವಾಸಿಸುತ್ತಿರುವ ಕೊಳಕು ಚರಂಡಿಯನ್ನು ಹೇಗಾದರೂ ಬಹಳ ಕಷ್ಟದಿಂದ ದನ ತಲುಪಿತು. ಗೆಳೆಯನ ಪರಿಸ್ಥಿತಿ ನೋಡಿ ದನಕ್ಕೆ ತುಂಬಾ ಪರಿತಾಪವೆನಿಸಿತು. ಕಳೆದ ಜನ್ಮದಲ್ಲಿ ಮಾತುಕೊಟ್ಟಿದ್ದ ಹಾಗೆ ಸೊಳ್ಳೆಯನ್ನು ತನ್ನ ಗೊರಸಿನಡಿಯಲ್ಲಿ ಹೊಸಕಿ ಕೊಲ್ಲಲೆಂದು ಅದು ಮುಂದೆ ಹಾಯಿತು. ಥಟ್ಟನೆ ಸೊಳ್ಳೆ ಚೀತ್ಕರಿಸುತ್ತ ಹೇಳುತ್ತದೆ, ’ನೀನು ಎಂಥ ಕ್ರೂರ ಕೃತ್ಯವೆಸಗಲು ಹೊರಟಿರುವುದು ?’ ’ಅವತ್ತು ನೀನು ಹೇಳಿಲ್ಲವೇ, ಸೊಳ್ಳೆಯಾಗಿದ್ದು ಕಷ್ಟವನುಭವಿಸುವುದನ್ನೊಲ್ಲೆ. ಆ ನಿಕೃಷ್ಟ ಜೀವನದಿಂದ ವಿಮೋಚನೆ ಹೊಂದಿ ಭಗವಂತನೆಡೆ ಮುಟ್ಟಬಹುದು’ ಎಂದು. ದನದ ಮಾತು ಕೇಳಿ ನಕ್ಕೊಂಡು ಸೊಳ್ಳೆ ಹೇಳುತ್ತದೆ, ’ಸರಿಯಾಗಿ ಇರಿದೆ ನೀನು. ಇದು ನಿಕೃಷ್ಟ ಜೀವನವೇ ? ಈ ಬಾಳು ಎಷ್ಟು ಸುಂದರ, ಎಷ್ಟು ಸುಖಕರ ಎಂಬುದರ ಬಗ್ಗೆ ನಿಮಗರಿವಿದೆಯೇ ? ನನಗೂ ಚೆಲುವೆಯಾದ ಹೆಂಡತಿ, ಚಂದದ ಪುಟ್ಟ ಮಕ್ಕಳು, ಇದ್ದಾರೆ. ನನಗೇನೂ ಭಗವಂತನ ಲೋಕದಲ್ಲಿ ಸುತ್ತ ಬೇಕಾಗಿಲ್ಲ. ಈ ಜಗತ್ತೊಂದು ಬಿಟ್ಟರೆ ನನಗೆ ಬೇರೆ ಯಾವ ಲೋಕವೂ ಕಾಣಿಸುತ್ತಿಲ್ಲ. ನನಗೆ ಇಲ್ಲಿಯೇ ಬದುಕಿದರೆ ಸಾಕು.’ ಮಕ್ಕಳೇ, ಇದುವೇ ಪ್ರತಿಯೊಬ್ಬರದ್ದೂ ಕಥೆ.

ಒಂದು ಸೊಳ್ಳೆಗೂ ಸಹ ತನ್ನ ಬದುಕೇ ಶ್ರೇಷ್ಠ. ಹಾಗೆಯೇ, ಲೌಕಿಕದಲ್ಲಿ ಜೀವಿಸುತ್ತಿರುವ ನಾವು ಅದುವೇ ಅತ್ಯಂತ ಉತ್ತಮವೆಂದು ಭಾವಿಸುತ್ತೇವೆ. ಬರೇ ಮನುಷ್ಯನಾಗಿ ಹುಟ್ಟಿ, ಪ್ರಾಣಿಯಾಗಿ ಜೀವನ ನಡೆಸುವವರು ಮಾತ್ರವೇ ಲೌಕಿಕ ಜೀವನದಲ್ಲಿ ಆನಂದವಿದೆಯೆಂದು ಹೇಳುವರು. ಆ ಸೊಳ್ಳೆಯು ಅನುಭವಿಸಿಕೊಂಡಿದ್ದ ಸುಖಕ್ಕಿಂತ ಒಂದಿನಿತೂ ಭಿನ್ನವಲ್ಲ ಪ್ರಾಪಂಚಿಕ ಸುಖವೆಂಬುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಈಶ್ವರನನ್ನು ಆಶ್ರಯಿಸುವುದರಿಂದ ಮಾತ್ರವೇ ಸಂಸಾರ ದುಃಖದಿಂದ ವಿಮೋಚನೆ ಹೊಂದಲೂ, ಯಥಾರ್ಥ ಆನಂದ ಸವಿಯಲೂ ಸಾಧ್ಯ.”