ಪ್ರಶ್ನೆ: ಅಮ್ಮಾ, ಬಹಳ ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ; ಆದರೂ ಯಾವೊಂದು ತರದ ಅನುಭವವೂ ಆಗಿಲ್ಲ.

“ಅಮ್ಮನನ್ನು ಕಾಣಲು ಬರುವ ಮಕ್ಕಳಲ್ಲಿ ಹಲವರು ಹೇಳುವ ಮಾತಿದು. ಗೃಹಸ್ಥಾಶ್ರಮಿ ಮಕ್ಕಳೂ ಹೇಳುತ್ತಾರೆ, ’ನಾವು ಎಷ್ಟೆಲ್ಲ ಧ್ಯಾನ ಮಾಡಿಯೂ, ಜಪ ಮಾಡಿಯೂ ದೊಡ್ಡ ಪ್ರಯೋಜನವೇನೂ ಆದ ಹಾಗೆ ಅನಿಸುವುದಿಲ್ಲ.’ ಎಂದು. ಮಕ್ಕಳೇ, ದೇವರನ್ನು ಪ್ರಾರ್ಥಿಸಲು, ಭಕ್ತಿಯಿಂದ ದೇವಸ್ಥಾನಕ್ಕೆ ಹೋಗುವೆವು. ದೇವಸ್ಥಾನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಪ್ರಾರ್ಥಿಸುತ್ತೇವೆ. ಮೂರ್ತಿಯೆದುರಿಗೆ ಕೈಜೋಡಿಸಿ ನಿಂತಿರುವಾಗ ನಮ್ಮೆದುರಿಗೆ ಯಾವನಾದರೂ ಬಂದು ನಿಂತುಕೊಂಡರೆ, ನಮ್ಮ ಚರ್ಯೆ ಬದಲಾಗುತ್ತದೆ. ಅವನ ಮೇಲೆ ಸಿಟ್ಟು ಬರುತ್ತದೆ. ಆಗ ಅಲ್ಲಿಯ ತನಕ ಏಕಾಗ್ರತೆಯಿಂದ ಗಳಿಸಿದ ಶಕ್ತಿಯ ಎರಡರಷ್ಟು ಪಾಲು ನಷ್ಟವಾಗುತ್ತದೆ. ಕ್ಷೇತ್ರದಿಂದ ಹೊರಗೆ ಬರುವಾಗ ಬಾಗಿಲಲ್ಲಿರುವ ಭಿಕ್ಷುಕನು ಏನಾದರೂ ಮಾತನಾಡಿದರೆ ಅವನನ್ನು ಒದೆಯಲೂ ನಾವು ಹೇಸುವುದಿಲ್ಲ. ಇದಲ್ಲ ಮಕ್ಕಳೇ, ಭಕ್ತಿ. ಆ ಭಿಕ್ಷೆ ಬೇಡುವವನಿಗೆ ತೋರಿಸುವ ಕರುಣೆಯೇ, ದೇವಾಲಯದಲ್ಲಿರುವ ಈಶ್ವರನ ಪ್ರೇಮಕ್ಕೆ ನಮ್ಮನ್ನು ಪಾತ್ರರನ್ನಾಗಿಸುವುದು. ಇದು ನಮ್ಮಿಂದ ಆಗುವುದಿಲ್ಲ. ಮತ್ತೆ ಹೇಗೆ ನಮಗೆ ಅನುಭೂತಿ ಸಿಗುವದು ? ದೇವರೇ ವೇಷ ಬದಲಿಸಿ ಬೇರೆ ರೂಪದಲ್ಲಿ ಬಂದರೂ ನಾವು ಸಿಟ್ಟು ಮಾಡುತ್ತೇವೆ. ಇದು ನಮ್ಮ ಸ್ವಭಾವ. ಮತ್ತೆ ಹೇಗೆ ಮಕ್ಕಳೇ ಪ್ರಯೋಜನ ಸಿಕ್ಕುವುದು ?

ಪ್ರೀತಿಯ ಮಕ್ಕಳೇ, ಸಮತ್ವ ಭಾವನೆಯೇ ದೈವತ್ವಕ್ಕೊಯ್ಯುವ ದಾರಿ. ದೇವರಿಗೆ ಹತ್ತಿರವಾಗಬೇಕಾದರೆ ಎಲ್ಲರನ್ನೂ ಸಮನಾಗಿ ಕಾಣಲು ಪ್ರಯತ್ನಿಸಬೇಕು. ಎಲ್ಲರಲ್ಲೂ ಸಮನಾದ ಪ್ರೇಮವಿದ್ದರೆ ಮಾತ್ರ ಭಗವಂತನು ನಮ್ಮನ್ನು ಸ್ವೀಕರಿಸುವನು. ದೇವರಿಗೆ ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲ. ಎಲ್ಲರೂ ಸಮಾನರು.

ಈ ಲೋಕದಲ್ಲಿ ನಮಗೇನಾದರೊಂದು ಕಾರ್ಯದಲ್ಲಿ ಮುಂದುವರಿಯಲು ಯಾರ ಒಪ್ಪಿಗೆಯೋ, ಸರ್ಟಿಫಿಕೇಟೋ ಬೇಕಾಗಿಲ್ಲ. ಆದರೆ ಈಶ್ವರನ ಲೋಕ ಮುಟ್ಟಬೇಕಾದರೆ ಮಾತ್ರ ಒಂದು ಇರುವೆಯೆದುರಿಗೂ ಸಹ ತಲೆ ಬಾಗಿಸುವ ಮನೋಭಾವ ನಮಗಿರಬೇಕು. ಭಗವಾನನ ಹತ್ತಿರ ಸೇರಲು ಎನ್.ಓ.ಸಿ. ಬೇಕಾಗಿದ್ದರೆ, ಒಂದು ಇರುವೆಯ ಸಹಿ ಕೂಡಾ ಅವಶ್ಯ. ಅಂದರೆ ಮಾತ್ರ, ಭಗವಂತನು ನಮ್ಮ ಮನಸ್ಸನ್ನು ಆತ್ಮಲೋಕಕ್ಕೊಯ್ಯುವನು. ಅದಕ್ಕಾಗಿ, ಎಲ್ಲಾ ಜೀವಜಂತುಗಳ ಪ್ರತಿ ಪ್ರೇಮವನ್ನೂ, ಕರುಣೆಯನ್ನೂ, ವಿಶಾಲತೆಯನ್ನೂ ಮಕ್ಕಳು ಬೆಳೆಸಿಕೊಳ್ಳಬೇಕು.

ಮಕ್ಕಳೇ, ಅವರವರ ಜಗತ್ತಿನಲ್ಲಿ ಅವರವರು ದೊಡ್ಡವರು. ಒಂದು ಸೊಳ್ಳೆಗೂ ಸಹ ತನ್ನ ಜಗತ್ತೇ ಬೇರೆಲ್ಲದ್ದಕ್ಕಿಂತಲೂ ಮಿಗಿಲು.

ಸ್ನೇಹಿತರಾದ ಇಬ್ಬರು ಜ್ಯೋತಿಷಿಗಳಿದ್ದರು. ತಮ್ಮ ಭಾವೀ ಜನ್ಮದ ಬಗ್ಗೆ ತಿಳಿದುಕೊಳ್ಳಲು ಅವರು ಪ್ರಶ್ನೆ ಹಾಕಿ ನೋಡಿದರು. ಮುಂಬರುವ ಜನ್ಮದಲ್ಲಿ ಒಬ್ಬನು ಸೊಳ್ಳೆಯಾಗಿಯೂ ಇನ್ನೊಬ್ಬನು ದನವಾಗಿಯೂ ಹುಟ್ಟುವರೆಂದೂ ಅಲ್ಲದೆ ಪರಸ್ಪರರನ್ನು ಕಂಡು ಹುಡುಕುತ್ತಾರೆಂದೂ ಅವರಿಗೆ ತಿಳಿದು ಬಂತು. ಸೊಳ್ಳೆಯಾಗಿ ಜನಿಸಲಿರುವವನು ತನ್ನ ಗೆಳೆಯನಿಗೆ ಹೇಳುತ್ತಾನೆ, ’ಬರುವ ಜನ್ಮದಲ್ಲಿ ನಾವು ಹೇಗೂ ಭೇಟಿಯಾತ್ತೇವಲ್ಲವೇ. ಆಗ ನೀನು ನನ್ನನ್ನು ಹೊಸಕಿ ಕೊಲ್ಲಬೇಕು. ಹೀಗೆ ಈ ನಿಕೃಷ್ಟ ಜೀವನದಿಂದ ಮೋಕ್ಷ ಗಳಿಸಿ, ಬೇಗನೆ ನನಗೆ ಭಗವಂತನೆಡೆ ಮುಟ್ಟಬಹುದು.’

ಗೆಳೆಯನೂ ಸಮ್ಮತಿಸಿದ. ಇಬ್ಬರೂ ಮರಣಾನಂತರ ಹಿಂದಿನ ಜನ್ಮದಲ್ಲಿ ಅವರು ಕಂಡಿದ್ದಂತೆ, ಸೊಳ್ಳೆಯಾಗಿಯೂ ದನವಾಗಿಯೂ ಜೀವಿಸುತ್ತಾರೆ. ದನಕ್ಕೆ ಪೂರ್ವ ಜನ್ಮದ ಸ್ಮರಣೆ ಸ್ಫುರಿಸಿತು. ಸಂಗಡಿಗ ಸೊಳ್ಳೆಯಾಗಿ ವಾಸಿಸುತ್ತಿರುವ ಕೊಳಕು ಚರಂಡಿಯನ್ನು ಹೇಗಾದರೂ ಬಹಳ ಕಷ್ಟದಿಂದ ದನ ತಲುಪಿತು. ಗೆಳೆಯನ ಪರಿಸ್ಥಿತಿ ನೋಡಿ ದನಕ್ಕೆ ತುಂಬಾ ಪರಿತಾಪವೆನಿಸಿತು. ಕಳೆದ ಜನ್ಮದಲ್ಲಿ ಮಾತುಕೊಟ್ಟಿದ್ದ ಹಾಗೆ ಸೊಳ್ಳೆಯನ್ನು ತನ್ನ ಗೊರಸಿನಡಿಯಲ್ಲಿ ಹೊಸಕಿ ಕೊಲ್ಲಲೆಂದು ಅದು ಮುಂದೆ ಹಾಯಿತು. ಥಟ್ಟನೆ ಸೊಳ್ಳೆ ಚೀತ್ಕರಿಸುತ್ತ ಹೇಳುತ್ತದೆ, ’ನೀನು ಎಂಥ ಕ್ರೂರ ಕೃತ್ಯವೆಸಗಲು ಹೊರಟಿರುವುದು ?’ ’ಅವತ್ತು ನೀನು ಹೇಳಿಲ್ಲವೇ, ಸೊಳ್ಳೆಯಾಗಿದ್ದು ಕಷ್ಟವನುಭವಿಸುವುದನ್ನೊಲ್ಲೆ. ಆ ನಿಕೃಷ್ಟ ಜೀವನದಿಂದ ವಿಮೋಚನೆ ಹೊಂದಿ ಭಗವಂತನೆಡೆ ಮುಟ್ಟಬಹುದು’ ಎಂದು. ದನದ ಮಾತು ಕೇಳಿ ನಕ್ಕೊಂಡು ಸೊಳ್ಳೆ ಹೇಳುತ್ತದೆ, ’ಸರಿಯಾಗಿ ಇರಿದೆ ನೀನು. ಇದು ನಿಕೃಷ್ಟ ಜೀವನವೇ ? ಈ ಬಾಳು ಎಷ್ಟು ಸುಂದರ, ಎಷ್ಟು ಸುಖಕರ ಎಂಬುದರ ಬಗ್ಗೆ ನಿಮಗರಿವಿದೆಯೇ ? ನನಗೂ ಚೆಲುವೆಯಾದ ಹೆಂಡತಿ, ಚಂದದ ಪುಟ್ಟ ಮಕ್ಕಳು, ಇದ್ದಾರೆ. ನನಗೇನೂ ಭಗವಂತನ ಲೋಕದಲ್ಲಿ ಸುತ್ತ ಬೇಕಾಗಿಲ್ಲ. ಈ ಜಗತ್ತೊಂದು ಬಿಟ್ಟರೆ ನನಗೆ ಬೇರೆ ಯಾವ ಲೋಕವೂ ಕಾಣಿಸುತ್ತಿಲ್ಲ. ನನಗೆ ಇಲ್ಲಿಯೇ ಬದುಕಿದರೆ ಸಾಕು.’ ಮಕ್ಕಳೇ, ಇದುವೇ ಪ್ರತಿಯೊಬ್ಬರದ್ದೂ ಕಥೆ.

ಒಂದು ಸೊಳ್ಳೆಗೂ ಸಹ ತನ್ನ ಬದುಕೇ ಶ್ರೇಷ್ಠ. ಹಾಗೆಯೇ, ಲೌಕಿಕದಲ್ಲಿ ಜೀವಿಸುತ್ತಿರುವ ನಾವು ಅದುವೇ ಅತ್ಯಂತ ಉತ್ತಮವೆಂದು ಭಾವಿಸುತ್ತೇವೆ. ಬರೇ ಮನುಷ್ಯನಾಗಿ ಹುಟ್ಟಿ, ಪ್ರಾಣಿಯಾಗಿ ಜೀವನ ನಡೆಸುವವರು ಮಾತ್ರವೇ ಲೌಕಿಕ ಜೀವನದಲ್ಲಿ ಆನಂದವಿದೆಯೆಂದು ಹೇಳುವರು. ಆ ಸೊಳ್ಳೆಯು ಅನುಭವಿಸಿಕೊಂಡಿದ್ದ ಸುಖಕ್ಕಿಂತ ಒಂದಿನಿತೂ ಭಿನ್ನವಲ್ಲ ಪ್ರಾಪಂಚಿಕ ಸುಖವೆಂಬುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಈಶ್ವರನನ್ನು ಆಶ್ರಯಿಸುವುದರಿಂದ ಮಾತ್ರವೇ ಸಂಸಾರ ದುಃಖದಿಂದ ವಿಮೋಚನೆ ಹೊಂದಲೂ, ಯಥಾರ್ಥ ಆನಂದ ಸವಿಯಲೂ ಸಾಧ್ಯ”.

ಪ್ರಶ್ನೆ: ಸಾಧಕನು ಸಿಟ್ಟಾಗಬಾರದೆಂದು ಹೇಳುವುದು ಏತಕ್ಕಾಗಿ?

“ನಲ್ಮೆಯ ಮಕ್ಕಳೇ, ಒಬ್ಬ ಆಧ್ಯಾತ್ಮಿಕ ಜೀವಿಯು ಎಂದೂ ಕೋಪ ಮಾಡಬಾರದು. ಕೋಪವು ನಾವು ಸಾಧನೆಯ ಮೂಲಕ ಗಳಿಸಿದ ಶಕ್ತಿಯನ್ನು ನಷ್ಟಪಡಿಸುವುದು. ಗಾಡಿ ಓಡುತ್ತಿರಬೇಕಾದರೆ ಪೆಟ್ರೋಲ್ ಅಷ್ಟಾಗಿ ಖರ್ಚಾಗುವುದಿಲ್ಲ; ಆದರೆ ಬ್ರೇಕ್ ಅದುಮಿದಾಗ ಹೆಚ್ಚು ಖರ್ಚಾಗುತ್ತದೆ. ಇದೇ ರೀತಿ ಮಕ್ಕಳೇ, ಕೋಪ ಬಂದಾಗ. ಕೋಪ ಬಂದಾಗ ಬರೇ ಬಾಯಿಯಿಂದ ಮಾತ್ರವಲ್ಲ, ಪ್ರತಿಯೊಂದು ರೋಮ ಕೂಪದಿಂದಲೂ ಶಕ್ತಿಯ ವ್ಯಯವಾಗುತ್ತದೆ. ಒಂದು ಸಿಗರೇಟು ಲೈಟರನ್ನೂ ಹತ್ತಿಪ್ಪತ್ತು ಬಾರಿ ಅದುಮಿದರೆ ಅದರ ಪೆಟ್ರೋಲ್ ನಷ್ಟವಾಗುತ್ತದೆ. ಆದರೆ ಇದು ನಮಗೆ ಕಾಣಲು ಸಾಧ್ಯವಾಗುವುದಿಲ್ಲ; ಆದರೆ ಗೊತ್ತಾಗುತ್ತದೆ. ಇದೇ ಪ್ರಕಾರವಾಗಿ ಮಕ್ಕಳೇ, ಸದ್ಚಿಂತನೆಗಳಿಂದ ಗಳಿಸಿದ ಶಕ್ತಿಯು ಹಲವಾರು ಕಾರಣಗಳಿಂದಾಗಿ ನಷ್ಟವಾಗುತ್ತದೆ. ಇದನ್ನು ನಾವು ತಿಳಿದುಕೊಂಡಿರಬೇಕು.

ಮಕ್ಕಳೇ, ತುಂಬ ಹೆಚ್ಚಿನ ಎಚ್ಚರದಿಂದ ಮಾತ್ರ ಆಧ್ಯಾತ್ಮಿಕ ಜೀವಿಗೆ ಮುಂದುವರಿಯಲು ಸಾಧ್ಯವಾಗುವುದು. ಒಬ್ಬ ಸೂಜಿ ತೆಗೆದರೆ, ತೆಗೆಯುವಾಗಲೂ, ನೂಲು ಪೋಣಿಸುವಾಗಲೂ, ಹೊಲಿಯುವಾಗಲೂ, ಮರಳಿಡುವಾಗಲೂ ಎಷ್ಟೆಲ್ಲ ಎಚ್ಚರದಿಂದ ಮಾಡುತ್ತಾನೋ, ಅಷ್ಟು ಎಚ್ಚರ ನಮ್ಮ ಪ್ರತಿಯೊಂದು ಕೆಲಸದಲ್ಲೂ ಇರಬೇಕು. ಮಕ್ಕಳೇ, ನಿರಂತರವಾದ ಎಚ್ಚರ ಮಕ್ಕಳನ್ನು ಜಯಶಾಲಿಗಳನ್ನಾಗಿ ಮಾಡುವುದು. ಏನು ಕಂಡರೂ, ಏನು ಕೇಳಿದರೂ, ಏಕಾಂತದಲ್ಲಿ ವಿಚಾರ ಮಾಡಿ. ಅದರ ನಂತರವೇ ತೀರ್ಮಾನ ಮಾಡಬೇಕು. ಎಂದಿಗೂ, ಪರಿಸ್ಥಿತಿಯ ದಾಸರಾಗಬೇಡಿ. ಅವುಗಳಿಂದ ಪಾರಾಗಲೆತ್ನಿಸಿರಿ.

ನಿಷ್ಕಾಮ ಸೇವೆಯಿಂದಾಗಿ ನಮಗೆಯೇ ಆನಂದ. ಅನೇಕ ದಿನಗಳಿಂದ ಉಪವಾಸವಿರುವ ಮನೆ; ಹಸಿವೆಯಿಂದ ಮಕ್ಕಳಿಗೆ ಕೂಗಲೂ ತ್ರಾಣವಿಲ್ಲದಾಗಿದೆ. ತಂದೆ ತಾಯಿ ಸೇರಿ ತಿರುಪೆ ಎತ್ತಲಿಕ್ಕೆ ತೊಡಗಿದರು. ಸಿಗುವ ಆಹಾರವೋ ಬಹಳ ಕಮ್ಮಿ. ಮಕ್ಕಳಿಗೆ ಏನೂ ಸಾಲದು. ಅದನ್ನು ಅವರು ಮಕ್ಕಳಿಗೆ ಹಂಚುತ್ತಾರೆ. ತಮ್ಮ ಮಕ್ಕಳು ಅದನ್ನು ಉಣ್ಣುವುದನ್ನು ನೋಡುವಾಗ ಆ ತಂದೆಗೂ ತಾಯಿಗೂ ಅರ್ಧ ಹೊಟ್ಟೆ ತುಂಬುವುದು. ಈ ತೆರನ ಒಂದು ಹೊಣೆಗಾರಿಕೆಯನ್ನು ನಾವು ಜಗತ್ತಿನಲ್ಲಿ ಸೃಷ್ಟಿಸಬೇಕು. ನಮಗೆಯೇ ಅದರಿಂದ ಆನಂದವಾಗುವುದು. ಹೂವನ್ನು ದೇವರಿಗೆ ಕೊಯ್ಯುವಾಗ ಅದರ ಸುಗಂಧವನ್ನೂ ಸೌಂದರ್ಯವನ್ನೂ ಅರಿವಿಲ್ಲದೆಯೇ ನಾವು ತಾನೆ ಆಸ್ವಾದಿಸುವುದು. ಇದೇ ರೀತಿಯಾಗಿ, ಈ ಸೇವೆಯು ಮಕ್ಕಳನ್ನು ವಿಕಾಸಗೊಳಿಸುವುದು. ಈ ಭಾವನೆಯೇ ಅದಕ್ಕೆ ಸಾಕು. ಆದುದರಿಂದ ನೀವು ಏಳಿರಿ ! ನಿದ್ದೆ ಮಾಡದೆ ಏಳಿರಿ !

ಐಕ್ಯವೂ ಪ್ರೇಮವೂ ಇರುವ ಕುಟುಂಬದಲ್ಲಿ ಒಂದು ಹಿಡಿ ಅನ್ನವಾದರೂ, ಹಂಚಿ ತಿಂದು ಸಂತೋಷದಿಂದ ಮಲಗಿ ನಿದ್ದೆಮಾಡುತ್ತಾರೆ. ಸ್ವರ್ಗ ಅವರ ಕೈಯಲ್ಲಿದೆ. ಆದರೆ ಕೋಟಿಯ ಸಂಪತ್ತಿದ್ದು, ಐನೂರು ಪವನು ಬಂಗಾರವಿದ್ದು ಐಕ್ಯತೆಯಿಲ್ಲದಿದ್ದರೆ ಅಲ್ಲಿ ನರಕದ, ಕಣ್ಣೀರಿನ, ನಿಂದನೆಯ ನೆಲೆಯನ್ನು ಕಾಣುತ್ತೇವೆ. ನಮ್ಮ ಐಕ್ಯತೆಯು ನಮಗೆ ಆನಂದ ಕೊಡುವುದು. ಆದುದರಿಂದ ನಿಮ್ಮ ಮನಸ್ಸಿನ ಮೂಲವನ್ನು ಅರ್ಥ ಮಾಡಿಕೊಳ್ಳಿರಿ. ನಿಮ್ಮ ಜೀವನ ಯಾಕಾಗಿಯೆಂಬುದನ್ನು ಅರಿತುಕೊಳ್ಳಿರಿ !

ನಿಮಗೆ ಸರಿಯಾದ ಒಂದು ಚೈತನ್ಯ ವಲಯವನ್ನು (aura) ದೇವರು ಕೊಟ್ಟಿದ್ದಾನೆ. ಪರಿಮಿತಿ ನಿರ್ಣಯಿಸಲಾಗದಷ್ಟು ಅನಂತಶಕ್ತಿಯಿರುವಂಥದ್ದು ಅದು. ಆದರೆ ಇಂದದು ಶುಷ್ಕವಾಗಿದೆ. ಆದರೂ ತಪಸ್ಸಿನಿಂದ, ಅದರಲ್ಲಿ ಎಷ್ಟು ಬೇಕಾದರೂ, ಕರೆಂಟು ಚಾರ್ಜ್ ಮಾಡಲು ಸಾಧ್ಯವಿದೆ; ಯಾವ ಲೋಕದಲ್ಲೂ ಪ್ರಯಾಣ ಮಾಡಲು ಸಾಧ್ಯವಿದೆ. ನೀವು ಸಾಯುತ್ತೀರೆಂದು ಹೆದರುವುದೇ ಬೇಡ. ಹುಟ್ಟುತ್ತೀರೆಂದೂ ಎಣಿಸಬೇಡಿ. ನೀವು ಎಂದೂ ಸಾಯುವುದೂ ಇಲ್ಲ, ಹುಟ್ಟುವುದೂ ಇಲ್ಲ. ಫ್ಯಾನೋ, ಫ್ರಿಜ್ಜೋ ಹಾಳಾದರೂ ಅದರೊಳಗಿನ ಕರೆಂಟು ಹಾಳಾಗದ ಹಾಗೆ, ನಿಮ್ಮ ಒಳಗಿನ ಆತ್ಮವು ಎಂದೂ ಅಸ್ತಿತ್ವದಲ್ಲಿರುತ್ತದೆ.

’ಕೆಲಸ ಕೊಡಿ, ಕೆಲಸ ಕೊಡಿ’ ಎಂದು ಎಲ್ಲರೂ ಹೇಳುತ್ತಾರೆ. ಕೆಲಸವಿಲ್ಲವೆಂದು ಯುವಪ್ರಾಯದವರು ದುಃಖಿಸುತ್ತಾರೆ. ಹೆಂಡಕ್ಕೂ, ಗಾಂಜಕ್ಕೂ ಅಡಿಯಾಳಾಗುವುದು ಅದೇ ಕಾರಣದಿಂದಾಗಿ ಎಂದು ಹೇಳುತ್ತಾರೆ. ಕೆಲಸ ಸಿಕ್ಕಿದರೆ ನಿಮಗೆ ಸಮಾಧಾನ ಆಗುತ್ತದೆಯೇ ? ಅವನ, ತನ್ನ ಹೆಸರಿನಲ್ಲಿರುವ, ಎಕರೆ ಗಟ್ಟಲೆ ಭೂಮಿ ಪಾಳು ಬಿದ್ದಿರುತ್ತದೆ. ಅದರಲ್ಲಿ ಬೇಸಾಯ ಮಾಡಿದರೆ, ಇವನಿಗೆ ಸಿಗುವ ಸಂಬಳಕ್ಕಿಂತ ನೂರರಷ್ಟು ಹೆಚ್ಚು ಲಾಭ ಗಳಿಸಲು ಸಾಧ್ಯವಿದೆ. ಕೆಲವೊಮ್ಮೆ ನಷ್ಟವುಂಟಾಯಿತೊಂದು ಭಾವಿಸೋಣ; ಆದರೂ ಹಿಂಜರಿಯಬಾರದು. ಅದರೆ ಯಾರೂ ಶ್ರಮ ಪಡುವುದಿಲ್ಲ. ಇಷ್ಟೆಲ್ಲ ಜಮೀನು ಇಟ್ಟುಕೊಂಡೂ ಸುಮ್ಮನೆ ಅಲೆದಾಡುತ್ತಾ ಹಾಳಾಗುತ್ತಾರೆ. ಸಮಯಯಿಲ್ಲವೆಂದು ಯಾರೂ ಹೇಳಬೇಕಾಗಿಲ್ಲ; ಸಮಯ ಬೇಕಷ್ಟಿದೆ. ಹಾಗಾಗಿ ನೀವು ಆಲಸಿಗಳಾಗದೆ ಕೆಲಸ ಮಾಡಿರಿ !

ಸ್ವಂತ ಫ಼್ಯಾಕ್ಟರಿಯಲ್ಲಿ ಇಪ್ಪತ್ತನಾಲ್ಕು ಗಂಟೆ ಕೆಲಸ ಮಾಡುವವರಿದ್ದಾರೆ. ತನ್ನದೇ ಫ್ಯಾಕ್ಟರಿ, ಹಣ ಮಾಡಬೇಕೆಂಬ ಗುರಿ ಇದ್ದಾಗ ಏನು ಮರೆತು ಬಿಡಲಿಕ್ಕೂ ಸಂಕೋಚವಿಲ್ಲ. ಎಷ್ಟು ಕೆಲಸ ಮಾಡಿದರೂ ಆರೋಗ್ಯಕ್ಕೆ ಕಮ್ಮಿಯಿಲ್ಲ; ಉತ್ಸಾಹ ಮಾತ್ರವೇ ಇರುತ್ತದೆ. ಹಾನಿಯಾಗುವುದಿಲ್ಲ. ಮಕ್ಕಳೇ, ಲೋಕವು ನಮ್ಮ ಕುಟುಂಬ. ಆ ಲೋಕದ್ದಾದ ಫ಼್ಯಾಕ್ಟರಿಯಲ್ಲಿ ಕೆಲಸ ಮಾಡಿರಿ. ಎಲ್ಲರೂ ನನ್ನ ಸಂಬಂಧಿಕರು ಎಂದು ಭಾವಿಸಿಕೊಳ್ಳಿ. ಆಗ ಭಗವಂತನೇ ರಕ್ಷಿಸುವನು ಎಂದಿರುವ ಕರ್ತವ್ಯ ಭಾವನೆ ತಾನಾಗಿಯೇ ಮೂಡುವುದು ನಿಮ್ಮಲ್ಲಿ. ನಿಮ್ಮ ದೇಹವನ್ನು ಮರೆಯಲೂ, ಕೆಲಸ ಮಾಡಲು ಆರೋಗ್ಯವನ್ನೂ ಈಶ್ವರನು ಕೊಡುವನು.

ಬೇರೊಂದು ಫ಼್ಯಾಕ್ಟರಿ ಸೇರಿದಾಗ ಎರಡು ಗಂಟೆ ಕೆಲಸ ಮಾಡಿ ತಪ್ಪಿಸಿಕೊಂಡು ಓಡಾಡಲು, ಮೇಲಧಿಕಾರಿಗಳು ಇಲ್ಲದಿದ್ದರೆ ಹರಟೆ ಹೊಡೆದು ಕೊಂಡಿರಲು ಮನಸ್ಸಾಗುತ್ತದೆ. ಸ್ವಂತದ್ದಲ್ಲ ಎಂದಾಗ ಸೋಮಾರಿತನ ಬರುತ್ತದೆ, ಜಡತ್ವ ಉಂಟಾಗುತ್ತದೆ, ಆಯಾಸವಾಗುತ್ತದೆ. ಇದು ಅನ್ಯಥಾ ಭಾವ. ’ಸ್ವಂತದ್ದು’ ಎನ್ನುವ ಭಾವದಲ್ಲಿ ಅದು ಅಷ್ಟು ಬೇಗನೆ ಬರುವುದಿಲ್ಲ. ಈ ಲೋಕ ನಮ್ಮ ಫ಼್ಯಾಕ್ಟರಿಯೆಂದು ಭಾವಿಸಿ ನಡೆಯುವಾಗ, ಬೇರೆಯವರ ಜೊತೆ ಸೇರಿ ರಕ್ಷಿಸಬೇಕು ಎಂದು ಚಿಂತಿಸುವಾಗ ನಿಮಗೆ ಕಷ್ಟ ಪಡಲು ಶಕ್ತಿ ಬರುತ್ತದೆ.

ಹೋದ ಸಮಯ ಎಂದೂ ತಿರುಗಿ ಬರುವುದಿಲ್ಲ. ಆದಕಾರಣ ನೀವು ಸಮಯ ವ್ಯರ್ಥ ಮಾಡದಿರಿ. ನೌಕರಿ ಇಲ್ಲದಿದ್ದರೂ ಮಕ್ಕಳೇ, ನಿಮಗಿರುವ ಜಮೀನಿನಲ್ಲಿ ಏನಾದರೂ ಕೃಷಿ ಮಾಡಲು ಕಲಿಯಿರಿ. ಆಗ ಚಿಂತೆ ಮಾಡಿ, ಮಾಡಿ ಮನಸ್ಸು ಹುಣ್ಣಾಗುವುದಿಲ್ಲ. ಹೆಂಡಕ್ಕೂ ಗಾಂಜಾಗೂ ಗುಲಾಮರಾಗಿ ನಾಶವಾಗ ಬೇಕಾಗಿಲ್ಲ. ಹೇಗೆಯಾದರೂ ನೀವು ಶ್ರಮಿಸಿರಿ ಮಕ್ಕಳೇ. ಹತ್ತು ಸೆಂಟುಗಳಾದರೂ ಸಾಕು. (ಒಂದು ಎಕರೆ ಜಮೀನಿಗೆ ನೂರು ಸೆಂಟುಗಳು) ಮೂರು ಜನರಿಗೆ ಬೇಕಾಗುವಷ್ಟು ತಿಂದುಣ್ಣಲು ಅದರಿಂದ ದೊರಕುವುದು. ತರಕಾರಿಯೋ, ಮತ್ತಿನ್ನೇನಾದರೋ ನಮಗೆ ಅದರಲ್ಲಿ ಕೃಷಿ ಮಾಡಬಹುದಲ್ಲ. ಖಂಡಿತವಾಗಿಯೂ ಏನೇನೂ ಇಲ್ಲದವರಾದರೆ, ಯಾವ ಕೆಲಸ ಮಾಡಲೂ ತಯಾರಾಗಿರಬೇಕು. ಹಲವು ತೆರದ ಕೆಲಸಗಳಿವೆ; ಹಲವರನ್ನು ಸಂಪರ್ಕಿಸಿರಿ. ಹಲವು ಕದಗಳನ್ನು ತಟ್ಟಿರಿ. ಉನ್ನತ ಹುದ್ದೆಯೇ ಬೇಕೆಂದಾದರೆ ನಿರಾಸೆಯಾಗ ಬಹುದು. ಎಲ್ಲರೂ ಆಫೀಸರುಗಳಾಗಬೇಕೆಂದು ಬಯಸಿದರೆ ಸಣ್ಣ ಕೆಲಸಕ್ಕೆ ಯಾರೂ ಸಿಗುವುದಿಲ್ಲ. ನೀವಾಗಿಯೇ ನಶಿಸಬೇಡಿ. ಯಾವುದಾದರೂ ಕೆಲಸಕ್ಕೆ ಹೋಗಲು ಪ್ರಯತ್ನಿಸಿರಿ. ಧೈರ್ಯದೊಂದಿಗೆ ಸಿದ್ಧರಾಗಿರಿ.

 

ಹಳ್ಳಿಯಲ್ಲಿ ಮಹಾತ್ಮ

’ಯಾಕಾಗಿ ಭಗವಂತನು ಎಲ್ಲರನ್ನೂ ಸುಖಿಗಳನ್ನಾಗಿಸುವುದಿಲ್ಲ ? ಯಾಕಾಗಿ ಕೆಲವರನ್ನು ಮಾತ್ರ ಕಷ್ಟಕ್ಕೀಡು ಮಾಡುತ್ತಾನೆ ?’ – ಹಲವರು ಕೇಳುವುದಿದೆ. ಆದರೆ ಭಗವಂತನು ಯಾರನ್ನೂ ಉಪವಾಸ ಹಾಕುವುದಿಲ್ಲ. ಯಾರನ್ನು ಕಷ್ಟಕ್ಕೀಡು ಮಾಡುವುದೂ ಇಲ್ಲ. ಪ್ರತಿಯೊಬ್ಬರಿಗೂ ಏನೆಲ್ಲ ಅವಶ್ಯವಿದೆಯೋ ಅದೆಲ್ಲ ಅವನು ಕೊಟ್ಟಿದ್ದಾನೆ. ಎಲ್ಲ ಅವಶ್ಯಕತೆಗೆ ತಕ್ಕಷ್ಟು ಮಾತ್ರ.

ಒಂದು ಹಳ್ಳಿಗೆ ಒಬ್ಬ ಮಹಾತ್ಮ ಹೋಗುತ್ತಾನೆ. ಅಲ್ಲಿರುವವರು ಆತನ ಹತ್ತಿರ ಎಲ್ಲರನ್ನೂ ಸುಖಿಗಳನ್ನಾಗಿ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ಅವರ ಮನೋಗತ ಅರ್ಥ ಮಾಡಿಕೊಂಡ ಆ ಮಹಾತ್ಮ ಅವರಿಗೆ ಬೇಕಾದ್ದನ್ನೆಲ್ಲ ನೀಡುತ್ತಾನೆ. ಧನ, ಕಟ್ಟಡ ಎಲ್ಲ ಕೊಡುತ್ತಾನೆ. ಎಷ್ಟೋ ದಿನಗಳ ನಂತರ ಪುನಃ ಆತ ಆ ಹಳ್ಳಿಗೆ ಹೋಗುತ್ತಾನೆ. ಆದರೆ ಅಲ್ಲಿಂದ ಹಾದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಹಳ್ಳಿಯಲ್ಲೆಲ್ಲ ಕೊಳೆತು ನಾರುವ ವಾಸನೆ. ಎಲ್ಲೆಲ್ಲೂ ಕಸ ಕಡ್ಡಿ ತುಂಬಿ ಕೊಂಡಿದೆ. ಶುಚಿತ್ವ ಇಲ್ಲದಿರುವ ಕಾರಣ, ರೋಗದಿಂದಾಗಿ ಜನರು ಕಷ್ಟ ಪಡುತ್ತಿದ್ದಾರೆ. ಗುಡಿಸಲುಗಳಿಗೆ ಛಾವಣಿಯಿಲ್ಲ, (ಹಳೇ ಕಾಲದಲ್ಲಿ ಮನೆಗಳಿಗೆ ಹುಲ್ಲಿನ ಛಾವಣಿಯಿರುತ್ತಿತ್ತು.) ಹೊಲ ಉತ್ತಿಲ್ಲ. ಎಲ್ಲರೂ ಉಪವಾಸ. ಕಾರಣ ಹುಡುಕಿದಾಗ, ಕೃಷಿ ಮಾಡಲು ಕೆಲಸದಾಳುಗಳಿಲ್ಲ. ಕೆಲಸ ಮಾಡಲು ಯಾರೂ ತಯಾರಿಲ್ಲ. ಮಹಾತ್ಮನನ್ನು ನೋಡಿದೊಡನೆ ಎಲ್ಲರೂ ಅವನ ಹತ್ತಿರ ಧಾವಿಸುತ್ತಾರೆ. ಎಲ್ಲವನ್ನು ಮೊದಲಿನಂತೆ ಮಾಡಿಕೊಡಬೇಕೆಂದು ಬೇಡಿಕೊಳ್ಳುತ್ತಾರೆ.

ಅದನ್ನೇ ಹೇಳಿರುವುದು, ಅವಶ್ಯಕತೆಗನುಗುಣವಾಗಿ ಬೇಕಾದ್ದನ್ನೆಲ್ಲ ಮನುಷ್ಯನಿಗೆ ಭಗವಂತ ಕೊಟ್ಟಿರುತ್ತಾನೆ. ಅದಕ್ಕಿಂತ ಹೆಚ್ಚೇನಾದರೂ ಕೊಟ್ಟರೆ, ಅವರು ಅದರ ಎರಡರಷ್ಟು ನಶಿಸುತ್ತಾರೆ. ದೇವರು ಲೋಕದಲ್ಲಿ ಅವಶ್ಯಕತೆಗಿಂತ ಹೆಚ್ಚು ಏನೂ ಮಾಡಿಲ್ಲ; ಎಲ್ಲ ಅವಶ್ಯಕತೆಗೆ ತಕ್ಕಷ್ಟು ಮಾತ್ರ.

ಮಕ್ಕಳೇ, ಆಧಾರಸ್ತಂಭಗಳಿಲ್ಲದೆ ಕಟ್ಟಡ ಕಟ್ಟಬಹುದೆಂದು ಒಂದು ವೇಳೆ ವಿಜ್ಞಾನಿಗಳು ಕಂಡುಹಿಡಿದರೆಂದು ಇಟ್ಟುಕೊಳ್ಳೋಣ; ಇಂದು ಬಟನ್ ಅದುಮಿದರೆ ಈ ಪ್ರಪಂಚವೇ ಅಳಿದು ಹೋಗುತ್ತದೆಂದು ಇಟ್ಟುಕೊಳ್ಳೋಣ. ಆದರೆ ಇದರಿಂದ ಯಾವ ಮನಸ್ಸಿಗೂ ಯಾವ ಕುಟುಂಬಕ್ಕೂ ಸಮಾಧಾನವೆಂಬುದು ಸಿಗುವುದಿಲ್ಲ. ಹೊಟ್ಟೆ ತುಂಬ ಊಟ ಮಾಡಿಯೂ ’ಮನಸ್ಸಿಗೆ ಸಮಾಧಾನವಿಲ್ಲ, ನಿದ್ದೆ ಬರುತ್ತಿಲ್ಲ’ ಎನ್ನುವ ಮೊರೆಯನ್ನು ಮಾತ್ರವೇ ಇಂದು ನಾವು ಕೇಳುತ್ತಿರುವುದು. ಒಂದು ಕೋಟಿಗೂ (ಇದು 1987ರ ಮೊದಲಿನ ವರ್ಷಗಳಲ್ಲಿ ಅಮ್ಮ ಹೇಳಿದ ಮಾತು) ಮೀರಿ ಜನಗಳನ್ನು ಅಮ್ಮ ಇಷ್ಟು ಕಾಲದಿಂದ ಕಂಡು ಭೇಟಿಯಾಗಿದ್ದಾರೆ. ಅದರಲ್ಲಿ ಬೆರಳೆಣಿಕೆಯಷ್ಟು ಮಂದಿಯೂ ಮನಸ್ಸಮಾಧಾನದಿಂದ ಬದುಕುತ್ತಿಲ್ಲ. ಬರುವ ಈ ಮಂದಿ ಕಡಿಮೆ ಸಂಪತ್ತಿರುವವರಲ್ಲ; ಎಲ್ಲ ಇರುವವರು. ಒಂದು ವ್ಯಕ್ತಿಗೆ ಕೆಲಸದಾಳುಗಳನ್ನು ಕೊಟ್ಟರೋ, ಚೆಲುವೆ ಹೆಣ್ಣನ್ನು ಕೊಟ್ಟರೋ, ಕಟ್ಟಡ ಕೊಟ್ಟರೋ, ಎಕರೆ ಲೆಕ್ಕದಲ್ಲಿ ಭೂಮಿ ಕೊಟ್ಟರೋ, ಆ ವ್ಯಕ್ತಿಗೆ ಸಮಾಧಾನ ಸಿಗಬೇಕೆಂದೇನಿಲ್ಲ. ಇದೆಲ್ಲ ಇರುವವರೆ ಹೆಚ್ಚು ಅಳುತ್ತಿರುವುದನ್ನು ಕಾಣುತ್ತೇವೆ. ಇದು ಬದಲಾಗಬೇಕಾದರೆ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು.

ಸಂಪತ್ತು ಬೇಡವೆಂದು ಅಮ್ಮ ಹೇಳುತ್ತಿಲ್ಲ. ಎಲ್ಲತರದ ಆಸ್ತಿಗಳನ್ನು ನೀವು ಸಂಪಾದಿಸಿಕೊಳ್ಳಿ; ಆದರೆ ಅದನ್ನು ಹೇಗೆ ವಿನಿಯೋಗಿಸಬೇಕೆನ್ನುವ ’ಮರ್ಮ’ ತಿಳಿಸಿ ಹೇಳುವುದು ಅಧ್ಯಾತ್ಮ. ಕೋಟಿಗಟ್ಟಲೆ ಬಾಣಬಿಡಲು ಕಲಿತರೂ ಅದರ ಗುರಿ ತಿಳಿದುಕೊಳ್ಳದವನು ಅಷ್ಟೂ ಬಾಣಗಳನ್ನು ಕಳೆದುಕೊಂಡಂತಾಗುತ್ತದೆ. ಆದಕಾರಣ ಗುರಿಯನ್ನು ಕಲಿತು ಬಾಣ ಹೂಡಿರಿ. ಈ ತೆರನಾಗಿ, ಅಧ್ಯಾತ್ಮ ಅರ್ಥಮಾಡಿಕೊಂಡು ಎಷ್ಟೇ ಸಂಪತ್ತು ಗಳಿಸಿದರೂ ಅದು ನಿಮಗೂ ಲೋಕಕ್ಕೂ ಒಳ್ಳೆಯದನ್ನೇ ಮಾಡುತ್ತದೆ. ಆದುದರಿಂದ ಅಧ್ಯಾತ್ಮ ಏನಂತ ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಿ; ಕಲಿತುಕೊಳ್ಳಿ. ಕಲಿತು ನೀವು ಸಮಾಜದಲ್ಲಿ ಬದಲಾವಣೆಗಳನ್ನು ತನ್ನಿರಿ.

ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ಸಮಾಜವನ್ನು ಪ್ರೀತಿಸೋಣ, ಸೇವೆ ಮಾಡೋಣ. ರಾಜಕೀಯ ಬೇಡವೆಂದು ಹೇಳುತ್ತಿಲ್ಲ; ಮನೆ ಬೇಡವೆಂದು ಹೇಳುತ್ತಿಲ್ಲ. ಅದೆಲ್ಲ ಇದ್ದರೂ ನಿಮಗೆ ಅಧ್ಯಾತ್ಮ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ; ಸರಿಯಾದ ಹಾದಿಯಲ್ಲಿ ಮುಂದುವರಿಯಲು ಸಾಧ್ಯವಿದೆ. ಮಕ್ಕಳೇ, ರಾಜಕೀಯ, ಪಾರ್ಟಿಯ ಕುರಿತಾಗಿಯೆಲ್ಲ ಮಾತಾಡುತ್ತಿದ್ದರೆ ನಮ್ಮ ವಿದ್ಯಾಭ್ಯಾಸ ಹಾಳಾಗುತ್ತದೆ; ಕರ್ತವ್ಯಗಳು ಮರೆತು ಹೋಗುತ್ತವೆ, ಅನೇಕರನ್ನು ಪೀಡಿಸುತ್ತೇವೆ. ಇಷ್ಟೇ ನಮ್ಮಿಂದ ಸಾಧ್ಯ. ಪಾರ್ಟಿ ಯಾವತ್ತೂ ನಮಗೆ ಸನ್ಮಾರ್ಗ ಸ್ಪಷ್ಟ ಪಡಿಸಿ ಕೊಡುವುದಿಲ್ಲ. ಎರಡೇ ಪಾರ್ಟಿ ಇರುವ ಕಡೆಯೂ ಅವರಿಗೆ ಸತ್ಯವನ್ನು ಆಚರಿಸಿಕೊಂಡು ಹೋಗಲು ಬೇಗ ಆಗುತ್ತದೆಂದು ಹೇಳಲು ಬರುವುದಿಲ್ಲ. ಯಾವಾಗಲೂ ಇತರರ ವೋಟ್ನ ಮೇಲಲ್ಲವೇ ಇವರ ಅಸ್ತಿತ್ವ ? ಒಬ್ಬನ ವೋಟ್ ಹೋದರೆ ಸಾಕು, ಮಂತ್ರಿ ಪದ ಹೋಗಲಿಕ್ಕೆ. ಬೇರೆಯವರನ್ನು ಅವಲಂಬಿಸಿ ಇವರು ಬೆಳೆದಿರುವುದು. ಪರಾವಲಂಬಿಗಳಿಗೆ ಇನ್ನೊಬ್ಬರನ್ನು ರಕ್ಷಿಸಲಿಕ್ಕೆ ಸಾಧ್ಯವಿಲ್ಲ. ವೋಟಿಗೆ ಬೇಕಾಗಿ ಮಾತ್ರ ಇವರು ಇರುವುದರಿಂದ ಸತ್ಯಸಂಧರಾಗಿ ಬದುಕಲು ಸಾಧ್ಯವಾಗುವುದಿಲ್ಲ. ಅಥವಾ ಸತ್ಯವಿದ್ದರೂ, ಅವರಲ್ಲಿ ವಿಪರೀತ ಬುದ್ಧಿಯಿರಬಹುದು. ಆದರೆ ಅಧ್ಯಾತ್ಮದಲ್ಲಿ ಅದಿಲ್ಲ.

ಅಧ್ಯಾತ್ಮವನ್ನು ಅರ್ಥ ಮಾಡಿಕೊಂಡಾಗ ನಮ್ಮ ಕರ್ತವ್ಯಗಳ ಸ್ಮರಣೆ ನಮಗೆ ಉಂಟಾಗುತ್ತದೆ. ನಾವು ಯಾರೆಂದು, ಏನೆಂದು ಅರ್ಥ ಮಾಡಿಕೊಳ್ಳುತ್ತೇವೆ; ಅದಕ್ಕನುಗುಣವಾಗಿ ನಾವು ಬದುಕಲು ಪ್ರಯತ್ನಿಸಬಹುದು. ಭೂಮಿಗೂ ಸಹ ತೊಂದರೆಯಾಗದಂಥ ಬದುಕು ನಾವು ಕಟ್ಟಬಹುದು. ಆಧ್ಯಾತ್ಮಿಕ ಜೀವನದಲ್ಲಿ ಮಾತ್ರ ಇದು ಸಾಧ್ಯ. ಯಾರೂ ಸನ್ಯಾಸಿಯೋ ಬ್ರಹ್ಮಚಾರಿಯೋ ಆಗಬೇಕಾಗಿಲ್ಲ. ನಿಮ್ಮ ಜೀವನವನ್ನೂ ಕುಟುಂಬವನ್ನೂ ಸಂಭಾಳಿಸಿಕೊಂಡೇ, ಸಾಧನೆಯನ್ನೂ ಮಾಡಿಕೊಂಡು ಲೋಕದಲ್ಲಿದ್ದುಕೊಂಡು ಬದುಕಬಹುದು.

ಕ್ರಿಕೆಟ್ ಹಾಗೂ ಟಿ.ವಿ. ಯಾವುದೂ ಹಸಿವಾದಾಗ ಸಮಾಧಾನ ಕೊಡುವುದಿಲ್ಲ. ಅವೆಲ್ಲ ನೋಡುವಾಗ ನಮ್ಮಲ್ಲಿ ಭಾವೋದ್ವೇಗಗಳು ಜಾಗೃತವಾಗುತ್ತವೆ. ವೈಭವೋಪೇತ ಜೀವನದ ಬಗ್ಗೆ ಉದ್ರೇಕ ಉಂಟಾಗುತ್ತದೆ. ಅವುಗಳು ಸಿಗದೆ ಹೋದಾಗ ನಿರಾಶೆಯಾಗುಗುತ್ತದೆ. ನಾವೂ ಹಾಳಾಗುತ್ತೇವೆ. ಆದರೆ ಸಮಯ ವ್ಯರ್ಥ ಮಾಡದೆ ಏಕಾಗ್ರತೆಯಿಂದ ಧ್ಯಾನ ಮಾಡಿದಲ್ಲಿ, ನಿಮಗೆ ಬೇರೆ ಎಲ್ಲಕ್ಕಿಂತಲೂ ಹೆಚ್ಚಿನ ಸಂತೃಪ್ತಿ ಸಿಗುವುದು. ಟಿವಿ, ಸಿನೇಮ ನೋಡಬಾರದೆಂದು ಅಮ್ಮ ಹೇಳುತ್ತಿಲ್ಲ. ಆದರೆ ಇವೆಲ್ಲ ಭಾವನೆಗಳನ್ನು, ವಿಚಾರಗಳನ್ನು ಜಾಗೃತಗೊಳಿಸಿದಾಗ ಅವನ್ನು ತೃಪ್ತಿಪಡಿಸಲು ಪರಸ್ತ್ರೀಯರನ್ನು ಇಚ್ಚಿಸುವುದು, ಕಳವು ಮಾಡುವುದು ಮೊದಲಾದ ಪ್ರವೃತ್ತಿಗಳಿಂದ ನಾವು ಜಗತ್ತಿಗೆ ಅನ್ಯಾಯ ಮಾತ್ರವೇ ಬಗೆಯುತ್ತೇವೆ.

ಮಕ್ಕಳೇ, ಆನಂದ ನಿಮ್ಮ ಒಳಗಿದೆ. ಆದರೆ ನೀವದು ಅರಿತುಕೊಳ್ಳುತ್ತಿಲ್ಲ. ನೀವು ಖಜಾನೆಯ ಬೀಗದ ಕೈಯನ್ನು ನಿಮ್ಮದೇ ಕಿಸೆಯೊಳಗೆ ಇಟ್ಟು ಮನೆಯಲ್ಲೂ, ಹೊರಗೂ ತಿರುಗಾಡದಿರಿ. ಆನಂದವು ಹೊರಗಿದೆ ಎಂದು ಭಾವಿಸುವುದರಿಂದ ಉಪದ್ರವ ಮಾತ್ರ ನಿಮ್ಮಿಂದ ಮಾಡಲು ಸಾಧ್ಯವಾಗುತ್ತದೆ. ಆದಕಾರಣ ದಯಮಾಡಿ, ಸಮಾಜದೊಡನೆ ಪ್ರೇಮವಿದ್ದಲ್ಲಿ; ಜನರಲ್ಲಿ, ಬಡಜನರಲ್ಲಿ ಕರುಣೆಯಿದ್ದಲ್ಲಿ ನೀವು ಈ ತರ ಹಾಳಾಗದೆ ಬೇರೆಯವರನ್ನು ಕಾಪಾಡಿರಿ. ಅನೇಕರು ಉಪವಾಸವಿದ್ದು, ಮನೆಯಿಲ್ಲದೆ, ಬಟ್ಟೆಯಿಲ್ಲದೆ, ಶಾಲೆಗೆ ಹೋಗಲು ಕಾಸಿಲ್ಲದೆ ಹೆಣಗಾಡುತ್ತಿದ್ದಾರೆ. ಔಷಧಿ ಕೊಂಡುಕೊಳ್ಳಲು ಸಾಧ್ಯವಾಗದೆ ಕಷ್ಟಪಡುತ್ತಿದ್ದಾರೆ. ನಿಮ್ಮಲ್ಲೊಂದು ಪರಿವರ್ತನೆ ಉಂಟಾದರೆ, ಅಶಾಶ್ವತ ವಸ್ತುಗಳಿಗಾಗಿ ಹಾಳು ಮಾಡುವ ಹಣದಿಂದ ಬಡಜನರಿಗೆ ಸಹಾಯ ಮಾಡಲು ಸಾಧ್ಯವಿದೆ. ಜೊತೆಗೆ ಜೀವನವೆಂದರೆ ಏನು ಎಂದು ಅವರಿಗೆ ತಿಳಿ ಹೇಳಿದಾಗ ಅವರಿಗೆ ನೆಮ್ಮದಿಯಿಂದ ತಮ್ಮ ಬದುಕು ನಡೆಸಲು ಸಾಧ್ಯವಾಗುತ್ತದೆ.

ಊಟದ ಜೊತೆಗೆ ನೀರೂ ಕೊಡಬೇಕಾಗುತ್ತದೆ. ಹಸಿದಿರುವ ಮಗುವಿಗೆ ವೇದಾಂತ ಹೇಳಬೇಕೆಂದು ಅಮ್ಮ ಹೇಳುತ್ತಿಲ್ಲ. ಊಟದ ಜೊತೆಗೆ ವೇದಾಂತ ಹೇಳಿಕೊಟ್ಟಾಗ, ಬಹುಷಃ ಅವರಿಗೆ ಇದನ್ನು ಗ್ರಹಿಸಲಿಕ್ಕೆ ಸಾಧ್ಯವಾಗಬಹುದು. ಆದಕಾರಣ ಇಂದು ಸಮಾಜದ ಮೇಲೋ, ನಮ್ಮ ರಾಜ್ಯದ ಮೇಲೋ, ಇಲ್ಲದಿದ್ದರೆ ಈ ಸಹೋದರರ ಮೇಲೋ ನಿಮಗೆ ಪ್ರೀತಿ ಇದ್ದಲ್ಲಿ, ದಯವಿಟ್ಟು ಎದ್ದೇಳಿ ! ನೀವು ಯಾರೆಂದು ಕಲಿಯಿರಿ !

ಪರಮಕರುಣಾಕರನಾದ ಪರಮಾತ್ಮನ ಅನುಗ್ರಹದಿಂದ ನಾವು ನಡೆದುಕೊಂಡು ಬರುತ್ತಿದ್ದೇವೆ. ಕೆಲವರು ಹೇಳುತ್ತಾರೆ ದೇವರಿಲ್ಲ ಎಂದು. ತನ್ನ ನಾಲಿಗೆಯಿಂದಲೇ “ನನಗೆ ನಾಲಿಗೆಯಿಲ್ಲ” ಎಂದು ಹೇಳಿದಂತಾಯಿತು ಇದು. ನಾಲಗೆಯಿಲ್ಲದ ಒಬ್ಬನಿಗೆ “ನನಗೆ ನಾಲಿಗೆಯಿಲ್ಲ” ಎಂದು ಹೇಳಲು ಸಾಧ್ಯವಿದೆಯೇ. ಇದೇ ರೀತಿ ದೇವರಿಲ್ಲ ಎಂದು ಹೇಳುವಾಗಲೇ ನಾವು ದೇವರಿದ್ದಾನೆ ಎಂದು ಒಪ್ಪಿದ ಹಾಗಾಯಿತು. ಯಾಕೆಂದರೆ ಒಂದು ವಸ್ತು ಇಲ್ಲಾಂತ ಹೇಳಬೇಕಾದರೆ, ಮೊದಲೇ ಅದರ ಬಗ್ಗೆ ನಮಗೆ ಸ್ವಲ್ಪ ತಿಳುವಳಿಕೆ ಇರಬೇಕಾಗುತ್ತದೆ.

ಪ್ರೀತಿಯ ಮಕ್ಕಳೇ, ನಾವು ಬಂದಿರುವುದು ದೇವರಿಂದ. ಆ ಮಸುಕಾದ ಪರಿವೆ ನಮ್ಮೊಳಗಿದೆ; ಅದು ಪೂರ್ಣವಾಗಬೇಕು.

ನೆಚ್ಚಿನ ಮಕ್ಕಳೇ, ದೇವರು ಮೇಲಿದ್ದಾನೆ. ಬೀಜದಲ್ಲಿ ಹೂವು, ಕಾಯಿ, ಕಾಂಡ, ಎಲೆ ಎಲ್ಲಾ ಅಡಕವಾಗಿದೆ. ಆದಕಾರಣ, “ಎಲ್ಲಾ ನನ್ನಲ್ಲಿದೆ, ನಾನ್ಯಾರಿಗೂ ತಲೆ ಬಗ್ಗಿಸುವುದಿಲ್ಲ” ಎಂದು ಹೇಳಿದರೆ ಅದರ ನಿಜವಾದ ರೂಪ ಹೊರಗೆ ಬರುವುದೇ ? ಮಣ್ಣಿನಡಿಗೆ ಹೋದಾಗ ಮಾತ್ರವೇ ಅದರಲ್ಲಿ ಹುದುಗಿಕೊಂಡಿರುವ ವೃಕ್ಷ ಹೊರಗೆ ಬರತೊಡಗುವುದು. ಇದೇ ರೀತಿ “ಹೇ ಭಗವಂತ, ನಾನು ನಿನ್ನ ದಾಸ” ಎಂಬ ಭಾವನೆ ಬಂದಾಗ ಮಾತ್ರ ಭಗವಂತನ ರೂಪ – ಅಲ್ಲದಿದ್ದರೆ ನಮ್ಮ ಸ್ವರೂಪ – ವ್ಯಕ್ತವಾಗುವುದು.

ಮೆಚ್ಚಿನ ಮಕ್ಕಳೇ, ದೇವರು ಕೊಟ್ಟ ಸಮಯ ಹಾಳು ಮಾಡದಿರಿ. ಜಗನ್ಮಾತೆಯನ್ನು ಆಶ್ರಯಿಸಿರಿ. ಮಕ್ಕಳೇ, “ಅಮ್ಮ” ಮಾತ್ರವೇ ನಮಗೆ ನಿಷ್ಕಾಮ ಪ್ರೇಮ ನೀಡುವವಳು. ಈ ಲೋಕದಲ್ಲಿ ಬಹಳಷ್ಟು ಮಂದಿ ನಮ್ಮನ್ನು ನಿಷ್ಕಾಮವಾಗಿ ಪ್ರೀತಿಸುತ್ತಾರೆ ಎನ್ನುವುದು ಬರೇ ತೋರಿಕೆ ಮಾತ್ರ. ಅದೆಲ್ಲ ಒಟ್ಟು ಸ್ವಾರ್ಥ-ಪ್ರೀತಿ. ಇದನ್ನು ವಿವರಿಸಲಿಕ್ಕೆ ಅಮ್ಮ ಒಂದು ಕಥೆ ಹೇಳುತ್ತಾರೆ.

ಒಂದು ಸಲ ಒಬ್ಬ ತಂದೆಯೂ ಮಕ್ಕಳೂ ಒಂದು ಪ್ರವಾಸಕ್ಕೆ ಹೊರಡುತ್ತಾರೆ. ಹಗಲಿನಲ್ಲಿ ಅವರು ಪಟ್ಟಣದ ಹಲವು ದೃಶ್ಯಗಳನ್ನು ನೋಡುತ್ತ ತಿರುಗಾಡಿದರು. ಸಂಜೆಯಾದಾಗ ವಿಶ್ರಾಂತಿಗೆಂದು ಒಂದು ಹೊಟೇಲ್ ಬಂದು ತಲಪುತ್ತಾರೆ. ಹೊಟೇಲ್ ಯಜಮಾನ ಅವರನ್ನು ಕಂಡೊಡನೆ ಬಹಳ ಗೌರವಾದರಪೂರ್ವಕವಾಗಿ ಅವರನ್ನು ಎದುರ್ಗೊಳ್ಳುತ್ತಾನೆ. ಎರಡು ಮೂರು ಸೇವಕರೂ ಅಲ್ಲಿ ಬಂದು ಮುಟ್ಟಿದರು. ಅವರು ಅತಿಥಿಗಳನ್ನು ರೂಮಿಗೆ ಕರೆದುಕೊಂಡು ಹೋಗುತ್ತಾರೆ.

ಆಕರ್ಷಕವಾಗಿ ಸಿಂಗರಿಸಿದ ರೂಮು. ನಿಮಿಷಗಳಲ್ಲೇ ಆ ಸೇವಕರು ಆಹಾರ ಪದಾರ್ಥಗಳನ್ನು ತಂದಿಡುತ್ತಾರೆ. ಅಪ್ಪ ಮಕ್ಕಳ ವಸ್ತ್ರಗಳನ್ನು ಸಂತೋಷದಿಂದ ಒಗೆಯಲಿಕ್ಕೆಂದು ತೆಗೆದುಕೊಂಡು ಒಯ್ಯುತ್ತಾರೆ. ಅದನ್ನು ಚೆನ್ನಾಗಿ ಒಗೆದು, ಇಸ್ತ್ರಿ ಹಾಕಿ ಹಿಂದೆ ಕೊಟ್ಟರು. ಸ್ನಾನಕ್ಕೆ ಬಿಸಿ ನೀರು ಕೊಡುತ್ತಾರೆ. ಹೀಗೆ, ಅವರಿಗೆ ಏನೆಲ್ಲ ಬೇಕೋ, ಎಲ್ಲ ಮಾಡಿಕೊಟ್ಟರು. ರಾತ್ರಿ ಹೊಟೇಲ್‌ನ ಗಾಯಕಿಯೂ ಗಾಯಕನೂ ಇವರಿಗಾಗಿ ಹಾಡುತ್ತಾರೆ ಮತ್ತು ವೀಣೆ ಬಾರಿಸುತ್ತಾರೆ. ಬೆಳಿಗ್ಗೆ ತಂದೆಯೂ ಮಕ್ಕಳೂ ಹೊರಡಲು ತಯಾರಾಗುತ್ತಾರೆ. ಮಕ್ಕಳು ಹೇಳುತ್ತಾರೆ “ಅಪ್ಪ, ಎಷ್ಟು ಪ್ರೀತಿಯಿರುವ ಜನಗಳಿವರು.” ಉತ್ತರ ಹೇಳುವ ಮೊದಲೇ ಒಬ್ಬ ಪರಿಚಾರಕ ಒಳಗೆ ಬಂದು ಹೊಟೇಲ್ ಬಿಲ್ಲು ಕೊಟ್ಟ.

ತಂದೆ ಮಕ್ಕಳಿಗೆ ಹೇಳಿದ “ನಿನ್ನೆ ಅವರು ನಮಗೆ ತೋರಿಸಿದ ಪ್ರೀತಿಗೂ ಸೇವೆಗೂ ಒಟ್ಟಿಗೆ ಸೇರಿಸಿ ಕೊಟ್ಟ ಬಿಲ್ಲು ಇದು. ಅವರು ಮಾಡಿದ ಒಂದೊಂದು ಕೆಲಸಕ್ಕೂ ಬೇರೆ ಬೇರೆ ಮೊಬಲಗು ವಸೂಲು ಮಾಡಿದ್ದಾರೆ.” ಅವರ ಪ್ರೀತಿಯು ಸ್ವಾರ್ಥ ಕಾಮನೆಗಳ ತಳಹದಿಯ ಮೇಲೆ ನಿಂತಿತ್ತು.

ನಲ್ಮೆಯ ಮಕ್ಕಳೇ, ಈ ರೀತಿಯದಾಗಿದೆ ಪ್ರೀತಿ. ಜನಗಳು ಪರಸ್ಪರ ಪ್ರೀತಿ ತೋರಿಸುವುದು ಕೂಡ ತಮ್ಮ ಸ್ವಾರ್ಥಕ್ಕಾಗಿ. ನಿಜವಾದ ಪ್ರೀತಿ ಪರಮಾತ್ಮನಿಂದ ಮಾತ್ರ ನಮಗೆ ಸಿಗುವುದು. ಭಗವಂತನು ಪ್ರೇಮ ಸ್ವರೂಪನು. ಇದು ತಿಳಿದಿರಲಿ ಮಕ್ಕಳೇ. ದೇವರನ್ನು ಆರಿತುಕೊಳ್ಳಿ. ನಮ್ಮೊಳಗೆ ಹುದುಗಿರುವ ನಮ್ಮದೇ ಸಂಪತ್ತಾದ ಈ ಸತ್ವದ ಪೂರ್ತಿ ಪ್ರಯೋಜನ ಪಡೆಯೋಣ. ಇದು ಮರೆಯದಿರಿ ಮಕ್ಕಳೇ.

ಮಕ್ಕಳೇ, ಕಲಿಯುತ್ತಿರುವಕಾಲದಲ್ಲಿ ಹುಡುಗರಿಗೆ ಲಕ್ಷ್ಯಬೋಧವಿದ್ದರೂ ಅವರ ಮನಸ್ಸು ಹೆಚ್ಚಾಗಿ ಆಟಗಳಲ್ಲೂ, ಇನ್ನಿತರ ಆಮೋದ ಪ್ರಮೋದಗಳಲ್ಲೂ ಇರುತ್ತದೆ. ಆ ಕಾಲಘಟ್ಟದಲ್ಲಿ ತಂದೆಯೂ ತಾಯಿಯೂ ಬೈತಾರೆ. ಓದಿಕೊಂಡು ಹೋಗದಿದ್ದರೆ ಸರ್ ಹೊಡೆಯುತ್ತಾರಂತ ಹೆದರಿಕೆಯಿಂದ ಮಾತ್ರವೇ ಅವರು ಕಲಿಯುವುದು. ಆದರೆ ಹತ್ತನೇ ಕ್ಲಾಸ್ ಪಾಸಾದ ಮೇಲೆ, “ನನಗೆ ಎಂ.ಬಿ.ಬಿ.ಎಸ್.ಗೆ ಹೋಗಬೇಕು, ರ‍್ಯಾಂಕ್ ತೆಗೆದು ಪಾಸಾಗಬೇಕು” ಎಂಬ ಪರಿಜ್ಞಾನ ಬರುವುದು. ಆಗ ಅವರು ಚೆನ್ನಾಗಿ ಓದುತ್ತಾರೆ. ಯಾರು ಬಯ್ಯದೆಯೂ ಹೊಡೆಯದೆಯೂ ವಿದ್ಯಾಭ್ಯಾಸಕ್ಕೆ ಗಮನಕೊಡುತ್ತಾರೆ. ಸಿನೆಮ ನೋಡಲು ಹೋಗುವುದಿಲ್ಲ; ಹೆಚ್ಚು ನಿದ್ದೆ ಮಾಡುವುದಿಲ್ಲ. ಆದರೆ ಅಲ್ಲಿಯ ತನಕ ತಂದೆ ತಾಯಂದಿರ, ಅಧ್ಯಾಪಕರ ಭಯದಿಂದ ಅವರು ಓದಿರುವುದು. ಈ ಭಯ ದುರ್ಬಲತೆಯಲ್ಲ. ನಮ್ಮ ಶ್ರದ್ಧೆಯನ್ನು ಎಚ್ಚರಿಸಲು ಒಬ್ಬ ಗುರು ಅವಶ್ಯ. ಯಾರದ್ದಾದರೂ ಕೈಕೆಳಗೆ ಅವರನ್ನು ಅನುಸರಿಸಿ ಬದುಕ ಬೇಕಾಗುತ್ತದೆ. ನಮ್ಮೊಳಗಿನ ಗುರು ಎಚ್ಚರಗೊಂಡಮೇಲೆ ಸ್ವಂತ ವಿವೇಚನೆಯಿಂದ ಕಾರ್ಯವೆಸಗುವ ಸಕ್ಷಮತೆ ನಮ್ಮಲ್ಲಿ ಉಂಟಾಗುತ್ತದೆ. ಅಲ್ಲಿಯವರೆಗೆ ಒಂದು ಗುರುವಿನ ಸಹಾಯ ಅತ್ಯಗತ್ಯ.

ಮಕ್ಕಳೇ, ನನ್ನಲ್ಲಿ ಎಲ್ಲಾ ಇದೆಯೆಂದು ಹೇಳಿಕೊಂಡು ಬೀಜ ಉಗ್ರಾಣದಲ್ಲೇ ಉಳಿದರೆ ಬರೇ ಇಲಿಗೆ ಅಹಾರಮಾತ್ರವಾಗಿ ಪರಿಣಮಿಸುವುದು. ಮಣ್ಣಿನಡಿಗೆ ಹೋದರೆಯೇ ಅದರ ಯಥಾರ್ಥ ಸ್ವರೂಪ ನಿಜವಾಗಿ ಹೊರಗೆ ಬರುವುದು. ಅದೇರೀತಿ ನಮ್ಮ ಅಹಂಕಾರ ನಶಿಸಬೇಕಾದರೆ ದಾಸತ್ವ ಎನ್ನುವುದು ಬೇಕು. ಓರ್ವ ಗುರುವಿನ ಕೈಕೆಳಗೆ ಸಂಪೂರ್ಣ ಸಮರ್ಪಣೆಯೊಂದಿಗೆ ಸಾಧನೆ ನಡೆಸಬೇಕು.

ಕ್ಷಮೆ (ಸಹಿಷ್ಣುತೆ; ತಾಳ್ಮೆ), ಸಮಾಧಾನ, ದಾಸತ್ವ ಇದ್ದರೆ ಮಾತ್ರ ನಮಗೆ ದೇವರನ್ನು ತಿಳಿದುಕೊಳ್ಳಲು ಸಾಧ್ಯ. ಹಾವಸೆಹಿಡಿದ ಬಂಡೆಕಲ್ಲಮೇಲೆ ನಡೆಯಬೇಕಾದರೆ ಜಾರಿ ಬೀಳದ ಹಾಗೆ ನಾವು ಎಷ್ಟು ಜಾಗ್ರತೆ ವಹಿಸಬೇಕೋ ಅಷ್ಟೇ ಜಾಗ್ರತೆ ನಮಗೆ ಜಗತ್ತಿನ ಪ್ರತಿಯೊಂದು ವಸ್ತುವಿನ ಮೇಲೂ ಇರಬೇಕು. ಇಲ್ಲದಿದ್ದರೆ ಯಾವ ನಿಮಿಷವೂ ನಾವು ಜಾರಿ ಬೀಳಬಹುದು. ದೇವರನ್ನು ಅರ್ಥಮಾಡಿಕೊಂಡರೆ ಮಾತ್ರವೇ ಇತರರಿಗೆ ಶಾಂತಿ ಸಮಾಧಾನ ನೀಡ ಬಹುದು

ಮಕ್ಕಳೇ, ದೇವರನ್ನರಿಯಲು ಗುರು ಅತ್ಯಾವಶ್ಯ. ಗುರುವಚನದಲ್ಲಿ ಧೃಡ ವಿಶ್ವಾಸವಿರಬೇಕು. ಮಕ್ಕಳು ಕೇಳಬಹುದು, ಅದು ಅಂಧವಿಶ್ವಾಸವಲ್ಲವೇ ಎಂದು. ಖಂಡಿತವಾಗಿಯೂ ಅಲ್ಲ. ಮಕ್ಕಳೇ, ಈ ಪ್ರಪಂಚವೇ ನೆಲೆನಿಂತಿರುವುದು ವಿಶ್ವಾಸದ ಮೇಲೆ. ಒಂದು ಯುವಕನಿಗೆ ತನ್ನ ಮಗಳನ್ನು ಕೊಟ್ಟು ಧಾರೆಯೆರೆದು ಕೊಡುವುದು ಅವನು ತನ್ನ ಮಗಳನ್ನು ಸಾಕಿ ಸಲಹುತ್ತಾನೆ ಎಂಬ ವಿಶ್ವಾಸದಿಂದಲ್ಲವೇ ? ಹೊಟೇಲಲ್ಲಿ ನಾವು ಆಹಾರ ಪದಾರ್ಥಗಳನ್ನು ಸೇವಿಸುವುದು ಅದರಲ್ಲಿ ವಿಷದ ಅಂಶವಿಲ್ಲವೆಂಬ ಭರವಸೆಯಿಂದಲ್ಲವೇ ? ಸಮುದ್ರ ಈ ಕಡೆ ಬರುವುದಿಲ್ಲ ಎಂಬ ವಿಶ್ವಾಸದಿಂದಲ್ಲವೆ ನಾವು ತೀರದಲ್ಲಿ ಮನೆ ಕಟ್ಟಿ ವಾಸಮಾಡುವುದು ?

ತನ್ನ ಆಧ್ಯಾತ್ಮಿಕ ಬೆಳವಣಿಗೆಗೆ ಇತರರಿಂದ ಶಿಕ್ಷಣ ಸ್ವೀಕರಿಸಲೋ, ಅಥವಾ ಇನ್ನೊಬ್ಬರಿಗೆ ವಿಧೇಯನಾಗಿರಲಿಕ್ಕೋ ಕೆಲವರು ಇಷ್ಟಪಡದಿರಬಹುದು. ಶಿಸ್ತಿನಿಂದೊಡಗೂಡಿದ ಜೀವನಕ್ರಮ, ತಿದ್ದುವಿಕೆ, ಯಾವುದೂ ಆ ಮಕ್ಕಳಿಗೆ ಇಷ್ಟವಿಲ್ಲ. ಅವರು ತಮ್ಮಿಷ್ಟ ಪ್ರಕಾರ ಜೀವಿಸುತ್ತಲೂ, “ನಾನು ಬ್ರಹ್ಮನ್” ಎಂದು ತಾವೇ ಹೇಳುತ್ತಲೂ ಇರುತ್ತಾರೆ. ಅದು ದುರ್ಬಲತೆ ಮಕ್ಕಳೇ. ಅನುಭವದ ಸ್ತರದಲ್ಲಿ ಅವರಿಂದ ಏನು ಸಂಪಾದಿಸಲೂ ಸಾಧ್ಯವಿಲ್ಲ.

ಎರಡು ತರದ ಕೋಳಿಗಳ ಬಗ್ಗೆ ಕೇಳಿಲ್ಲವೇ ? ನಾಟಿ ಕೋಳಿ ಮತ್ತು ಇಂಗ್ಲಿಷ್ ಕೋಳಿ. ತಾಯಿ ಕೋಳಿಯ ಕಾವಿನಿಂದ ಹೊರಬರುವ ಕೋಳಿ ಮರಿಗಳು ಪ್ರಕೃತಿಯನ್ನು ಜಯಿಸುವ ಸಾಮರ್ಥ್ಯದೊಂದಿಗೆ ಬೆಳೆಯುತ್ತಿರುತ್ತವೆ. ಅದಕ್ಕೆ ಪ್ರತ್ಯೇಕ ಗೂಡೂ ಬೇಡ; ಅಹಾರವೂ ಬೇಡ. ಬಿಸಿಲಾಗಲಿ, ಮಳೆಯಾಗಲಿ – ಅದಕ್ಕೇನೂ ಸಮಸ್ಯೆಯಲ್ಲ. ರಾತ್ರಿ ಯಾವುದೋ ಮರದ ಕೊಂಬೆ ಮೇಲೇರಿ ಮಲಗಿಕೊಳ್ಳುತ್ತವೆ. ಆದರೆ ಇಂಗ್ಲಿಷ್ ಕೋಳಿಯ ಕಥೆಯೋ ? ಕೃತಕ ಸನ್ನಿವೇಶಗಳಲ್ಲಿ ಅವುಗಳು ಬೆಳೆದು ಬಂದಿರುವುದು. ಅವುಗಳಿಗೆ ಪ್ರಕೃತಿಯನ್ನು ಜಯಿಸಲು ಸಾಧ್ಯವಾಗುವುದಿಲ್ಲ. ಚಳಿ ಹಿಡಿದರೆ ಸತ್ತು ಬಿಡುವುದು. ಬಿಸಿಲು, ಮಳೆ ಎಲ್ಲ ಅದಕ್ಕೆ ಸಮಸ್ಯೆಯೇ. ಇದೇ ನಿಜವಾದ ಗುರುವಿನಿಂದ ಶಿಕ್ಷಣ ಪಡೆಯದಿರುವವರ ಕಥೆ. ಅಡ್ಡಿ ಆತಂಕಗಳು ಎದುರಾದಾಗ ಬಸವಳಿದು ಬೆಂಡಾಗುತ್ತಾರೆ, ಎಚ್ಚರ ತಪ್ಪಿ ಬೀಳುತ್ತಾರೆ.

ಆದರೆ, ಗುರುಸನ್ನಿಧಿಯಲ್ಲಿ ಬೆಳೆದು ಜ್ಞಾನ ಸಂಪಾದಿಸಿದವರ ಕಥೆ ನೇರ ವಿರುದ್ಧ ಮಕ್ಕಳೇ. ನಾಟಿ ಕೋಳಿಗಳ ಹಾಗೆ ಅವರು. ಯಾವುದೇ ಪ್ರತಿಕೂಲ ಸನ್ನಿವೇಶವನ್ನೂ ಎದುರಿಸಲು ಅವರಿಗೆ ಸಾಧ್ಯ. ಲಕ್ಷ್ಯಬೋಧದಿಂದ, ನಿಷ್ಠೆಯಿಂದ ಎಂದೂ ಅವರು ವಿಚಲಿತರಾಗುವುದಿಲ್ಲ.

ಹಾರಲಾಗದ ಮರಿಗಳನ್ನು ತಾಯಿಕೋಳಿಯು ರೆಕ್ಕೆಯಡಿಯಲ್ಲಿರಿಸಿ ಬೆಳೆಸುವ ಹಾಗೆ ನಿಜವಾದ ಗುರು ತನ್ನ ಶಿಕ್ಷಣದಲ್ಲಿ ಬೆಳೆಯುವವರನ್ನು ಕಾಯುತ್ತಾನೆ. ಕ್ಷುಲ್ಲಕ ತಪ್ಪುಗಳನ್ನೂ ಬೆರಳು ಮಾಡಿ ತೋರಿಸಿ ತಿದ್ದುವನು. ಇನಿತು ಅಹಂಕಾರವೂ ಚಿಗುರಲು ಬಿಡನು. ಅದಕ್ಕೆ ಬೇಕಾಗಿ ಗುರುಗಳವರು ಕೆಲವೊಮ್ಮೆ ಕ್ರೂರವಾಗಿ ವರ್ತಿಸುತ್ತಿರುತ್ತಾರೆ.

ಒಬ್ಬ ಕಮ್ಮಾರನು ಕಾಯಿಸಿದ ಕಬ್ಬಿಣದ ತುಂಡನ್ನು ಅಡಿಗಲ್ಲಿನ ಮೇಲಿಟ್ಟು ಸುತ್ತಿಗೆಯಿಂದ ಎತ್ತಿ ಎತ್ತಿ ಹೊಡೆಯುವಾಗ ಅದನ್ನು ನೋಡುವವರು ಅಂದುಕೊಳ್ಳಬಹುದು “ಇವನಂಥ ಕ್ರೂರರು ಎಲ್ಲೂ ಇಲ್ಲ” ಎಂದು. ಆದರೆ ಆ ಕಬ್ಬಿಣದ ತುಂಡಿನಮೇಲೆ ಒಂದೊಂದು ಹೊಡೆತ ಬೀಳುವಾಗಲೂ ಅದರಿಂದ ಮೈ ತಾಳುವ ಹೊಸ ರೂಪದ ಕುರಿತಾಗಿರುತ್ತದೆ ಆ ಕಮ್ಮಾರನ ಯೋಚನೆ. ಹೀಗೇ ಇರುತ್ತಾನೆ ಯಥಾರ್ಥ ಗುರು ಕೂಡ. ಯಥಾರ್ಥ ಗುರುಗಳು ಸತ್ಯವನ್ನು ಅರಿತವರಾಗಿರುತ್ತಾರೆ. ಅವರುಗಳ ಮಾತನ್ನನುಸರಿಸಿ ನಡೆದರೆ ದೇವರನ್ನು ಮುಟ್ಟುವೆವು.

“ಗುರುವಿಲ್ಲದೆಯೂ ಭಗವದ್ಸಾಕ್ಷಾತ್ಕಾರ ಸಾಧ್ಯವಿಲ್ಲವೇ” ಎಂದು ಕೇಳಬಹುದು. ಸಾಧ್ಯವಿದೆ ಮಕ್ಕಳೇ. ಆದರೆ ಅದಕ್ಕೆ ಪೂರ್ವ ಜನ್ಮದ ಸಂಸ್ಕಾರ ಬೇಕು.

ಕಾಶ್ಮ್ಮೀರದಲ್ಲಿ ಧಾರಾಳ ಸೇಬು ಬೆಳೆಯುತ್ತಾರೆ. ನಾವು ಒಂದು ಸೇಬಿನ ಗಿಡ ನೆಟ್ಟರೂ ಮೊಳಕೆಯೊಡೆಯುತ್ತದೆ; ಬೆಳೆಯಲೂ ಬಹುದು. ಆದರೆ ಬಹಳ ಅಪರೂಪಕ್ಕೆ ಕಾಯಿ ಬಿಡುವುದು. ಕಾಯಿ ಬಿಟ್ಟರೂ ಕಾಯಿಗಳು ಬಹಳ ಕಮ್ಮಿಯೇ; ಬಹಳ ಜಾಗ್ರತೆ ಕೂಡ ವಹಿಸಬೇಕಾಗುತ್ತದೆ. ಸೇಬಿನ ಗಿಡದ ಬೆಳವಣಿಗೆಗೆ ಕಾಶ್ಮ್ಮೀರದ ಹವಾಮಾನ ಪ್ರಶಸ್ತವಿದ್ದಂತೆ, ಲಕ್ಷ್ಯಬೋಧವಿರುವ ಸಾಧಕನಿಗೆ ಗುರುವಿನ ಸನ್ನಿಧಿ. ನಿಜವಾದ ಸದ್ಗುರು ಇರುವವನಿಗೆ ಪ್ರತ್ಯೇಕವಾಗಿ ಬೇರೊಬ್ಬ ದೇವರಿಲ್ಲ; ಗುರುವೇ ದೇವರು, ದೇವರೇ ಗುರು. ಆದಕಾರಣ ಭಕ್ತಿಯಿಂದ ದೇವರಿಗೆ ಅಥವ ಗುರುವಿಗೆ ಅತ್ತು ಪ್ರಾರ್ಥಿಸಿರಿ. ಎರಡೂ ಕೈಗಳನ್ನು ಚಾಚಿ ಅವನು ನಮ್ಮನ್ನು ಸ್ವೀಕರಿಸುವನು. ಭಕ್ತಿಯಿಲ್ಲದ ಜ್ಞಾನ ಬಂಡೆಕಲ್ಲನ್ನು ತಿನ್ನುವ ಹಾಗೆ. ಅತ್ತು ಪ್ರಾರ್ಥಿಸುವುದಕ್ಕಿಂತಲೂ ಬೇರೆ ದೊಡ್ಡ ಶಾಸ್ತ್ರವಿಲ್ಲ. ಆ ಭಕ್ತಿಯ ಮಾಧುರ್ಯ – ಅದು ಬೇರೆಯೇ ಮಕ್ಕಳೇ.