ನಾವೊಂದು ಒಂಟಿ ದ್ವೀಪವಲ್ಲ. ಒಂದೇ ಸರಪಳಿಯ ಕೊಂಡಿಗಳು ನಾವು. ನಾವು ಮಾಡುವ ಒಂದೊಂದು ಕೃತಿಯೂ, ತಿಳಿದೋ ತಿಳಿಯದೆಯೋ ಇತರರ ಮೇಲೆ ಪರಿಣಾಮ ಬೀರುತ್ತದೆ. ಈ ಜಗತ್ತಿನಲ್ಲಿ ನಡೆದಿರುವ ಎಲ್ಲ ಯುದ್ಧಗಳೂ, ಯಾವನೋ ಒಬ್ಬ ಮನುಷ್ಯನೊಳಗೆ ಮೂಡಿದ ವಿದ್ವೇಷದ ಫಲ. ಒಬ್ಬ ವ್ಯಕ್ತಿಯ ಆಲೋಚನೆ, ನಡತೆ ಎಷ್ಟೋ ಜನಗಳನ್ನು ನಾಶ ಮಾಡಿತು. ಹಿಟ್ಲರ್ ಒಬ್ಬ ವ್ಯಕ್ತಿ. ಆದರೆ ಅವನ ಕೃತಿ ಬಾಧಿಸಿದ್ದು ಎಷ್ಟೆಲ್ಲ ಜನರನ್ನು! ನಮ್ಮ ಆಲೋಚನೆ ಇತರರನ್ನೂ, ಇತರರ ಆಲೋಚನೆ ನಮ್ಮನ್ನೂ ಬಾಧಿಸುತ್ತವೆ ಎಂದರಿತು, ಎಂದಿಗೂ ಒಳ್ಳೆಯ ವಿಚಾರಗಳು ಮಾತ್ರ ಮೂಡುವಂತೆ ಜಾಗ್ರತೆ ವಹಿಸಬೇಕು. ಅವರು ಬದಲಾಗದೆ ನಾನು ಬದಲಾಗುವುದಿಲ್ಲ ಎಂದು ಯೋಚಿಸದೇ, ಅವರು ಬದಲಾಗದಿದ್ದರೂ ನಾವು ಬದಲಾಗಲಿಕ್ಕೆ ಪ್ರಯತ್ನಿಸಬೇಕು. ಆಧ್ಯಾತ್ಮಿಕತೆಯು ಕಲಿಸುವುದು ಅದನ್ನೇ.

ಇವತ್ತು ದಿನ ತ್ಯಾಗದ ದಿನವೆಂದು ಅಮ್ಮ ಹೇಳಿದರು. ತ್ಯಾಗದೊಂದಿಗೆ ಸೇರಿದರೆ ಮಾತ್ರ ನಮ್ಮ ಸಂಸ್ಕೃತಿಯ ಉದ್ಧಾರ ಸಾಧ್ಯ. ಋಷಿಗಳು ಕೊಟ್ಟ ಸಂಸ್ಕೃತಿಯನ್ನು ನಮ್ಮಲ್ಲಿ ಜಾಗೃತಗೊಳಿಸಲು ನೆನೆಪು ಮಾಡಿಸಲಿಕ್ಕೆಂದೇ ಇರುವುದು ಈ ದಿನ – ಬಾಹ್ಯಾಡಂಬರಕ್ಕೋ, ಉತ್ಸವಕ್ಕೋ ಅಲ್ಲ. ವೈಯಕ್ತಿಕತೆಯನ್ನು ಮರೆತು ಒಳ್ಳೆ ಕಾರ್ಯಗಳಲ್ಲಿ ಮಗ್ನರಾಗಿ, ಅವುಗಳಲ್ಲಿ ಆನಂದಿಸುವಾಗ ಮಾತ್ರವೇ ಜೀವನ ಉತ್ಸವವಾಗಿ ಬದಲಾಗುತ್ತದೆ. ಉಲ್ಲಾಸವೂ ಸಂಸ್ಕೃತಿಯೂ ಸೇರಿ ಒಂದುಗೂಡಬೇಕು. ಅದುವೇ ಬದುಕನ್ನು ಉತ್ಸವವಾಗಿ ಮಾರ್ಪಡಿಸುವುದು. ಸಂಸ್ಕೃತಿಯೊಟ್ಟಿಗೆ ಒಂದಾಗಿರುವ ಉಲ್ಲಾಸವು ಪುಟ್ಟ ಮಗುವಿನ ಮುಗುಳು ನಗೆಯಂತೆ – ನಿಷ್ಕಳಂಕ ಮುಗುಳುನಗೆ. ಅದು ನಮ್ಮನ್ನು ದಿವ್ಯತ್ವಕ್ಕೆ ಏರಿಸುವುದು. ಅಂದರೆ, ಸಂಸ್ಕಾರ ರಹಿತವಾದ ಉಲ್ಲಾಸವು ನಮ್ಮನ್ನು ಮೃಗೀಯತೆಗೆ ಕಡೆಗೆ ತಳ್ಳುವುದು.

ನಮಗೆ ತಿಳಿದಿದೆ, ಇವತ್ತು ಜಗತ್ತಿನಲ್ಲಿ ಸಂಸ್ಕೃತಿಯು, ಅಧೋಗತಿಯಲ್ಲಿದೆ. ರಾಜಕೀಯದಲ್ಲಾಗಲೀ, ಶೈಕ್ಷಣಿಕ ಕ್ಷೇತ್ರದಲ್ಲಾಗಲೀ, ಕುಟುಂಬಜೀವನದಲ್ಲಾಗಲೀ ಸಂಸ್ಕೃತಿ ಅವನತಿ ಹೊಂದುತ್ತಲಿದೆ. ಆಧ್ಯಾತ್ಮಿಕತೆಯಲ್ಲಿದ್ದುಕೊಂಡು ಶಕ್ತಿ ಸಂವರ್ಧನೆ ಮಾಡಿಕೊಂಡಾಗ ಮಾತ್ರವೇ ಈ ಸಂಸ್ಕೃತಿಯನ್ನು ಉದ್ಧಾರ ಮಾಡಲು ಸಾಧ್ಯ. ನಮ್ಮ ಜೀವನದಲ್ಲಿ ಶಕ್ತಿಯ ಉತ್ಪ್ರೇಕ್ಷೆ ಮಾಡುವ ಸಯನ್ಸೇ ಆಧ್ಯಾತ್ಮಿಕತೆ. ನಮ್ಮ ಬದುಕಿಗೆ ಸೌಂದರ್ಯ ಲೇಪಿಸುವ ಕಲೆಯೇ ಆಧ್ಯಾತ್ಮಿಕತೆ.

(ಅಮ್ಮನ 2001ರ ಜನ್ಮದಿನದ ಸಂದೇಶದಿಂದ)

ಇವತ್ತಿನ ಮಕ್ಕಳೂ ಯುವಕರೂ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯನ್ನೇ ಕಾಣುತ್ತಿರುವುದು. ನಮ್ಮಲ್ಲಿಲ್ಲದ ಹಲವು ಒಳ್ಳೆಗುಣಗಳು ಅವರಲ್ಲಿ ಕಂಡು ಬರುತ್ತದೆ. ಆದರೆ, ನಮ್ಮ ಮೌಲ್ಯಗಳನ್ನು, ಸಂಸ್ಕೃತಿಯನ್ನು ಪೂರ್ಣವಾಗಿ ಮರೆತು ಪಾಶ್ಚಾತ್ಯ ರೀತಿಗಳ ಅಂಧಾನುಕರಣೆಯೇ ಇವತ್ತು ಕಂಡುಬರುವುದು. ಅದು ಪ್ಲಾಸ್ಟಿಕ್ ಸೇಬು ಕಚ್ಚಿದ ಹಾಗೆ; ಶಿವನು ಬ್ರಹ್ಮನ ವೇಷ ಹಾಕಿದಂತೆ. ಇದರಿಂದ ನಮ್ಮ ನಿಜ ವ್ಯಕ್ತಿತ್ವ ನಾಶವಾಗುತ್ತದೆ. ಆದಕಾರಣ ನಾವು ಬೆಳೆದ ಸಂಸ್ಕೃತಿಗೆ ಮರಳಲು ಪ್ರಯತ್ನಿಸಬೇಕು. ಅದಕ್ಕಾಗಿ ಚಿಕ್ಕ ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಈ ಸಂಸ್ಕೃತಿಯ ಭದ್ರ ಬುನಾದಿ ಹಾಕಲು ತಾಯಂದಿರು ಪ್ರಯತ್ನಿಸಬೇಕು. ಸಮಯ ಇನ್ನೂ ಮೀರಿಲ್ಲ. ವಯಸ್ಕರು ನಮ್ಮಸಂಸ್ಕೃತಿ ಏನಂತ ಅರಿತು ಮುಂದಿನ ತಲೆಮಾರಿಗೆ ಹಸ್ತಾಂತರಿಸ ಬೇಕು. ಆದರೆ ಇವತ್ತಿನ ಹಲವು ತಂದೆತಾಯಂದಿರು ಏನಂತ ಹೇಳುತ್ತಾರೆ? ಮಕ್ಕಳಿಗೆ, ನೀನು ಚೆನ್ನಾಗಿ ಓದಿ ಡಾಕ್ಟರಾಗ ಬೇಕು, ಇಂಜಿನಿಯರ್ ಆಗಬೇಕು, ಕಲೆಕ್ಟರ್ ಆಗಬೇಕು ಎಂದು ಮಾತ್ರವೇ ಉಪದೇಶಿಸುತ್ತಾರೆ. ಇದು ಬೇಡವೆಂದೋ, ತಪ್ಪೆಂದೋ ಅಮ್ಮ ಹೇಳುತ್ತಿಲ್ಲ. ಅದರೊಂದಿಗೆ ನಮ್ಮ ಮಾನವೀಯ ಮೌಲ್ಯಗಳನ್ನು ಕೂಡಿಸಿ, ಉದ್ಧಾರ ಮಾಡುವ ಮಾರ್ಗವನ್ನು, ಜೀವಿಸಿ ತೋರಿಸಿ ಕೊಡಬೇಕು. ಅದು ಮಾತ್ರವೇ ಅಮ್ಮ ಹೇಳಲಿಕ್ಕಿರುವುದು.

ಚಿಕ್ಕ ಮಕ್ಕಳ ಮನಸ್ಸೆಂಬುದು ಹೊಸದಾಗಿ ಸಿಮೆಂಟ್ ಹಾಕಿದ ನೆಲದ ಹಾಗೆ. ಅದರಲ್ಲಿ ಅಚ್ಚುಮೂಡಿದ ಹೆಜ್ಜೆ ಗುರುತುಗಳು ಮಾಸಿಹೋಗುವುದಿಲ್ಲ. ಅದು ಸ್ಪಷ್ಟವಾಗಿ ಉಳಿಯುತ್ತದೆ. ಆದ ಕಾರಣವೇ, ಚಿಕ್ಕ ಪ್ರಾಯದಿಂದಲೇ ಅವರಲ್ಲಿ ಒಳ್ಳೆ ಸಂಸ್ಕೃತಿ ಬೆಳೆಸಲು ನಾವು ಶ್ರಮಿಸಬೇಕು. ಮೊದಲಿನಿಂದಲೇ ಮೈಗೂಡಿಸಿಕೊಂಡು ಬಂದ ಈ ಸಂಸ್ಕೃತಿಯೇ ಅವರ ಬದುಕಿನ ಮೂಲೆಗಲ್ಲು. ನಮಗೆಲ್ಲಾ ನಮ್ಮ ಮಕ್ಕಳು ಓದಿ ಶಕ್ತಿಶಾಲಿಗಳಾಗಿ, ಧಾರಾಳ ಹಣ ಸಂಪಾದಿಸಿ ಸುಖವಾಗಿ ಜೀವಿಸುವುದನ್ನು ಕಾಣಲು ಆಸೆ. ಹಾಗಂತ, ಆಧ್ಯಾತ್ಮಿಕ ಸಂಸ್ಕಾರವಿಲ್ಲದಿದ್ದರೆ, ಎಷ್ಟು ವಿದ್ಯೆ ಸಂಪಾದಿಸಿದರೂ, ಯಾವ ಪದವಿ ಗಳಿಸಿದರೂ, ಎಷ್ಟು ಧನ ಸಂಪಾದಿಸಿದರೂ ಅದರಿಂದಾಗಿ ಮಾತಾಪಿತೃಗಳಿಗೆ, ಸಮುದಾಯಕ್ಕೆ ಶಾಂತಿಯೂ, ಸಮಾಧಾನವೂ ಸಿಗಬೇಕೆಂದೇನಿಲ್ಲ. ಇದೆಲ್ಲ ಗಳಿಸುವ ಅವಕಾಶ ಕೊಟ್ಟೂ ಮಕ್ಕಳ ನೈತಿಕ ಅಧಃಪತನದ ಜೀವನ ಕಂಡು ಕಣ್ಣೀರು ಕರೆಯುವ ಸಾಕಷ್ಟುಕುಟುಂಬಗಳು ಅಮ್ಮನಿಗೆ ಗೊತ್ತು. ಅವೆಲ್ಲವುಗಳಿಗೆ ಅಡಿಪಾಯವು ಒಳ್ಳೆ ಸಂಸ್ಕಾರ. ಅದುವೇ ಯಾವ ತಂದೆಯೂ, ತಾಯಿಯೂ ಮಕ್ಕಳಿಗೆ ಕೊಡಬೇಕಾದ ಅತಿ ಬೆಲೆಬಾಳುವ ಹಾಗೂ ನಶಿಸಲಾಗದ ಆಸ್ತಿ. ಸಂಸ್ಕಾರವೆಂಬುದು ಬರೇ ಪುಸ್ತಕಗಳೋ, ಶಾಲೆಯೋ ಕೊಡಲು ಸಾಧ್ಯವಾಗುವಂಥದ್ದಲ್ಲ. ಅದಕ್ಕೆ ಪ್ರಪ್ರಥಮವಾಗಿ ಬೇಕಾಗಿರುವುದು ನಮ್ಮ ಜೀವನವನ್ನು ಸಂಸ್ಕಾರಸಂಪನ್ನ ಮಾಡುವುದು. ನಮ್ಮಲ್ಲಿ ಪರಿವರ್ತನೆ ಸಾಧಿಸದೆ ಮುಂದಿನ ತಲೆಮಾರಿನಲ್ಲಿ ಪರಿವರ್ತನೆ ತರುವುದು ಸಾಧ್ಯವಿಲ್ಲ. ಇಂದು ನಾವು ಚಿನ್ನ ಕೊಟ್ಟು ಕಾಗೆಬಂಗಾರ ಸಂಪಾದಿಸುತ್ತಿದ್ದೇವೆ. ಈ ಮಣ್ಣಿನ ಅಧ್ಯಾತ್ಮಿಕ ಸಂಸ್ಕಾರ ಕಳೆದುಕೊಳ್ಳದೆಯೇ ನಮಗೆ ಸಂಪತ್ತು ಗಳಿಸಲು ಸಾಧ್ಯ. ಆಧ್ಯಾತ್ಮಿಕತೆಯೂ, ಲೌಕಿಕತೆಯೂ ಪರಸ್ಪರ ವಿರುದ್ಧವಲ್ಲ. ಒಂದಕ್ಕೆ ಬೇಕಾಗಿ ಮತ್ತೊಂದನ್ನು ನಿರಾಕರಿಸಬೇಕಾಗಿಲ್ಲ.

(ಅಮ್ಮನ 2001ರ ಜನ್ಮದಿನದ ಸಂದೇಶದಿಂದ)

ಅಮೃತಪುರಿ, ಸೆಪ್ಟೆಂಬರ್ 22.

ಅಮ್ಮ ತಮಗೆ ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರ ದೊರೆತಲ್ಲಿ ದೇಶದ ಶಾಲೆಗಳು, ರಸ್ತೆಗಳು ಮತ್ತು ಸಾರ್ವಜನಿಕ ಪ್ರದೇಶಗಳನ್ನು ನಿರ್ಮಲವನ್ನಾಗಿ ಮಾಡಲು ಮಠದ ವತಿಯಿಂದ ಸಿದ್ಧರಾಗಿದ್ದೇವೆ, ಎಂದು ಹೇಳಿದ್ದಾರೆ. “ಭಾರತ ಪ್ರಗತಿಶೀಲ ದೇಶವೆಂದು ನಾವು ಹೇಳಿಕೊಳ್ಳುತ್ತೇವೆ. ಆದರೆ ಇಲ್ಲಿ ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳುವುದರಲ್ಲಿ ನಾವು ಇನ್ನೂ ಯಶಸ್ವಿಯಾಗಿಲ್ಲ. ನಾವು ಇನ್ನೂ ಹಲವು ಶತಮಾನಗಳಷ್ಟು ಹಿಂದುಳಿದಿದ್ದೇವೆ, ಇದಕ್ಕೆ ನಮ್ಮ ರಸ್ತೆಗಳು ಮತ್ತು ಸಾರ್ವಜನಿಕ ಶೌಚಾಲಯಗಳೇ ಸಾಕ್ಷಿ.” ಎಂದು ಅಮ್ಮ ಅತಿ ವ್ಯಸನದಿಂದ ಹೇಳುತ್ತಾರೆ.

“ವಿದೇಶಗಳಲ್ಲಿ ಶೌಚಾಲಯ, ರಸ್ತೆಗಳ ಸ್ವಚ್ಚತೆ ಕಾಪಾಡಿಕೊಂದು ಬರುವುದರಲ್ಲಿ ಸಾಕಷ್ಟು ಗಮನ ನೀಡುತ್ತಿದ್ದಾರೆ. ನಾವು ಇದನ್ನು ಅನುಸರಿಸಬೇಕಾಗಿದೆ. ಅವರಿಗೆ ಹೋಲಿಸಿದರೆ ನಾವಿನ್ನೂ ತುಂಬಾ ಹಿಂದುಳಿದಿದ್ದೇವೆ ಎಂದು ಬಹಳ ದುಃಖವಿದೆ. ಭಾರತದಲ್ಲಿ ಇನ್ನೂ ರಸ್ತೆ ಬದಿಯಲ್ಲೇ ಮೂತ್ರ ಮಾಡುವುದು, ಎಲ್ಲೆಂದರಲ್ಲಿ ಉಗಿಯುವುದು ಸಾಮಾನ್ಯ ದೃಶ್ಯವಾಗಿದೆ. ಕಸದ ತೊಟ್ಟಿಗಳಿದ್ದರೂ ಜನರು ಅದನ್ನು ಸರಿಯಾಗಿ ಬಳಸುತ್ತಿಲ್ಲ, ರಸ್ತೆಯಲ್ಲಿ ಕಸ ಸುರಿಯುತ್ತಾರೆ. ಪರಿಸರ ಸ್ವಚ್ಚತೆ ನಮ್ಮ ಅಭಿವೃದ್ಧಿ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇದನ್ನು ಸರಿಪಡಿಸಲು ನಾವು ಸಾರ್ವಜನಿಕರಲ್ಲಿ ಇನ್ನೂ ಹೆಚ್ಚು ಜಾಗೃತಿ ಮೂಡಿಸುವ ಗಂಭೀರ ಪ್ರಯತ್ನಗಳನ್ನು ಮಾಡಬೇಕು. ನಾವು ಇದನ್ನು ತಿಳಿಸುವ ನಾಮ ಫಲಕಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ, ದೊಡ್ದದಾಗಿ ಕಾಣುವಂತೆ ಅಲ್ಲಲ್ಲಿ ಪ್ರದರ್ಶಿಸಬೇಕು.”

ಅಮ್ಮ ಇಂತಹ ಕಾರ್ಯಕ್ಕೆ ತಮ್ಮ ಮಠದಿಂದ ಸಂಪೂರ್ಣ ಸಹಕಾರ ಸಿಗಲಿದೆ ಎಂದು ಒತ್ತಿ, ಒತ್ತಿ ಹೇಳಿದ್ದಾರೆ. ಈ ಪ್ರಯತ್ನದಲ್ಲಿ ವೃತ್ತ ಪತ್ರಿಕೆ ಮತ್ತು ಟಿ. ವಿ. ಮಾಧ್ಯಮಗಳ ಸಹಕಾರ ಅಗತ್ಯವಾಗಿದೆ. ಮಠವು ಸರ್ಕಾರ ಮತ್ತು ಆಡಳಿತ ಸಂಸ್ಥೆಗಳ ಸಹಕಾರ ದೊರೆತಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಸಿದ್ಧವಾಗಿದೆ ಎಂಬ ಭರವಸೆಯನ್ನೂ ನೀಡಿದ್ದಾರೆ. “ಇದಕ್ಕೆ ಅಗತ್ಯವಾದ ಯೋಜನೆ ಸಿದ್ಧವಾಗುತ್ತಿದೆ. ಮೊದಲು ಕೇರಳದಲ್ಲಿ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತದೆ. ಆ ಬಳಿಕ ಇತರ ರಾಜ್ಯಗಳಲ್ಲಿ ಇದನ್ನು ಕಾರ್ಯಗತಗೊಳಿಸಲಾಗುವುದು” ಎಂದು ಅಮ್ಮ ಯೋಜನೆಯನ್ನು ಕೃತಿಗಿಳಿಸುವ ಬಗ್ಗೆ ಹೇಳಿದ್ದಾರೆ.

ಗ್ರಾಮದಲ್ಲಿ ಮಠದ ವತಿಯಿಂದ ನಡೆದಿರುವ ಮನೆ ನಿರ್ಮಾಣ ಕೆಲಸದಲ್ಲಿ ಅಮ್ಮನ ಭಕ್ತಮಕ್ಕಳು ರಾಜ್ಯದ ಎಲ್ಲೆಡೆಯಿಂದ ಬಂದು ವಿವಿಧ ರೀತಿಯಲ್ಲಿ ಭಾಗವಹಿಸುತ್ತಲಿದ್ದಾರೆ.

ಬೆಂಗಳೂರಿನ ಅಯುಧ್ ಸಂಘಟನೆಯ 20 ಯುವಕರು ಸ್ವಾಮಿ ಅಮೃತಗೀತಾನಂದ ಪುರಿ ಅವರ ನೇತೃತ್ವದಲ್ಲಿ ಐದು ದಿನ ಶ್ರಮದಾನ ಮಾಡಿದರು. “ನಾವು ಮಾಡಿದ್ದು ಅಳಿಲು ಸೇವೆಯೇ ಸರಿ. ಆಧ್ಯಾತ್ಮದಲ್ಲಿ ತಪಸ್ಸಿಗೆ ಬಹಳ ಮಹತ್ವವಿದೆ. ಅಮ್ಮನ ಮಕ್ಕಳಾದ ನಮಗೆ ರಾಯಚೂರಿನಲ್ಲಿ ಸೇವೆ ಮಾಡುವುದು ನಿಜವಾದ ತಪಸ್ಸಾಯಿತು. ಹೃದಯದಲ್ಲಿ ನಾವು ಅಮ್ಮನಿಗಾಗಿ ತಪಿಸುತ್ತಿದ್ದೆವು.” ೪೮ ಡಿಗ್ರಿ ಸೆ. ತಾಪಮಾನದಲ್ಲಿ ಅಲ್ಲಿನ ಜನರಿಗಾಗಿ ನಿಸ್ವಾರ್ಥವಾಗಿ ಮನೆ ಕಟ್ಟುವ ಕೆಲಸ ಮಾಡುವುದು ನಿಜಕ್ಕೂ ತಪಸ್ಸೇ ಆಗಿತ್ತೆನ್ನಿ. ಮಾತ್ರವಲ್ಲ, ತಿಂಗಳುಗಳಿಂದ ಅಮೃತಪುರಿಯಿಂದ, ಅಮ್ಮನಿಂದ ಮತ್ತು ಆಶ್ರಮದಿಂದ ದೂರದಲ್ಲಿ ಆ ಅಜ್ಞಾತ ಊರಿನಲ್ಲಿಯೇ ಇದ್ದು ಸೇವೆ ಮಾಡುತ್ತಿರುವ ನಾಲ್ಕಾರು ಊರ ಹಿರಿಯರು, “ಏಪ್ರಿಲ್ ಮೂರನೇ ವಾರ ನಾನು ನೋಡ್ದೆ; ಒಂದು ದಿನಕ್ಕೆ ಮೂರು ಮೂರು ಮನೆಗಳಿಗೆ ಒಟ್ಟೊಟ್ಟಿಗೆ ತಾರಸಿ ಹಾಕ್ತಿದ್ರು!” ಇನ್ನೊಬ್ಬ ನೋಡುಗರು ಅಮ್ಮನ ಮಕ್ಕಳ ಕಾರ್ಯಕ್ಷಮತೆ ಮತ್ತು ವೇಗದ ಬಗ್ಗೆ ಮೆಚ್ಚಿಕೆಯನ್ನು ವ್ಯಕ್ತಪಡಿಸಿದರು. ಮತ್ತೊಬ್ಬರು, “ಈ ಜನ ಒಂದೊಂದು ಸಲಕ್ಕೆ ಒಂದೊಂದು ಸಾಲನ್ನು ಕಟ್ಟುತ್ತಾ ಹೋಗುತ್ತಾರೆ; ಮೊದಲ ಒಂದು ಸಾಲಿನ ಎಲ್ಲ ಮನೆಗಳಿಗೆ ಪಾಯ ಹಾಕುತ್ತಾ ಹೋಗುವರು; ನಂತರ ಎಲ್ಲಾ ಗೋಡೆಗಳನ್ನು ಒಂದೇ ಹಂತದಲ್ಲಿ ಏರಿಸುತ್ತಾ ಹೋಗುವರು… ಇದು ಮಕ್ಕಳು ಆಟವಾಡುವ ಹಾಗೆ ಕಾಣಿಸುತ್ತದೆ; ಹೀಗೆ ಸುಲಭಮಾರ್ಗದಲ್ಲಿ ಅನೇಕ ಮನೆಗಳನ್ನು ಒಟ್ಟೊಟ್ಟಿಗೆ ನಿರ್ಮಿಸುವ ತಂತ್ರವನ್ನು ಅಮ್ಮನೇ ಕಲಿಸಿದ್ದಂತೆ!” ಎಂದು ತುಂಬಾ ಅಚ್ಚರಿ ವ್ಯಕ್ತಪಡಿಸಿದರು.

ಸರ್ಕಾರದ ಹಾಗೂ ಸ್ಥಳೀಯ ಅಧಿಕಾರಿಗಳ ಮತ್ತು ಗ್ರಾಮಸ್ಥರ ಪೂರ್ಣಸಹಕಾರವೂ, ಕಾರ್ಯಸಫಲತೆಯೂ ಗ್ರಾಮಸ್ಥರಿಗೆ ಬಹು ವಿಶ್ವಾಸ ನೀಡಿರುವ ಸಂಗತಿ.

ದಾವಣಗೆರೆಯ ಬ್ರಹ್ಮಚಾರಿಣಿ ಅಂಜಲಿ ಅವರ ನೇತೃತ್ವದಲ್ಲಿ ಇದುವರೆಗೂ ಎರಡು ಬ್ಯಾಚಿನಲ್ಲಿ ಉತ್ತರ ಕರ್ನಾಟಕದ ಅಮ್ಮನ ಮಕ್ಕಳು ರಾಯಚೂರಿನಲ್ಲಿ ಶ್ರಮದಾನ ಮಾಡಿದ್ದಾರೆ.
ಇದೇ ಫೆಬ್ರವರಿಯಲ್ಲಿ 25 ಮಂದಿ ತಂಡವು ಒಂದು ದಿನದ ಮಟ್ಟಿಗೆ ಡೊಂಗರಾಂಪುರಕ್ಕೆ ಭೇಟಿಯಿತ್ತು, ಅಲ್ಲಿನ ಕೆಲಸಗಾರರಿಗೆ ವಿಶೇಷವಾಗಿ ಬಗೆ ಬಗೆಯ ಭಕ್ಷ್ಯಗಳ ಅಡುಗೆ ಮಾಡಿ ಕೈಯ್ಯಾರೆ ಬಡಿಸಿ ಸೋದರತ್ವ ಸಂತೋಷಗಳನ್ನು ನೀಡಿಬಂದರು. ಇವರಲ್ಲಿ ಅಮೃತ ವಿದ್ಯಾಲಯದ ಅಧ್ಯಾಪಕವೃಂದದವರು, ವಿದ್ಯಾರ್ಥಿಗಳು ಮತ್ತು ಪೋಷಕರೂ ಸೇರಿದ್ದರು. ಶ್ರಮಪೂರಿತ ಕೆಲಸದಲ್ಲಿ ನಿರತರಾಗಿದ್ದ ಸ್ಥಳೀಯ ಕೆಲಸಗಾರರ ಸೇವೆಯನ್ನು ಮೆಚ್ಚಿದ ತಾಯಂದಿರು ಈ ಯಾತ್ರೆಯನ್ನು ಕೈಗೊಂಡಿದ್ದರು.

ಮತ್ತೆ ಏಪ್ರಿಲ್ ಮೂರನೇ ವಾರದಲ್ಲಿ ಹೋಗಿದ್ದು 27 ಭಕ್ತರು (7 ಮಹಿಳೆಯರು ಸೇರಿ) – ಇವರಲ್ಲಿ ಅಮೃತವಿದ್ಯಾಲಯದ ಅಧ್ಯಾಪಕೇತರ ಸಿಬ್ಬಂದಿ ಮತ್ತು ಇತರ ಜಿಲ್ಲೆಗಳ ಭಕ್ತರೂ ಸೇರಿದ್ದರು; 15 ವರ್ಷದ ಬಾಲಕನಿಂದ 60 ವರ್ಷದ ವಯಸ್ಸಿನವರೂ ಈ ತಂಡದಲ್ಲಿದ್ದರು. ಮಾತ್ರವಲ್ಲ, ಮಧುಮೇಹ ರಕ್ತದೊತ್ತಡದಂಥ ರೋಗವಿದ್ದವರೂ ಇದ್ದರು. ಈ ಸಲ ಈ ತಂಡವು ಆರು ದಿನಗಳ ಕಾಲ ಅಲ್ಲಿದ್ದು ಮನೆ ಕಟ್ಟುವ ಶ್ರಮಪೂರಿತ ಕೆಲಸದಲ್ಲಿ ಭಾಗವಹಿಸಿತು. ವೈಶಾಖದ ಶಾಖ ಜೋರಾಗಿದ್ದರೂ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರೂ ಯಾರಿಗೂ ಯಾವ ರೀತಿಯ ಅನಾರೋಗ್ಯವೂ ಬಾಧಿಸದೆಅಮ್ಮನ ಕೃಪೆಯ ತಂಗಾಳಿ ಮಾತ್ರವೇ ತಮಗೆ ಅನುಭವವಾಯಿತೆಂದು ಅವರು ಹೇಳುವರು. ಪ್ರತಿನಿತ್ಯ ಭಜನೆ ಅರ್ಚನೆಗಳೊಂದಿಗೂ ನಗು ನಗುತ್ತಲೂ ಕೆಲಸಮಾಡುತ್ತಿದ್ದ ತಮ್ಮೆಲ್ಲರಿಗೆ ನಿಸ್ವಾರ್ಥಸೇವೆಯ ಆನಂದ ಹೇಗಿರುತ್ತದೆಂದು ಮನವರಿಕೆಯಾಯಿತು ಎಂದು ಹೃದಯಪೂರ್ವಕವಾಗಿ ಹೇಳುತ್ತಾರೆ.

ಆಗೋಸ್ಟ್ 30, 2010

ಉತ್ತರ ಕರ್ನಾಟಕ ಹಾಗೂ ಆಂಧ್ರಗಳ ಚರಿತ್ರೆಯಲ್ಲಿ ಅಪಾರ ನೋವು, ನಷ್ಟ ತಂದ ದಿನಗಳು ಸೆಪ್ಟಂಬರ್ 27ರಿಂದ ಅಕ್ಟೋಬರ್ 4ರ ವರೆಗಿನ ಎಂಟು ದಿನಗಳು. ಹಳ್ಳಿಗಳಿಗೆ ಹಳ್ಳಿಗಳೇ ಜಲಾವೃತವಾಗಿ ಪ್ರಪಂಚದ ಗಮನ ಸೆಳೆಯಿತು. ಈ ಪ್ರವಾಹಪೀಡಿತ ಕರ್ನಾಟಕ ಹಾಗೂ ಆಂಧ್ರಪ್ರದೇಶದ ತಮ್ಮ ಮಕ್ಕಳ ನೆರವಿಗೆ ತಲಪಲು ಅಮ್ಮ ತಡ ಮಾಡಲಿಲ್ಲ.

ಪ್ರವಾಹದ ನೀರು ಇನ್ನೂ ಇಳಿಯುವ ಮೊದಲೇ ಕರ್ಣಾಟಕದ ಬೆಳಗಾಂವಿ, ರಾಯಚೂರು, ಬಳ್ಳಾರಿ, ಬಿಜಾಪುರಗಳಿಗೆ, ಬ್ರಹ್ಮಚಾರಿಗಳು, ಭಕ್ತರು ಮತ್ತು ಡಾಕ್ಟರುಗಳನ್ನೊಳಗೊಂಡ ತಂಡ ಧಾವಿಸಿತು. ಈ ಕರ್ತವ್ಯ ನಿರತ ತಂಡ ವಿಳಂಬವಿಲ್ಲದೆ ವೈದ್ಯಕೀಯ ಸೇವೆ, ಸೌಲಭ್ಯ, ತುರ್ತು ಪರಿಸ್ಥಿತಿಯಿರುವಲ್ಲೆಲ್ಲಾ ಪ್ರವಾಹ ಪೀಡಿತರಿಗೆ ಲಭಿಸುವಂತೆ ಮಾಡಿತು. ಅಲ್ಲದೆ ಆಹಾರ ಸಾಮಗ್ರಿಗಳು, ಹಾಸುವ, ಹೊದೆಯುವ ಬಟ್ಟೆಗಳನ್ನು ಉಚಿತವಾಗಿ ಹಂಚಲಾಯಿತು.

ವಿವಿಧೆಡೆಗಳಲ್ಲಿ 2000 ಮನೆಗಳ ನಿರ್ಮಾಣಕ್ಕೆಂದು ಅಮ್ಮ 50 ಕೋಟಿ ರುಪಾಯಿಗಳ ಯೋಜನೆಯನ್ನು ಹಮ್ಮಿಕೊಂಡರು. ರಾಯಚೂರಿನಲ್ಲಿ ಮೊದಲನೇ ಘಟ್ಟದ ಕೆಲಸ 2ನೇ ಫೆಬ್ರವರಿಗೆ ಆರಂಭವೂ ಆಯಿತು

ಬ್ರಹ್ಮಚಾರಿ ಪ್ರೇಮಾಮೃತ ಚೈತನ್ಯ, ಬ್ರಹ್ಮಚಾರಿ ಬಾಬು ರಾವ್, ಬ್ರಹ್ಮಚಾರಿ ರಾಮಕೃಷ್ಣ ಮೊದಲಾಗಿ ನಾಲ್ಕಾರು ಬ್ರಹ್ಮಚಾರಿಗಳು ಅಲ್ಲೇ ನೆಲೆಸಿ ಮೇಲ್ವಿಚಾರಣೆ ಮತ್ತು ನಿರ್ಮಾಣ ಕೆಲಸದಲ್ಲಿ ತೊಡಗಿದ್ದರು. ನೆಲದಿಂದ ಒಂದೂವರೆ ಅಡಿ ಎತ್ತರದಲ್ಲಿ ನಿರ್ಮಾಣಗೊಂಡಿರುವ ಈ ಮನೆಗಳಿಗೆ ಮುಂದೆ, ಹಿಂದೆ ಹಾಗೂ ಅಕ್ಕಪಕ್ಕಗಳಲ್ಲಿ ಸಾಕಷ್ಟು ಖಾಲಿಜಾಗಗಳನ್ನು ಬಿಡಲಾಗಿದೆ. ಕೃಷಿಕರಾದ ಜನರು ದನಕರುಗಳನ್ನು ಸಾಕಿಕೊಳ್ಳಲು, ತರಕಾರಿ ಹೂವು ಹಣ್ಣುಗಳನ್ನು ಬೆಳೆದುಕೊಳ್ಳಲು ಸಾಕಷ್ಟು ಅನುವು ಮಾಡಿಕೊಡಲಾಗಿದೆ. ಬಚ್ಚಲುಮನೆಯನ್ನು ಮನೆಯ ಒಳಗೇ ಒದಗಿಸಿ, ಕಕ್ಕಸು ಮನೆಯನ್ನು ಹಿತ್ತಲಲ್ಲಿ ಕಟ್ಟಲಾಗಿದೆ. ಅಡುಗೆ ಮನೆಯಲ್ಲಿ ಸ್ಲಾಬ್‌ಗಳನ್ನು ಅಳವಡಿಸಲಾಗಿದೆ. ಮನೆ ಮನೆಗೂ ನೀರಿನ ಟ್ಯಾಂಕ್ ಇರುವ ಕಾರಣ ಮನೆಯವರು ನಲ್ಲಿ ಮೂಲಕ ನೀರನ್ನು ಬಳಸಿಕೊಳ್ಳಬಹುದು.

ಮಾರ್ಚ್ 22ರಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಅವರು ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ನಡೆದಿರುವ ಮನೆನಿರ್ಮಾಣ ಸ್ಥಳಗಳಿಗೆ ಭೇಟಿಯಿತ್ತಾಗ ಡೋಂಗರಾಂಪುರದಲ್ಲಿ ಮಾತಾ ಅಮೃತಾನಂದಮಯಿ ಮಠವು ನಿರ್ಮಿಸಿರುವ ಮನೆಗಳನ್ನು ವೀಕ್ಷಿಸಿದರು. ಆ ಸಂದರ್ಭದಲ್ಲಿ ಮಠದ ಬ್ರಹ್ಮಚಾರಿ ಅಭಯಾಮೃತ ಚೈತನ್ಯ ಅವರು ಸ್ಯಾಂಪಲ್ ಮನೆಯೊಂದನ್ನು ಮುಖ್ಯಮಂತ್ರಿಗಳಿಗೂ ಇತರ ಮಂತ್ರಿ ಮತ್ತು ಅಧಿಕಾರಿಗಳಿಗೂ ತೋರಿಸಿದರು. ಸ್ವಾತಂತ್ರ್ಯಾನಂತರದಿಂದ ಇಷ್ಟರವರೆಗಿನ, ಹಿಂದಿನ ಸರ್ಕಾರಗಳ ಯಾವುದೇ ದುರಂತ ಪರಿಹಾರ  ಕಾರ್ಯಕ್ಕಿಂತ, ತನ್ನ ಸರ್ಕಾರವೇ ಅತ್ಯಂತ ಶೀಘ್ರವಾಗಿ ಪ್ರವಾಹಪೀಡಿತರಿಗಾಗಿ ಮನೆ ನಿರ್ಮಿಸಿ ದಾಖಲೆ ಸಾಧಿಸಿದೆ ಎಂದ ಮುಖ್ಯಮಂತ್ರಿಯವರು, ಈ ದಾಖಲೆಯಲ್ಲಿ ಮಾತಾ ಅಮೃತಾನಂದಮಯಿ ಮಠವು ವಾಗ್ದಾನದ ಗಡುವಿನ ಅವಧಿಗೂ ಮುನ್ನವೇ ಮನೆಗಳನ್ನು ನಿರ್ಮಿಸಿ ಪೂರೈಸಿದ ಮೊದಲ ಸಂಸ್ಥೆಯಾಗಿ ಮುಖ್ಯಪಾತ್ರ ವಹಿಸಿದೆ, ಎಂದೂ ಗುರುತಿಸಿದರು.

ಸರಕಾರವು ಆಶ್ರಮಕ್ಕೆ ನಿವೇಶನ ಮಂಜೂರು ಮಾಡಿದ ಕೇವಲ ಇಪ್ಪತ್ತೇ ದಿನಗಳಲ್ಲಿ (ಡೋಂಗರಾಂಪುರದಲ್ಲಿ) ಸಂಪೂರ್ಣ ಕಟ್ಟಿ ಮುಗಿಸಿದ 100 ಮನೆಗಳನ್ನು ಸರಕಾರಕ್ಕೆ ಹಸ್ತಾಂತರ ಮಾಡುವ ದಾಖಲೆಯನ್ನು ಅಮ್ಮನ ಆಶ್ರಮವು ನಿರ್ಮಿಸಿದೆ; ಎಲ್ಲ ಕ್ಷೇತ್ರಗಳ ವಕ್ತಾರರಿಂದ ಮುಕ್ತ ಪ್ರಶಂಸೆಗೆ ಭಾಜನವಾಗಿದೆ.

ಇನ್ನೂ 242 ಮನೆಗಳನ್ನು ಅಗೋಸ್ಟ್ 4ರಂದು ಕರ್ಣಾಟಕ ಸರಕಾರಕ್ಕೆ ಹಸ್ತಾಂತರಿಸಿತು. ಮೊದಲು ಮಠ ಕಟ್ಟಿದ ಮನೆಗಳನ್ನು ಅಮೂಲಗ್ರವಾಗಿ ಪರಿಶೀಲಿಸಿದ ನಂತರವೇ, ಅಂದಿನ ಸಮಾರಂಭದಲ್ಲಿ ನೂತನ ಮನೆಗಳ ಕೀಲಿ ಕೈಗಳನ್ನು ಸ್ವೀಕರಿಸಿದ ಮುಖ್ಯ ಮಂತ್ರಿ ಯಡಿಯೂರಪ್ಪನವರು “ಮಾತಾ ಅಮೃತಾನಂದಮಯಿ ದೇವರಿದ್ದಂತೆ, ಅವರು ನಿರ್ಮಿಸಿಕೊಟ್ಟಿರುವ ಈ ಮನೆಗಳು ದೇವಾಲಯಗಳಿದ್ದಂತೆ, ಪ್ರತಿ ದಿನ ಅವರನ್ನು ಸ್ಮರಿಸಿಕೊಳ್ಳಿ; ನಿಮಗೆಲ್ಲರಿಗೂ ಒಳ್ಳೆಯದಾಗುತ್ತದೆ” ಎಂದು ಸಂತ್ರಸ್ತರನ್ನುದ್ದೇಶಿಸಿ ನುಡಿದರು. ಈ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ ಎಂದ ಅವರು ಈ ಕಾರ್ಯದಲ್ಲಿ ನೆರವಾದ ಸಂಘ ಸಂಸ್ಥೆಗಳು ಹಾಗೂ ಮಠ ಮಾನ್ಯಗಳ ಸಹಕ್ಕಾರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು”

ಇನ್ನುಳಿದ ಮನೆಗಳ ಕೆಲಸವೂ ಭರಾಟೆಯಿಂದ ಮುಂದುವರೆದಿದೆ.