ಹಿಂದಿನ ಕಾಲದಲ್ಲೆಲ್ಲ ಕಾಡು ಹೊರಗಿರುತ್ತಿತ್ತು. ಈಗ ಕಾಡನ್ನು ಕಡಿದು ಸವರಿ ನಮ್ಮೊಳಗೇ  ತಂದಿದ್ದೇವೆ. ಹಿಂದೆ ಪ್ರಾಣಿಗಳು ಹೊರಗಿರುತ್ತಿದ್ದವು. ಇಂದು ಅವುಗಳನ್ನೂ ಆಂತರ್ಯದಲ್ಲಿ ತಂದಿದ್ದೇವೆ. ಹೃದಯದ ಕಲ್ಮಶಗಳನ್ನು ನಾವು ಶೇವ್ ಮಾಡಿ ತೆಗೆಯಬೇಕಾದದ್ದು; ಬದಲಿಗೆ ನಮ್ಮ ಮುಖದ್ದು ಅಲ್ಲ.

ಮಕ್ಕಳು ಏನೂ ತ್ಯಜಿಸಬೇಕೆಂದು ಅಮ್ಮ ಹೇಳುತ್ತಿಲ್ಲ. ಅನ್ಯರಲ್ಲಿ ಕರುಣೆ ತೋರಿಸಿದಾಗ, ಸ್ವಾರ್ಥ ತಾನಾಗಿಯೇ ಬಿಟ್ಟು ಹೋಗುತ್ತದೆ. ನೀವು ಒಂದು ದಿನಕ್ಕೆ ಹತ್ತು ರುಪಾಯಿ ಸಿಗರೇಟು ಸೇದುತ್ತೀರ ಎಂದು ಇಟ್ಟುಕೊಳ್ಳೋಣ.  ತಿಂಗಳಿಗೆ ಮುನ್ನೂರು ರುಪಾಯಿ ಆಯಿತು. ಈ ತರಹ ಲೆಕ್ಕ ಹಾಕಿದರೆ ವರ್ಷಕ್ಕೆ ಎಷ್ಟು ರುಪಾಯಿ ಆಗುವುದು ? ಆನಂದ ಸಿಗರೇಟಿನಲ್ಲಿಲ್ಲ – ನಮ್ಮೊಳಗೇ ಇದೆ. ಇದನ್ನು ನಾವು ಅರಿತು ಕೊಳ್ಳುತ್ತಿಲ್ಲ. ಇದನ್ನು ಅರಿತುಕೊಳ್ಳಬೇಕಾದರೆ ಹೃದಯ ಶುದ್ಧ ಮಾಡಿಕೊಳ್ಳಬೇಕು. ಹೃದಯ ಶುದ್ಧಿ ಬೇಕೆಂದಿದ್ದರೆ ಒಳ್ಳೆ ಗುಣಗಳನ್ನು ಬೆಳೆಸಿಕೊಳ್ಳಬೇಕು, ದೇವರಲ್ಲಿ ಪ್ರೇಮ ಬೆಳೆಸಿಕೊಳ್ಳಬೇಕು. ಮಕ್ಕಳು ಕೇಳಬಹುದು, “ಹಾಗೆ ಮಾಡಿದರೆ ಸಿಗರೇಟು ಕಂಪೆನಿಗಳು ಏನು ಮಾಡಬೇಕು ? ” ಎಂದು. ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರವೆಂದೂ, ನಿಮ್ಮ ಮನಸ್ಸನ್ನೂ ಶರೀರವನ್ನೂ ನಾಶ ಮಾಡುತ್ತದೆಂದೂ ಕಂಪೆನಿಗಳವರೇ ಹೇಳುತ್ತಾರಲ್ಲವೇ ? ಹಾಗಾಗಿ ವಿವೇಕವುಳ್ಳ ಮಕ್ಕಳು ಅದರಿಂದ ಹಿಂದೆ ಸರಿಯಲಿ.

ಮಕ್ಕಳೇ, ಸುತ್ತಲೂ ಎಷ್ಟು ಬಡವರು ಮನೆಯಿಲ್ಲದೆಯೂ, ಬಟ್ಟೆಯಿಲ್ಲದೆಯೂ, ಊಟಕ್ಕಿಲ್ಲದೆಯೂ, ಚಿಕಿತ್ಸೆಗೆ ಹಣವಿಲ್ಲದೆಯೂ ಕಷ್ಟಪಡುತ್ತಿಲ್ಲ ? ಒಂದು ವರ್ಷದ ನಿಮ್ಮ ಸಿಗರೇಟಿನ ಖರ್ಚಿನಿಂದ, ಒಬ್ಬ ಬಡವನಿಗೆ ರಾತ್ರಿ ಮಲಗಿಕೊಳ್ಳುವುದಕ್ಕೆ ಒಂದು ಝೋಪಡಿ ಕಟ್ಟಿಕೊಡಬಹುದು. ಅವರಲ್ಲಿ ಕರುಣೆ ಹುಟ್ಟಿದಾಗ ನಮ್ಮ ಸ್ವಾರ್ಥ ತಾನಾಗಿಯೇ ಬಿಟ್ಟು ಹೋಗುತ್ತದೆ. ನಾವು ಏನನ್ನೂ ತ್ಯಜಿಸದೆಯೂ ಅನ್ಯರ ಸುಖದಲ್ಲಿ ಸಂತೃಪ್ತಿ ಪಡೆಯುತ್ತೇವೆ. ಹೀಗೆ ಪ್ರತಿಯೊಂದು ಸ್ವಾರ್ಥವೂ ಬಿಟ್ಟು ಹೋದಾಗ ನಾವು ದೇವರ ಕೃಪೆಗೆ ಪಾತ್ರರಾಗುತ್ತೇವೆ. ಸ್ವಾರ್ಥ ಬಿಟ್ಟು ಹೋದಾಗ ನಮ್ಮಲ್ಲಿರುವ ದಯೆ, ಕರುಣೆ ಮುಂತಾದ ಎಲ್ಲಾ ಗುಣಗಳು ನಮ್ಮಲ್ಲಿ ಬೆಳಗುತ್ತದೆ. ದುರ್ಗುಣಗಳು ಇಲ್ಲವಾಗುತ್ತದೆ.

ಮಕ್ಕಳೇ, ಬೇರೆಯವರ ತಪ್ಪನ್ನು ನೋಡಬೇಡಿ. ಅವುಗಳನ್ನು ಗಮನಿಸುವಾಗ ನಮ್ಮ ಹೆಜ್ಜೆಗಳಲ್ಲಿ ನಮ್ಮ ಗಮನ ತಪ್ಪಬಹುದು. ನಾವು ಹೊಂಡಕ್ಕೆ ಬೀಳಬಹುದು. ಮಕ್ಕಳೇ ತೆಂಗಿನ ಮರ ಹೇಳುತ್ತದೆ “ನಾನು ಬ್ರಹ್ಮನ್” ಎಂದು. ತೆಂಗಿನ ಕಾಯಿಯೂ ಹೇಳುತ್ತದೆ “ನಾನು ಬ್ರಹ್ಮನ್” ಎಂದು. ಫಲತುಂಬಿ ನಿಂತಿದ್ದ ತೆಂಗಿನ ಮರ ಫಲ ನೀಡಲು ತೊಡಗಿತು. ತೆಂಗಿನ ಕಾಯಿಯೋ. ಅದು ಬರೇ ಅಂಶ ಮಾತ್ರವೇ ಆಗಿರುವುದು. ಯಮನಿಯಮಗಳೊಂದಿಗೆ ನಾವೂ ಬ್ರಹ್ಮತ್ವವನ್ನು ಮುಟ್ಟಬಹುದು. ಆದಕಾರಣ ನಾನು ಬ್ರಹ್ಮನೆಂದು ಹೇಳಿಕೊಂಡು, ಅನುಷ್ಠಾನ ಮಾಡದೆ ನಡೆದಾಡಬೇಡಿ.

ಕೆಲವರು ಕಾವಿ ಬಟ್ಟೆ ಉಟ್ಟು ತಾನು ಸಂನ್ಯಾಸಿಯೆಂದು ಹೆಮ್ಮೆ ಪಡುತ್ತಾರೆ. “ಮಾರಾಂಬು”* ಗಿಡದಂತೆ ಅವರು. ಬೇರುಸಮೇತ  ಕಿತ್ತರೆ ಬುಡದಲ್ಲಿ ಏನೂ ಕಾಣಿಸುವುದಿಲ್ಲ. ಕಾವಿ ಬೆಂಕಿಯ ಬಣ್ಣ. ಶರೀರ ಬೋಧವನ್ನು ಸುಟ್ಟವರು ಇದನ್ನು ಧರಿಸಲು ಯೋಗ್ಯತೆಯುಳ್ಳವರು. ಸಂನ್ಯಾಸಿಗಳು ಸರ್ವಸಂಗ ಪರಿತ್ಯಾಗಿಗಳಾಗಬೇಕು. ಆ ಹಂತದಲ್ಲಿ ಮಾತ್ರ ಕಷಾಯ ಧರಿಸಲು ಅರ್ಹತೆ ಬರುವುದು.

ಮಕ್ಕಳೇ, ಮನೆಯ ಪ್ಲ್ಯಾನ್ ಬರೆಸಿ, ಅದರಲ್ಲಿ ವಾಸಿಸಲು ಬರುವುದೋ ? ಶಾಸ್ತ್ರವೂ ಹಾಗೆಯೇ. ಅದನ್ನು ಅನುಭವಿಸಿ ತಿಳಿಯಬೇಕು. ಸಕ್ಕರೆ ಎಂದು ಬರೆದು ಅದನ್ನು ನೆಕ್ಕಿದರೆ ಸಿಹಿ ಸಿಗುವುದಿಲ್ಲ. “ಕನ್ಯಾಕುಮಾರಿಯಲ್ಲಿ ಚಿನ್ನವಿದೆ” ಎಂಬ ಒಂದು ಬೋರ್ಡು ಕೊಲ್ಲ್ಯಂನಲ್ಲಿದೆ. ** ಬೋರ್ಡನ್ನು ಕೇಳಿದರೆ ಚಿನ್ನ ಸಿಗುವುದೇ ? ಹೋಗಿ ಖರೀದಿಸಬೇಕು ನಾವು. ಅದಕ್ಕೆ ಬೇಕಾದದ್ದನ್ನು ಮಾಡಬೇಕು. ಶಾಸ್ತ್ರಗಳಲ್ಲಿ ಹೇಳಿರುವುದನ್ನು ಅನುಭವಗತ ಮಾಡಿಕೊಳ್ಳಬೇಕೆಂದಿದ್ದರೆ ಅನುಷ್ಠಾನ ಬೇಕು.

ಮಕ್ಕಳೇ, ಈ ಲೋಕದಲ್ಲಿ ಯಾರಿಗೆ ಯಾರೂ ತಮ್ಮವರಲ್ಲ. ಯಾರೂ ನಿಷ್ಕಾಮ ಪ್ರೀತಿ ಕೊಡುವುದಿಲ್ಲ. ಮನುಷ್ಯನ ಪ್ರೀತಿಯು ಯಾವುದಾದರೂ ಆಸೆಯ ಹಿಂದಿರುತ್ತದೆ. ಹೆಂಡತಿಯಲ್ಲಿರುವುದು ನಿಜವಾದ ಪ್ರೇಮವೇ? ಇನ್ಯಾರನ್ನಾದರೂ ತನ್ನ ಅನುಮತಿಯಿಲ್ಲದೆ ನೋಡಿದರೋ, ಅವರ ಜೊತೆ ಮಾತಾಡಿದರೋ, ಸಂಶಯದಿಂದ ಹೆಂಡತಿಯನ್ನು ಕೊಲ್ಲಲೂ ಗಂಡ ತಯಾರು. ಎಲ್ಲರಿಗೂ ತಮ್ಮದೇ ಅಂತ ಇರುವ ಒಂದೇ ಒಂದು ಸತ್ಯ ದೇವರು ಮಾತ್ರ. ಅಲ್ಲಿ ಆಸೆಯೂ ಇಲ್ಲ, ಬೇರೆ ಏನೂ ಇಲ್ಲ.

ಮಕ್ಕಳೇ, ದೇವರಿಗಾಗಿ ಕಣ್ಣೀರು ಹರಿಸಿ. ಅದು ಬಿಟ್ಟು ಯಾರೋ ಜಗಳಾಡಿದರೆಂದೋ, ಏನಾದರೂ ಹೇಳಿದರೆಂದೋ ಯೋಚಿಸಿ ದುಃಖಿಸಬೇಡಿ. ಮಕ್ಕಳೇ, ಎಲ್ಲೂ ದೋಷ ಕಾಣಬೇಡಿ. ಒಳ್ಳೆಯದನ್ನು ಮಾತ್ರ ಕಾಣಲು ಪ್ರಯತ್ನಿಸಿ. ದೇವರು ನಿಮ್ಮನ್ನು ಅನುಗ್ರಹಿಸುವನು.
__________

*ಸುವರ್ಣ ಗೆಡ್ಡೆಯ ಗಿಡದಂಥ ಒಂದು ಬಗೆಯ ಕಾಡು ಗಿಡ; ಬಹಳ ದೊಡ್ಡದಾಗಿ ಹುಲುಸಾಗಿ ಬೆಳೆದರೂ, ಬುಡದಲ್ಲಿ ಯಾವುದೇ ತರದ ಗೆಡ್ಡೆಯಿರದೆ ಬೋಳಾಗಿರುತ್ತದೆ

**ಕೊಲ್ಲ್ಯಂ – ಜಿಲ್ಲೆಯ ಮುಖ್ಯ ಪಟ್ಟಣ – ಅಲ್ಲಿಂದ 160 ಕಿಲೊಮೀಟರ್ ದಕ್ಷಿಣಕ್ಕೆ, ಮೂರು ಸಾಗರಗಳು ಸಂಗಮವಾಗುವಲ್ಲಿ  ಕನ್ಯಾಕುಮಾರಿ ಇದೆ.

ಒಂದು ಊರಿನಲ್ಲಿ ಒಳ್ಳೆಯವರಾದ ಇಬ್ಬರು ವ್ಯಕ್ತಿಗಳಿದ್ದರೆ ಸಾಕು, ಎಷ್ಟೊ ಜನರನ್ನು ಪರಿವರ್ತಿಸಲು ಸಾಧ್ಯವಿದೆ. ಇವತ್ತಿನ ಎರಡೂ ತಲೆಮಾರುಗಳು ನಶಿಸಿ ಹೋಗುತ್ತಿವೆ. ಯುವಕರು ಹೆಂಡಕ್ಕೂ, ಗಾಂಜಕ್ಕೂ, ಹೆಣ್ಣಿಗೂ ಅಡಿಯಾಳಾಗಿ ಸ್ವತಃ ಅಧೋಗತಿಗಿಳಿದಿದ್ದಾರೆ. ಅವರಿಗೆ ಅದರಲ್ಲಿ ಆನಂದ ದೊರಕುವುದಾದರೆ ಅವುಗಳನ್ನು ಉಪೇಕ್ಷಿಸಬೇಕೆಂದು ಅಮ್ಮ ಹೇಳುತ್ತಿಲ್ಲ.

ಒಂದು ವರ್ಷವೆಲ್ಲ ಸೇದಿದ ನಂತರ ಮುಂದಿನ ವರ್ಷ ಅದರ ಎರಡು ಪಟ್ಟು ಸೇದಬೇಕಾಗುತ್ತದೆ; ಅಂದರೆ ಮಾತ್ರ ಮೊದಲು ಸಿಕ್ಕಿದಷ್ಟು ಆನಂದ ಸಿಗುವುದು. ನಾಲ್ಕೈದು ವರ್ಷಗಳು ಕಳೆದ ಮೇಲೆ ಎಷ್ಟೇ ಸೇದಿದರೂ ಏನೂ ಅನಿಸುವುದಿಲ್ಲ. ಕಡೆಗೆ ಕುರೂಪಿಗಳಾಗುತ್ತಾರೆ, ನಡುಗುತ್ತಾರೆ ಸುಸ್ತಾಗಿ ಬೀಳುತ್ತಾರೆ. ಅವರ ಆರೈಕೆ ಮಾಡಲು ಬೇರೆಯವರು ಬೇಕಾಗುತ್ತದೆ. ಚುಚ್ಚುಮದ್ದು ಚುಚ್ಚಿ ಸಂತೃಪ್ತಿ ಪಡೆಯುವವರಿದ್ದಾರೆ. ಮೊದಲು ಸಿಕ್ಕಷ್ಟು ಸಂತೃಪ್ತಿ ಪಡೆಯಲು ಪ್ರತಿ ವರ್ಷವೂ ಚುಚ್ಚುಮದ್ದಿನ ಪ್ರಮಾಣ ಹೆಚ್ಚಿಸಬೇಕಾಗುತ್ತದೆ. ಕೊನೆಗೆ ಎಷ್ಟು ತೆಗೆದುಕೊಂಡರೂ ಪ್ರಯೋಜನ ಸಿಗದು. ಎಷ್ಟು ಚುಚ್ಚಿಕೊಂಡರೂ ಪರಿಣಾಮವಾಗುವುದಿಲ್ಲ, ಅದೂ ಅಲ್ಲದೆ ತಲೆಯ ಸ್ಥಿಮಿತ ತಪ್ಪುವಂತೆಯೂ ಮಾಡುವುದು.

ಈ ವಸ್ತುಗಳಿಂದೆಲ್ಲ ಆನಂದ ಸಿಗುವುದಾದರೆ, ಗಾಂಜಾದಿಂದಲೋ ಚುಚ್ಚುಮದ್ದಿನಿಂದಲೋ ಯಾವಾಗಲೂ ಆನಂದ ಸಿಗಬೇಕಾಗಿತ್ತಲ್ಲ ? ಹಾಗಿಲ್ಲ. ಹಾಗಿದ್ದರೆ ಈ ಮದ್ದುಗಳು ಶರೀರದೊಳಹೊಕ್ಕು ಏನು ಮಾಡುತ್ತವೆ?
ತಲೆಯ ನರಗಳನ್ನು ಮರಗಟ್ಟಿಸುತ್ತದೆ; ಯಾವುದೋ ಜಗತ್ತು ಪ್ರವೇಶಿಸಿದಂತೆ ತೋರುತ್ತದೆ. ಆಗ ಅನಿಸುತ್ತದೆ, “ಇದೇ ಆನಂದ; ಎಲ್ಲ ಮರೆಯಲಿಕ್ಕೆ ಸಾಧ್ಯವಾಗುತ್ತದೆ” ಎಂದು. ಕೊನೆಗೆ, ನೂರು ವರ್ಷಗಳ ತನಕ ಬದುಕಿರಬೇಕಾದವನು ಇಪ್ಪತ್ತೈದು ವರ್ಷದಲ್ಲೇ ಸಾಯುತ್ತಾನೆ; ಇಲ್ಲವೆಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗೆ ಬದುಕಿರುವುದರಲ್ಲಿ ಲೋಕಕ್ಕೇನಾದರೂ ಪ್ರಯೋಜನ ಇದೆಯೇ? ಇರುವುದು ಬರೇ ತೊಂದರೆ ಮಾತ್ರ. ಅವರನ್ನು ನೆನೆದುಕೊಂಡು ತಂದೆ ತಾಯಂದಿರು ದುಃಖಿಸುತ್ತಾರೆ; ಕುಟುಂಬ ಕಣ್ಣೀರಲ್ಲಿ ಮುಳುಗುತ್ತದೆ.

ಅಮಲಿನ ಅಡಿಯಾಳಾಗಿ ಊರಲ್ಲಿ ಗಲಭೆ ಶುರು ಮಾಡುವವರಿಗೆ ಅದೆಲ್ಲದರಿಂದ ಆನಂದವೋ ಸುಖವೋ ಸಿಗುತ್ತದೆ ಎಂದಿದ್ದರೆ ಪರವಾಗಿರಲಿಲ್ಲ. ಆದರೆ ಅವರೆ ನಾಶವಾಗುತ್ತಿರುತ್ತಾರೆ. ಅವರ ಚಟಗಳು ಅವರನ್ನು ಬಾಧಿಸುತ್ತವೆ. ತಂದೆ ತಾಯಂದಿರಿಗೆ ದುಃಖ; ಸಮಾಜಕ್ಕೆ ದುಃಖ. ಇದೇ ಹೆಚ್ಚಿನ ಯುವಕರು ಸಮಾಜಕ್ಕಾಗಿ ಮಾಡುತ್ತಿರುವುದು.

ಲೋಕದ ಒಳಿತಿಗಾಗಿ ಕಾರ್ಯ ಪ್ರವೃತ್ತರಾಗಬೇಕಾದವರು ಎಳೆಯ ವಯಸ್ಸಿನಲ್ಲಿಯೇ ಮರಣಕ್ಕೆ ತುತ್ತಾಗುತ್ತಾರೆ. ಇಪ್ಪತ್ತೈದು ವರ್ಷ ತಂದೆ ತಾಯಿ ಕಷ್ಟಪಟ್ಟು ಸಾಕಿದ್ದಕ್ಕೆ ಪ್ರತಿಫಲವಾಗಿ ಅವರಿಗೆ ಸಿಗುವುದು ಬದುಕಿನಾದ್ಯಂತ ಕಣ್ಣೀರು; ಸಮಾಜಕ್ಕೆ ಮರೆಯಾಲಾಗದ, ಗುಣವಾಗದ ಗಾಯ. ಹಾಗೆ ಅವರು ಮಣ್ಣಾಗುತ್ತಾರೆ. ಇದು ಮುಂದುವರೆದರೆ ನಮ್ಮ ತಲೆಮಾರು ಅಳಿದು ಹೋಗುವುದು. ಆದಕಾರಣ ನಿಮ್ಮಂತಿರುವ ಯುವಕರು ಸೇವೆಗಿಳಿದು ಇದಕ್ಕೊಂದು ಪರಿವರ್ತನೆ ತರಬೇಕು. ಒಳ್ಳೆ ಧೃಡ ಮನೋಬಲವಿರುವವರಿಂದ ಮಾತ್ರ ಇವತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಾಧ್ಯ. ಇಂದಿನ ವಿಷಮ ಸ್ಥಿತಿಗೆ ಉಳಿದಿರುವ ಒಂದೇ ಸಂಪೂರ್ಣ ಪರಿಹಾರ ಇರುವುದು ನಮ್ಮ ಭಾರತೀಯ ಶಾಸ್ತ್ರಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ. ಇಂದು ವಿಜ್ಞಾನವು ನಮ್ಮ ತತ್ವಗಳನ್ನು ಅಂಗೀಕರಿಸಿ, ಅಲ್ಲಿಂದ ಜ್ಞಾನವನ್ನು ಮುಂದಕ್ಕೊಯ್ಯುತ್ತಿದೆ. ಹಾಗಿರುವಾಗ ನಾವದನ್ನು ತುಳಿದು ಹೊಸಕದೇ, ಅದನ್ನು ಮೈಗೂಡಿಸಿಕೊಳ್ಳಲು ಶ್ರಮಿಸಬೇಕಾಗಿದೆ. ಸರ್ವ ಕಾಲಕ್ಕೂ ಬೇಕಾದ ಜ್ಞಾನ ಅದರೊಳಗಿದೆ. ಭೌತಿಕ ವಿಜ್ಞಾನವು ಏನೆಲ್ಲ ಕಂಡುಹಿಡಿದರೂ ಅವೆಲ್ಲವುಗಳಿಗಿಂತಲೂ ಅತೀತವಾದ, ಎಂದಿಗೂ ಅಳಿಯದೆ ಉಳಿದುಕೊಂಡಿರುವುದು ಭಾರತೀಯ ತತ್ವಶಾಸ್ತ್ರ ಒಂದೇ. ಅದನ್ನು ನೀವು ಸ್ವಲ್ಪ ಸರಿಯಾಗಿ ತಿಳಿದು, ಕಲಿತು, ಅದರೊಳಗಿನ ಸಾರವನ್ನು ಗ್ರಹಿಸಿ ಉಳಿದುದನ್ನು ಬಿಟ್ಟುಬಿಡಿ. ಹಾಗೆ ಆದರೆ ಅಮ್ಮನ ವಿರೋಧವಿಲ್ಲ. ಅದರಲ್ಲಿಯ ಯುಕ್ತವಾದುದನ್ನು ನೀವು ತೆಗೆದುಕೊಳ್ಳಿ; ನಿಮ್ಮ ಬುದ್ಧಿಗೆ ಸರಿ ಎಂದು ಕಂಡದ್ದನ್ನು ಸ್ವೀಕರಿಸಿ.

ಆಕಾಶದಲ್ಲಿರುವ ಒಂದು ದೇವರನ್ನು ಕುರಿತೋ, ಪಾತಾಳದಲ್ಲ್ಲಿರುವ ಒಂದು ದೇವಿಯ ಬಗ್ಗೆಯೋ ಅಲ್ಲ ಅಮ್ಮ ಹೇಳುತ್ತಿರುವುದು. ಎಲ್ಲರಲ್ಲೂ ದೇವರಿದ್ದಾನೆ. ಆದರೆ ನೀವು ಆ ಚೈತನ್ಯವನ್ನು ದುರ್ವಿನಿಯೋಗ ಮಾಡುತ್ತಿದ್ದೀರಿ. ನೀವಿಂದು ಸೊನ್ನೆ ವ್ಯಾಟ್ಟಿನ ಬಲ್ಬಾಗಿದ್ದರೆ, ತಪಸ್ಸಿನಿಂದ ಅದನ್ನು ಸಾವಿರದ್ದನ್ನಾಗಿ ಮಾರ್ಪಡಿಸಲು ಸಾಧ್ಯವಿದೆ. ಒಬ್ಬ ಸಾಮನ್ಯ ವ್ಯಕ್ತಿ ಇಬ್ಬರನ್ನು ಪ್ರೇಮಿಸಲೂ, ಸೇವಿಸಲೂ ಸಾಧ್ಯವಾದರೆ ನಿಮಗೆ ಕೋಟಿ ಜನರನ್ನು ಪ್ರೇಮಿಸಲೂ, ಸೇವಿಸಲೂ ಸಾಧ್ಯವಿದೆ. ನಿಮ್ಮ ಶಕ್ತಿಯಲ್ಲಿ ಯಾವೊಂದು ಕೊರತೆಯೂ ಉಂಟಾಗುವುದಿಲ್ಲ. ಆದಕಾರಣ ನಿಮ್ಮಲ್ಲಿರುವ ಶಕ್ತಿಯನ್ನು ವೃದ್ಧಿಸಿ, ನೀವು ನಿಮ್ಮೊಳಗೆ ಹೋಗಿರಿ.

ಇಂದು ಸಮಾಜ ನಶಿಸುತ್ತಿದೆ. ವಿಶೇಷವಾಗಿ ಯುವಕರು. ನೀವು ಬೇಕು; ಲೋಕಸೇವೆಗಾಗಿ ಇಳಿಯ ಬೇಕು ನಿಮ್ಮಂತಹ ಎಳೆವಯಸ್ಸಿನ ಯುವಕರು. ನೀವು ಚಿಂತನೆ ಮಾಡಿದರೆ ಸಮಾಜವನ್ನು ಸ್ವಲ್ಪವಾದರೂ ಉದ್ಧಾರ ಮಾಡಬಹುದು. ಆದಕಾರಣ ಸೇವೆ ಮಾಡಬೇಕೆಂಬ ಅಭಿಲಾಷೆ ಇದ್ದಲ್ಲಿ, ಜನತೆಯ ಪ್ರತಿ ಕರುಣೆ ಇದ್ದರೆ, ಜಗತ್ತಿಗಾಗಿ ಪ್ರೇಮ ಇರುವುದಾದರೆ ನೀವು ಧೈರ್ಯದಿಂದ ಮುಂದೆ ಬರಬೇಕು. ಭಗವಂತನಿಗೆ ಏನೂ ಕೊಡಬೇಡಿ. ಜನರನ್ನು ಭಗವಂತನ ಛಾಯಾಛತ್ರದಡಿಯಲ್ಲಿ ಬಿಸಿಲು ಬೀಳದ ಹಾಗೆ ನಿಲ್ಲಿಸಿರಿ. ಅದೇ ಬೇಕಾಗಿರುವುದು; ಅದು ನಮ್ಮ ಕರ್ತವ್ಯ.

ಅಮೃತಪುರಿ, ನವೆಂಬರ್ 10, 2010

ನಮ್ಮ ದೇಶದ ಸಾರ್ವಜನಿಕ ಸ್ಥಳಗಳನ್ನು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಶುಚಿಗೊಳಿಸುವ ಗುರಿ ಹೊಂದಿರುವ ಈ ಯೋಜನೆ, ಸ್ವಚ್ಛತೆಯ ಮೂಲಕ ನಮ್ಮ ಸುಂದರ ನಿಸರ್ಗ ಹಾಗೂ ಭೂಮಿಯ ಕುರಿತಾದ ಮಾನವತೆಯ ಋಣದ ಬಗ್ಗೆ ಸಾಮಾಜಿಕ ಅರಿವನ್ನು ಮೂಡಿಸುವ ಅಭಿಲಾಷೆಯನ್ನು ಹೊಂದಿದೆ. ಸೆಪ್ಟಂಬರ್ 27, 2010ರಂದಿನ ತನ್ನ 57ನೆಯ ಜನ್ಮ ದಿನೋತ್ಸವದಂದು, ಅಮ್ಮ ಈ ಯೋಜನೆಯನ್ನುಜಾರಿಗೆ ತಂದರು. ಇದು ಅಮ್ಮನ ಜನ್ಮ ದಿನೋತ್ಸವದ ಆಶಯವೂ ಆಗಿದೆ. ಮಾತಾ ಅಮೃತಾನಂದಮಯಿ ಮಠ (ಮಾ.ಅ.ಮ.)ವು ರಾಜ್ಯ ಸರಕಾರಗಳ ಹಾಗೂ ಇನ್ನಿತರ ಸಂಸ್ಥೆಗಳ ಬೆಂಬಲ ಹಾಗೂ ಸಹಕಾರ ಸಿಕ್ಕಿದಲ್ಲಿ ಸರಕಾರಿ ಶಾಲೆಗಳಲ್ಲಿ ಹಾಗೂ ಭಾರತದಾದ್ಯಂತ ರಸ್ತೆಗಳ ಬದಿಯಲ್ಲಿ ಶೌಚಾಲಯ ಕಟ್ಟಿಸುವ ಹಾಗೂ ಕಸದ ಪೆಟ್ಟಿಗೆ ಸ್ಥಾಪಿಸುವ ಜವಾಬ್ದಾರಿಯನ್ನು ವಹಿಸುವುದೆಂದು ಅಮ್ಮ ಹೇಳಿದ್ದಾರೆ.

ನಾವು ನಮ್ಮ ಪರಿಸರವನ್ನು ಸ್ವಚ್ಛವಾಗಿಡುತ್ತೇವೆಂಬ ಪಣತೊಡಬೇಕೆಂದು ಅಮ್ಮ ಬಯಸುತ್ತಾರೆ. ಜನತೆ, ಸರಕಾರ ಹಾಗೂ ಇನ್ನಿತರ ಸಂಸ್ಥೆಗಳು ಒಟ್ಟುಗೂಡಿದರೆ ನಿಶ್ಚಯವಾಗಿಯೂ ಈ ಪವಿತ್ರ ಪರಿಶ್ರಮವು ಫಲವೀಯುವುದೆಂದು ಅಮ್ಮ ಭಾವಿಸುತ್ತಾರೆ.

ಈ ಯೋಜನೆಯು ಮೊದಲು ಕೇರಳದಲ್ಲಿ ಆರಂಭವಾಗಿ ತದನಂತರ ಭಾರತದ ಇನ್ನಿತರ ರಾಜ್ಯಗಳಿಗೂ ಹರಡುತ್ತದೆ. ವಿಭಿನ್ನ ಸ್ಥಳಗಳ ಶುಚೀಕರಣದ ವರದಿ ಮತ್ತು ಫೋಟೊಗಳಿಗೆ ಸಂದರ್ಶಿಸಿರಿ: http://e.amritapuri.org/abc/ka-about
http://e.amritapuri.org/abc/ka-about/ka-says

27 ಅಕ್ಟೋಬರ್, 2010
ಅಮೃತಪುರಿ

ಅಮಲ ಭಾರತಂ ಕ್ಯಾಂಪೇನ್ (ಏ.ಬಿ.ಸಿ.) ಅನ್ನುವ ಈ ಬೃಹದ್‌ಯೋಜನೆಯ ಸ್ವಯಂಸೇವಕರು ಬರುವ ಒಕ್ಟೋಬರ್ 31ರಂದು ಕೇರಳದಾದ್ಯಂತ, 14 ಜಿಲ್ಲೆಗಳ 54ಕ್ಕೂ ಮೀರಿದ ಸಾರ್ವಜನಿಕ ಸ್ಥಳಗಳಲ್ಲಿ ಶುಚೀಕರಣ ಯಜ್ಞ ನಡೆಸುವರು. ಶುಚೀಕರಣ ಯಜ್ಞದಲ್ಲಿ ಅಮಲ ಭಾರತಂ ಜೊತೆ ಸಾರ್ವಜನಿಕರ ಬೆಂಬಲವು ಸೇರಿಕೊಂಡಿದೆ. ಇದು ನವೆಂಬರ್ ಒಂದರಂದು ಆಚರಿಸಲ್ಪಡುವ ಕೇರಳದ 54ನೇ ರಾಜ್ಯೋತ್ಸವದ ಜೊತೆ ಜೋಡಿಕೊಂಡಿದೆ.

ಮುಂಬರುವ ದಿನಗಳಲ್ಲಿ, ಅಮಲ ಭಾರತಂ ಕ್ಯಾಂಪೇನ್‌ (Amala Bharatam Campaign – ABC) ನ ಈ ಆರಂಭದ ಹಂತವು, ನಿರ್ಮಲ ಭಾರತದ ಆದರ್ಶಗಳಿಗೆ ಹೊಸ ಪ್ರೇರೇಪಣೆಯನ್ನು ಮತ್ತು ಪ್ರೋತ್ಸಾಹವನ್ನು ನೀಡುವುದೆಂದು ಆಶಿಸಲಾಗಿದೆ.

ಎರಡು ದಿನಗಳ ಹಿಂದೆ ತಮಿಳ್ನಾಡಿನ ಕೊಯಂಬತ್ತೂರಿನಲ್ಲೂ ಈ ಕಾರ್ಯಕ್ರಮ ಶುರುವಾಯಿತು.