ಪ್ರಶ್ನೆ: ಅಮ್ಮಾ, ಇಷ್ಟರೂಪವನ್ನು ಎಲ್ಲಿಟ್ಟುಕೊಂಡು ಧ್ಯಾನ ಮಾಡಬೇಕು ?

“ಮಕ್ಕಳೇ, ಇಷ್ಟದೇವತೆಯನ್ನು ಹೃದಯಕಮಲದಲ್ಲೋ ಭ್ರೂಮಧ್ಯದಲ್ಲೋ ಇಟ್ಟುಕೊಂಡು ಧ್ಯಾನ ಮಾಡಬಹುದು. ಗೃಹಸ್ಥರು ಹೃದಯಕಮಲದಲ್ಲಿ ಧ್ಯಾನ ಮಾಡುವುದು ಉತ್ತಮ. ಭ್ರೂಮಧ್ಯದಲ್ಲಿ ಧ್ಯಾನ ಮಾಡುವುದೂ ಉತ್ತಮವೇ. ಆದರೆ ಅದು ಗುರುವಿನ ಮಾರ್ಗದರ್ಶನ ಇದ್ದರೆ ಮಾತ್ರ. ಭ್ರೂಮಧ್ಯದಲ್ಲಿ ಧ್ಯಾನ ಮಾಡುವಾಗ ಕೆಲವರಿಗೆ ತಲೆ ಬಿಸಿಯಾಗುವುದೋ, ನಿದ್ದೆ ತೀರ ಇಲ್ಲದಾಗುವುದೋ ಆಗಬಹುದು. ಇದು ರೋಗವೆಂದು ತಪ್ಪು ಅಭಿಪ್ರಾಯ ಉಂಟಾಗಬಹುದು. ಆದಕಾರಣ ಗುರುವಿಲ್ಲದೆ ಧ್ಯಾನ ಮಾಡುವವರು ವಿಶೇಷ ಜಾಗ್ರತೆ ವಹಿಸಬೇಕು.”

ಪ್ರಶ್ನೆ: ಅಮ್ಮಾ, ಎಷ್ಟು ಸಮಯ ಧ್ಯಾನ ಮಾಡಬೇಕು ?

“ಮಕ್ಕಳೇ, ಆರಂಭದಲ್ಲಿ ಹತ್ತು ನಿಮಿಷಗಳಿಂದ ಅರ್ಧ ಗಂಟೆಯವರೆಗೆ ಧ್ಯಾನ ಮಾಡಿದರೆ ಸಾಕು. ಪೂರ್ಣವಾಗಿ ಆಧ್ಯಾತ್ಮಿಕ ಜೀವನ ನಡೆಸುವ ಸಾಧಕನನ್ನುದ್ದೇಶಿಸಿ ಅಲ್ಲ ಅಮ್ಮ ಹೇಳುತ್ತಿರುವುದು. ಲೌಕಿಕ ಜೀವನ ನಡೆಸುವವರು ಮತ್ತು ಉದ್ಯೋಗಕ್ಕೆ ಹೋಗುವ ಗೃಹಸ್ಥ ಮಕ್ಕಳ ವಿಷಯ ಅಮ್ಮ ಹೇಳುತ್ತಿರುವುದು. ಗುರುವಿನ ಮಾರ್ಗದರ್ಶನವಿದ್ದರೆ ಹೆಚ್ಚು ಧ್ಯಾನ ಮಾಡಬಹುದು. ಆರಂಭದಲ್ಲಿ ಲೆಕ್ಕಕ್ಕಿಂತ ಹೆಚ್ಚು ಧ್ಯಾನ ಮಾಡಬಾರದು. ಹೊಸದಾಗಿ ಕೊಂಡುಕೊಂಡ ಬಸ್ಸನ್ನು ಫುಲ್ ಸ್ಪೀಡ್ನಲ್ಲಿ ಓಡಿಸುವುದಿಲ್ಲ ಅಲ್ಲವೇ ? ಯಂತ್ರದ ಭಾಗಗಳು ಸ್ವಲ್ಪ ಸಡಿಲಾದ ಮೇಲೆ ಹೆಚ್ಚು ಸ್ಪೀಡಲ್ಲಿ ಓಡಿಸಬಹುದು.

ಔಷಧಿಯು ರೋಗ ಗುಣಪಡಿಸಲಿಕ್ಕೆ ಇದ್ದರೂ, ಅದನ್ನು ಸೇವಿಸುವ ಒಂದು ಕ್ರಮ ಇದೆ. ಅದು ಮಿತಿ ಮೀರಿ ಸೇವಿಸಿದರೆ ಬೇರೆ ರೋಗಗಳು ಬಂದೀತು.”

ಪ್ರಶ್ನೆ: ಅಮ್ಮಾ, ಧ್ಯಾನ ಹೇಗೆ ಆರಂಭಿಸಬೇಕು ?

“ಹೃದಯದಲ್ಲಿ ಇಷ್ಟದೇವತೆಯನ್ನು, ಪಾದದಿಂದ ಹಿಡಿದು ಶಿರಸ್ಸಿನವರೆಗೆ, ಶಿರಸ್ಸಿನಿಂದ ಪಾದದವರೆಗಿರುವ ಒಂದೊಂದು ಅಂಗವನ್ನು ಧ್ಯಾನಿಸಿ ಸ್ಥಿರೀಕರಿಸಬೇಕು. ಕೃಷ್ಣನ ರೂಪವನ್ನು ಧ್ಯಾನಿಸುವವರು ಭಗವಂತನ ಪಾದ, ಕಾಲಂದಿಗೆ, ಮೊಣಕಾಲು, ಪೀತಾಂಬರ, ಕೈ ಬಳೆಗಳು, ಕೈಯಲ್ಲಿ ಬಿದಿರಿನ ಕೊಳಲು, ವನಮಾಲೆ, ಕಿವಿಯಲ್ಲಿ ಕುಂಡಲಗಳು, ತುಟಿಗಳು, ಕಣ್ಣುಗಳು, ಕಿರೀಟ, ನವಿಲುಗರಿಯ ಮೇಲೆ ಧ್ಯಾನ ಮಾಡಬೇಕು. ಪುನಃ ನವಿಲುಗರಿಯಿಂದ ಹಿಡಿದು ಕೆಳಗೆ ಪಾದದವರೆಗೆ ಧ್ಯಾನ ಮಾಡಿ.

ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಮಾಡುವ ಹಾಗೆ ಇಷ್ಟದೇವತೆಗೆ ಮೊದಲು ನೀರಿನಿಂದ ಅಭಿಷೇಕ ಮಾಡುವುದಾಗಿ ಸಂಕಲ್ಪಿಸಿ. ಇದೇ ರೀತಿಯಾಗಿ ಹಾಲು, ಗಂಧ, ಭಸ್ಮ, ಪುಷ್ಪ ಇವು ಒಂದೊಂದರಿಂದಲೂ ಅಭಿಷೇಕ ಮಾಡುವುದಾಗಿಯೂ ವಸ್ತ್ರಾಭರಣಗಳಿಂದ ಅಲಂಕರಿಸುವುದಾಗಿಯೂ ಭಾವಿಸಿ. ಆನಂತರ ಮನಃಪೂರ್ವಕವಾಗಿ ಕರ್ಪೂರದಾರತಿ ಮಾಡಿದಂತೆಯೂ, ಭಗವಾನ್ ಓಡಿ ಹೋಗುತ್ತಿದ್ದಂತೆಯೂ, ತಾನು ಯಶೋಧೆಯಾಗಿ ಹಿಡಿಯಲು ಓಡುತ್ತಿರುವಂತೆಯೂ ಕಲ್ಪನೆ ಮಾಡಿಕೊಳ್ಳಬಹುದು. ಇಷ್ಟದೇವತೆಯನ್ನು ಸ್ತುತಿಸುವ ಮಂತ್ರಗಳನ್ನೋ, ಶ್ಲೋಕಗಳನ್ನೋ ಆಂತರ್ಯದಲ್ಲಿ ಜಪಿಸಿಕೊಂಡಿರುವುದೂ ಒಳ್ಳೆಯದು. ಹೃದಯವನ್ನು ಇಷ್ಟದೇವತೆಯೊಂದಿಗೆ ಹಂಚಿ ಕೊಳ್ಳಿ; “ಭಗವಂತ ! ನೀನೆಲ್ಲಿ” ಎಂದು ಕೇಳುತ್ತಿರಿ.

ಪ್ರಶ್ನೆ: ಮಾತುಗಳಿಂದ ಮನುಷ್ಯನ ಸ್ವಭಾವ ಬದಲಿಸಲು ಸಾಧ್ಯವೇ ?

“ಖಂಡಿತವಾಗಿಯೂ ಸಾಧ್ಯ. ಮಕ್ಕಳೇ, ಒಮ್ಮೆ ಒಂದು ದೇವಾಲಯದಲ್ಲಿ ಒಬ್ಬ ಬ್ರಾಹ್ಮಣನು ಕೆಲವು ಹುಡುಗರಿಗೆ ಆಧ್ಯಾತ್ಮಿಕ ಕಲಿಸುತಿದ್ದನು. ಆಗ ಆ ರಾಜ್ಯದ ರಾಜನು ಅಲ್ಲಿ ಬಂದು ಮುಟ್ಟಿದ. ಮಕ್ಕಳಿಗೆ ಕಲಿಸುವುದರಲ್ಲೇ ಮಗ್ನನಾಗಿದ್ದ ಬ್ರಾಹ್ಮಣನಿಗೆ ರಾಜನು ಬಂದದ್ದು / ಬಂದಿರುವುದು ಗೊತ್ತಾಗಲಿಲ್ಲ. ರಾಜನಿಗೆ ಕೋಪ ಬಂದು ಬ್ರಾಹ್ಮಣನಲ್ಲಿ ಕೇಳಿದ, “ಯಾಕಾಗಿ ನಾನು ಬಂದಾಗ ನೀವು ಗಮನಿಸದಿರುವುದು ?” “ನಾನು ಮಕ್ಕಳಿಗೆ ಓದಿಸುತ್ತಾ ಇದ್ದೆ. ಹಾಗಾಗಿ ತಾವು ಬಂದಿದ್ದು ನೋಡಲಿಲ್ಲ,” ಎಂದು ಬ್ರಾಹ್ಮಣನು ಉತ್ತರಿಸಿದನು. ರಾಜನು ಕೇಳಿದ “ನಾನು ಬಂದರೂ ನೋಡಲಾಗದಿರುವಂಥ ಅದು ಏನು ಕಲಿಸುತ್ತಾ ಇದ್ದಿರಿ ?” ಬ್ರಾಹ್ಮಣನು ಹೇಳಿದ, “ನಾನು ಎಳೆಯರಿಗೆ ಒಳ್ಳೆಯ ವಿಷಯಗಳನ್ನು ಕುರಿತು ಕಲಿಸುತ್ತಾ ಇದ್ದೆ.”
ರಾಜ: “ಅದು ಯಾವ ಒಳ್ಳೆಯ ವಿಷಯಗಳು ?”
ಬ್ರಾಹ್ಮಣನು: “ಒಳ್ಳೆಯ ಸ್ವಭಾವ ಬೆಳೆಸುವ ಬಗೆಯನ್ನು.”
ರಾಜ: “ಮಾತುಗಳಿಂದ ಸ್ವಭಾವ ಬದಲಾಗುವುದೇ ?”
ಬ್ರಾಹ್ಮಣನು: “ನಿಶ್ಚಯವಾಗಿಯೂ ಬದಲಾಗುತ್ತದೆ.”
ರಾಜ: “ಹಾಗೇನೂ ಬದಲಾಗುವುದಿಲ್ಲ.”
ಆಗ ಆ ಬ್ರಾಹ್ಮಣನ ಶಿಷ್ಯರ ಗುಂಪಿನಲ್ಲಿದ್ದ ಒಬ್ಬ ಚಿಕ್ಕ ಹುಡುಗ ಎದ್ದು, ರಾಜನಿಗೆ ಅಲ್ಲಿಂದ ಹೊರಟು ಹೋಗಲು ಹೇಳಿದ. ಅದು ಕೇಳಿದ ತಕ್ಷಣ ರಾಜ ಕೋಪಾವಿಷ್ಟನಾಗಿ ಹೇಳುತ್ತಾನೆ, “ನೀನು ಅಷ್ಟಕ್ಕಾದಿಯೋ ? ನಿನ್ನನ್ನು ನಾನಿವತ್ತು ಸಾಯಿಸುತ್ತೇನೆ. ನಿನ್ನ ಗುರುವನ್ನೂ ಸಾಯಿಸುತ್ತೇನೆ. ಈ ಆಶ್ರಮವನ್ನೂ ನಾಶ ಮಾಡುತ್ತೇನೆ.” ಹೀಗೆ ಹೇಳುತ್ತಾ ಅವನು ಬ್ರಾಹ್ಮಣನ ಕತ್ತು ಹಿಡಿಯಲು ಹೊರಟನು. ಆಗ ಬ್ರಾಹ್ಮಣನು ಹೇಳುತ್ತಾನೆ, “ತಾವು ನನ್ನನ್ನು ಕ್ಷಮಿಸಬೇಕು; ತಾವಲ್ಲವೇ ಹೇಳಿದ್ದು ಮಾತುಗಳಿಂದ ಸ್ವಭಾವ ಬದಲಾಯಿಸಲು ಸಾಧ್ಯವಿಲ್ಲವೆಂದು. ಒಂದು ಹುಡುಗ ತಮಗೆ ಐದಕ್ಷರ ಹೇಳಿದಾಗ ತಮ್ಮ ಸ್ವಭಾವ ಸಾಮಾನ್ಯ ಮಟ್ಟದಿಂದ ಎಷ್ಟು ಮಟ್ಟಿಗೆ ಬದಲಾಯಿತು ! ಎಲ್ಲ ನಾಶ ಮಾಡಲೂ ನನ್ನನ್ನು ಕೊಲ್ಲಲೂ ತಾವು ತಯಾರಾಗಲಿಲ್ಲವೇ ?”

ಮಕ್ಕಳೇ, ಈ ಪ್ರಕಾರ ಮಾತುಗಳಿಂದ ಸ್ವಭಾವ ಬದಲಾಯಿಸಲು ಸಾಧ್ಯವಿದೆ. ಮಂತ್ರ ಜಪದಿಂದ ಮನುಷ್ಯನ ಸ್ವಭಾವ ಒಳ್ಳೆಯದಾಗುತ್ತದೆ.

ಪ್ರಶ್ನೆ: ಮಂತ್ರ ಜಪಿಸಿದರೆ ಫಲ ಸಿದ್ಧಿಸುವುದೋ ?

“ನಿಶ್ಚಯವಾಗಿಯೂ ಮಕ್ಕಳೇ. ಆದರೆ ಒಂದು ಮಾತು. ಏಕಾಗ್ರತೆಯಿಂದ, ಭಕ್ತಿಯೊಡಗೂಡಿ ಜಪಿಸಬೇಕು. ಆ ಭಾವಕ್ಕನುಗುಣವಾಗಿ ನಮಗೆ ಶಕ್ತಿ ದೊರಕುವುದು. ಮುಖ್ಯವಾದದ್ದು ಮನೋಭಾವ.

ಒಬ್ಬ ಡಾಕ್ಟರು ನಮಗೆ ಮದ್ದು ಕೊಟ್ಟು, “ಈ ಮದ್ದು ಸೇವಿಸುವಾಗ ದೇಹಕ್ಕೆ ವಿಶ್ರಾಂತಿ ಅಗತ್ಯ. ಅಲ್ಲದೆ ಕೆಲವು ಆಹಾರವಸ್ತುಗಳನ್ನು ತಿನ್ನಬಾರದು.” ಎಂದೆಲ್ಲ ಹೇಳುತ್ತಾನೆ. ಅದನ್ನನುಸರಿಸುತ್ತೇವೆ; ನಮ್ಮ ರೋಗ ವಾಸಿಯಾಗುತ್ತದೆ. ಹೀಗೆಯೇ, ಋಷಿಶ್ರೇಷ್ಟರು ಯುಗ ಯುಗ ಪರ್ಯಂತ ತಪಸ್ಸು ಮಾಡಿ, ಪ್ರಪಂಚವನ್ನು, ಒಂದು ಸಾಸಿವೆಕಾಳನ್ನು ತಮ್ಮ ಉಗುರಿನಡಿಯಲ್ಲಿಟ್ಟುಕೊಂಡಂತೆ ಮಾಡಿದವರು. ಒಂದು ನಿರ್ಜೀವ ಹಲಗೆಗೆ ಸಹ ಅವರು ’ಹಾರು’ ಎಂದು ಹೇಳಿದರೆ ಅದು ಹಾರುವುದು. ಅವರೇ ಮಂತ್ರ ದೃಷ್ಟಾರರು. ಅವರು ಹೇಳಿರುತ್ತಾರೆ ಇಂಥದ್ದೇ ಮಂತ್ರ ಜಪಿಸಿದರೆ ಇಂಥದ್ದೇ ಫಲ ಕೊಡುವುದೆಂದು. ಹಾಗೆಯೇ ಮಾಡಿದರೆ ನಿಶ್ಚಯವಾಗಿಯೂ ಫಲ ಸಿದ್ಧಿಸುತ್ತದೆ.

ನಮಗೆ ಸದಾ ದುಃಖ ಮಾತ್ರವೇ ಇರುವುದು. ನಿತ್ಯಾನಿತ್ಯ ಏನೆಂಬುದರ ಅರಿವಿಲ್ಲದಿರುವುದರಿಂದ, ನಮ್ಮ ಆಸೆಗಳು ಶಾಶ್ವತವಾದವುಗಳಿಗೆ ಅಲ್ಲವಾದ್ದರಿಂದ ನಾವು ಹೀಗೆ ದುಃಖಿಗಳಾಗಿದ್ದೇವೆ. ಈ ದುಃಖದಿಂದಾಗಿ ಉರಿದುರಿದು ನಾವು ರೋಗಿಗಳಾಗುತ್ತೇವೆ; ನಮ್ಮ ಆಯುಷ್ಯವೂ ಕ್ಷೀಣಿಸುತ್ತದೆ.

ಪ್ರೀತಿಯ ಮಕ್ಕಳೇ, ನಮ್ಮ ಕೆಲಸಗಳನ್ನು ನಾವು ಚೆನ್ನಾಗಿ ಮಾಡುತ್ತಿರುತ್ತೇವೆ. ಎಲ್ಲಿ ಹೋದರೂ ಅಲ್ಲಿಯ
ದೋಷಗಳನ್ನು, ಕುಂದು ಕೊರತೆಗಳನ್ನು ನಾವು ಕಂಡು ಹಿಡಿಯುತ್ತೇವೆ; ನಮ್ಮ ಮನಸ್ಸು ಅಸ್ವಸ್ಥವಾಗುತ್ತದೆ.
ಈ ದೃಷ್ಟಿಕೋನವಲ್ಲ ನಮಗೆ ಬೇಕಾಗಿರುವುದು. ಒಂದು ಕಡೆ ಏನು ಕಾಣಲಿಲ್ಲ ಎಂಬುದನ್ನು ಮರೆತು, ನಮಗೆ
ಬೇಕಾದದ್ದು ಅಲ್ಲಿ ಏನಿದೆ ಎನ್ನುವುದನ್ನು ನೋಡಿ ಅದನ್ನು ಮಾತ್ರ ಸ್ವೀಕರಿಸಬೇಕು. ನಮ್ಮಲ್ಲಿರುವುದಕ್ಕಿಂತಲೂ
ಯಾವ ಗುಣ ಹೆಚ್ಚು ಅಲ್ಲಿದೆ ಎಂದು ಮಾತ್ರವೇ ಮಕ್ಕಳು ನೋಡಿದರೆ ಸಾಕು. ಈ ರೀತಿಯಾಗಿ ನಾವು ಸದಾ ಒಳಿತನ್ನು ಕಾಣಬೇಕು. ಮಕ್ಕಳೇ, ಆಗ ನಾವು ಒಳ್ಳೆಯವರಾಗುತ್ತೇವೆ.

ಹಳೇ ಕಾಲದಲ್ಲಿ ಎಲ್ಲರೂ ಗುರುಕುಲದಲ್ಲಿದ್ದು ಗುರುಕುಲ ವಿದ್ಯಾಭ್ಯಾಸ ಮಾಡುತ್ತಿದ್ದರು. ಅದರ ಫಲವಾಗಿ ಜೀವನವೆಂದರೇನಂತಲೂ, ಹೇಗೆ ಜೀವಿಸಬೇಕೆಂದೂ, ಲೋಕದಲ್ಲಿ ಹೇಗೆ ವ್ಯವಹರಿಸಬೇಕೆಂದೂ ಅವರರಿತುಕೊಂಡಿದ್ದರು. ತನ್ಮೂಲಕ ಅವರು ಆನಂದಮಯರಾದರು. ಧೃಡಚಿತ್ತರಾಗಿ, ಮರಣಭಯ ತೊರೆದು, ಸತ್ಯಕ್ಕಾಗಿ ಜೀವನವನ್ನು ಧಾರೆಯೆರೆಯಲು ಕಂಕಣಬದ್ಧರಾದರು. ಆರೋಗ್ಯವಂತರೂ, ದೀರ್ಘಾಯುಷಿಗಳೂ, ಆಜಾನುಬಾಹಿಗಳೂ, ಒಳ್ಳೆ ಸಿಂಹಮರಿಗಳೂ ಆಗಿದ್ದರು ಅವರು. “ಹೇಗೆ ಇತರರೆಲ್ಲರನ್ನೂ ಕೊಳ್ಳೆ ಹೊಡೆಯುವುದು” ಎನ್ನುವ ಚಿಂತೆ ಅವರಿಗೆ ಇಲ್ಲವಾಗಿತ್ತು. ಕೋರ್ಟೋ, ಸಿನೆಮ ಥೇಟರೋ, ವಿಡಿಯೊ ಸಿಸ್ಟಮೋ ಅಂತ ಏನೂ ಅವತ್ತು ಇರಲಿಲ್ಲ. ಅವತ್ತು ಜನರು ಸಾಯಂಕಾಲ ದೀಪ ಹಚ್ಚಿ, ನಾಮ ಜಪಿಸುತ್ತಿದ್ದರು. ನಾಮಜಪದ ನಂತರ ತಾವು ಅವತ್ತು ಮಾಡಿದ ತಪ್ಪುಗಳನ್ನು ನೆನೆದು ಪಶ್ಚಾತ್ತಾಪ ಪಡುತ್ತಿದ್ದರು. ಅದು ಅವರಿಗೆ ಸಾಂತ್ವನವನ್ನೂ, ಶಾಂತಿಯನ್ನೂ ನೀಡುತ್ತಿತ್ತು.

ಇವತ್ತೋ ? ಕಾಲ ಬದಲಾಗಿದೆ. ಸಾಯಂಕಾಲವಾದರೆ ಟೀ.ವೀ.ಯ ಎದುರಿಗೆ ಕೂತು, ವಿಡಿಯೋ ಕ್ಯಾಸೆಟ್ಟ್ ಹಾಕಿ ಸಿನೆಮ ನೋಡುತ್ತಾರೆ. ಬೇರೆಯವರನ್ನು ಕೊಂದು ಹೇಗೆ ಅವರ ಹಣ ಲಪಟಾಯಿಸುವುದು ಎಂದು ಚಿಂತಿಸುತ್ತಾರೆ. ಸ್ವಂತ ತಾಯಿಯನ್ನು ಕೂಡಾ ಹಣಕ್ಕಾಗಿ ಕೊಲ್ಲಲು ಹೇಸುವುದಿಲ್ಲ. ಇದು ಇವತ್ತಿನ ಪ್ರಪಂಚ. ಆದರೆ ಶಾಂತಿಯಿದೆಯೇ ? ಎಲ್ಲೂ ಶಾಂತಿಯಿಲ್ಲ. ಗಾಂಜ, ಸರಾಯಿ, ನಿದ್ದೆಗುಳಿಗೆ ಇದೆಲ್ಲ ಇವತ್ತಿನವರ ದೇವರು. ಇದಿಲ್ಲದಿದ್ದರೆ ಇವರಿಗೆ ಜೀವಿಸಲು ಅಸಾಧ್ಯ. ಅದೆಲ್ಲದ್ದಕ್ಕೆ ಗುಲಾಮರಾಗಿ ಇವರ ಬಾಳು ನಾಶವಾಗುತ್ತದೆ. ಮಾತ್ರವಲ್ಲ, ಇನ್ನಿತರರಿಗೂ ಇವರು ಉಪದ್ರವವಾಗುತ್ತಾರೆ. ಇವತ್ತು ಮೂರು ವಯಸ್ಸು ದಾಟದ ಮಕ್ಕಳು “ಇನ್‌ಕ್ವಿಲಾಬ್ ಜಿಂದಾಬಾದ್” ಎಂದು ಕೂಗುತ್ತಾರೆ. ತನ್ನ ಪಾರ್ಟಿಯವನಲ್ಲದಿದ್ದರೆ ಅವನನ್ನು ಕೊಲ್ಲುತ್ತೇನೆ ಎಂದೆನ್ನುತ್ತಾರೆ. ಶಾಲೆಗೆ ಹೋಗಿ ಸ್ಟ್ರೈಕ್ ಮಾಡುತ್ತಾರೆ. ಮಕ್ಕಳೇ, ನೀವು ಹೀಗೆ ನಾಶವಾಗದಿರಿ.

ನೆಚ್ಚಿನ ಮಕ್ಕಳೇ, ಈಶ್ವರನಲ್ಲಿ ನಂಬಿಕೆ ಮೊಳಕೆಯೊಡೆದಾಗ ನಾವು ಒಂದಾಗುತ್ತೇವೆ. ಇತರರನ್ನು ನಾವು ಪ್ರೀತಿಸುತ್ತೇವೆ; ಒಳ್ಳೆದನ್ನು ಮಾಡುತ್ತೇವೆ. ತಂದೆ ತಾಯಂದಿರನ್ನು ಅನುಸರಿಸುತ್ತೇವೆ. ಗುರುವನ್ನು ಆಚಾರಪೂರ್ವಕವಾಗಿ ವಂದಿಸುತ್ತೇವೆ. ಹೀಗೆ ನಾವು ಒಳ್ಳೆಯವರಾಗುತ್ತೇವೆ.

ಒಲವಿನ ಮಕ್ಕಳೇ, ನಾವೆಲ್ಲ ಒಂದೇ ತಾಯಿಯ ಮಕ್ಕಳು. ನಮ್ಮ ಕೈ ಸುಡುವಾಗ ನೀರಲ್ಲಿ ಅದ್ದಲು ನಮಗೆಷ್ಟು ಹುಮ್ಮಸ್ಸಿರುವುದೋ ಅಷ್ಟೇ ಹುಮ್ಮಸ್ಸಿನಿಂದ ನಾವು ಇತರರಿಗೆ ಕರುಣೆ ತೋರಿಸಬೇಕು. ನಮ್ಮ ಒಂದು ಕೈ ಸುಟ್ಟಾಗ “ನನಗಲ್ಲವಲ್ಲ ಸುಟ್ಟದ್ದು” ಎಂದು ಹೇಳಿ ಇನ್ನೊಂದು ಕೈ ಅದಕ್ಕೆ ಮದ್ದು ಹಚ್ಚಲು ಒಪ್ಪದಿರುತ್ತದೆಯೇ ? “ನಾನು” ಶರೀರವನ್ನಿಡೀ ವ್ಯಾಪಿಸಿದೆ. ಶರೀರದ ಒಂದು ಭಾಗದ ನೋವನ್ನು ಎಲ್ಲಾ ಭಾಗಗಳೂ ಅನುಭವಿಸುತ್ತದೆ. ಅದೇ ಪ್ರಕಾರ ಎಲ್ಲೆಲ್ಲೂ ಒಂದೇ ಚೈತನ್ಯ ತುಂಬಿಕೊಂಡಿರುವುದರಿಂದ ಪ್ರಪಂಚದ ಒಂದೊಂದೂ ಚಿಕ್ಕ ಜೀವಿಯ ದುಃಖವನ್ನು ಕೂಡ ಅರಿವಿಲ್ಲದೆಯೇ ಅನುಭವಿಸುತ್ತೇವೆ. ಇದನ್ನರ್ಥ ಮಾಡಿಕೊಂಡು ಮಕ್ಕಳೂ ಯಾವಾಗಲೂ ಕರುಣೆಯೊಡಗೂಡಿ ನಡೆದುಕೊಳ್ಳಬೇಕು. ಕೆಲಸದ ಫಲವನ್ನು ನಾವು ಇಚ್ಛಿಸಬಾರದು. ಭಗವಂತನಿಗೆ ಅರ್ಪಿಸಿದರೆ ಸಾಕು, ಅವನು ನಮಗೆ ಬೇಕಾದದ್ದನ್ನು ಕೊಡುವನು.

ಮುದ್ದಿನ ಮಕ್ಕಳೇ, ನೀವು ಹೊಂಡದಲ್ಲಿ ಬಿದ್ದರೆ ಸರಿಯಾಗಿ ದಾರಿ ತೋರಿಸಲಿಲ್ಲವೆಂದು ಸ್ವಂತ ಕಣ್ಣುಗಳನ್ನೇ ಚುಚ್ಚಿ ಕಿತ್ತುಬಿಡುತ್ತೀರ ? ನಮ್ಮ ಕಣ್ಣಿನ ತಪ್ಪನ್ನು ನಾವು ಕ್ಷಮಿಸುವ ಹಾಗೆ, ಇತರರ ಕುಂದುಗಳನ್ನು ಮನ್ನಿಸಿ ಅವರಲ್ಲಿ ಕರುಣೆಯಿಂದ ವರ್ತಿಸಬೇಕು. ಯಾರು ಏನೇ ಮಾಡಿದರೂ ನಾವು ಗಮನಿಸಬೇಕಾಗಿಲ್ಲ. ಆದರೆ ಇವತ್ತು ಮನುಷ್ಯನು ಪ್ರಾರ್ಥಿಸಿದರೂ ಅದು ಇನ್ನೊಬ್ಬರನ್ನು ನಾಶ ಮಾಡಲಿಕ್ಕೆಂದು. “ದೇವರೇ ನನಗೆ ಅವನನ್ನು ಕೊಲ್ಲಲು ಶಕ್ತಿ ದಯಪಾಲಿಸು, ಆ ಭೂಮಿ ನನಗೆ ಕೊಡಿಸು; ಅವನನ್ನು ಪೋಲೀಸಿನವರು ಹಿಡಿದುಕೊಂಡು ಹೋಗುವಂತಾಗಲಿ; ಅವರು ಗುಡುಗು ಮಿಂಚಿನಿಂದ ಸತ್ತೇ ಹೋಗಲಿ; ಅವನಿಗೆ ದೇವರು ಶಿಕ್ಷೆಕೊಡಲಿ,” – ಇದು ಇಂದಿನ ಪ್ರಾರ್ಥನೆ. ಹೀಗಲ್ಲ ಮಕ್ಕಳೇ ನಾವು ಪ್ರಾರ್ಥಿಸಬೇಕಾಗಿರುವುದು. “ಭಗವಂತ, ನೀನು ಎಲ್ಲರಿಗೂ ಒಳಿತು ಮಾಡು, ನನ್ನಿಂದ ಏನೂ ತಪ್ಪು ಆಗದಿರಲಿ, ಇತರರ ತಪ್ಪುಗಳನ್ನು ಕ್ಷಮಿಸಲು ನನಗೆ ಶಕ್ತಿ ಬರಲಿ, ನನ್ನ ತಪ್ಪುಗಳನ್ನು ದಯವಿಟ್ಟು ಮನ್ನಿಸು” ಎಂದಾಗಿರಬೇಕು ನಮ್ಮ ಪ್ರಾರ್ಥನೆ. ಈ ಪ್ರಾರ್ಥನೆಯ ತರಂಗಗಳು ವಾತಾವರಣವನ್ನೇ ಪರಿಶುದ್ಧಿಗೊಳಿಸುತ್ತದೆ. ಪರಿಸರ ಶುದ್ಧವಾದರೆ ಆರೋಗ್ಯಕರ ಜೀವನ ನಡೆಸಬಹುದು. ಇಲ್ಲವೆಂದರೆ ನಮ್ಮ ಮನಸ್ಸಿಗೆ ಏಕಾಗ್ರತೆ ಸಿಗದು. ಆದಕಾರಣ ಮೆಚ್ಚಿನ ಮಕ್ಕಳು ಭಗವಂತನಲ್ಲಿ ನಂಬಿಕೆಯುಳ್ಳವರಾಗಿ ಬಾಳಿರಿ.

ನೆಚ್ಚಿನ ಮಕ್ಕಳೇ, ಜೀವಿಸಲಿಕ್ಕಾಗಿ ಉಣ್ಣಿರಿ ! ಏಳಲಿಕ್ಕಾಗಿ ಮಲಗಿ. ಅದು ಬಿಟ್ಟು ಇನ್ನೇನೋ ಮಾಡಬೇಡಿ. ಮಕ್ಕಳೇ, ಧ್ಯಾನವೆನ್ನುವುದು ಎಳೆ ಮಕ್ಕಳಿಗೆ ಸಹ ಒಳ್ಳೆಯದು. ಬುದ್ಧಿಯನ್ನು ಉದ್ದೀಪನಗೊಳಿಸುತ್ತದೆ; ನೆನಪಿನಶಕ್ತಿ ವರ್ಧಿಸುತ್ತದೆ; ಅವರಿಗೆ ಸರಿಯಾಗಿ ಕಲಿಯಲು ಸಾಧ್ಯವಾಗುತ್ತದೆ. ಅದು ಬಿಟ್ಟು, ಮಕ್ಕಳೆಲ್ಲ ಸಂನ್ಯಾಸಿಗಳಾಗಬೇಕೆಂದು ಅಮ್ಮ ಹೇಳುತ್ತಿಲ್ಲ. ಆನಂದಮಯವಾದ ಜೀವನ ಮಕ್ಕಳದ್ದಾಗಲಿ ! ನಿಮ್ಮ ಆತ್ಮದ ಸ್ವರೂಪದ ಬಗ್ಗೆ ಚಿಂತನೆ ನಡೆಸುವಾಗ ನಿಮಗೆ ಆನಂದದ ರಹಸ್ಯ ಅರ್ಥವಾಗುವುದು; ಮಕ್ಕಳ ಮನಸ್ಸಿನ ಅಲೆಗಳು ಇಲ್ಲದಂತಾಗುವುದು.

ಮುದ್ದಿನ ಮಕ್ಕಳೇ, ಏನೂ ತ್ಯಜಿಸಬೇಕೆಂದು ಅಮ್ಮ ಹೇಳುತ್ತಿಲ್ಲ. ಒಳ್ಳೆ ವಿಚಾರ ಮಾಡಿದರೆ ಸಾಕು. ಕೆಟ್ಟದ್ದು ನಮ್ಮನ್ನು ಬಿಟ್ಟು ಹೋಗುವುದು; ಉಪ್ಪುನೀರಿಗೆ ಅವ್ಯಾಹತವಾಗಿ ಒಳ್ಳೆ ನೀರು ಸುರಿದಾಗ ಉಪ್ಪುಬಿಟ್ಟು ಹೋಗುವ ಹಾಗೆ. ನೀರು ಬರುವ ನಲ್ಲಿಯಲ್ಲಿ ಅಳವಡಿಸಿದ ಫಿಲ್ಟರ್ ಹೇಗೆ ನೀರಿನ ಕಷ್ಮಲಗಳನ್ನು ಸೋಸಿ ತೆಗೆಯುತ್ತದೆಯೋ, ಹಾಗೇ ಧ್ಯಾನವೆನ್ನುವ ಫಿಲ್ಟರ್ ನಮ್ಮಲ್ಲಿಯ ಕಷ್ಮಲಗಳನ್ನು ತೆಗೆದುಬಿಡುತ್ತದೆ.

ಮಕ್ಕಳೇ, ಎಲ್ಲಾ ನಿಮ್ಮಲ್ಲೇ ಇದೆ. ಪ್ರಯತ್ನಿಸಿದಲ್ಲಿ ನೀವು ಅದನ್ನು ಕಂಡುಹಿಡಿಯಬಹುದು. ಪ್ರಾಪಂಚಿಕ ವಸ್ತುಗಳಿಂದ ಸಿಗುವ ಆನಂದವು, ಒಳಗಿನ ಆನಂದದ ಬರೇ ಒಂದು ಭಾಗ ಮಾತ್ರ. ಆ ಆನಂದ ಪ್ರಪಂಚದ ವಸ್ತುಗಳಿಂದ ಸಿಗುತ್ತದೆ ಎಂದು ಮಕ್ಕಳು ಅಂದುಕೊಳ್ಳದಿರಿ. ನಾಯಿಯಂತೆ, ತಾನು ಜಗಿಯುತ್ತಿರುವ ಮೂಳೆಯಲ್ಲಿ ಮಾಂಸವಿದೆ ಎಂದೆಣಿಸಿ ಸ್ವಂತ ಒಸಡನ್ನೇ ಗಾಯಕ್ಕೀಡಾಗಿಸಬೇಡಿ ಮಕ್ಕಳೇ.

ಮುದ್ದು ಮಕ್ಕಳೇ, ಭಗವಂತನು ಸದಾ ಸುರಿಸುತ್ತಿರುವ ಕೃಪೆಗೆ ನಾವು ಪಾತ್ರರಾಗೋಣ. ನದಿ ಯಾವಾಗಲೂ ಹರಿಯುತ್ತಿರುತ್ತದೆ. ನಡುವೆ ಒಡ್ಡು ಕಟ್ಟಿ, ನೀರು ಸಿಗುತ್ತಿಲ್ಲವೆಂದು ನಾವು ದೋಷಾರೋಪಣೆ ಮಾಡುತ್ತೇವೆ. ಒಡ್ದು ಕಟ್ಟಿದವರೂ ನಾವೇ. ನಾವು ಕಟ್ಟಿದ ಅಹಂಕಾರದ, ಅಜ್ಞಾನದ ಒಡ್ಡುಗಳನ್ನು ಕೆಡವಿದಾಗ, ಸದಾ ಸುರಿಯುತ್ತಲಿರುವ ಈಶ್ವರನ ಕೃಪೆ ನಮ್ಮದಾಗುವುದು.

ಮಕ್ಕಳೇ, ಎಲ್ಲವನ್ನೂ ಜಯಿಸಿದವರು ಏನನ್ನೂ ನೋಡುವುದಿಲ್ಲ. ಅವರಿಗೆ ನಾವು ಏನನ್ನೂ ಮಾಡಬೇಕಾಗಿಲ್ಲ. ಆದರೆ ನಾವು ಅನಿತ್ಯದಲ್ಲಿ ಜೀವಿಸುವವರು. ಹಾಗಾಗಿ ನಾವು ಇವತ್ತು ಬೆಟ್ಟ, ಹೊಂಡ, ಮಳೆ, ಗಿಡ, ಸಮುದ್ರ, ಕಾಡು ಹೀಗೆ ಬಹಳಷ್ಟು ಕಾಣುತ್ತಾ, ಕೇಳುತ್ತಾ ಇದ್ದೇವೆ. ಮೇಲೇರಿ ಹೋದಂತೆ ಭೂಮಿಯ ದೃಶ್ಯಗಳು ಬರೇ ಚುಕ್ಕೆಯಾಗಿ ಕಾಣಿಸುತ್ತವೆ. ಕೊನೆಗೆ ಎಲ್ಲ ಒಂದಾಗಿ, ಏನೂ ಕಾಣಿಸುವುದಿಲ್ಲ. ಅದೇ ರೀತಿ, ತಮ್ಮ ಸ್ವರೂಪದೆತ್ತರಕ್ಕೆ ಏರಿದವರು ಏನನ್ನೂ ಕಾಣುವುದಿಲ್ಲ. ಆ ಘಟ್ಟಕ್ಕೆ ಮುಟ್ಟದಿರುವವರೆಗೆ ಎಲ್ಲಾ ಮಿಥ್ಯೆಯೆಂದು ಹೇಳಿಕೊಂಡು ಸುಮ್ಮನಿರ ಬೇಡಿ. ಲೋಕದ ಬಗ್ಗೆ ಉತ್ತರದಾಯಿತ್ವ ಬೇಕು. ಹಾಗೆ ಆದರೆ ಸಮಯ ಹಾಳಾದಂತಾಗುವುದಿಲ್ಲ. ಕಳೆದ ಸಮಯ ಮರಳಿ ಬರುವುದಿಲ್ಲ. ಆದಕಾರಣ ಮಕ್ಕಳು ಸಮಯ ಪೋಲು ಮಾಡದೆ ನಡೆದುಕೊಳ್ಳಿ. ಮಕ್ಕಳೇ, ಗಾಳಿಯಂತಾಗಬೇಕು. ಗಾಳಿ ಹೂವಿನ ಮೇಲೂ ಮಲದ ಮೇಲೂ ಸಮಾನವಾಗಿ ಬೀಸುತ್ತದೆ. ಮಲವೆಂದು ಬದಿಯಿಂದ ಸರಿದು ಹೋಗುವುದಿಲ್ಲ; ಹೂವೆಂದು ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಹೀಗೆಯೇ ಸುಖದುಃಖಗಳಲ್ಲಿ, ಒಳಿತು ಕೆಡುಕುಗಳಲ್ಲಿ ಸಮನಾಗಿ ಪ್ರತಿಕ್ರಿಯಿಸಿ ನಡೆದುಕೊಳ್ಳಿ ಮಕ್ಕಳೇ.

ಹಿಂದಿನ ಕಾಲದಲ್ಲೆಲ್ಲ ಕಾಡು ಹೊರಗಿರುತ್ತಿತ್ತು. ಈಗ ಕಾಡನ್ನು ಕಡಿದು ಸವರಿ ನಮ್ಮೊಳಗೇ  ತಂದಿದ್ದೇವೆ. ಹಿಂದೆ ಪ್ರಾಣಿಗಳು ಹೊರಗಿರುತ್ತಿದ್ದವು. ಇಂದು ಅವುಗಳನ್ನೂ ಆಂತರ್ಯದಲ್ಲಿ ತಂದಿದ್ದೇವೆ. ಹೃದಯದ ಕಲ್ಮಶಗಳನ್ನು ನಾವು ಶೇವ್ ಮಾಡಿ ತೆಗೆಯಬೇಕಾದದ್ದು; ಬದಲಿಗೆ ನಮ್ಮ ಮುಖದ್ದು ಅಲ್ಲ.

ಮಕ್ಕಳು ಏನೂ ತ್ಯಜಿಸಬೇಕೆಂದು ಅಮ್ಮ ಹೇಳುತ್ತಿಲ್ಲ. ಅನ್ಯರಲ್ಲಿ ಕರುಣೆ ತೋರಿಸಿದಾಗ, ಸ್ವಾರ್ಥ ತಾನಾಗಿಯೇ ಬಿಟ್ಟು ಹೋಗುತ್ತದೆ. ನೀವು ಒಂದು ದಿನಕ್ಕೆ ಹತ್ತು ರುಪಾಯಿ ಸಿಗರೇಟು ಸೇದುತ್ತೀರ ಎಂದು ಇಟ್ಟುಕೊಳ್ಳೋಣ.  ತಿಂಗಳಿಗೆ ಮುನ್ನೂರು ರುಪಾಯಿ ಆಯಿತು. ಈ ತರಹ ಲೆಕ್ಕ ಹಾಕಿದರೆ ವರ್ಷಕ್ಕೆ ಎಷ್ಟು ರುಪಾಯಿ ಆಗುವುದು ? ಆನಂದ ಸಿಗರೇಟಿನಲ್ಲಿಲ್ಲ – ನಮ್ಮೊಳಗೇ ಇದೆ. ಇದನ್ನು ನಾವು ಅರಿತು ಕೊಳ್ಳುತ್ತಿಲ್ಲ. ಇದನ್ನು ಅರಿತುಕೊಳ್ಳಬೇಕಾದರೆ ಹೃದಯ ಶುದ್ಧ ಮಾಡಿಕೊಳ್ಳಬೇಕು. ಹೃದಯ ಶುದ್ಧಿ ಬೇಕೆಂದಿದ್ದರೆ ಒಳ್ಳೆ ಗುಣಗಳನ್ನು ಬೆಳೆಸಿಕೊಳ್ಳಬೇಕು, ದೇವರಲ್ಲಿ ಪ್ರೇಮ ಬೆಳೆಸಿಕೊಳ್ಳಬೇಕು. ಮಕ್ಕಳು ಕೇಳಬಹುದು, “ಹಾಗೆ ಮಾಡಿದರೆ ಸಿಗರೇಟು ಕಂಪೆನಿಗಳು ಏನು ಮಾಡಬೇಕು ? ” ಎಂದು. ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರವೆಂದೂ, ನಿಮ್ಮ ಮನಸ್ಸನ್ನೂ ಶರೀರವನ್ನೂ ನಾಶ ಮಾಡುತ್ತದೆಂದೂ ಕಂಪೆನಿಗಳವರೇ ಹೇಳುತ್ತಾರಲ್ಲವೇ ? ಹಾಗಾಗಿ ವಿವೇಕವುಳ್ಳ ಮಕ್ಕಳು ಅದರಿಂದ ಹಿಂದೆ ಸರಿಯಲಿ.

ಮಕ್ಕಳೇ, ಸುತ್ತಲೂ ಎಷ್ಟು ಬಡವರು ಮನೆಯಿಲ್ಲದೆಯೂ, ಬಟ್ಟೆಯಿಲ್ಲದೆಯೂ, ಊಟಕ್ಕಿಲ್ಲದೆಯೂ, ಚಿಕಿತ್ಸೆಗೆ ಹಣವಿಲ್ಲದೆಯೂ ಕಷ್ಟಪಡುತ್ತಿಲ್ಲ ? ಒಂದು ವರ್ಷದ ನಿಮ್ಮ ಸಿಗರೇಟಿನ ಖರ್ಚಿನಿಂದ, ಒಬ್ಬ ಬಡವನಿಗೆ ರಾತ್ರಿ ಮಲಗಿಕೊಳ್ಳುವುದಕ್ಕೆ ಒಂದು ಝೋಪಡಿ ಕಟ್ಟಿಕೊಡಬಹುದು. ಅವರಲ್ಲಿ ಕರುಣೆ ಹುಟ್ಟಿದಾಗ ನಮ್ಮ ಸ್ವಾರ್ಥ ತಾನಾಗಿಯೇ ಬಿಟ್ಟು ಹೋಗುತ್ತದೆ. ನಾವು ಏನನ್ನೂ ತ್ಯಜಿಸದೆಯೂ ಅನ್ಯರ ಸುಖದಲ್ಲಿ ಸಂತೃಪ್ತಿ ಪಡೆಯುತ್ತೇವೆ. ಹೀಗೆ ಪ್ರತಿಯೊಂದು ಸ್ವಾರ್ಥವೂ ಬಿಟ್ಟು ಹೋದಾಗ ನಾವು ದೇವರ ಕೃಪೆಗೆ ಪಾತ್ರರಾಗುತ್ತೇವೆ. ಸ್ವಾರ್ಥ ಬಿಟ್ಟು ಹೋದಾಗ ನಮ್ಮಲ್ಲಿರುವ ದಯೆ, ಕರುಣೆ ಮುಂತಾದ ಎಲ್ಲಾ ಗುಣಗಳು ನಮ್ಮಲ್ಲಿ ಬೆಳಗುತ್ತದೆ. ದುರ್ಗುಣಗಳು ಇಲ್ಲವಾಗುತ್ತದೆ.

ಮಕ್ಕಳೇ, ಬೇರೆಯವರ ತಪ್ಪನ್ನು ನೋಡಬೇಡಿ. ಅವುಗಳನ್ನು ಗಮನಿಸುವಾಗ ನಮ್ಮ ಹೆಜ್ಜೆಗಳಲ್ಲಿ ನಮ್ಮ ಗಮನ ತಪ್ಪಬಹುದು. ನಾವು ಹೊಂಡಕ್ಕೆ ಬೀಳಬಹುದು. ಮಕ್ಕಳೇ ತೆಂಗಿನ ಮರ ಹೇಳುತ್ತದೆ “ನಾನು ಬ್ರಹ್ಮನ್” ಎಂದು. ತೆಂಗಿನ ಕಾಯಿಯೂ ಹೇಳುತ್ತದೆ “ನಾನು ಬ್ರಹ್ಮನ್” ಎಂದು. ಫಲತುಂಬಿ ನಿಂತಿದ್ದ ತೆಂಗಿನ ಮರ ಫಲ ನೀಡಲು ತೊಡಗಿತು. ತೆಂಗಿನ ಕಾಯಿಯೋ. ಅದು ಬರೇ ಅಂಶ ಮಾತ್ರವೇ ಆಗಿರುವುದು. ಯಮನಿಯಮಗಳೊಂದಿಗೆ ನಾವೂ ಬ್ರಹ್ಮತ್ವವನ್ನು ಮುಟ್ಟಬಹುದು. ಆದಕಾರಣ ನಾನು ಬ್ರಹ್ಮನೆಂದು ಹೇಳಿಕೊಂಡು, ಅನುಷ್ಠಾನ ಮಾಡದೆ ನಡೆದಾಡಬೇಡಿ.

ಕೆಲವರು ಕಾವಿ ಬಟ್ಟೆ ಉಟ್ಟು ತಾನು ಸಂನ್ಯಾಸಿಯೆಂದು ಹೆಮ್ಮೆ ಪಡುತ್ತಾರೆ. “ಮಾರಾಂಬು”* ಗಿಡದಂತೆ ಅವರು. ಬೇರುಸಮೇತ  ಕಿತ್ತರೆ ಬುಡದಲ್ಲಿ ಏನೂ ಕಾಣಿಸುವುದಿಲ್ಲ. ಕಾವಿ ಬೆಂಕಿಯ ಬಣ್ಣ. ಶರೀರ ಬೋಧವನ್ನು ಸುಟ್ಟವರು ಇದನ್ನು ಧರಿಸಲು ಯೋಗ್ಯತೆಯುಳ್ಳವರು. ಸಂನ್ಯಾಸಿಗಳು ಸರ್ವಸಂಗ ಪರಿತ್ಯಾಗಿಗಳಾಗಬೇಕು. ಆ ಹಂತದಲ್ಲಿ ಮಾತ್ರ ಕಷಾಯ ಧರಿಸಲು ಅರ್ಹತೆ ಬರುವುದು.

ಮಕ್ಕಳೇ, ಮನೆಯ ಪ್ಲ್ಯಾನ್ ಬರೆಸಿ, ಅದರಲ್ಲಿ ವಾಸಿಸಲು ಬರುವುದೋ ? ಶಾಸ್ತ್ರವೂ ಹಾಗೆಯೇ. ಅದನ್ನು ಅನುಭವಿಸಿ ತಿಳಿಯಬೇಕು. ಸಕ್ಕರೆ ಎಂದು ಬರೆದು ಅದನ್ನು ನೆಕ್ಕಿದರೆ ಸಿಹಿ ಸಿಗುವುದಿಲ್ಲ. “ಕನ್ಯಾಕುಮಾರಿಯಲ್ಲಿ ಚಿನ್ನವಿದೆ” ಎಂಬ ಒಂದು ಬೋರ್ಡು ಕೊಲ್ಲ್ಯಂನಲ್ಲಿದೆ. ** ಬೋರ್ಡನ್ನು ಕೇಳಿದರೆ ಚಿನ್ನ ಸಿಗುವುದೇ ? ಹೋಗಿ ಖರೀದಿಸಬೇಕು ನಾವು. ಅದಕ್ಕೆ ಬೇಕಾದದ್ದನ್ನು ಮಾಡಬೇಕು. ಶಾಸ್ತ್ರಗಳಲ್ಲಿ ಹೇಳಿರುವುದನ್ನು ಅನುಭವಗತ ಮಾಡಿಕೊಳ್ಳಬೇಕೆಂದಿದ್ದರೆ ಅನುಷ್ಠಾನ ಬೇಕು.

ಮಕ್ಕಳೇ, ಈ ಲೋಕದಲ್ಲಿ ಯಾರಿಗೆ ಯಾರೂ ತಮ್ಮವರಲ್ಲ. ಯಾರೂ ನಿಷ್ಕಾಮ ಪ್ರೀತಿ ಕೊಡುವುದಿಲ್ಲ. ಮನುಷ್ಯನ ಪ್ರೀತಿಯು ಯಾವುದಾದರೂ ಆಸೆಯ ಹಿಂದಿರುತ್ತದೆ. ಹೆಂಡತಿಯಲ್ಲಿರುವುದು ನಿಜವಾದ ಪ್ರೇಮವೇ? ಇನ್ಯಾರನ್ನಾದರೂ ತನ್ನ ಅನುಮತಿಯಿಲ್ಲದೆ ನೋಡಿದರೋ, ಅವರ ಜೊತೆ ಮಾತಾಡಿದರೋ, ಸಂಶಯದಿಂದ ಹೆಂಡತಿಯನ್ನು ಕೊಲ್ಲಲೂ ಗಂಡ ತಯಾರು. ಎಲ್ಲರಿಗೂ ತಮ್ಮದೇ ಅಂತ ಇರುವ ಒಂದೇ ಒಂದು ಸತ್ಯ ದೇವರು ಮಾತ್ರ. ಅಲ್ಲಿ ಆಸೆಯೂ ಇಲ್ಲ, ಬೇರೆ ಏನೂ ಇಲ್ಲ.

ಮಕ್ಕಳೇ, ದೇವರಿಗಾಗಿ ಕಣ್ಣೀರು ಹರಿಸಿ. ಅದು ಬಿಟ್ಟು ಯಾರೋ ಜಗಳಾಡಿದರೆಂದೋ, ಏನಾದರೂ ಹೇಳಿದರೆಂದೋ ಯೋಚಿಸಿ ದುಃಖಿಸಬೇಡಿ. ಮಕ್ಕಳೇ, ಎಲ್ಲೂ ದೋಷ ಕಾಣಬೇಡಿ. ಒಳ್ಳೆಯದನ್ನು ಮಾತ್ರ ಕಾಣಲು ಪ್ರಯತ್ನಿಸಿ. ದೇವರು ನಿಮ್ಮನ್ನು ಅನುಗ್ರಹಿಸುವನು.
__________

*ಸುವರ್ಣ ಗೆಡ್ಡೆಯ ಗಿಡದಂಥ ಒಂದು ಬಗೆಯ ಕಾಡು ಗಿಡ; ಬಹಳ ದೊಡ್ಡದಾಗಿ ಹುಲುಸಾಗಿ ಬೆಳೆದರೂ, ಬುಡದಲ್ಲಿ ಯಾವುದೇ ತರದ ಗೆಡ್ಡೆಯಿರದೆ ಬೋಳಾಗಿರುತ್ತದೆ

**ಕೊಲ್ಲ್ಯಂ – ಜಿಲ್ಲೆಯ ಮುಖ್ಯ ಪಟ್ಟಣ – ಅಲ್ಲಿಂದ 160 ಕಿಲೊಮೀಟರ್ ದಕ್ಷಿಣಕ್ಕೆ, ಮೂರು ಸಾಗರಗಳು ಸಂಗಮವಾಗುವಲ್ಲಿ  ಕನ್ಯಾಕುಮಾರಿ ಇದೆ.

ಒಂದು ಊರಿನಲ್ಲಿ ಒಳ್ಳೆಯವರಾದ ಇಬ್ಬರು ವ್ಯಕ್ತಿಗಳಿದ್ದರೆ ಸಾಕು, ಎಷ್ಟೊ ಜನರನ್ನು ಪರಿವರ್ತಿಸಲು ಸಾಧ್ಯವಿದೆ. ಇವತ್ತಿನ ಎರಡೂ ತಲೆಮಾರುಗಳು ನಶಿಸಿ ಹೋಗುತ್ತಿವೆ. ಯುವಕರು ಹೆಂಡಕ್ಕೂ, ಗಾಂಜಕ್ಕೂ, ಹೆಣ್ಣಿಗೂ ಅಡಿಯಾಳಾಗಿ ಸ್ವತಃ ಅಧೋಗತಿಗಿಳಿದಿದ್ದಾರೆ. ಅವರಿಗೆ ಅದರಲ್ಲಿ ಆನಂದ ದೊರಕುವುದಾದರೆ ಅವುಗಳನ್ನು ಉಪೇಕ್ಷಿಸಬೇಕೆಂದು ಅಮ್ಮ ಹೇಳುತ್ತಿಲ್ಲ.

ಒಂದು ವರ್ಷವೆಲ್ಲ ಸೇದಿದ ನಂತರ ಮುಂದಿನ ವರ್ಷ ಅದರ ಎರಡು ಪಟ್ಟು ಸೇದಬೇಕಾಗುತ್ತದೆ; ಅಂದರೆ ಮಾತ್ರ ಮೊದಲು ಸಿಕ್ಕಿದಷ್ಟು ಆನಂದ ಸಿಗುವುದು. ನಾಲ್ಕೈದು ವರ್ಷಗಳು ಕಳೆದ ಮೇಲೆ ಎಷ್ಟೇ ಸೇದಿದರೂ ಏನೂ ಅನಿಸುವುದಿಲ್ಲ. ಕಡೆಗೆ ಕುರೂಪಿಗಳಾಗುತ್ತಾರೆ, ನಡುಗುತ್ತಾರೆ ಸುಸ್ತಾಗಿ ಬೀಳುತ್ತಾರೆ. ಅವರ ಆರೈಕೆ ಮಾಡಲು ಬೇರೆಯವರು ಬೇಕಾಗುತ್ತದೆ. ಚುಚ್ಚುಮದ್ದು ಚುಚ್ಚಿ ಸಂತೃಪ್ತಿ ಪಡೆಯುವವರಿದ್ದಾರೆ. ಮೊದಲು ಸಿಕ್ಕಷ್ಟು ಸಂತೃಪ್ತಿ ಪಡೆಯಲು ಪ್ರತಿ ವರ್ಷವೂ ಚುಚ್ಚುಮದ್ದಿನ ಪ್ರಮಾಣ ಹೆಚ್ಚಿಸಬೇಕಾಗುತ್ತದೆ. ಕೊನೆಗೆ ಎಷ್ಟು ತೆಗೆದುಕೊಂಡರೂ ಪ್ರಯೋಜನ ಸಿಗದು. ಎಷ್ಟು ಚುಚ್ಚಿಕೊಂಡರೂ ಪರಿಣಾಮವಾಗುವುದಿಲ್ಲ, ಅದೂ ಅಲ್ಲದೆ ತಲೆಯ ಸ್ಥಿಮಿತ ತಪ್ಪುವಂತೆಯೂ ಮಾಡುವುದು.

ಈ ವಸ್ತುಗಳಿಂದೆಲ್ಲ ಆನಂದ ಸಿಗುವುದಾದರೆ, ಗಾಂಜಾದಿಂದಲೋ ಚುಚ್ಚುಮದ್ದಿನಿಂದಲೋ ಯಾವಾಗಲೂ ಆನಂದ ಸಿಗಬೇಕಾಗಿತ್ತಲ್ಲ ? ಹಾಗಿಲ್ಲ. ಹಾಗಿದ್ದರೆ ಈ ಮದ್ದುಗಳು ಶರೀರದೊಳಹೊಕ್ಕು ಏನು ಮಾಡುತ್ತವೆ?
ತಲೆಯ ನರಗಳನ್ನು ಮರಗಟ್ಟಿಸುತ್ತದೆ; ಯಾವುದೋ ಜಗತ್ತು ಪ್ರವೇಶಿಸಿದಂತೆ ತೋರುತ್ತದೆ. ಆಗ ಅನಿಸುತ್ತದೆ, “ಇದೇ ಆನಂದ; ಎಲ್ಲ ಮರೆಯಲಿಕ್ಕೆ ಸಾಧ್ಯವಾಗುತ್ತದೆ” ಎಂದು. ಕೊನೆಗೆ, ನೂರು ವರ್ಷಗಳ ತನಕ ಬದುಕಿರಬೇಕಾದವನು ಇಪ್ಪತ್ತೈದು ವರ್ಷದಲ್ಲೇ ಸಾಯುತ್ತಾನೆ; ಇಲ್ಲವೆಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗೆ ಬದುಕಿರುವುದರಲ್ಲಿ ಲೋಕಕ್ಕೇನಾದರೂ ಪ್ರಯೋಜನ ಇದೆಯೇ? ಇರುವುದು ಬರೇ ತೊಂದರೆ ಮಾತ್ರ. ಅವರನ್ನು ನೆನೆದುಕೊಂಡು ತಂದೆ ತಾಯಂದಿರು ದುಃಖಿಸುತ್ತಾರೆ; ಕುಟುಂಬ ಕಣ್ಣೀರಲ್ಲಿ ಮುಳುಗುತ್ತದೆ.

ಅಮಲಿನ ಅಡಿಯಾಳಾಗಿ ಊರಲ್ಲಿ ಗಲಭೆ ಶುರು ಮಾಡುವವರಿಗೆ ಅದೆಲ್ಲದರಿಂದ ಆನಂದವೋ ಸುಖವೋ ಸಿಗುತ್ತದೆ ಎಂದಿದ್ದರೆ ಪರವಾಗಿರಲಿಲ್ಲ. ಆದರೆ ಅವರೆ ನಾಶವಾಗುತ್ತಿರುತ್ತಾರೆ. ಅವರ ಚಟಗಳು ಅವರನ್ನು ಬಾಧಿಸುತ್ತವೆ. ತಂದೆ ತಾಯಂದಿರಿಗೆ ದುಃಖ; ಸಮಾಜಕ್ಕೆ ದುಃಖ. ಇದೇ ಹೆಚ್ಚಿನ ಯುವಕರು ಸಮಾಜಕ್ಕಾಗಿ ಮಾಡುತ್ತಿರುವುದು.

ಲೋಕದ ಒಳಿತಿಗಾಗಿ ಕಾರ್ಯ ಪ್ರವೃತ್ತರಾಗಬೇಕಾದವರು ಎಳೆಯ ವಯಸ್ಸಿನಲ್ಲಿಯೇ ಮರಣಕ್ಕೆ ತುತ್ತಾಗುತ್ತಾರೆ. ಇಪ್ಪತ್ತೈದು ವರ್ಷ ತಂದೆ ತಾಯಿ ಕಷ್ಟಪಟ್ಟು ಸಾಕಿದ್ದಕ್ಕೆ ಪ್ರತಿಫಲವಾಗಿ ಅವರಿಗೆ ಸಿಗುವುದು ಬದುಕಿನಾದ್ಯಂತ ಕಣ್ಣೀರು; ಸಮಾಜಕ್ಕೆ ಮರೆಯಾಲಾಗದ, ಗುಣವಾಗದ ಗಾಯ. ಹಾಗೆ ಅವರು ಮಣ್ಣಾಗುತ್ತಾರೆ. ಇದು ಮುಂದುವರೆದರೆ ನಮ್ಮ ತಲೆಮಾರು ಅಳಿದು ಹೋಗುವುದು. ಆದಕಾರಣ ನಿಮ್ಮಂತಿರುವ ಯುವಕರು ಸೇವೆಗಿಳಿದು ಇದಕ್ಕೊಂದು ಪರಿವರ್ತನೆ ತರಬೇಕು. ಒಳ್ಳೆ ಧೃಡ ಮನೋಬಲವಿರುವವರಿಂದ ಮಾತ್ರ ಇವತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಾಧ್ಯ. ಇಂದಿನ ವಿಷಮ ಸ್ಥಿತಿಗೆ ಉಳಿದಿರುವ ಒಂದೇ ಸಂಪೂರ್ಣ ಪರಿಹಾರ ಇರುವುದು ನಮ್ಮ ಭಾರತೀಯ ಶಾಸ್ತ್ರಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ. ಇಂದು ವಿಜ್ಞಾನವು ನಮ್ಮ ತತ್ವಗಳನ್ನು ಅಂಗೀಕರಿಸಿ, ಅಲ್ಲಿಂದ ಜ್ಞಾನವನ್ನು ಮುಂದಕ್ಕೊಯ್ಯುತ್ತಿದೆ. ಹಾಗಿರುವಾಗ ನಾವದನ್ನು ತುಳಿದು ಹೊಸಕದೇ, ಅದನ್ನು ಮೈಗೂಡಿಸಿಕೊಳ್ಳಲು ಶ್ರಮಿಸಬೇಕಾಗಿದೆ. ಸರ್ವ ಕಾಲಕ್ಕೂ ಬೇಕಾದ ಜ್ಞಾನ ಅದರೊಳಗಿದೆ. ಭೌತಿಕ ವಿಜ್ಞಾನವು ಏನೆಲ್ಲ ಕಂಡುಹಿಡಿದರೂ ಅವೆಲ್ಲವುಗಳಿಗಿಂತಲೂ ಅತೀತವಾದ, ಎಂದಿಗೂ ಅಳಿಯದೆ ಉಳಿದುಕೊಂಡಿರುವುದು ಭಾರತೀಯ ತತ್ವಶಾಸ್ತ್ರ ಒಂದೇ. ಅದನ್ನು ನೀವು ಸ್ವಲ್ಪ ಸರಿಯಾಗಿ ತಿಳಿದು, ಕಲಿತು, ಅದರೊಳಗಿನ ಸಾರವನ್ನು ಗ್ರಹಿಸಿ ಉಳಿದುದನ್ನು ಬಿಟ್ಟುಬಿಡಿ. ಹಾಗೆ ಆದರೆ ಅಮ್ಮನ ವಿರೋಧವಿಲ್ಲ. ಅದರಲ್ಲಿಯ ಯುಕ್ತವಾದುದನ್ನು ನೀವು ತೆಗೆದುಕೊಳ್ಳಿ; ನಿಮ್ಮ ಬುದ್ಧಿಗೆ ಸರಿ ಎಂದು ಕಂಡದ್ದನ್ನು ಸ್ವೀಕರಿಸಿ.