ಪ್ರಶ್ನೆ: ಈ ಲೋಕದಲ್ಲಿ ಎಷ್ಟೋ ಜನರು ಕಷ್ಟ ಪಡುತ್ತಾರೆ; ಉಪವಾಸ ಅಲೆಯುತ್ತಾರೆ. ಇನ್ನು ಕೆಲವರು ಹಣವಂತರಾಗಿ ಸುಖ ಅನುಭವಿಸುತ್ತಾರೆ. ದೇವರು ಕರುಣಾಮಯನೆಂದು ಹೇಳುತ್ತಾರೆ. ಆದರೆ ಅವನ ಕೆಲವು ವಿಷಯಗಳನ್ನು ನೋಡುವಾಗ ಎದ್ದು ಕಾಣುವುದು ಕರುಣೆಯಲ್ಲ, ಕ್ರೂರತನ.

ಮಕ್ಕಳೇ, ತಪ್ಪು ದೇವರದಲ್ಲ. ದೇವರು ಕರುಣಾಮಯನೆ. ಮಕ್ಕಳೇ, ನಮ್ಮ ತಾಯಿ ನಮ್ಮನ್ನು ಹೆರುತ್ತಾಳೆ; ಬೆಳೆಯಬೇಕಾದ ಮಾರ್ಗವನ್ನೂ ನಮಗೆ ಹೇಳಿ ಕೊಡುತ್ತಾಳೆ. ಅದನ್ನನುಸರಿಸದಿದ್ದರೆ ನಮ್ಮ ಬೆಳವಣಿಗೆ ಕುಂಠಿತವಾಗುತ್ತದೆ. ಹಾಗೆಂದು ದೇವರ ಮೇಲೆ ಕ್ರೂರತನದ ಆರೋಪಣೆ ಮಾಡುವುದೆಂದರೆ ಅದು ನಮ್ಮತಾಯಿಯ ಮೇಲೆ ಅಪವಾದ ಹೊರಿಸಿದಂತೆ.

ಒಂದೂರಿನಲ್ಲಿ ಒಬ್ಬಳು ತಾಯಿಗೆ ವಿವೇಕಿ ಮತ್ತು ಅವಿವೇಕಿಯೆಂದು ಇಬ್ಬರು ಮಕ್ಕಳಿದ್ದರು. ತಾಯಿ ಅವರನ್ನು ಹತ್ತಿರದ ಪಟ್ಟಣದಿಂದ ಹಾಲು ತರಲು ಕಳುಹಿಸುತ್ತಾಳೆ. ಹೊರಡುವ ಮೊದಲು ತಾಯಿ ಮಕ್ಕಳಿಗೆ ಬುದ್ಧಿ ಹೇಳುತ್ತಾಳೆ, “ನೀವು ಹೋಗುವ ದಾರಿಯಲ್ಲಿ ಎರಡು ಹಲಗೆಯ ಸಂಕಗಳಿದೆ. ಒಂದು ತೇಗಿನ ಹಲಗೆಯಿಂದ ಮಾಡಿದ್ದು – ಅಲ್ಲಿಗೆ ಸ್ವಲ್ಪ ದೂರವಿದೆ; ಪೂರ್ವದ ಕಡೆಗೆ – ಒಳ್ಳೆ ದಪ್ಪವಾಗಿಯೂ ಗಟ್ಟಿಯಾಗಿಯೂ ಇದೆ. ಕುಸಿಯುವುದಿಲ್ಲ. ಹಾಲಿಗೆ ಹೋಗಬೇಕಾದರೆ ನೀವು ಆ ಸಂಕದಿಂದ ಮಾತ್ರ ಹೋಗಬೇಕು. ಈ ಕಡೆ ಬರಲಿಕ್ಕೆ ಇನ್ನೊಂದು ಸುಲಭದ ದಾರಿಯಿದೆ. ಪಶ್ಚಿಮದ ಕಡೆಗಿರುವ ಆ ಸಂಕ ’ಮುರಿಕ್ಕ್’ (ನುಗ್ಗೆ) ಮರದ್ದು. ಅಗಲ ಕಮ್ಮಿಯಾಗಿರುವ ಅದರಲ್ಲಿ ನಡೆದರೆ ಕಾಲು ಜಾರುತ್ತದೆ. ಅದು ಕುಸಿದು ಬಿಡಬಹುದು. ಹಾಲು ತರುವ ಮನೆಯಲ್ಲಿ ಒಂದು ಬೆತ್ತ ಕೊಡುತ್ತಾರೆ. ಆ ಬೆತ್ತವನ್ನು ನೀರಿನ ತಳಕ್ಕೆ ಊರಿ ಬಲ ಕೊಡಬೇಕಾಗುತ್ತದೆ, ನುಗ್ಗೆಯ ಸಂಕ ದಾಟಲು. ಯಾವುದೇ ಕಾರಣಕ್ಕಾಗಿಯೂ, ಅತ್ತ ಕಡೆ ಹೋಗುವಾಗ ಮಾತ್ರ, ಮಕ್ಕಳು ಆ ಸಂಕದಿಂದ ಹೋಗದಿರಿ.

ಪ್ರಯಾಣ ಶುರು ಮಾಡಿದೊಡನೆಯೇ, ಅವಿವೇಕಿ ಹೇಳುತ್ತಾನೆ, ’ನಾನು ಪಶ್ಚಿಮದಿಂದಲೇ ಹೋಗುತ್ತೇನೆ.’ ವಿವೇಕಿ ಹೇಳಿದ, ’ನಾನು ಅಲ್ಲಿಂದ ಬರುವುದಿಲ್ಲ. ಅಲ್ಲಿಂದ ಹೋದರೆ ಬೀಳುತ್ತೇವೆಂದು ಅಮ್ಮ ಹೇಳಿದ್ದಾರೆ.’ ’ನನಗೆ ಅದೆಲ್ಲ ಚೆನ್ನಾಗಿ ಗೊತ್ತು. ನುಗ್ಗೆ ಸಂಕದಿಂದ ಹೋದರೆ ನಾನು ಬೀಳುವುದಿಲ್ಲ. ಬೆತ್ತ ಗಿತ್ತ ಏನೂ ಇಲ್ಲದೆ ನಾನು ದಾಟುತ್ತೇನೆ,’ ಅವಿವೇಕಿ ಪುನಃ ಹೇಳಿದ. ’ನಾನು ಬರುವುದಿಲ್ಲ. ಅಮ್ಮ ಹೇಳಿದ ಹಾಗೇ ನಾನು ಕೇಳುತ್ತೇನೆ.’ ವಿವೇಕಿ ಹೀಗೆ ಹೇಳಿ ಪೂರ್ವದ ಕಡೆಯಿರುವ ದಾರಿಯಲ್ಲೇ ಪ್ರಯಾಣ ಮಾಡಿದ; ಅವಿವೇಕಿ ಪಶ್ಚಿಮದ ದಾರಿಯಲ್ಲಿ ಸಾಗಿದ.

ತಾಯಿ ಹೇಳಿ ಕೊಟ್ಟ ಹಾಗೆ, ತೇಗಿನ ಸಂಕದ ಮೇಲಿಂದ ಹೋಗಿ, ಹಾಲು ತೆಗೆದುಕೊಂಡು, ಪಟ್ಟಣದಿಂದ ಹಿಂತಿರುಗಿದ ವಿವೇಕಿ ನುಗ್ಗೆ ಸಂಕ ಮುಟ್ಟುತ್ತಾನೆ. ಅವನ ಕೈಯಲ್ಲಿ ಬೆತ್ತವಿತ್ತು. ಸಂಕ ತಲಪಿದಾಗ ವಿವೇಕಿ ಕಂಡದ್ದು ನೀರಿನಲ್ಲಿ ಬಿದ್ದಿರುವ ಅವಿವೇಕಿಯ ದಯನೀಯ ಪರಿಸ್ಥಿತಿಯನ್ನು. ’ನಾನು’ ಎಂಬ ಮನೋಭಾವದಿಂದಾಗಿ ಅವಿವೇಕಿ ತಾಯಿಯ ಮಾತನ್ನು ಕೇಳಲಿಲ್ಲ. ಅಹಂಕಾರದಿಂದಾಗಿ ವಿವೇಚನೆಯಿಲ್ಲದವನಾಗಿ ಅವಿವೇಕಿ ಬಿದ್ದದ್ದು. ದೇವರ ವಿಷಯವೂ ಹೀಗೆಯೇ. ಸೃಷ್ಟಿಕರ್ತನಾದ ಈಶ್ವರನು* ನಿತ್ಯಾನಿತ್ಯ ವಿವೇಚನೆ ಮಾಡುವ ಶಕ್ತಿಯನ್ನು ಮನುಷ್ಯನಿಗೆ ನೀಡಿದ್ದಾನೆ. ಹಾಗೆ ವಿವೇಚನೆ ಮಾಡದೆ ನಾವು ತಪ್ಪುಗಳನ್ನು ಮಾಡುತ್ತಿದ್ದೇವೆ. ದುಃಖವು ಅದರ ಫಲ. ಈಗ ಹೇಳಿದ ಕಥೆಯಲ್ಲಿದ್ದಂತೆ ವಿವೇಕ ಎನ್ನುವ ಭಗವಂತನ ಬೆತ್ತವನ್ನು ತೆಗೆದುಕೊಳ್ಳಲು ನಾವು ಸಿದ್ಧವಿಲ್ಲ. ಎಲ್ಲರೂ ಈಶ್ವರನ ಮಾತು ಪಾಲಿಸಿದರೆ ಯಾವುದೇ ರೀತಿಯ ಅವಘಡ ಸಂಭವಿಸುವುದಿಲ್ಲ. ನಮಗೆ ಆನಂದದಿಂದ ಜೀವಿಸಲಿಕ್ಕೂ ಸಾಧ್ಯವಾಗುತ್ತದೆ. ಪ್ರೀತಿಯ ಮಕ್ಕಳೇ, ಆದಕಾರಣ ಎಲ್ಲರೂ ಭಗವಂತನನ್ನು ಮನಸ್ಸಿನಲ್ಲಿ ಪ್ರಾರ್ಥಿಸಿರಿ. ದೇವರ ನುಡಿಗನುಸಾರವಾಗಿ ನಡೆದುಕೊಂಡರೆ, ಅವನು ರಕ್ಷಿಸುವನು. ದೇವರಲ್ಲಿ ಹೀಗೆ ಗಟ್ಟಿಯಾಗಿ ಮೊರೆಯಿಡಿರಿ: ’ಅಪ್ಪಾ, ಅಮ್ಮಾ, ಯಾರು ನನ್ನ ನಿಜವಾದ ತಂದೆ, ತಾಯಿಯೆಂಬುದನ್ನರಿಯೆ; ನೀನು ಹೇಳಿಕೊಟ್ಟರೆ ಸಹ. ಅಮ್ಮಾ, ಯಾರೋ ಈ ಸಂಸಾರವೆನ್ನುವ ಕಾಡಿನಲ್ಲಿ ಹೆತ್ತು ಬಿಟ್ಟು ಹೋದರು. ನನ್ನನ್ನು ಕೊನೆಗಾಣಿಸಲು ಕ್ರೂರ ಪ್ರಾಣಿಗಳು ತಿನ್ನಲು ಬರುತ್ತಿವೆ. ಶಾಶ್ವತೆಯಾದ ತಾಯಿಯೇ, ನೀನೆಲ್ಲಿ ? ನೀನಲ್ಲದೆ ಯಾರು ನನ್ನ ಬರಮಾಡಿಕೊಳ್ಳುವರು ?’ ಮೆಚ್ಚಿನ ಮಕ್ಕಳೇ, ಈಶ್ವರನನ್ನು ಈ ರೀತಿಯಾಗಿ ಅತ್ತು ಕರೆಯಿರಿ. ನಮ್ಮ ಜಗನ್ಮಾತೆ ನಮ್ಮನ್ನು ಆದರದಿಂದ ಅಂಗೀಕರಿಸುವುದು ನಿಶ್ಚಯ.”

ಪ್ರಶ್ನೆ: ಜನಗಳು ದುಃಖ ಅನುಭವಿಸುತ್ತಿರುವುದು ಮತ್ತು ಕಷ್ಟ ಪಡುತ್ತಿರುವುದು ಯಾತಕ್ಕಾಗಿ ?

“ಅದು ಆ ಮಕ್ಕಳ ಕರ್ಮಫಲ. ಅವರು ಮಾಡಿದ ತಪ್ಪಿನ ಫಲವನ್ನು ಅವರು ಅನುಭವಿಸುತ್ತಿದ್ದಾರೆ. ಪಕ್ಕದ ಮನೆಗೆ ಹೋಗಲು ಎರಡು ದಾರಿಗಳಿವೆ. ತಾಯಿ ಮಗನಿಗೆ ಹೇಳುತ್ತಾಳೆ, ’ಒಂದು ದಾರಿ ನಡೆಯಲಿಕ್ಕೆ ಮಾತ್ರ ಬಹಳ ದೂರವಿದ್ದರೂ ಅದು ಒಳ್ಳೆಯ ದಾರಿ. ಹುಡುಗ ಅದನ್ನು ಕೇಳದೆ ಒಳದಾರಿಯಿಂದ ಹೋಗುತ್ತಾನೆ. ಅಲ್ಲಿ ಮುಳ್ಳುಬೇಲಿ ಇತ್ತು. ಅದರ ಎಡೆಯಿಂದ ಆ ಕಡೆಗೆ ದಾಟಿ ಹೋಗಲು ಪ್ರಯತ್ನಿಸುತ್ತಾನೆ. ಅವನಿಗೆ ಗಾಯಗಳಾದವು. ಅದಕ್ಕೆ ತಾಯಿ ತಪ್ಪಿತಸ್ಥಳೇ ? ಆದರೂ ತಾಯಿ ಔಷಧ ಹಚ್ಚಿ ಚಿಕಿತ್ಸೆ ಮಾಡುತ್ತಾಳೆ. ಮುಂದಿನ ಬಾರಿಯೂ ಹುಡುಗ ಹೇಳಿದ್ದನ್ನು ಅನುಸರಿಸಲಿಲ್ಲ. ಶರೀರದಲ್ಲ್ಲಿ ಗಾಯಗಳಾದವು. ಆಗಲೂ ತಾಯಿ ಔಷಧಿ ಹಚ್ಚುತ್ತಾಳೆ. ಮೂರನೆಯಬಾರಿಯೂ ಶರೀರಕ್ಕೆ ಗಾಯ ಮಾಡಿಕೊಂಡು ಬಂದಾಗ, ತಾಯಿ ಜಪ್ಪೆನ್ನಲಿಲ್ಲ. ಗಾಯ ಮಾಗಿತು.’ನಿನಗೆ ಗಾಯದ ನೋವು ಗೊತ್ತಾಗಿರಲಿಲ್ಲ. ಆದಕಾರಣ ನೀನು ತಪ್ಪು ದಾರಿಯಲ್ಲಿ ಹೋದಿ. ಹಾಗಾಗಿ ಔಷಧಿ ಹಚ್ಚಲಿಲ್ಲ. ಔಷಧಿ ಹಚ್ಚದಿದ್ದದ್ದು ನಿನ್ನಲ್ಲಿ ಪ್ರೀತಿಯಿಲ್ಲವೆಂದಲ್ಲ. ಆದು ನಿನ್ನಲ್ಲಿ ಎಚ್ಚರಿಕೆಯನ್ನುಂಟುಮಾಡಲಿಕ್ಕೆಂದು ಆಗಿತ್ತು. ಕೊಂಚ ನೋವು ಅನುಭವಿಸಿದರೆ ಆಮೇಲೆ ಎಂದೂ ನೀನು ಒಳದಾರಿಯಿಂದ ಹೋಗಲಿಕ್ಕಿಲ್ಲ.” ನೋವು ಅನುಭವಿಸದೆ ಇದ್ದ ಕಾರಣ ನೀವು ತಪ್ಪು ಮಾಡುತ್ತೀರಿ. ದೇವರ ಮಾತು ಪಾಲಿಸದ ಕಾರಣ ದುಃಖ ಪಡಬೇಕಾಗಿ ಬರುತ್ತದೆ. ಆಗ ನೊಂದುಕೊಂಡು ಅಳುತ್ತೀರಿ. ಹಾಗಿದ್ದರೂ ದೇವರೇ ಈ ಕಷ್ಟ ಕಾರ್ಪಣ್ಯಗಳಿಗೆ ಕಾರಣವೆಂದು ಹೇಳುವುದು ತಪ್ಪಲ್ಲವೇ ? ದೇವರು ಸೃಷ್ಟಿ ಮಾಡಿದ ಎಂದ ಮೇಲೆ, ಏನು ಮಾಡಬೇಕೆಂಬುದನ್ನೂ ಉಪದೇಶಿಸಿರುವನು. ಅದನ್ನು ಕೇಳದಿರುವ ಕಾರಣ ಬಂದ ಹೆಚ್ಚಿನ ಕಷ್ಟಗಳಿಗೆ ದೇವರು ತಪ್ಪಿತಸ್ಥ, ಎಂದು ಹೇಳ ಬಾರದು. ಈಶ್ವರನು ಎಂದೂ ಶಿಕ್ಷಿಸುವುದಿಲ್ಲ; ಅಥವಾ ಇರುವ ಶಿಕ್ಷೆಯೂ ನಿಮ್ಮನ್ನು ಮೇಲೆ ಎತ್ತಲಿಕ್ಕೆಂದೇ ಇರುತ್ತದೆ. ನಾವಿಂದು ಖಜಾನೆಯ ಬೀಗದ ಕೈಯನ್ನು ಕಿಸೆಯಲ್ಲಿಟ್ಟುಕೊಂಡು ಊರೆಲ್ಲ ಸುತ್ತಾಡುತ್ತಿದ್ದೇವೆ. ನಿಜವಾದ ಆನಂದ ಒಳಗಿದೆ. ಅದು ತಿಳಿದುಕೊಳ್ಳದೆ ಲೋಕವೆಲ್ಲ ಹುಡುಕಾಡುತ್ತಿದ್ದೇವೆ.

ನೀವಿಲ್ಲಿ ಗಳಿಸಲೂ ಆನಂದಿಸಲೂ ಬಂದಿರುವವರು. ಆದರೆ ನೀವೇ ನಾಶಗೊಳ್ಳುತ್ತಲೂ, ನಾಶಪಡಿಸುತ್ತಲೂ ಇದ್ದೀರಿ. ಅದರ ಫಲವಾಗಿ ದುಃಖಪಡುತ್ತಿದ್ದೀರಿ. ಅದಕ್ಕೆ ಈಶ್ವರ*ನು ಹೊಣೆಯಲ್ಲ.”

  • *[ದೇವರನ್ನು ಸೂಚಿಸುವ ಮಲೆಯಾಳ ಪದ “ಈಶ್ವರ” ಎಂದಾಗಿರುತ್ತದೆ.]