ನಮಗೆ ಸದಾ ದುಃಖ ಮಾತ್ರವೇ ಇರುವುದು. ನಿತ್ಯಾನಿತ್ಯ ಏನೆಂಬುದರ ಅರಿವಿಲ್ಲದಿರುವುದರಿಂದ, ನಮ್ಮ ಆಸೆಗಳು ಶಾಶ್ವತವಾದವುಗಳಿಗೆ ಅಲ್ಲವಾದ್ದರಿಂದ ನಾವು ಹೀಗೆ ದುಃಖಿಗಳಾಗಿದ್ದೇವೆ. ಈ ದುಃಖದಿಂದಾಗಿ ಉರಿದುರಿದು ನಾವು ರೋಗಿಗಳಾಗುತ್ತೇವೆ; ನಮ್ಮ ಆಯುಷ್ಯವೂ ಕ್ಷೀಣಿಸುತ್ತದೆ.

ಪ್ರೀತಿಯ ಮಕ್ಕಳೇ, ನಮ್ಮ ಕೆಲಸಗಳನ್ನು ನಾವು ಚೆನ್ನಾಗಿ ಮಾಡುತ್ತಿರುತ್ತೇವೆ. ಎಲ್ಲಿ ಹೋದರೂ ಅಲ್ಲಿಯ
ದೋಷಗಳನ್ನು, ಕುಂದು ಕೊರತೆಗಳನ್ನು ನಾವು ಕಂಡು ಹಿಡಿಯುತ್ತೇವೆ; ನಮ್ಮ ಮನಸ್ಸು ಅಸ್ವಸ್ಥವಾಗುತ್ತದೆ.
ಈ ದೃಷ್ಟಿಕೋನವಲ್ಲ ನಮಗೆ ಬೇಕಾಗಿರುವುದು. ಒಂದು ಕಡೆ ಏನು ಕಾಣಲಿಲ್ಲ ಎಂಬುದನ್ನು ಮರೆತು, ನಮಗೆ
ಬೇಕಾದದ್ದು ಅಲ್ಲಿ ಏನಿದೆ ಎನ್ನುವುದನ್ನು ನೋಡಿ ಅದನ್ನು ಮಾತ್ರ ಸ್ವೀಕರಿಸಬೇಕು. ನಮ್ಮಲ್ಲಿರುವುದಕ್ಕಿಂತಲೂ
ಯಾವ ಗುಣ ಹೆಚ್ಚು ಅಲ್ಲಿದೆ ಎಂದು ಮಾತ್ರವೇ ಮಕ್ಕಳು ನೋಡಿದರೆ ಸಾಕು. ಈ ರೀತಿಯಾಗಿ ನಾವು ಸದಾ ಒಳಿತನ್ನು ಕಾಣಬೇಕು. ಮಕ್ಕಳೇ, ಆಗ ನಾವು ಒಳ್ಳೆಯವರಾಗುತ್ತೇವೆ.

ಹಳೇ ಕಾಲದಲ್ಲಿ ಎಲ್ಲರೂ ಗುರುಕುಲದಲ್ಲಿದ್ದು ಗುರುಕುಲ ವಿದ್ಯಾಭ್ಯಾಸ ಮಾಡುತ್ತಿದ್ದರು. ಅದರ ಫಲವಾಗಿ ಜೀವನವೆಂದರೇನಂತಲೂ, ಹೇಗೆ ಜೀವಿಸಬೇಕೆಂದೂ, ಲೋಕದಲ್ಲಿ ಹೇಗೆ ವ್ಯವಹರಿಸಬೇಕೆಂದೂ ಅವರರಿತುಕೊಂಡಿದ್ದರು. ತನ್ಮೂಲಕ ಅವರು ಆನಂದಮಯರಾದರು. ಧೃಡಚಿತ್ತರಾಗಿ, ಮರಣಭಯ ತೊರೆದು, ಸತ್ಯಕ್ಕಾಗಿ ಜೀವನವನ್ನು ಧಾರೆಯೆರೆಯಲು ಕಂಕಣಬದ್ಧರಾದರು. ಆರೋಗ್ಯವಂತರೂ, ದೀರ್ಘಾಯುಷಿಗಳೂ, ಆಜಾನುಬಾಹಿಗಳೂ, ಒಳ್ಳೆ ಸಿಂಹಮರಿಗಳೂ ಆಗಿದ್ದರು ಅವರು. “ಹೇಗೆ ಇತರರೆಲ್ಲರನ್ನೂ ಕೊಳ್ಳೆ ಹೊಡೆಯುವುದು” ಎನ್ನುವ ಚಿಂತೆ ಅವರಿಗೆ ಇಲ್ಲವಾಗಿತ್ತು. ಕೋರ್ಟೋ, ಸಿನೆಮ ಥೇಟರೋ, ವಿಡಿಯೊ ಸಿಸ್ಟಮೋ ಅಂತ ಏನೂ ಅವತ್ತು ಇರಲಿಲ್ಲ. ಅವತ್ತು ಜನರು ಸಾಯಂಕಾಲ ದೀಪ ಹಚ್ಚಿ, ನಾಮ ಜಪಿಸುತ್ತಿದ್ದರು. ನಾಮಜಪದ ನಂತರ ತಾವು ಅವತ್ತು ಮಾಡಿದ ತಪ್ಪುಗಳನ್ನು ನೆನೆದು ಪಶ್ಚಾತ್ತಾಪ ಪಡುತ್ತಿದ್ದರು. ಅದು ಅವರಿಗೆ ಸಾಂತ್ವನವನ್ನೂ, ಶಾಂತಿಯನ್ನೂ ನೀಡುತ್ತಿತ್ತು.

ಇವತ್ತೋ ? ಕಾಲ ಬದಲಾಗಿದೆ. ಸಾಯಂಕಾಲವಾದರೆ ಟೀ.ವೀ.ಯ ಎದುರಿಗೆ ಕೂತು, ವಿಡಿಯೋ ಕ್ಯಾಸೆಟ್ಟ್ ಹಾಕಿ ಸಿನೆಮ ನೋಡುತ್ತಾರೆ. ಬೇರೆಯವರನ್ನು ಕೊಂದು ಹೇಗೆ ಅವರ ಹಣ ಲಪಟಾಯಿಸುವುದು ಎಂದು ಚಿಂತಿಸುತ್ತಾರೆ. ಸ್ವಂತ ತಾಯಿಯನ್ನು ಕೂಡಾ ಹಣಕ್ಕಾಗಿ ಕೊಲ್ಲಲು ಹೇಸುವುದಿಲ್ಲ. ಇದು ಇವತ್ತಿನ ಪ್ರಪಂಚ. ಆದರೆ ಶಾಂತಿಯಿದೆಯೇ ? ಎಲ್ಲೂ ಶಾಂತಿಯಿಲ್ಲ. ಗಾಂಜ, ಸರಾಯಿ, ನಿದ್ದೆಗುಳಿಗೆ ಇದೆಲ್ಲ ಇವತ್ತಿನವರ ದೇವರು. ಇದಿಲ್ಲದಿದ್ದರೆ ಇವರಿಗೆ ಜೀವಿಸಲು ಅಸಾಧ್ಯ. ಅದೆಲ್ಲದ್ದಕ್ಕೆ ಗುಲಾಮರಾಗಿ ಇವರ ಬಾಳು ನಾಶವಾಗುತ್ತದೆ. ಮಾತ್ರವಲ್ಲ, ಇನ್ನಿತರರಿಗೂ ಇವರು ಉಪದ್ರವವಾಗುತ್ತಾರೆ. ಇವತ್ತು ಮೂರು ವಯಸ್ಸು ದಾಟದ ಮಕ್ಕಳು “ಇನ್‌ಕ್ವಿಲಾಬ್ ಜಿಂದಾಬಾದ್” ಎಂದು ಕೂಗುತ್ತಾರೆ. ತನ್ನ ಪಾರ್ಟಿಯವನಲ್ಲದಿದ್ದರೆ ಅವನನ್ನು ಕೊಲ್ಲುತ್ತೇನೆ ಎಂದೆನ್ನುತ್ತಾರೆ. ಶಾಲೆಗೆ ಹೋಗಿ ಸ್ಟ್ರೈಕ್ ಮಾಡುತ್ತಾರೆ. ಮಕ್ಕಳೇ, ನೀವು ಹೀಗೆ ನಾಶವಾಗದಿರಿ.

ನೆಚ್ಚಿನ ಮಕ್ಕಳೇ, ಈಶ್ವರನಲ್ಲಿ ನಂಬಿಕೆ ಮೊಳಕೆಯೊಡೆದಾಗ ನಾವು ಒಂದಾಗುತ್ತೇವೆ. ಇತರರನ್ನು ನಾವು ಪ್ರೀತಿಸುತ್ತೇವೆ; ಒಳ್ಳೆದನ್ನು ಮಾಡುತ್ತೇವೆ. ತಂದೆ ತಾಯಂದಿರನ್ನು ಅನುಸರಿಸುತ್ತೇವೆ. ಗುರುವನ್ನು ಆಚಾರಪೂರ್ವಕವಾಗಿ ವಂದಿಸುತ್ತೇವೆ. ಹೀಗೆ ನಾವು ಒಳ್ಳೆಯವರಾಗುತ್ತೇವೆ.

ಒಲವಿನ ಮಕ್ಕಳೇ, ನಾವೆಲ್ಲ ಒಂದೇ ತಾಯಿಯ ಮಕ್ಕಳು. ನಮ್ಮ ಕೈ ಸುಡುವಾಗ ನೀರಲ್ಲಿ ಅದ್ದಲು ನಮಗೆಷ್ಟು ಹುಮ್ಮಸ್ಸಿರುವುದೋ ಅಷ್ಟೇ ಹುಮ್ಮಸ್ಸಿನಿಂದ ನಾವು ಇತರರಿಗೆ ಕರುಣೆ ತೋರಿಸಬೇಕು. ನಮ್ಮ ಒಂದು ಕೈ ಸುಟ್ಟಾಗ “ನನಗಲ್ಲವಲ್ಲ ಸುಟ್ಟದ್ದು” ಎಂದು ಹೇಳಿ ಇನ್ನೊಂದು ಕೈ ಅದಕ್ಕೆ ಮದ್ದು ಹಚ್ಚಲು ಒಪ್ಪದಿರುತ್ತದೆಯೇ ? “ನಾನು” ಶರೀರವನ್ನಿಡೀ ವ್ಯಾಪಿಸಿದೆ. ಶರೀರದ ಒಂದು ಭಾಗದ ನೋವನ್ನು ಎಲ್ಲಾ ಭಾಗಗಳೂ ಅನುಭವಿಸುತ್ತದೆ. ಅದೇ ಪ್ರಕಾರ ಎಲ್ಲೆಲ್ಲೂ ಒಂದೇ ಚೈತನ್ಯ ತುಂಬಿಕೊಂಡಿರುವುದರಿಂದ ಪ್ರಪಂಚದ ಒಂದೊಂದೂ ಚಿಕ್ಕ ಜೀವಿಯ ದುಃಖವನ್ನು ಕೂಡ ಅರಿವಿಲ್ಲದೆಯೇ ಅನುಭವಿಸುತ್ತೇವೆ. ಇದನ್ನರ್ಥ ಮಾಡಿಕೊಂಡು ಮಕ್ಕಳೂ ಯಾವಾಗಲೂ ಕರುಣೆಯೊಡಗೂಡಿ ನಡೆದುಕೊಳ್ಳಬೇಕು. ಕೆಲಸದ ಫಲವನ್ನು ನಾವು ಇಚ್ಛಿಸಬಾರದು. ಭಗವಂತನಿಗೆ ಅರ್ಪಿಸಿದರೆ ಸಾಕು, ಅವನು ನಮಗೆ ಬೇಕಾದದ್ದನ್ನು ಕೊಡುವನು.

ಮುದ್ದಿನ ಮಕ್ಕಳೇ, ನೀವು ಹೊಂಡದಲ್ಲಿ ಬಿದ್ದರೆ ಸರಿಯಾಗಿ ದಾರಿ ತೋರಿಸಲಿಲ್ಲವೆಂದು ಸ್ವಂತ ಕಣ್ಣುಗಳನ್ನೇ ಚುಚ್ಚಿ ಕಿತ್ತುಬಿಡುತ್ತೀರ ? ನಮ್ಮ ಕಣ್ಣಿನ ತಪ್ಪನ್ನು ನಾವು ಕ್ಷಮಿಸುವ ಹಾಗೆ, ಇತರರ ಕುಂದುಗಳನ್ನು ಮನ್ನಿಸಿ ಅವರಲ್ಲಿ ಕರುಣೆಯಿಂದ ವರ್ತಿಸಬೇಕು. ಯಾರು ಏನೇ ಮಾಡಿದರೂ ನಾವು ಗಮನಿಸಬೇಕಾಗಿಲ್ಲ. ಆದರೆ ಇವತ್ತು ಮನುಷ್ಯನು ಪ್ರಾರ್ಥಿಸಿದರೂ ಅದು ಇನ್ನೊಬ್ಬರನ್ನು ನಾಶ ಮಾಡಲಿಕ್ಕೆಂದು. “ದೇವರೇ ನನಗೆ ಅವನನ್ನು ಕೊಲ್ಲಲು ಶಕ್ತಿ ದಯಪಾಲಿಸು, ಆ ಭೂಮಿ ನನಗೆ ಕೊಡಿಸು; ಅವನನ್ನು ಪೋಲೀಸಿನವರು ಹಿಡಿದುಕೊಂಡು ಹೋಗುವಂತಾಗಲಿ; ಅವರು ಗುಡುಗು ಮಿಂಚಿನಿಂದ ಸತ್ತೇ ಹೋಗಲಿ; ಅವನಿಗೆ ದೇವರು ಶಿಕ್ಷೆಕೊಡಲಿ,” – ಇದು ಇಂದಿನ ಪ್ರಾರ್ಥನೆ. ಹೀಗಲ್ಲ ಮಕ್ಕಳೇ ನಾವು ಪ್ರಾರ್ಥಿಸಬೇಕಾಗಿರುವುದು. “ಭಗವಂತ, ನೀನು ಎಲ್ಲರಿಗೂ ಒಳಿತು ಮಾಡು, ನನ್ನಿಂದ ಏನೂ ತಪ್ಪು ಆಗದಿರಲಿ, ಇತರರ ತಪ್ಪುಗಳನ್ನು ಕ್ಷಮಿಸಲು ನನಗೆ ಶಕ್ತಿ ಬರಲಿ, ನನ್ನ ತಪ್ಪುಗಳನ್ನು ದಯವಿಟ್ಟು ಮನ್ನಿಸು” ಎಂದಾಗಿರಬೇಕು ನಮ್ಮ ಪ್ರಾರ್ಥನೆ. ಈ ಪ್ರಾರ್ಥನೆಯ ತರಂಗಗಳು ವಾತಾವರಣವನ್ನೇ ಪರಿಶುದ್ಧಿಗೊಳಿಸುತ್ತದೆ. ಪರಿಸರ ಶುದ್ಧವಾದರೆ ಆರೋಗ್ಯಕರ ಜೀವನ ನಡೆಸಬಹುದು. ಇಲ್ಲವೆಂದರೆ ನಮ್ಮ ಮನಸ್ಸಿಗೆ ಏಕಾಗ್ರತೆ ಸಿಗದು. ಆದಕಾರಣ ಮೆಚ್ಚಿನ ಮಕ್ಕಳು ಭಗವಂತನಲ್ಲಿ ನಂಬಿಕೆಯುಳ್ಳವರಾಗಿ ಬಾಳಿರಿ.

ನೆಚ್ಚಿನ ಮಕ್ಕಳೇ, ಜೀವಿಸಲಿಕ್ಕಾಗಿ ಉಣ್ಣಿರಿ ! ಏಳಲಿಕ್ಕಾಗಿ ಮಲಗಿ. ಅದು ಬಿಟ್ಟು ಇನ್ನೇನೋ ಮಾಡಬೇಡಿ. ಮಕ್ಕಳೇ, ಧ್ಯಾನವೆನ್ನುವುದು ಎಳೆ ಮಕ್ಕಳಿಗೆ ಸಹ ಒಳ್ಳೆಯದು. ಬುದ್ಧಿಯನ್ನು ಉದ್ದೀಪನಗೊಳಿಸುತ್ತದೆ; ನೆನಪಿನಶಕ್ತಿ ವರ್ಧಿಸುತ್ತದೆ; ಅವರಿಗೆ ಸರಿಯಾಗಿ ಕಲಿಯಲು ಸಾಧ್ಯವಾಗುತ್ತದೆ. ಅದು ಬಿಟ್ಟು, ಮಕ್ಕಳೆಲ್ಲ ಸಂನ್ಯಾಸಿಗಳಾಗಬೇಕೆಂದು ಅಮ್ಮ ಹೇಳುತ್ತಿಲ್ಲ. ಆನಂದಮಯವಾದ ಜೀವನ ಮಕ್ಕಳದ್ದಾಗಲಿ ! ನಿಮ್ಮ ಆತ್ಮದ ಸ್ವರೂಪದ ಬಗ್ಗೆ ಚಿಂತನೆ ನಡೆಸುವಾಗ ನಿಮಗೆ ಆನಂದದ ರಹಸ್ಯ ಅರ್ಥವಾಗುವುದು; ಮಕ್ಕಳ ಮನಸ್ಸಿನ ಅಲೆಗಳು ಇಲ್ಲದಂತಾಗುವುದು.

ಮುದ್ದಿನ ಮಕ್ಕಳೇ, ಏನೂ ತ್ಯಜಿಸಬೇಕೆಂದು ಅಮ್ಮ ಹೇಳುತ್ತಿಲ್ಲ. ಒಳ್ಳೆ ವಿಚಾರ ಮಾಡಿದರೆ ಸಾಕು. ಕೆಟ್ಟದ್ದು ನಮ್ಮನ್ನು ಬಿಟ್ಟು ಹೋಗುವುದು; ಉಪ್ಪುನೀರಿಗೆ ಅವ್ಯಾಹತವಾಗಿ ಒಳ್ಳೆ ನೀರು ಸುರಿದಾಗ ಉಪ್ಪುಬಿಟ್ಟು ಹೋಗುವ ಹಾಗೆ. ನೀರು ಬರುವ ನಲ್ಲಿಯಲ್ಲಿ ಅಳವಡಿಸಿದ ಫಿಲ್ಟರ್ ಹೇಗೆ ನೀರಿನ ಕಷ್ಮಲಗಳನ್ನು ಸೋಸಿ ತೆಗೆಯುತ್ತದೆಯೋ, ಹಾಗೇ ಧ್ಯಾನವೆನ್ನುವ ಫಿಲ್ಟರ್ ನಮ್ಮಲ್ಲಿಯ ಕಷ್ಮಲಗಳನ್ನು ತೆಗೆದುಬಿಡುತ್ತದೆ.

ಮಕ್ಕಳೇ, ಎಲ್ಲಾ ನಿಮ್ಮಲ್ಲೇ ಇದೆ. ಪ್ರಯತ್ನಿಸಿದಲ್ಲಿ ನೀವು ಅದನ್ನು ಕಂಡುಹಿಡಿಯಬಹುದು. ಪ್ರಾಪಂಚಿಕ ವಸ್ತುಗಳಿಂದ ಸಿಗುವ ಆನಂದವು, ಒಳಗಿನ ಆನಂದದ ಬರೇ ಒಂದು ಭಾಗ ಮಾತ್ರ. ಆ ಆನಂದ ಪ್ರಪಂಚದ ವಸ್ತುಗಳಿಂದ ಸಿಗುತ್ತದೆ ಎಂದು ಮಕ್ಕಳು ಅಂದುಕೊಳ್ಳದಿರಿ. ನಾಯಿಯಂತೆ, ತಾನು ಜಗಿಯುತ್ತಿರುವ ಮೂಳೆಯಲ್ಲಿ ಮಾಂಸವಿದೆ ಎಂದೆಣಿಸಿ ಸ್ವಂತ ಒಸಡನ್ನೇ ಗಾಯಕ್ಕೀಡಾಗಿಸಬೇಡಿ ಮಕ್ಕಳೇ.

ಮುದ್ದು ಮಕ್ಕಳೇ, ಭಗವಂತನು ಸದಾ ಸುರಿಸುತ್ತಿರುವ ಕೃಪೆಗೆ ನಾವು ಪಾತ್ರರಾಗೋಣ. ನದಿ ಯಾವಾಗಲೂ ಹರಿಯುತ್ತಿರುತ್ತದೆ. ನಡುವೆ ಒಡ್ಡು ಕಟ್ಟಿ, ನೀರು ಸಿಗುತ್ತಿಲ್ಲವೆಂದು ನಾವು ದೋಷಾರೋಪಣೆ ಮಾಡುತ್ತೇವೆ. ಒಡ್ದು ಕಟ್ಟಿದವರೂ ನಾವೇ. ನಾವು ಕಟ್ಟಿದ ಅಹಂಕಾರದ, ಅಜ್ಞಾನದ ಒಡ್ಡುಗಳನ್ನು ಕೆಡವಿದಾಗ, ಸದಾ ಸುರಿಯುತ್ತಲಿರುವ ಈಶ್ವರನ ಕೃಪೆ ನಮ್ಮದಾಗುವುದು.

ಮಕ್ಕಳೇ, ಎಲ್ಲವನ್ನೂ ಜಯಿಸಿದವರು ಏನನ್ನೂ ನೋಡುವುದಿಲ್ಲ. ಅವರಿಗೆ ನಾವು ಏನನ್ನೂ ಮಾಡಬೇಕಾಗಿಲ್ಲ. ಆದರೆ ನಾವು ಅನಿತ್ಯದಲ್ಲಿ ಜೀವಿಸುವವರು. ಹಾಗಾಗಿ ನಾವು ಇವತ್ತು ಬೆಟ್ಟ, ಹೊಂಡ, ಮಳೆ, ಗಿಡ, ಸಮುದ್ರ, ಕಾಡು ಹೀಗೆ ಬಹಳಷ್ಟು ಕಾಣುತ್ತಾ, ಕೇಳುತ್ತಾ ಇದ್ದೇವೆ. ಮೇಲೇರಿ ಹೋದಂತೆ ಭೂಮಿಯ ದೃಶ್ಯಗಳು ಬರೇ ಚುಕ್ಕೆಯಾಗಿ ಕಾಣಿಸುತ್ತವೆ. ಕೊನೆಗೆ ಎಲ್ಲ ಒಂದಾಗಿ, ಏನೂ ಕಾಣಿಸುವುದಿಲ್ಲ. ಅದೇ ರೀತಿ, ತಮ್ಮ ಸ್ವರೂಪದೆತ್ತರಕ್ಕೆ ಏರಿದವರು ಏನನ್ನೂ ಕಾಣುವುದಿಲ್ಲ. ಆ ಘಟ್ಟಕ್ಕೆ ಮುಟ್ಟದಿರುವವರೆಗೆ ಎಲ್ಲಾ ಮಿಥ್ಯೆಯೆಂದು ಹೇಳಿಕೊಂಡು ಸುಮ್ಮನಿರ ಬೇಡಿ. ಲೋಕದ ಬಗ್ಗೆ ಉತ್ತರದಾಯಿತ್ವ ಬೇಕು. ಹಾಗೆ ಆದರೆ ಸಮಯ ಹಾಳಾದಂತಾಗುವುದಿಲ್ಲ. ಕಳೆದ ಸಮಯ ಮರಳಿ ಬರುವುದಿಲ್ಲ. ಆದಕಾರಣ ಮಕ್ಕಳು ಸಮಯ ಪೋಲು ಮಾಡದೆ ನಡೆದುಕೊಳ್ಳಿ. ಮಕ್ಕಳೇ, ಗಾಳಿಯಂತಾಗಬೇಕು. ಗಾಳಿ ಹೂವಿನ ಮೇಲೂ ಮಲದ ಮೇಲೂ ಸಮಾನವಾಗಿ ಬೀಸುತ್ತದೆ. ಮಲವೆಂದು ಬದಿಯಿಂದ ಸರಿದು ಹೋಗುವುದಿಲ್ಲ; ಹೂವೆಂದು ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಹೀಗೆಯೇ ಸುಖದುಃಖಗಳಲ್ಲಿ, ಒಳಿತು ಕೆಡುಕುಗಳಲ್ಲಿ ಸಮನಾಗಿ ಪ್ರತಿಕ್ರಿಯಿಸಿ ನಡೆದುಕೊಳ್ಳಿ ಮಕ್ಕಳೇ.