ಮಕ್ಕಳೇ, ಜೀವನದಲ್ಲಿ ಎರಡು ಕಾರ್ಯಗಳು ನಡೆಯುತ್ತವೆ. ಒಂದು, ಕರ್ಮ ಮಾಡುವುದು. ಎರಡು, ಅದರ ಫಲವನ್ನು ಅನುಭವಿಸುವುದು. ಕರ್ಮವನ್ನು ಯಾವ ಮನೋಭಾವದೊಂದಿಗೆ ಮಾಡಬೇಕು ಮತ್ತು ಕರ್ಮಫಲವನ್ನು ಯಾವ ಮನೋಭಾವದೊಂದಿಗೆ ಅನುಭವಿಸಬೇಕು ಎಂಬುದನ್ನು ತಿಳಿದರೆ, ಜೀವನವು ತುಲನಾತ್ಮಕವಾಗಿ ಶಾಂತವಾಗಿಯೂ ಮತ್ತು ಸಮಾಧಾನಪೂರ್ಣವಾಗಿಯೂ ಇರುತ್ತದೆ.

ನಾವು ಬಹಳಷ್ಟು ನಿರೀಕ್ಷಿಸುವ ಕಾರ್ಯಗಳು ಸಂಭವಿಸದೇ ಇರುವುದೂ ಮತ್ತು ನಿರೀಕ್ಷಿಸದ ಕಾರ್ಯಗಳು ಸಂಭವಿಸುವುದೂ, ಜೀವನದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಯ.

ಒಂದು ಕರ್ಮದ ಫಲವು ದೊರಕಲು ನಮ್ಮ ಕರ್ಮದ ಜೊತೆಗೆ ಅನೇಕ ಅಂಶಗಳೂ ಕಾರಣವಾಗಿರುತ್ತವೆ. ಇವೆಲ್ಲವೂ ಅನುಕೂಲಕರವಾಗಿ ಬಂದಾಗ ಮಾತ್ರ ನಾವು ನಿರೀಕ್ಷಿಸಿದ ಫಲವು ದೊರಕುತ್ತದೆ. ಇಲ್ಲಿ ಕರ್ಮವನ್ನು ಮಾಡುವುದು ಎಂಬ ಒಂದೇ ಕಾರ್ಯವು ನಮ್ಮ ಹತೋಟಿಯಲ್ಲಿದೆ. ಆದ್ದರಿಂದ, ಫಲದ ಬಗ್ಗೆ ಚಿಂತಿಸದೆ, ನಮ್ಮ ಸಂಪೂರ್ಣ ಶಕ್ತ್ಯಾನುಸಾರ ಆ ಕರ್ಮವನ್ನು ಉತ್ತಮವಾಗಿ ಮಾಡುವುದಷ್ಟೇ ನಮಗೆ ಸಾಧ್ಯವಿರುವುದು,.

ಅದಕ್ಕಾಗಿಯೇ ಫಲವನ್ನು ಅಪೇಕ್ಷಿಸದೆ ಕರ್ಮವನ್ನು ಮಾಡಬೇಕೆಂದು ಭಗವದ್ಗೀತೆಯಲ್ಲಿ ಭಗವಾನ್ ಉಪದೇಶಿಸುತ್ತಾನೆ. ಸಂಬಳವನ್ನು ಪಡೆಯದೆ ಕೆಲಸ ಮಾಡಬೇಕು ಎಂದು ಇದರ ಅರ್ಥವಲ್ಲ. ಫಲದ ಬಗ್ಗೆ ನಿರೀಕ್ಷೆಯನ್ನು ತ್ಯಜಿಸಿ ಕರ್ಮವನ್ನು ಮಾಡಿದರೆ, ಚೆನ್ನಾಗಿ ಮಾಡಲು ಸಾಧ್ಯ. ನಮಗೆ ದೊರೆಯಬೇಕಾದುದು ಸಹಜವಾಗಿಯೇ ಲಭಿಸುತ್ತದೆ.

ನಾವು ಪರೀಕ್ಷೆಯನ್ನು ಬಹಳ ಚೆನ್ನಾಗಿ ಬರೆದರೂ, ಉತ್ತರ ಪತ್ರಿಕೆ ಪರಿಶೀಲಿಸುವ ಪ್ರೊಫೆಸರ್ ಮತ್ತು ಮಾರ್ಕ್ಸ್ ನಮೂದಿಸುವ ವ್ಯಕ್ತಿ ಗಮನಿಸದಿದ್ದರೆ, ನಿರೀಕ್ಷಿಸಿದ ಫಲ ಸಿಗುವುದಿಲ್ಲ. ಒಬ್ಬ ವಿದ್ಯಾರ್ಥಿ ಬಹಳ ಚೆನ್ನಾಗಿ ಓದಿ ಪರೀಕ್ಷೆ ಬರೆದ. ರ‍್ಯಾಂಕ್ ಸಿಗುತ್ತದೆ ಎಂದೇ ಅವನು ನಿರೀಕ್ಷಿಸಿದ್ದ. ಆದರೆ, ಪರೀಕ್ಷಾಫಲಿತಾಂಶ ಬಂದಾಗ ಕೇವಲ ತೇರ್ಗಡೆಯಾಗಿದ್ದ ಅಷ್ಟೇ. ನಿರೀಕ್ಷಿಸಿದಷ್ಟು ಮಾರ್ಕ್ಸ್ ಸಿಗಲಿಲ್ಲ ಎಂದುಕೊಂಡು ಅವನು ನಿರಾಶನಾಗಲಿಲ್ಲ. ಉತ್ತರ ಪತ್ರಿಕೆ ಮರುತಪಾಸಣೆಗೆ ಬೇಕಾದ ಕ್ರಮಗಳನ್ನು ಕೈಗೊಂಡ. ಎರಡನೇ ಬಾರಿ ನೋಡಿ ಮಾರ್ಕ್ಸ್ ಹಾಕಿದಾಗ ರ‍್ಯಾಂಕ್ ಇತ್ತು.

ಇದು ಹೇಗೆ ಸಂಭವಿಸಿತು ಎಂದು ವಿಚಾರಿಸಿದಾಗ ತಿಳಿದುಬಂದ ವಿಷಯವೆಂದರೆ, ಉತ್ತರ ಪತ್ರಿಕೆ ನೋಡಿದ ಪ್ರೊಫೆಸರ್ ಆ ಸಮಯದಲ್ಲಿ ಸಂಪೂರ್ಣವಾಗಿ ಅಸ್ವಸ್ಥನಾಗಿದ್ದನು ಎಂಬುದು. ಅವನ ಪತ್ನಿ ಯಾರೋ ಒಬ್ಬನ ಜೊತೆ ಓಡಿಹೋಗಿದ್ದಳು. ಅದರ ದುಃಖದಲ್ಲಿದ್ದ ಕಾರಣ, ಅವನಿಗೆ ಗಮನವಿಟ್ಟು ಪರಿಶೀಲಿಸಲು ಸಾಧ್ಯವಾಗಲಿಲ್ಲ. ಅದನ್ನೇ ಅಮ್ಮ ಹೇಳಿದ್ದು – ನಾವು ಎಷ್ಟೇ ಓದಿ ಪರೀಕ್ಷೆ ಬರೆದರೂ, ನಮ್ಮ ಪ್ರಯತ್ನ ಮಾತ್ರವಲ್ಲ, ಬೇರೆ ಅನೇಕ ಅಂಶಗಳು ಸಹ ಫಲಿತಾಂಶವನ್ನು ನಿರ್ಧರಿಸುತ್ತವೆ ಎಂದು.