ನಾವು ಜೀವನದ ಅನುಭವಗಳನ್ನು ಮೂರು ರೀತಿಯಲ್ಲಿ ಎದುರಿಸುತ್ತೇವೆ. ಬರುವ ಸಂದರ್ಭಗಳನ್ನು ಶಪಿಸುತ್ತಾ ಮುಂದೆ ಸಾಗುವುದೂ ಒಂದು ವಿಧಾನವಾಗಿದೆ.

ಪರಿಸರವನ್ನು ಬದಲಾಯಿಸುವುದರಿಂದ ಸಮಸ್ಯೆಗಳು ಕೊನೆಗೊಳ್ಳುವುದಿಲ್ಲ. ಒಬ್ಬ ಹೆಂಡತಿ ಮತ್ತು ಆಕೆಯ ಗಂಡ ಸದಾಕಾಲ ವಾದಿಸುತ್ತಿದ್ದರು. ಒಟ್ಟಿಗೆ ವಾಸಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಯಿತು. ಹೀಗಾಗಿ, ಆ ವಿವಾಹ ಬಂಧ ಮುರಿಯಿತು. ಸ್ವಲ್ಪ ದಿನಗಳ ನಂತರ ಇಬ್ಬರೂ ಬೇರೆಯವರನ್ನು ಮದುವೆಯಾದರು.

ಹೆಚ್ಚು ತಡವಾಗದೆ ಇಬ್ಬರಿಗೂ ಅರಿವಾಯಿತು – ಮೊದಲ ಹೆಂಡತಿಯೂ ಗಂಡನೂ ಬೇರೊಂದು ರೂಪದಲ್ಲಿ ಬಂದಿದ್ದಾರೆಂದು. ವ್ಯಕ್ತಿ ಬದಲಾಗಿದ್ದರು, ಆದರೆ ಮನಸ್ಸು ಬದಲಾಗಿರಲಿಲ್ಲ. ಮನಸ್ಸು ಬದಲಾಗದಿರುವವರೆಗೆ, ಕೇವಲ ಪರಿಸರವನ್ನು ಬದಲಾಯಿಸಿದ ಮಾತ್ರಕ್ಕೆ ಸಮಸ್ಯೆಗಳಿಂದ ಮುಕ್ತಿ ಸಿಗುವುದಿಲ್ಲ.

ಒಬ್ಬನಿಗೆ ಹೊಟ್ಟೆನೋವು. ಮನೆಯಲ್ಲಿರುವ ಎಲ್ಲರಿಗೂ, ’ಅಮ್ಮ ಹೊಟ್ಟೆನೋವು, ಅಪ್ಪ ಹೊಟ್ಟೆನೋವು, ಅಣ್ಣ, ಅಕ್ಕ, ಈ ಹೊಟ್ಟೆನೋವು ತಾಳಲಾರೆ’ ಎಂದು ಹೇಳುತ್ತಾ ಹೇಳುತ್ತಾ ಕೊನೆಗೆ ಹತ್ತಿರ ಕುಳಿತವರಿಗೆಲ್ಲಾ ಹೊಟ್ಟೆನೋವಾಗಲು ಶುರುವಾಯಿತು. ನಮ್ಮ ಅಶಾಂತಿಯನ್ನು ಹೇಳುತ್ತಾ ಹೇಳುತ್ತಾ ನಾವು ಇತರರ ಶಾಂತಿಯನ್ನೂ ನಾಶಮಾಡುತ್ತೇವೆ.

ಇದರ ಜೊತೆಗೆ, ನಾಲ್ಕನೆಯ ಮಾರ್ಗವೂ ಇದೆ: ಮನೋಭಾವವನ್ನು ಬದಲಾಯಿಸುವುದು. ಇದರ ಮೂಲಕ ಮಾತ್ರವೇ ನಾವು ನಿಜವಾಗಿಯೂ ಸುಖವಾಗಿರಬಹುದು. ನಮ್ಮ ಇಚ್ಛೆಗೆ ತಕ್ಕಂತೆ ಪರಿಸರವನ್ನು ಸಂಪೂರ್ಣವಾಗಿ ಬದಲಾಯಿಸುವುದು ಅಸಾಧ್ಯ. ಅನುಭವಗಳನ್ನು ಬದಲಾಯಿಸುವುದು ಸಾಧ್ಯವಿಲ್ಲ. ಆದ್ದರಿಂದ, ಪರಿಸ್ಥಿತಿಗೆ ತಕ್ಕಂತೆ ಮನೋಭಾವವನ್ನು ಹೊಂದಿಸಿಕೊಳ್ಳುವುದು ಅವಶ್ಯಕ. ಇದನ್ನು ಆಧ್ಯಾತ್ಮಿಕತೆಯ ಮೂಲಕ ಮಾತ್ರ ಸಾಧಿಸಬಹುದು.

ಇಲ್ಲಿಯೇ ಆಧ್ಯಾತ್ಮಿಕ ಶಾಸ್ತ್ರಗಳ ಪ್ರಾಮುಖ್ಯತೆ ಇರುವುದು. ಭಗವಾನ್ ಕೃಷ್ಣನು ಅರ್ಜುನನಿಗೆ ಏನನ್ನು ತೋರಿಸಿಕೊಟ್ಟನು? ಅವನು ಬದಲಾಯಿಸಿದುದು ಪರಿಸ್ಥಿತಿಯನ್ನಲ್ಲ, ಮನೋಭಾವವನ್ನು.

ಯುದ್ಧದ ಸಮಯದಲ್ಲಿ, ಭಗವಾನ್ ಬಯಸಿದ್ದರೆ ಕೌರವರನ್ನು ನಾಶಮಾಡಲು ಸುಂಟರಗಾಳಿಯನ್ನೋ,  ಪ್ರವಾಹವನ್ನೋ ತರಬಹುದಿತ್ತು. ಅಥವಾ ಬೇರೆ ಯಾವುದೇ ರೀತಿಯಲ್ಲಿ ಅವರನ್ನು ನಾಶಮಾಡಬಹುದಿತ್ತು. ಅವನು ಬಯಸಿದ್ದರೆ, ಭಗವಾನ್ ಒಬ್ಬನೇ ಪಾಂಡವರಿಗೆ ಎಲ್ಲವನ್ನೂ ಗೆದ್ದುಕೊಡಬಹುದಿತ್ತು.  ಅವನಿಗೆ ಆ ಶಕ್ತಿ ಇತ್ತು.

ಆದರೆ, ಭಗವಾನ್ ಬದಲಾಯಿಸಿದುದು ಪರಿಸರವನ್ನಲ್ಲ. ಅರ್ಜುನನಿಗೆ ಈ ಜಗತ್ತಿನ ಬಗ್ಗೆ ಇದ್ದ ಮನೋಭಾವವನ್ನು ಬದಲಾಯಿಸಿದನು. ಜೀವನದ ಸ್ವಭಾವವನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ, ಅದನ್ನು ಹೇಗೆ ಎದುರಿಸಬೇಕೆಂದು ಕಲಿಸಿದನು.

ಇಡೀ ಜಗತ್ತು ಶಾಂತಿ ಮತ್ತು ಕ್ಷೇಮವಾಗಿರಲಿ ಎಂದು ಪ್ರಾರ್ಥಿಸುವ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕು.