ಕಾರ್ಖಾನೆಗಳಿಂದ ಹೊಮ್ಮುವ ಹೊಗೆ ನಮ್ಮ ವಾತಾವರಣವನ್ನು ಎಷ್ಟು ಮಾಲಿನ್ಯಗೊಳಿಸಿದೆ? ಅಮ್ಮ ಕಾರ್ಖಾನೆಗಳನ್ನು ಮುಚ್ಚಿಬಿಡಬೇಕು ಎಂದು ಹೇಳುತ್ತಿಲ್ಲ. ಅವುಗಳಿಂದ ಬರುವ ಆದಾಯದ ಒಂದು ಭಾಗವಾದರೂ ಪ್ರಕೃತಿ ಸಂರಕ್ಷಣೆ ಮತ್ತು ಪರಿಸರ ಶುದ್ಧೀಕರಣಕ್ಕೆ ವಿನಿಯೋಗಿಸಲು ನಾವು ಸಿದ್ಧರಾಗಿರಬೇಕು ಎಂದು ಮಾತ್ರ ಹೇಳುತ್ತಾರೆ.

ಹಿಂದೆ, ಬಿಸಿಲು ಮತ್ತು ಮಳೆ, ಕಾಲ ಕಾಲಕ್ಕೆ ಸರಿಯಾಗಿ ಬರುತ್ತಿದ್ದು, ಸಸ್ಯಗಳ ಪೋಷಣೆ ಮತ್ತು ಬೆಳವಣಿಗೆ ಸರಿಯಾಗಿರುತ್ತಿತ್ತು. ಎಲ್ಲವೂ ಪ್ರಕೃತಿಯ ಕೃಪೆಯಿಂದ ನಡೆಯುತ್ತಿದ್ದ ಕಾರಣ, ನೀರಾವರಿ ಯೋಜನೆಗಳ ಅಗತ್ಯವೂ ಆಗ ಇರಲಿಲ್ಲ. ಆದರೆ ಇಂದು, ಮನುಷ್ಯನು ಧರ್ಮ ಮಾರ್ಗದಿಂದ ದೂರ ಸರಿದು ಪ್ರಕೃತಿಯನ್ನು ಶೋಷಿಸುತ್ತಿರುವ ಕಾರಣ, ಪ್ರಕೃತಿಯೂ ಪ್ರತೀಕಾರ ಆರಂಭಿಸಿದೆ. ಒಮ್ಮೆ ಮನುಷ್ಯನನ್ನು ಮೆಲ್ಲಗೆ ಸವರಿ ಸಂತೈಸಿದ ಅದೇ ಸೌಮ್ಯ ಗಾಳಿ, ಇಂದು ಪ್ರಚಂಡ ಬಿರುಗಾಳಿಯ ರೂಪ ತಾಳಿ ನಾಶ ಬಿತ್ತುತ್ತಿದೆ.
ಪ್ರಕೃತಿಯ ಕಳೆದುಹೋದ ತಾಳವನ್ನು ಮರಳಿ ಪಡೆಯಲು ನಮಗೆ ಸಾಧ್ಯವೇ ಎಂದು ನೀವು ಸಂದೇಹಿಸಬಹುದು, ‘ಮನುಷ್ಯನ ಶಕ್ತಿ ಸೀಮಿತವಲ್ಲವೇ?’ ಅಲ್ಲ. ನಮ್ಮೊಳಗೆ ಅನಂತ ಶಕ್ತಿ ನಿದ್ರಿಸುತ್ತಿದೆ. ಆ ಶಕ್ತಿ ವಿಶೇಷದ ಬಗ್ಗೆ ನಾವು ಅರಿವಿಲ್ಲದವರಾಗಿದ್ದೇವೆ ಅಷ್ಟೆ. ಆ ಶಕ್ತಿಯನ್ನು ನಾವು ಎಚ್ಚರಗೊಳಿಸಿಕೊಳ್ಳಬಹುದು. ನಾವು ಆಂತರಿಕವಾಗಿ ಎಚ್ಚರಗೊಂಡಾಗ, ಆ ಮಹಾಶಕ್ತಿ ಉದಯಿಸುತ್ತದೆ. ನಮ್ಮೊಳಗೆ ನಿದ್ರಿಸುತ್ತಿರುವ ಆ ಅನಂತ ಶಕ್ತಿಯನ್ನು ಎಚ್ಚರಗೊಳಿಸುವ ಜೀವನ ರಹಸ್ಯವೇ ಧರ್ಮ.
ಸನಾತನ ಧರ್ಮ ಹೇಳುತ್ತದೆ, “ಓ ಮನುಷ್ಯಾ! ನೀನು ಮಂಜಾಗಿ ಉರಿಯುವ ಮೇಣದಬತ್ತಿಯಲ್ಲ. ಸ್ವಯಂಪ್ರಕಾಶ ಸ್ವರೂಪನಾದ ಸೂರ್ಯನು ನೀನು. ಪ್ರಕಾಶಿಸಲು ಬೇರೊಬ್ಬರನ್ನು ಅವಲಂಬಿಸಬೇಕಾದವನಲ್ಲ ನೀನು.” ಎಲ್ಲಿಯವರೆಗೆ ‘ನಾನು ಶರೀರ ಮಾತ್ರ’ ಎಂದು ತಿಳಿದಿರುತ್ತೀರೋ, ಅಲ್ಲಿಯವರೆಗೆ ತ್ವರಿತವಾಗಿ ಶಕ್ತಿ ಕ್ಷೀಣಿಸುವ ಸಾಧಾರಣ ಬ್ಯಾಟರಿಯಂತೆ ಇರುತ್ತೀರಿ.
ಇದರ ಬದಲು, ‘ನಾನು ಆತ್ಮ’ ಎಂದು ಅರಿತಾಗ, ವಿಶ್ವದ ಸಂಪೂರ್ಣ ಶಕ್ತಿ ಕೇಂದ್ರಕ್ಕೆ ಸಂಪರ್ಕ ಹೊಂದಿದ, ಯಾವಾಗಲೂ ಚಾರ್ಜ್ ಆಗಿರುವ, ಶಕ್ತಿ ಎಂದಿಗೂ ಕ್ಷೀಣಿಸದ, ಅಗಾಧ ಶಕ್ತಿಯುತ ಬ್ಯಾಟರಿಯಂತೆ ಇರುತ್ತೀರಿ. ಎಲ್ಲ ಶಕ್ತಿಯ ಮೂಲವಾದ ಆತ್ಮನೊಂದಿಗೆ ಮತ್ತು ಸರ್ವಶಕ್ತನಾದ ಈಶ್ವರನೊಂದಿಗೆ ಐಕ್ಯ ಹೊಂದಿದಾಗ, ನಿಮ್ಮೊಳಗಿನ ಶಕ್ತಿ ಎಂದಿಗೂ ಕ್ಷೀಣಿಸುವುದಿಲ್ಲ. ಅದು ನಿಮ್ಮೊಳಗಿನ ಮಹಾಶಕ್ತಿಯನ್ನು ಎಚ್ಚರಗೊಳಿಸಲು ಸಹಾಯ ಮಾಡುತ್ತದೆ.
ಮಕ್ಕಳೇ, ನಿಮ್ಮೊಳಗಿನ ಅನಂತ ಶಕ್ತಿಯ ಬಗ್ಗೆ ಅರಿವುಳ್ಳವರಾಗಿರಿ. ನೀವು ಭಯದಿಂದ ನಡುಗುವ ಆಡಿನ ಮರಿಗಳಲ್ಲ. ತೇಜಸ್ಸು ಮತ್ತು ಗಾಂಭೀರ್ಯವುಳ್ಳ ಸಿಂಹದ ಮರಿಗಳು. ವಿಶ್ವವನ್ನು ನಿಯಂತ್ರಿಸುವ ಮಹಾಶಕ್ತಿಯೇ ಸರ್ವಶಕ್ತನಾದ ಈಶ್ವರನು.

Download Amma App and stay connected to Amma