“ಒಬ್ಬರ ಕೋಪ ಮತ್ತು ಅವಿವೇಕದಿಂದ ಉಂಟಾಗುವ ತೊಂದರೆಯನ್ನು, ಮತ್ತೊಬ್ಬರ ಸಹನೆ, ನಮ್ರತೆ ಮತ್ತು ಶಾಂತತೆಗಳು ಸರಿದೂಗಿಸುತ್ತವೆ.”

ಒಂದು ಕುಟುಂಬದಲ್ಲಿನ ಎಲ್ಲ ಸದಸ್ಯರು ಒಂದೇ ಸ್ವಭಾವದವರಾಗಿರಬೇಕು ಎಂಬುದಿಲ್ಲ. ಅಲ್ಲಲ್ಲಿ ಹಠಮಾರಿ, ಅವಿವೇಕಿ ಮತ್ತು ಕೋಪಿಷ್ಠನಾದ ವ್ಯಕ್ತಿಯೂ ಇರಬಹುದು. ಆದರೆ, ಅದೇ ಕುಟುಂಬದಲ್ಲಿ ಸಾತ್ವಿಕ, ಶಾಂತ ಮತ್ತು ವಿವೇಕದಿಂದ ಆಲೋಚಿಸಿ ಎಚ್ಚರಿಕೆಯಿಂದ ಕಾರ್ಯಗಳನ್ನು ಮಾಡುವ ವ್ಯಕ್ತಿಯೂ ಇರಬಹುದು.

ಈ ಇಬ್ಬರಲ್ಲಿ ಯಾರು ಆ ಕುಟುಂಬದಲ್ಲಿ ಐಕ್ಯತೆ ಮತ್ತು ಸಾಮರಸ್ಯವನ್ನು ಕಾಪಾಡುತ್ತಾರೆ? ಖಂಡಿತವಾಗಿ ಎರಡನೆಯ ವ್ಯಕ್ತಿಯೇ. ಅವರ ವಿವೇಕ, ನಮ್ರತೆ ಮತ್ತು ಸಹನೆಯೇ ಆ ಕುಟುಂಬವನ್ನು ವಿನಾಶದಿಂದ ರಕ್ಷಿಸುತ್ತದೆ. ಕೇವಲ ಕೋಪಿಷ್ಠ ಮತ್ತು ಅವಿವೇಕಿ ವ್ಯಕ್ತಿ ಮಾತ್ರ ಇದ್ದಿದ್ದರೆ, ಆ ಕುಟುಂಬವೇ ನಾಶವಾಗುತ್ತಿತ್ತು.

ಅದೇ ರೀತಿ, ಮಹಾತ್ಮರು ಮತ್ತು ಗುರುಗಳು ಈ ಜಗತ್ತಿನ ಕುಟುಂಬದ ಐಕ್ಯತೆ ಮತ್ತು ಸಾಮರಸ್ಯವನ್ನು ಕಾಪಾಡುತ್ತಾರೆ. ಅವರ ಸಹನೆ, ವಿವೇಕ, ಪ್ರೀತಿ ಮತ್ತು ಕರುಣೆಯೇ ಈ ಲೋಕವನ್ನು ಸುಸ್ಥಿರಗೊಳಿಸುತ್ತದೆ. ಇಲ್ಲದಿದ್ದರೆ, ಇವೆಲ್ಲವೂ ನಾಶವಾಗಿ ನಾವು ಅವಶೇಷಗಳಾಗುತ್ತಿದ್ದೆವು!

“ಧರ್ಮದ ಅಂತರಾರ್ಥವನ್ನು ಅರ್ಥಮಾಡಿಕೊಂಡು ವಿವೇಕಬುದ್ಧಿಯಿಂದ ಮತ್ತು ಶಾಂತಿಯಿಂದ ನಡೆದುಕೊಳ್ಳುವ ಒಬ್ಬ ಸದಸ್ಯನಾದರೂ ಒಂದು ಕುಟುಂಬದಲ್ಲಿದ್ದರೆ, ಈ ಲೋಕದ ಮುಖಚಿತ್ರವನ್ನೇ ಬದಲಾಯಿಸಲು ಸಾಧ್ಯವಾಗುತ್ತದೆ. ಧಾರ್ಮಿಕ ತತ್ತ್ವಗಳಿಂದ ಮಾತ್ರ ಈ ಪರಿವರ್ತನೆ ಸಾಧ್ಯ.

ಧರ್ಮದ ನಿಜವಾದ ಆದರ್ಶವನ್ನು ಅಳವಡಿಸಿಕೊಂಡರೆ, ಇತರರ ದುಃಖ ನಮ್ಮ ದುಃಖವಾಗುತ್ತದೆ; ಇತರರ ಸಂತೋಷ ನಮ್ಮ ಸಂತೋಷವಾಗುತ್ತದೆ; ಹೃದಯದಲ್ಲಿ ಕರುಣೆ ಜಾಗೃತವಾಗುತ್ತದೆ; ಇತರರ ಕಷ್ಟ ಮತ್ತು ನೋವನ್ನು ಅರಿತು ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಆತ್ಮದ ಏಕತ್ವವನ್ನು ಅರಿತಾಗ ಮಾತ್ರ ಇತರರಬಗ್ಗೆ ಪೂರ್ಣ ಕರುಣೆ ಮತ್ತು ಪ್ರೀತಿ ಉಂಟಾಗುತ್ತದೆ. ಅದೇ ಧರ್ಮದ ಧ್ಯೇಯೋದ್ದೇಶ.”